Thursday, March 6, 2014

ಭಾವನೆಗಳ ಉತ್ಸವ

ಮನದಲ್ಲಿ ನೂರಾರು ಆಸೆಗಳು
ಅರಳುತಿವೆ ಹೂಗಳಂತೆ
ಹೃದಯದಿ ನೂರಾರು ಬಯಕೆಗಳು
ಚಿಗುರುತಿವೆ ತಳಿರೆಲೆಗಳಂತೆ...
ಆ ಆಸೆ-ಬಯಕೆಗಳಿಗೆ ಇಂದು
ಮೂಡಿವೆ ರೆಕ್ಕೆ-ಪುಕ್ಕಗಳು
ಭಾವನೆಗಳ ಕಡಲಲ್ಲಿ ಮಿಂದು
ಹೊಳೆಯುತಿವೆ ಮನದ ಕಣ್ಣುಗಳು.
ಸಂಭ್ರಮದ ಸಿಹಿ ತಂಗಾಳಿಯಲಿ
ಬಾಡಿದ ಸುಗಂಧಿತ ಹೂಗಳಂತೆ
ಹಾರಾಡುತಿವೆ ಬಣ್ಣದ ಸ್ವಪ್ನಗಳು
ಕಡಲಿನ ಅಳಿಯದ ಅಲೆಗಳಂತೆ...
ಮನಸಿಗೆ ಹಿತವನು ನೀಡಿ
ಹೃದಯಕೆ ಸಿಹಿಯನು ಉಣಿಸಿ
ಹುತಿಯಾದಾವು ಭಾವನೆಗಳು ಬಾಡಿ
ನಿಜ ಜೀವನಕೆ ಹಿಂಬರುವುದೇ ವಾಸಿ...


(೦೫-೦೩-೨೦೧೪)

Monday, March 3, 2014

ಪ್ರಯತ್ನ

ಮಾಡುವ ಕೆಲಸದಿ ಯಶಸ್ಸು ಸಿಗದಿರೆ
ಧೃತಿಗೆಡಬೇಡ ಓ ಮನವೇ...
ಸಫಲತೆ ದೊರೆವೆಡೆತನಕ ನೀನು
ಪ್ರಯತ್ನವ ಕೈಬಿಡದಿರು ಕೇಳು...

ಬಲೆಯನು ನೇಯುವ ಜೇಡನು ತಾನು
ನೇಯ್ದ ಬಲೆಯನು ಕೆಡಿಸಿದರೂ
ಪ್ರಯತ್ನವ ಬಿಡದೆ ವಿಶ್ರಾಂತಿ ಪಡೆಯದೆ
ನೇಯುವುದು ಮತ್ತೆ ಬಲೆಯನು..

ವರ್ಷಋತುವಿಗಾಗಿ ಇರುವೆಯು ತಾನು
ಶೇಖರಿಸುವುದು ಆಹಾರವನು...
ಅಡೆತಡೆಗಳೆಷ್ಟೇ ಇರಲಿ ಬಿಡದೆ ಪ್ರಯತ್ನಿಸಿ
ಕೂಡಿಡುವುದೆಲ್ಲವನು ತನ್ನ ಗೂಡಲಿ...

ಪ್ರಕೃತಿಯೇ ನೀಡಲು ಹಲವು ಸಂದೇಶಗಳ
ಅರ್ಥೈಸಿಕೋ ನೀ ಓ ಮನವೇ...
ಬಾಳ ತುಂಬಾ ದೊರೆವುದು ಪಾಠಗಳನೇಕ
ಅದನರಿತು ಬಾಳ ನಡೆಸು ನೀ ಕೇಳು....

(೦೩-೦೩-೨೦೧೪)

Sunday, March 2, 2014

"ಗುರು"ವಿನ ನಿಜವಾದ ಅರ್ಥ ಇಂದೆಲ್ಲಿ?

ಯಾಂತ್ರಿಕ ಜಗದಿ ಈಗ
ಅರಿತಿಹರು ಯಾರು
"ಗುರು"ವೆಂಬ ಪದದ ನಿಜಾರ್ಥ!
ನಂದುತಿರಲು ಇದೀಗ
ಸಂಸ್ಕೃತಿಯೆಂಬ ಸೊಡರು
ಮೆರೆಯುತಿರಲು ಮನದಿ ಸ್ವಾರ್ಥ!!

ಜೀವನವೇ ಆಗಿರಲು ಇಂದು
ವ್ಯಾವಹಾರಿಕ ರೀತಿಯದು
ನಶಿಸುತಿರಲಂದಿನ ಜೀವನ ವೈಖರಿ!
ಕಾಣಲಾರದು ಇನ್ನೆಂದಿಗೂ
ಶ್ರೇಷ್ಠವಾದ ಗುರುಕುಲವದು
ನಾಶವಾಗಿಹುದೆಂಬುದೊಂದು ಖಾತರಿ!!

ವಿದ್ಯಾ ಬುದ್ಧಿಯ ದಾನ ನೀಡಿದ
ಶ್ರೇಷ್ಠ ಪರಂಪರೆಯ ತಿಳಿಸಿದ
ಗುರುವೇ ನಿಮಗೆ ಕೋಟಿ ನಮನ!
ಅತ್ಯುತ್ತಮ ಸಂಸ್ಕಾರ ಹೊಂದಿದ
ಅಂದಿನ ಗುರುಕುಲ ಕಾಲದ
ಶ್ರೇಷ್ಠತೆಗೆ ಇಂದೆಲ್ಲಿದೆ  ಗಮನ??

ಬ್ರಹ್ಮ ವಿಷ್ಣು ಮಹೇಶ್ವರರ
ಶ್ರೇಷ್ಠತೆಗಿಂತಲೂ ಮಿಗಿಲಾದ
ಸ್ಥಾನವದು ಸೇರಿತ್ತಂದು ಗುರುವಿಗೆ!
ಸಂಬಂಧವದು ಗುರುಶಿಷ್ಯರ
ಸಕಲ ಲೋಕಕೂ ಪ್ರಿಯವಾದ
ಗೌರವವು ಸೇರಿತ್ತು ಪ್ರತಿಯೊಬ್ಬ ಗುರುವಿಗೆ!!

ಸ್ವಾರ್ಥವನ್ನು ತೊರೆದಿದ್ದು
ಷಡ್ವೈರಿಗಳ ನಶಿಸಿದ್ದು
ಸ್ಥಿರಚಿತ್ತರಾಗಿದ್ದರು ಗುರುಗಳಂದು!
ಸಂಪಾದನೆಯೊಂದೇ ಗುರಿಯಾಗಿದ್ದು
ವಿದ್ಯಾದಾನವ ಮರೆತಿದ್ದು
ಹೆಚ್ಚುತ್ತಿರುವರು ಸ್ವಾರ್ಥ ಚಿತ್ತರಿಂದು!!

ಹೀಗಿರಲು ಶ್ರೇಷ್ಠರಾರೆಂದು
ಹುಡುಕುವುದೆಂತು ನಾನರಿಯೆ
ಉತ್ತಮ ಗುರುವೇ ಕಡಿಮೆ ಏಕಿಂದು??
ಗುರುಗಳಲಿ ಗೌರವವೆಂದು
ಯಾವ ಶಿಷ್ಯರಲೂ ಕಾಣದಿರೆ
ಶಿಷ್ಯರಿಗೇಕೆ ಬೇಕು ಗುರುಗಳಿಂದು???

ನೀಡಬೇಕು ಪ್ರತಿಯೊಬ್ಬರೂ
ಗುರುವಿಗೊಂದು ಗೌರವ
ಆಗ ತಾನೇ ಫಲಿಸುವುದು ಕಲಿತ ವಿದ್ಯೆ!
ಶಿಷ್ಯರೇಕಿಂದು ಮರೆತಿರುವರು
ಶಿಷ್ಯರಿಗಿರಬೇಕಾದ ಗುಣವ
ಅಗತ್ಯವಾಗಿರುವ ವಿನಯ ವಿಧೇಯತೆ!!

ಗುರುಗಳೆಂತಹವರಾದರೂ
ಶಿಷ್ಯರಿಗಿರಬೇಕು ಅವರಲಿ
ಗೌರವ, ವಿನಯ, ವಿಧೇಯತೆ, ಭಕ್ತಿ!
ನೀಡುತಿರುವ ವಿದ್ಯೆಗಳನು
ಗುರುವಿನ ಆಶೀರ್ವಾದದಿಂದಲಿ
ಆರ್ಜಿಸಿ ನಾವಾಗಬೇಕು ಜಗ ಬೆಳಗುವ ಶಕ್ತಿ!!

ಆಗ ನೀಡಬೇಕಿಲ್ಲ ನಾವು
ಹಿಂದಿನವರು ನೀಡುತ್ತಿದ್ದಂತೆ
ಗುರುಗಳಿಗೆಂದು ಇಂದು "ಗುರುದಕ್ಷಿಣೆ"!
ಗುರುಗಳ ಶಿಕ್ಷಣದಿಂದಲಿ ನಾವು
ಜಗವ ಬೆಳಗುತ್ತಿದ್ದಂತೆ
ಪಡೆದಂತಾಗುವುದು ಗುರುವಿಗೆ ಆ "ದಕ್ಷಿಣೆ"!!

ಹಾಗಾಗಿ ಇಂದು ಶಿಷ್ಯರೆಲ್ಲರೂ
ನೀಡಬೇಕು ಗುರುವಿಗೆ ಗೌರವ
ಶ್ರದ್ಧೆ,  ಭಕ್ತಿ,  ವಿನಯ ಭಾವದಲ್ಲಿ!
ಆಗ ಮಾತ್ರ ನೀಡಿದಂತಾಗುವುದು
"ಗುರು"ವೆಂಬ ಪದಕ್ಕೆ ಅರ್ಥವ
ಇಂದಿನ ವ್ಯಾವಹಾರಿಕ ಜೀವನದಲ್ಲಿ!!

ಎಂಥ ಮಹಾತ್ಮ ನಮ್ಮ ಬಾಪೂಜಿ

ಮಕ್ಕಳ ನೆಚ್ಚಿನ ಬಾಪೂಜಿ
ನಗುಮುಖ ಅರಳಿದ ಗಾಂಧೀಜಿ
ತುಂಡು ಪಂಚೆಯು ಸೊಂಟದಿ
ಕನ್ನಡಕವೊಂದಾ ನಯನದಿ
ಆಧಾರಗೋಲದು ಕೈಯಲಿ
ತ್ಯಾಗಭಾವನೆಯೇ ಮನದಲಿ

ಸಾಧನೆಯದನೇಕ ಮಾಡಿಹರು
ಸಾಮಾನ್ಯರಂತೆ ತೋರಿದರೂ
ಹೊಂದಲು "ಬ್ಯಾರಿಸ್ಟರ್" ಇಂಗ್ಲೆಂಡಲಿ
ವಕೀಲರಾದರೂ ದಕ್ಷಿಣ ಆಫ್ರಿಕಾದಲಿ
ನಡೆಸಿದರಲ್ಲಿ ಕರಿಜನರಿಗಾಗಿ
ಹೋರಾಟ ನಾಗರಿಕ ಹಕ್ಕುಗಳಿಗಾಗಿ

ಮರಳಲು ಪಡೆದರು ಸ್ವದೇಶದಿ
ನಾಯಕತ್ವವ ತಿಲಕರ ನಂತರದಿ
ಬ್ರಿಟಿಷರು ನಡೆಸಿದ ಶೋಷಣೆಗಳಿಂದ
ಭಾರತವು ನರಳಿತು ಬಡತನದಿಂದ
ತೊಲಗಿಸಲದನು ಪ್ರಚಾರಿಸಿದರವರು
ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳನು

ಹೋರಾಡಿದರು ಸ್ವದೇಶದ ಸ್ವಾತಂತ್ರ್ಯಕಾಗಿ
ದೇಶಾದ್ಯಂತ ಜನಜಾಗೃತಿಯ ನಿರ್ಮಿಸಲಿಕಾಗಿ
ನಾಯಕರ ಒಗ್ಗಟ್ಟಿಗಾಗಿ ಪ್ರೇರೇಪಿಸಿದರು
"ಏನೇ ಬರಲಿ ಒಗ್ಗಟ್ಟಿರಲಿ" ಎಂದು ಘೋಷಿಸಿದರು
"ಅಹಿಂಸಾ ಪರಮೋಧರ್ಮ" ಎಂದು ಸಾರಿದರು
"ರಾಮರಾಜ್ಯ" ಸ್ಥಾಪನೆಯ ಕನಸನು ಕಂಡರು

ನಿಯಮನಿಷ್ಠೆ - ಶಿಸ್ತು - ಸಂಯಮ ಹೊಂದಿ
ದೇವರ ಭಕ್ತಿ ಭಜನೆಗಳ ಮಹತ್ವ ಸಾರಿ
ನಡೆಸಿ ಪತ್ರಿಕೋದ್ಯಮ, ಪ್ರಕೃತಿಚಿಕಿತ್ಸೆ, ಗ್ರಾಮೋದ್ಯೋಗ
ಸ್ವದೇಶೀ ಶಿಕ್ಷಣ - ಯೋಜನೆಗಳ ಪ್ರಯೋಗ
ಭಾರತವ ಸ್ವತಂತ್ರಗೊಳಿಸಿದ ಬಾಪೂ
ನಿಮಗಿದೋ ಶತಕೋಟಿ ನಮನ...

ಕಷ್ಟ ಬಂದಾಗ ಇಂದು

ಜೀವನವೆಂಬೋ ಮಹಾಮಾರ್ಗದಿ, ಇರುವುದೇ ಅಲ್ಲವೇ ಏರು-ತಗ್ಗು
ಎರಬೇಕಾದಾಗ ನೋಡಿ ಈ ಜಗದಿ, ಜೀವನದ ಉನ್ನತ ಶಿಖರವನ್ನು
ಖುರಾನ್- ಗೀತೆ- ಬೈಬಲ್'ಗಳಲಿ, ಇರುವುದೊಂದೇ ತಾನೇ ಸಾರ
ಯಾವ ಕಷ್ಟ ನಷ್ಟ ಅನುಭವಿಸಿದರೂ, ನಡೆಯಬೇಕು ಸನ್ಮಾರ್ಗದಲಿ

ಒಬ್ಬನ ಮನದ ಸಂಕಷ್ಟಗಳನು, ಅರಿಯುವವರಾರೂ ಇಲ್ಲ ಈ ಜಗದಿ
ಬಡಿದಿರಲು ಜನರೆಲ್ಲರ ಆತ್ಮಕ್ಕೂ, "ಸ್ವಾರ್ಥ- ಅಹಂಕಾರ"ಗಳೆಂಬ ಪೆಡಂಭೂತ
ಬಂದೊದಗಿದರೆ ಒಬ್ಬನಿಗೆ ಕಷ್ಟ, ನಕ್ಕು ನಲಿದಾದುವವರೇ ಜಾಸ್ತಿ
ನೆರವಾದರೆ ಅವರಿಗದೆನು ನಷ್ಟ, ಕುಂಠಿತಗೊಂಡಾಗ ಸಂತೋಷದ ಆಸ್ತಿ

ಇಂದಿನ ಈ ಕಲಿಯುಗದಲಿ, ತಪ್ಪಿಲ್ಲದವನಿಗೂ ದೊರೆವುದು ಶಿಕ್ಷೆ
ಬೈಗಳು- ಅಪವಾದಗಳ ಸುರಿಮಳೆ, ಇರಲಾರದೇ ಆತನಿಗೆ ರಕ್ಷೆ?
ಬಂದಾಗ ಕಷ್ಟಗಳ ಸುರುಳಿ, ನಡೆಯಬೇಕು ಮುಂದೆ ಎದೆಗುಂದದೆ
ಯಾರ ಸಹಾಯಕ್ಕೂ ಕೈಯೊಡ್ದದೆ, ಸಾಗಬೇಕು ಮುಂದೆ ಮುಂದೆ

ಹಾಗಾದರೆ ಮಾತ್ರವೇ ಸಾಧ್ಯ, ದೊರೆಯಲು ಜೀವನದಿ ಸಿದ್ಧಿ
ವಿಚಾರ ಮಾಡದೆ ಮನನೊಂದರೆ, ದೊರೆಯಲಾರದು ಎಂದಿಗೂ ಬುದ್ಧಿ
ಆದುದರಿಂದಲೇ ದೇವರಲಿ ಹೇಳಿ, ನಿಮ್ಮಯ ಸಂಕಷ್ಟಗಳನು
ಹಗುರವಾದಾಗ ಮನದ ನೋವು, ಪಡೆಯುವಿರಿ ಸುಖ ಕ್ಷಣಗಳನು

ಕಷ್ಟಗಳಿಗೆ ಪರಿಹಾರ ನೀಡಲು, ಸಾಧ್ಯ ಕೇವಲ ಭಗವಂತನಿಗೆ
ಜೀವನ ನೀಡಿದ ಆ ಶಕ್ತಿಯು ಮಾತ್ರ, ಮರುಕಳಿಸಬಲ್ಲದು ಸಂತೋಷವ
ಒಬ್ಬನ ಮನದ ವಿಚಾರಗಳನು, ಅರ್ಥೈಸುವವರಾರೂ ಇಲ್ಲ
ವಿಚಾರ ನೀಡಿದ ಆ ಶಕ್ತಿಗೆ ಮಾತ್ರ, ಅರ್ಥವಾಗುವುದು ಆ ಚಿಂತನ

ಹಾಗಾಗಿ ನಿಮ್ಮೆಲ್ಲರ ಕಷ್ಟಗಳನು, ಮನದೊಳಗಿಟ್ಟು ಕೊರಗದಿರಿ
ದೇವರ ಮುಂದೆ ನಮ್ರತೆಯಿಂದಿಟ್ಟು , ಸಫಲರಾಗಿರಿ ನಿಮ್ಮ ಜೀವನದಿ.

Friday, February 28, 2014

ಆಶಯಗಳು ಈಡೇರದಾಗ...

ಮುಕ್ತಿಯನರಸುತ ಹೊರಟಿದೆ ಜೀವ
ಈ ಲೋಕವು ತುಳುಕುವ ಪಾಪದ ಕೂಪ...
ಅಜ್ಞಾನ ಅಂಧಕಾರಗಳ ದುರ್ಭಾವ
ಅಂಟಿದಂತಿದೆ ಪ್ರತಿ ಜೀವಿಗಳಿಗಿದು ಶಾಪ...

ಅಹಂಕಾರ ದರ್ಪಗಳು ಶಿಖರದಿ ಮೆರೆದಿದೆ
ಪರೋಪಕಾರಿಗಳಿಗೆ ಬೆಲೆಯಿರದು ಇಲ್ಲಿ...
ಸದ್ವಿಚಾರಗಳ ತುಳಿದು ತುಂಡರಿಸಿ
ಮೆರೆಸುವರು ದುರ್ಭಾವದ ಜಾಲಗಳನಿಲ್ಲಿ...

ಸದ್ಚಿಂತನೆಯ ಮನವನು ಹೊಸೆದು
ನಿರ್ಜೀವ ಮಾಡಿ ಕುಣಿದಾಡುವರಿವರು
ಪರರಿಗೆ ಕೇಡ ಬಯಸದ ಹೃದಯವ
ಒಡೆದು ತುಳಿದು, ಉಗಿದು ಆಹುತಿಗೈವರಿವರು...

ಯಾಕೆ ಮಾನವೀಯತೆಯ ಮರೆತಿಹರು?
ಯಾಕೆ ಹೃದಯಹೀನರಂತಾಗಿಹರು???
ಇದಕೆಲ್ಲ ಕೊನೆ ಎನಿತೋ ನಾ ಕಾಣೆ..
ಜಗವ ಕಾಯುವಂತೆ ಶಿವನ ಆಟವೇನೋ ಅರಿಯಲಾರೆ...

Thursday, February 27, 2014

ಜೀವನ ಜಟಕಾಬಂಡಿ

ಸಾಗುತ್ತಲಿದೆ ಜಟಕಾಬಂಡಿ, ಮುದಿತನವೆಂಬ ಏಕಾಂತ ಮಾರ್ಗದಿ
ಬೆನ್ನೆಲುಬಾಗಿ ಯಾರೂ ಇಲ್ಲ ನೋಡಿ, ಶಕ್ತಿಯಿಲ್ಲದ ಇಂಥಾ ಸಮಯದಿ
ಬಂಡಿಗಾದರೂ ಮುಂದೋಡಲು ಬೇಕು, ಇತರ ಜೀವಿಗಳ ಸಹಾಯ
ಎನ್ನ ಈ ಮುದಿಜೀವಕೆ ಸಾಕು, ಒಬ್ಬ ಮನುಜನ ಆಧಾರ.

ಬಂಡಿ ಸಾಗಲು ಮುಂದೆ ಮುಂದೆ, ಸೇರುವುದೊಂದು ದೂರ ತೀರ
ಜೀವ ಸಾಗಲು ಮುಂದೆ ಮುಂದೆ, ಸೇರುವುದು ಸಾವಿನ ತೀರ
ತೀರ ಸೇರುವ ಮುನ್ನ ಬಂಡಿಯು, ಮುರಿಯುವುದು ಹಲವಾರು ಸಲ
ಮುಕ್ತಿ ಪಡೆಯುವ ಮುನ್ನ ಜೀವವು, ಅನುಭವಿಸುವುದು ಕೆಟ್ಟ ಕಾಲ

ಬಂಡಿಯನೋಡಿಸಲು ಸರಿದಾರಿಯಲಿ, ಬೇಕು ಚಾಲಕನ ಸಹಾಯ
ಅಂತೆಯೇ ನಮ್ಮ ಜೀವನವ ಸಾಗಿಸಲು, ಬೇಕು ಭಗವಂತನ ಅಭಯ
ಭಗವಂತನೊಬ್ಬನೇ ಆಗಿರುವನು, ನಮ್ಮೀ ಜೀವನದ ನಾವಿಕ
ದೇವನ ಅಭಯ ಹಸ್ತದಿಂದಲೇ, ಕಳೆಯುವುದು ನಮ್ಮ ಎಲ್ಲಾ ಭಯ

ಜೀವನವೊಂದು ದೊಡ್ಡ ಪಯಣ, ಜನನ ಮರಣದ ನಡುವಣ
ಸಾಗುವುಡದು ದೃಶ್ಯ ನೋಡುತ, ಕಷ್ಟ ಸುಖಗಳ ಮಿಶ್ರಣ
ಜೀವನದ ಬಂಡಿಯು ಸಾಗಲು ಮಾರ್ಗದಿ, ಮುದಿತನದನುಭವ ಪಡೆದು
ಸಹಾಯ ಬಯಸುತ ತಮ್ಮ ಮಕ್ಕಳಲಿ, ಕೊನೆಗೊಮ್ಮೆ ಆಗುವುದು ನಿರಾಧಾರ

ಜೀವನ ಬಂಡಿಗೆ ಬಂದಾಗ ಕೊನೆಗಾಲ, ಸಹಕರಿಸುವರೆಲ್ಲರೂ ಆ ಜೀವಕೆ
ಹೊಗಳುತ ಹೊಗಳುತ ದುಃಖಿತರಾಗುವರು, ಕೊನೆಗೊಂಡಾಗ ಆ ಜೀವದ ಕಾಲ.
ಜೀವನವೆಂಬ ಮಹಾಮಾರ್ಗದಿ ಸಿಗುವುದು, ಜನನ - ಜೀವನ - ಮರಣದ ಅನುಭವ
ನಡುವೆ ಎಲ್ಲರಿಗೂ ದೊರೆವುದು, ಸುಖ ದುಃಖಗಳ ಮಿಶ್ರಿತ ಕಾಲ

ಆದ್ದರಿಂದ ನಾವಿಂದು ಮಾಡಬೇಕು, ಸತ್ಕರ್ಮ - ಪರೋಪಕಾರ
ಮುದಿಜೀವಕೆ ನಾವು ಎಂದೆಂದಿಗೂ, ಆಗಿರಬೇಕೊಂದು ಆಧಾರ
ಇದರಿಂದ ಮಾತ್ರವೇ ದೊರೆಯುವುದು, ನಮಗೂ ಪರರ ಸಹಕಾರ
ನಮ್ಮ ಜೀವನದ ಬಂಡಿ ಸೇರಿದಾಗ, ಮುದಿತನವೆಂಬ ತೀರವ.

ಎಂತಹ ತಪ್ಪು

ಯಾವಾಗಲೂ ಪ್ರೀತಿಸುವವರು ಇಂದೇಕೆ ಬೈದರು?
ನನ್ನಿಂದಲೇ ಏನಾದರೂ ತಪ್ಪಾಗಿರಬಹುದೇ?
ತಪ್ಪು ಏನನ್ನೂ ಮಾಡಿಲ್ಲವೆಂದು ನಾನಂದುಕೊಂಡೆ
ಅವರು ಬೈದದ್ದೇ ತಪ್ಪೆಂದು ತಪ್ಪಾಗಿ ಗ್ರಹಿಸಿದೆ

ಸುಮ್ಮಸುಮ್ಮನೆ ಬೈದರೆಂದು ತಪ್ಪಾಗಿ ಊಹಿಸಿದೆ
ಅವರನ್ನೇ ತಪ್ಪಿತಸ್ಥರೆಂದು ತಪ್ಪಾಗಿ ಗ್ರಹಿಸಿದೆ
ಕ್ಷಣಕಾಲ ಚಿಂತಿಸಿದರೆ ತಿಳಿಯಿತು ತಪ್ಪೇನೆಂದು
ಅವರನ್ನು ತಪ್ಪಾಗಿ ತಿಳಿದುಕೊಂಡದ್ದೇ ತಪ್ಪು

ನಿಜವನ್ನು ಪರಿಶೀಲಿಸಿದರೆ ತಪ್ಪು ನನ್ನಿಂದಾಗಿರಬಹುದು
ನನ್ನ ತಪ್ಪಿನ ಬಗ್ಗೆ ನಾ ಚಿಂತಿಸಲಿಲ್ಲ
ಪರಾಂಬರಿಸಿ ನೋಡಿದಾಗ ನನ್ನದೇ ತಪ್ಪು
ಹಿರಿಯರ ಮಾತನ್ನು ಕೇಳದಿದ್ದುದೇ ತಪ್ಪು

ನನ್ನ ತಪ್ಪಿನಿಂದಾಗಿ ಕಳೆಯಿತು ಬಾಂಧವ್ಯವು
ತಳೆಯಿತು ಹೊಸ ರೋಷವು ತಾನೇ ತಾನಾಗಿ
ಇದನು ಕೊನೆಗಾಣಿಸಲು ಒಪ್ಪಿಕೊಳ್ಳಬೇಕಾಯಿತು ನನ್ನ ತಪ್ಪ
ಒಮ್ಮೆ ಆತ್ಮಗೌರವ ಕುಂದಿದರೂ ಹಿಂದಿರುಗಿತು ಪ್ರೀತಿ...ನನಗಾಗಿ

Wednesday, February 26, 2014

ಬಂಜೆಯ ಮಾಯವಾದ ದುಃಖ

ನಾನಿಂದು ನೋಡಿದೆ ನಿನ್ನ, ಸುಂದರವಾದ ದೇಹವ
ಮನಸೋತೆ ನಾ ನಿನಗೆ, ತಣಿಸಿದೆ ನೀ ನನ್ನ ದಾಹವ
ಪರಿತಪಿಸುತ್ತಿದ್ದೆ ನಿನಗಾಗಿ,  ಹಗಲಿರುಳೂ  ಮನದಲ್ಲಿ
ನಿನ್ನ ಬರುವಿಕೆಗಾಗಿ ನಾನು,  ಕಾತರಿಸುತ್ತಿದ್ದೆ ಕ್ಷಣ ಕ್ಷಣದಲ್ಲಿ

ಇಂದಿನವರೆಗೆ ನಾನಿದ್ದೆ ಅಪೂರ್ಣ,  ಬರಿದಾಗಿತ್ತು ನನ್ನ ಈ ಒಂಟಿಮನ
ನಿನ್ನ ಆಗಮನದಿಂದಲೇ ಇಂದು, ಆದೆ ನಾನು ಪರಿಪೂರ್ಣ
ಹಿಂದಿನ ದಿನಗಳಲ್ಲಿ ನೀನು, ಕ್ಷಣಕ್ಷಣವೂ ಕಾಡುತ್ತಿದ್ದೆ ನನ್ನ
ಬರದೇ ಹೋದಾಗ ನೀನು,  ಕೆಡಿಸಿದರು ನನ್ನ ಮನವನ್ನ

ನೀನಿರದೇ ಹೋಗುವಾಗ ಜನರು, ನೀಡುತ್ತಿದ್ದರು ಚಿತ್ರಹಿಂಸೆಯ
ಪರೋಕ್ಷವಾಗಿ ಮಾನವ ಚುಚ್ಚಿ, ಮಾಡಿದರು ನನ್ನ ಒಬ್ಬಂಟಿ
ದೇಹದಲ್ಲೆಲ್ಲಾ  ಆವರಿಸಿದ ದುಃಖ, ಅಳಲಾರದೆ ಮನದಿ ಕುದಿಯಿತು
ಹಬ್ಬದಂದು ದೊರೆತರೂ ಕ್ಷಣಿಕ ಸಂತೋಷ, ಮನದ ದುಃಖ ಮಾಯವಾಗದಾಯಿತು

ನಿನಗಾಗಿ ಪಟ್ಟ ಪಾಡೆಷ್ಟು?, ಎಷ್ಟಾದರೂ ನೀ ಬರಲೊಪ್ಪದೆ
ನೀಡಿದೆ ನನಗೆ ಬೇಸರವ, ಹುಟ್ಟಿತು ಜಿಗುಪ್ಸೆ ಮನದಾಳದಿ
ಆಗ ನಿನಗಾಯಿತೇ ಜ್ಞಾನೋದಯ?, ನೀ ಹುಟ್ಟಿಸಿದೆ ಎಲ್ಲರ ಮನದಿ
ಆನಂದ, ಅಭಿಮಾನ, ಆಶ್ಚರ್ಯ, ನೀ ಬಂದು ಸೇರಿದೆ ನನ್ನ 'ಗರ್ಭದಿ'.

ನಾನಾದೆ ತುಂಬು "ಗರ್ಭಿಣಿ", ನೀ ಹುಟ್ಟಿದೆ ನನ್ನ ಒಡಲಲಿ
ನಿನ್ನಿಂದಾಗಿ ಮರುಕಳಿಸಿತು, ಸಂತೋಷ ನನ್ನ ಜೀವನದಿ
ಮುಂದೆ ನಾನು 'ಬಂಜೆ' ಎನಿಸದೆ, ಪಡೆದೆ ಎಲ್ಲರ ಪ್ರೇಮ ಪ್ರೀತಿಯ
ನಿನ್ನನು ನಾ ಮನದಿ ಆರಾಧಿಸಿದೆ, ನನ್ನ ಮನದ ದುಃಖವಾಯಿತು ಮಾಯ .

ಜನರಿಗೆ ಇಂದು ಅರಿವಾಯಿತು, ನನ್ನ ಮನದಲ್ಲಿದ್ದ "ಮಮತೆ"
ನಿನ್ನ ಆಗಮನದಿಂದ ತಿಳಿಯಿತು, ನನ್ನ ಮನದಾಳದ ಆಸೆ.
ನೀನಾದೆ ನನ್ನ ಸರ್ವಸ್ವ, ನಿನ್ನಿಂದಾಗಿ ಉಳಿಯಿತು ನನ್ನ ಪ್ರಾಣ
ನಿನಗಾಗಿಯೆ ಈ ನನ್ನ ಜೀವನ, ಮೊಟ್ಟ ಮೊದಲಿಗೆ ನಾನಾದೆ "ಅಮ್ಮ"

ಮರುಕಳಿಸಿತು ನನ್ನ ಹಿಂದಿನ ಜೀವನ, ಮತ್ತೆ ಬಂದಿತು ಎಲ್ಲರ ಮನದಲ್ಲೂ
ನನ್ನ ಮೇಲೆ ಪ್ರೀತು, ಅಭಿಮಾನ, ಆಗಿದ್ದರಿಂದ ನಾನೂ ಒಂದು "ಅಮ್ಮ".

ನಾಲಿಗೆ

ನಾಲಿಗೆಯು ಮೃದುವಾಗಿದೆಯಾದರೂ
ಕತ್ತರಿಯಂತೆ ಮೊನಚಾಗಿದೆ
ಖಡ್ಗದಂತೆ ಹರಿತವಾಗಿದೆ
ಬೆತ್ತದಂತೆ ಬಲವಾಗಿದೆ...

ಒಂದು ನುಡಿಯನದು ನುಡಿದು
ನೀಡುವುದು ವೇದನೆಯ ಮನಕೆ
ಹೃದಯವ ಕೊರೆದು ಕೊರೆದು
ಖಿನ್ನ ಮನದಲಿ ವಿಷಭಾವದ ಮೊಳಕೆ
ಕಂಗಳಲಿ ದುಃಖದ ಹೊಳೆ
ರಕ್ತಕಣದಲಿ ವೈಷಮ್ಯದ ಮಳೆ

ಇನ್ನೊಂದು ನುಡಿಯದು ನುಡಿದು
ಬೆಳಕಾಯಿತು ಕಗ್ಗತ್ತಲ ಹಾದಿಗೆ
ಹುರುಪಾಯಿತು ಆಶಯಗಳ ಕೊಂಡಿಗೆ
ಹೊಳಪಾಗಿ ಬಾಡಿದ ಕಂಗಳಿಗೆ
ಆಧಾರ ನೀಡಿತು ನಿರಾಧಾರ ಬಾಳಿಗೆ
ನವಚಿತನ್ಯದಲಿ ಸ್ನೇಹದ ಏಳಿಗೆ

Sunday, February 23, 2014

ಪುರುಷ ಪ್ರಧಾನ

ಪುರುಷ ಪ್ರಧಾನ ಸಮಾಜದಿ
ಸ್ತ್ರೀಯರಿಗೆ ಸ್ಥಳವುಂಟೇ?
ಅಧಿಕಾರವಿದ್ದರೂ ಅವಳಿಗದನು
ಚಲಾಯಿಸುವ ಹಕ್ಕುಂಟೇ ???

ಕೆಟ್ಟ ಮನದವರು ಹಲವರು
ಉಪಯೋಗಿಸಿ ಸ್ತ್ರೀಯರನು
ಒಗೆವರು ಹಳೆ ಬಟ್ಟೆಗಳಂತೆ
ಒಡೆವರವರ ಹೃದಯವನು

ಸ್ತ್ರೀಯರ ಬೆಂಬಲದಿಂದ
ಗಳಿಸುವರು ಜನಪ್ರಿಯತೆ
ಆದರೂ ಆ ಸ್ತ್ರೀಯರ ಪಾಲಿಗೆ
ಬರಿ ಕಷ್ಟ ಕಾರ್ಪಣ್ಯತೆ

ಸ್ತ್ರೀಯರ ಲತಿಕಾ ದೇಹದಿಂದಾಗಿ
ಪ್ರಚಾರಿಸುವರು ತಮ್ಮ ಉದ್ಯಮವನು
ಸ್ತ್ರೀಯರ ಭಾವನೆಗಳಿಗೆಂದೂ
ನೀಡರು ಅವರು ಪ್ರಾಶಸ್ತ್ಯವನು

ಸ್ತ್ರೀಯರಿಗೆಂದು ದೊರೆವುದು
ಮನಃಶಾಂತಿ ಆನಂದ ?
ಎಂದು ದೊರೆವುದು ಅವಳಿಗೆ
ಪುರುಷರ ಸೋದರ ಸಂಬಂಧ?

ಎಂದು ಕೊನೆಯಾಗುವುದು ಈ
ಕೆಟ್ಟ ನೋಟ ಸ್ತ್ರೀಯರೆಡೆಗೆ
ಎಂದು ಕೊನಗಾಣಿಸುವರು
ಬಯಕೆ ಸುಖ ಸಂಪತ್ತಿನೆಡೆಗೆ

ಗಂಡನಾದವನಿಗೆ ಬೇಕು
ಬರಿ "ವರದಕ್ಷಿಣೆ" ಹೆಣ್ಣಿಂದ
ಅದಕೆಂದೂ ಹಿಂಜರಿಯದೆ
ನೀಡುವ "ಹಿಂಸೆ" ಭರದಿಂದ

ಎಂದು ದೊರೆವುದು ಹಕ್ಕು
ಸ್ತ್ರೀ- ಪುರುಷರಿಗೆ ಸಮಾನ?
ಯಾವತ್ತಿಗೂ ಇರಬೇಕೇ
ಸ್ತ್ರೀ ಅವನ ಅಧೀನ??
 

ನಗೆ

ಬಾಳೆಂಬ ನೀರಿನಲ್ಲಿ
ಅರಳಿತು... ನಗುವೆಂಬ ಕೆಂದಾವರೆ .

ರಸಿಕರಿಗಂತೂ ನೀಡಿತು
ಮಹದೋಲ್ಲಾಸವ .
ದುಃಖವನ್ನು ಮರೆಸುವ
ಹರಿದ್ವಾರವ ತೆರೆಯಿತು.

ಹಲವರಲ್ಲಿ ಮೂಡಿತು
ಮಾತ್ಸರ್ಯವು
ತಮಗಿಲ್ಲದ್ದು ಅವರಲ್ಲಿದೆ
ಎಂಬ ಬೇಸರವು.
ಉರಿಯಾಗಿ ಸುಟ್ಟಿತು
ಅವರ ಮನವ
ವಿಷವಾಗಿ ಬೆಳೆಯಿತು
ಅವರಲ್ಲಿ ರೋಶವು.

ಮತ್ತಿತರರ ಮನವನ್ನು
ತಣಿಸಿತು
ಅವರ ದುಃಖವ ಕಳೆದು
ಆನಂದಾತಿರೇಕವ
ಮೂಡಿಸಿತು.
ಇತರರ ನಗೆಯಿಂ
ಹಲವರ ಮನವು
ನಕ್ಕು ನಲಿದಾಡಿತು. 

ಓ ಪ್ರಕೃತಿಯೇ...!!!

ಆಕಾಶದಿಂದ ಬೀಳುತ್ತಿರಲು
ಹನಿಮುತ್ತುಗಳ ವರ್ಷವು
ನೀ ಧರಿಸಿದೆ ಹಸಿ ವರ್ಣದ ಸೀರೆಯನು!
ಅದರಲ್ಲಾಗ ಮೂಡುತ್ತಿರಲು
ಮುತ್ತಹನಿಗಳ ಚಿತ್ತಾರ
ಬೆರಗಾದೆ ನೋಡುತ ನಿನ್ನ ಸೌಂದರ್ಯವನು!!

ತಂಪು ಗಾಳಿಯು ಬೀಸುತಿರಲು
ನಿನ ಹಸಿರು ಸೆರಗು ಹಾರುತಿರಲು
ಹನಿಮುತ್ತುಗಳು ಸೋಕಿದವು ನಿನ್ನ ತ್ವಚೆಯನು!
ನಿನ್ನ ದೇಹ ತಂಪಾಗುತಿರಲು
ಹಸಿರು ವರ್ಣವು ಹೆಚ್ಚುತಿರಲು
ಶುದ್ಧ ಮಾಡಿತು ನಿನ್ನ ಸುತ್ತಲ ಗಾಳಿಯನು!!

ಶುದ್ಧ ಗಾಳಿಯು ಸೇರುತಿರಲು
ಜನಮನಗಳ ಆಳವನು
ಹೊರಹೊಮ್ಮಿತು ಶುಭ್ರಕಾಂತಿ ಜನಸಂಕುಲದಿ!
ಶುಭ್ರ ಸ್ಥಿತಿಯಿಂದಾಗಿ
ಪರಿಶುದ್ಧಗೊಂಡಾಗ
ಜನಮನಗಳು ಬೆರೆತವು ಒಂದೇ ಸಮನಾಗಿ!!!

ಆದರಾದಾಗ ಜಗದಲಿ
ಗುಡುಗು ಮಿಂಚಿನ ಆರ್ಭಟ
ಅಲ್ಲಲ್ಲಿ ಮೊಳಗಿದವು ದುಃಖಭೇರಿ!
ಇಳೆಯೆಲ್ಲ ತಂಪಾದರೂ
ಪ್ರಕೃತಿಮಾತೆಯೇ ನಿನ್ನ
ಶೋಷಣೆಯು ಕೊನೆಗೊಳ್ಳುವುದೆಂದೋ ನಾನರಿಯೆ!!
 

ಜೀವನ ಈ ದಿನ

ಏನು ಜೀವನ ಎಂಥಾ ಸಂಭ್ರಮ
ಜೀವನದ ಭಾವ ನೂತನ.
ಗೆಲುವು ಅನುದಿನ ಸೋಲು ಈ ದಿನ
ಮನಕೆ ಹಿಂಸೆಯ ಔತಣ.

ವೀಣೆಯಲಿ ಅಪಸ್ವರದ ಸಿಂಚನ
ಗಾಳಿಯಲಿ ವಿಷದ ಸಂಗಮ
ಅಗ್ನಿಯೊಳು ಮೃದು ಹೂವು ಬೇಯುತ
ನರಳು ನರಳುತ ಅರ್ಪಣ.

ಹಕ್ಕಿಗಳ ಇಂಚರದಿ ಕಳವಳ
ಹರಿದಾಡೋ ನದಿಯದು ಅಚರ
ವಜ್ರ ವೈಡೂರ್ಯ ತುಂಬಿದ ಮನೆಯೊಳ
ಭಾಗದಿ ಸೇರಿಕೊಂಡಿದೆ ನಾಗರ.

ಏನು ಜೀವನ ಎಂಥಾ ಸಂಭ್ರಮ
ಸೋಲು ಗೆಲುವಿನ ಮಿಶ್ರಣ
ಮನದಿ ಕೊರಗದೆ ನಗುತ ಬಾಳಲು
ಸಂತಸವೇ ನಮಗನುದಿನ...

ಮುಂಜಾವಿನ ಹನಿ

ಗರಿಕೆಗಳ  ರಾಶಿಯ ತುದಿಗಳಲಿ
ಹೊಳೆವ ಮುತ್ತುಗಳಂತೆ ನೀನು
ಓ ಮುಂಜಾವಿನ ಹನಿಯೇ ...
ನಿನ್ನ ಹೊಳಪಿಗೆ ಮಾರು ಹೋದೆ ನಾನು.

ಹೊಳೆದೆ ನೀ ವಜ್ರದ ತುಣುಕಿನಂತೆ
ಭಾಸ್ಕರನ ಪ್ರಥಮ ಕಿರಣಕ್ಕೆ
ರೊಮಾಂಚಿತವಾಯಿತು ನನ್ನ ಮನವು
ಸ್ಪರ್ಶಿಸಲು ನೀ ನನ್ನ ಚರಣಕ್ಕೆ.

ನಿನ್ನ ಜೀವನ ಕಿರಿದಾಗಿದ್ದರೂ
ನೀಡುವೆ ಆನಂದವ ಎಲ್ಲ ಮನಕೆ
"ಪರರ ಸುಖದಿಂದಲೇ ನನ್ನ ಸುಖವು"
ಎಂದು ತಿಳಿಸುವೆ ಎಲ್ಲ ಜನಕೆ.

ಇದರಿಂದಾಗಿ ಓ ಜನಗಳೇ,
ನಾಲ್ಕು ದಿನದ ಈ ಜೀವನದಲಿ
ಸುಖ ಸಂತೋಷಗಳ ಹಂಚಿಕೊಂಡಿರಿ
"ಕೂಡಿ ಬಾಳಿದರೆ ಸ್ವರ್ಗ" ಎಂಬುದ
ಹನಿಯ ಜೀವನದಿಂದ ತಿಳಿಯಿರಿ

ಒಂದಾಗುವ

ಕೂಡಿ ಹಾಡಿ ನಲಿಯುವ
ಸೋದರತೆಯ ಸಾರುವ
ಸ್ನೇಹ ಸೌರಭ ಕಟ್ಟುವ
ಜಗವೇ ಒಂದು ಎನ್ನುವ

ಜಾತಿಮತಗಳ ಭೇದವಿಲ್ಲದೆ
ದೇಶ ದೇಶದ ಬಿರುಕು ಇಲ್ಲದೆ
ವರ್ಣ- ವರ್ಗದ ಭೇದವಿಲ್ಲದೆ
"ಮನುಜ" ಜಾತಿಯನೆ ಸಾರುವ
"ಒಂದೇ" ಎಂಬ ಭಾವ ಪಡೆಯುವ.

ಮನದ ಸ್ವಾರ್ಥವ ತೊಡೆದು ಹಾಕುತ
ಕನಸುಗಳೆಲ್ಲವ ನನಸು ಮಾಡುತ
ಜೀವಿಗಳಿಗೆಲ್ಲ ಅವಕಾಶ ನೀಡುತ
ಜೀವಿಸಲಿರುವ ಹಕ್ಕನು ಕಸಿಯದೆ
ಒಂದಾಗಿ ಬಾಳಲು ಕಲಿಯುವ

ಬನ್ನಿರೆಲ್ಲರೂ... ಒಂದಾಗುವ...

ಅನುಗ್ರಹ ಬೇಕೇ?

ನಮ್ಮಲ್ಲಿದ್ದರೂ ಜ್ಞಾನ , ಪ್ರಾಣ , ಧ್ಯಾನಗಳೆಲ್ಲ
ಅನುಭವಿಸಬೇಕೆಂದರೆ ಅನುಗ್ರಹವೇ ಬೇಕಲ್ಲ?!!!

ಗುರುಹಿರಿಯರ ಅನುಗ್ರಹವಿಲ್ಲದಿರೆ...
ಪಡೆದ ವಿದ್ಯೆಗೂ ಬೆಲೆಯಿಲ್ಲ
ಧನ ಧಾನ್ಯ ಸಂಪತ್ತಿಗೂ ಬೆಲೆಯಿಲ್ಲ
ಅಷ್ಟೇ ಏಕೆ, ಅಧಿಕಾರದ ದರ್ಪಕ್ಕೋ ಬೆಲೆಯಿಲ್ಲ ... 

ಹೆತ್ತವರ ಅನುಗ್ರಹವಿಲ್ಲದಿರೆ...
ಸಮಾಜದಿ ಸ್ಥಾನ ಪಡೆದರೂ
ಆ ಸ್ಥಾನದಿ ಗೌರವ ಪಡೆಯಲು ಸಾಧ್ಯವಿಲ್ಲ
ಸಮಾಜದ ಕಣ್ಣಿನಲ್ಲಿ ನಿನಗೆ ಬೆಲೆಯಿಲ್ಲ...

ದೇವರ ಅನುಗ್ರಹವಿಲ್ಲದಿರೆ...
ಆತ್ಮನ ಸಂತೋಷ ಸಾಧ್ಯವಿಲ್ಲ
ಆಧ್ಯಾತ್ಮಿಕ ಲೋಕದಲ್ಲಿ ಬೆಲೆಯಿಲ್ಲ
ದೈವಾತ್ಮವಾಗುವುದಂತೂ ಸಾಧ್ಯವೇ ಇಲ್ಲ...

 ಅನುಗ್ರಹವೇ ಅತಿ ಮುಖ್ಯ
ಇಹಲೋಕದ ಆನಂದ, ಆಧ್ಯಾತ್ಮಿಕ ಆನಂದ
ಪ್ರತಿಯೊಂದೂ  ಸಾಧ್ಯ ಅನುಗ್ರಹದಿಂದ
ಅನುಗ್ರಹವೇ ಅತಿ ಮುಖ್ಯ...

Saturday, February 22, 2014

ಕಂಪನ ಜೀವನ

ಮಾನವ ಜೀವನ
ಕೇವಲ ನಾಲ್ಕು ದಿನ
ಅದರಲೂ ಏಕೆ ಮೌನ?
ತಪ್ಪು ಅಭಿಪ್ರಾಯಗಳ ಕದನ?

ತೊರೆಯಿರಿ ನಿಮ್ಮಯ ಅಹಂಕಾರವ
ಕೂಡಿಸಿ ಮೆರೆಯಿರಿ ಸೋದರತ್ವವ
ಸಾರಿರಿ ಎಲ್ಲರಲೂ ಮಾನವೀಯತೆಯ
ಪಡೆಯಿರಿ ಜೀವನ ಸಾರ್ಥಕತೆಯ


ತೊಡೆಯಿರಿ ಜಾತಿ ಭೇದ ಶತ್ರುತ್ವವ
ಬೆಸೆಯಿರಿ ಬಾಂಧವ್ಯದ ಮಿತೃತ್ವವ
ಎಲ್ಲರಲೂ ಪ್ರೀತಿಯನೇ ಹಂಚಿಕೊಳ್ಳುತ
ಖುಷಿಗಳ ಪಡೆಯಿರಿ ಸುಚಿತ್ತಗೊಳ್ಳುತ

ನಾಲ್ಕು ದಿನಗಳ ಈ ನಿಮ್ಮ ಜೀವನವ
ಕೆಡಿಸದಿರಿ ಮೆರೆಸುತ ಅಹಂಕಾರವ
ತೊಡೆಯಿರಿ ಮೌನದ ದುಷ್ಟ ದ್ವಾರವ
ಹಂಚಿರಿ ಪ್ರೀತಿಯ ಮಹಾಪೂರವ...


ಸ್ವಾರ್ಥ... ಸಂಬಂಧ... ಜೇವನ...

ನಂಬಿ ಕೆಡಬೇಡ ಓ ಬಂಧುವೇ
ಈ ಜಗದಿ ಸ್ವಾರ್ಥವೇ ಮುಂದಿಹುದು

ಗೆಳೆತನವೆಂಬ ನಾಮದಿ ದ್ರೋಹವ ಬಗೆವರು
ತಮ್ಮ ತಪ್ಪನು ಮುಚ್ಚಲು ಪರರ ಧೂಷಿಸುವರು
ಗೌಪ್ಯವಾಗಿಡಲೆಂದು ಹೇಳಿದ ಮಾತುಗಳನು
ತಮ್ಮ ಸ್ವಾರ್ಥಕಾಗಿಯೆ ಬಳಸಿ ನಮ್ಮ ಹೀಯಾಳಿಸುವರು

ಸಂಬಂಧವೆಂಬ ನಾಮದಿ ಹಕ್ಕು ಸ್ಥಾಪಿಸುವರು
ತಾವು ಹೇಗೇ ಇದ್ದರೂ ಪರರ ಕೀಳಾಗಿಸುವರು
ಪರರ ಜೀವನ ಕೊಂಚವೂ ಗೌರವಿಸದೆ
ತಾವು ಸುಖವಾಗಿರಲು ನಮ್ಮ ಭಾವನೆಯ ಹಿಂಸಿಸುವರು

ಯಾರಿಗೆ ಬೇಕು ಇಂಥಾ ಲೋಕ
ಭಗವಂತ ನೀಡಿದ ಜೀವನದಿ ಯಾಕಿಂಥಾ ದುರ್ಭಾವ ?
ಭಗವಂತನ ಸೃಷ್ಟಿಯಿದು... ನಾವೆಲ್ಲಾ ಒಂದೇ...
ಹೀಗಿರಲು ಯಾಕೆ ಬೇಕು ವ್ಯತ್ಯಾಸಗಳು?

ಮರೆಯೋಣ  ಸ್ವಾರ್ಥವ ... ಮರೆಯೋಣ ಎಲ್ಲವ ...
ನಾವೆಲ್ಲಾ ದೇವರ ಸೃಷ್ಟಿ... ನಾವೆಲ್ಲಾ ಒಂದು...
ಇಂಥ ಭಾವದಿ ಬೆರೆಯೋಣ, ಸಂತಸವ ಹಂಚೋಣ...
ಇರುವ ಸಣ್ಣ ಜೀವನದಿ ಖುಷಿಯಾಗಿರೋಣ....
 

ಸರ್ವರ ಬಂಧು ಮಾಮರ

ನಾನಾಗಬೇಕು ಮಾಮರ
ವಿಶಾಲ ಕೊಂಬೆಗಳುಳ್ಳ ಮಾಮರ
ಹಚ್ಚ ಹಸುರಾಗಿರುವ ಮಾಮರ
ಫಲಪುಷ್ಪಗಳುಳ್ಳ ಮಾಮರ

ಬಿಸಿಲ ಬೇಗೆಯಲಿ ಸುಟ್ಟವರಿಗೆ
ದಣಿವಾರಿಸಲದು ಆಶ್ರಯ
ಮನನೊಂದು ದುಃಖಿಸುವರಿಗೆ
ಖುಷಿಯಾಗಲಿಲ್ಲಿದೆ ವಿಷಯ

ಕಳಚಲಾರದೆ ಬೇರೂರಿದೆ ಇಲ್ಲಿ
ವ್ಯಕ್ತಿತ್ವ, ಗುಣ ನಡತೆಗಳು
ಪರರಿಗಾಗಿ ಬದಲಾಗದು ಇಲ್ಲಿ
ಸ್ವಾಭಿಮಾನ, ಮನೋವಿಚಾರಗಳು

ಹಸಿದ ಹೊಟ್ಟೆಗೆ ತಂಪೆರಚುವುದು
ಇಲ್ಲಿನ ಫಲಪುಷ್ಪಗಳು
ಎಲ್ಲರಿಗೂ ಸಮಾನ ಗೌರವ ಸಿಗುವುದು
ಆಶ್ರಯ ನೀಡುವುದೀ ಮರಗಳು

ಮಾಮರದಂತೆ ನಾವಾಗಬೇಕು
ಪರೋಪಕಾರಿ ಕಲ್ಪವೃಕ್ಷದಂತೆ...

ಕಾಪಾಡು ಗಜಾನನ

ಆದಿವಂದಿತ ಗಜಾನನ
ಮೊರೆಯಿಡುತಿರುವೆ ನಿನಗಿಂದು
ಕಣ್ಣೀರ ಈ ವೇದನೆಗೆ
ಅಭಯ ನೀಡು ನೀ ನನಗಿಂದು

ನಿನ್ನ ಕೈಯೊಳಿರುವ ಪಾಶದಿಂ
ತೊಡೆ ನನ್ನೀ ಜೀವನದ ವಿಘ್ನಗಳ
ನೀ ಹಿಡಿದಿರುವ ಅಂಕುಶದಿಂ
ಜೊತೆ ಸೇರಿಸು ಪ್ರೀತಿಸುವ ಮನಗಳ

ನಿನ್ನ ಅಭಯ ಹಸ್ತದಿಂದ
ನೀಡೆಮಗೆ ಪರಿಹಾರದ ದೀಕ್ಷೆಯ
ನಿನ್ನ ಮೋದಕ ಹಸ್ತದಿಂದ
ಸ್ವೀಕರಿಸು ನಮ್ಮಯ ಪ್ರೀತಿ-ಭಕ್ತಿಯ

ಜಗದಾಧಿಪತಿಯೇ ನೀನು
ಕಾಪಾಡು ಈ ನಿನ್ನ ಭಕ್ತರ
ವಿಘ್ನರಾಜನೇ  ನೀನು
ನಯವಾಗಿಸು ನನ್ನೀ ಬಾಳ ದಾರಿಯ ...

Friday, February 21, 2014

ನವ ಚೈತನ್ಯದ ಹುರುಪು


 ಹರಡಿರುವ ಕಾರ್ಮೋಡದ ಛಾಯೆಯಲೂ
ಕಾಣುತಿದೆ ಹೊಸದೊಂದು ಹುರುಪು
ಮುಸುಕಿರುವ ಪ್ರೇಮದ ಮಾಯೆಯಲೂ
ಬೆಳಗುವುದೆಂತು ವಿಜಯದ ಹೊಳಪು?

ಭಯವೆಂಬ ಕಟೋರ ಬೇಲಿಯೊಳಗೂ
ಬೆಳಗುತ್ತಿದೆ ಆಶಯದ ದೀವಿಗೆ
ಪ್ರೀತಿಯ ಅಧ್ಬುತವಾದ ಕೀಲಿಯೊಳಗೂ
ತುಳುಕುತಿದೆ ಭಾವನೆಗಳ ತಂಬಿಗೆ'

ಕೊನೆಯಾಗದ ಆಸೆಗಳ ರಾಶಿಯಲೂ
ತಾರಕಕ್ಕೇರಿಹುದು ಮೋಹದ ದನಿ
ಸ್ವಾರ್ಥಿಗಳ ಅಟ್ಟಹಾಸದ ಮಾರುತದಲಿ
ಹರಿಯದಿರಲಿ ಎಂದಿಗೂ ನೋವ ಕಂಬನಿ ...

Thursday, February 20, 2014

ದುಃಖ ತಾಂಡವ

ಆತ್ಮ ದೇಹದೊಳಿದ್ದರೂ
ಈ ಜೀವ ನಿರ್ಜೀವ ಶವದಂತಿದೆ..

ಮಾತುಗಳಿಲ್ಲ...ಮೌನ ಆರ್ಭಟಿಸುತ್ತಿದೆ...

ದುಃಖದ ರವಿಯು ನೆತ್ತಿಗೇರಿ
ಜ್ವಾಲೆಯ ಸಿಡಿಸುತ್ತಿದೆ...

ಮನದಿ ಹಿಂಸೆಯು ತಾಂಡವವಾಡಿ
ಕೋಲಾಹಲವ ರಚಿಸುತ್ತಿದೆ...

ಹೃದಯದಿ ಅಗ್ನಿಯು ಭುಗಿಲೆದ್ದು
ಧಗಧಗನೆ ಉರಿಯುತ್ತಿದೆ...

ಮನದಲಿ ಮನೆಮಾಡಿದ್ದ ಪ್ರೀತಿಗೆ
ಹಾಲಾಹಲವ ಎರಚಿ ಕೊಲ್ಲುತ್ತಿದೆ....

Wednesday, February 19, 2014

ಪ್ರೀತಿ

ಪ್ರೀತಿ ಕ್ಷಣದಲ್ಲಿ ಮೂಡಿದರೂ
ಹುಟ್ಟಿನಿಂದ ಬಂದರೂ
ಮನದಾಳದಿಂದ ಹುಟ್ಟಿದರೆ
ಬೆಲೆ ಕಟ್ಟಲಸಾಧ್ಯವಾದುದು....
ಇದು ಪ್ರೀತಿಸುವ ಎರಡು ಮನಸ್ಸುಗಳಿಗೆ
ಮಾತ್ರ ಅರಿವಾಗುವುದು....
ನೋಡುಗರಿಗೆ ಇದು
ಕ್ಷುಲ್ಲಕ ಎನಿಸುವುದು....

Tuesday, February 18, 2014

ಯಕ್ಷ ಚಿತ್ತ ಚೋರ

ಹೇ... ನನ್ನ ಚಿತ್ತಚೋರ...
ನಿನ್ನೊಲವೇ ನನ್ನ ಜೀವನಸಾರ
ನಿನ್ನ ನೋಡದಿರೆ ನನ್ನೀ ಮನ ಭಾರ
ನಿನ್ನಲ್ಲಿ ನನಗಿರುವುದು ಪ್ರೇಮ ಅಪಾರ...

ನನ್ನ ಮನದೊಡೆಯನೆ ನೀನು
ಸುರಿದಿರುವೆ ಹೃದಯದಿ ಪ್ರೀತಿಯ ಜೇನು
ಮನದಾಳದಿ ನುಡಿಸಿರುವೆ ಇಂಪಾದ ನಾದವೇನು
ಆ ನಾದದ ಹೆಸರೇ 'ಪ್ರೀತಿ'ಯೇನು???

ನನ್ನುಸಿರಿಗೆ ಉಸಿರಾಗಿಹೆ ನೀನು
ಕಡಲ ಸೇರುವ ನದಿಯಂತೆ ನಾನು
ನನ್ನೊಡಲಿಗೆ ಜೀವದ ಸಿರಿ ನೀನು
ನೀನೇ ಈ ಹೃದಯ ಮೀಟಿದ ವೈಣಿಕನೇನು?

ನೀನೇ ನನ್ನ ಬಾಳಿನ ನಂದಾದೀಪ
ಕಂಗಳಲಿ ಹೃದಯದಲಿ ಕೇವಲ ನಿನ್ನದೇ ರೂಪ
ನಿನ್ನ ಹೆಜ್ಜೆಯು ಈ ಮನದಲಿ ಅಳಿಯದ ಛಾಪ
ಬರಲಾರದೆಂದೂ ನಮ್ಮೀ ಪ್ರೇಮದಲಿ ಲೋಪ...

Monday, February 17, 2014

ಅಮ್ಮ

ಅಮ್ಮಾ, ನಿನ್ನ ಮಡಿಲಲಿ
ಹಾಯಾಗಿ ನಾನಿರಲು
ಬೇರಾವ ಭಯವೂ ನನ್ನ ಕಾಡಿಸಲು ಬರದು

ಕಂದಾ ನಿನ್ನ ಅಪ್ಪುತಲಿ
ನನ್ನೇ ನಾ ಮರೆತಿರಲು
ಬೇರಾವ ಚಿಂತೆಯೂ ನನ್ನ ಮನವ ಸೇರದು

ಅಮ್ಮಾ ನಿನ್ನ ತೋಳಲಿ
ಬೆಚ್ಚಗೆ ನಾ ಮಲಗಿರಲು
ಸುರಕ್ಷಿತವು ಎಂದೆಂದೂ ನನ್ನ ಈ ಬಾಳು

ಕಂದಾ ನಿನ್ನ ಕಾಯುತಲಿ
ಈ ಹೃದಯ ಮಿಡಿಯುತಿರಲು
ನನ್ನ ಜೀವನವೇ ಮುಡಿಪು ನಿನಗಾಗಿ ಕೇಳು..

ಕೋಪ

ನಿನ್ನ ಕೋಪವನು ನೀ
ಸಾರ್ಥಕತೆಯತ್ತ ಸಾಗಿಸಯ್ಯ
ಸುಮ್ಮನೆ ಮನ ಕಳಂಕಿಸಿ
ಜ್ಞಾನಕ್ಕೆ ಕುಂದು ತರಬೇಡಯ್ಯ

ಬಂದಾಗ ನಿನಗೆ ಕೋಪ
ಮಾಡೊಂದು ಅಪೂರ್ವ ಕೆಲಸ
ಹಾಕಬೇಡ ಯಾರಿಗೂ ಶಾಪ
ಆಗ ದೊರೆಯುವುದು ಸಂತಸ.

ಕೋಪದ ಉದ್ವೇಗದಿ ನೀನು
ಅಗೆದುಬಿದು ಭೂಮಿಯ
ಮುಂದಿನ ದಿನ ಅದರಲಿ
ನೆಟ್ಟುಬಿಡು ಗಿಡವ

ಆವೇಶಗೊಂಡಾಗ ನೀನು 
ತಂದುಕೊಳ್ಳಯ್ಯ ತಾಳ್ಮೆಯ
ರೋಷದಿ ಆರ್ಭಟಿಸಿದಾಗ ನೀನು
ಕೆಡಿಸುವೆ ನಿನ್ನ ಮನಃಶಾಂತಿಯ

ಕೊಪಗೊಂಡಾಗ  ನೀನು
ಮಾಡಬೇಡ ಪ್ರತಿವಾದ
ಹಾಕು ನಿನಗೆ ನೀನೇ ಸವಾಲು
ನಿನ್ನಯ ಗುರಿಸಾಧನೆ ಮಾಡಲು

ಕೋಪ ಬಂದಾಗ ನಿನಗೆ
ಮಾಡು ಸಹಾಯವ ಪರರಿಗೆ
ವ್ಯರ್ಥ ಮಾಡಬೇಡ ನಿನ್ನ ಸಮಯವ
ಮಾಡು ನಿನ್ನಯ ನಿತ್ಯಕಾರ್ಯವ

ಕೋಪ ಬಂದಾಗ ನೀನು
ಹಿರಿಯರ ಮಾತನ್ನು ಕೇಳಯ್ಯ
ಅವರು ನುಡಿದಂತೆ ನಡೆಯಯ್ಯ
ಆಗ ಸಾಧಿಸುವೆ ನಿನ್ನ ಗುರಿಯ

ಕೊಪಗೊಂಡಾಗ  ನೀನು
ಮಾಡು ದೇವರ ಪ್ರಾರ್ಥನೆಯ
ನಿನ್ನ ತಾಳ್ಮೆಯ ವೃದ್ಧಿಸಯ್ಯ
ಪಡೆಯಲು ಮನಃಶಾಂತಿಯ...

ಮಳೆಯಿಂದ ಇಳೆ

ಏನಿದು? ಮಳೆ ಎಂದರೆ???
ಹೆರವರ ದುಡಿಮೆಯ ಬೆವರೇ?
ಬಡವರ ದುಃಖದ ಕಣ್ಣೀರೇ??
ಮಕ್ಕಳ ಆನಂದದ ಪನ್ನೀರೇ??

ಬಂದರೆ ಸಾಕು ಈ ಮಳೆ
ಮಕ್ಕಳ ಮೊಗದಿ ಆನಂದದ ಕಳೆ
ಹಚ್ಚ ಹಸುರಾಯಿತು ಈ ಇಳೆ
ಮಾಸಿತು ಈ ಜಗತ್ತಿನ ಕೊಳೆ

ನಲಿದಾಡಿತು ಅಂದದಿ ನವಿಲು
ಮಳೆಯ ಹನಿ ಹನಿ ಬೀಳಲು
ನಿಂತಿತು ಜನರೆಲ್ಲರ ಅಳಲು
ಸಂತಸದಿ ಮೀಟಿತು ಕೊಳಲು

ಬಂದಿತು ಹೂದೋಟದ ಕಂಪು
ಬೀಸಲು ತಂಗಾಳಿಯ ತಂಪು
ಕೋಗಿಲೆಯ ನಾದವದು ಇಂಪು
ನೀಡಿತು ನಮ್ಮ ಮನಸ್ಸಿಗೆ ತಂಪು...

Sunday, February 16, 2014

ಮಹಾನ್ ಹೆತ್ತವರು

ಕಣ್ಣಿಗೆ ಕಾಣುವ ದೇವರ ರೂಪ ತಾಯಿ-ತಂದೆ
ಅವರನು ಎಂದಿಗೂ ಮಾಡಬೇಡಿ ನೀವು  ನಿಂದೆ
ಅವರ ಅಸ್ತಿತ್ವದ ಕಾರಣದಿಂದಲೇ ನೀನು ಬಂದೆ
ದೂರ ಮಾಡಿದರೆ ಅವರನು ಮೆಚ್ಚಳು ಭಾರತಾಂಬೆ

ಮಾತನಾಡಲು ಆಗುತಿತ್ತು ನಮಗೆ ಸೋಲು
ಆಗ ನೀಡಿದಳು ತಾಯಿ ತನ್ನ ಮೊಲೆವಾಲು
ಬೇಡಿರಿ ಅವಳಿಗಾಗಿ ಎಂದಿಗೂ ದೀರ್ಘ ಬಾಳು
ಮಾಡದಿರಿ ಅವಳ ಜೀವನವ ನೀವು ಹಾಳು

ಅತ್ತಾಗ ನಾವು ಕಂಡದ್ದನ್ನು ಬೇಕು ಎಂದು
ಕೈಗೆ ತಂದು ಕೊಟ್ಟರು ತಂದೆಯು ಬಂದು
ಬೇಕಿದ್ದನ್ನು ಕೊಡಲು ನೋಡಲಿಲ್ಲ ಹಿಂದು
ನೂರ್ಕಾಲ ಬಾಳಲಿ ಆ ಮಹಾತ್ಮ ತಂದೆ ಬಂಧು

ತಾಯಿ-ತಂದೆ ನಮ್ಮಯ ಬಾಳಿಗೆ ದೇವರ ರೂಪ
ಅವರಿಲ್ಲದ ಬಾಳೇ ನಮಗೊಂದು ಶಾಪ
ಅವರಲ್ಲೆಂದಿಗೂ ಮಾಡಬೇಡಿ ನೀವು ಕೋಪ
ಆಗಿರಿ ಅವರ ಬಾಳಿಗೆ ನೀವು ನಂದಾದೀಪ...

ರಾಜಕೀಯದ ಪರಿಣಾಮ ಏನು?

ತುಂಬಿತಿಂದು ನಾಡಿನಲ್ಲಿ ರಾಜಕೀಯ
ಮರೆತರಿವರು ಗುಣಗಳನ್ನು ಮಾನವೀಯ

ನರಳಿದರು ಜನರೆಲ್ಲಾ ಅನ್ಯಾಯದಿಂದ
ಕಳಚಿದರು ಬಾಂಧವ್ಯ ಪ್ರೀತಿ-ಅನುಬಂಧ

ಬೀಡು ಬಿಟ್ಟಿತು ನಾಡಿನಲ್ಲಿ ವೈಜ್ಞಾನಿಕತೆ
ತುಂಬಿತು ಜನರಲ್ಲಿ ಸಕಲ ಸಂಪನ್ನತೆ

ಬಂದಿತು ರಾಜಕಿಯದಿಂದಲೇ ಭ್ರಷ್ಟಾಚಾರ
ಎಸಗಿದರು ಪುಟಾಣಿಗಳೊಂದಿಗೂ ಅತ್ಯಾಚಾರ

ಛೆ! ಏನಿದು ರಾಜಕೀಯದ ದುಷ್ಪರಿಣಾಮ
ಇದರಿಂದಾಗುವುದು ಈ ದೇಶದ ಅವಸಾನ

ಬೇಡವೇ ಬೇಡ ನಮಗೆ ಈ ರಾಜಕೀಯ
ನಾವೆಲ್ಲರೂ ಎಂದಿಗೂ ಒಂದೇ - "ಭಾರತೀಯ"...

ಹನಿಗವನ

ಬೀರು ತೆಗೆದು ನೋಡಿದಾಗ
ಅಲ್ಲಿದ್ದ ಪರ್ಸು "ಖಾಲಿ"
ಹೊರಗೆ ಬಂದು ನೋಡಿದಾಗ
ಅಲ್ಲಿ ಕಂಡೆ ದೊಡ್ಡ "ಜೋಕಾಲಿ"

ಚುಟುಕು

ಜನರು ಮಾಡುವರು ಶಿಷ್ಟಾಚಾರ
ಪ್ರಾಣಿಗಳು ಮಾಡುವವು ಇಷ್ಟಾಚಾರ
ಆದರೆ ಜಗತ್ತಿನಲ್ಲೊಂದೇ ಹುಳಿ- ಖಾರ 
ಅದೇ ರಾಜಕೀಯದಲ್ಲಿನ ಭ್ರಷ್ಟಾಚಾರ

ದುಂಬಿಗಳ ಸಂದೇಶ

ನಾನಂದು ನೋಡಿದೆ ಜೋಡಿ ದುಂಬಿಗಳ
ಅವುಗಳ ಪ್ರೀತಿಯ ಅಂತರಾಳ
ಒಂದನ್ನೊಂದು ಬಿಟ್ಟಿರಲಾರೆವು
ಎಂಬುದನ್ನವು ಹೇಳಲಾರವು...

ಆದರೆ ಅವು ತಿಳಿಸುವವೊಂದು ಸಂದೇಶವ
ಜೀವನೋಪಯುಕ್ತ ಉಪದೇಶವ
"ಜನಗಳೇ, ನೀವು ಒಂದಾಗಿ ಸೇರಿ
ಕಾಯಕವ ಮಾಡಿ ಪರೋಪಕಾರಿ..."

ಒಟ್ಟಾಗಿ ಮಾಡಿ ಉತ್ತಮಕಾರ್ಯವ
ಉಳಿಸಿರಿ ಜೀವನದ ಸೌಂದರ್ಯವ...
ಈ ಸಂದೇಶವ ಸಾರುವ ದುಂಬಿಗಳ ಮನ
ಇದೋ ಸ್ವೀಕರಿಸಿ ನಮ್ಮ ನಮನ...

ಕೆಲ ನುಡಿಮುತ್ತುಗಳು ನನ್ನಂತರಾಳದಿಂದ

ನಾಲಿಗೆಯು ಬೇಕಾದಂತೆ ತಿರುಗುವುದೆಂದು ಪರರ ದುಃಖಕ್ಕೆ ಬುನಾದಿಯಾಗುವುದೆಂತು ಸರಿ???

ಮಾತು ಬರದಿದ್ದರೂ 'ಅಮ್ಮ' ಎನ್ನಬಹುದು...
ಮೌನ ಮಾತಾದರೂ ಮಮತೆ ಎಂದೂ ಬಾಡದು....


ಪರರ ಜೀವನಕ್ಕೆ ಕಲ್ಲೆರಚುವ ಖದೀಮರಿಗೂ ಸಮಾಜದಿ ಬೆಲೆ ಅಪಾರ....


ಕಷ್ಟದಲಿದ್ದಾಗ ಕಣ್ಣೆತ್ತಿ ನೋಡದ ಜನರು ಕಟ್ಟಿಗೆಯ ಚಟ್ಟದಲಿದ್ದಾಗ ಕಣ್ಣೀರಿಡುವರು... 





ಸಾಕು ಮಾಡಿ ಜಗಳ

ಜನರ ಸ್ವಾರ್ಥದಿಂದ ಬಳಲಿ
ನಿದ್ದೆ ಮಾಡುತ್ತಿರುವಳು ಭಾರತಾಂಬೆ
ವಿಶ್ವವಿಡೀ ಶಾಂತಿ ತುಂಬಿಕೊಳಲಿ
ಎಂದು ಬೇಸತ್ತು ಬೇಡಿಕೊಂಬೆ

ಪ್ರಪಂಚದಾದ್ಯಂತ ಉಪಯುಕ್ತವಾದ ನೀರು
ಅದನು ಪಡೆಯಲೇಕೆ  ಕಣ್ಣೀರು?
ನೀರು ಕುಡಿಯಲು ಹೊರಾಡುವವರಾರು?
ಅವರೆಡೆಗೆ ದಾರುಣ ನೋಟ ಬೀರು...

ಅಣ್ಣಾ ... ಏಕೆ ನೀರಿಗಾಗಿ ಪರಸ್ಪರ ಜಗಳ
ಅದರಿಂದ ನೋಯುವುದು ಸಾವಿರಾರು ಹೃದಯ
ಅದರ ಬದಲಿಗೆ ಪ್ರೀತಿಸು ಪ್ರತಿ ಜನಗಳ
ಜಗಳಗಳಿಗೆ- ದ್ವೇಷಕ್ಕೆ ಹೇಳು ವಿದಾಯ...

ಬೀಜದ ಮೊಳಕೆ

ಒಂದು ಬೀಜದ ಹೃದಯದೊಳಗೆ
ಆಳ... ತುಂಬಾ ಆಳದೊಳಗೆ
ಒಂದು ಸಣ್ಣ ಗಿಡವು
ನಿದ್ದೆ ಮಾಡುತ್ತಲಿದೆ ...

"ಏಳು ", ಎಂದಿತು ಸೂರ್ಯನ ಹೊಂಗಿರಣ..
"ಎದ್ದು ಬೆಳಕಿಗೆ ಬಾ ಗಿಡವೇ...
"ಏಳು" ಎಂದಿತು ಒಂದು ಸ್ವರ
ಅದುವೇ ಮಳೆಯ ಇಬ್ಬನಿ...

ಸಣ್ಣ ಗಿಡಕ್ಕೆ ಕೇಳಿಸಿತು ಧ್ವನಿ ,
ಅದು ಮೆಲ್ಲನೆದ್ದು ಬಂದಿತು
ನೋಡಲು ಹೇಗಿದೆಯೆಂದು
ಜಗತ್ತು ಹೊರಗಿನದು...

ಮಾತನಾಡುವ ಚಿಟ್ಟೆ

"ಚಿಟ್ಟೆ, ಚಿಟ್ಟೆ, ಚಿನ್ನದ ರನ್ನದ ಚಿಟ್ಟೆ
ಎಲ್ಲಿಗೆಲ್ಲ ನೀ ಹಾರಿ ಬಂದುಬಿಟ್ಟೆ???"
"ಅಕ್ಕ, ನನ್ನಕ್ಕ, ನಾನು ಹಾರಿದೆ ಗುಡ್ಡ ಬೆಟ್ಟ
ದಾಟಿದೆ ನದಿ ಸಮುದ್ರ, ಸೇರಿದೆ ನಾ ಹೂದೋಟ ."

"ಚಿಟ್ಟೆ, ಚಿಟ್ಟೆ, ಚಿನ್ನದ ರನ್ನದ ಚಿಟ್ಟೆ
ಅಲ್ಲಿಗೆಲ್ಲ ಹಾರಿ ನೀನೇನು ಮಾಡಿಬಿಟ್ಟೆ???"
"ಅಕ್ಕ, ನನ್ನಕ್ಕ, ನಾನಲ್ಲಿಗೆಲ್ಲ ಹಾರಿ ಬಂದುಬಿಟ್ಟೆ
ನೀರು ಕುಡಿದು ಹೂವ ಚುಂಬಿಸಿ ಜೇನು ಹೀರಿ ಬಿಟ್ಟೆ."

"ಚಿಟ್ಟೆ, ಚಿಟ್ಟೆ, ಚಿನ್ನದ ರನ್ನದ ಚಿಟ್ಟೆ
ಅಲ್ಲಿ ನೀನು ಯಾರನೆಲ್ಲ ಮಾತನಾಡಿಸಿ ಬಿಟ್ಟೆ???"
 "ಅಕ್ಕ, ನನ್ನಕ್ಕ, ನಾ ನೋಡಿದೆ ಹಲ ಪ್ರಾಣಿ ಪಕ್ಕಿ
ಮತ್ತು ಅನೇಕ ಗೂಡು ಕಟ್ಟುತ್ತಿರುವ ಹಕ್ಕಿ."

"ಚಿಟ್ಟೆ, ಚಿಟ್ಟೆ, ಚಿನ್ನದ ರನ್ನದ ಚಿಟ್ಟೆ
ನನ್ನ ಜೊತೆ ಮಾತನಾಡುತ್ತ ಇಲ್ಲೇ ಇರಲಾರೆಯಾ??"
"ಅಕ್ಕ, ನನ್ನಕ್ಕ, ಇಲ್ಲೇ ಇದ್ದರೆ  ನನಗೆ ಜೀವನವಿಲ್ಲ
ದಯವಿಟ್ಟು ನನ್ನ ಹೋಗಲು ಬಿಡಲಾರೆಯಾ???"

ಪ್ರಕೃತಿ ಮಾತೆ

ಓ ನನ್ನೊಲವಿನ ಮಾತೆ
ನೀನೇ ಪ್ರಕೃತಿ ಮಾತೆ
ನೀನೇ  ಅನ್ನದಾತೆ
ನಮ್ಮ  ಜೀವನದ ಜೀವದಾತೆ...

ರೈತರ ಗದ್ದೆಗೆ ಮಳೆಯನು ನೀಡಿ
ನಿನ್ನಯ ಮರಗಳ ಎಲೆಗಳ ಬಾಡಿಸಿ
ರೈತರ ಬೆಳೆಗೆ ಗೊಬ್ಬರ ನೀಡಿ
ಇಡೀ ವಿಶ್ವವ ಬೆಳೆಸುವ ತಾಯೇ...

ನಿನ್ನ ಸೌಂದರ್ಯವ ಹಾಳು  ಮಾಡಿ
ಹಣ ಕಸಿಯುವ ಮನುಜರ ನೋಡಿ
ಕ್ಷಮಿಸಿಹೆ ಅವರಿಗೆ ಸಹಾಯ ನೀಡಿ
ಸ್ವಾರ್ಥವಿಲ್ಲದ ಮಹನೀಯ ಮಾತೆ

ಮರವನ್ನು ಕಡಿದು ಭೂಮಿಯ ಬರಡು ಮಾಡಿ
ಪ್ರಕೃತಿ ಮಾತೆಗೆ ದುಃಖವ ನೀಡಿ
ತಿಂದುಂಡು ಜೀವನವ ಹಾಳು ಮಾಡೋ
ಮನುಜಗೂ ಸಹಾಯ ನೀಡುವ ಮಾತೆ...

ಪ್ರೀತಿಯಲಿ ಲೀನ

ಮಾತುಗಳು ಸಾಲದು
ನಿನ್ನ ಪ್ರೀತಿಯ ಬಣ್ಣಿಸಲು
ಅಕ್ಷರಗಳು ಸಾಲದು
ನಿನ್ನ ಮಮತೆಯ ಉಲ್ಲೇಖಿಸಲು
ಭಾವನೆಗಳು ಸಾಲದು
ನಿನ್ನ ಪ್ರೇಮವ ಆಸ್ವಾದಿಸಲು...

ದೃಷ್ಟಿಯು ಸಾಲದು
ನಿನ್ನ ಸುಂದರತೆಯ ಆನಂದಿಸಲು
ನನ್ನುಸಿರು ಸಾಲದು
ನಿನ್ನ ಈ ಸುಗಂಧವ ಆಸ್ವಾದಿಸಲು
ಸ್ಪರ್ಶಜ್ಞಾನ ಸಾಲದು
ನಿನ್ನಪ್ಪುಗೆಯು ನನ್ನ ಮೈಸೋಕಲು...

ಶ್ರವಣಜ್ಞಾನವೇ ಸಾಲದು
ನಿನ್ನ ಸುಂದರ ನುಡಿಗಳ ಕೇಳಲು
ಓಡುತಿರುವ ಸಮಯ ಸಾಲದು
ನಿನ್ನ ಜೊತೆಯನು ಆನಂದಿಸಲು
ಈ ಜೀವನವೇ ಸಾಲದು
ನಿನ್ನ ಪ್ರೀತಿಯಲಿ ತಲ್ಲೀನಳಾಗಲು...

Saturday, February 15, 2014

ನನ್ನವನು

ನನ್ನವನು ಸವಿಹೃದಯಿ...
ನನ್ನ ಬಾಳ ಬೆಳಗುವ ರವಿ...

ಪರರಿಗೆ ಕೇಡು ಬಯಸದ
ಕ್ಷಮೆಯ ಮಹಾಪೂರ - ಸಹನಾಮಯಿ..
ದುಃಖಗಳ ಹೃದಯದಿ ಬಚ್ಚಿಟ್ಟು
ನಗುಮೊಗದಿ ರಂಜಿಸುವ - ಶಾಂತಹೃದಯಿ..

ಅಪವಾದಗಳ ಸುರಿಮಳೆ ಬಿದ್ದರೂ
ನೋವು ನುಂಗುವ - ಸಹೃದಯಿ
ಕಟುಹೃದಯಿಗಳು ಕೇಡೆರಚಿದರೂ
ಅವರೆಡೆ ಮಂದಹಾಸ ಬೀರುವ - ಸ್ನೇಹಜೀವಿ..

ಪ್ರೀತಿಯ ಮಹಾಪೂರ ಇವನು
ಇವನಿಂದಾಗಿ ಈ ಪ್ರೇಮ ಅಮರ
ಜೊತೆಗಿರಲು ಇವನು ನನ್ನೊಡನೆ
ಭಯವಿಲ್ಲದೆ ಗೆಲ್ಲುವೆವು ಸಮರ...

ಎಲ್ಲರನೂ ಗೌರವಿಸುವ ಇವನು
ನನ್ನ ಮನದ ಅರಸ..
ಇವನ ಜೊತೆಯಿಂದಲೇ ತಾನೇ
ಕೊನೆ ನನ್ನ ಬಾಳ ವಿರಸ...

Friday, February 14, 2014

ಶರೀರದ ನೀತಿ

ಸತ್ತ ಮೇಲೆ ಆಗುವುದು ನಶ್ವರ
ಹೊಳೆಯುತ್ತಿರುವ ಈ ಶರೀರ
ಅದಕ್ಯಾಕೆ ಬೇಕೀಗ ಶೃಂಗಾರ?
ಪಡಲು ಹೆರವರು ಮತ್ಸರ...

ಸತ್ಯ ಅಹಿಂಸೆಯೆ ಆಹಾರ
ನ್ಯಾಯ ನೀತಿಯೆ ವ್ಯವಹಾರ
ವಿದ್ಯಾದಾನವೇ ಸದ್ವಿಚಾರ
ಷಡ್ವೈರಿಗಳೇ ಅನಾಚಾರ...

ಸ್ನೇಹವೇ ನಮಗೆ ವೈಭೋಗ
ಸಹಾಯದಲ್ಲಿದೆ ಅನುರಾಗ
ಹಿಂಸೆಯೊಂದೇ ಮಹಾರೋಗ
ಹರಿಸ್ಮರಣೆಯೇ ನಮಗೆ ನಗ...

ಬಿಟ್ಟುಬಿಡಿ ನಿಮ್ಮಯ ಸ್ವಾರ್ಥ
ಜೀವನಕೆ ಕೊಡಿ ಹೂಸ ಅರ್ಥ...
ಯಾರೂಂದಿಗೂ ಮಾಡದಿರಿ ಅನರ್ಥ
ಅದುವೇ ಜೀವನದ ನಿಜ ಅರ್ಥ...

Monday, February 10, 2014

ಜೀವನ ವಸಂತಗಾನ...

ಏಕೆ ಬಾಡುತಿದೆ ಮನ
ಹೃದಯದಿ ಕಣ್ಣೀರ ಕಂಪನ
ಎನಿತು ತಾಳೆನೋ ನಾ ಕಾಣೆ
ಈ ಜೀವನದ ಲಘುಪಯಣ...

ಕೊರೆಯುತಿದೆ ಚಳಿಗೆ ಈ ಜೀವನ
ಕಾಯುತಿದೆ ವಸಂತನಾಗಮನ
ಬಿಸಿಲ ಬೇಗೆಗೆ ಬೇಯುತಿದೆ ಮನ
ತಂಪೆರೆಯಲು ಬಾ "ವರ್ಷಾ" ಈ ದಿನ...

ಕಾಲ ಕೂಡಿಬರದೆ ಎಂದೂ ನಡೆಯದು
ನಾವು ಮನದಲಿ ಅಂದುಕೊಂಡದ್ದು..
"ಕಾಲಾಯ ತಸ್ಮೈ ನಮಃ" ಎಂದು
ಶರಣಾಗಬೇಕು ಭಗವಂತನಿಗೆ ಎಂದೂ...

ಬಾಡದಿರಲಿ ಎಂದಿಗೂ ಈ ಮನ
ಈಡೇರಲಿ ಎನ್ನ ಬಯಕೆಗಳ ಕಲ್ಪನ
ತಂಪೆರೆಯಲಿ ಯಶೋಲ್ಲಾಸದ ಆಗಮನ
ಸಂತಸದ ಗುಡಿಯಾಗಲಿ ಈ ಜೀವನ...

Sunday, February 9, 2014

ಬೇಡಿಕೆ

ಬೇಡುತಿದೆ ಮನವು  ಭಗವಂತನಲಿ
ಈ ಹೃದಯದ ಬಯಕೆ ಹುಸಿಯಾಗದಿರಲಿ...
ಮನದಾಕಾಂಕ್ಷೆಗಳು ನನಸಾಗುತಿರಲಿ...
ಈ ಜೀವನದ ಕಾರಣಕೆ ಸಾವಾಗದಿರಲಿ...

ಪ್ರೇಮದ ಅಂಕುರಕೆ ನೋವಾಗದಿರಲಿ..
ಆಸೆಗಳ ಸಾಗರವೆಂದೂ ಬರಡಾಗದಿರಲಿ...
ಕಾತರಿಸುವ ಕಂಗಳಲಿ ಚೈತನ್ಯ ಜನಿಸಲಿ...
ನಗು ಮರೆತ ಅಧರಗಳು ಅರಳಿ ನಗುತಿರಲಿ...

ಸಂತಸ ಮರೆತ ಮನವು ನಳನಳಿಸುತಿರಲಿ...
ಭಯವೇ ಮನೆಮಾಡಿದ ಹೃದಯ ಪ್ರಶಾಂತವಾಗಲಿ...
ನಿದ್ರೆ ಮರೆತ ಕಂಗಳಲಿ ಶಾಂತಿ ವಿಶ್ರಮಿಸಲಿ...
ಕೋಪ ತಾಪಗಳು ಕರಗಿ ಮನಕೆ ತಂಪೆರಚಲಿ...

ಅನ್ಯಾಯವೆಸಗದ ಪ್ರೇಮ ಜಯಭೇರಿ ನುಡಿಸಲಿ...
ಕಪಟವಿಲ್ಲದ ಪ್ರೀತಿಗೆ ಪ್ರೋತ್ಸಾಹ ದೊರೆಯಲಿ...
ಮನದಾಳದ ಭಾವದ ಪ್ರತಿಬಿಂಬ ತೋರಲಿ...
ಸಮಾಜದಿ ನಿಜಪ್ರೀತಿಗೆ ಮಾನ್ಯತೆ ದೊರೆಯಲಿ...

Friday, February 7, 2014

ಸರಿಯಲ್ಲವೇ???

ರಾತ್ರಿಯ ಈ ಏಕಾಂತದಲಿ
ಕಾಡುತಿದೆ ಮಾತೊಂದು ಅಪೂರ್ಣ...
ಮನದಲಿ... ಅಂತರಾಳದಲಿ...
ಕೇಳುತಿದೆ ಸ್ವರವೊಂದು ಸ್ಮರಣ...

ಕಣ್'ಪಟಿಯಲಿ ಸುಳಿದಾಡುತಿದೆ
ಜೀವನ ಕಥಾನಕ ಚಲನಚಿತ್ರದಂತೆ
ಸಿಹಿಕಹಿಗಳ ಮಿಶ್ರಣ ನೆನಪಿಸುತಿದೆ
ಮನದಲಿ ಕದನ ಕುರುಕ್ಷೇತ್ರದಂತೆ...

ಮರೆಯಲಾಗದಂತೆ ಅಚ್ಚು ಹಿಡಿದ ಪಾಠ
ಕಹಿಮಿಶ್ರಿತ ಅನುಭವಗಳದು
ಜೊತೆ ಸೇರಲು ಸಂಭ್ರಮಗಳ ಆಟ
ಸಿಹಿಯಾದ ಅನುಭವೋಲ್ಲಾಸಗಳು...

ಜೀವನದ ರಂಗಸ್ಥಳದಲಿ
ಸಿಹಿಕಹಿಗಳ ಮಿಶ್ರಣ ಅನಿರ್ಧಾರಿತ
ನಡೆನುಡಿಗಳು ನಮ್ಮ ವ್ಯಕ್ತಿತ್ವದಲಿ
ಜೀವನದ ಕಥಾನಕವನಾಧಾರಿತ...

Wednesday, February 5, 2014

ಸ್ವಾರ್ಥಿ ಜನರಿವರು

ಸ್ವಾರ್ಥವೇ ಮಿಗಿಲು ಇವರೆಲ್ಲರಿಗೂ
ಬಾಯ್ಬಿಡುವರು ಜುಜುಬಿ ಚಿಲ್ಲರೆಗೂ...

ತಪ್ಪುಗಳ ತಾವು ಎಷ್ಟೇ ಮಾಡಿದ್ದರೂ
ಪರರ ನಿಷ್ಠೆಗಳನ್ನು ಹೀನಾಯವಾಗಿ ದೂರುವರು...

ಕಷ್ಟದಲಿ ಇದ್ದಾಗ ಕಣ್ಣೆತ್ತಿ ನೋಡದವರು
ಕಾಷ್ಠವನೇರಿದಾಗ ನಕ್ರ ಕಣ್ಣೀರ ಸುರಿಸುವರು...

ತಮ್ಮ ಮನದಲ್ಲಿ ಹುಳುಕೆಷ್ಟೇ ತುಂಬಿರಲಿ
ಧೂಷಣೆಯ ನುಡಿಯನ್ನು ಖುಷಿಗೊಂಡು ಬಿತ್ತುವರು..

ಮುನ್ನಡೆಯ ಹಾದಿಯಲಿ ನಡೆಯದಿದ್ದರೂ ತಾವು
ಪರರ ಖ್ಯಾತಿಯನು ಕಡೆಗಣಿಸಿ ಆಡುವರು...

ತಮ್ಮ ಜೀವನ ನರಕದಂತೆ ರೂಪಿಸಿದ್ದರೂ
ಪರರ ಔಚ್ಚ ಜೀವನಕೆ ಬೆಂಕಿಯ ಹಚ್ಚುವರು...

ಸ್ವಾರ್ಥವ ರಕ್ತ ಕಣಕಣದಲೂ ತುಂಬಿಕೊಂಡಿಹರಿವರು
ಪರರ ಜೀವನಕೆ ಕೆಸರಂತೆ ಹಾಯುವರು....

Monday, February 3, 2014

ಬೆಳಕು

ಜೀವನದ ತಡೆಭರಿತ ಹಾದಿಯಲಿ
ಕಾರ್ಗತ್ತಲು ಕವಿದಾಗ
ಬೆಳಕು ತಾ ಆಗಮಿಸಿ
ದಾರಿಯ ತೋರಿಸದು...

ಮನಸಿನ ಕದವ ನೀ ತೆರೆದು
ಸೇರು ಅಂತಃಕರಣವ
ದಾರಿ ತೋರಿಸುವುದದು
ದೀಪ ತಾ ಆರಿದಾಗ...

ಬಲಗೊಳಿಸು ನಿನ್ನ ಮನೋಬಲವ
ಶಾಂತಿಯೇ ಅದಕಾಹಾರ
ಪ್ರಶಾಂತವಾಗಿರು ಎಂದೂ
ಮನವು ತಾ ಕೆಡುವಾಗ...

ಸಂದರ್ಶಿಸು ನೀ ಮನದ ಜೊತೆಗೆ
ಸಮಾಧಾನ ತಾಳ್ಮೆಗಳಿರೆ
ಕತ್ತಲಿನ ಕುರುಡತ್ವದಲೂ
ಬೆಳಕು ತಾ ತೋರುವುದು...

Sunday, February 2, 2014

ನಮ್ಮ ಭಾರತ

ಆಕಾಶದಿ ಮಿನುಗುತಿದೆ ಅಂದದ ತಾರೆ
ಭೂಗರ್ಭದಿ ಮೆರೆಯುತಿದೆ ಜಲಧಾರೆ
ಇರುವಳು ಭೂತಾಯಿಯ ಹೃದಯದಿ
ಶಾಂತಿಪ್ರಿಯಳಾದ ತಾಯಿ "ಭಾರತಿ"

ಮೂರು ದಿಕ್ಕುಗಳಿಗೂ ಕಾವಲಿದೆ ಸಾಗರ
ಆ ತ್ರಿವೇಣಿಗಳ ಸಂಗಮ ಅಮರ
ಕಿರೀಟದಂತೆ ಹೊಳೆಯುತಿದೆ ಹಿಮಗಿರಿ
ಮಂದಸ್ಮಿತ ಹೊಂದಿರುವ ಅಮ್ಮ "ಭಾರತಿ"

ನಿನಗೆ ಸಹಸ್ರಾರು ಪುತ್ರ ಪುತ್ರಿಯರು
ಇಲ್ಲಿದೆ ಶುದ್ಧ ಸಂಸ್ಕೃತಿಗಳು ಹಲವಾರು
ಧಾರ್ಮಿಕತೆಗೆ ನೆಲೆಬೀಡು ಈ ನಾಡು
ಸಕಲ ಕಲಾಧರಿತ್ರಿ ಈ ನಮ್ಮ "ಭಾರತಿ"

ಶ್ರವಣಕ್ಕೆ ಕೇಳುವುದು ಭಾಷೆಗಳು ನೂರಾರು
ಹೃದಯಕ್ಕೆ ಸ್ಪರ್ಶಿಸುವ ಸ್ಪಂದನೆಯೇ ಈ ತವರು
ಮನದಲ್ಲಿ ಗೌರವದ ಅಲೆಗಳು ಸಹಸ್ರಾರು
ಶಾಂತಿಯ ನೆಲೆಬೀಡಾಗಲಿ ಎಂದೆಂದಿಗೂ ಈ "ಭಾರತಿ"

Thursday, January 30, 2014

ಮುಗ್ಧ ಮಗು

ಹಾಲುಗಲ್ಲದ ಕಂದ
ನಿನ್ನಯ ಮುಗ್ಧತೆಯನ್ನು
ನಾನೇನು ಬಣ್ಣಿಸಲಿ?

ಇದ್ದರೂ ಚಿಂದಿಬಟ್ಟೆಯಲಿ
ನೀ ಮೆರೆಯುವೆ ಅರಸನಂತೆ
ನಕ್ಕು ನಲಿದಾಡುತಲಿ ಕುಣಿಯುತಲಿ
ಇತರರನೂ ನಗಿಸುವೆ.

ನಿನ್ನಯ ಆಟಗಳಿಂದ
ಸೆಳೆಯುವೆ ಹಲವರ ದೃಷ್ಟಿಯ
ನಿನ್ನ ಸುಕೋಮಲ ಮಾತುಗಳಿಂ
ಗಳಿಸುವೆ ಹಲವರ ಹೃದಯವ.

ಮಾತುಮಾತಿಗೆ ನಗುವೆ
ಹಲವರ ಮಾತಿಗೆ ಅಳುವೆ
ನಿದಿರೆಯಲ್ಲೂ ನಗುವೆ
ತೊದಲು ಮಾತುಗಳನ್ನಾಡಿ ಆಳುವೆ.

ನಗುನಗುತಲಿ ಸ್ವೀಕರಿಸಿದೆ
ಅಮ್ಮ ನೀಡಿದ ಮುತ್ತನು
ನಿನ್ನಿಂದ ಕಲಿತರೆಲ್ಲರೂ
ಮರೆಯಲು ತಮ್ಮ ಸಿಟ್ಟನು.

ನಿನ್ನಯ ಮುಗ್ಧ ನೋಟವು
ಸೆಳೆಯಿತು ಎಲ್ಲರ ಮನವ
ನಿನ್ನ ಆ ಮುಗ್ಧ ನಡೆಯು
ಕೆರಳಿಸಿತು ಕವಿ ಹೃದಯವ.

ನೀನಾದೆ ಎಲ್ಲರಿಗೂ ಮಾದರಿ
ಸುಂದರವಾದ ಈ ಪ್ರಪಂಚದಿ
ನಗುನಗುತಿರುವ ದಿನಚರಿ
ನೀಡುವುದು ಶಾಂತಿ ಮನದಿ.

ನಿನ್ನಿಂದಾಗಿ ಆಗಲಿ ಈ ಜಗವು
ಸುಖ ಸಂತೋಷ ಸಾಗರ
ಅರಿಯಲಿ ಎಲ್ಲರೂ 'ನಗವು
ನೀಡದು ಕ್ಷಣ ಸುಮಧುರ'.

ನಿನ್ನಿಂದಾಗಿ ತುಂಬಲಿ ಇಲ್ಲಿ
ಸಮಾನತೆಯ ಉಸಿರು
ಇದರಿಂದಾಗಿ ಹರಡಲಿ ಜಗದಿ
ಸುಖಶಾಂತಿಯ ಹಸಿರು.

Wednesday, January 29, 2014

ದುಂಬಿಯ ಹಾಡು ಕೇಳಿ..


Composed on 21.07.2001

ಆಹಾ!! ಎಂತಹ ಸುಂದರ ಲೋಕ
ಶ್ರೀಗಂಧದ ನಾಡು ಕರ್ನಾಟಕ.

ಕೆಂದರಿಳ ಹಸಿರು ಬೀಡು
ಎಲ್ಲೆಲ್ಲೂ ಹಕ್ಕಿಗಳ ಹಾಡು
ಶುಭ್ರ ಜಲಪಾತಗಳ ನೋಡು
ಹೇ ಮಾನವಾ..ಮಾಡಬೇಡ ಅದಕೆ ಕೇಡು.

ಸುಗ್ಗಿಕಾಲದ ಹಚ್ಚ ಹಸಿರು
ತಂದಿತು ಈ ನಾಡಿಗೆ ಬಸಿರು
ಎಲ್ಲೆಡೆ ಪಸರಿತು ಶ್ರೀಗಂಧದ ಪನ್ನೀರು
ಹೇ ಮಾನವಾ..  ಎರಚಬೇಡ ಇಲ್ಲಿ ಕೆಸರು.

ಇಲ್ಲಿದೆ ಧಾರ್ಮಿಕ ವೈವಿಧ್ಯತೆ
ಆದರೂ ಈ ವೈವಿಧ್ಯತೆಯಲ್ಲಿದೆ ಐಕ್ಯತೆ
ಕನ್ನಡಿಗರಲ್ಲಿದೆ ಮಾನವೀಯತೆ
ಹೇ ಮಾನವಾ..ಕನ್ನಡದ ಬಗ್ಗೆ ಇರಲಿ ತಾತ್ಪರ್ಯತೆ.

ಬಂತು ವೈಜ್ಞಾನಿಕ ಯುಗ
ತಂದಿತು ನಾಡಿಗೆ ಐಶ್ವರ್ಯದ ಭೋಗ
ಅದನ್ನು ಪಡೆಯಲಿದೆ ನಮಗೆ ಯೋಗ
ಹೇ ಮಾನವಾ.. ಪಸರಿಸಬೇಡ ಇಲ್ಲಿ ವಿವಿಧ ರೋಗ.

ಕನಸಿನ ಲೋಕ

ನಿಶ್ಚಲವಾದ ಪರಿಸರ
ಮುಳುಗಿದ್ದಾನೆ ನೇಸರ...
ಮೌನದ ಮಹದಾವತಾರ
ಕಣ್ಣನೋಟ ನೋಡುತಿದೆ ನೇರ...

ಆ ನೇರ ನೋಟದಲಿ
ನಿನ್ನ ನೆನಪುಗಳ ಚಿಲಿಪಿಲಿ...
ಮಂದಸ್ಮಿತ ಈ ನನ್ನ ತುಟಿಗಳಲಿ
ನಿನ್ನ ಪ್ರೀತಿಯ ಮಧುರ ಸ್ವಾದದಲಿ...

ಕಣ್ಣಂಚಿನಲಿ ಮಿಂಚುತಿದೆ ಪ್ರೀತಿ
ಆ ಪ್ರೀತಿಗೆಂದೂ ಇರದು ಮಿತಿ...
ದೊರೆಯಲು ಮನಸುಗಳ ಸಮ್ಮತಿ
ಪ್ರೀತಿಗೆಂದೂ ಬೀಸದು ತುಸುಭೀತಿ...

ನೋಡುನೋಡುತ್ತಲೇ ಕವಿದಾಯ್ತು ರಾತ್ರಿ
ನನ್ನ ಕನಸುಗಳ ಲೋಕಕೆ ಬಿತ್ತು ಕತ್ರಿ...
ಕನಸುಗಳೊಂದಿಗಿನ ಈ ನನ್ನ ಮೈತ್ರಿ
ಇಂದಿನ ದಿನದಿ ಕೊನೆಯಾಯ್ತು ಖಾತ್ರಿ...

Tuesday, January 28, 2014

ದುಃಖಿತ ಮನಸಿನ ದಯನೀಯ ಬೇಡಿಕೆ

ನಾನೇನು ಮಾಡಿದೆನೆಂದು
ಒರಟಾಗಿ ವರ್ತಿಸುವರು?
ಪ್ರೀತಿಗೆ ಶರಣಾದೆನೆಂದು
ಛೀಕಾರ ಹಾಕುವರು...

ಜೀವನವೇ ಸಾಕೆಂದು
ಮನವಿಂದು ಕದಡಿಹುದು
ಭಾವನೆಗೆ ಬೆಲೆಯೆಂದೂ
ಸಿಗದೆಂದು ಅನಿಸಿಹುದು...

ಹೆತ್ತವರ ಪ್ರೀತಿಗೆಂದೂ
ಚೂರಿಯ ಇರಿಯಲಿಲ್ಲ
ನನ್ನ ಮನದ ಪ್ರೀತಿಗೂ
ನಕಾರ ಹಾಕಲಿಲ್ಲ...

ಗೊಂದಲದ ಸಮಯದಿಂದ
ಚೂರಾಗಿರುವೆನು ನಾನು
ನನ್ನ ಮನವ ಅರ್ಥೈಸಿ
ಸಂತಸದ ದಿನವ ನೀಡಿರಿನ್ನು...

Monday, January 27, 2014

ಎಂತಹ ನಿಸ್ವಾರ್ಥ.... ಬರೆದ ದಿನಾಂಕ:26.01.2000

ಭಾರತಾಂಬೆ ನಿಸ್ವಾರ್ಥಿ..
ನಮ್ಮ ತಾಯಿ ನಿಸ್ವಾರ್ಥಿ...

ಶತ್ರುದೇಶದ ಪ್ರಜೆಗಳಿಗೂ
ಆಶ್ರಯವ ನೀಡಿದೆ
ಅವರ ಹಿತದ ರಕ್ಷೆಗಾಗಿ
ನೀ ದೇವರ ಬೇಡಿದೆ.

ಪ್ರಜೆಗಳ ಸುರಕ್ಷೆಗೆ
ನೀನು ಬಲು ಹೋರಾಡಿದೆ
ಬ್ರಿಟಿಷರ ಬಿಡುಗಡೆಯಿಂದ
ಸ್ವತಂತ್ರಳಾಗಿ ಹಾರಾಡಿದೆ

ಸರಕಾರವ ಸೃಷ್ಟಿಸಿ ನೀ
ಜನರ ಸಮಾನತೆಯ ಸಾರಿಹೆ
ಅವರ ಭ್ರಷ್ಟಾಚಾರದಿಂದ ನೀ
ಅತೀವ ನೋವ ತಿಂದಿಹೆ

ನಿನ್ನ ನೋವ ಮತ್ತೂ ಹೆಚ್ಚಿಸಿ
ಕರುಣೆಯಿಲ್ಲದೆ ಮೆರೆವ ಜನರ
ಸ್ವಾರ್ಥ ಅಭಿಮಾನಗಳನು
ಕ್ಷಮಿಸಿ ಬಿಡುವ ಮಹಾತಾಯಿ...

|| ಜೈ ಭಾರತ ಮಾತೆ ||

Sunday, January 26, 2014

ಸಮಾಧಾನ.....

ಎಲ್ಲಿದೆ ಸಮಾಧಾನದ ಮಾತುಗಳು?
ಬೇಸತ್ತಿದೆ ಹುಡುಕುತ ಈ ಕಂಗಳು.
ನಿಲ್ಲದೆ ಓಡುತ್ತಿದೆ ಎಲ್ಲರ ದಿನಗಳು
ತಾಳ್ಮೆಗೆ ಅವಕಾಶವಿಲ್ಲದ ಪರಿಗಳು.

ಎಲ್ಲೆಲ್ಲಿಯೂ ಅಹಂಕಾರಗಳ ಕಟ್ಟಿರುಳು
ಸ್ವಾಭಿಮಾನಕೆ ಇಲ್ಲ ಎಲ್ಲಿಯೂ ನೆರಳು.
ರೋಷ ತಾಪಗಳ ನಿರಂತರವಾದ ಕದನಗಳು
ತುಂಡರಿಸಿತು ಶಾಂತಿ ಸಮಾಧಾನಗಳ ಬೆರಳು.

ನ್ಯಾಯ-ಅನ್ಯಾಯಗಳ ಕಾದಾಟ ಹಗಲಿರುಳು
ಸದ್ಚಿಂತನೆಗಳಿಗೆ ನೆಲೆಯಾಯಿತು ಮರಳು.
ಪ್ರಾಮಾಣಿಕತೆಗಳಿಗೆ ಆಧಾರ ಸಿಗದಿರಲು
ಮುಗಿಲೇರುತಿಹುದು ಮೋಸ ವಂಚನೆಗಳು.

ವಿನಯ ವಿಧೇಯತೆಗಳಿಗೆ ಕಾರ್ಮೋಡ ಕವಿದಿರಲು
ಮಾನವೀಯತೆ ಗುಣಗಳಿಗೆ ಬೆಲೆಯೊಂದು ಸಿಗದಿರಲು
ಕೊನೆಯಾಗದೆಂದೂ ಸತ್ಯಾಸತ್ಯದ ಹುಡುಕಾಟಗಳು
ಕಾಣದೆಲ್ಲಿಯೂ ನಮಗೆ ಸಮಾಧಾನದ ಮಾತುಗಳು.

Thursday, January 23, 2014

ಜೀವದ ಗೆಳತಿ

ಅಂದು ನಾನು ಅಳುತ್ತಿದ್ದೆ
ಬೇಸರದಿಂದ
ಆಗ ಬಂದಳು ಗೆಳತಿ
'ನಾನಿರುವೆ' ಎಂಬ ಸಾಂತ್ವನದಿಂದ

ಅಂದು ನಾನು ಮಂಕಾಗಿದ್ದೆ
ದುಗುಡದಿಂದ
ಆಗ ಬಂದಳು ಗೆಳತಿ
ದೂರ ಮಾಡಲು ಅದ ಮನದಿಂದ

ಅಂದು ನಾನು ಸೋತಿದ್ದೆ
ಬಳಲಿಕೆಯಿಂದ
ಆಗ ಬಂದಳು ಗೆಳತಿ
ಅರಳಿಸಲು ನನ್ನ ಮುಖಾರವಿಂದ

ಅಂದು ನಾ ನಗುತ್ತಲಿದ್ದೆ
ಸಂತೋಷದಿಂದ
ಆಗ ಬಂದಳು ಗೆಳತಿ
ಹಂಚಿಕೊಳ್ಳಲು ಅದ ಮುದದಿಂದ

ಅಂದು ನಾ ತೊಳಲುತ್ತಲಿದ್ದೆ
ಮಾನಸಿಕ ಉದ್ವೇಗದಿಂದ
ಆಗ ಬಂದಳು ಗೆಳತಿ
ಅಳಿಸಲು ಅದನು ನನ್ನಿಂದ

ಅಂದು ನಾನು ಬೀಗುತ್ತಿದ್ದೆ
ಅಹಂಕಾರದಿಂದ
ಆಗ ಬಂದಳು ಗೆಳತಿ
ದೂರ ಮಾಡಲು ಅದ ನನ್ನಾಳದಿಂದ

ಅಂದು ನಾ ಮಲಗಿದ್ದೆ
ಸಾವು ಬದುಕಿನ ಹೋರಾಟದಿಂದ
ಆಗ ಬರಲು ನನ್ನ ಗೆಳತಿ
ಧನ್ಯನಾದೆ ಅವಳ ಸ್ನೇಹದಿಂದ.....

Tuesday, January 21, 2014

ಆಸೆ...ನೂರು ಆಸೆ...

ಆಸೆ...ನೂರು ಆಸೆ...
ಕಮಲದಂತೆ ಅರಳಿರುವ ಆಸೆ...
ಜೇನಂತೆ ಸವಿಯುಣಿಸುವ ಆಸೆ...
ಚಂದಿರನಂತೆ ತಂಪೆರಚುವ ಆಸೆ...

ನಿಶ್ಚಲವಾಗಿ ಮಲಗಿದ್ದ ಮನದಿ
ಚಂಚಲವಾಗಿ ಉಧ್ಭವಿಸುವ ಆಸೆ...
ನೈದಿಲೆಯ ಆ ಸೊಬಗಿನಲಿ
ಮದ್ದಳೆಯ ನಾದದಂಥ ಆಸೆ...

ಬೆಳದಿಂಗಳ ತಂಪಿನಲಿ
ಕೆಳಗುಂದದ ಮಹದಾಸೆ...
ನಿಶೆಯ ಹವಾಗೀತೆಯಲಿ
ನಶೆಯೇರಿಸುವ ಮಂದ ಆಸೆ...

ಬಾನಂಗಳದ ರಂಗೋಲಿಯಲಿ
ತಿಂಗಳ ಬೆಳಕಿನಂಥ ಆಸೆ...
ಜೀವನದ ಕಥಾನಕದಲಿ
ಕೊನೆಗಾಣದ ಅಮರ ಆಸೆ...

Sunday, January 19, 2014

ಬರಲಾರೆಯಾ???!!!

ನೀ ಬರುವೆಯೆಂದು ನಾ
ಕಾಯುತ್ತಾ ಕಾಯುತ್ತಾ
ಬಳಲಿ ಹೋದೆನೋ ಇನಿಯ
ಬರಲಾರೆಯಾ?

ಬರಡಾಗಿದೆ ಮನವು ಇಂದು
ನಿನ ಕಳಕೊಂಡ ದುಃಖದಿ
ಹೊಸ ಚೈತನ್ಯವ ನೀಡಲು
ಬರಲಾರೆಯಾ?

ಸಿಂಗಾರದ ಹೊರೆಯು
ಕೆಣಕುತ್ತಿದೆ ನನ್ನನು
ನಿನಗಾಗಿ ಕಾಯುತಿಹೆ
ಬರಲಾರೆಯಾ?

ಕಂಬನಿಯು ಧರೆಗಿಳಿದು
ಬತ್ತಿಹೋಗಿದೆ ನಯನ
ಕಣ್ಣೀರ ಕರೆಗಾದರೂ
ಬರಲಾರೆಯಾ?

ಪಕ್ಷಿ ದಂಪತಿಗಳು ಅಲ್ಲಿ
ಜೊತೆಗಿರುವುದ ನೋಡಿ
ಮನವು ತಳಮಳಿಸುತಿದೆ
ಬರಲಾರೆಯಾ?

ನಿನ್ನ ವಿರಹದಿಂದ ನನ್ನ
ಜೀವ ತಹತಹಿಸುತಿದೆ
ಹೊಸ ಹುರುಪು ನೀಡಲಿಂದು
ಬರಲಾರೆಯಾ?

ಬರಲಾರೆಯಾ?

ಬರಲಾರೆಯಾ???

Saturday, January 18, 2014

ಸ್ನೇಹದ ಒಡೆದ ಕನ್ನಡಿ

ವೈರಾಗ್ಯದಿ ಇರುವಾಗ ನೀ ಬಂದೆ
ನನ್ನ ಬದುಕ ನಿನ್ನಲ್ಲಿ ಕಂಡೆ
ನೀನೇ ನನ್ನ "ಸರ್ವಸ್ವ" ಎಂದೆ...
ಒಡೆದು ಚೂರಾದೆ ನೀನೆಂದಾಗ-
"ನೀ ದೂರ ಹೋಗು ನನ್ನಿಂದೆ..."

"ನೀನಲ್ಲ ನನ್ನ ಸ್ನೇಹಿತೆ"ಎಂದೆ..
ನನ್ನೆದುರಿಗೇ ಇನ್ನೊಬ್ಬಳ ಜೊತೆ ನಿಂದೆ..
ನನ್ನ ಮನವು ಒಡೆದು ಚೂರಾಯ್ತು ಅಂದೇ
ನನಗಾರೂ ಇಲ್ಲವೆಂದೆ ಮತ್ತೆ ವೈರಾಗ್ಯದಿಂದೆ...

ನನ್ನ ಬಾಳಿನಲಿ ನೀ ಬಂದ ದಿನ - ಅತಿ ಮಧುರ
ಆದರೆ ನೀ ನನ್ನ ಬಿಟ್ಟ ಕ್ಷಣ ನನ್ನ ಅಂತರಾತ್ಮದ ಅಂತ್ಯ
ನನ್ನ ಸೃಜನಶೀಲತೆಯ ಕೊನೆ
ನನ್ನ ಅಸ್ತಿತ್ವದ ಕೊನೆ...

ನನಗೆ ಬೇಕಿತ್ತು ನಿನ್ನ ಸ್ನೇಹ...
ನೀ ತೊರೆದೆ ನನ್ನ...
ಕೊನೆಯಾದೆ "ನಾನು"..
ಇನ್ನು ನಾನಿದ್ದರೂ ಇರದಂತೆ!!!
ಉತ್ತರಿಸುವ ತನಕ ನೀನು...

Friday, January 17, 2014

ಸದ್ಚಿಂತನೆ

ಹೇ ಮುಗ್ಧ ಮನಸೇ..
ನೀನೆಂದೂ ಬಾಡದಿರು.
ನಿನ್ನ ಭಾವನೆಗಳ ಗುಡಿಯನು
ಕೆಡಹಲು ನೀ ಬಿಡದಿರು...

ನೀ ತಾಳಿದ ತಾಳ್ಮೆಯನು
ಯಾರೂ ಅರಿಯಲಾರರು.
ನಿಂದನೆಯ ಕಹಿನುಡಿಗಳನು
ಪಸರಿಸಲು ನೀ ಬಿಡದಿರು...

ಪ್ರೀತಿಯ ಬೆಳದಿಂಗಳನು
ವಿಷದಂತೆ ಕಾಣದಿರು.
ನೋವಿರದ ಭಾವವನು
ಸಾವಿಗೆಡಹಲು ನೀ ಬಿಡದಿರು...

ಜೀವನದ ಸೌಂದರ್ಯವನು
ಆನಂದದಿ ಸವಿಯುತಿರು.
ಸಿಹಿಕ್ಷಣಗಳು ಮೆರೆವುದನು
ಮನಸಾರೆ ನೀ ಬೇಡುತಿರು...

Thursday, January 16, 2014

ಕಂಪನ ಕ್ಷಣಗಳು

ಪ್ರೇಮದ ಸೆರಗಿನ ಅಂಚಿನಲಿ
ಘನತೆಯ ಗಂಟು ಕಳಚಲಾರದೆ
ಪ್ರೀತಿಯ ಆಸರೆ ಬೇಡುತಲಿ
ಈ ಹೃದಯ ತೊಳಲಾಡುತಿದೆ....

ಸಾವಿರಾರು ಪ್ರಶ್ನೆಗಳ ಸುಳಿಯಲಿ
ವಿಶ್ವಾಸದ ಬೇರು ಕೀಳಲಾರದೆ
ವಿಜಯದಶಮಿ ಹಾದಿ ಕಾಯುತಲಿ
ಈ ಮನವು ತಳಮಳಿಸುತಿದೆ...

ಭಯವೆಂಬ ಕಾರ್ಮೋಡದಲಿ
ನಿಜದಾರಿ ಕಾಣಲಾರದೆ
ಅಭಯಹಸ್ತದ ನಿರೀಕ್ಷೆಯಲಿ
ಈ ಜೀವ ಬರಡಾಗುತಿದೆ...

ಪ್ರೀತಿಯ ಅಂಕುಷದಾಸರೆಯಲಿ
ಮನದಾಶಯವ ತೊರೆಯಲಾರದೆ
ಸುಂದರ ಕ್ಷಣಗಳ ಪ್ರತೀಕ್ಷೆಯಲಿ
ಈ ಭಾವ ಬಾನೇರುತಿದೆ...

Wednesday, January 15, 2014

ಪ್ರತಿಬಿಂಬ

ನನ್ನಂತೆಯೇ ನೀನು...
ನನ್ನ ಮನದಿ ಸಂತಸವಿರೆ
ನಿನ್ನ ಮೊಗದಿ ಕಾಣುವೆ ಮಂದಸ್ಮಿತವ...
ನನ್ನ ಮನದಿ ದುಗುಡವಿರೆ
ನಿನ್ನ ನೋಟದಿ ಕಾಣುವೆ ಖಿನ್ನಭಾವ...
ನನ್ನ ಮನದಿ ಉಲ್ಲಾಸವಿರೆ
ನಿನ್ನಲಿ ಕಾಣುವೆ ಲವಲವಿಕೆಯ ಹೂವ...
ನನ್ನ ಮನದಿ ಏಕಾಂತವಿರೆ
ನಿನ್ನ ಕಣ್ಣಲಿ ತೋರುವೆ ವೈರಾಗ್ಯವ...
ನನ್ನ ಮನದಿ ಸಂಭ್ರಮವಿರೆ
ನಿನ್ನ ಅಸ್ತಿತ್ವದಲಿ ಕಾಣುವೆ ಸೌಂದರ್ಯವ...
ನನ್ನ ಮನದಿ ಸಂತಾಪವಿರೆ
ನಿನ್ನ ಕಾಣುವ ಹಂಬಲ ನಾ ತೋರಲಾರೆ..
ಏಕೆಂದರೆ, ಆ ಸಂದರ್ಭದಿ
ನಿನ್ನ ಮೊಗದಲಿ ಕಾಣುವೆ ನಾ ಕಣ್ಣೀರಧಾರೆ...

ಸ್ನೇಹ

ನೀನಿಲ್ಲದೆ...
ನಾನು ನಾನಲ್ಲ...
ನನಗೇನೂ ಬೇಕಿಲ್ಲ...
ಸ್ನೇಹಿತೆಯಾಗಿರು ನೀ ನನಗೆ...
ಎಂದೆಂದಿಗೂ ಈ ಬದುಕಿಗೆ...
ನಿನ್ನ ಬಿಟ್ಟು ನಾನು
ನನ್ನ ಬಿಟ್ಟು ನೀನು
ಅರ್ಥವೇ ಇಲ್ಲದ ಸಾಹಿತ್ಯದಂತೆ...

Friday, January 3, 2014

ಒಲವಿನ ಆಸೆ...

ನನ್ನೊಲವೇ....

ನಿನ್ನ ಚೆಂದುಟಿಯ ಚುಂಬಿಸುವಾಸೆ...
ನಿನ್ನ ಕಂಗಳಲಿ ನೋಟ ಬೆರೆಸುವಾಸೆ...
ನಿನ್ನ ಎದೆಬಡಿತಕೆ ಧ್ವನಿ ಸೇರಿಸುವಾಸೆ...
ನಿನ್ನುಸಿರಿಗೆ ಮೈ ಸೋಕಿಸುವಾಸೆ...

ಕ್ಷಣ ಕ್ಷಣ ಎಣಿಸದೆ ಮೈಮರೆಯುವ ಆಸೆ...
ಪ್ರಶಾಂತವಾದ ಸಾಗರದಿ ತೇಲಾಡುವ ಆಸೆ...
ತಂಪಾದ ಇಬ್ಬನಿಯಲಿ ನಲಿದಾಡುವ ಆಸೆ...
ಇಂಪಾದ ನಿಶೆಯ ಆ ನಾದದಿ ತಲ್ಲಣಿಸುವ ಆಸೆ...

ಚಂದಿರನ ಆ ಮಂದ ಬೆಳಕಲಿ ನಿನ್ನ ನೋಡುವಾಸೆ...
ನಿನ್ನ ಪ್ರೀತಿಯ ಮಂದಹಾಸದಿ ಸಂಭ್ರಮಿಸುವಾಸೆ...
ನಿನ್ನ ನೆನಪಿನ ತಂಪಿನಲಿ ನವಿರೇಳುವ ಆಸೆ...
ನನ್ನ ಮನದ ಸ್ವಪ್ನಲೋಕದಿ ನಲಿದಾಡುವಾಸೆ...

ನಿನ್ನ ಮನದ ತಾಳಕ್ಕೆ ಹೆಜ್ಜೆಯಾಗುವ ಆಸೆ...
ನಿನ್ನ ಆತ್ಮದ ಸೌಂದರ್ಯಕೆ ಪ್ರಭೆಯಾಗುವ ಆಸೆ...
ನಿನ್ನ ಹೃದಯದ ಸಂಭ್ರಮಕೆ ಬೇರಾಗುವ ಆಸೆ...
ನಿನ್ನ ಇರುವಿಕೆಗೆ ಮೂಲವಾದ ಒಲವಾಗುವ ಆಸೆ....

ದುಃಖಿತ ಮನಸ್ಸಿನ ಹಾದಿ

ಬೆಣ್ಣೆಯಂಥ ಮೃದುವಾದ ಮನಸು
ಸಿಡಿದು ಕಲ್ಲಾಗಿ ಹೋಯಿತೇ?
ಮನದಲ್ಲಿ ಅರಳಿದ ಕನಸು
ಒಡೆದು ಚೂರಾಗಿ ಹೋಯಿತೇ?

ಛೀಕಾರ ನಕಾರಗಳಿಗೆ ಕದಡಿ
ಬಾಡಿ ಬರಡಾಗಿ ಹೋಯಿತೇ?
ದುಃಖದ ತಾಪದಲಿ ಬೆಂದು
ವೈರಾಗ್ಯದತ್ತ ತೆರಳಿತೇ?

ಸ್ವಾರ್ಥದ ಅಟ್ಟಹಾಸಗಳಿಗೆ ಸೋತು
ಖಿನ್ನತೆಯ ಅಪ್ಪಿಕೊಂಡಿತೇ?
ಸಂಶಯಗಳ ಕೊಂಡಿ ಬಿಡಿಸಲಾರದೆ
ಸಾವೇ ದಾರಿಯೇನೋ ಎಂದಿತೇ?

ಸ್ಪಂದಿಸುವ ಆಧಾರಸ್ಥಂಭವಿಲ್ಲದೆ
ಮುನ್ನಡೆಯಲಸಾಧ್ಯವಾಯಿತೇ?
ಸ್ವಾಭಿಮಾನಕೆ ಜ್ವಾಲೆಯ ಉರಿ ತಾಗಿ
ಸಾವಿಗೆ ಶರಣಾಗಿ ಹೋಯಿತೇ?