ಶನಿವಾರ, ಮೇ 16, 2026

ಅಪೂರ್ವ ಪ್ರೇಮ - ಜನ್ಮಾಂತರದ ಪ್ರೀತಿ

✍🏻ದೀಪಲಕ್ಷ್ಮಿ ಭಟ್, ಮಂಗಳೂರು  

ಅಂದು ಜಡ ಹಿಡಿಸುವಂತೆ ಬೀಳುತ್ತಿದ್ದ ಮಳೆ. ಮಳೆ ಹನಿಗಳು ಕಿಟಕಿಯ ಗಾಜಿನ ಮೇಲೆ ಮುತ್ತಿನ ಹಾರ ಪೋಣಿಸಿದಂತೆ ಒಂದೊಂದಾಗಿ ಜಾರುತ್ತಿದ್ದವು. ಆ ಹೊತ್ತಿಗೆ, ಮೋಡ ಕವಿದ ಆ ಆಕಾಶವೇ ಯಾರೋ ಒಬ್ಬರ ಮನಸ್ಸಿನಲ್ಲಿದ್ದ ನೋವನ್ನು ಹೊತ್ತು ಅಳುತ್ತಿರುವಂತೆ ಕಾಣುತ್ತಿತ್ತು… ಆ ದಿನ, ಆದಿತ್ಯ ತನ್ನ ಮಗಳಾದ ಆರಾಧ್ಯಾಳ ಕೂದಲನ್ನು ಸವರಿಸುತ್ತಾ ಕಿಟಕಿಯ ಬಳಿ ನಿಂತಿದ್ದ. ಆರಾಧ್ಯಾಳ ಕಣ್ಣುಗಳಲ್ಲಿ ತನ್ನ ಹೆಂಡತಿ ಅಪೂರ್ವಳ ನಗು ಅವನಿಗೆ ಕಾಣಿಸುತ್ತಿತ್ತು…ಆ ನಗುವೇ ಅವನ ಹೃದಯವನ್ನು ಪ್ರತಿದಿನ ಚೂರು ಚೂರು ಮಾಡುತ್ತಿತ್ತು…

ಅಪೂರ್ವಳ ಮರಣದ ನಂತರ ಆ ಮನೆ, ಆದಿತ್ಯನ ಮನ ಎಲ್ಲವೂ ಬದಲಾಗಿತ್ತು. ಹಿಂದೆ ಒಮ್ಮೆ ನಗುವಿನಿಂದ ತುಂಬಿದ್ದ ಮನೆ, ಈಗ ಮೌನದ ದೇಗುಲದಂತಾಗಿತ್ತು. ಆದಿತ್ಯನ ಅಮ್ಮ ಅನುರಾಧ ದೇವರ ಕೋಣೆಯಲ್ಲಿ ಗಂಟೆಗಳ ಕಾಲ ದೀಪ ಹಚ್ಚಿ ಕಣ್ಣೇರಿಡುತ್ತಾ ಕುಳಿತುಕೊಳ್ಳುತ್ತಿದ್ದಳು. ಆದಿತ್ಯನ ಅಪ್ಪ ಚಂದ್ರಮೋಹನ ಪುಸ್ತಕ ಹಿಡಿದುಕೊಂಡಿದ್ದರೂ, ಓದುತ್ತಿರಲಿಲ್ಲ…ಪ್ರತಿ ಪುಟದಲ್ಲೂ ಅವನಿಗೆ ಸೊಸೆಯ ಮುಖವೇ ಕಾಣಿಸುತ್ತಿತ್ತು. ಆದಿತ್ಯ ಮಾತ್ರ ಜೀವಂತ ಶವದಂತೆ ಬದುಕುತ್ತಿದ್ದ.

ಪ್ರತಿ ರಾತ್ರಿ, ಅಪೂರ್ವಳ ಫೋಟೋ ಎದುರು ಕುಳಿತು ಮಾತನಾಡುತ್ತಿದ್ದ…“ಅಪೂರ್ವ… ನೀನು ಹೀಗೆ ಹೋಗ್ಬಾರ್ದಿತ್ತು…ನಮ್ಮ ಆರಾಧ್ಯಾ ಇನ್ನೂ ನಿನ್ನ ಮಡಿಲಿನ ಆಸರೆ  ಹುಡುಕುತ್ತಾಳೆ…ನಾನು ಅವಳಿಗೆ ಅಪ್ಪ ಆಗಲೋ, ಅಮ್ಮ ಆಗಲೋ? ನನ್ನನ್ಯಾಕೆ ಹೀಗೆ ಒಬ್ಬಂಟಿಯಾಗಿ ಬಿಟ್ಟು ಹೋದೆ?”. ಅವನ ಮಾತುಗಳಿಗೆ ಉತ್ತರವಾಗಿ ಕಿಟಕಿಯ ಪರದೆ ಮಾತ್ರ ನಿಧಾನವಾಗಿ ಅಲುಗಾಡುತ್ತಿತ್ತು - ಬಹುಶಃ ಅಪೂರ್ವಳೇ ಅಲ್ಲಿ ನಿಂತು "ನಾನಿಲ್ಲೇ ಇದ್ದೇನೆ, ನಿನ್ನ ಸನಿಹ. ನಿನ್ನ ಆಸರೆಯಾಗಿ" ಎಂಬಂತೆ. 

*** 

ಆ ಅಪಘಾತದ ದಿನ ಇನ್ನೂ ಆದಿತ್ಯನ ಮನಸ್ಸಿನಲ್ಲಿ ಜೀವಂತವಾಗಿತ್ತು…ಅದು ಅವರ  ವಿವಾಹದ  ಎರಡನೇ ವರ್ಷ ವಾರ್ಷಿಕೋತ್ಸವದ ಪ್ರವಾಸ. ಮಂಜಿನಿಂದ ಆವರಿಸಿದ್ದ ಬೆಟ್ಟಗಳು…ಕೈ ಕೈ ಹಿಡಿದು ನಡೆದ ದಾರಿಗಳು…ಮಳೆಯ ಹನಿಗಳ ಮಧ್ಯೆ ಅಪೂರ್ವಳ ನಗು…ಆಗತಾನೆ ೬ ತಿಂಗಳು ಹಿಡಿದ ಮಗು ಆರಾಧ್ಯಳ ಜೊತೆಗಿನ ಮೊದಲ ಪ್ರವಾಸ. ಪ್ರವಾಸದ ಎಲ್ಲ ಖುಷಿಯ ಕ್ಷಣಗಳು ಕಳೆದು ಮನೆಗೆ ಹಿಂದಿರುಗುವ ಪ್ರಯಾಣ. “ಆದಿ… ಜೀವನ ಹೀಗೆನೇ ನಿಂತುಬಿಟ್ಟರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ?” ಎಂದು ಅವಳು ಕಾರಿನ ಕಿಟಕಿಯಿಂದ ಹೊರಗೆ ನೋಡುತ್ತಾ ಕೇಳಿದ್ದಳು. ಆ ಮಾತಿಗೆ ಆದಿತ್ಯ ನಗುತ್ತಾ—“ನಿನ್ನ ಜೊತೆ ಇದ್ದರೆ ಯಾವ ಜನ್ಮವೂ ಚಿಕ್ಕದಾಗಿಬಿಡುತ್ತೆ ಅಪೂರ್ವ…” ಎಂದಿದ್ದ.

ಆದರೆ ವಿಧಿ ಅವರ ಮಾತುಗಳನ್ನು ಕೇಳಿ ಕ್ರೂರವಾಗಿ ನಕ್ಕಿತೇನೋ…ಹಿಂತಿರುಗುವಾಗ ರಾತ್ರಿ ಕತ್ತಲೆ ಗಾಢವಾಗಿತ್ತು. ಮಳೆ ಹೆಚ್ಚಾಗಿತ್ತು. ರಸ್ತೆಯ ಮೇಲೆ ಮಂಜು ಇಳಿದಿತ್ತು. ಆರಾಧ್ಯಾ ಹಿಂದಿನ ಸೀಟಿನಲ್ಲಿ ಮಲಗಿದ್ದಳು. ಅಪೂರ್ವ ಆದಿತ್ಯನ ಭುಜದ ಮೇಲೆ ತಲೆ ಇಟ್ಟುಕೊಂಡಿದ್ದಳು. ಅಷ್ಟರಲ್ಲಿ…ಎದುರಿನಿಂದ ನಿಯಂತ್ರಣ ತಪ್ಪಿದ ಒಂದು ಲಾರಿ ಅವರ ಕಾರಿನ ಕಡೆ ಅಬ್ಬರಿಸಿ ಬಂದಿತು. “ಆದಿ…!” ಎಂದು ಅಪೂರ್ವ ಕಿರುಚಿದ ಧ್ವನಿ…ಅದರ ನಂತರ ಒಂದು ಭೀಕರ ಶಬ್ದ…ಕಾರು ಗಾಳಿಯಲ್ಲಿ ತಿರುಗಿದಂತೆ ಅನುಭವ…ಗಾಜಿನ ಚೂರುಗಳು…ರಕ್ತ…ಮಳೆಯ ನೀರಿನಲ್ಲಿ ಬೆರೆತ ಜೀವಗಳ ಹೋರಾಟ…

ಆದಿತ್ಯನಿಗೆ ಎಚ್ಚರವಾದಾಗ ಆಸ್ಪತ್ರೆಯ ಬಿಳಿ ಗೋಡೆಗಳು ಕಾಣಿಸಿದ್ದವು. ತಲೆಗೆ ಬ್ಯಾಂಡೇಜ್. ಕೈಗಳಿಗೆ ಗಾಯ. ಆದರೆ ಅವನ ಮೊದಲ ಪ್ರಶ್ನೆ ಒಂದೇ— “ಅಪೂರ್ವ…? ನನ್ನ ಹೆಂಡತಿ ಎಲ್ಲಿದ್ದಾಳೆ …?” ಡಾಕ್ಟರ್ ಮುಖ ತಗ್ಗಿಸಿದ್ದರು.“ ಅವರಿಗೆ ತುಂಬಾ ಗಂಭೀರ ಗಾಯಗಳಾಗಿವೆ…ಕೋಮಾ ಪರಿಸ್ಥಿತಿಯಲ್ಲಿದ್ದಾರೆ. ಅಪಘಾತ ನಡೆದು ಮೂರು ದಿನಗಳೇ ಆಗಿವೆ. ನೀವು ಈಗ ತಾನೇ ಚೇತರಿಸಿಕೊಂಡಿದ್ದೀರಾ. ಸ್ವಲ್ಪ ರೆಸ್ಟ್  ಮಾಡಿ.” ಆದರೆ, ಡಾಕ್ಟರ್ ನ ಮಾತುಗಳು ಅವನಿಗೆ ಕೇಳಿಸಲೇ ಇಲ್ಲ. ಕೋಮಾ ಎಂಬ ಶಬ್ದ ಕೇಳುತ್ತಲೇ, ಆದಿತ್ಯ ಹಾಸಿಗೆಯಿಂದ ಎದ್ದು ಓಡಿದ್ದ. ಐಸಿಯುವಿನ ಗಾಜಿನ ಆಚೆ ಅಪೂರ್ವ ಮಲಗಿದ್ದಳು. ದೇಹದ ತುಂಬ ಯಂತ್ರಗಳು… ಉಸಿರಾಟಕ್ಕೆ ವೆಂಟಿಲೇಟರ್… ಮುಖದ ಮೇಲೆ ಗಾಯಗಳ ಗುರುತು… ಆ ದೃಶ್ಯ ನೋಡಿ ಆದಿತ್ಯ ಕುಸಿದುಬಿದ್ದ.

“ಇದು ನನ್ನ ಅಪೂರ್ವ ಅಲ್ಲ…ನನ್ನ ಜೊತೆ ನಗ್ತಿದ್ದ ಅಪೂರ್ವ ಹೀಗೆ ಮಲಗಿರೋಕೆ ಸಾಧ್ಯವಿಲ್ಲ…” ಎಂದು ಅತ್ತ. ಮಗು ಅಪೂರ್ವ ಮಾತ್ರ ವಿಚಿತ್ರವಾಗಿ ಪಾರಾಗಿದ್ದಳು. ಆ ದಿನದಿಂದ ಆದಿತ್ಯನ ಜೀವನವೇ ಆಸ್ಪತ್ರೆಯ ಗೋಡೆಗಳೊಳಗೆ ಸಿಕ್ಕಿಹಾಕಿಕೊಂಡಿತು. ಬೆಳಿಗ್ಗೆ ಎದ್ದು ಮೊದಲ ಕೆಲಸ — ಅಪೂರ್ವಳ ಕೈ ಹಿಡಿದು ಮಾತನಾಡುವುದು. “ಅಪೂರ್ವ… ನೋಡು ನಾನು ಬಂದಿದ್ದೀನಿ…ನೀನು ಕಣ್ಣು ತೆರೆಯಬೇಕು…ನಿನ್ನ ಆದಿ ಕರೀತಿದ್ದಾನೆ…” . ಆದರೆ ಅವಳು ಮಾತ್ರ ಮೌನ.

ಆದಿತ್ಯ ದೇಶದ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಕರೆದೊಯ್ದ. ಬೆಂಗಳೂರು… ಚೆನ್ನೈ… ಮುಂಬೈ…ವಿದೇಶದ ಚಿಕಿತ್ಸೆಯ ವಿಚಾರವನ್ನೂ ನೋಡಿದ. ತನ್ನ ಸಂಗ್ರಹಿಸಿದ ಹಣವನ್ನೆಲ್ಲ ಖರ್ಚು ಮಾಡಿದ. ಅನುರಾಧ ತನ್ನ ಆಭರಣಗಳನ್ನೇ ಮಾರಿದಳು. ಚಂದ್ರಮೋಹನ ನಿವೃತ್ತಿ ಹಣವನ್ನೂ ಬಳಸಿದರು. ಆದರೆ ಅಪೂರ್ವಳ ಕಣ್ಣು ಮಾತ್ರ ತೆರೆಯಲಿಲ್ಲ…

ಒಂದು ರಾತ್ರಿ ಆಸ್ಪತ್ರೆಯಲ್ಲಿ ಎಲ್ಲರೂ ಮಲಗಿದ್ದಾಗ, ಆದಿತ್ಯ ಅವಳ ಕೈ ಹಿಡಿದು ಅತ್ತಿದ್ದ. “ನೀನು ಹೀಗೆ ಮೌನದಲ್ಲಿರಬೇಡ ಅಪೂರ್ವ…ಒಮ್ಮೆ ನನಗೆ ಬೈದುಬಿಡು… ಒಮ್ಮೆ ನಗು… ಆದ್ರೆ ಹೀಗೆ ನನ್ನ ಒಂಟಿಯಾಗಿ ಬಿಡಬೇಡ …” ಅಷ್ಟರಲ್ಲಿ…ಅಪೂರ್ವಳ ಬೆರಳುಗಳು ನಿಧಾನವಾಗಿ ಕದಲಿದವು. ಆದಿತ್ಯನ ಮಾತುಗಳಿಗೆ ನಿಧಾನವಾಗಿ  ಸ್ಪಂದಿಸಲು ಪ್ರಯತ್ನಿಸಿದಂತೆ ಭಾಸವಾಯಿತು. ಆದಿತ್ಯನ ಕಣ್ಣುಗಳಲ್ಲಿ ಆಶೆಯದ  ಬೆಳಕು ಹೊಮ್ಮಿತು.“ಡಾಕ್ಟರ್! ಡಾಕ್ಟರ್!” ಎಂದು ಓಡಿದ್ದ. ಆದರೆ ಡಾಕ್ಟರ್ ಹೇಳಿದ್ದು— “ಇದು ಸಾಮಾನ್ಯವಾದ  ನರ ಪ್ರತಿಕ್ರಿಯೆ…” ಆ ಕ್ಷಣ ಆದಿತ್ಯನ ಆಶೆಯೇ ಚೂರುಚೂರಾಯಿತು.ಆ ವಿಧಿಗೆ ಅವರ ಮೇಲೆ ಏನು ದ್ವೇಷವೋ? ತಿಂಗಳುಗಳು ಕಳೆಯುತ್ತಾ ಹೋದವು. ಆರಾಧ್ಯಾ ದಿನವೂ ಆಸ್ಪತ್ರೆ ಬಂದು— “ಅಮ್ಮಾ… ಎದ್ದು ಬಾ…” ಎಂದು ಗಲ್ಲಕ್ಕೆ ಮುತ್ತಿಡುತ್ತಿದ್ದಳು.

ಒಂದು ದಿನ ಪುಟ್ಟ ಕೈಯಿಂದ ಅಪೂರ್ವಳ ಕೂದಲು ಸವರಿಸುತ್ತಾ— “ಅಮ್ಮಾ… ನಾನು ಒಳ್ಳೆ ಹುಡುಗಿಯಾಗ್ತೀನಿ… ನೀನು ಮನೆಗೆ ಬಾ…” ಎಂದಳು. ಆಗ ಅಲ್ಲಿದ್ದ ನರ್ಸ್‌ಗಳಿಗೂ ಕಣ್ಣೀರು ಬಂದಿತ್ತು.

ಕೊನೆಗೆ…ಒಂದು ಮಳೆಯ ರಾತ್ರಿ…ಆಸ್ಪತ್ರೆಯ ಮಾನಿಟರ್ ಶಬ್ದ ಏಕಾಏಕಿ ಬದಲಾಗಿತ್ತು.  ಡಾಕ್ಟರ್‌ಗಳು ಓಡಿದರು. ಆದಿತ್ಯ ಬೆಚ್ಚಿಬಿದ್ದು ಅವಳ ಕೈ ಹಿಡಿದ. “ಅಪೂರ್ವ! ಕಣ್ಣು ತೆರೆ… ನನ್ನ ನೋಡ್ಬಿಡು ಒಮ್ಮೆ…ನಾನು ಇಲ್ಲೇ ಇದ್ದೀನಿ…” ಆ ಕ್ಷಣ…ತುಂಬಾ ತಿಂಗಳುಗಳ ನಂತರ… ಅಪೂರ್ವಳ ಕಣ್ಣಂಚಿನಲ್ಲಿ ಒಂದು ಸಣ್ಣ ಕಣ್ಣೀರು ಜಾರಿತು. ಅವಳ ತುಟಿಗಳು ಅಲುಗಾಡಿದವು. “ಆ…ದಿ…” - ಅದೇ ಅವಳ ಕೊನೆಯ ಶಬ್ದ. ಮಾನಿಟರ್‌ನಲ್ಲಿ ನೇರ ರೇಖೆ ಮೂಡಿತು. ಆದಿತ್ಯನ ಪ್ರಪಂಚವೇ ಅಲ್ಲೇ ನಿಂತುಹೋಯಿತು… ಮಳೆ ಮಾತ್ರ ಆಸ್ಪತ್ರೆಯ ಕಿಟಕಿಯ ಮೇಲೆ ಇನ್ನೂ ಅಳುತ್ತಲೇ ಇತ್ತು… 

*** 

ಒಂದು ದಿನ, ಅನುರಾಧ ಮನೆ ಸ್ವಚ್ಛಗೊಳಿಸುತ್ತಿದ್ದಾಗ, ಹಳೆಯ ಮರದ ಪೆಟ್ಟಿಗೆಯೊಂದು ಸಿಕ್ಕಿತು. ಅದು ಚಂದ್ರಮೋಹನನ ತಾತನ ಕಾಲದ ಪೆಟ್ಟಿಗೆ. ಅದರೊಳಗೆ ಹಳೆಯ ಜಾತಕಗಳು, ಕೆಲವು ಮಂತ್ರಪತ್ರಗಳು, ಮತ್ತು ಒಂದು ವಿಚಿತ್ರ ದಿನಚರಿ ಇತ್ತು. ಆ ದಿನಚರಿಯಲ್ಲಿ ಒಂದು ಸಾಲು ಕೆಂಪು ಮಸಿಯಲ್ಲಿ ಬರೆಯಲಾಗಿತ್ತು— “ಈ ವಂಶದಲ್ಲಿ ಜನಿಸುವ ಒಬ್ಬ ದಂಪತಿಗಳು, ಹಿಂದಿನ ಜನ್ಮದ ಅಪೂರ್ಣ ಪ್ರೇಮದ ಶಾಪವನ್ನು ಅನುಭವಿಸುವರು…” ಆ ಮಾತು ಓದಿದ ಕ್ಷಣ ಅನುರಾಧಳ ಕೈ ನಡುಗಿತು. ಕೂಡಲೇ, ಚಂದ್ರಮೋಹನನನ್ನು ಕರೆದು, "ರೀ, ನಮ್ಮಮಗನ ಸಂಸಾರ ಹೀಗೆ ಆಗಲು, ಇದೇ  ಕಾರಣ ಇರಬಹುದೇ?" ಎಂದು ದುಃಖದಿಂದ ಪ್ರಶ್ನಿಸಿದಳು. ಚಂದ್ರಮೋಹನ ಅದನ್ನು ಓದಿದವನೇ, ಕ್ಷಣಕಾಲ ಭೀತನಾದನು. ಅವನಿಗೆ ಇದರ ವಿಚಾರವಾಗಿ ಎಳ್ಳಷ್ಟೂ ಗೊತ್ತಿರಲಿಲ್ಲ. ಅವನ ಪೂರ್ವಜರು ಇದರ ಬಗ್ಗೆ ಏನೂ ಹೇಳಿರಲಿಲ್ಲ. ಆ ಕೂಡಲೇ, ಅವರು ಆದಿತ್ಯನನ್ನೂ ಕರೆದುಕೊಂಡು ಊರಿನ ಹೊರಗಿದ್ದ ವಯಸ್ಸಾದ ಜ್ಯೋತಿಷಿ “ವೇದಬ್ರಹ್ಮ ಶಿವಾನಂದ ಶಾಸ್ತ್ರಿ” ಅವರನ್ನು ಭೇಟಿ ಮಾಡಿದರು.

ಶಾಸ್ತ್ರಿಗಳು ತುಂಬಾ ಹಿರಿಯರು ಹಾಗೂ ಜ್ಯೋತಿಷ್ಯದಲ್ಲಿ ತುಂಬಾ ಪರಿಣಿತರು. ಊರಿಗೆ ಊರೇ ಅವರನ್ನು ಗೌರವಿಸುತ್ತಿತ್ತು. ಅನುರಾಧ ನೀಡಿದ ಆದಿತ್ಯ ಹಾಗೂ ಅಪೂರ್ವಳ ಜಾತಕಗಳನ್ನು ನೋಡಿ ಶಾಸ್ತ್ರಿಗಳು ಕ್ಷಣಕಾಲ ಕಣ್ಣು ಮುಚ್ಚಿದರು… “ಅಪೂರ್ವ ಮತ್ತು ಆದಿತ್ಯ… ಸಾಮಾನ್ಯ ದಂಪತಿಗಳಲ್ಲ…“ಹಿಂದಿನ ಜನ್ಮದಲ್ಲಿ ಅವರು ಪ್ರೇಮಿಗಳು…
ಆದರೆ ಅವರ ಪ್ರೇಮದ ಕಾರಣದಿಂದ ಅನೇಕ ಜೀವಗಳು ನಾಶವಾದವು…ಒಬ್ಬ ತಾಯಿಯ ಶಾಪ ಅವರಿಗೆ ಬಿದ್ದಿತ್ತು…”

ಆದಿತ್ಯ ಬೆಚ್ಚಿಬಿದ್ದ. “ಯಾವ ಶಾಪ…?”

ಶಾಸ್ತ್ರಿಗಳು ನಿಧಾನವಾಗಿ ಹೇಳಿದರು —  “ನೀವು ಹಿಂದಿನ ಜನ್ಮದಲ್ಲಿ ಒಬ್ಬ ರಾಜಕುಮಾರ…ಅಪೂರ್ವ ಒಬ್ಬ ನೃತ್ಯಾಂಗಿ…ನಿಮ್ಮಿಬ್ಬರ ಪ್ರೇಮಕ್ಕಾಗಿ ನಡೆದ ಯುದ್ಧದಲ್ಲಿ ನೂರಾರು ಜನ ಸತ್ತರು…ಒಬ್ಬ ತಾಯಿ ತನ್ನ ಮಗನ ಶವ ಹಿಡಿದು ಶಪಿಸಿದ್ದಳು — ‘ನಿಮ್ಮ ಪ್ರೇಮ ಯಾವ ಜನ್ಮದಲ್ಲೂ ಪೂರ್ಣವಾಗಬಾರದು'…”

ಈ ವಿಚಾರ ಕೇಳಿದಂತೆ, ಆದಿತ್ಯನ ಮನ ನೊಂದಿತು. ಮನೆ ತುಂಬ ಮೌನ ಆವರಿಸಿತು…ಆ ದಿನದಿಂದ ವಿಚಿತ್ರ ಘಟನೆಗಳು ಆರಂಭವಾದವು. ಆರಾಧ್ಯಾ ಕೆಲವೊಮ್ಮೆ ಖಾಲಿ ಕೋಣೆಯ ಕಡೆ ನೋಡಿ ನಗುತ್ತಿದ್ದಳು… “ಅಮ್ಮ ಬಂದಿದ್ದಾರೆ…” ಎಂದು ಹೇಳುತ್ತಿದ್ದಳು.

ಒಂದು ರಾತ್ರಿ, ಆದಿತ್ಯಗೆ ಕನಸು ಬಂತು: ಬಿಳಿ ವಸ್ತ್ರದಲ್ಲಿ ಅಪೂರ್ವ ನಿಂತಿದ್ದಳು…ಅವಳ ಕಣ್ಣುಗಳಲ್ಲಿ ನೋವಿತ್ತು… ಆದರೆ ಮುಖದಲ್ಲಿ ದಿವ್ಯ ಶಾಂತಿ. “ಆದಿ… ನಾನು ಹೋಗಿಲ್ಲ…ನಿನ್ನ ಪ್ರೀತಿಯೊಳಗೆ ನಾನು ಇನ್ನೂ ಜೀವಂತ…ಆದರೆ ನಮ್ಮ ಶಾಪ ಈ ಜನ್ಮಕ್ಕೆ ಕೊನೆಯಾಗಬೇಕು…”

“ಹೇಗೆ…?” ಎಂದು ಅತ್ತ ಆದಿತ್ಯ. ಉತ್ತರವಾಗಿ ಅಪೂರ್ವ - “ಒಬ್ಬರನ್ನೊಬ್ಬರು ಹಿಡಿದುಕೊಳ್ಳುವ ಪ್ರೇಮಕ್ಕಿಂತ, ಬಿಡುವ ಪ್ರೇಮ ದೊಡ್ಡದು…” ಎಂದು ನಿಧಾನವಾಗಿ ಗಾಳಿಯಲ್ಲಿ ಸೇರಿಕೊಂಡಳು. ಆ ಕೂಡಲೇ ಎಚ್ಚರವಾದ ಆದಿತ್ಯ, ಬೆವತು ಹೋಗಿದ್ದ. ಅಪೂರ್ವ ಹೇಳಿದ ಮಾತನ್ನು ನೆನೆದು ಕಣ್ಣೀರಿಟ್ಟ. ಅಲ್ಲೇ ಶಾಂತವಾಗಿ ಮಲಗಿದ್ದ ಮಗಳು ಆರಾಧ್ಯಳನ್ನು ಗಟ್ಟಿಯಾಗಿ ತಬ್ಬಿಕೊಂಡು ಮನಸೋ ಇಚ್ಛೆ ಅತ್ತು ತನ್ನ ದುಃಖವನ್ನು ಇಳಿಸಿದ. 

*** 

 

ಮರುದಿನ ಮತ್ತೆ ಶಾಸ್ತ್ರಿಗಳತ್ತ ಹೋಗಿ ಆದಿತ್ಯ ತನ್ನ ಕನಸಿನ ಬಗ್ಗೆ ಹೇಳಿಕೊಂಡ. ಶಾಸ್ತ್ರಿಗಳು ಒಂದು ದೇವಾಲಯದ ಬಗ್ಗೆ ಹೇಳಿದರು. ಅದು ಕಾಡಿನ ಮಧ್ಯೆ ಇದ್ದ ಪುರಾತನ ದೇವಿಯ ದೇವಸ್ಥಾನ. ಅಲ್ಲಿ ಅಪಮೃತ್ಯು ಪಡೆದ ಆತ್ಮಗಳಿಗೆ, ಅವರು ಸತ್ತ ತಿಥಿಯ ತಿಂಗಳಿನ ಪಿತೃ ಪಕ್ಷದ ಅಮಾವಾಸ್ಯೆ ದಿನ “ಅಪೂರ್ಣ ಆತ್ಮಗಳ ದೀಪ” ಹಚ್ಚಿದರೆ ಮಾತ್ರ ಶಾಪ ಮುಕ್ತವಾಗುತ್ತದೆ ಎಂದು ನಂಬಿಕೆ. ಹಲವಾರು ವಿಷಯಗಳನ್ನು ಕೇಳಿ ತಿಳಿದುಕೊಂಡ ಆದಿತ್ಯ ಮನೆಗೆ ಬಂದು ಶಾಸ್ತ್ರಿಗಳು ಹೇಳಿದಂತ ಎಲ್ಲ ವಿಚಾರಗಳನ್ನೂ ಹೇಳಿದ. 

ಅದೇ ತಿಂಗಳು ಅಪೂರ್ವ ಸತ್ತು ಒಂದು ವರ್ಷ ಪೂರ್ಣವಾಗುತ್ತಿತ್ತು. ಅಂದು ಪಿತೃ ಪಕ್ಷದ ಅಮಾವಾಸ್ಯೆ ದಿನ. ಆದಿತ್ಯ, ಅನುರಾಧ, ಚಂದ್ರಮೋಹನ ಮತ್ತು ಪುಟ್ಟ ಆರಾಧ್ಯಾ ಎಲ್ಲರೂ ಅಲ್ಲಿ ಹೋದರು. 

ಆ ದೇವಾಲಯವೇ ಒಂದು ಥರಾ ವಿಚಿತ್ರವಾಗಿತ್ತು… ಗಂಟೆ ಶಬ್ದಗಳೇ ಗಾಳಿಯಲ್ಲಿ ತೇಲುತ್ತಿದ್ದಂತ ಭಾಸವಾಗುತ್ತಿತ್ತು. 

ಆ ದೇವಸ್ಥಾನದ ಒಳಗೆ ಕಾಲಿಡುತ್ತಿದ್ದಂತೆ, ಏನೋ ಒಂದು ವಿಚಿತ್ರವಾದ ಅನುಭವ. ಶಾಸ್ತ್ರಿಗಳು ತಿಳಿಸಿದಂತೆ, "ಅಪೂರ್ಣ ಆತ್ಮಗಳ ದೀಪ" ಹಚ್ಚುವಾಗ, ಆರಾಧ್ಯಾ ಏಕಾಏಕಿ ಹೇಳಿದಳು— “ಅಪ್ಪಾ, ಅಲ್ಲಿ ನೋಡು... ಅಮ್ಮ ಈಗ ನನ್ನ ಕಡೆ ನೋಡುತ್ತಾ ಖುಷಿಯಿಂದ ನಗ್ತಿದ್ದಾರೆ…”

ಆ ಕ್ಷಣ, ದೇವಾಲಯದೊಳಗಿನ ದೀಪಗಳು ಗಾಳಿಯಿಲ್ಲದೇ ತೇಲಿದಂತೆ ಕಂಪಿಸಿದವು…ಆದಿತ್ಯ ಕಣ್ಣುಮುಚ್ಚಿ ಅತ್ತ…“ಅಪೂರ್ವ… ನಿನ್ನನ್ನು ಬಂಧಿಸಿಕೊಳ್ಳಲು ನಾನು ಇನ್ನು ಬಯಸಲ್ಲ… ನೀನು ಶಾಂತಿಯಿಂದ ಹೋಗು…” ಆ ಮಾತಿನ ನಂತರ, ಅವನ ಹೃದಯದೊಳಗಿನ ಭಾರ ಏಕಾಏಕಿ ಕಡಿಮೆಯಾಯಿತು. ಅವನ ಕಣ್ಣಿಂದ ಕಣ್ಣೀರು ಜಲಪಾತದಂತೆ ಹರಿಯುತ್ತಿತ್ತು. ಅವನು ಅಳುವುದನ್ನು ನೋಡಿ ಆರಾಧ್ಯ ಗಲಿಬಿಲಿಯಾದರೂ ಅವನನ್ನು ಗಟ್ಟಿಯಾಗಿ ಅಪ್ಪಿಕೊಂಡಳು. ಮಗಳ ಅಪ್ಪುಗೆಯಲ್ಲಿ ತನ್ನ ನೋವನ್ನು ಮರೆತು ಆದಿತ್ಯ ಚೇತರಿಸಿಕೊಂಡ. ಅದಾದಮೇಲೆ, ಎಲ್ಲರೂ ಮನೆಗೆ ಹಿಂದಿರುಗಿದರು. 

ಅದರ ನಂತರ ಅವರ ಜೀವನ ನಿಧಾನವಾಗಿ ಬದಲಾಗತೊಡಗಿತು. ಆರಾಧ್ಯಾ ದೊಡ್ಡವಳಾಗುತ್ತಾ ಅಪೂರ್ವಳಂತೆಯೇ ಸಂಗೀತ ಮತ್ತು ಚಿತ್ರಕಲೆಯಲ್ಲಿ ಅದ್ಭುತ ಪ್ರತಿಭೆ ತೋರಿಸಿದಳು. ಆದಿತ್ಯ ತನ್ನ ಹೆಂಡತಿಯ ನೆನಪಿಗಾಗಿ ಒಂದು ಟ್ರಸ್ಟ್ ಆರಂಭಿಸಿದ— “ಅಪೂರ್ವ ಫೌಂಡೇಶನ್”

ಅದು ಅಪಘಾತದಲ್ಲಿ ಕುಟುಂಬವನ್ನು  ಕಳೆದುಕೊಂಡ ಮಕ್ಕಳಿಗೆ ಸಹಾಯ ಮಾಡುವ ಸಂಸ್ಥೆಯಾಯಿತು. ಅನುರಾಧ ಮತ್ತೆ ತನ್ನ ಉದ್ಯಮ ಆರಂಭಿಸಿದಳು. ಚಂದ್ರಮೋಹನ ಜೀವನದ ಕುರಿತು ಪುಸ್ತಕ ಬರೆಯಲು ಶುರುಮಾಡಿದರು.

***

ವರ್ಷಗಳ ನಂತರ…ಒಂದು ಸಂಜೆ, ಜಡಿಯಾಗಿ ಮಳೆ ಬೀಳುತ್ತಿತ್ತು…ಆರಾಧ್ಯಾ ವೀಣೆ ನುಡಿಸುತ್ತಿದ್ದಳು… ಆದಿತ್ಯನಿಗೆ ಆ ವೀಣೆಯ ನಾದ, ಸ್ವರದಲ್ಲಿ ಅಪೂರ್ವಳ ಆತ್ಮವೇ ಹರಿಯುತ್ತಿದ್ದಂತೆ ಅನಿಸಿತು… ಅಪೂರ್ವಳನ್ನು ನೆನೆಯುತ್ತಾ ಆದಿತ್ಯ ಕಣ್ಣು ಮುಚ್ಚಿ ಮಂದಹಾಸ ಬೀರಿದ.

ಅವನಿಗೆ ಗಾಳಿಯೊಳಗೆ ಒಂದು ಧ್ವನಿ ಕೇಳಿಸಿತು— “ಆದಿ…ಈ ಜನ್ಮದಲ್ಲಿ ಅಲ್ಲದಿದ್ದರೂ…ಪ್ರತಿ ಜನ್ಮದಲ್ಲೂ ನಾನು ನಿನ್ನನ್ನು ಹುಡುಕುತ್ತೇನೆ…”

ಕಿಟಕಿಯ ಬಳಿಯ ದೀಪ ನಿಧಾನವಾಗಿ ತೇಲಿತು…ಆಕಾಶದಲ್ಲಿ ಮಿಂಚು ಹೊಳೆಯಿತು…

ಆದರೆ ಆ ಮನೆಯಲ್ಲಿ ಮೊದಲ ಬಾರಿಗೆ, ನೋವಿನ ಮಧ್ಯೆ ಶಾಂತಿ ಹುಟ್ಟಿತ್ತು…

ಯಾಕೆಂದರೆ ಕೆಲವು ಪ್ರೇಮಗಳು…ಒಟ್ಟಿಗೆ ಬದುಕುವುದಕ್ಕಲ್ಲ…ಆತ್ಮವಾಗಿ ಶಾಶ್ವತವಾಗುವುದಕ್ಕೇ ಹುಟ್ಟುತ್ತವೆ… 

❤️ 

 ✍🏻 Deepalaxmi Bhat
Mangaluru 

ಶುಕ್ರವಾರ, ಮೇ 1, 2026

ನಾಗಶಾಪದ ಮುಕ್ತಿ

✍🏻ದೀಪಲಕ್ಷ್ಮಿ ಭಟ್, ಮಂಗಳೂರು 

ಬೇಸಿಗೆಯ ಬಿಸಿಲು ತೀವ್ರವಾಗಿದ್ದರೂ, ಹಳ್ಳಿಯ ಸೊಗಸು ಎಂದಿಗೂ ಕಡಿಮೆಯಾಗುವುದಿಲ್ಲ. ಹಸಿರು ಹೊಲಗಳು, ಮಳೆಯ ವಾಸನೆ ಉಳಿಸಿಕೊಂಡ ಮಣ್ಣು,  ಮಂಗಳವಾದ ಮುಸ್ಸಂಜೆಯ ಗಾಳಿ—ಇವುಗಳ ನಡುವೆ ತನ್ನ ರಜೆಯನ್ನು ಕಳೆಯಲು ವಿಕ್ರಮ ತನ್ನ ಅತ್ತೆ ವಿಮಲಾಳ ಮನೆಗೆ ಬಂದಿದ್ದ. 

ವಿಕ್ರಮ ಇಂಜಿನಿಯರಿಂಗ್ ಮೂರನೇ ವರ್ಷದ ವಿದ್ಯಾರ್ಥಿ. ಚತುರ, ಧೈರ್ಯಶಾಲಿ ಮತ್ತು ಮನಸಾರೆ ಪ್ರೀತಿಸುವ ಸ್ವಭಾವದವನು. ಅವನಿಗೆ ತನ್ನ ಅತ್ತೆ ಮಗಳು ವಿನುತಾಳ ಮೇಲೆ ವಿಶೇಷವಾದ ಮಮತೆ. ಆ ಮಮತೆ, ಪ್ರೀತಿಯಾಗಿ ಅರಳಿತ್ತು. ವಿನುತಾಳಿಗೂ ಅವನೆಂದರೆ ಪ್ರಾಣವೇ.

ವಿನುತಾ, ಹತ್ತನೇ ತರಗತಿಯ ಪರೀಕ್ಷೆ ಮುಗಿಸಿ, ರಜೆಯಲ್ಲಿದ್ದಳು. ಅವಳ ಸುಂದರವಾದ ಮಂದಹಾಸ, ಅವಳ ಕಣ್ಣುಗಳಲ್ಲಿನ ಹೊಳಪು — ಎಲ್ಲವೂ ವಿಕ್ರಮನ ಮನಸ್ಸನ್ನು ಸೆಳೆದಿದ್ದವು.

ವಿಮಲಾ, ವಿನೋದ ದಂಪತಿಗಳಿಗೂ, ವಿಕ್ರಮನೆಂದರೆ ತುಂಬಾ ಪ್ರೀತಿ. ವಿಕ್ರಮನ ಹೆತ್ತವರಾದ ವಿಜಯ ಹಾಗೂ ಅನುರಾಧ ಕೂಡ ಈ ಸಂಬಂಧಕ್ಕೆ ಮೊದಲೇ ಸೈ ಅಂದಿದ್ದರು. ಇವರಿಬ್ಬರ ಸಂಬಂಧವನ್ನು ಎರಡೂ ಕುಟುಂಬದವರು ಕೂಡ ಮನಸಾರೆ ಒಪ್ಪಿಕೊಂಡಿದ್ದರು. ಹೀಗಾಗಿ ಅವರು ಒಟ್ಟಿಗೆ ಹೊಲಗಳಲ್ಲಿ ತಿರುಗಾಡುವುದು, ಸಂಜೆಯ ಹೊತ್ತಿನಲ್ಲಿ ಮಾತುಕತೆ ನಡೆಸುವುದು ಎಲ್ಲವೂ ಸಾಮಾನ್ಯವಾಗಿತ್ತು.  "ವಿಕ್ಕಿ... ನನ್ ಜೊತೆ ಟ್ರೀ ಹೌಸ್ ಗೆ ಬಾ.." ಅಂತ ಹೇಳಿ, ವಿನುತಾ ವಿಕ್ರಮನ  ಜೊತೆ, ಚಿಕ್ಕಂದಿನಿಂದಲೂ, ಅವಳಿಗೆ ಆಟವಾಡಲೆಂದೇ ವಿನೋದ ಕೈಯಾರೆ ತಯಾರಿಸಿದ್ದ ಮರದ ಮೇಲಿನ ಟ್ರೀ ಹೌಸ್  ಒಳಗೆ ಕೂತು ಆಟ ಆಡುತ್ತಿದ್ದರು. ಹಾಗೆ, ಆಟವಾಡಿ ಸುಸ್ತಾದರೆ, ಅದರಲ್ಲೇ ಮಲಗುತ್ತಿದ್ದರು.  ದೊಡ್ಡವರಾದ ಮೇಲೂ ಈ ರೀತಿ ಟ್ರೀ ಹೌಸ್ ನಲ್ಲಿ ಕೂತು ಹರಟೆ ಹೊಡೆಯುತ್ತಾ ಕಾಲ ಕಳೆಯೋದು ಅವರಿಬ್ಬರಿಗೂ ಇಷ್ಟವಾದ ವಿಷಯವಾಗಿತ್ತು. 

*** 

 

ಅಂದು ಪಂಚಮಿಯ ದಿನ. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮುಗಿಸಿದ ವಿನುತಾ, ಮನೆಯೆದುರು ರಂಗೋಲಿ ಬಿಡಿಸಿ, ದೇವರ ಪೂಜೆಗೆಂದು ಹೂ ಕೊಯ್ದು,  ಅಮ್ಮ ಮಾಡಿ ಕೊಟ್ಟ ಕಾಫಿ ಕುಡಿಯುತ್ತಿದ್ದಳು. ಆಗ ತಾನೇ ಎದ್ದ ವಿಕ್ರಮ, ವಿನುತಾಳನ್ನು ಎದ್ದ ಕೂಡಲೇ ನೋಡಿ ಮನದಲ್ಲೇ ಸಂತೋಷಗೊಂಡು, ತನ್ನ ಬೆಳಗಿನ ದಿನಚರಿ ಮುಗಿಸಿದ. ತಿಂಡಿ ತಿಂದಾದಮೇಲೆ. ವಿನುತಾ ವಿಕ್ರಮ್  ಇಬ್ಬರೂ ಟ್ರೀ ಹೌಸ್ ಕಡೆ ಹೋದರು. ಹೊಲದಲ್ಲೆಲ್ಲಾ ಸುತ್ತಾಡಿ, ತಮ್ಮ ಶಾಲೆ ಕಾಲೇಜಿನ ಕಥೆಗಳನ್ನು ಮಾತನಾಡುತ್ತಾ, ಸುಸ್ತಾದ ಹಾಗೆ ಟ್ರೀ ಹೌಸ್ ಒಳಗೆ ಹೋಗಿ ತಾವು ತಂದಿದ್ದ ಜ್ಯೂಸು ಕುಡಿದು ಹರಟೆಗೆ ಕೂತರು.  ವಿಕ್ರಮ ಕಾಲೇಜಿನಲ್ಲಿ ಪ್ರೀತಿಸುತ್ತಿದ್ದ ಒಂದೆರಡು ಜೋಡಿಗಳ ಕಥೆ ಹೇಳಿದರೆ, ವಿನುತಾ ಶಾಲೆಯಲ್ಲಿ ಪಾಠ ಕಲಿಸುತ್ತಿದ್ದ ಮೇಷ್ಟ್ರುಗಳ ಮೇಲೆ ಕೆಲವೊಂದು ಹುಡುಗಿಯರಿಗಿದ್ದ ಕ್ರಶ್ ಬಗ್ಗೆ ಹೇಳುತ್ತಿದ್ದಳು. ಮಾತು ಮಾತಿಗೂ ಅವಳ ನಗು ವಿಕ್ರಮನ ಮನಸ್ಸಿಗೆ ತಂಪೆರೆಯುತ್ತಿತ್ತು. ಹಾಗೆ ಅವಳನ್ನು ನೋಡಿ ಅವಳನ್ನು ಬರಸೆಳೆದು ಅವಳ ಹಣೆಗೆ ಹಾಗೂ ಕೆನ್ನೆಗೆ ಒಂದು ಸುಂದರವಾದ ಮುತ್ತಿಟ್ಟು ಮನೆಗೆ ಹೋಗುತ್ತೇನೆಂದು ಹೊರಟ. ಅಚಾನಕ್ಕಾಗಿ ಸಿಕ್ಕ ಮುತ್ತಿನಿಂದ ಪುಳಕಿತಳಾದ ವಿನುತಾ ಕೆನ್ನೆಯೆಲ್ಲ ನಾಚಿಕೆಯಿಂದ ಕೆಂಪಗಾಗಿತ್ತು.  ಆ ಮುತ್ತಿನ ಗುಂಗಿನಲ್ಲೇ ಕೆಲಕಾಲ ಮುಗುಳ್ನಗೆಯಲ್ಲಿ ಕಳೆದಳು. ಆಮೇಲೆ ನಿಧಾನಕ್ಕೆ ಟ್ರೀ ಹೌಸ್ ನಿಂದ ಕೆಳಗಿಳಿದು ಮನೆಗೆ ಹೋದಳು.

ಆ ರಾತ್ರಿ - ಪಂಚಮಿಯ ರಾತ್ರಿ. ವಿಚಿತ್ರವಾದ ನಿಶಬ್ದದಿಂದ ಕೂಡಿತ್ತು.  ಎಲ್ಲರೂ ರಾತ್ರಿ ಊಟ ಮುಗಿಸಿ ಮಲಗಲು ತಯಾರಾಗುತ್ತಿದ್ದರು. "ವಿಕ್ರಮ, ನಾಳೆ ಷಷ್ಠಿ ಆದ ಕಾರಣ, ನಮ್ಮೂರಿನ ದೇವಸ್ಥಾನಕ್ಕೆ ಹೋಗಿ ನಾಗನ ಕಲ್ಲಿಗೆ ಹಾಲೆರೆಯಲು ಹೋಗಲಿಕ್ಕಿದೆ. ಬೆಳಿಗ್ಗೆ ಬೇಗನೆ ತಯಾರಾಗು." ಅಂತ ವಿಮಲಾ ನೆನಪಿಸಿದಳು. "ಸರಿ ಅತ್ತೆ. ಬೆಳಿಗ್ಗೆ ಬೇಗನೆ ತಯಾರಾಗ್ತೇನೆ" ಅಂದು ವಿಕ್ರಮ ತನ್ನ ಕೋಣೆಗೆ ಹೋದ. ಎಲ್ಲ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಟ್ಟು ವಿಮಲಾ ಕೂಡ ತನ್ನ ಕೊನೆಗೆ ಹೋಗಿ ಮಲಗಿದಳು. ಸುಮಾರು ಅರ್ಧರಾತ್ರಿಯ ಸಮಯ. ವಿಕ್ರಮ ಗಾಢವಾದ ನಿದ್ರೆಯಲ್ಲಿದ್ದ. ಏಕಾಏಕಿಯಾಗಿ ಒಂದು ವಿಚಿತ್ರವಾದ ಸಡ್ಡು ಕೇಳಿಸಿ ವಿಕ್ರಮ ಎಚ್ಚರಗೊಂಡ. 

ಆ ಸಡ್ಡು ವಿನುತಾಳ ಕೊನೆ ಕಡೆಯಿಂದ ಕೇಳಿಸಿದಂತೆ ಭಾಸವಾಯಿತು. ಭೀತಗೊಂಡ ವಿಕ್ರಮ ಎದೆ ತಡಕಾಡುತ್ತಾ ತನ್ನ ಕೋಣೆಯಿಂದ ಹೊರಬಂದ. ಆ ಸಮಯಕ್ಕೆ ವಿನುತಾಳ ಕೋಣೆಯ ಕಡೆಯಿಂದ ಹೊರಬಂದ ದೊಡ್ಡ ನಗರಹಾವೊಂದು ಹೊರಗೆ ಹೋಗುತ್ತಿತ್ತು. ಮತ್ತಷ್ಟು ಭಯಗೊಂಡ ವಿಕ್ರಮ ವಿನುತಾಳ ಕೋಣೆ  ಕಡೆ ಓಡಿದ. ಮೃದುವಾದ ದನಿಯಲ್ಲಿ "ವಿನುತಾ" ಎಂದು ಕರೆದ. ಮೆಲ್ಲನೆ ಅವಳ ಕೋಣೆಯ  ಬಾಗಿಲು ದೂಡಿ ನೋಡಿದ. ಅವಳು ಅಲ್ಲಿ ಕಾಣಿಸಲಿಲ್ಲ.  ಭಯದಿಂದ ಹೊರಗೆ ಓಡಿ  ಸುತ್ತಲೂ ಹುಡುಕಾಡಿದ. ಆದರೆ ಅವಳ ಸುಳಿವು ಸಿಗಲಿಲ್ಲ. ಅಷ್ಟರಲ್ಲಿ ಅದೇ ನಾಗರಹಾವು ಅವನತ್ತ ಹೆಡೆಯೆತ್ತಿ ತಿರುಗಿ ನೋಡಿತು. ವಿಕ್ರಮನಿಗೆ ಅದೊಂದು ಸಂದೇಶದಂತೆ ಭಾಸವಾಯಿತು.  ನನ್ನ ಹಿಂದೆ ಬಾ ಅಂತ ಸನ್ನೆ ಮಾಡಿದಂತೆ ವಿಕ್ರಮನಿಗೆ  ಅನಿಸಿತು. ಹಾವು ನಿಧಾನವಾಗಿ ಮುಂದೆ ಸರಿಯಿತು. ವಿಕ್ರಮನಿಗೆ ಏನೋ ಆಕರ್ಷಣೆಯಾದಂತಾಗಿ, ಆ ಹಾವನ್ನು ಹಿಂಬಾಲಿಸಿದ. 

***

ಆ ಹಾವು ಮನೆಯ ಪಕ್ಕದಲ್ಲಿದ್ದ  ನದಿ ಮಾರ್ಗವಾಗಿ  ಚಲಿಸಿ, ಒಂದು ಬೆಟ್ಟದ ಬುಡದಲ್ಲಿದ್ದ ಗುಹೆಯೊಳಗೆ ಪ್ರವೇಶಿಸಿತು. ಹಾವನ್ನು ಹಿಂಬಾಲಿಸಿದ ವಿಕ್ರಮನೂ ಆ ಗುಹೆ ಪ್ರವೇಶಿಸಿದ. ತಂಪಾಗಿದ್ದ ಆ ಗುಹೆಯೊಳಗೆ ಸ್ವಲ್ಪ ಮುಂದೆ ಸಾಗಿದಾಗ, ಒಂದು ದೊಡ್ಡ ಹಳೆಯ ಪೆಟ್ಟಿಗೆ ಕಂಡಿತು. ಅದು ಸಾಮಾನ್ಯವಾದ  ಪೆಟ್ಟಿಗೆಯಾಗಿರಲಿಲ್ಲ. ರಾಜಮಹಾರಾಜರ ಕಾಲದ ಪೆಟ್ಟಿಗೆಯಂತೆ ಭಾಸವಾಯಿತು. ವಿಕ್ರಮನಿಗೆ ಕುತೂಹಲವಿದ್ದರೂ, ಮನೆಯಲ್ಲಿ ಹೇಳದೆ ಅದನ್ನು ತೆರೆಯಲು ಯತ್ನಿಸಲಿಲ್ಲ. ಮನೆಯಲ್ಲಿ ಮಾತನಾಡಿ ಆಮೇಲೆ ಇದರ ಬಗ್ಗೆ ನೋಡೋಣ ಅಂದುಕೊಂಡು, ಮನೆಗೆ ಹಿಂದಿರುಗಿದ. ಯಾರನ್ನೂ ಗಾಬರಿಗೊಳಿಸುವುದು ಬೇಡ ಅಂದುಕೊಂಡು, ತನ್ನ ಕೊನೆಗೆ ಬಂದು ಮಲಗಿದ. 

ಬೆಳಿಗ್ಗೆ ಎದ್ದ ಕೂಡಲೇ ವಿನುತಾಳ ಕೊನೆ ಕಡೆ ನೋಡಿದ ವಿಕ್ರಮನಿಗೆ, ವಿನುತಾ ಅಲ್ಲಿರುವುದನ್ನು ಕಂಡು ನಿರಾಳವಾಯಿತು. ಆದರೆ, ಅವಳ ಮೈಯಲ್ಲೆಲ್ಲಾ ಹಳದಿ ಬಣ್ಣದ ಗುಳ್ಳೆಗಳಿದ್ದವು. ಮೆಲ್ಲನೆ ವಿನುತಾಳ ಪಕ್ಕ ಹೋಗಿ, "ನಿನ್ನೆ ರಾತ್ರಿ ನಿನಗೇನಾಗಿತ್ತು?" ಅಂತ ಪ್ರಶ್ನಿಸಿದ. "ಗೊತ್ತಿಲ್ಲ. ನಂಗೆ ತುಂಬಾನೇ ಸುಸ್ತಾಗುತ್ತಿದೆ" ಅಂತ ನಿಧಾನವಾಗಿ ಹೇಳಿ ವಿನುತಾ  ನಿದ್ದೆಗೆ ಜಾರಿದಳು.  ವಿಕ್ರಮನ ಅನುಮಾನ  ಗಟ್ಟಿಯಾಗತೊಡಗಿತು. ಮನೆಯಲ್ಲಿ ಈ ವಿಚಾರವಾಗಿ ಮಾತನಾಡಲೇಬೇಕು ಅಂದುಕೊಂಡು, ಸರಿಯಾದ ಸಮಯಕ್ಕಾಗಿ ಲೆಕ್ಕ ಹಾಕಿದ.

ಆ ದಿನ ಸಾಯಂಕಾಲದ ಹೊತ್ತಿಗೆ, ವಿಮಲಾ ಹಾಗೂ ವಿನೋದ ಇಬ್ಬರೂ ಚಹಾ ಕುಡಿಯುತ್ತಿದ್ದರು. ಅದೇ ಸರಿಯಾದ ಸಮಯ ಎಂದು ವಿಕ್ರಮ ನಿಧಾನವಾಗಿ ವಿಷಯವನ್ನು ಪ್ರಸ್ತಾಪಿಸಿ, ತನ್ನ ಅನುಮಾನವನ್ನು ಸ್ಪಷ್ಟೀಕರಿಸಿದ ವಿಕ್ರಮ. ವಿಮಲಾ ಕಣ್ಣೀರಿಡುತ್ತಾ "ವಿಕ್ರಮ, ನಮ್ಮ ಮನೆತನಕ್ಕೆ ಒಂದು ದೊಡ್ಡ ಹಳೆಕಾಲದ ಶಾಪ ಇದೆ. ಹಳೆಯ ಕಾಲದಲ್ಲಿ, ಇಲ್ಲಿ ಒಂದು ಮಹಾಶಿವನ ದೇವಸ್ಥಾನ ಇತ್ತು. ಸುಮಾರು 5000 ವರ್ಷಗಳಷ್ಟು ಹಳೆಯದು. ಅದನ್ನು ಕಾಪಾಡುತ್ತಿದ್ದ ನಾಗದೇವತೆಯನ್ನು ನಮ್ಮ ಪೂರ್ವಜರು ಅವಮಾನಿಸಿದ್ದರು… ಆಗಿನಿಂದ, ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಈ ಶಾಪ. ಬೇಸರದ ವಿಷಯವೆಂದರೆ, ವಿನುತಾಳೇ ಆ ಶಾಪದ ಬಲಿಯಾಗಿದ್ದಳು. ಪ್ರತಿ ಪಂಚಮಿಯ ರಾತ್ರಿ, ಅವಳು ನಾಗರೂಪಕ್ಕೆ ಬದಲಾಗುತ್ತಾಳೆ… ನಾವು ಏನೂ ಮಾಡಲು ಸಾಧ್ಯವಾಗುತ್ತಿಲ್ಲ." ಅಂತ ಗದ್ಗದಿತ ಕಂಠದಲ್ಲಿ ಹೇಳಿಕೊಂಡಳು. "ಇದಕ್ಕೇನೂ ಪರಿಹಾರವಿಲ್ಲವೇ?" ಎಂದು ವಿಕ್ರಮ ಪ್ರಶ್ನಿಸಿದ. "ತುಂಬ ಪ್ರಯತ್ನ ಪಟ್ಟೆವು ವಿಕ್ರಮ. ಆದರೆ ಪರಿಹಾರ ಏನು ಎಂಬುದು ನಮಗೆ ತಿಳಿಯಲಿಲ್ಲ" ಅಂತ ವಿನೋದ ಹೇಳಿದನು.

"ಈ ಶಾಪವನ್ನು ಮುರಿಯಲೇಬೇಕು." ಎಂದು ತೀರ್ಮಾನಿಸಿಕೊಂಡು ವಿಕ್ರಮ ಮೊತ್ತ ಮೊದಲಿಗೆ ಆ ಹಳ್ಳಿಯ ಜನರೆಲ್ಲರನ್ನೂ ಒಟ್ಟು ಸೇರಿಸಿದ. ಗುಹೆಯ ವಿಚಾರ, ಗುಹೆಯಲ್ಲಿದ್ದ ಪೆಟ್ಟಿಗೆಯ ವಿಚಾರ ತಿಳಿಸಿ, ಊರ ಹಿರಿಯ ಸಮಸ್ತರ ಅನುಮತಿಯಂತೆ, ಆ ಪೆಟ್ಟಿಗೆಯನ್ನು ತೆರೆದ. ಅದರೊಳಗೆ ಪವಿತ್ರವಾದ ಶಿವಲಿಂಗ, ನಾಗನ ಕಲ್ಲುಗಳು ಹಾಗೂ ದೇವಸ್ಥಾನದ ಒಡವೆ ಶಾಸನಗಳು ಸಿಕ್ಕವು. ಅದು ಪುರಾತನ ದೇವಾಲಯದ ಮೂಲ ವಸ್ತುಗಳಾಗಿದ್ದವು. 

ಪ್ರಶ್ನೆ ಇಟ್ಟಾಗ, ಮುಂದಿನ ಪಂಚಮಿಯೊಳಗೆ,ದೇವಸ್ಥಾನದ ಪುನರ್ ನಿರ್ಮಾಣ ಆಗಬೇಕು ಎಂದು ಉತ್ತರ ದೊರಕಿತು.  ಹಳ್ಳಿಯ ಜನರೆಲ್ಲರೂ ಒಟ್ಟು ಸೇರಿ, ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡರು. ಪ್ರತಿ ದಿನ ಹೋಮ, ಪೂಜೆ, ನಾಗಪೂಜೆ ಇತ್ಯಾದಿಗಳು ನಡೆದು, ದೇವಸ್ಥಾನ ನಿರ್ಮಾಣವಾಗಿ, ಅದ್ಧೂರಿಯಾಗಿ ಎಲ್ಲ ಕಾರ್ಯಗಳು ಪಂಚಮಿ ಆಗುತ್ತಲೇ ನಡೆಯಿತು. 

***

ಅಂದು ಮತ್ತೆ ಪಂಚಮಿ. ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಮಂಗಳವಾದ ವಾತಾವರಣ. ಬೆಳ್ಳಗಿನ ಬೆಳಕಿನಲ್ಲಿ ಶಿವಲಿಂಗ ಹೊಳೆಯುತ್ತಿತ್ತು. ಹೋಮದ ಧೂಪದ ವಾಸನೆ ಗಾಳಿಯಲ್ಲಿ ಹರಡಿಕೊಂಡಿತ್ತು. ಹಳ್ಳಿಯ ಪ್ರತಿಯೊಬ್ಬರ ಕಣ್ಣುಗಳಲ್ಲಿ ಒಂದೇ ಆಶೆ— “ಇಂದು ಈ ಶಾಪ ಕೊನೆಯಾಗಬೇಕು."
ಬೆಳಗ್ಗಿನ ಸಮಯದಲ್ಲಿ, ದೇವರ ಪೂಜಾಕಾರ್ಯಗಳು ನೆರವೇರಿತು. ವಿಕ್ರಮ ಹಾಗೂ ವಿನುತಾ ಇಬ್ಬರೂ ಒಟ್ಟಿಗೆ ದೇವರಲ್ಲಿ ಪ್ರಾರ್ಥಿಸಿದರು. ವಿನುತಾಳ ಕಣ್ಣುಗಳಲ್ಲಿ ಭಯವೂ ಇತ್ತು… ಆದರೆ ವಿಕ್ರಮನ ಕೈ ಹಿಡಿದಿದ್ದ ವಿಶ್ವಾಸವೂ ಇತ್ತು. “ನಿನ್ನ ಜೊತೆಗೆ ನಾನು ಇದ್ದೇನೆ…” ಎಂದು ಅವನು ನಿಧಾನವಾಗಿ ಹೇಳಿದ.

ಆ ರಾತ್ರಿ, ವಿನುತಾ ಹಾಗೂ ಮನೆಯವರೆಲ್ಲ ದೇವಸ್ಥಾನದಲ್ಲೇ ಇದ್ದರು. ಹನ್ನೆರಡು ಗಂಟೆ ಆಗುತ್ತಿದ್ದಂತೆ, ಗಾಳಿಯ ಸದ್ದು ಬದಲಾಯಿತು. ದೀಪಗಳ ಜ್ವಾಲೆ ತೂಗತೊಡಗಿತು. ವಿನುತಾಳ ದೇಹ ನಿಧಾನವಾಗಿ ಕಂಪಿಸತೊಡಗಿತು…ಅವಳ ಕಣ್ಣುಗಳು ಬದಲಾಗತೊಡಗಿದವು…ವಿನುತಾ ಮತ್ತೆ ನಾಗರೂಪಕ್ಕೆ ಬದಲಾಗುತ್ತಿದ್ದಾಗ, ದೇವಸ್ಥಾನದ ಗಂಟೆ ತಾನಾಗಿಯೇ "ಢಣ್ ಢಣ್ " ಎಂದು ಮೊಳಗಿತು. ತೂಗುತ್ತಿದ್ದ ದೀಪಗಳ ಆ ಕಿರಣದಲ್ಲಿ—ಒಂದು ಮಹಾ ನಾಗದೇವತೆ ಪ್ರತ್ಯಕ್ಷವಾಯಿತು! ಅದು ಭಯಾನಕವಾಗಿರಲಿಲ್ಲ…ಅದು ದಿವ್ಯವಾಗಿತ್ತು… ಕರುಣೆಯಿಂದ ಕೂಡಿತ್ತು…

ನಾಗದೇವತೆ ಗಂಭೀರ ಧ್ವನಿಯಲ್ಲಿ ಹೇಳಿತು: "ನಿಮ್ಮ ಭಕ್ತಿ, ಶ್ರಮ ಹಾಗೂ ಸ್ಥಿರವಾದ ಬದ್ಧತೆಗೆ ನಾನು ಮೆಚ್ಚಿದೆ. “ಮಾನವನ ಅಹಂಕಾರದಿಂದ ಹುಟ್ಟಿದ ಶಾಪ…
ಇಂದು ಮಾನವನ ಭಕ್ತಿ ಮತ್ತು ಪ್ರೀತಿಯಿಂದ ಮುಕ್ತವಾಗುತ್ತಿದೆ…ವಿಕ್ರಮ…ನಿನ್ನ ಧೈರ್ಯ, ನಿನ್ನ ನಿಷ್ಠೆ…ಮತ್ತು ಈ ಹಳ್ಳಿಯ ಜನರ ಒಗ್ಗಟ್ಟಿನ ಶ್ರಮ— ಇವೆಲ್ಲವು ಈ 5000 ವರ್ಷದ ಶಾಪವನ್ನು ಕೊನೆಗೊಳಿಸಿದೆ…ಇಂದಿಗೆ ನಿಮ್ಮ ಮನೆತನಕ್ಕೆ ಅಂತಿದ್ದ ಶಾಪ ಮುಕ್ತಿಯಾಯಿತು. ನಿಮ್ಮ ಬದುಕು ಬಂಗಾರವಾಗಲಿ" ಎಂದು ಹೇಳಿತು. ವಿನುತಾಳ ನಾಗರೂಪ ನಿಧಾನವಾಗಿ ಕರಗತೊಡಗಿತು. ವಿನುತಾ ತನ್ನ ಸ್ವರೂಪಕ್ಕೆ ಮರಳಿದಳು. ಅವಳು ಅಚಾನಕ್ ನೆಲಕ್ಕೆ ಕುಸಿದು ಬಿದ್ದಳು. “ವಿನುತಾ…!” ಎಂದು ಕರೆದ ವಿಕ್ರಮ ಅವಳತ್ತ ಓಡಿದ. ಮಹಾಶಿವನ ಲಿಂಗಪ್ರಸಾದವನ್ನು ಅರ್ಚಕರು ವಿನುತಾಳ ಹಣೆಗೆ ಹಚ್ಚಿದರು. 

ಕೆಲ ಕ್ಷಣಗಳ ಮೌನ…ವಿನುತಾಳ ಕಣ್ಣಲ್ಲಿ ಮತ್ತೆ ಜೀವ ಬಂದಂತಾಗಿತ್ತು. ಅವಳ ಕಣ್ಣುಗಳು ನಿಧಾನವಾಗಿ ತೆರೆದವು…ಅವಳ ಮುಖದಲ್ಲಿ ಮತ್ತೆ ಆ ಹಳೆಯ ಮಂದಹಾಸ ಅರಳಿತು…ವಿಕ್ರಮನನ್ನು ಅಪ್ಪಿಕೊಂಡು, ಧನ್ಯವಾದ ಸೂಚಿಸಿದಳು. ಗಟ್ಟಿಯಾಗಿ ವಿಕ್ರಮನ ಕೈ ಹಿಡಿದುಕೊಂಡು ಮಂದಹಾಸ ಬೀರುತ್ತಿದ್ದಳು. ಈ ಎರಡು ಜನರ ಜೋಡಿ ಸುಂದರವಾಗಿ ಕಾಣುತ್ತಿತ್ತು. ಹಳ್ಳಿಯ ಜನರೆಲ್ಲ “ಹರ ಹರ ಮಹಾದೇವ!” ಎಂದು ಕೂಗಿ ಸಂತೋಷಪಟ್ಟರು. ಆ ಪುರಾತನ ದೇವಾಲಯ ಮತ್ತೆ ಜೀವಂತವಾಯಿತು. 

ದೇವಾಲಯದ ಗಂಟೆಗಳು ನಿರಂತರವಾಗಿ ಮೊಳಗುತ್ತಾ…ಆಕಾಶದಲ್ಲೇನೋ ಒಂದು ಶಾಂತಿ ಹರಡಿದಂತೆ ಅನಿಸಿತು. ಪ್ರತಿ ವರ್ಷ ಪಂಚಮಿಯಂದು ಮಹೋತ್ಸವ ನಡೆಯತೊಡಗಿತು. 

ವಿಕ್ರಮ ಮತ್ತು ವಿನುತಾ— ಕೇವಲ ಪ್ರೇಮಿಗಳಲ್ಲ…ಒಂದು ಶಾಪವನ್ನು ಮುರಿದ ಜೋಡಿ. ಅವರ ಪ್ರೀತಿ—ಒಂದು ಮನೆತನವನ್ನು ಉಳಿಸಿತು…ಒಂದು ಹಳ್ಳಿಯನ್ನು ಪುನರ್ಜೀವಗೊಳಿಸಿತು… ಕೆಲವು ಶಾಪಗಳು ಭಯದಿಂದ ಅಲ್ಲ, ಭಕ್ತಿಯಿಂದ ಮುರಿಯುತ್ತದೆ. ಕೆಲವು ಪ್ರೇಮಗಳು ಭಾವನೆಗಳನ್ನಲ್ಲ, ಜೀವನವನ್ನು ರೂಪಿಸುತ್ತವೆ. ನಿಜವಾದ ಪ್ರೀತಿ ಇದ್ದಲ್ಲಿ… ದೈವವೂ ತಲೆಬಾಗುತ್ತದೆ…

*** 

  ✍🏻 Deepalaxmi Bhat
Mangaluru  

ಶುಕ್ರವಾರ, ಜನವರಿ 23, 2026

ಮರೆತುಹೋದ ಬೇರುಗಳು

 

✍🏻ದೀಪಲಕ್ಷ್ಮಿ ಭಟ್, ಮಂಗಳೂರು 

ಶ್ರೀ ರಾಮ ಶರ್ಮ ಎಂಬ ಹೆಸರು ಊರಿನ ಹಳೆಯ ಕಾಲದ ನೆನಪುಗಳಲ್ಲೊಂದಾಗಿತ್ತು. ಈಗಿನ ಪೀಳಿಗೆಗೆ ಅದು ಕೇವಲ ಒಂದು ಸಾಮಾನ್ಯ ಹೆಸರು ಮಾತ್ರ. ಆದರೆ ಆ ಹೆಸರಿನ ಹಿಂದೆ ಅಡಗಿದ್ದ ಕಥೆ, ಒಂದು ಊರಿನ ಬೆಳವಣಿಗೆಯ ಮೌನ ಸಾಕ್ಷಿಯಾಗಿತ್ತು.

ಶ್ರೀ ರಾಮ ಶರ್ಮಾ ಅವರ ಬದುಕು ಬಡತನದ ಮಣ್ಣಿನಲ್ಲಿ ಬೇರು ಬಿಟ್ಟಿತ್ತು. ದೊಡ್ಡ ಕೂಡು ಕುಟುಂಬ, ಹಸಿದ ಹೊಟ್ಟೆಗಳು, ಹೊಟ್ಟೆ ತುಂಬಿಸಿಕೊಳ್ಳಲು ಮಾಡುವ ಹೋರಾಟ, ಹಂಚಿಕೊಂಡ ಕನಸುಗಳು — ಇವೆಲ್ಲದರ ಮಧ್ಯೆ ವಿದ್ಯೆಯ ಕೈ ಬಿಡದೇ ಹಿಡಿದುಕೊಂಡು ಹೋಗಿದ್ದರು ಅವರು. ಅಣ್ಣಂದಿರ ಚಿಕ್ಕ ಕ್ಯಾಂಟೀನ್‌ನಲ್ಲಿ ಚಿಕ್ಕಪುಟ್ಟ ಕೆಲಸ, ಹಗಲು ಮರದ ಮಿಲ್ಲಿನಲ್ಲಿ ಅಟೆಂಡರ್ ಕೆಲಸ, ಸಂಜೆ ಕಾಲೇಜು — ಹೀಗೆ ಅವನ ದಿನಗಳು ಓಡುತ್ತಿದ್ದವು. ದುಡ್ಡಿಗಿಂತ ಜವಾಬ್ದಾರಿ ದೊಡ್ಡದಾಗಿದ್ದ ಕಾಲ ಅದು. ಕಾಲೇಜಿನ ಪುಸ್ತಕಗಳನ್ನು ಚೀಲದಲ್ಲಿ ಹಾಕಿಕೊಂಡು, ಕೈಯಲ್ಲಿ ತಟ್ಟೆ ತೊಳೆಯುವ ಚಿಂದಿ ಹಿಡಿದು, ಅವರು ಜೀವನದ ಪಾಠವನ್ನು ಕಲಿಯುತ್ತಿದ್ದರು. ಮಿಲ್ಲಿನಲ್ಲಿ ಆ ಮರದ ಸದ್ದು, ಧೂಳು, ಬೆವರು — ಇವೆಲ್ಲದರ  ನಡುವೆ ಬದುಕು ಸಾಗುತ್ತಿತ್ತು. ಕಣ್ಣು ತುಂಬಾ ನಿದ್ದೆ, ಮನಸ್ಸು ತುಂಬಾ ಕನಸು. “ಒಂದು ದಿನ ಒಳ್ಳೆಯ ಕೆಲಸ ಸಿಗಬೇಕು” ಅನ್ನೋ ಕನಸು ಮಾತ್ರ ಅವರಿಗೆ ದಾರಿ ತೋರಿಸುತ್ತಿತ್ತು. ಆ ಕನಸು ದೇವರ ಕೃಪೆಯಿಂದ ಸಾಕಾರವಾಯಿತು. ಸರಕಾರಿ ಕೆಲಸ. ದೊಡ್ಡ ಹುದ್ದೆ ಅಲ್ಲ. ಆದರೆ ಸ್ಥಿರ ಸಂಬಳ, ಗೌರವ. ಮೊದಲ ತಿಂಗಳ ಸಂಬಳ ಬಂದ ದಿನ, ಮನೆಗೆ ಹೊಸ ತಟ್ಟೆ, ಮನೆಗೆ ಉಪಯೋಗವಾಗುವ ವಸ್ತುಗಳು, ತೋಟಕ್ಕೆ ಗಿಡಗಳು, ಅಮ್ಮನ ಕೈಗೆ ಒಂದು ಸೀರೆ —ಅದೇ ಅವರ ಸಂತೋಷ.

*** 

ಅದೇ ಸಮಯದಲ್ಲಿ ಬಂದ ಒಳ್ಳೆಯ ಸಂಬಂಧ, ಪಲ್ಲವಿ. ಸೌಮ್ಯ ಸ್ವಭಾವದ, ಹೊಂದಾಣಿಕೆಯ ಹೆಣ್ಣು. ಸರಕಾರಿ ಕೆಲಸ, ಸುಂದರವಾದ ಮುಖ, ಗಟ್ಟಿಮುಟ್ಟಾದ ಮೈಕಟ್ಟು, ಜವಾಬ್ದಾರಿಯುತ ನಡೆ ನುಡಿ, ಈ ಎಲ್ಲ ಗುಣಗಳಿಂದಾಗಿ ಎಲ್ಲರಿಗೂ ಶರ್ಮ ಅವರು ಇಷ್ಟವಾದರು. ಸಂಬಂಧ ಒಪ್ಪಿಗೆಯಾಗಿ, ಮದುವೆಯಾದ ಮೇಲೆ ಅವರ  ಜೀವನ ನಿಧಾನವಾಗಿ ನೆಮ್ಮದಿಯ ಹಾದಿ ಹಿಡಿಯಿತು. ಪುಟ್ಟ ಮಗಳು ಹುಟ್ಟಿದಾಗ, ಶರ್ಮರ ಕಣ್ಣುಗಳಲ್ಲಿ ಮಿಂಚಿದ ಸಂತೋಷವನ್ನು ಯಾರೂ ಮರೆತಿರಲಿಲ್ಲ. ಮಗಳು ರಮ್ಯಾ ಪಲ್ಲವಿಯ ಪ್ರತಿಬಿಂಬದಂತೆ ಕಾಣುತ್ತಿದ್ದಳು. ಆ ವರ್ಷವೇ, ಕೂಡು ಕುಟುಂಬವಾಗಿದ್ದ ಅವರ ಕುಟುಂಬ ಬೇರೆಬೇರೆಯಾಯಿತು. ದೊಡ್ಡ ಅಣ್ಣ ಮನೆತನದ ಮನೆಯಲ್ಲಿದ್ದರೆ, ಚಿಕ್ಕ ಅಣ್ಣ ಇನ್ನೊಂದು ಮನೆ ಕಟ್ಟಿಸಿ, ಸ್ವಂತ ದಿನಸಿ ಅಂಗಡಿ ಒಂದನ್ನು ಇಟ್ಟು, ಸ್ವಂತ ಕುಟುಂಬ ರೂಪಿಸಿಕೊಂಡರು. ಹಾಗಿರುವಾಗ, ಒಲ್ಲದ ಮನಸ್ಸಿನಲ್ಲಿಯೇ, ಶರ್ಮರೂ ಕೂಡಾ ತಮ್ಮ ಸ್ವಂತ ದುಡ್ಡಿನಲ್ಲಿ ಮನೆಯೊಂದನ್ನು ಕಟ್ಟಿಸಿ, ಬೇರೆ ಕುಳಿತರು. ಕೂಡು ಕುಟುಂಬದಲ್ಲಿದ್ದ ಅವರು ಈಗ ಮೂರು ಜನರ ಪುಟ್ಟ ಕುಟುಂಬವಾಗಿ ಬದಲಾದರು. ಆದರೂ ತಮ್ಮ ಪುಟ್ಟದಾದ ಸಂಸಾರದಲ್ಲಿ ಸಂತೋಷದಿಂದ ಕಾಲ ಕಳೆಯುತ್ತಿದ್ದರು. 

ಆದರೆ ಅವರ ಸಂತೋಷ ದೇವರಿಗೆ ಹೆಚ್ಚು ದಿನ ಇಷ್ಟವಾಗಲಿಲ್ಲವೇನೋ. ಮುಂದಿನ ವರ್ಷವೇ, ಎರಡನೇ ಹೆರಿಗೆಯ ಸಮಯದಲ್ಲಿ ಪಲ್ಲವಿ ಕಾಮಾಲೆ ರೋಗಕ್ಕೆ  ತುತ್ತಾಗಿ ಜೀವ ಕಳೆದುಕೊಂಡಳು. ಶರ್ಮರಿಗೆ ಲೋಕವೇ ಕತ್ತಲಾಗಿತ್ತು. ಎರಡು ವರ್ಷದ ಆ ಪುಟ್ಟ ಮಗು ರಮ್ಯಾಳನ್ನು  ಕೈಯಲ್ಲಿ ಹಿಡಿದುಕೊಂಡಾಗ, “ನಾನು ಇದಕ್ಕೆ ಅಪ್ಪ ಅಮ್ಮ - ಎರಡೂ  ಆಗಬೇಕಾ?” ಅನ್ನೋ ಪ್ರಶ್ನೆ ಅವರನ್ನು ಕಾಡುತ್ತಿತ್ತು. ಎರಡು ವರ್ಷದ ಮಗಳು ರಮ್ಯಾಳನ್ನು ಎದೆಗೆ ಒತ್ತಿಕೊಂಡು ಶರ್ಮಾರು  ಅತ್ತದ್ದು ಯಾರಿಗೂ ಕಾಣಲಿಲ್ಲ—ಅವರ ಕಣ್ಣೀರು ಒಳಗೇ ಹರಿಯಿತು.

*** 

ಆ ಸಮಯದಲ್ಲೇ ಒಂದು ವಿಚಿತ್ರ ಘಟನೆ ನಡೆಯಿತು. ರಮ್ಯಾ ತನ್ನ ಚಿಕ್ಕಮ್ಮ ಜಾನಕಿಯನ್ನು “ಅಮ್ಮ” ಎಂದು ಕರೆಯಲು ಶುರುಮಾಡಿದಳು. ಅದು ಒಮ್ಮೆ ಅಲ್ಲ, ಪ್ರತಿದಿನ. ಆ ಪದ ಜಾನಕಿಯ ಹೃದಯವನ್ನೇ ಬದಲಾಯಿಸಿತು. ಹಿರಿಯರ ಮಾತಿನಂತೆ, ಸಮಾಜದ ನಿರೀಕ್ಷೆಯಂತೆ, ಜಾನಕಿ ಶರ್ಮರ ಜೀವನಕ್ಕೆ ಕಾಲಿಟ್ಟಳು — ತನ್ನ ಬದುಕಿಗಿಂತ ಆ ಪುಟ್ಟ ಮಗುವಿನ ಬದುಕು ಮುಖ್ಯ ಎಂದುಕೊಂಡು. . ಆ ಮದುವೆ ಒಬ್ಬ ಹೆಣ್ಣಿನ ತ್ಯಾಗ ಮಾತ್ರವಲ್ಲ — ಒಬ್ಬ ಮಗುವಿನ ಬದುಕಿಗೆ ಹೊಸ ಉಸಿರು. ಜಾನಕಿ ಕಾಲಿಟ್ಟ ನಂತರ ಶರ್ಮಾರ ಮನೆಗೆ ಬೆಳಕು ಬಂತು.

ಜಾನಕಿ ಬಂದ ಮೇಲೆ ಶರ್ಮರ ಬದುಕು ಸುಗಮವಾಗಿ ಸಾಗಿತು. ಇಬ್ಬರಿಗೂ ಸರಕಾರಿ ಕೆಲಸ. ಶ್ರಮ, ಶಿಸ್ತು, ಪ್ರಾಮಾಣಿಕತೆ—ಇವುಗಳೇ ಅವರ ಮನೆತನದ ಅಡಿಪಾಯ. ಜಾನಕಿ ರಮ್ಯಾಳನ್ನು “ಮಲತಾಯಿ” ಎಂದಲ್ಲ, ತನ್ನ ಉಸಿರಿನ ಭಾಗವೆಂದು ನೋಡಿದಳು. ಆ ಪ್ರೀತಿ ನಂತರ ಹುಟ್ಟಿದ ಕೃಷ್ಣ, ಸೌಮ್ಯರಿಗೂ ಹಂಚಿತು. ಮೂರು ಮಕ್ಕಳು—ಒಂದೇ ತಾಯಿಯ ಮಕ್ಕಳೆಂಬಂತೆ ಬೆಳೆದರು.

ಊರಿನ ಜನರು ಹೇಳುತ್ತಿದ್ದರು: “ಇವರ ಮಕ್ಕಳನ್ನ ನೋಡಿ ಕಲಿಯಬೇಕು. ರಕ್ತ ಬೇರೆ ಆದ್ರೂ ಮನಸ್ಸು ಒಂದೇ.”

*** 

ಶರ್ಮಾ ಅವರು ತುಂಬಾ ದೂರದೃಷ್ಟಿತ್ವ ಹೊಂದಿದ ವ್ಯಕ್ತಿಯಾದ ಕಾರಣ ಅವರ ದೃಷ್ಟಿ ಅಷ್ಟಕ್ಕೆ ನಿಂತಿರಲಿಲ್ಲ. “ನಮ್ಮ ಊರಿನ ಮಕ್ಕಳು ದೂರದ ಆಂಗ್ಲ ಮಾಧ್ಯಮ ಶಾಲೆಗೆ ಹೋಗಬೇಕಾ?” ಅನ್ನೋ ಪ್ರಶ್ನೆ ಅವರನ್ನು ಕಾಡಿತು. ನಮ್ಮ ಊರಿನಲ್ಲಿಯೇ ಒಂದು ಆಂಗ್ಲ ಮಾಧ್ಯಮ ಶಾಲೆ ನಿರ್ಮಾಣವಾಗಬೇಕು ಎಂದುಕೊಂಡು, ತಮ್ಮ ಮನೆಯ ಒಂದು ಭಾಗದಲ್ಲೇ, ಎರಡು ಶಿಕ್ಷಕಿಯರ ಜೊತೆ ಸೇರಿ, ಶಾಲೆ ಆರಂಭಿಸಿದರು. ಮೊದಲ ವರ್ಷ ಕೇವಲ ಹತ್ತು ಮಕ್ಕಳು. ಎರಡನೇ ವರ್ಷ ಐವತ್ತು. ನಂತರ ನೂರು. ಹೀಗೆ ಶಾಲೆ ಬೆಳೆಯುತ್ತಿತ್ತು. ಶಾಲೆಯ ಹೆಸರೂ ಬೆಳೆಯಿತು. ಕ್ರಮೇಣ ಮಕ್ಕಳು ಜಾಸ್ತಿ ಆದಂತೆ, ಮನೆಯ ಆ ಪುಟ್ಟ ಜಾಗ ಸಾಲಲಿಲ್ಲ. ಪಿತ್ರಾರ್ಜಿತ ಆಸ್ತಿ ಹಂಚಿಕೆಯ ಸಮಯದಲ್ಲಿ, ದಾರಿ ಇಲ್ಲದ ಜಾಗ ಒಂದನ್ನು ಶರ್ಮರಿಗೆ ಕೊಟ್ಟಿದ್ದರು. ಆಗ ಅವರು ವಿರೋಧಿಸಿರಲಿಲ್ಲ. “ನನಗೆ ಕೆಲಸಕ್ಕೆ ಬರುತ್ತದೆ” ಎಂದು ಪಿತ್ರಾರ್ಜಿತವಾಗಿ ದೊರೆತ ದಾರಿ ಇಲ್ಲದ ಜಾಗವನ್ನು ಸಂಪೂರ್ಣ ಮನಸ್ಸಿನಿಂದ ತೆಗೆದುಕೊಂಡಿದ್ದರು. ಮಗಳು ರಮ್ಯಾಳಿಗೆ ಹದಿನೆಂಟು ತುಂಬಿದ ದಿನ ಆ ಜಾಗದ ಅರ್ಧದಷ್ಟನ್ನು ಶಾಲೆಗೆಂದು ದಾನ ಮಾಡಿದರು. ಆಗ ಶಾಲೆಯ ಕಾರಣದಿಂದ ಆ ಜಾಗಕ್ಕೆ ದಾರಿ ಬಂತು. ಶಾಲೆಗೂ ಊರಿಗೂ ದಾರಿ ತೆರೆದಿತು.

ವರ್ಷಗಳು ಉರುಳಿದವು.

ಶಾಲೆ ದೊಡ್ಡದಾಯಿತು. ಹೊಸ ಬೋರ್ಡ್, ಹೊಸ ಟ್ರಸ್ಟ್, ಹೊಸ ಮ್ಯಾನೇಜ್ಮೆಂಟ್. ಶರ್ಮರ ಹೆಸರು ನಿಧಾನವಾಗಿ ದಾಖಲೆಗಳ ಅಂಚಿಗೆ ಸರಿಯಿತು. ಹೊಸ ಮಕ್ಕಳು, ಹೊಸ ಶಿಕ್ಷಕರು—ಯಾರಿಗೂ “ಈ ಶಾಲೆ ಯಾರು ಶುರು ಮಾಡಿದ್ರು?” ಅನ್ನೋ ಪ್ರಶ್ನೆಯೇ ಇರಲಿಲ್ಲ. ಅದು ಅವರಿಗೆ ಗೊತ್ತಿರಬೇಕಾದದ್ದು ಅನ್ನೋ ವಿಷಯಾನೂ ಅವರಿಗೆ ಬೇಡವಾಗಿತ್ತು.  ಶಾಲೆಯಲ್ಲಿ ಕಲಿಯುತ್ತಿರುವವರಿಗೆ, ಕಲಿಸುತ್ತಿರುವವರಿಗೆ, ಮ್ಯಾನೇಜ್ಮೆಂಟ್ ಗೆ ಎಲ್ಲರಿಗೂ ಆ ವಿಷಯ ಅಗತ್ಯವಾದದ್ದು ಎಂದು ಎನಿಸಲಿಲ್ಲವೋ ಏನೋ. 

ಇಂದು ಶರ್ಮರು ವೃದ್ಧರಾಗಿದ್ದರು. ಜಾನಕಿ ಜೊತೆ ವಾಕಿಂಗ್ ಎಂದು ಹೊರಟು, ಶಾಲೆಯ ದಾರಿಯಲ್ಲಿ ನಿಂತು ಶಾಲೆ ಹೇಗೆ ನಡೆಯುತ್ತಿದೆ ಅಂಬುದನ್ನು ನೋಡುತ್ತಿದ್ದರು. ಸಂಜೆ ಸಮಯವಾದ ಕಾರಣ, ಶಾಲೆಯ ಮಕ್ಕಳೆಲ್ಲ ಆಟ ಆಡುತ್ತಿದ್ದರು. ಆಡುತ್ತಿದ್ದ ಮಕ್ಕಳು ಅವರನ್ನು “ಯಾರಪ್ಪಾ?” ಅನ್ನುವ ದೃಷ್ಟಿಯಿಂದ ನೋಡುತ್ತಾರೆ. ಯಾರಿಗೂ ಗೊತ್ತಿಲ್ಲ—ಅವರು ಕೊಟ್ಟಂಥ ಜಾಗವೇ ಒಮ್ಮೆ ಆ ಮಕ್ಕಳ ಶಾಲೆಯ ಮೊದಲ ತರಗತಿ ಆಗಿತ್ತು ಅನ್ನೋದು.

ಹಾಗೆ ದಿನ ಕಳೆದು ಒಂದು ದಿನ ಶಾಲೆಯ ವಾರ್ಷಿಕೋತ್ಸವ ದಿನ. ಮುಖ್ಯ ಅತಿಥಿಗಳು, ಭಾಷಣಗಳು. ಶರ್ಮರು ಜಾನಕಿ ಜೊತೆ ಬಂದು  ಹಿಂಬದಿ ಸಾಲಿನಲ್ಲಿ ಮೌನವಾಗಿ ಕುಳಿತಿದ್ದರು. ಯಾರೂ ಕರೆಯಲಿಲ್ಲ. ಯಾರೂ ಗುರುತಿಸಲಿಲ್ಲ.

ಆದರೆ ಶರ್ಮರು ಬೇಸರಪಡಲಿಲ್ಲ. "ಒಳ್ಳೆಯದು ಮಾಡಿದವರು ಹೆಸರು ಕಳೆದುಕೊಂಡರೆ, ಅದೇ ಅವರ ಸೋಲಾ? ಅಥವಾ, ಹೆಸರು ಇಲ್ಲದೇ ಉಳಿದ ಒಳ್ಳೆಯದೇ ಅವರ ನಿಜವಾದ ಗೆಲುವಾ?"ಆದರೆ ಜಾನಕಿಗೆ ಮಾತ್ರ ಬೇಸರವಾಗಿತ್ತು, ಆದರೂ ಅಷ್ಟೊಂದು ಮಕ್ಕಳನ್ನು ನೋಡುತ್ತಾ ಸಂತೋಷ ಪಡುತ್ತಿದ್ದರು.
ಶರ್ಮರು ಜಾನಕಿಯ ಕೈ ಹಿಡಿದು ನಿಧಾನವಾಗಿ ಹೇಳಿದರು: “ನಾವು ಬೀಜ ಬಿತ್ತಿದ್ದೇವೆ. ಮರ ಬೆಳೆದಿದೆ. ಹಣ್ಣು ಯಾರಿಗೆ ಸಿಗುತ್ತೋ ಅದು ಆ ಭಗವಂತನ ಇಚ್ಛೆ.” ಆ ಮಾತು ಜಾನಕಿಯ ಕಣ್ಣಲ್ಲಿ ನೀರಾಗಿ ಹೊರಬಂತು.


 

***

ಆ ವಾರ್ಷಿಕೋತ್ಸವದ ದಿನ ಮುಗಿದ ಮೇಲೆ, ಶಾಲೆಯ ಆವರಣ ನಿಧಾನವಾಗಿ ಖಾಲಿಯಾಗುತ್ತಿತ್ತು. ಬಣ್ಣದ ಬ್ಯಾನರ್‌ಗಳು ಇನ್ನೂ ತೂಗಾಡುತ್ತಿದ್ದವು. ವೇದಿಕೆಯ ಮೇಲೆ ಹಾಕಿದ್ದ ಹೂವುಗಳು ಒಣಗತೊಡಗಿದ್ದವು. ಮೈಕ್‌ಗಳ ಶಬ್ದ ಮೌನವಾಯಿತು. ಶ್ರೀ ರಾಮ ಶರ್ಮರು ಮತ್ತು ಜಾನಕಿ ನಿಧಾನವಾಗಿ ಎದ್ದು ಹೊರಟರು.

ಅಷ್ಟರಲ್ಲಿ, ಶಾಲೆಯ ಹೊಸ ಪ್ರಾಂಶುಪಾಲರು ಒಬ್ಬ ಶಿಕ್ಷಕರಿಗೆ ಕೇಳಿದರು: “ಆ ಹಳೆಯ ದಂಪತಿ ಯಾರು? ದಿನವಿಡೀ ಹಿಂಬದಿ ಕುಳಿತು ನೋಡ್ತಿದ್ರಲ್ಲ?”

ಶಿಕ್ಷಕಿ ಕ್ಷಣ ಯೋಚಿಸಿ ಹೇಳಿದಳು: “ಗೊತ್ತಿಲ್ಲ ಮೇಡಂ… ಬಹುಶಃ ಹತ್ತಿರದ ಮನೆಗಳ ಯಾರೋ ಹಿರಿಯರು ಇರಬೇಕು.”

ಆ ಮಾತು ಕೇಳಿದ ಕ್ಷಣಕ್ಕೆ, ಜಾನಕಿಯ ಕೈ ಕಂಪಿಸಿತು. ಮನಸ್ಸು ಒಡೆಯಿತು. ಶರ್ಮರು ಒಂದು ಕ್ಷಣ ನಿಂತು ಹಿಂತಿರುಗಿ ನೋಡಿದರು. ವೇದಿಕೆ, ಶಾಲೆಯ ಕಟ್ಟಡ, ಮಕ್ಕಳ ನಗು— ಎಲ್ಲವೂ ಅವರದೇ ದೊರದೃಷ್ಟಿತ್ವದಿಂದ ಹುಟ್ಟಿದ ಕನಸಾಗಿತ್ತು. ಆದರೆ ಇಂದು ಆ ಕನಸುಗಾರನೇ ಅನಾಥನಾಗಿದ್ದ. 

ಅವರು ಏನೂ ಹೇಳಲಿಲ್ಲ. ಹಾಗೆ ತಮ್ಮ ಮನೆಗೆ ಹಿಂದಿರುಗಿದರು. 

*** 

ಮರುದಿನ ಬೆಳಿಗ್ಗೆ, ಶಾಲೆಯ ಆವರಣದಲ್ಲಿ ಗದ್ದಲ. ಪೇಪರ್‌ವಾಲಾ ಬಂದು, “ಇವತ್ತು ನಮ್ಮ ಶಾಲೆಯ ಬಗ್ಗೆ ನ್ಯೂಸ್ ಇದೆ” ಅಂದ. ಎಲ್ಲರೂ ಬೇಗನೆ ನ್ಯೂಸ್ ಪೇಪರ್ ಬಿಡಿಸಿ ನೋಡಿದರು. ಶಾಲೆಯ ಬಗ್ಗೆ ಮುಖ್ಯ ಸುದ್ದಿಯ ಶೀರ್ಷಿಕೆ ಹೀಗೆ ಇತ್ತು:

“ಶಾಲೆ ಸ್ಥಾಪಕನ ಹೆಸರೇ ಮರೆತುಹೋದ ಊರು – ಸಾಮಾಜಿಕ ನಿರ್ಲಕ್ಷ್ಯದ ಮತ್ತೊಂದು ಮುಖ”

ಒಬ್ಬ ಯುವ ಪತ್ರಕರ್ತ, ಊರಿನ ಹಳೆಯ ದಾಖಲೆಗಳನ್ನು ಹುಡುಕಿ, ಶರ್ಮರ ಕಥೆಯನ್ನು ಬರೆದಿದ್ದ. ಶಾಲೆ ಶುರು ಮಾಡಿದ ದಿನದಿಂದ, ಆಸ್ತಿ ದಾನ ಮಾಡಿದ ದಾಖಲೆಗಳವರೆಗೆ—ಎಲ್ಲವೂ ಅಕ್ಷರಗಳಲ್ಲಿ ನಿಂತಿದ್ದವು.

ಶಾಲೆಯ ಮಕ್ಕಳು ಮೊದಲ ಬಾರಿಗೆ ಕೇಳಿದರು: “ನಮ್ಮ ಶಾಲೆಯನ್ನು ಯಾರು ಶುರು ಮಾಡಿದ್ರು?”

ಶಿಕ್ಷಕರಿಗೆ ಉತ್ತರ ಇರಲಿಲ್ಲ.

ಆ ದಿನ ತಮ್ಮ ತಪ್ಪುಗಳ ಅರಿವಾಗಿ, ಶಾಲೆಯಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಿದರು. ಶರ್ಮರನ್ನು ವೇದಿಕೆಗೆ ಕರೆದು ಗೌರವಿಸಲಾಯಿತು. ಶಾಲೆಯ ಬ್ಯಾನರ್ ಮೇಲೆ ಹೊಸ ಸಾಲು ಸೇರಿತು:

“ಸ್ಥಾಪಕರು – ಶ್ರೀ ರಾಮ ಶರ್ಮ”

ಹಸ್ತಾಲಾಪದ ಸಡ್ಡು ಕೇಳಿದಾಗ ಶ್ರೀ ರಾಮ ಶರ್ಮರು ಸುಮ್ಮನೆ ನಕ್ಕರು. ಆದರೆ ಆ ನಗುವಿನಲ್ಲಿ ಗೆಲುವಿನ ಹೆಮ್ಮೆ ಇರಲಿಲ್ಲ. ಕೇವಲ ಒಂದು ಮೃದುವಾದ ನೋವು ಮಾತ್ರ.

ಅವರು ಮೈಕ್ ಹಿಡಿದು ಒಂದೇ ವಾಕ್ಯ ಹೇಳಿದರು: “ಗೌರವ ಬೇಕು ಅಂತ ನಾನು ಶಾಲೆ ಶುರು ಮಾಡಿಲ್ಲ. ಊರಿನ ಸಮಸ್ತ ಜನರ ಉಪಕಾರಕ್ಕೆಂದು ಈ ಶಾಲೆ ನಿರ್ಮಾಣವಾಯಿತು. ಇದು ಊರಿನ ಹಲವಾರು ಮಂದಿಯ ಕಷ್ಟದ ಪ್ರತಿಫಲ. ಬೆಳೆದು ದೊಡ್ಡದಾದ ಮರ ಅದರ ಬೇರನ್ನು ನೆನಪಿಟ್ಟುಕೊಳ್ಳೋದನ್ನು ಕಲಿಯಬೇಕು ಅಂತ ಮಾತ್ರ ನಾನು ಹೇಳಬಲ್ಲೆ.”

ಆ ಮಾತು ಮಕ್ಕಳ ಹೃದಯಕ್ಕೆ ಬಿತ್ತು. ಆದರೆ ಸಮಾಜಕ್ಕೆ?

ಆ ವಾರದ ನಂತರ, ಮತ್ತೆ ಹೊಸ ಸುದ್ದಿಗಳು, ಹೊಸ ವಿಷಯಗಳು. ಶರ್ಮರ ಹೆಸರು ಮತ್ತೆ ನಿಧಾನವಾಗಿ ಹಿನ್ನೋಟಕ್ಕೆ ಸರಿಯತೊಡಗಿತು. ಶರ್ಮರು ಅದನ್ನೂ ನೋಡಿದರು. ಮೌನವಾಗಿ ಒಪ್ಪಿಕೊಂಡರು. ಊರು ಬೆಳೆಯುತ್ತಲೇ ಇತ್ತು. ಶಾಲೆ ಮುಂದುವರಿಯುತ್ತಲೇ ಇತ್ತು. ಆದರೆ, ಒಂದು ಊರು ತನ್ನ ಬೇರುಗಳನ್ನು ನೆನಪಿಟ್ಟುಕೊಳ್ಳುವ ತನಕ, ಆ ಬೆಳವಣಿಗೆ ಕೇವಲ ಕಟ್ಟಡಗಳದ್ದೇ ಹೊರತು ಮೌಲ್ಯಗಳದ್ದಾಗುವುದಿಲ್ಲ ಎಂಬ ಸತ್ಯ ಮತ್ತೆ ಮಣ್ಣಿನಲ್ಲಿ ಮರೆತುಹೋಯಿತು.

ಇದು ಶರ್ಮರ ಕಥೆಯ ಅಂತ್ಯ ಅಲ್ಲ. ಇದು, ಒಳ್ಳೆಯತನವನ್ನು ಉಪಯೋಗಿಸಿ ನೆನಪುಗಳನ್ನು ಮರೆತ ಸಮಾಜದ ಕಥೆ. ಇತಿಹಾಸವನ್ನು ಬರೆಯದ ಸಮಾಜದಲ್ಲಿ, ಒಳ್ಳೆಯವರು ಸದಾ ಮೌನದೊಳಗೆ ಸಮಾಧಿಯಾಗುತ್ತಾರೆ  ಸಮಾಜಕ್ಕೆ ನೆನಪಿಡಲು ಸುಲಭವಾಗಿರೋದು ಹೆಸರುಗಳು ಅಲ್ಲ. ಫಲವನ್ನು ಹಂಚಿಕೊಳ್ಳುವ ಸಮಾಜಕ್ಕೆ, ಬೇರುಗಳನ್ನು ನೆನಪಿಡುವ ಶಿಸ್ತು ಇಲ್ಲ. ಅದಕ್ಕೇ ಮೌಲ್ಯಗಳಿಲ್ಲದ ಕಟ್ಟಡಗಳು ಮಾತ್ರ ಬೆಳೆಯುತ್ತವೆ.

ಇಲ್ಲಿ, ಒಂದು ಪ್ರಶ್ನೆ ಮಾತ್ರ ಉಳಿಯುತ್ತದೆ— " ಒಂದು ಊರು ತನ್ನ ಬೇರುಗಳನ್ನು ಮರೆತರೆ, ಆ ಊರು ಬೆಳೆಯುತ್ತದಾ? ಅಥವಾ ನೆನಪುಗಳಿಲ್ಲದ ಮರವಾಗಿ ಒಣಗುತ್ತದಾ?"

***  

✍🏻 Deepalaxmi Bhat
Mangaluru 

ಗುರುವಾರ, ನವೆಂಬರ್ 20, 2025

ಮಾಯಾಕನ್ನಡಿಯ ಬಿಂಬಗಳು

✍🏻ದೀಪಲಕ್ಷ್ಮಿ ಭಟ್, ಮಂಗಳೂರು

ಈ ಕಥೆ ಇಬ್ಬರು ಅವಳಿ ಜವಳಿ ಮಕ್ಕಳದ್ದು. ಅವರ ಹೆಸರು ಸೃಷ್ಟಿ ಹಾಗೂ ದೃಷ್ಟಿ. ಹೆಸರೇ ಹೇಳುವಂತೆ ಅವರದ್ದು ದೃಷ್ಠಿ ಆಗುವಂಥ ಸೃಷ್ಟಿ - ಅಂದರೆ, ಬೆಣ್ಣೆಯಂಥ ಮೃದುವಾದ ಚರ್ಮ. ಅಪರಿಮಿತ ಸೌಂದರ್ಯ, ಅವರಿಬ್ಬರನ್ನೂ ಮುಟ್ಟಬೇಕೆಂದರೆ, ಕೈಯನ್ನು ಹತ್ತು ಸಲ ತೊಳೆದುಕೊಂಡು ಮುಟ್ಟಬೇಕು ಅನ್ನುವಷ್ಟು ಬೆಳ್ಳಗಿನ ಬಣ್ಣ. ಹೆತ್ತ ತಾಯಿಗೂ ಇಬ್ಬರಲ್ಲಿ ಯಾರು ಸೃಷ್ಟಿ ಯಾರು ದೃಷ್ಟಿ ಅನ್ನೋದು ತಿಳಿಯದಷ್ಟು ಹೋಲಿಕೆ.

ಅಂದು ಮಧ್ಯರಾತ್ರಿಯ ಸಮಯ. ಸೂಜಿ ಬಿದ್ದರೂ ಕೇಳಿಸುವಂಥ ನಿಶ್ಯಬ್ದ ವಾತಾವರಣ. ಅಮಾವಾಸ್ಯೆ ಬೇರೆ. ಬೆಳ್ಳಗಿನ ತಿಳಿಯಾದ ಸುಗಂಧಭರಿತ ಹೊಗೆ ಕೆರೆಯ ಮೆಟ್ಟಿಲಲ್ಲಿ ಹೊನಲಿಡುತ್ತಿತ್ತು. ಊರಿನ ಹೊರವಲಯದಲ್ಲಿದ್ದ ಆ ಕೆರೆಯ ದಡದಲ್ಲಿ ಪುರಾತನವಾದ ಒಂದು ದೇವಾಲಯ. ದೇವಾಲಯದ ಹೆಬ್ಬಾಗಿಲಿನಲ್ಲಿ ಎರಡು ದೊಡ್ಡ ಗಜಸ್ತಂಭ. ದೀಪದಿಂದ ಅಲಂಕರಿಸಿದ ಮಹಾದ್ವಾರ. ಒಳಗಿನಿಂದ "ಟಂಗ್... ಟಂಗ್ ... " ಎಂಬ ಗಂಟೆಯ ನಾದ. ಶಂಖನಾದದ ಧ್ವನಿ ಎಲ್ಲೆಡೆ ಮೊಳಗುತ್ತಿದೆ. ಅಷ್ಟರಲ್ಲಿ "ಅಮ್ಮಾ, ಇಲ್ಲಿ ನೋಡು..." ಅಂತ ದೃಷ್ಟಿ ಜೋರಾಗಿ ಕಿರುಚಿದಳು - " ಇಲ್ಲಿ ನೋಡು. ಆಕಾಶದಲ್ಲಿ ಒಂದೇ ಚಂದ್ರ, ಆದರೆ ಇಲ್ಲಿ ಎರಡು... ಅಲ್ಲ ಮೂರು ಮೂರು ಚಂದ್ರನ ಬಿಂಬ ಕಾಣಿಸುತ್ತಿದೆ..."ಅಂತ ಬೆರಗಾಗಿ ಹೇಳಿದಳು. ನೀರಿನ ತರಂಗಗಳು ಹೋದ ಹಾಗೆ, ಆ ಬಿಂಬಗಳು ಬೆಳೆದು ಕರಗಿದಂತೆ ಕಾಣುತ್ತಿದ್ದವು. ಅಷ್ಟರಲ್ಲಿ ಸೃಷ್ಟಿ, "ಅಮ್ಮಾ, ನೀನು ಈ ಚೀಲ ಹಿಡಿ. ನಾನು ನೀರಿನ ಅಂಚಿಗೆ ಹೋಗಿ ನೋಡುತ್ತೇನೆ." ಅಂತ ಅಂದಳು. ಸೃಷ್ಟಿ ಮೊದಲಿನಿಂದಲೂ ತುಂಟತನ ಹೆಚ್ಚಾಗಿ ಮಾಡುತ್ತಿದ್ದವಳು. ದೃಷ್ಟಿ ತುಂಬಾ ಶಾಂತ ಮನಸ್ಥಿತಿ ಇದ್ದವಳು. ಇಬ್ಬರೂ ವಯಸ್ಸಿಗೆ ಮೀರಿ ಬುದ್ದಿವಂತಿಕೆ ಇದ್ದವರಾದರೂ ಸೃಷ್ಟಿ ಧೈರ್ಯಶಾಲಿ, ದೃಷ್ಟಿ ಏಕಾಂತ ಬಯಸುತ್ತಿದ್ದವಳು. "ಬೇಡ ಸೃಷ್ಟಿ, ಆ ಕಡೆ ಹೋಗಬೇಡ." ಅಂತ ತಾಯಿ ಸುಮಂಗಲ ಸೃಷ್ಟಿಗೆ ಎಚ್ಚರಿಕೆ ನೀಡಿದಳು. ಆದರೆ ಸೃಷ್ಟಿ ಕೇಳಬೇಕಲ್ಲಾ. ನೀರಿನ ಕಡೆಗೆ ಹೋಗಿ, ಆ ಬಿಂಬದ ಮೇಲೆ ಕೈ ಇರಿಸಿದಳು. ಅಷ್ಟರಲ್ಲಿ, ಅವಳ ಪಾದದಡಿ ಇದ್ದ ಮಣ್ಣು ಸರಿದು ನೀರಿನ ಪ್ರವಾಹಕ್ಕೆ ಸಿಲುಕಿದಳು. "ಅಯ್ಯೋ ಸೃಷ್ಟಿ..." ಅಂತ ಸುಮಂಗಲ ಬೊಬ್ಬೆ ಹಾಕಿದ ಕ್ಷಣದಲ್ಲೇ, ದೃಷ್ಟಿಯ ಕೈ ಹಿಡಿದು, ಅವಳನ್ನೂ ಎಳೆದುಕೊಂಡು ಪ್ರವಾಹದಲ್ಲಿ ಇಬ್ಬರೂ ಲೀನವಾದರು. ಸುಮಂಗಲನ ಕೂಗು ಕೇಳಿ ಊರವರೆಲ್ಲರೂ ಓಡಿ ಬಂದು, ಮಕ್ಕಳನ್ನು ಕಾಪಾಡುವ ಪ್ರಯತ್ನ ಶುರುಮಾಡಿದರು.

ಇತ್ತ ಪ್ರವಾಹಕ್ಕೆ ಸಿಲುಕಿದ ಸೃಷ್ಟಿ ಹಾಗೂ ದೃಷ್ಟಿ, ಮಾಯಾಕನ್ನಡಿಯ ಒಳಗೆ ಪ್ರವೇಶಿಸಿದ್ದರು. ಅಲ್ಲಿ ಚಂದ್ರನ ಮೂರು ಪ್ರತಿಬಿಂಬ ಕಂಡ ಹಾಗೆ, ಸೃಷ್ಟಿ ಹಾಗೂ ದೃಷ್ಟಿಯ ಮೂರು ಪ್ರತಿಬಿಂಬಗಳು ಕಾಣಿಸುತ್ತಿದ್ದವು. ಸೃಷ್ಟಿ ಹಾಗೂ ದೃಷ್ಟಿ, ಸೇರಿ ಒಟ್ಟು ಎಂಟು ಹುಡುಗಿಯರಿದ್ದಂತೆ ಭಾಸವಾಗುತ್ತಿತ್ತು. ಅಷ್ಟರಲ್ಲಿ ಆ ಬಿಂಬಗಳು ಮಾತನಾಡಲು ತೊಡಗಿದವು. ನಾನು ಸೃಷ್ಟಿ, ನಾನು ದೃಷ್ಟಿ ಅಂತ ಮೂರೂ ಬಿಂಬಗಳೂ ಹೇಳತೊಡಗಿದವು. ಆ ಮಾಯೆಗೆ ದೃಷ್ಟಿ ಬಲಿ ಆಗುವಂತಿದ್ದರೂ, ಸೃಷ್ಟಿ ಧೈರ್ಯವಂತೆ ಅಲ್ಲಿ ಕಂಡ ಕಬ್ಬಿಣದ ಒಂದು ಕೋಲನ್ನು ತೆಗೆದುಕೊಂಡು ಬೀಸಿದಳು. ಆ ಬಿಂಬಗಳು ಅವರ ಹತ್ತಿರ ಬರದಂತೆ ತಡೆದಳು. ಅಲ್ಲೇ ಇದ್ದ ಒಂದು ಗಿಡದ ಬಿಂಬಗಳು ಕಾಣಿಸಿತು. ಸೃಷ್ಟಿ ದೃಷ್ಟಿಯನ್ನು ಎಚ್ಚರಿಸಿ, ಗಿಡದ ನಿಜ ರೂಪ ಯಾವುದು, ಬಿಂಬ ಯಾವುದು ಎಂಬುದನ್ನು ಗುರುತಿಸಲು ಸೂಚಿಸಿದಳು. ಒಂದು ಕೋನದಲ್ಲಿ ಅದನ್ನು ಗುರುತಿಸಿದ ದೃಷ್ಟಿ, ಬಿಂಬಗಳು ಯಾವುವು ಎಂಬುದನ್ನು ಸೃಷ್ಟಿಗೆ ತಿಳಿಸಿದಳು. ಆಗ ಸೃಷ್ಟಿ ತನ್ನ ಕೈಯಲ್ಲಿದ್ದ ಕೋಲನ್ನು ಬೀಸಿ, ಆ ಮಾಯಾಕನ್ನಡಿಯನ್ನು ಒಡೆದು ಚೂರು ಚೂರು ಮಾಡಿದಳು. ಪುಡಿಪುಡಿಯಾದ ಮಾಯಾಕನ್ನಡಿಯಿಂದ ಆ ಬಿಂಬಗಳು ಮರೆಯಾದವು. ಅಷ್ಟರಲ್ಲಿ ಊರಿನ ಜನರಿಗೆ ಸೃಷ್ಟಿ ಹಾಗೂ ದೃಷ್ಟಿ ಕಂಡುಬಂದರು. ಅವರಿಬ್ಬರನ್ನೂ ಪ್ರವಾಹದಿಂದ ರಕ್ಷಿಸಿ, ದಡಕ್ಕೆ ಕರೆತಂದರು. ಇಬ್ಬರೂ ಪ್ರಜ್ಞೆ ಕಳೆದುಕೊಂಡಿದ್ದರು. ಒಬ್ಬ ಡಾಕ್ಟರ್ ಅಲ್ಲೇ ಇದ್ದ ಕಾರಣ, ಅವರಿಗೆ ಅಗತ್ಯವಾದ ಪ್ರಥಮ ಚಿಕಿತ್ಸೆ ನೀಡಿ ಪ್ರಜ್ಞೆ ಬರುವ ಹಾಗೆ ಮಾಡಿದರು. ಸುಮಂಗಲಾಳಿಗೆ ಹೋದ ಜೀವ ಹಿಂದೆ ಬಂದಂತಾಯಿತು. ಜೋರಾಗಿ ಅಳುತ್ತಾ ತನ್ನ ಇಬ್ಬರೂ ಮಕ್ಕಳನ್ನು ಅಪ್ಪಿ ಹಿಡಿದು, ಮುದ್ದಾಡಿದಳು. ಸುತ್ತಲೂ ನೋಡುತ್ತಿದ್ದ ಊರಿನ ಜನರು ಮಾತ್ರ ಸೃಷ್ಟಿ ಹಾಗೂ ದೃಷ್ಟಿಯ ಅಭಿನ್ನವಾದ ರೂಪ ಕಂಡು ಬೆರಗಾಗಿದ್ದರು.

ಪ್ರಜ್ಞೆ ಬಂದ ಮಕ್ಕಳು ತಮ್ಮ ಕೈಯಲ್ಲಿ ಏನೋ ಭಾರವಾದ ವಸ್ತು ಇದ್ದಂತೆ ಭಾಸವಾಗಿ, ನೋಡಿದರೆ, ಸೃಷ್ಟಿ ಕೈಯಲ್ಲಿ ಹಿತ್ತಾಳೆ ಬಣ್ಣದ ಲೋಹದ ಬಳೆ , ದೃಷ್ಟಿ ಕೈಯಲ್ಲಿ ನೀಲಮಣಿಯಿಂದ ಅಲಂಕರಿಸಿದ ಚಿಕ್ಕದೊಂದು ಕನ್ನಡಿ ಇತ್ತು. ಮತ್ತೆ ದೇಗುಲದಿಂದ ಶಂಖನಾದ ಮೊಳಗಿತು. ಗಂಟೆಗಳೆಲ್ಲ ತಾನಾಗಿಯೇ ಬಡಿಯತೊಡಗಿತು. ದೇಗುಲದ ಗರ್ಭಗುಡಿಯಿಂದ ಸುಂದರವಾದ ಶ್ವೇತವಸ್ತ್ರಧಾರಿ ತಾಯಿ ಗೆಜ್ಜೆನಾದ ಕೂಡಿದ ಹೆಜ್ಜೆಗಳನ್ನಿಡುತ್ತಾ ಕೆರೆಯ ಕಡೆ ಬಂದಳು. ಆ ಮಕ್ಕಳನ್ನು ನೋಡಿ - "ಅಮೃತ-ಮಾಯಾ, ಕನಸು ಹಾಗೂ ನಿಜ - ಇವೆರಡರ ಸಮತೋಲನಕ್ಕೆಂದೇ, ಈ ಮಕ್ಕಳ ಜನ್ಮ ಸೃಷ್ಟಿ ಆಗಿದೆ. "ಇಬ್ಬರಲ್ಲಿ ಒಬ್ಬಳು 'ಕನಸಿನ ರಾಜ್ಯಕ್ಕೆ' ಸೇತುವೆ, ಇನ್ನೊಬ್ಬಳು 'ನಿಜಗಳ ಲೋಕಕ್ಕೆ' ಕನ್ನಡಿ. ನೀರಿನ ರಹಸ್ಯ ನಿಮ್ಮದೇ. ಉಳಿದದ್ದು ಕಾಲ ಹೇಳುತ್ತದೆ," ಎಂದು ಹೇಳುತ್ತಿದ್ದಂತೆ ಆ ತಾಯಿ ರೂಪ ವಸ್ತ್ರದೊಳಗೆ ಕರಗಿ ಮರಳಿನಂತೆ ಮಾಯವಾಯಿತು. ಇದು ಕೇವಲ ಮಕ್ಕಳಿಗೆ ಹಾಗೂ ಮಕ್ಕಳ ತಾಯಿ ಸುಮಂಗಲ, ತಂದೆ ಶಶಿಧರ - ಇವರಿಗೆ ಮಾತ್ರ ಕಂಡು ಕೇಳಿಸಿತ್ತು. "ಇದು ಏನಪ್ಪಾ?" ಎಂದು ಶಶಿಧರ ಬೆರಗಾದ ಬಾಯಿ ತೆರೆದು ನುಡಿದ. ಸುಮಂಗಲ ತಲೆಬಾಗಿ ದೇಗುಲದ ದಿಕ್ಕಿಗೆ ನಮಸ್ಕರಿಸಿದಳು.

ಇಷ್ಟಾದರೂ ಊರಿನ ಜನರು ಮಾತ್ರ , ಮಕ್ಕಳ ಅಭಿನ್ನ ರೂಪ ಕಂಡು ಬೆರಗಾದ ಸ್ಥಿತಿಯಲ್ಲೇ ಇದ್ದರು. "ಇವಳು ಅವಳೋ? ಅವಳು ಇವಳೋ? ಅಂತ ಯೋಚನೆ ಮಾಡುತ್ತಲೇ, ಅಲ್ಲಿಂದ ಎಲ್ಲರೂ ಹಿಂದಿರುಗಿದರು.

 


***

ಅಂದು ಬೆಳಗ್ಗಿನ ಜಾವ ಹಕ್ಕಿಗಳ ಚಿಲಿಪಿಲಿ ನಾದ ಕೇಳಿ ಈದ ದೃಷ್ಟಿ, ಸೃಷ್ಟಿಯನ್ನೂ ಎಬ್ಬಿಸಿ ಸ್ನಾನಕ್ಕೆ ಹೋದಳು. ಅವಳು ಸ್ನಾನ ಮುಗಿಸಿ ಬರುವಷ್ಟರಲ್ಲಿ ಸೃಷ್ಟಿ ಇಬ್ಬರಿಗೂ ಆ ದಿನದ ಕಾಲೇಜು ಬ್ಯಾಗ್ ತಯಾರು ಮಾಡಿಟ್ಟು, ಸ್ನಾನಕ್ಕೆ ಹೋದಳು. ಸೃಷ್ಟಿ ಹೊರಬರುವಷ್ಟರಲ್ಲಿ, ದೃಷ್ಟಿ ತನ್ನ ಹಾಗೂ ಸೃಷ್ಟಿಯ ಬಟ್ಟೆಗಳನ್ನೂ ಇಸ್ತ್ರಿ ಮಾಡಿ ತಯಾರಿಸಿದ್ದಳು. ಹೀಗೆ ಇಬ್ಬರೂ ಒಬ್ಬರಿಗೊಬ್ಬರು ಜೊತೆಗೂಡಿ ಲವಲವಿಕೆಯಿಂದ ಇದ್ದರು. ಇವರ ಒಗ್ಗಟ್ಟಿಗೆ, ಶಶಿಧರ ಹಾಗೂ ಸುಮಂಗಲ ಇಬ್ಬರೂ ಖುಷಿಗೊಂಡಿದ್ದರು.

" ಸೃಷ್ಟಿ - ದೃಷ್ಠಿ , ತಿಂಡಿ ರೆಡಿ ಆಗಿದೆ. ಬೇಗ ಬನ್ನಿ... ಕಾಲೇಜು ಹೋಗೋ ಟೈಮ್ ಆಯ್ತು." ಅಂತ ಸುಮಂಗಲ ಕರೆದಾಗ ಇಬ್ಬರೂ ಬಂದು ತಿಂಡಿ ತಿಂದು ಹೊರಡಲು ತಯಾರಾದರು. "ಇವತ್ತು ಫಸ್ಟ್ ಡೇ. ಬೇಗ ಹೊರಡೋಣ... ಮಿಸ್ ಆಗ್ಬಾರ್ದು" ಅಂತ ಹೇಳ್ತಾ, ಸೃಷ್ಟಿ ಆಕ್ಟಿವಾ ಸ್ಟಾರ್ಟ್ ಮಾಡಿದಳು. "ಬರ್ತೀನಮ್ಮಾ.... ಇವತ್ತು ಕಾಲೇಜಿನಲ್ಲಿ ಕಾವ್ಯ ಸಂಧ್ಯಾ ಇದೆ. ನಾನು ನಿನ್ನೆ ಬರೆದ ಕವನ - "ಮೋಡದ ನೆರಳಿನಲ್ಲಿ ಮಲ್ಲಿಗೆ" ಇದನ್ನು ಹೇಳ್ತೇನೆ" ಅಂತ ಕೂಗಿ ಆಕ್ಟಿವಾದಲ್ಲಿ ಕೂತಳು. ಅದಿಕ್ಕೆ ಉತ್ತರವಾಗಿ ಸುಮಂಗಲ - "ಮಲ್ಲಿಗೆ ಕವನ ಹೇಳು. ಹಾಗೆ ಇವತ್ತು ಸಂಜೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಇದೆ. ಮಲ್ಲಿಗೆ ಹೂವಿನ ಮಾಲೆ ಕಟ್ಟಿ ಬನ್ನಿ" ಅಂದಳು. ಸರಿ ಅನ್ನುತ್ತಾ ಕಾಲೇಜೋಗೆ ಹೋದರು. 

ಅದೇ ಹಿಂದಿನ ವರ್ಷ, ಕಾಲೇಜ್ ಡೇ ಗೆ "ಅವಳೋ ಇವಳೋ?" ಎನ್ನುವ ಒಂದು ನಾಟಕವನ್ನು ಗೌಡ ಸರ್ ಮಾಡಿಸಿದ್ರು. ಎಲ್ಲದರಲ್ಲೂ ಒಂದೇ ನಾಯಕಿ ಇದ್ರೆ, ಈ ನಾಟಕದಲ್ಲಿ ದೃಷಿ ಸೃಷ್ಟಿ ಇಬ್ಬರೂ ನಾಯಕಿಯರಾಗಿದ್ದರು. ಯಾಕಂದ್ರೆ, ಇದು ಡುಯಲ್ ಪರ್ಸನಾಲಿಟಿ ವಿಷಯದ ಕಥೆ ಆಗಿತ್ತು. ಇಬ್ಬರೂ ಒಂದೇ ರೀತಿ ಆದ ಕಾರಣ ಇಬ್ಬರನ್ನೂ ಉಪಯೋಗಿಸಿ ನಾಟಕ ಮಾಡಿಸಿದ್ದರು. ಇದು ತುಂಬಾ ಹೆಸರುವಾಸಿಯಾಗಿ, ಕಾಲೇಜಿಗೂ, ಇವರಿಬ್ಬರಿಗೂ ಹೆಸರು ತಂದಿತ್ತು. 

ಹಾಗೆ ಕಾಲೇಜು ಗೇಟ್ ಮುಟ್ಟಿದ ಕೂಡಲೇ, ಆಕ್ಟಿವಾ ಪಾರ್ಕ್ ಮಾಡಿ ಓರಿಯೆಂಟೇಷನ್ ಪ್ರೋಗ್ರಾಮ್ ಗೆ ಆಡಿಟೋರಿಯಂ ಕಡೆ ನಡೆದರು ದೃಷ್ಟಿ ಹಾಗೂ ಸೃಷ್ಟಿ. ಅಷ್ಟರಲ್ಲಿ ಅವರ ಎದುರಿಗೆ, ಮಾಧವ ಮಂಡಿಯೂರಿ ಕುಳಿತು, "ಸೃಷ್ಟಿ ಅಥವಾ ದೃಷ್ಟಿ ನಿಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ನನ್ನ ಪ್ರೀತಿಯನ್ನು ಸ್ವೀಕರಿಸುವಿರಾ..? ನಿಮ್ಮನ್ನು ಕಂಡರೆ ನನಗೆ ತುಂಬಾ ಇಷ್ಟ. ನನ್ನ ಕೊಳಲಿಗೆ ಸ್ವರವಾಗಿ ಯಾರು ಕೈ ಹಿಡಿಯುವಿರಿ?" ಅಂತ ಕೇಳಿದ. ಮಾಧವ ಕಾಲೇಜಿನಲ್ಲಿ ಅವರಿಗಿಂತ ಸೀನಿಯರ್. ಕೊಳಲು ವಾದನದಲ್ಲಿ ಹೆಸರು ಮಾಡಿದ ಹುಡುಗ. "ಪ್ರೀತಿ ಗೀತಿ ಎಲ್ಲ ಕಲಿಕೆ ಮುಗಿದ ಮೇಲೆ. ನಿನ್ನ ಕಲಿಕೆಗೆ ಗಮನ ಕೊಡು" ಅಂತ ಹೇಳಿ ಇಬ್ಬರೂ ಅಲ್ಲಿಂದ ಓಡಿದರು. 

ಕಾಲೇಜಿನ ಎಲ್ಲ ಮಕ್ಕಳಿಗೂ, ಇವರೆಂದರೆ ಪ್ರೀತಿ. ಎಲ್ಲರ ಜೊತೆ ಲವಲವಿಕೆಯಿಂದ ಬೆರೆತು, ನಗುವನ್ನೇ ತಮ್ಮ ಆಭರಣವಾಗಿಸಿದ್ದರು ಸೃಷ್ಟಿ ದೃಷ್ಟಿ. ಎಲ್ಲರಿಗೂ ಅವರಲ್ಲಿ ಏನು ವ್ಯತ್ಯಾಸ ಇದೆ ಅಂತ ಲೆಕ್ಕ ಹಾಕೋದೇ ಕೆಲಸ ಆಗಿತ್ತು. 

ಅವತ್ತಿನ ಕ್ಲಾಸ್ ಮುಗಿದ ತಕ್ಷಣ, ದೇವಸ್ಥಾನದ ಕಡೆ ಹೋದರು. ಅಲ್ಲಿ ಮಲ್ಲಿಗೆಯ ಮಾಲೆಯನ್ನು ಕಟ್ಟಿ, ಪೂಜೆ ಮುಗಿಯುವವರೆಗೂ ನಿಂತು, ಇನ್ನೇನು ಹೊರಡೋದು ಅನ್ನುವಷ್ಟರಲ್ಲಿ, ಕೆರೆಯ ದಡದಲ್ಲಿ ಯಾರೋ ನಿಂತು ಇವರಿಬ್ಬರನ್ನೂ ಕರೆದ  ಹಾಗೆ ಅನ್ನಿಸಿತು. ಸೃಷ್ಟಿ ಕೂಡಲೇ ಅಲ್ಲಿಗೆ ಹೋದಳು.  ದೃಷ್ಟಿ ಮನಸ್ಸಿಲ್ಲದಿದ್ದರೂ, ಸೃಷ್ಟಿ ಜೊತೆಗೆ ಹೋದಳು. ಕೇಸರಿ ವಸ್ತ್ರಧಾರಿಯಾಗಿದ್ದ ಆ ವೃದ್ಧ, ಕೈಯಲ್ಲಿ ಕಮಂಡಲ ಹಾಗೂ ಜಪಮಾಲೆಯನ್ನು ಹಿಡಿದುಕೊಂಡಿದ್ದ. ಇಬ್ಬರಿಗೂ, "ಕನಸು ಹಾಗೂ ಸತ್ಯದ ನಡುವಿನ ಸಮತೋಲನ ಸರಿಪಡಿಸುವ ಸಮಯ ಬಂದಿದೆ" ಅಂತ ಹೇಳಿ, ನೀರಿನೆಡೆಗೆ ಹೋದರು. ಅಷ್ಟರಲ್ಲಿ ಹಿರಿದಾದ ಬೆಳಕೊಂದು ದೃಷ್ಟಿ ಸೃಷ್ಟಿಯ ಕಣ್ಣಿಗೆ ಪರದೆಯಂತಾಗಿ, ಬೆಳಕು ಸರಿದ ಮೇಲೆ ಆ ವ್ಯಕ್ತಿ ಕಾಣಸಿಗದೇ ಹೋದರು. 

ಮನೆಗೆ ಮರಳಿದ ಸೃಷ್ಟಿ ಹಾಗೂ ದೃಷ್ಟಿ, ಅಮ್ಮನ ಜೊತೆ ದೇವಸ್ಥಾನದಲ್ಲಿ ನಡೆದ ವಿಷಯ ತಿಳಿಸಿದರು. ಸುಮಂಗಲಳಿಗೆ ದೇವಿಯ ಆ ದಿನದ ನುಡಿ ನೆನಪಾಗಿ, "ರಹಸ್ಯಗಳು ಬಯಲಾಗುವ ದಿನ ಬಂತೇನೋ" ಅಂತ ಎದೆ ಝಲ್ ಎಂದಿತು. ಹಾಗೆ ಮಕ್ಕಳ ಕ್ಷೇಮ ವಿಚಾರಿಸಿ, ಮಲಗಲು ಅಣಿಯಾದಳು. 

ಇತ್ತ, ಸೃಷ್ಟಿ ಹಾಗೂ ದೃಷ್ಟಿ ಕಾಲೇಜಿನ ಹೋಂ ವರ್ಕ್ ಎಲ್ಲ ಮುಗಿಸಿ, ಮಲಗಲು ತಯಾರಿ ಮಾಡುತ್ತಿದ್ದರು. ಅಷ್ಟರಲ್ಲಿ, ಹೊರಗಡೆ ಹಿರಿದಾದ ಬೆಳಕೊಂದು ಕಾಣಿಸತೊಡಗಿತು. ಎಂದಿನಂತೆ ಸೃಷ್ಟಿ ಕುತೂಹಲದಿಂದ ಅದರೆಡೆಗೆ ಹೋಗಲು ತಯಾರಾದಳು. ದೃಷ್ಟಿ ಬೇಡ ಅನ್ನುತ್ತಿದಂತೆಯೇ, ದೃಷ್ಟಿಯ ಕೈ ಹಿಡಿದೆಳೆದು, ಸೃಷ್ಟಿ ಹೊರ ಹೋದಳು.  ಆ ಬೆಳಕಿನ ದಾರಿಯುದ್ದಕ್ಕೂ, ಏನೋ ಸ್ವರಗಳು, ಅಂದು ದೇವಿ ಹೇಳಿದ ದೃಷ್ಟಿ ಸೃಷ್ಟಿಯ ಆ ಹೆಸರು, ಅಮೃತಾ - ಮಾಯಾ ಎಂಬ ಕೂಗು ಕೇಳಿಸಿತ್ತಿತ್ತು. ಹಿಂದಿನ ಕೆರೆಯ ಸಾಹಸದ ನಂತರ, ಸೃಷ್ಟಿಯ ಕೈಯಲ್ಲಿದ್ದ ಹಿತ್ತಾಳೆ ಬಳೆ ಹಾಗೂ ದೃಷ್ಟಿಯ ಜೇಬಿನ ನೀಲಿ ಕನ್ನಡಿ — ಇಬ್ಬರಿಗೂ ‘ಸಾಧಾರಣ’ ವಸ್ತುಗಳಾಗಿರಲಿಲ್ಲ. ಪ್ರತಿಕ್ಷಣ ಕೈಯಲ್ಲೇ ಹಿಡಿದುಕೊಂಡು ಹೋಗುತ್ತಿದ್ದರು. ಇಂದು ಅಮಾವಾಸ್ಯೆ ನಂತರದ ಮೊದಲ ಪೌರ್ಣಮಿಯ ರಾತ್ರಿ. ಮಳೆಗಾಲದ ಗಾಳಿ ಇಬ್ಬರ ಮೈಗೂ ಸೋಕುತ್ತಿದ್ದಾಗ, ಚಳಿ ಜೊತೆಗೆ ಆ ಬೆಳಕಿನ ಬಿಸಿ ಅವರಿಬ್ಬರಿಗೂ ಭಾಸವಾಗುತ್ತಿತ್ತು. ಆ ಶಬ್ದಗಳ ನಾದಮಯ ಪರಿಸರದೊಂದಿಗೆ, ವಿಚಿತ್ರ ಸಂಗತಿ ಒಂದಾಯಿತು — ಬಳೆ ತಾನಾಗಿಯೇ ಝೇಂಕರಿಸಿತು. ದೃಷ್ಟಿ ಒದ್ದೆಯಾದ ತನ್ನ ಕೂದಲು ಒರೆಸುತ್ತ ಕನ್ನಡಿಯನ್ನು ನೋಡಿವಷ್ಟರಲ್ಲಿ — ಕನ್ನಡಿ ಮೇಲಿನ ನೀಲಿ ಮಣಿಗಳಿಂದ ಬೆಳಕಿನ ರೇಖೆಯೊಂದು ಹರಿದು, ಸುತ್ತಲೂ ನೀಲವರ್ಣದ ಅಲಂಕಾರ ಕಾಣತೊಡಗಿತು.  “ಸೃಷ್ಟಿ, ನೋಡು!” ಅಂತ ಸೃಷ್ಟಿಯ ಭುಜವನ್ನು ತಟ್ಟಿದಳು ದೃಷ್ಟಿ. ನೋಡುನೋಡುತ್ತಿದ್ದಂತೆಯೇ, ಸೃಷ್ಟಿಯ ಬಳೆಯ ಮೇಲಿನ ಕೆತ್ತನೆಯಲ್ಲಿದ್ದ ಎರಡು ಹಂಸಗಳು ಮುಖಾಮುಖಿಯಾಗಿ, ಆ ನೀಲಿ ಬಣ್ಣದ ರೇಖೆಯನ್ನು ಚುಂಬಿಸಿದಂತೆ ಭಾಸವಾಯಿತು. ಕನ್ನಡಿ ಹಾಗೂ ಬಳೆ ಒಂದಕ್ಕೆ ಒಂದು ಎದುರಾಕ್ಷಿಯಾಗಿ ಬಂದಾಗ, ಮಧ್ಯೆ ಪಾರದರ್ಶಕ ತೆರೆ ತೆರೆದು — “ಕನಸಿನ ಪಯಣದ ಕಮಾನು” ಮಿಡಿಯಿತು.  ದೃಷ್ಟಿ ಸದ್ದೇ ಇಲ್ಲದೆ ಕೈ ಚಾಚಿದಳು; ಸೃಷ್ಟಿ ಆಕೆಯ ಕೈ ಹಿಡಿದಳು. ಒಟ್ಟಿಗೆ ಕಮಾನಿನ ದ್ವಾರದ ಒಳಗೆ ಕಾಲಿಟ್ಟರು. 

***

ಆ ಕ್ಷಣ — ಅವರು ಕಾಲಿಟ್ಟ ನೆಲದ ಮೇಲೆಲ್ಲಾ ಮಲ್ಲಿಗೆ ಹೂವಿನ ಚಾಪೆ, ಬೀಸುತ್ತಿದ್ದ ಆ ತಂಗಾಳಿಯಲ್ಲಿ ಗಂಧದ ಸುವಾಸನೆ, ಮಧ್ಯಾಹ್ನದಂಥ ಸೂರ್ಯನ ಬೆಳಕಿನಲ್ಲಿ ಅವರ ದಾರಿಯುದ್ದಕ್ಕೂ ಹಸಿರು ತೋರಣದ ನೆರಳು. “ರಾಜಕುಮಾರಿಯರೇ, ಬನ್ನಿ.” ಎಂಬ ಸ್ವಾಗತದ ನುಡಿ ಕೇಳಿದೆಡೆ ಸೃಷ್ಟಿ ಹಾಗೂ ದೃಷ್ಟಿ ನೋಡಿದರು. ವಾಸ್ತವ್ಯದ ಲೋಕದಲ್ಲಿ ಕನಸಿನ ಅರಮನೆಯ ಒಳಗೆ ಕಾಲಿಟ್ಟ ಸೃಷ್ಟಿ ಹಾಗೂ ದೃಷ್ಟಿ ಒಂದು ಕ್ಷಣ ಬೆರಗಾದರು. ಒಳಗೆ ಕಾಲಿಟ್ಟವರಿಗೆ ತಿಳಿಯಿತು, ಅದು ಮಲ್ಲಿಗೆ ಹೂವಿನ ಚಾಪೆಯಲ್ಲ, ನಿಜವಾದ ಮಲ್ಲಿಗೆಯ ಬಳ್ಳಿಯೇ, ಚಾಪೆಯಂತೆ ದಾರಿಯುದ್ದಕ್ಕೂ ಹರಡಿ, ಅರಳಿದ ಮಲ್ಲಿಗೆ ಹೂವಿನ ಮೃದುತ್ವ ಕಾಲಿಗೆ ಸೋಕುತ್ತಿತ್ತು. ಮಲ್ಲಿಗೆಯಾ ಸುಗಂಧ ಆಹ್ವಾನಿಸುವಂತಿತ್ತು. ದಾರಿಯುದ್ದಕ್ಕೂ ಸಾಲು ದೀಪಗಳಂತೆ, ನಕ್ಸತ್ರಗಳ ಸಾಲು ಬೆಳಕು ಬೀರಿ ಸ್ವಾಗತ ಕೋರುತ್ತಿತ್ತು. ಗಂಟೆಗಳ ಮೃದುವಾದ ಟಣ್ ಟಣ್ ಲಯಭರಿತ ಸಂಗೀತದಂತ ನಾದ ಎಲ್ಲೆಲ್ಲೂ ಮೊಳಗುತ್ತಿತ್ತು. ಸುತ್ತಲೂ ಶಾಂತಿಯುತ ವಾತಾವರಣವಿದ್ದು, ಆ ಶಾಂತಿಯಲ್ಲಿ ಪ್ರಶಾಂತತೆಯ ತಂಗಾಳಿ ಮೈ ಮನಸ್ಸಿಗೆ ತಂಪೆರೆಯುತ್ತಿತ್ತು. 

ಸೃಷ್ಟಿ  ಕಣ್ತುಂಬಾ ಆ ಕನಸಿನ ಲೋಕವನ್ನು ನೋಡಿ ಆನಂದಿಸುತ್ತಾ, "ದೃಷ್ಟಿ, ಇದು ಕನಸಿನ ಲೋಕವಾದರೂ ಎಷ್ಟೊಂದು ಸ್ವಚ್ಛವಾಗಿ, ಸುಗಂಧಭರಿತ ಗಾಳಿ ಮೈಗೆ ಸೋಕುತ್ತಿದೆ. ಅಲ್ಲವೇ?" ಅಂತ ದೃಷ್ಟಿಯ ಕೈ ಹಿಡಿಯುತ್ತಾ ಹೇಳಿದಳು. "ಹೌದು, ನಮ್ಮ ಲೋಕದಲ್ಲಿ ಫೈವ್ ಸ್ಟಾರ್ ಹೋಟೆಲ್'ಗಳೂ ಇಷ್ಟೊಂದು ಸ್ವಚ್ಛವಾಗಿರೋದಿಲ್ಲ - ಇರು. ಸರಿಯಾಗಿ ಕಿವಿಗೊಟ್ಟು ಕೇಳಿಸಿಕೋ, ಇಲ್ಲಿನ ಗಾಳಿಯಲ್ಲೂ ಏನೋ ಮಾತುಗಳು ಕೇಳಿಸುತ್ತಿವೆ. ಅಮೃತಾ, ಮಾಯಾ ಅಂತ ಕರೆದಂತೆ ಕೇಳಿಸುತ್ತಿದೆ...." ಅಂದಳು. ಅಷ್ಟರಲ್ಲಿ ಬಲಗಡೆಯ ಗೋಡೆ ಆವಿಯಾದಂತೆ, ಒಂದು ಕನ್ನಡಿ ಗೋಚರಿಸಿತು. ಆ ಕನ್ನಡಿಯು ಚಿನ್ನದಲ್ಲಿ ಕಟ್ಟಿದ ನೀಲಿ ಕಲ್ಲುಗಳ ಚೌಕಟ್ಟಿನಿಂದ ಅಲಂಕೃತವಾಗಿ ತುಂಬಾ ಸುಂದರವಾಗಿತ್ತು. ಅವರ ಬಿಂಬ ಅದರಲ್ಲಿ ಕಾಣುತ್ತಿದ್ದಂತೆ, ಆ ಬಿಂಬಗಳು ಗುಣಿಕರಿಸಿ ಒಟ್ಟಾಗಿ ಎಂಟು ಬಿಂಬಗಳು ಕಾಣಿಸತೊಡಗಿತು. "ಅಯ್ಯಯ್ಯೋ ಇಲ್ಲಿಯಾದರೂ ನಮಗೆ ಈ ವಿಷಯದಿಂದ ರಜೆ ಬೇಕಪ್ಪಾ!" ಅಂತ ಹೇಳಿ ಸೃಷ್ಟಿ ಮುಂದೆ ಹೋಗಲು ಪ್ರಯತ್ನಿಸಿದಳು. ಆಗ ಅಲ್ಲಿ ಇದ್ದ ಮಲ್ಲಿಗೆ ಬಳ್ಳಿ ಅವಳ ಕಾಲಿಗೆ ಸಂಕೋಲೆಯಾಗಿ ಬಿಗಿದು ಅಲ್ಲಿಂದ ಮುಂದೆ ಹೋಗದಂತೆ ಮಾಡಿತು. "ದೃಷ್ಟಿ..." ಅಂತ ಹೇಳುತ್ತಿದ್ದಂತೆ ಗೆಜ್ಜೆಯ ನಾದ ಝೇಂಕರಿಸಿತು. ನೋಡುತ್ತಿದ್ದಂತೆಯೇ, ಆ ಕನ್ನಡಿಯ ಪಕ್ಕದಲ್ಲಿ ಗರ್ಭಗುಡಿಯಲ್ಲಿ ಕಂಡಿದ್ದ ಶ್ವೇತವಸ್ತ್ರಧಾರಿ ತಾಯಿ ಸ್ವರೂಪ ನಿಂತಿದ್ದಳು. ಈಗ ತುಂಬ ಸ್ಪಷ್ಟವಾಗಿ ಆ ಸುಂದರವಾದ ದೇವಿ ರೂಪ ಸೃಷ್ಟಿ ಹಾಗೂ ದೃಷ್ಟಿಗೆ ಗೋಚರಿಸಿತು. "ಅಮೃತ - ಮಾಯಾ, ನೀವಿಬ್ಬರೂ ಒಂದೇ ಆತ್ಮ, ಎರಡು ಜೀವ. ಆತ್ಮಾವಲೋಕನಕ್ಕಿರುವ ಎರಡು ದಾರಿಗಳು. ಇಂದು ನೀವು ಈ ಕನಸಿನ ಲೋಕದ ಕದ ತೆರೆಯದಿದ್ದರೆ, ಈ ಕೆರೆಯ ಲೋಕ ಇಂದಿಗೆ ಕೊನೆಯಾಗುತ್ತಿತ್ತು. ಜನರೆಲ್ಲರೂ ಮಾಯೆಯ ಒಳಗೆ ಸಿಲುಕಿ ವಾಸ್ತವ್ಯದ ಅರಿವಿಲ್ಲದವರಾಗುತ್ತಿದ್ದರು." ದೇವಿ ಹೇಳುತ್ತಿದ್ದಂತೆಯೇ, ದೃಷ್ಟಿ ಕೈಯಲ್ಲಿದ್ದ ನೀಲಿ ಕನ್ನಡಿ ಬಿಸಿಯಾಗತೊಡಗಿತು. ಸೃಷ್ಟಿ ಕೈಯ ಬಳೆ  ಝೇಂಕರಿಸಿತು. ದೇವಿ ಮುಂದುವರಿಸುತ್ತಾ, "ಕನಸಿಗೂ, ವಾಸ್ತವ್ಯಕ್ಕೂ ಸಮತೋಲನವಿರಬೇಕು. ನೀವಿಬ್ಬರೂ ನಿಮ್ಮೊಳಗಿನ ಸತ್ಯವನ್ನು ಬೇರ್ಪಡಿಸಿ ನೋಡಬೇಕು. ಯಾವುದು ಕನಸು, ಯಾವುದು ನಿಜ—ಇದು ನಿಮ್ಮಿಬ್ಬರಿಗೂ ಗೊತ್ತಿದ್ದರೂ, ನಿಮ್ಮ ಮೇಲೆ ಲೋಕಕ್ಕೆ ಸಂಶಯವಾಗುತ್ತದೆ. ಅದನ್ನು ನೀವೇ ಪರಿಹರಿಸಬೇಕು." ಹೀಗೆ ಹೇಳಿದ ದೇವಿ ಮಾಯವಾದೊಡನೆ, ಮಂಜಿನ ಒಳಗಿಂದ ಹತ್ತಾರು ಪ್ರತಿಬಿಂಬಗಳು ಹೊರಬಂದವು. "ನಾನೇ ಸೃಷ್ಟಿ, ನಾನೇ ದೃಷ್ಟಿ..." ಎನ್ನುತ್ತಾ ಮತ್ತೆ ಗೊಂದಲ ಸೃಷ್ಟಿ ಮಾಡಹೊರಟವು. ಸೃಷ್ಟಿ ಧ್ರೀತಿಗೆಡದೆ, ನೀಲಿ ಕನ್ನಡಿಯಿಂದ ನೀಲವರ್ಣದ ಬೆಳಕಿಂದ ಬಳ್ಳಿ ಚಂದ್ರನ ಬೆಳಕನ್ನು ಪ್ರತಿಬಿಂಬಿಸುತ್ತಾ, ಆ ಪ್ರತಿಬಿಂಬಗಳ ಸುತ್ತ ಹಗ್ಗದಂತೆ ಸುತ್ತಿಕೊಂಡಿತು. ಬೆಳಕು ಬೀಳುತ್ತಲೇ ಆ ಪ್ರತಿಬಿಂಬಗಳು ಮಾಯವಾದವು. ಗೊಂದಲ ಕಳೆಯಿತು. ಕನಸಿನ ಲೋಕದ ಬಾಗಿಲು ತೆರೆಯಿತು. 

ವಾಸ್ತವ್ಯಕ್ಕೆ ಕಾಲಿಡುತ್ತಲೇ, ಸೃಷ್ಟಿ ಹಾಗೂ ದೃಷ್ಟಿ ಕೈ ಕೈ ಹಿಡಿದು ಓಡಿದರು. ಪೌರ್ಣಮಿಯ ಬೆಳಕು, ಮಳೆಗಾಲದ ಗಾಳಿ—ಮನೆ ಹಿಂದೆ ಇರುವ ಹಿತ್ತಿಲು. ಆದರೆ ಮನೆಯಲ್ಲಿ ಶಾಂತಿ ಇರಲಿಲ್ಲ.

*** 

ಸುಮಂಗಲ ಅಳುತ್ತಾ, ಶಶಿಧರ ಕೋಪದಿಂದ ಮನೆಬಾಗಿಲ ಬಳಿ ನಿಂತಿದ್ದರು. ಪಕ್ಕದ ಮನೆಯವರು, ಪೊಲೀಸರೊಬ್ಬರು, ಊರಿನ ಜನ—ಎಲ್ಲ ಸೇರಿದ್ದರು. ಮನೆ ಒಳಗೆ ಕಾಲಿಡುತ್ತಿದ್ದಂತೆ, ಎಲ್ಲರೂ "ಇವರೇ ಇವರೇ... ಹಿಡಿಯಿರಿ ಅವರನ್ನು" ಎಂದರು. ಸೃಷ್ಟಿ ಗಲಿಬಿಲಿಯಿಂದ "ಏನಾಯ್ತು" ಎಂದು ಕೇಳಿದಾಗ, ಪೊಲೀಸರು "ಕಾಲೇಜಿನಲ್ಲಿ ಹಾಗೂ ದೇವಸ್ಥಾನದಲ್ಲಿ ಕಳ್ಳತನ ಆಗಿದೆ. ಸಿಸಿಟಿವಿ ನೋಡಿದರೆ, ಎರಡೂ ಕಡೆ ನೀವೇ ಕಾಣುತ್ತಿದ್ದಿರಿ, ನಿಜ ಹೇಳಿ ಈ ರಾತ್ರಿ ಕಳ್ಳತನ ಮಾಡಿದ ವಸ್ತುಗಳೆಲ್ಲಿ?" ಎಂದರು. ಅಷ್ಟರಲ್ಲಿ ದೃಷ್ಟಿ ಮುಂದೆ ಬಂದು, ಧೈರ್ಯ ತುಂಬಿಕೊಂಡು, “ನಾವು ಮನೆಯಲ್ಲಿರಲಿಲ್ಲ. ಆದರೆ ತಪ್ಪು ಮಾಡಿಲ್ಲ.” ಅಂದಳು.  ಸೃಷ್ಟಿ ಎಂದಿನಂತೆ ಧೈರ್ಯವಾಗಿ, “ನಮ್ಮ ಮುಖ ತೊಟ್ಟು ಯಾರೋ ಆಟ ಆಡ್ತಿದ್ದಾರೆ. ನಾವು ಅದನ್ನು ಹಿಡಿದು ತೋರಿಸ್ತೀವಿ.”  ಪೊಲೀಸ್ ವ್ಯಂಗ್ಯವಾಗಿ: “ಸಿಸಿಟಿವಿ ಯಲ್ಲಿ ಅಷ್ಟು ಚೆನ್ನಾಗಿ ಕಂಡಿದೆ. ಕಳ್ಳತನ ಮಾಡಿದ್ದಲ್ಲದೆ, ಸುಳ್ಳು ವಾದ ಬೇರೆ. ನೀವು ಹೇಳಿದಂತೆ ನೀವು ಅಲ್ಲವಾದಲ್ಲಿ ಯಾರು ಅವರನ್ನು  ಹಿಡಿದು ತೋರಿಸಿ. ಇಲ್ಲ ಅಂದ್ರೆ… ನಿಮ್ಮಿಬ್ಬರನ್ನೂ ಸ್ಟೇಶನ್ ಗೆ ಕರೆದುಕೊಂಡು ಹೋಗ್ತೀವಿ.” ಅಂದ.

ಸೃಷ್ಟಿ ತಕ್ಷಣ ದೃಷ್ಟಿಯ ಕೈ ಹಿಡಿದು, “ನಮ್ಮ ಪುರಾವೆ ನಮ್ಮ ಕೈಯಲ್ಲೇ ಇದೆ.” ಎಂದು ಬಳೆಯನ್ನು ಎತ್ತಿ ತೋರಿಸಿದಳು. “ಬಳೆ? ಬಳೆಯಿಂದ  ಏನು ಸಾಬೀತು ಮಾಡುವಿರಿ?” ಎಂದ ಪೊಲೀಸ್. “ಹೌದು. ಇದು ಕೇವಲ ಬಳೆ ಅಲ್ಲ. ಇದು ಸತ್ಯಕ್ಕೆ ಗಂಟೆ.” ಅಷ್ಟರಲ್ಲಿ ದೃಷ್ಟಿ ತನ್ನ ನೀಲಿ ಕನ್ನಡಿಯನ್ನು ತೆಗೆದು, “ಇದು ನಿಜಕ್ಕೆ ಕನ್ನಡಿ. ಬನ್ನಿ ನಮ್ಮ ಜೊತೆ” ಅಂತ ಹೇಳಿ ಹೊರಗಡೆ ಚಂದ್ರನ ಬಿಂಬದೆಡೆ ಕರೆದುಕೊಂಡು ಹೋದರು. ದೃಷ್ಟಿ ತನ್ನ ಕನ್ನಡಿಯಿಂದ ಚಂದ್ರನ ಬೆಳಕಿನ ಬಿಂಬವನ್ನು ಸೃಷ್ಟಿಯ ಬಳೆಯೆಡೆ ಬೀರಿದಳು. ಅಷ್ಟರಲ್ಲಿ ಬಳೆ ಜೋರಾಗಿ ಝೇಂಕರಿಸಿತು. ಬಳೆಯ ಮಧ್ಯದಿಂದ ಬೆಳಕು ಹರಿದು ಮನೆಯ ಗೋಡೆಯ ಮೇಲೆ ದೊಡ್ಡ ದೃಶ್ಯ ಪ್ರೊಜೆಕ್ಟರ್ ಮೂಲಕ ಕಾಣೋ ರೀತಿಯಲ್ಲಿ ಕಾಣಿಸತೊಡಗಿತು. ಆ ದೃಶ್ಯದಲ್ಲಿ — ದೇವಸ್ಥಾನದ ಹುಂಡಿಯ ಬಳಿ ನಿಂತಿದ್ದ ಹುಡುಗಿ. ಅವಳ  ಮುಖ ಸೃಷ್ಟಿಯಂತೇ. ಕಣ್ಣು ದೃಷ್ಟಿಯಂತೇ. ಆದರೆ ಕಣ್ಣ ಮಣಿಯಲ್ಲಿ—ಹಳದಿ ಕಿರಣ. ದೃಷ್ಟಿ ನಿಧಾನವಾಗಿ: “ಇವಳು… ನಾವಲ್ಲ . ನಮ್ಮಂತೆಯೇ ಕಾಣುವ ನಮ್ಮ ಬಿಂಬ. ಕನಸಿನ ರಾಜ್ಯದಿಂದ ತಪ್ಪಿಸಿಕೊಂಡ ನಮ್ಮ ಪ್ರತಿಬಿಂಬ.” ಸೃಷ್ಟಿ ಕೋಪದಿಂದ, “ಈಗ ಆ ಬಿಂಬವನ್ನೇ ಹಿಡಿಯಬೇಕು!”. ಅಷ್ಟರಲ್ಲಿ ಆ ಹುಡುಗಿ ದೇವಸ್ಥಾನದ ಕೆರೆಯ ಕಡೆಗೆ ಹೋದಳು. ಆ ಕ್ಷಣಕ್ಕೆ, ಊರಿನ ಹೊರವಲಯದ ಕೆರೆ ಕಡೆಗೆ ಗಾಳಿ ಹರಿದಂತೆ. ಹಿತ್ತಿಲಿನಲ್ಲಿದ್ದ ಮಲ್ಲಿಗೆ ಹೂಗಳು ಒಮ್ಮೆಲೆ ತಿರುಗಿ ಕೆರೆ ದಿಕ್ಕಿಗೆ ನುಗ್ಗಿದವು. ಸೃಷ್ಟಿ, “ಎಲ್ಲರೂ ನಮ್ಮ ಜೊತೆ ಬನ್ನಿ.” ಅಂದಳು. ಪೊಲೀಸ್ ಕೂಡಲೇ: “ಎಲ್ಲಿಗೆ?”ಎಂದಾಗ, “ನಮ್ಮ ಸತ್ಯವನ್ನು ನಿಮಗೆ ತೋರಿಸೋದಿಕ್ಕೆ.” ಎಂದಳು ಸೃಷ್ಟಿ.

 ***

ಕೆರೆ ದಡಕ್ಕೆ ಬಂದಾಗ, ದೇಗುಲದ ಗಂಟೆಗಳು ತಾನಾಗಿಯೇ ಬಡಿದವು. “ಟಂಗ್… ಟಂಗ್…” ಹಿಂದಿನಂತೆ ಕೆರೆಯ ನೀರಿನಲ್ಲಿ ಮೂರು ಚಂದ್ರಬಿಂಬ ಕಾಣಿಸಿತು. ಆ ಬಿಂಬಗಳ ಮಧ್ಯೆ, ಬಿಳಿ ಹೊಗೆ ಉಬ್ಬಿ, ಆ ‘ಬಿಂಬ ಹುಡುಗಿ’ ನೀರಿನ ಮೇಲೆ ನಿಂತಂತೆ ಕಾಣಿಸಿತು. ಅವಳ ತುಟಿಯಲ್ಲಿ ನಗು: “ನಿಮ್ಮ ಜೀವನ ನಾನು. ನಿಮ್ಮ ಹೆಸರು ನಾನು. ನನ್ನನ್ನು ನಶಿಸಲು ಸಾಧ್ಯವೇ ಇಲ್ಲ” ಎಂದು ನಕ್ಕಳು. ಸೃಷ್ಟಿ: “ನೀನು ಯಾರು?” ಎಂದು ಕೇಳಿದರೆ, ಮತ್ತೆ ಜೋರಾಗಿ ನಕ್ಕು, “ನಾನು ನಿಮ್ಮ ‘ಬಿಂಬ’. ಜನರು ಸದಾ ಗೊಂದಲದಲ್ಲೇ ಇರಬೇಕು. ಇವಳು ಅವಳೋ? ಅವಳು ಇವಳೋ?—ಈ ಪ್ರಶ್ನೆಯಲ್ಲೇ ನನ್ನ ಬದುಕು.” ದೃಷ್ಟಿ ಮೃದುವಾಗಿ: “ನೀನು ಗೊಂದಲ. ಆದರೆ ನಾವು ಸಮತೋಲನ.” ಎಂದು ಹೇಳಿ, ಸೃಷ್ಟಿಯ ಕೈ ಹಿಡಿದಳು. ಸೃಷ್ಟಿ ಕೂಡಲೇ ಬಳೆಯನ್ನು ಎತ್ತಿ, “ಟಂಗ್!” ಎಂದು ಒಮ್ಮೆಲೆ ನೆಲಕ್ಕೆ ಬಡಿದಳು. ಬಾಳೆಯ ಝೇಂಕಾರ ಜೋರಾಗಿ ಗುಡುಗಿತು. ಬಿಂಬ ಹುಡುಗಿ ನಕ್ಕಳು. “ನನಗೆ ನಿಮ್ಮ ಗಂಟೆಯ ಭಯ ಇಲ್ಲ.” ಎಂದಂತೆಯೇ, ದೃಷ್ಟಿ ಕನ್ನಡಿಯನ್ನು ಎತ್ತಿ, ಬಿಂಬ ಹುಡುಗಿಯ ಮುಖಕ್ಕೆ ತೋರಿಸಿದಳು.

ಕನ್ನಡಿಯೊಳಗೆ ಬಿಂಬ ಹುಡುಗಿಯ ಪ್ರತಿಬಿಂಬ ಬಂತು…ಮಂಜಿನೊಳಗಿನ ಕಣ್ಣಿಲ್ಲದ, ಲೋಭದ ನೆರಳು. ಪೊಲೀಸರೂ, ಊರಿನವರೂ ದಿಗ್ಬ್ರಮೆ. “ಇವಳು… ಇವಳು ನಿಜವಾಗಿಯೂ ಕೇವಲ ಬಿಂಬ. ಮನುಷ್ಯೆ  ಅಲ್ಲ!” ಎಂಬ ಕೂಗು.

ಬಿಂಬ ಹುಡುಗಿ ಹಿಂತಿರುಗಿ ಕನ್ನಡಿಯಿಂದ ದೂರ ಓಡಲು ಯತ್ನಿಸಿದಳು. ನೀರಿನೊಳಗೆ ಲೀನವಾಗಲು. ಸೃಷ್ಟಿ ತಕ್ಷಣ ತನ್ನ ಬಳೆಯನ್ನು ಚಲಾಯಿಸಿ—ನೀರಿನ ಮೇಲ್ಮೈಯನ್ನು ಹೊಡೆದಳು. “ಟಂಗ್!” ನೀರಿನ ಏರಿಳಿತಕ್ಕೆ ಬೆಳಕಿನ ಬಿರುಕು ಬಂದು  ಬಿಂಬ ಹುಡುಗಿ ಆ ಬಿರುಕಿನೊಳಗೆ ಸಿಕ್ಕಿಕೊಂಡಳು. ದೃಷ್ಟಿ ತನ್ನ ಕನ್ನಡಿಯನ್ನು ನಿಧಾನವಾಗಿ ನೀರಿನ ಕಡೆ ತಗ್ಗಿಸಿ, ಮೃದುವಾಗಿ ಹೇಳಿದಳು: “ನೀನು ಗೊಂದಲವಾಗಿಯೇ ಉಳಿದರೆ ಲೋಕಕ್ಕೆ ನರಕ. ನೀನು ಕರಗಬೇಕು.” ಕನ್ನಡಿಯ ನೀಲಿ ಬೆಳಕು ಒಂದು ನುಣುಪಾದ ರೇಖೆಯಾಗಿ ಬಿಂಬ ಹುಡುಗಿಯನ್ನು ಹಸಿರು ಬಳ್ಳಿಯಂತೆ  ಸುತ್ತಿಕೊಂಡಿತು. ಬಿಂಬ ಹುಡುಗಿ ಅಳಲು ಪ್ರಾರಂಭಿಸಿದಳು. “ನಾನು ಕೂಡ ಬದುಕಬೇಕು…” ಅಂದಳು. ಆಗ ಸೃಷ್ಟಿ ಮೊದಲ ಬಾರಿಗೆ ಮೃದುವಾಗಿ: “ನೀನು ಬದುಕಬಹುದು. ಆದರೆ ನಿಜವಾಗಿ ಅಲ್ಲ. ಕೇವಲ ಬಿಂಬವಾಗಿ.”

ಅಷ್ಟರಲ್ಲಿ ದೇಗುಲದ ಶ್ವೇತವಸ್ತ್ರ ತಾಯಿ ರೂಪ ಮತ್ತೆ ಕಾಣಿಸಿಕೊಂಡಳು. “ಸೃಷ್ಟಿ, ದೃಷ್ಟಿ, ನೀವು ಸರಿಯಾಗಿ ಬಿಂಬವನ್ನು ಬಂಧಿಸಿದಿರಿ. ಬಿಂಬವನ್ನು ನಾಶಮಾಡೋದು ಸುಲಭ. ಅದಕ್ಕೆ ಜೀವನದಲ್ಲಿ ‘ಸ್ಥಳ’ ಕೊಡೋದು ಕಷ್ಟ. ಮನುಷ್ಯರ ಮನಸ್ಸಿನ ಗೊಂದಲದಿಂದ ಪ್ರತಿಬಿಂಬಗಳು ಹುಟ್ಟುವವು. ಅದನ್ನು ನಾಶ ಮಾಡದೆ, ನಮಗೆ ದಾರಿದೀಪವಾಗುವಂತೆ ಇರಿಸಿದರೆ, ಕನಸಿನ ಲೋಕಕ್ಕೆ ರೆಕ್ಕೆ ಸಿಕ್ಕಿ, ವಾಸ್ತವ್ಯ ಉಜ್ವಲವಾಗುವುದು.” ಎಂದು ತನ್ನ ಕೈ ಚಾಚಿದಳು. ನೀರಿನೊಳಗಿನ ಬಿಂಬ ಹುಡುಗಿ ನಿಧಾನವಾಗಿ ಒಂದು ಸಣ್ಣ ದೀಪವಾಗಿಬಿಟ್ಟಳು—ಮಲ್ಲಿಗೆ ಹೂವಿನಂತೆ ಮೃದುವಾಗಿ ಹೊಳೆಯುವ ದೀಪ. “ಇದು ಇಂದಿನಿಂದ ಕೆರೆಯ ದೀಪ. ಯಾರ ಮನಸ್ಸಿನಲ್ಲಿ ಗೊಂದಲ ಹೆಚ್ಚಾದರೂ, ಈ ದೀಪ ನೆನಪಿಸಲಿದೆ — ಸತ್ಯ ಒಂದು. ರೂಪ ಎರಡು - ಕನಸನ್ನು ಕಳೆದು ವಾಸ್ತವ್ಯವನ್ನು ಬೆಳಗಿಸುವುದೇ ಈ ದೀಪದ ಕರ್ತವ್ಯ.” ಎಂದಳು.

ಅಲ್ಲಿ ನೆರೆದಿದ್ದ ಅಷ್ಟೂ ಜನರಿಗೆ ಸತ್ಯದ ಅರಿವಾಯಿತು. ದೇವಿಗೆ ನಮಸ್ಕರಿಸಿ, ಆ ನಂದಾದೀಪವನ್ನು ಕೆರೆಯ ಬದಿಯಲ್ಲಿ ಸ್ಥಾಪಿಸಿ, ಅದಕ್ಕೆ ನಮಸ್ಕರಿಸಿದರು. ದೇಗುಲಕ್ಕೆ ಹೋದಾಗ ಕಳುವಾಗಿದೆ ಎಂದಿದ್ದ ವಸ್ತುಗಳು ಅದರ ಜಾಗದಲ್ಲೇ ಇದ್ದವು. ಕಾಲೇಜಿನಲ್ಲೂ ಅದೇ ನಡೆದಿತ್ತು. ಎಲ್ಲವೂ ಬಿಂಬದ ಕೆಲಸ ಎನ್ನುವುದು ಸ್ಪಷ್ಟವಾಗಿ ಬಿಟ್ಟಿತು. 

*** 

ಮನೆಗೆ ಮರಳಿದಾಗ, ಊರಿನ ಜನರು ಕಣ್ಣು ತಗ್ಗಿಸಿದರು. ಪೊಲೀಸರು ಸತ್ಯ ದಾಖಲಿಸಿದರು. “ನಿಮ್ಮಿಬ್ಬರದ್ದು ತಪ್ಪಿಲ್ಲ. ನಮ್ಮ ಊರಿನ ಜನರ ಗೊಂದಲವೇ ತಪ್ಪು.” ಎಂದು ಪಿಎಸ್ಐ ಹೇಳಿದ. 

ಸುಮಂಗಲ ಇಬ್ಬರನ್ನೂ ಬಿಗಿಯಾಗಿ ಅಪ್ಪಿಕೊಂಡು, “ನಿಮ್ಮನ್ನು ನಾನು ಹುಟ್ಟಿಸಿದೆ. ಆದರೆ ನಿಮ್ಮೊಳಗಿನ ಶಕ್ತಿ ದೇವಿಯದು.” ಎಂದು ಕಣ್ಣೀರಿಟ್ಟಳು. ಶಶಿಧರ ಹತ್ತಿರ ಬಂದು, ಮೊದಲ ಬಾರಿಗೆ ಮೌನವಾಗಿ ಇಬ್ಬರ ತಲೆಗೆ ಕೈ ಇಟ್ಟು ಆಶೀರ್ವದಿಸಿದ.

ಮಾಧವ ದೂರದಿಂದಲೇ ನೋಡುತ್ತಿದ್ದ. ಅವನ ಕೊಳಲು ಕೈಯಲ್ಲಿತ್ತು. ಸೃಷ್ಟಿ ಕಣ್ಣು ಹೊಡೆದು: “ಪ್ರೀತಿ ಗೀತಿ ಕಲಿಕೆ ನಂತರ ಅಂತ ಹೇಳಿದ್ದೀನಲ್ಲ!”
ದೃಷ್ಟಿ ನಗುತ್ತಾ: “ಆದರೆ ಕೊಳಲಿನ ಸ್ವರಕ್ಕೆ ಮನಸ್ಸು ಒಮ್ಮೆ ಕೇಳಿಸಿಕೊಳ್ಳಬಹುದು.”
ಮಾಧವ ಗಾಬರಿಯಾಗಿ: “ನಾನು… ನಾನು ಯಾರನ್ನೂ ಆಯ್ಕೆ ಮಾಡಿಲ್ಲ. ನಿಮ್ಮಿಬ್ಬರನ್ನೂ ಗೌರವಿಸುತ್ತೇನೆ.”
ಸೃಷ್ಟಿ: “ಅದೇ ಸಾಕು. ಆಯ್ಕೆ ಮಾಡೋದು ನಮ್ಮ ‘ಬಿಂಬ’ ಅಲ್ಲ. ನಮ್ಮ ‘ಬುದ್ಧಿ’.” 

ಸೃಷ್ಟಿಯ ಮಾತಿಗೆ ಎಲ್ಲರೂ ನಕ್ಕರು. ಆ ನಗೆ ಊರಿಗೆ ಹೊಸ ಬೆಳಕು ಕೊಟ್ಟಂತೆ ಆಯ್ತು.

ಆ ರಾತ್ರಿ, ಸೃಷ್ಟಿ ಮತ್ತು ದೃಷ್ಟಿ ತಮ್ಮ ಕೋಣೆಯಲ್ಲಿ ಮಲಗುವ ಮುನ್ನ ಕನ್ನಡಿಯಲ್ಲಿ ನೋಡಿಕೊಂಡರು.
ಕನ್ನಡಿಯೊಳಗೆ ಇಬ್ಬರೂ ಒಂದೇ ಮುಖ—ಆದರೂ ಕಣ್ಣಲ್ಲಿ ಬೇರೆ ಬೇರೆ ಹೊಳಪು.
ಸೃಷ್ಟಿ: “ಇವಳು ಅವಳೋ?”
ದೃಷ್ಟಿ: “ಅವಳು ಇವಳೋ?”
ಎರಡೂ ಸೇರಿ ಒಂದೇ ಉತ್ತರ:
“ನಾವು… ನಾವು.”

ಹೊರಗಡೆ ಕೆರೆಯ ದೀಪ ಮಲ್ಲಿಗೆ ಬಣ್ಣದಲ್ಲಿ ಮಿನುಗುತ್ತಿತ್ತು. ಯಾರಾದರೂ ಕಿವಿಗೊಟ್ಟರೆ, ಅದರೊಳಗೆ ಒಂದು ಸಣ್ಣ ಗಂಟೆಯ ನಾದ ಕೇಳಿಸುತ್ತಿತ್ತು—
“ಟಂಗ್… ಟಂಗ್…”
ಹೀಗೇ ಹೇಳುವಂತೆ:
ಗೊಂದಲ ಪ್ರಶ್ನೆ ಆಗಿರಬಹುದು… ಆದರೆ ಉತ್ತರ ಎಂದಿಗೂ—ಸತ್ಯವೇ.

***

 ✍🏻 Deepalaxmi Bhat
Mangaluru  

ಶನಿವಾರ, ಆಗಸ್ಟ್ 16, 2025

ಪುನರ್ಜನ್ಮ ???

✍🏻ದೀಪಲಕ್ಷ್ಮಿ ಭಟ್, ಮಂಗಳೂರು  

ಸುಮಾರು ಮೂರು ತಿಂಗಳ ಚರ್ಚೆಯ ನಂತರ ಇವತ್ತು ರಜನಿ ಮನೆಯವರೆಲ್ಲರೂ ಜೊತೆ ಸೇರಿ ಕಾಂಬೋಡಿಯಾ ದೇಶಕ್ಕೆ ಪ್ರಯಾಣ ಹೋಗುವ ನಿರ್ಧಾರಕ್ಕೆ ಬಂದಿದ್ದರು. ಮಕ್ಕಳ ಶಾಲೆಗೆ ರಜೆ ಇದ್ದ ಕಾರಣ, ಆಫೀಸಿನಿಂದ ಹತ್ತು ದಿನಗಳ ರಜೆ ತೆಗೆದುಕೊಂಡು, ಮುಂದಿನ ವಾರವೇ ಹೊರಡುವುದೆಂದು ಬೇಕಾದ ಎಲ್ಲ ವ್ಯವಸ್ಥೆಗಳನ್ನು ರಜನಿ - ಕರ್ಣ ದಂಪತಿಗಳು ಮಾಡಿಕೊಂಡರು. ಮಕ್ಕಳಾದ ರಾಖಿ ಮತ್ತು ರಾಣ - ನಾಲ್ಕೂ ಜನ ಟೂರ್ ಹೋಗುವ ನಿರ್ಧಾರ ಮಾಡಿದರು. ಮಕ್ಕಳೋ, ಹೊರದೇಶಕ್ಕೆ ಹೋಗುವ ಉತ್ಸಾಹದಲ್ಲಿ ಹಾರಾಡುತ್ತಿದ್ದರು. ರಜನಿ ಹಾಗೂ ಕರ್ಣ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡುವುದರಲ್ಲಿ ದಿನ ಇಡೀ ಓಡಾಡುತ್ತಿದ್ದರು. ಕರ್ಣ ತನ್ನ ಹೆಂಡತಿ ರಜನಿ ಹಾಗೂ ಮಕ್ಕಳಿಗೆ ಅಲ್ಲಿ ದಿನ ಕಳೆಯಲು ಅಗತ್ಯವಾದ ವಸ್ತುಗಳೇನೆಂಬುದನ್ನು ಲೆಕ್ಕ ಹಾಕಿ  ಲಿಸ್ಟ್‌ ಮಾಡಿ,  ಪಾಸ್ಪೋರ್ಟ್, ಇನ್ಶೂರೆನ್ಸ್, ಡಾಲರ್ ಎಲ್ಲವೂ ಚೆಕ್ ಮಾಡುತ್ತಿದ್ದ. ರಜನಿ ಹೋಟೆಲ್ ವ್ಯವಸ್ಥೆ, ಭಾರತೀಯ ಊಟ ಸಿಗುವ ಜಾಗ, ವೈಫೈ ಸಿಗುವ ಜಾಗ — ಎಲ್ಲವೂ ನೋಟ್ಸ್‌ನಲ್ಲಿ ಬರೆದುಕೊಂಡು ಟಿಕ್ ಮಾಡುತ್ತಾ ಇದ್ದಳು. 

ಆದರೆ, ಕಾಂಬೋಡಿಯಾ ಹೋಗುವ ನಿರ್ಧಾರ ಮಾಡಿದಾಗಿನಿಂದ ರಜನಿಗೆ ಮಾತ್ರ ಒಂದು ರೀತಿಯ ಅಸ್ಪಷ್ಟ ಭಾವನೆ - "ನಾನು ಈ ದೇಶಕ್ಕೆ ಮೊದಲೇ ಹೋಗಿದ್ದೇನೆ" ಅನ್ನುವ ಅನಿಸಿಕೆ. ಟಿಕೆಟ್ ನಲ್ಲಿ ಅಂಕೊರ್ ವಾಟ್ ದೇವಸ್ಥಾನದ ಚಿತ್ರ ನೋಡಿದ ಕ್ಷಣವೇ ಮನಸ್ಸಲ್ಲಿ ಏನೋ ಒಂದು ರೀತಿಯ ವಿಚಿತ್ರ ಅನುಭವಗಳು.  ಕಣ್ಣಲ್ಲಿ ನೀರು ತುಂಬಿ ಬಂದು ಮನಸ್ಸಿಗೆ ಏನೋ ಒಂದು ರೀತಿಯ ದುಃಖದ ಅನುಭವ. ಕಾರಣ  ತಿಳಿಯದೆ, ಮನಸ್ಸಿನಲ್ಲಿಯೇ ಭಾವನೆಗಳನ್ನು ಮುಚ್ಚಿಟ್ಟಳು. ಮಕ್ಕಳನ್ನು ಮಲಗಿಸಲು ಯತ್ನಿಸುವಾಗಲೂ, ಏನೋ ಒಂದು ರೀತಿಯ ವಿಚಿತ್ರ ದುಗುಡ ಮನಸ್ಸಿಗೆ. "ಅಲ್ಲಿ ಯಾರೋ ನನಗಾಗಿ ಕಾಯುತ್ತಿದ್ದಾರೆ!" ಎಂಬ ಭಾವನೆ. ಬೇಸರವಾಗುವಂಥದ್ದಲ್ಲವಾದರೂ, ಒಂದು ರೀತಿಯ ವಿಶೇಷವಾದ, ಮನಸ್ಸಿಗೆ ಹಿತಕರವಾದ ಭಾವನೆ. ಅಂಕೊರ್ ವಾಟ್ ದೇವಸ್ಥಾನದ ಕಪ್ಪು ಕಲ್ಲಿನ ಗೋಪುರ, ಕೆತ್ತನೆಗಳು, ತನ್ನ ನೆನಪುಗಳ ಮಡಿಲಿನಂತಿರುವ ಆ ಮೆಟ್ಟಿಲುಗಳು, ಆ ಕೆರೆಗಳಲ್ಲಿ ಅರಳಿದ ಕುಸುಮಗಳನ್ನು ಕಂಡಾಗ, ರಜನಿ ಕಣ್ಣಂಚಿನಲ್ಲಿ ನೀರು ತುಂಬಿತು. ಏಕೆ ಎನ್ನುವುದು ಇನ್ನೂ ನಿಗೂಢ!

ಅಷ್ಟರಲ್ಲೇ ಅಲ್ಲಿ ಬಂದ  ಕರ್ಣ - "ಏನಾಯ್ತು ರಜನಿ, ಕಣ್ಣಲ್ಲಿ ನೀರು ತುಂಬಿಕೊಂಡಿದ್ದೀಯಾ? ಟೂರ್ ಹೋಗಲು ಮನಸ್ಸಿಲ್ಲವೇ?" ಎಂದು ಕೇಳಿದ. "ಹಾಗೇನೂ ಇಲ್ಲ. ಕಾಂಬೋಡಿಯಾ ದೇಶದ ಚಿತ್ರ ನೋಡಿದೆನಲ್ಲ. ಏನೋ ಒಂದು ರೀತಿಯ ವಿಚಿತ್ರ ಅನುಭವ ಬರುತ್ತಿದೆ. ನಾನು ಮೊದಲೇ ಅಲ್ಲಿಗೆ ಹೋಗಿರುವ ಹಾಗೆ..." ಅಂತ ರಜನಿ ಅಂದಳು. ಅದಕ್ಕೆ  ಕರ್ಣ ಗೊಳ್ಳನೆ ನಕ್ಕು, "ಶುರು ಆಯ್ತು ನಿನ್ನ ಭ್ರಮಾಲೋಕದ ಮಹಿಮೆ" ಅಂದು ತಮಾಷೆ ಮಾಡಿದ. "ಸರಿ ಆಯ್ತು ಮಲಗೋಣ" ಅಂದಳು ರಜನಿ ಅವಳ ಭಾವನೆಗೆ ಕರ್ಣನ ಮನಸ್ಸಿನಲ್ಲಿ ಜಾಗವಿಲ್ಲ ಅಂತ ಗೊತ್ತಾಗಿ. 

***

ಫ್ನೋಮ್ ಪೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ವಿಮಾನ ತಲುಪುತ್ತಲೇ, ಅಲ್ಲಿನ ಹನಿಮಳೆ ರಜನಿ ಮನಸ್ಸಿಗೆ ಒಂದು ರೀತಿಯ ಖುಷಿ ಹಾಗೂ ತಂಪು ನೀಡಿತು. ಹೊಸ ದೇಶ ಆದರೂ ರಜನಿ ಮನಸ್ಸಿಗೆ ಒಂದು ರೀತಿಯ ಪರಿಚಿತ ಭಾವನೆ, ಸಂರಕ್ಷಿತ ಮನೋಭಾವ. "ನನ್ನ ಜನ, ನನ್ನ ಊರು" ಅನ್ನುವಷ್ಟು ಸಂತೋಷ. ಹೃದಯಕ್ಕೆ ಪರಿಚಿತವಾದ ಒಡನಾಟ. ಲಗೇಜ್ ತೆಗೆದು, ಪ್ರೀಪೇಯ್ಡ್ ಟ್ಯಾಕ್ಸಿಯಲ್ಲಿ ಸಿಯೇಮ್ ರೀಪ್ ಕಡೆ ರಜನಿ, ಕರ್ಣ ಹಾಗೂ ಮಕ್ಕಳು ಹೊರಟರು. ಮಕ್ಕಳಿಗಂತೂ ತಡೆಯಲಾಗದಷ್ಟು ಸಂತೋಷ. ಸಾಹಸದ ಮನೋಭಾವ. ಕರ್ಣ ನಮ್ಮ ಸುರಕ್ಷತೆ ಹಾಗೂ ಹೋಟೆಲ್ ಗೆ ಸೇರುವ ಜವಾಬ್ದಾರಿಯಲ್ಲಿ ತೊಡಗಿದ್ದ. ರಜನಿಗೆ, ಒಂದು ರೀತಿಯಲ್ಲಿ ತನ್ನ ಹುಟ್ಟೂರಿಗೆ ಹಿಂದಿರುಗಿದ ಹಾಗೆ ಮನಸ್ಥಿತಿ. ಹೋಟೆಲ್ ಇದ್ದ ಪ್ರದೇಶ ತಲುಪುತ್ತಲೇ, ಕೆಳಗಿಳಿದ ರಜನಿಗೆ ರಸ್ತೆಬದಿಯಲ್ಲಿ ಹೂ ಮಾರುತ್ತಿದ್ದ ಹುಡುಗಿಯ ಮೇಲೆ ಕಣ್ಣು ಹಾಯಿತು. ಪರಿಚಿತಳೆಂಬಂತೆ ಮಂದಹಾಸ ಬೀರಿದ ಆ ಹುಡುಗಿ, "ಸ್ವಾಕೋಮ್ ಕಾರ್ ತ್ರಾಲ್ಭ್ಮೊಕ್ವಿನ್ಚ್" ಅಂತ ಹೇಳಿದಳು. ಆ ಶಬ್ದ ಕೇಳುತ್ತಲೇ, ರಜನಿಗೆ ಆ ಭಾಷೆ ತನಗೆ ತಿಳಿದಿದೆ ಅನ್ನುವ ಹಾಗೆ ಭಾಸವಾಯಿತು. ಯಾಕೆ ಆ ಹುಡುಗಿ "ಮರಳಿ ಸ್ವಾಗತ" ಅಂದಳು ಅಂತ ಗೊತಾಗಲಿಲ್ಲ. "ಏನೋ ಇದೆ. ತನ್ನ ಅನುಭವಕ್ಕೆ ಬರುತ್ತಿದ್ದ ಭಾವನೆಗಳಿಗೆ ಏನೋ ಒಂದು ಅರ್ಥ ಇದೆ" ಅಂತ ರಜನಿಗೆ  ಮನದಟ್ಟಾಯಿತು. ಆದರೆ ಅದೇನು ಅಂತ ಮಾತ್ರ ತಿಳಿಯಲಿಲ್ಲ.

ಹೋಟೆಲ್‌ ಬಾಲ್ಕನಿಯಲ್ಲಿ ರಾತ್ರಿ ನಿಂತಿರುವಾಗ ದೂರದಲ್ಲಿ ಒಂದು ಘಂಟೆಯ “ಟಂಗ್… ಟಂಗ್…” ಶಬ್ದ ಕೇಳುತ್ತಿತ್ತು. ಆ ಶಬ್ದ ರಜನಿ ಕಿವಿಗೆ ಕಾಲದ ಮಿಡಿತ ಎಂಬಂತೆ ಎನಿಸಿತು. ಸ್ವಲ್ಪ ಹೊತ್ತು  ಕಣ್ಣು ಮುಚ್ಚಿ ನಿಂತಳು. ತಕ್ಷಣ, ಮೆರವಣಿಗೆಯೊಂದು ಅವಳ ಕಣ್ಣೆದುರಲ್ಲಿ - ಸುಂದರವಾದ ದೀಪಗಳ ಸಾಲು, ಸುಗಂಧಿತವಾದ ಕುಸುಮಗಳ ಇಂಪಾದ ಗಾಳಿ, ಹಳದಿ–ಕೆಂಪು–ಹಸಿರು ಬಾವುಟಗಳು… ಯಾರೋ ಅವಳ ಕೈ ಹಿಡಿದು “ಮಹಾರಾಣಿ…” ಎಂದು ಕರೆಯುತ್ತಿರುವ ಶಬ್ದ.. ಆ ಕೂಡಲೇ ಬೆಚ್ಚಿ ಬಿದ್ದಂತೆ ಕಣ್ಣು ತೆರೆದಳು. “ವಿಚಿತ್ರವಲ್ಲವೇ?” ಎಂದು ತನ್ನ ಮನಸ್ಸಿನಲ್ಲಿಯೇ ಹೇಳಿಕೊಂಡು ಕರ್ಣ ಹೇಳಿದಂತೆ ತನಗೆ ಭ್ರಮೆ ಇರಬಹುದು ಎಂದುಕೊಂಡು ನಗು ಬೀರಿದಳು.  

***

 

ಮರುದಿನ ಬೆಳಿಗ್ಗೆ ಬೇಗನೆ ಎದ್ದು ಹೊರತು ನಿಂತಾಗ ರಜನಿಗೆ  ತಿಳಿಯದ ಏನೋ ಒಂದು ಉತ್ಸಾಹ. ಹೋಟೆಲ್ ನಿಂದ ಅಂಕೊರ್ ವಾಟ್ ಕಡೆಗೆ ಕ್ಯಾಬ್ ಹೊರಟಿದೆ. ದಾರಿಯುದ್ದಕ್ಕೂ ಹಸಿರಿನ ತೋರಣ ಕಟ್ಟಿರುವಂತೆ ಕಾಣುತ್ತಿದ್ದ ಮರಗಿಡಗಳ ಸಾಲು ರಜನಿಯನ್ನು ಸ್ವಾಗತಿಸುತ್ತಿರುವಂತೆ ಕಾಣುತ್ತಿತ್ತು. ಅಂಕೊರ್ ವಾಟ್ ದೇವಸ್ಥಾನದ ಮುಖ್ಯ ಗೋಪುರ ತಲುಪುತ್ತಲೇ, ರಜನಿಗೆ ದಾರಿಯ ಎರಡೂ ಬದಿಯಲ್ಲಿದ್ದ ಕಲ್ಲಿನ ವಿಗ್ರಹಗಳಿಗೆ ಜೀವ ಬಂದು ಅವಳ ಕಡೆ ನೋಡುತ್ತಾ ಮಂದಹಾಸ ಬೀರಿ ತಲೆಬಾಗಿಸುತ್ತಿರುವಂತೆ ಭಾಸವಾಯಿತು. ದಾರಿಯುದ್ದಕ್ಕೂ ಬಿದ್ದಿದ್ದ ತರಗೆಲೆಗಳು, ಹೂವಿನ ಹಾದಿಯಂತೆ ಕಾಣಿಸಿತು. ಅಂಕೊರ್ ವಾಟ್ ದೇವಸ್ಥಾನದ ಬೃಹತ್ ಗೋಪುರಗಳ ನೆರಳಿನಲ್ಲಿ ಪ್ರವೇಶದ ಸೇತುವೆ, ತಿಳಿಯಾದ ನೀರಿನ ಮೇಲೆ ಮೇಘಗಳ ಪ್ರತಿಬಿಂಬ ಕಣ್ತುಂಬುವ ಸೌಂದರ್ಯ ಬಿಂಬಿಸುತ್ತಿತ್ತು. ನಮ್ಮ ಗೈಡ್ - "ಇದು ಖ್ಮೇರ್ ಸಾಮ್ರಾಜ್ಯದ ತೇಜಸ್ಸು. ಇಲ್ಲಿನ ಗೋಡೆಗಳಲ್ಲಿ  ಭಸ್ಮ, ಗಂಧಕ, ನೀಲಿ ಕಲ್ಲಿನಿಂದ ಮಾಡಿದ ಹಿಂದೂ ಸಂಪ್ರದಾಯದ ಪುರಾಣ ಇತಿಹಾಸ ತಿಳಿಸುವ ಅನೇಕ ಚಿತ್ರಗಳಿವೆ." ಎಂದು ಹೇಳುತ್ತಾ ನಮ್ಮನ್ನು ಒಳಗೆ ಕರೆದುಕೊಂಡು ಹೋದ. ನನಗೆ ಈ ಎಲ್ಲ ವಿಷಯಗಳು ಮೊದಲೇ ತಿಳಿದ ಹಾಗೆ, ನಾನು ವರ್ಷಾನುವರ್ಷಗಳ ಕಾಲ ಈ ಜಾಗದಲ್ಲೆಲ್ಲ ತಿರುಗಾಡಿದ್ದವಳ ಹಾಗೆ ಅನ್ನಿಸುತಿತ್ತು. ರಜನಿ ಕರ್ಣನಲ್ಲಿ "ನನಗೆ ಈ ದಾರಿ ಇಲ್ಲಿನ ಇತಿಹಾಸ ಎಲ್ಲ ತಿಳಿದ ಹಾಗೆ ಅನ್ನಿಸುತ್ತಿದೆ" ಅಂದಳು. ಮತ್ತೆ ಕರ್ಣ ನಕ್ಕು, ಸುಮ್ಮನೆ ಗೈಡ್ ಹೇಳುತ್ತಿರುವುದನ್ನು ಕೇಳಿಸಿಕೋ.." ಅಂತ ಮಾತು ಹಾರಿಸಿದ. 

ಅಂಕೊರ್ ಥಾಮ್ ಬಳಿ ಬಂದಾಗ, ಅಲ್ಲಿನ ಪ್ರವೇಶ ದ್ವಾರದ ಬಲಬದಿಯ ಕಲ್ಲಿನ ಕೆತ್ತನೆ ನೋಡಿದ ಕೂಡಲೇ "ಇದು ಸಮುದ್ರ ಮಥನದ ದೃಶ್ಯ. ಇಲ್ಲಿ ನಮ್ಮವರು ಕಷ್ಟ ಕಾಲದಲ್ಲಿ ಗೋಧಿ ಸಂಗ್ರಹಿಸುತ್ತಿದ್ದರು." ಅಂತ ಖ್ಮೇರ್-ಕನ್ನಡ ಮಿಶ್ರಿತ ಭಾಷೆಯಲ್ಲಿ ಯಾರೋ ಪಿಸುಗುಟ್ಟಿದಂತೆ ರಜನಿಗೆ ಅನಿಸಿತು. ರಜನಿ ಅದನ್ನು ಕರ್ಣನಿಗೆ ಹೇಳಿದಳು. ಗೈಡ್ ಅದು ನಿಜ ಎಂದು ಹೇಳಿದಾಗ ಕರ್ಣನಿಗೆ ಅಚ್ಚರಿ ಆಯಿತು. ಮಂಟಪದೊಳಗೆ ಪ್ರವೇಶಿಸಿದಂತೆ, ತಂಪಾಗಿದ್ದ ಗಾಳಿ ಬಿಸಿಯಾಗತೊಡಗಿತು. ರಜನಿ ಮೂಗಿಗೆ ಶ್ರೀಗಂಧದ ಸುಗಂಧ, ಪಾರಿಜಾತ, ತಾವರೆ ಪುಷ್ಪಗಳ ಪರಿಮಳ ಬರತೊಡಗಿತು. ಸಮುದ್ರ ಮಥನದ ದೃಶ್ಯ, ಅಸುರ-ದೇವರುಗಳ ಜಗ್ಗಾಟ, ಇತ್ಯಾದಿಗಳ ಕೆತ್ತನೆಗಳನ್ನು ಸ್ಪರ್ಶಿಸಿದಾಗ, ಒಂದು ರೀತಿಯ ವಿದ್ಯುತ್ ಹರಿದಂತಾಯಿತು. ರಜನಿಯ ನಡುಗೆ ನಿಧಾನಿಸಿತು. ರಜನಿ ಕಿವಿಗೆ "ಮ್ಹಕ್ಸಅತ್ರೇಯಿ, ಎಉಂಗ್ ಟೀಅಂಗೊಲಾಸಕ್ನೆಯಾ ಕಂಪೌಂಗ್ ಎಂಗ್ಚಾಮ್ ಅನಕ್ (ಮಹಾರಾಣಿ, ನಾವೆಲ್ಲರೂ ನಿಮಗಾಗಿ ಕಾಯುತ್ತಿದ್ದೇವೆ.)" ಅಂತ ಕೂಗಿದ ಹಾಗೆ ಕೇಳಿಸಿತು. ರಜನಿ ದೇಹವೆಲ್ಲ ಹಗುರ ಆದ ಹಾಗೆ ಆಗಿ, ಅಲ್ಲೇ ಕುಸಿದು ಕುಳಿತಳು. "ಮೇಡಂ, ಆರ್ ಯು ಓಕೆ?" ಅಂತ ಗೈಡ್ ನೀರಿನ ಬಾಟಲಿಯನ್ನು ರಜನಿ ಕೈಗಿತ್ತ. ಮಕ್ಕಳು ಸೆಲ್ಫೀ ತೆಗೆದುಕೊಳ್ಳುವಲ್ಲಿ ತೊಡಗಿಸಿಕೊಂಡಿದ್ದರು. "ಕೋಮ್ ಕ್ಲ್ಯಾಚ್, ಖಾಣ್ಹೋಮ್ ತ್ರಾಲ್ಬ್ ಮೊಕ್ವಿನ್ಚ್ ಹಎಯ್" ಅಂತ ರಜನಿ ಗ್ರಾಮೀಣ ಖ್ಮೇರ್ ಭಾಷೆಯಲ್ಲಿ ಉಲಿದಳು. "ಹೆದರಬೇಡ. ನಾನು ಹಿಂದಿರುಗಿ ಬಂದಿದ್ದೇನೆ" ಅಂತ ಅದರರ್ಥ. ಅದನ್ನು ಅವಳ ಬಾಯಿಂದ ಕೇಳಿದ ಗೈಡ್ ಗೆ ಅಚ್ಚರಿಯಾಗಿ ಗಾಬರಿಗೊಂಡ. "ರಜನಿ, ಸ್ಟಾಪ್ ಇಟ್. ಸುಮ್ಮನೆ ಭಯ ಹುಟ್ಟಿಸಬೇಡ." ಅಂತ ಕರ್ಣ ಹೇಳಿದ.

ಅಷ್ಟರಲ್ಲಿ ಸೆಲ್ಫೀ ತೆಗೆದುಕೊಂಡ ಮಕ್ಕಳು ರಜನಿ ಕಡೆ ಓದಿ ಬಂದು, "ಅಮ್ಮಾ, ಇಲ್ಲಿ ನೋಡು ವಿಷ್ಣು ದೇವರ ವಿಗ್ರಹ" ಅಂದರು.  ಅಲ್ಲೇ ಪಕ್ಕದಲ್ಲಿ, ರಾಣಿ ಇಂದ್ರಾದೇವಿಯ ವಿಗ್ರಹವನ್ನು ಗೈಡ್ ತೋರಿಸಿದ. ಮಕ್ಕಳು ಆ ವಿಗ್ರಹ ನೋಡುತ್ತಲೇ, "ಈ ವಿಗ್ರಹದ ಮುಖ ಕಣ್ಣು ನೋಡು ಅಮ್ಮನ ಹಾಗೆ ಇದೆ" ಅಂದರು. ಇಂದ್ರಾದೇವಿ ಬುದ್ಧಿವಂತಿಕೆ, ಕೃಷಿ ಮತ್ತು ರಾಜ್ಯ ವ್ಯವಹಾರಗಳ ಮೇಲಿನ ಪ್ರಭಾವಕ್ಕೆ ಹೆಸರುವಾಸಿಯಾಗಿದ್ದಳು. ಸಾಹಿತ್ಯದಲ್ಲಿ ಆಸಕ್ತಿ ಇದ್ದ ಅವಳು ಹಲವಾರು ಕವಿತೆಗಳನ್ನು ರಚಿಸಿದ್ದಳೆಂದೂ ಅವಳನ್ನು "ಕಾಂಬೋಡಿಯಾದಲ್ಲಿ ಅತ್ಯಂತ ಹಳೆಯ ಮಹಿಳಾ ಕವಿ" ಎಂದು ಪರಿಗಣಿಸಲಾಗಿದೆ. ಹಾಗೆ ಮುಂದೆ ನಡೆದಾಗ, ಪಶ್ಚಿಮ ದ್ವಾರದ ಬಳಿ ಸಣ್ಣದೊಂದು ಮಂಟಪದ ಒಳಗೆ ಕಾಲಿಟ್ಟಾಗ, ಅಲ್ಲೇ ಬಿದ್ದಿರುವ ಒಂದು ಒಣಗಿದ ರೀತಿಯ ಹೂವು ರಜನಿ ಕಣ್ಣಿಗೆ ಬಿತ್ತು. ಅದನ್ನು ಎತ್ತಿಕೊಂಡು, "ಇದು ನಮ್ಮ ಮನೆ ದೇವರಿಗೆ ಅರ್ಪಿಸುತ್ತಿದ್ದ ಹೂವಲ್ಲವೇ?" ಅಂತ ಕೇಳಿದಳು. ಆಗ ಅವಳೆದುರಿಗೆ ನಿಂತಿದ್ದ ಸ್ಥಳೀಯ ವೃದ್ಧನೊಬ್ಬ - "ನೀವು ಇಲ್ಲಿನವರೇನಾ? ಈ ಹೂವು ಇಲ್ಲಿ ಬಿಟ್ಟರೆ ಬೇರೆ ಯಾವ ಕಡೆಯೂ ಆಗುವುದಿಲ್ಲ. ಇದು ಇಲ್ಲಿಯ ವಿಶೇಷ ಹೂವು" ಅಂತ ಖ್ಮೇರ್ ಭಾಷೆಯಲ್ಲಿಯೇ ಹೇಳಿದ್ದನ್ನು ಗೈಡ್ ಆಂಗ್ಲ ಭಾಷೆಗೆ ಅನುವಾದಿಸಿದ. ಅವರ ಭಾಷೆಯಲ್ಲೇ ಹೇಳಿದ್ದು ರಜನಿಗೆ  ಅರ್ಥವಾಗಿದ್ದು ಸೋಜಿಗ. ರಜನಿ ಉತ್ತರ ಕೊಡದೆ, ಆ ಒಣಗಿದ ಹೂವನ್ನು ಕೈಯಲ್ಲೇ ಹಿಡಿದುಕೊಂಡು ಕಣ್ಣು ಮುಚ್ಚಿದಳು. ಅವಳ ಮನಸ್ಸಿನಲ್ಲೇ, ಅಜ್ಞಾತ ಭಾಷೆಯ ಪದ್ಯವೊಂದು ತುಟಿಗಳಲ್ಲಿ ಮಿಡಿಯಿತು. ಅದನ್ನು ಕೇಳಿದ ವೃದ್ಧ, "ಇದು ನಿಮಗೆ ಹೇಗೆ ಗೊತ್ತು. ಇದು ರಾಣಿ ಇಂದ್ರಾದೇವಿ ರಚಿಸಿದ್ದ ಕವಿತೆ" ಅಂತ ಹೇಳಿದ. ಅವನ ಮಾತುಗಳನ್ನು ಅನುವಾದಿಸಿದ ಗೈಡ್ ಗೂ, ಕರ್ಣ ಹಾಗೂ ಮಕ್ಕಳಿಗೂ ಆಶ್ಚರ್ಯವಾಯಿತು. ರಜನಿ ಏನೂ ಹೇಳದೆ, ಮುಂದೆ ನಡೆದಳು. ಈಗ ಅವಳಿಗೆ ಭಯವೂ ಇರಲಿಲ್ಲ, ಮುಜುಗರವೂ ಆಗಲಿಲ್ಲ. ತನ್ನ ಹಿಂದಿನ ಜನ್ಮದ ಅರಿವು ಮೂಡಿದಂತೆ, ಆತ್ಮವಿಶ್ವಾಸದಿಂದ ಮುನ್ನಡೆದಳು. 

***

ಅಲ್ಲಿಂದ ಅವರೆಲ್ಲರೂ ತಾ ಫ್ರೋಮ್ ಗೆ ಹೋದರು. ಅಲ್ಲಿನ ಗೋಡೆಗಳನ್ನು ಚುಂಬಿಸಿ ಬಿಗಿಯಾಗಿ ಅಪ್ಪಿಕೊಂಡಂತಿದ್ದ ಮರಗಳ ಬೇರುಗಳು, ಸುಂದರವಾಗಿ ಆವರಿಸಿಕೊಂಡ ಮರಗಳ ನಡುವೆ ಇದ್ದ ಮಂಟಪಗಳನ್ನು ನೋಡಿ ಕಣ್ತುಂಬಿಸಿಕೊಳ್ಳುತ್ತಿರುವಾಗ, ರಜನಿ ಮನಸ್ಸಲ್ಲಿ ಮತ್ತೆ ಅದೇ ಭಾವನೆಗಳ ಚೆಲ್ಲಾಟ. ಹಸಿರು ಬಳ್ಳಿ ಸುತ್ತುವರಿದಿದ್ದ ಆ ಮಂಟಪಗಳ ಸೌಂದರ್ಯ ಮನಸ್ಸಿಗೆ ಹಿತ ನೀಡುವಂತಿತ್ತು. ಅಷ್ಟರಲ್ಲಿ ಸ್ಥಳೀಯ ಹೆಂಗಸೊಬ್ಬಳು, ಕಬ್ಬಿಣ ಹಾಗೂ ಸ್ಥಳದ ಲೋಹಗಳಿಂದ ತಯಾರಿಸಿದ ಉಂಗುರಗಳ ಬುಟ್ಟಿಯೊಂದನ್ನು ಹಿಡಿದುಕೊಂಡು ಬಂದು, ರಜನಿಯನ್ನು ನೋಡುತ್ತಲೇ, "ಮ್ಹಕ್ಸಅತ್ರೇಯಿ, ಮ್ಹಕ್ಸಅತ್ರೇಯಿ (ಮಹಾರಾಣಿ, ಮಹಾರಾಣಿ)" ಅಂತ ಕೂಗಿಕೊಂಡು ಓಡಿ ಓಡಿ  ಬಂದಳು. ಅಲ್ಲಿನ ರಾಜ ಚಿಹ್ನೆಗಳನ್ನೊಳಗೊಂಡ ಉಂಗುರವೊಂದನ್ನು ಆರಿಸಿ, ಹಸಿರು, ಕೆಂಪು ನೀಲಿ ಬಣ್ಣಗಳ ದಾರದಿಂದ ತಯಾರಿಸಿದ ಮಣಿಕಟ್ಟಿನ ಪಟ್ಟಿಯೊಂದನ್ನು ತೆಗೆದು, ತನ್ನ ಎರಡೂ ಕಣ್ಣುಗಳಿಗೆ ಒತ್ತಿ, ರಜನಿ ಹೃದಯ ಭಾಗದಲ್ಲಿರಿಸಿ, "ನೀನ್ಯಾರೆಂದು ಜ್ಞಾಪಿಸಿಕೋ" ಎಂಬಂತೆ ಕಣ್ಸನ್ನೆ ಮಾಡಿ ಅವಳ ಕೈಗೆ ಆ ದಾರವನ್ನು ಕಟ್ಟಿದಳು. ಉಂಗುರವನ್ನೂ ತೊಡಿಸಿದಳು. "ಈಗ ನೋಡು ದುಡ್ಡು ಕೇಳ್ತಾಳೆ" ಅಂತ ಕರ್ಣ ಹೇಳಿದ. ಆದರೆ ಆ ಹೆಂಗಸು ದುಡ್ಡು ಕೇಳದೆ, "ಇನ್ನೆಷ್ಟು ದಿನ ಇದ್ದಿರಮ್ಮ" ಅಂತ ಖ್ಮೇರ್ ಭಾಷೆಯಲ್ಲಿ ಕೇಳಿದಳು. ರಜನಿ "ಎರಡು ದಿನ" ಎಂಬಂತೆ ಕೈ ಸನ್ನೆ ಮಾಡಿದಳು. "ಬಾಂತೇಯ್ ಸ್ರೀ" ಅಂತ ಒಂದು ಜಾಗದ ಹೆಸರು ಹೇಳಿ ಆ ಹೆಂಗಸು ಅಲ್ಲಿಂದ ಹೊರಟು ಹೋದಳು. 

ಹೋಟೆಲ್‌ಗೆ ಹಿಂದಿರುಗುವಾಗ ಲಾಬಿಯಲ್ಲಿ ನುಡಿಸುತ್ತಿದ್ದ ಪಿಯಾನೋ ಧ್ವನಿ ಪ್ರತಿಧ್ವನಿಸುತ್ತಿತ್ತು. ಮೈ ಮರೆತು ನಿಂತಿದ್ದ ರಜನಿ ಕಂಡು ಕರ್ಣ ಕೇಳಿದ: “ಯಾಕೋ ನೀನು ಇವತ್ತು… ನೀನಾಗಿಲ್ಲ. ಏನೋ ಬೇರೆ ರೀತಿ ವರ್ತಿಸುತ್ತಿದ್ದಿ.” ಉತ್ತರವಾಗಿ ರಜನಿ, “ನಾನು ಯಾರೋ…” ಎಂದು ನಕ್ಕಳು. “ಬನ್ನಿ. ನಾಳೆ ಬಾಂತೇಯ್ ಸ್ರೀಗೆ ಹೋಗೋಣ.”. ಅಂದಿನ ತಿರುಗಾಟದಿಂದ ಸುಸ್ತಾಗಿ ಎಲ್ಲರೂ ಬೇಗನೆ ನಿದ್ದೆಗೆ ಜಾರಿದರು. 

***

ಬಾಂತೇಯ್ ಸ್ರೀ  - ಗುಲಾಬಿ ಗೋಲ್ಡನ್ ಬಣ್ಣದ ಮರಳುಗಲ್ಲಿನಿಂದ ಕಟ್ಟಿಸಿದ ದೇವಾಲಯ. ಸಣ್ಣ ದೇವಾಲಯವಾದರೂ ಸುಂದರವಾದ ಕವಿತೆಯಲ್ಲಿ ವರ್ಣಿಸಲು ಹೇಳಿ ಮಾಡಿದ ದೇವಾಲಯ. ನಡೆದುಕೊಂಡು ಹೋಗುವ ದಾರಿಯುದ್ದಕ್ಕೂ, ಪ್ರಕೃತಿ ಸಹಜವಾಗಿ ನಿರ್ಮಿತವಾದ ಹೂಗಳ ತೋರಣ, ರಜನಿ ನಡೆಯುವ ದಾರಿಯುದ್ದಕ್ಕೂ ಪುಷ್ಪವೃಷ್ಟಿ ಮಾಡಿ ಬರಮಾಡಿಕೊಂಡಂತೆ ಭಾಸವಾಗುತ್ತಿತ್ತು. ದೇವಾಲಯದೊಳಗೆ ಸೂರ್ಯನ ಕಿರಣ ಚಿನ್ನದ ಮುಕುಟದಲ್ಲಿ ಅಲಂಕರಿಸಿದಂತೆ ಕಾಣಿಸುತ್ತಿತ್ತು. ರಾಣಾ ಆಟವಾಡುತ್ತ ಒಂದೆಡೆ ಕುಳಿತುಕೊಳ್ಳಲು ಹೋದಾಗ ರಜನಿ, ಅಲ್ಲೆಲ್ಲ ಕುಳಿತುಕೊಳ್ಳಬಾರದು. ಜೋಕೆ" ಅಂದಳು. ಗೈಡ್ ಅಲ್ಲೇ ನೋಡುತ್ತಿದ್ದವನು, "ಹೌದು ಮೇಡಂ, ಆ ಜಾಗದಲ್ಲಿ ಕುಳಿತುಕೊಳ್ಳುವುದು ಅಮಾನ್ಯವಾಗಿದೆ. ಹಿಂದಿನ ಯುಗದಲ್ಲಿ, ಆ ಜಾಗದಲ್ಲಿ, ದೇವರನ್ನು ಇರಿಸಿ ಪೂಜಿಸಲಾಗುತ್ತಿತ್ತು." ಅಂದನು. ರಾಣಾ, ರಾಖಿ ಹಾಗೂ ಕರ್ಣ ಆಶ್ಚರ್ಯಗೊಂಡು ರಜನಿಯನ್ನೊಮ್ಮೆ ಪ್ರಶ್ನಾರ್ಥಕವಾಗಿ ನೋಡಿದರು. "ಅಮ್ಮಾ, ನಿಂಗೆ ಇದೆಲ್ಲ ಹೇಗೆ ಗೊತ್ತು?" ಅಂತ ರಾಖಿ ಪ್ರಶ್ನಿಸಿದಳು. ಅಷ್ಟು ಹೊತ್ತಿಗೆ ರಜನಿ ಕಣ್ಣು, ಮುಖ್ಯದ್ವಾರದ ಕಂಬಗಳ ನಡುವೆ ಇದ್ದ ಅಕ್ಷರಗಳ ಕಡೆ ಹೋಯಿತು. ಭಾಷೆ ಬೇರೆ ಆದರೂ, ರಜನಿ ಅದನ್ನು ಓದಿದಳು. "ಮಲ್ಲಿಕಾ" ಅಂತ ಹೇಳುತ್ತಾ ಕುಸಿದಳು. 

ಅವಳ ಕಣ್ಣೆದುರಿಗೆ ದೃಶ್ಯ ಬಂತು - ಬಿಳಿ ಬಣ್ಣದ ಮಹಾರಾಣಿಯರು ಹಾಕುವಂಥ ಬಟ್ಟೆ ಧರಿಸಿಕೊಂಡು ತಾನು ಮಂಟಪದಲ್ಲಿ ಕುಳಿತಿದ್ದಳು. ಅವಳ ಎದುರಿಗೆ ಒಂದು ಪುಟ್ಟ ಹುಡುಗಿ ಆಟವಾಡುತ್ತಿದ್ದಳು. "ಮಲ್ಲಿಕಾ, ಇಲ್ಲಿ ಬಾ" ಅಂತ ಆ ರಾಣಿ ಕೂಗಿದಳು. ಪ್ರೀತಿಯಿಂದ ಅಪ್ಪಿಕೊಂಡು ಅವಳಿಗೆಂದು ತಾನೇ ಕೈಯಾರೆ ತಯಾರಿಸಿದ ಕೆಂಪು ಮಣಿಗಳ ಹಾರ, ಕೆಂಪು ಹೂಗಳ ಮಾಲೆಯಿಂದ ಅವಳ ಕೇಶವನ್ನು ಅಲಂಕರಿಸಿದಳು. ಅಷ್ಟರಲ್ಲಿ ಹೊರಗೆ ಆಕ್ರೋಶದಿಂದ ಮುಗಿಬಿದ್ದ ಜನಜಂಗುಳಿ, ಕತ್ತಿಯಿಂದ ಎದುರಿದ್ದ ಎಲ್ಲರನ್ನೂ ಇರಿಯಲು ಪ್ರಾರಂಭಿಸಿದರು. 

ಅಷ್ಟರಲ್ಲಿ ಕರ್ಣ ಬಂದು, ಅವಳ ಕೈ ಹಿಡಿದು, "ಬಾ ಹೊರಗೆ. ಇಲ್ಲಿ ಕುಳಿತುಕೋ." ಅಂದ. ಗೈಡ್ ನೀರು ಕೊಟ್ಟು, "ಆರ್ ಯು ಫೈನ್?" ಅಂತ ಪ್ರಶ್ನಿಸಿದ. ರಜನಿ - "ಯಸ್. ನಾನು ಹುಷಾರಾಗಿದ್ದೇನೆ. ನನಗೆ ಏನೋ ಎಲ್ಲ ನೆನಪಾಗತಿದೆ" ಅಂತ ಹೇಳಿ ಕಣ್ಣೀರಿಳಿಸಿದಳು. ಅದಕ್ಕೆ ಗೈಡ್ ಗಾಬರಿಗೊಂಡು, "ಇಲ್ಲಿನ ರಾಣಿ ಇಂದ್ರಾದೇವಿಗೆ ಮಕ್ಕಳಿರಲಿಲ್ಲ. ಹಾಗಾಗಿ ಅವಳು ಅನೇಕ ಹುಡುಗಿಯರನ್ನು ತನ್ನ ಮಕ್ಕಳಂತೆ ಸಾಕಿದ್ದಳು. ಅದರಲ್ಲಿ ಅವಳಿಗೆ ಅತಿ ಪ್ರಿಯಳಾದವಳು ಮಲ್ಲಿಕಾ." ಅಂದಾಗ ಕರ್ಣನ ಕಣ್ಣು ಆಶ್ಚರ್ಯದಿಂದ ಅರಳಿತು.  

“ಇಲ್ಲಿ ಯಾರಾದರೂ… ಈ ದೇವಾಲಯದ ಹಿಂದಿನ ಕಥೆ… ರಾಜಕುಮಾರಿ ಮಲ್ಲಿಕಾಳ ಬಗ್ಗೆ ಹೇಳ್ತೀರಾ?” ಎಂದು ರಜನಿ ಅಂಗಲಾಚಿದಳು. ಆಗ ಅಲ್ಲೇ ಇದ್ದ ಉಂಗುರ ನೀಡಿದ್ದ ಹೆಂಗಸು ಓಡಿ ಬಂದಳು. ಅವಳಿಗೆ ತಿಳಿದ ಖ್ಮೇರ್ ಮಿಶ್ರಿತ ಇಂಗ್ಲಿಷ್ ಭಾಷೆಯಲ್ಲಿ ಕಥೆ ಹೇಳಿದಳು. "ಆ ದಿನ ರಾಣಿ ತನ್ನ ಪ್ರೀತಿಯ ರಾಜಕುಮಾರಿ ಮಲ್ಲಿಕಾಳ ಜೊತೆ ಇದೇ  ಜಾಗದಲ್ಲಿದ್ದಾಗ, ಹಲವಾರು ರೊಚ್ಚಿಗೆದ್ದ ಜನರ ದಾಳಿ ನಡೆಯಿತು. ರಾಣಿ ತನ್ನ ಶಕ್ತಿ ಎಲ್ಲವನ್ನೂ ಉಪಯೋಗಿಸಿ ಯುದ್ಧ ಮಾಡಿದರೂ, ಮಲ್ಲಿಕಾಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯುದ್ಧ ನಿಂತುಹೋದರೂ, ಮಲ್ಲಿಕಾಳ ದೇಹ ಮಾತ್ರ ಯಾರಿಗೂ ಸಿಗಲಿಲ್ಲ. ಆ ಕೊರಗಿನಲ್ಲಿ ರಾಣಿ ತನ್ನ ಜೀವಮಾನ ಇಡೀ ಕಳೆದಿದ್ದಳು." ಈಗ ರಜನಿಗೆ ತನ್ನ ಮನಸ್ಸಿನೊಳಗೆ ಆಗುತ್ತಿದ್ದ ದುಗುಡ, ಭಾವನೆಗಳಿಗೆ ಅರ್ಥ ದೊರೆತಂತಾಯಿತು. 

***

ಟೋನ್‌ಲೆ ಸಾಪ್ ಕೆರೆಯ ತೀರದಲ್ಲಿ ಸಂಜೆ ಎಲ್ಲರೂ ಕುಳಿತಿದ್ದರು. ತಾಮ್ರದ ಬಣ್ಣದಲ್ಲಿ ಹೊಳೆಯುತ್ತಿದ್ದ ಸೂರ್ಯನ ಕಿರಣಗಳು, ನೀರಿನ ಅಲೆಗಳಲ್ಲಿ ಬೆಳ್ಳಿಯ ಬಣ್ಣದ ಬಳೆಗಳನ್ನು ಸೃಷ್ಟಿಸುವಂತೆ ಕಾಣುತ್ತಿತ್ತು. ಸೂರ್ಯಾಸ್ತವಾದ ಬಾಳಿಕೆ ಬೋಟ್ ಮೂಲಕ  ಹೋಟೆಲಿಗೆ ಹಿಂದಿರುಗುತ್ತಿದ್ದ ವೇಳೆಗೆ, ಕರ್ಣ ರಜನಿಯ ಗೊಂದಲಗಳಿಗೆ ಉಪ್ಪು ಸುರಿಯುವಂತೆ, "ನೀನು ಯಾಕೆ ಮಲ್ಲಿಕಾಳನ್ನು ಸಾಯಲು ಬಿಟ್ಟೆ?" ಅಂತ ಪ್ರಶ್ನಿಸಿದ. ಅಲ್ಲೇ ಇದ್ದ ರಾಖಿ ಮಾತ್ರ, "ಅಮ್ಮಾ, ನೀನು ನಿಜಕ್ಕೂ ಗ್ರೇಟ್. ಈ ಲವ್ ಯು ಅಮ್ಮಾ.." ಅಂತ ರಜನಿಯನ್ನು ಅಪ್ಪಿ ಹಿಡಿದಳು. 

ಆ ದಿನ ರಾತ್ರಿ ರಜನಿಗೆ ನಿದ್ದೆ ಬೀಳಲಿಲ್ಲ.  ಹಾಗೆಯೇ ಹೋಟೆಲ್ನಿಂದ ಹೊರಗೆ ಬಂದು ಹೋಟೆಲ್ ಗೇಟ್ ನ ಪಕ್ಕದಲ್ಲಿದ್ದ ಸಣ್ಣ ಪಗೋಡ ನೋಡಿದಳು. ಅಲ್ಲಿ ಮಲ್ಲಿಗೆ ಕಂಪು, ಕರ್ಪೂರದ ಬೆಳಕಿನ ಮಿಶ್ರಣ. ಅದರೊಳಗೆ ಒಬ್ಬ ವೃದ್ಧ ಭಿಕ್ಷುಕಿ ಹರಿದ ಕೊಳೆಯಾದ ಬಟ್ಟೆ, ಚಿಕ್ಕ ಮಣ್ಣಾದ ಚೀಲ ಹಿಡಿದುಕೊಂಡು "ಖ್ಮೇರ್?" ಅಂತ ಕೇಳಿದಳು. ರಜನಿ ಇಲ್ಲ ಎಂಬಂತೆ ತಲೆ ಅಲ್ಲಾಡಿಸಿದಳು. ಕೈ ತೋರಿಸುವಂತೆ ಸೂಚಿಸಲು, ರಜನಿ ತನ್ನ ಬಲಗೈಯನ್ನು ಅವಳೆಡೆಗೆ ಚಾಚಿದಳು. ತನ್ನ ಚೀಲದೊಳಗಿಂದ ಒಂದು ಮಂತ್ರದಂಡವನ್ನು ತೆಗೆದು ರಜನಿ ಕೈಯಲ್ಲಿ ಆಡಿಸಿ, "ಜನ್ಮ ಮೂಲಕ್ಕೆ ಯಾವತ್ತೂ ದಾರಿ ಇರುತ್ತದೆ" ಅಂತ ಖ್ಮೇರ್ ಭಾಷೆಯಲ್ಲಿ ಹೇಳಿದಳು. ರಜನಿಗೆ  ಅದು ಕನ್ನಡಾನುವಾದವಾದಂತೆ ಮನಸ್ಸಿಗೆ ಕೇಳಿಸಿತು. ರಜನಿ ಕಣ್ಣು ಹಾಗೆ ಮುಚ್ಚಿಕೊಂಡಿತು. "ನಾನು ಯಾರು?" ಎಂಬ ಪ್ರಶ್ನೆ ಬಂದಾಗ - "ಅದು ನಿನಗೆ ಗೊತ್ತಿದೆ" ಅಂತ ಆ ಭಿಕ್ಷುಕಿ ಹೇಳಿ ಅಲ್ಲಿಂದ ಹೊರಟು ಹೋದಳು. 

ಹೋಟೆಲ್ ರೂಮಿಗೆ ಹಿಂದಿರುಗಿದ ರಜನಿಗೆ,  ರಾತ್ರಿ ಕನಸಿನಲ್ಲಿ ಸ್ಪಷ್ಟವಾಗಿ ಚಿತ್ರಣ ಬಂದಿತ್ತು. ಪಾರಿಜಾತ, ಮಲ್ಲಿಗೆಯ ಪರಿಮಳಗಳ ನಡುವೆ, ಮಲ್ಲಿಕಾಳ ಜೊತೆ ತಾನಿದ್ದಾಗ, ಅಚಾನಕ್ ಆಗಿ ಮುಗಿಬಿದ್ದ ರೊಚ್ಚಿಗೆದ್ದ ಗುಂಪು. ಅವಳೆಷ್ಟೇ ಯುದ್ಧ ಮಾಡಿದರೂ, ಮಲ್ಲಿಕಾಳನ್ನು ಅವಳಿಂದ ದೂರ ಕಿತ್ತುಕೊಂಡು ಹೋಗಿ, ಏನು ಮಾಡಿದರು ಎಂಬುದು ಅವಳಿಗೆ ತಿಳಿಯಲಿಲ್ಲ. ಬೀಸಿದ ಕತ್ತಿಯಿಂದ ಅವಳ ಕೈ ಹಾಗೂ ಸೊಂಟಕ್ಕೆ ಪೆಟ್ಟು ಬಿದ್ದು, ಚರ್ಮ ಒಡೆದು ಹರಿಯುತ್ತಿರುವ ರಕ್ತದ ಬಿಸಿಯಷ್ಟೇ ಭಾಸವಾಗುತ್ತಿದೆ. ತಾನೆಲ್ಲಿದ್ದೇನೆ ಅನ್ನುವ ಅರಿವು ಅವಳಿಗಿರಲಿಲ್ಲ. 

"ರಜನಿ.. ರಜನಿ..." ಅನ್ನುವ ಕೂಗು ಕೇಳಿಸಿ ಎಚ್ಚರವಾಯಿತು. ಮೈಯೆಲ್ಲಾ ಬೆವರಿ ದೊಡ್ಡದಾಗಿ ಶ್ವಾಸ ಬಿಡುತ್ತಿದ್ದ ರಜನಿಗೆ ಇದು ಕೇವಲ ಕನಸು ಎಂದು ಅರಿವಾಯಿತು. ಗಡಿಯಾರ ನೋಡಿದರೆ, ಗಂಟೆ ಮೂರು. ಎದ್ದು ತನ್ನ ಡೈರಿಯಲ್ಲಿ ತನಗನ್ನಿಸುತ್ತಿದ್ದುದನ್ನು ಬರೆದಳು.  

***

ಮರುದಿನ ಬೆಳಿಗ್ಗೆ, ಕಾಂಬೋಡಿಯಾ ದೇಶದಲ್ಲಿನ ಕೊನೆ ದಿನ. ಶಾಪಿಂಗ್ ಮಾಡಲೆಂದು ಮೀಸಲಿದ್ದ ಆ ದಿನ, ಅಂಗಡಿಗಳ ಸಾಲಿನಲ್ಲಿ  ರಜನಿ ಕಣ್ಣಿಗೆ ಒಂದು ಹಳೆಯ ಕಾಲದ ಆಭರಣಗಳನ್ನು ಪಾಲಿಶ್ ಮಾಡಿ ಮಾರುತ್ತಿದ್ದ ಕೌಂಟರ್ ಕಂಡಿತು. ಅಲ್ಲಿ ಒಂದು ಸುಂದರವಾದ ಕೈಬಳೆ ಕಣ್ಣಿಗೆ ಬಿತ್ತು. ಅದರ ಒಳಭಾಗದಲ್ಲಿ ಖ್ಮೇರ್ ಭಾಷೆಯಲ್ಲಿನ ಸಣ್ಣ ಸಣ್ಣ ಅಕ್ಷರಗಳು. ಅಂಗಡಿಯವಳು, "ಇದು ಹಳೆಯ ಕಾಲದ್ದು. ಪಾಲಿಶ್ ಮಾಡಿ ಇರಿಸಿದ್ದು" ಅಂದಳು. ಕರ್ಣ "ಸುಮ್ಮನೆ ಮೋಸ ಮಾಡ್ತಾರೆ. ಹಳೆ ಕಾಲದ ವಸ್ತು ಹೀಗೆ ಸಿಗುತ್ತವೆಯೇ?" ಅಂದ. ರಜನಿಗೆ ಅದನ್ನು ನೋಡಿದಾಕ್ಷಣ ಏನೋ ಒಂದು ಬಾಂಧವ್ಯದ ಅನಿಸಿಕೆ. ಅದೇ ಬೇಕು ಅಂತ ಹಠ ಮಾಡಿ ತೆಗೆದುಕೊಂಡಳು. ಗೂಗಲ್ ನಲ್ಲಿ ಹುಡುಕಿದಾಗ, ಅದು ರಾಣಿ ಇಂದ್ರಾದೇವಿ ಹಾಕಿಕೊಂಡಿದ್ದ ಬಳೆಗಳಲ್ಲಿ ಒಂದು ಎಂದು ತಿಳಿಯಿತು. ಖ್ಮೇರ್ ಲಿಪಿಯಲ್ಲಿ ಆ ಬಳೆಯ ಹಿಂಬದಿಯಲ್ಲಿ ರಾಜವಂಶದ ಹೆಸರಿತ್ತು. ಒರಿಜಿನಲ್ ಆಗಿರದೆ ಇರಬಹುದು. ಆದರೆ, ಅದನ್ನು ಹಾಕಿಕೊಂಡು ನೋಡಿದರೆ, ರಜನಿ ಕೈಗೆಂದೇ ಮಾಡಿಸಿದ ರೀತಿ ಅಳತೆಗೆ ಸರಿಯಾಗಿತ್ತು.  ರಜನಿ ಮನಸ್ಸಿಗೆ ಏನೋ ಒಂದು ರೀತಿಯ ತೃಪ್ತಿ.  "ಕರ್ಣ, ನನ್ನನ್ನು ಕ್ಷಮಿಸು. ನನ್ನೊಳಗಿನ ಕಲ್ಪನೆಗಳು, ನೆನಪುಗಳು, ಕಥೆಗಳು ನಿನಗೆ ಅಮಾನ್ಯ ಅನಿಸಬಹುದು. ಆದರೆ, ಇದು ಸತ್ಯ. ಹಿಂದೆ ನನ್ನ ಯಾವುದೋ ಪೂರ್ವಜನ್ಮದಲ್ಲಿ ನಡೆದಿರುವ ಕಹಿ ಅನುಭವ. ಈ ಬಳೆಗಳು ನನ್ನ ಕೈಗೆ ಸರಿಯಾಗಿ ಹೊಂದುವಂತಿರುವಾಗ, ನನ್ನ ಮನಸ್ಸಿನಲ್ಲಿ ಭ್ರಮೆ ಅಂತ ನಿಮಗನ್ನಿಸಿದ್ದರೂ ನನಗೆ ಅನುಭವವಾದ ಎಲ್ಲ ರೀತಿಯ ಅನುಭವಗಳು ಹಿಂದಿನ ಕಥೆಯನ್ನೇ ಜ್ಞಾಪಿಸಿದಂತಿತ್ತು. ಈ ದೇಶದೊಂದಿಗೆ, ಈ ದೇವಾಲಯದೊಂದಿಗೆ, ಆ ಮಲ್ಲಿಕಾ ಎಂಬ ಹುಡುಗಿಯೊಂದಿಗೆ ಏನೋ ಒಂದು ಹೇಳಲಾರದ ಬಾಂಧವ್ಯ ನನಗಿದೆ ಎನ್ನುವುದು ಅಷ್ಟೇ ಸತ್ಯ." ಅಂತ ರಜನಿ ಕರ್ಣನಿಗೆ ಮನದಟ್ಟು ಮಾಡಿದಳು. ಕರ್ಣನಿಗೂ ಅವಳು ಹೇಳುತ್ತಿರುವ ವಿಷಯದಲ್ಲಿ ಏನೋ ಒಂದು ರೀತಿಯ ಸತ್ಯ ಇದೆ ಅಂತನಿಸಿತು. ಆದರೂ ಅವನು ನಂಬುವವನಲ್ಲ.  

ನೋಡುನೋಡುತ್ತಲೇ, ವಾಪಾಸ್ ಭಾರತಕ್ಕೆ ಹೊರಡುವ ಸಮಯ ಬಂದೇ ಬಿಟ್ಟಿತು. ವಿಮಾನ ನಿಲ್ದಾಣ. ಚೆಕ್–ಇನ್ ಸಾಲಿನಲ್ಲಿ  ರಜನಿ ಹಾಗೂ ಕರ್ಣ ನಿಂತಿದ್ದರು. ರಾಖಿ ರಾಣಾ "ಅಮ್ಮಾ,, ಕ್ಯಾಂಡಿ ಕೊಡಿಸು" ಅಂತ ಏರ್ಪೋರ್ಟ್ ನ ಶಾಪ್ ಒಂದರ ಎದುರಿಗೆ ಕರ್ಕೊಂಡು ಹೋದರು. ಕರ್ಣ ಚೆಕ್ ಇನ್ ಕಾರ್ಯಗಳ ಬಗ್ಗೆ ಗಮನ ಕೊಡುತ್ತಿದ್ದ. ರಜನಿ ಹಾಗೆ ಸುತ್ತಲೂ ಕಣ್ಣು ಹಾಯಿಸಿದಳು. ಅಲ್ಲೇ ಕುಳಿತಿದ್ದ ವೃದ್ಧ ಹೆಂಗಸೊಬ್ಬಳು, ರಜನಿಯನ್ನು ಕೈಬೀಸಿ ಕರೆದಳು. ಅವಳು ಹತ್ತಿರ ಹೋದೊಡನೆ, ಅವಳ ಕೈಯನ್ನು ಹಿಡಿದು, ಅದಕ್ಕೆ ಮುತ್ತೊಂದನ್ನಿಟ್ಟು, "ಪೂರ್ವ ಕರ್ಮದ ಆಶೀರ್ವಾದ ನಿನಗಿದೆ ಮಹಾರಾಣಿ" ಅಂತ ಹೇಳಿದಳು. ಹಾಗೆ ತಲೆಬಾಗಿ ನಮಸ್ಕರಿಸಿ ಹೊರಟುಹೋದಳು. "ಏನು ಹೇಳಿದಳು" ಅಂತ ಕೇಳುತ್ತಲೇ ಕರ್ಣ ರಜನಿ ಪಕ್ಕ ಬಂದು ನಿಂತ. "ನಾನು ಮಹಾರಾಣಿ ಅಂತೆ" ಅಂತ ಹೇಳಿ ರಜನಿ ಸುಮ್ಮನೆ ಹಾಸ್ಯದಂತೆ ನಗು ಬೀರಿದಳು. ಆದರೆ ಅವಳ ಅಂತರಾತ್ಮಕ್ಕೆ ತಿಳಿದಿತ್ತು, ಇದು ತಮಾಷೆ ಅಲ್ಲ, ಸತ್ಯ ಎನ್ನುವುದು. 

ವಿಮಾನ ಹೊರಟಿತು. ಕಿಟಕಿ ಬದಿ  ಹೊರಗಿನ ನೋಟ ನೋಡಿ ಕಣ್ತುಂಬಿಕೊಳ್ಳುತ್ತಿದ್ದಳು. ಅಷ್ಟರಲ್ಲಿ ಕರ್ಣ "ರಜನಿ, ನೀನು  ಈ ಸೆಂಟಿಮೆಂಟ್ ಗಳನ್ನು ಹೇಗೆ ಮ್ಯಾನೇಜ್ ಮಾಡಿದೆ?" ಎಂದು ಗೊಳ್ಳನೆ ನಕ್ಕ. "ಕರ್ಣ, ನಿನಗಿದು ತಮಾಷೆ - ನನ್ನ ಭ್ರಮೆ ಅಂತ ಅನ್ನಿಸಬಹುದು, ಬಟ್..." ಅನ್ನುವಷ್ಟರಲ್ಲಿ, "ಸರಿ ಆಯ್ತು. ವೈಜ್ಞಾನಿಕ ರೀತಿಯಲ್ಲಿ ನೋಡಿದರೆ, ಇದು ಜಸ್ಟ್ ದೇಜಾ-ವು, ಅಥವಾ ಮ್ಯಾಚಿಂಗ್ ನುರಾನ್ಸ್ ಅನ್ನಬಹುದೇನೋ." ಅಂದ. ಆಗ ರಜನಿ, "ಹಾಗಾದರೆ, ನನಗೆ ಅಲ್ಲಿ ಕಂಡ ದೃಶ್ಯಗಳು? ಹೂಗಳ ಪರಿಮಳದ ಅನುಭವಗಳು? ವೃದ್ಧ ಭಿಕ್ಷುಕಿ, ಉಂಗುರ ಮಾರುತ್ತಿದ್ದ ಹೆಂಗಸು, ಗೈಡ್ ಅವರೆಲ್ಲ ಹೇಳಿದ ಕಥೆಗಳು? ಇವೆಲ್ಲ ಏನು?" ಅಂತ ಕೇಳಿದಳು. ಅದಕ್ಕುತ್ತರವಾಗಿ ಕರ್ಣ -"ಅದೆಲ್ಲ ಬರಿಯ ಕಂಫಾರ್ಮೇಷನ್ ಬಯಾಸ್. ಅಷ್ಟೇ" ಅಂದು ಮತ್ತೆ ಗೊಳ್ಳನೆ ನಕ್ಕ. 

ರಜನಿ ಮುಂದೇನೂ ಮಾತಾಡದೆ, ಮೌನವಾಗಿ ಕಿಟಕಿಗೆ ತಲೆ ಇಟ್ಟು  ಕಣ್ಮುಚ್ಚಿದಳು. ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿತ್ತು. ಅಲ್ಲಿನ ಪ್ರತಿಯೊಂದು ಕಲ್ಲೂ ಶಬ್ದ ಮಾಡುವಂತಿರಬಹುದು. ಪ್ರತಿಯೊಂದು ಮನಸ್ಸೂ  ತನ್ನೊಳಗೆ ಕಥೆಯೊಂದನ್ನು ಬಚ್ಚಿಟ್ಟಿರಬಹುದು. ಯಾವುದು ಎಲ್ಲಿ ಯಾವುದಕ್ಕೆ ಕರೆ ನೀಡುತ್ತದೆ ಎಂಬುದು ಯಾರಿಗೂ ತಿಳಿಯದ ವಿಷಯ.  "ಪೂರ್ವ ಕರ್ಮದ ಆಶೀರ್ವಾದ" ಇರಲೇಬೇಕು ಎಂಬುದು ರಜನಿಗೆ ಮನದಟ್ಟಾಗಿತ್ತು. 

***

ಅಲ್ಲಿಂದ ಹಿಂದಿರುಗಿ ಎರಡು ವಾರಗಳು ಕಳೆದಿದ್ದವು. ಅಂದು ಪಕ್ಕದ ದೇವಸ್ಥಾನದಲ್ಲಿ ಪೂಜಗೆ ಎಂದು  ಮಲ್ಲಿಗೆ ತೆಗೆದುಕೊಂಡು ಹೋಗಿದ್ದರು ರಜನಿ ಹಾಗೂ ಕರ್ಣ.  ಅದನ್ನು ದೇವರಿಗೆ ಸಮರ್ಪಿಸುವಾಗ, ರಜನಿ ಕಿವಿ ಹತ್ತಿರದಲ್ಲೇ ಯಾರೋ "ಮಹಾರಾಣಿ" ಅಂತ ಪಿಸುಗುಟ್ಟಿದಂತಾಯಿತು. ತಿರುಗಿ ನೋಡಿದರೆ ಯಾರೂ ಇರಲಿಲ್ಲ. ಕರ್ಣ "ಆರ್ ಯು ಓಕೆ?" ಅಂದ. ಚೇತರಿಸಿಕೊಂಡ ರಜನಿ "ಓಕೆ" ಅಂದು ಪೂಜೆ ನೋಡಲು ಸಿದ್ಧಳಾದಳು. ಆ ಬಳೆಗಳು ಇನ್ನೂ ರಜನಿ ಕೈಯಲ್ಲಿ ಹೊಳೆಯುತ್ತಿದೆ. ಇದು ಪುನರ್ಜನ್ಮದ ಸತ್ಯ ಕಥೆಯೋ? ಅಥವಾ ಕಲ್ಪನೆಯೋ??? ಉತ್ತರವೇನಿದೆ???

*** 

✍🏻 Deepalaxmi Bhat
Mangaluru 

ಮಂಗಳವಾರ, ಮೇ 27, 2025

ಕನಸು - ಜೀವನ

✍🏻ದೀಪಲಕ್ಷ್ಮಿ ಭಟ್, ಮಂಗಳೂರು 

ದೂರದಲ್ಲಿ ಯಾರೋ ಮಾತಾಡುತ್ತಿರುವ ಹಾಗೆ ಕೇಳಿಸುತ್ತಿದೆ. ಅದೇನೋ ನನ್ನನು ಹಿಡಿದುಕೊಳ್ಳಿ, ನೀರು ತನ್ನಿ ಅಂತೆಲ್ಲ ಕೇಳಿಸುತ್ತಿತ್ತು. ಎಲ್ಲರೂ ತುಂಬಾ ಗಲಿಬಿಲಿ ಆದ ಹಾಗೆ, ಹೆದರಿದ ಹಾಗೆ ಭಾಸವಾಗುತ್ತಿತ್ತು. ಹಾಗೆ ನಿಧಾನಕ್ಕೆ ನನ್ನ ಕಣ್ಣುಗಳನ್ನು ತೆರೆಯುವ ಪ್ರಯತ್ನ ಮಾಡಿದೆ. ಆದರೆ ಏನೂ ನಿರುತ್ಸಾಹ, ಏನೋ ಬಲಹೀನತೆ. ಕೈಕಾಲು ಎಲ್ಲಿದೆ ಅಂತ ತಿಳಿಯುತ್ತಿಲ್ಲ. ಕಣ್ಣುಗಳು ತೆರೆಯುವ ಮನಸ್ಸು ಮಾಡುತ್ತಿಲ್ಲ. ಹಾಗೆಯೇ ನಿಟ್ಟುಸಿರು ಬಿಟ್ಟು ನಿದ್ದೆಗೆ ಜಾರಿದೆ....

***

ನನ್ನ ಕಿವಿಗಳಿಗೆ ಹತ್ತಿರದಲ್ಲಿಯೇ ನರ್ಸುಗಳ ಇಂಜೆಕ್ಷನ್ ಸೂಜಿ, ಮಾತ್ರೆಗಳು, ನರ್ಸು ಟ್ರೇಗಳ ಸದ್ದು  ಕೇಳಿಸುತ್ತಿತ್ತು. ನಿಧಾನವಾಗಿ ಕಣ್ತೆರೆದು ನೋಡಿದರೆ, ಸುತ್ತಲೂ ಬಿಳಿ ಬಟ್ಟೆ, ಬಿಳಿ ಪೈಂಟು ಮಾಡಿದ ಗೋಡೆಗಳು, ಬಿಳಿ ಫ್ಯಾನು. ನೋಡಿದಾಗಲೇ ಗೊತ್ತಾಯಿತು. ನಾನು ಆಸ್ಪತ್ರೆಯಲ್ಲಿದ್ದೇನೆ ಅಂತ. ನನ್ನವರು ಅಂತ ಯಾರೂ ಕಾಣಿಸ್ಲಿಲ್ಲ. ಹಾಗೆ ಸ್ವಲ್ಪ ಹೊತ್ತು ಕಣ್ತೆರೆದು ನೋಡುತ್ತಿದ್ದೆ. ನರ್ಸಮ್ಮನಿಗೆ ನಾನು ಕಣ್ತೆರೆದದ್ದು ಕಂಡಿತು. ಆ ಕೂಡಲೇ ನನ್ನನ್ನು ಕೂರಿಸಿ ಬೇಕಾದ ಟೆಸ್ಟುಗಳನ್ನು ಮಾಡಿದಳು. "ಹೇಗಿದ್ದೀರಾ ಈವಾಗ? ಡಾಕ್ಟ್ರನ್ನು ಕರೆದಿದ್ದೇನೆ, ಬಂದು ನೋಡಿಬಿಟ್ಟು ಮಾತಾಡಿಸ್ತಾರೆ." ಅಂತ ಹೇಳಿದ್ಲು. ನಿಧಾನಕ್ಕೆ ಮಾತಾಡಲು ಪ್ರಯತ್ನಿಸಿ, "ನಂಗೆ ಏನಾಗಿದೆ?" ಅಂತ ಕೇಳಿ ಸುತ್ತಮುತ್ತ ನನ್ನವರಿಗಾಗಿ ಹುಡುಕಾಡಿದೆ. "ನೀವು ಇಲ್ಲಿ ಬಂದು 5 ದಿನಗಳೇ ಆಗಿದೆ. ಡಾಕ್ಟ್ರು ಬಂದು ನಿಮ್ಮತ್ರ ಮಾತಾಡ್ತಾರೆ." ಅಂತ ಹೇಳಿ ನರ್ಸಮ್ಮ ಹೊರಗಡೆ ಹೋದಳು. ನನ್ನವರು ಅಂತ ಯಾರೂ ಕಾಣದೆ ಇರುವಾಗ, ಕಿಟಕಿಯಿಂದ ಹೊರಗೆ ನೋಡಿದೆ. ಹೊರಗೆ ಮರದಲ್ಲಿ ಒಂದು ಪಕ್ಷಿ ತನ್ನ ಮರಿಗಳಿಗೆ ಆಹಾರ ಉಣಿಸುತ್ತಿತ್ತು. ಇದನ್ನು ನೋಡಿ, ನಾನು ನನ್ನ ಹೆತ್ತವರ ನೆನಪಾಗಿ, ನೆನಪಿನ ಲೋಕಕ್ಕೆ ನಿಧಾನವಾಗಿ ಜಾರಿದೆ. 

***

75 ವರ್ಷದ ಹಿರಿಯನಾದ ನಾನು ನನ್ನ ಜೀವನದಲ್ಲಿ ತುಂಬಾ ಅನುಭವ ಪಡೆದಿದ್ದೇನೆ. 27 ಜನರಿರುವ ಮನೆತನದಲ್ಲಿ ಹುಟ್ಟಿದ ನಾನು ಮನೆಗೆ ಮೂರನೆಯ ಸಂತಾನವಾಗಿ ಹುಟ್ಟಿದವನು. ಸಂಖ್ಯೆ ಹೇಳುವಂತೆ ಮನೆಯವರಿಗೆ ನಾನು ಹದಿಹರೆಯಕ್ಕೆ ಬರುವ ತನಕ ಬೇಕಾಗಿದ್ದವನಾಗಿದ್ದರೂ, ನನ್ನ ಅಣ್ಣನವರಿಗೆ ಮದುವೆ  ಅಂತ ಆದ ಬಳಿಕ ನಾನು ಬೇಡವಾದವನಾದೆ. ನನ್ನ ಹೆತ್ತವರು ತುಂಬಾ ಅಪರೂಪದ ಜೋಡಿ. ಇಬ್ಬರ ಮಧ್ಯೆ ವಯಸ್ಸಿನಲ್ಲಿ ತುಂಬಾ ಅಂತರವಿದ್ದರೂ, ಜೀವನ ನಡೆಸುವ ಕಲೆ, ಅನ್ಯೋನ್ಯತೆ ಅವರನ್ನು ನೋಡಿ ಕಲಿಯಬೇಕಾದದ್ದು. 12 ಮಕ್ಕಳನ್ನು ಹೆತ್ತು ಸಾಕಿ ಸಲುಹಿ, ಎಲ್ಲರಿಗೂ ಒಳ್ಳೆಯ ವಿದ್ಯೆ, ಭವಿಷ್ಯತ್ತು ನೀಡಿ, ಹೆಣ್ಣು ಮಕ್ಕಳು ಅಂದರೆ ನನ್ನ ತಂಗಿಯಂದಿರಿಗೆ ಒಳ್ಳೆಯ ಮನೆತನದವರಿಗೆ ಮದುವೆ  ಮಾಡಿ ಕೊಟ್ಟು, ಒಳ್ಳೆಯ ರೀತಿಯಲ್ಲಿ ಜವಾಬ್ದಾರಿ ನಿಭಾಯಿಸಿದವರು ನನ್ನ ಹೆತ್ತವರು.  ವಿದ್ಯೆಗಾಗಿ ಖರ್ಚು ಮಾಡಲು ದುಡ್ಡಿನ ಕೊರತೆಯಿದ್ದ ಕಾರಣ ನನ್ನ ಅಣ್ಣಂದಿರು ಚಿಕ್ಕ ಪ್ರಾಯದಲ್ಲೇ ಹೋಟೆಲ್ ವ್ಯವಹಾರ ಪ್ರಾರಂಭಿಸಿದರು. ನಾನು ದಿನದ ಸಮಯದಲ್ಲಿ ಊರಿನ ಫ್ಯಾಕ್ಟರಿ ಒಂದರಲ್ಲಿ ಅಟೆಂಡರ್ ಕೆಲಸ ಮಾಡಿಕೊಂಡು, ಸಂಜೆ ಕಾಲೇಜಿನಲ್ಲಿ ಓದು ಮುಂದುವರೆಸಿದೆ. ಹಾಗೆ ಓದು ಮುಗಿಸಿ, ಸರಕಾರಿ ನೌಕರಿ ಪಡೆದುಕೊಂಡೆ. ಅಣ್ಣಂದಿರ ಮದುವೆ  ಆದ ಮೇಲೆ, ನನಗೆ ಮನೆಯಲ್ಲಿ ಬೆಲೆ ಕಡಿಮೆಯಾಗತೊಡಗಿತು. ಹಾಗೆ ನಂಗೆ ಮದುವೆ  ಆದ ಮೇಲೆ, ಹಿರಿಯ ಮನೆಯಲ್ಲಿ ಹಿರಿಯಣ್ಣ ನಿಂತು ನಾವೊಬ್ಬರೂ ತಮ್ಮಂದಿರು ಬೇರೆಬೇರೆ ಮನೆ ಮಾಡಿಕೊಂಡು ಕುಟುಂಬದ ಪೂಜಾಕಾರ್ಯಗಳ ಸಮಯದಲ್ಲಿ ಮಾತ್ರ ಭೇಟಿ ಆಗತೊಡಗಿದೆವು. ಹೀಗೆ ಜೀವನ ಕಳೆದು, ನಮ್ಮೆಲ್ಲರಿಗೂ ಮಕ್ಕಳು ಮರಿಗಳಾಗಿ, ಅವರ ಮದುವೆಯೂ ನಡೆದು, ಇಂದು ಎಲ್ಲ ಮನೆಗಳಲ್ಲಿ ಹಿರಿಯ ಜೀವಗಳು ಮಾತ್ರ ಇದ್ದೆವು. ಇಂದಿನ ಮಕ್ಕಳಿಗೆ ಮನೆತನದ ಮೇಲೆ ಪ್ರೀತಿ ಕಡಿಮೆ. ತಮ್ಮ ಜೀವನ, ತಮ್ಮ ಕೆರಿಯರ್ ಅಂದುಕೊಂಡು ಊರು ಬಿಟ್ಟು ಹೋಗಿದ್ದಾರೆ. ಇರಲಿ. ಅವರವರ ಆಸೆಗೆ ತಕ್ಕ ಹಾಗೆ ಜೀವನ ನಡೆಸಲಿ ಎಂದು ನಾವೂ ಏನೂ ಅನ್ನಲಿಲ್ಲ. ನೋಡುನೋಡುತ್ತಾ ನನ್ನ ಅಣ್ಣಂದಿರು, ಅತ್ತಿಗೆಯರು ಕೊನೆಯುಸಿರೆಳೆದರು. ನನ್ನ ಹೆಂಡತಿ ನೀಲಾ ಕೂಡಾ ಮಕ್ಕಳು ದೂರ ಆಗಿದ್ದನ್ನು ನೆನೆದು ಕೊರಗಿ ಕೊರಗಿ ನನ್ನಿಂದ ದೂರ ಆಗಿದ್ದಾಳೆ. ಈಗ ನಾನೊಬ್ಬನೇ ಮನೆಯಲ್ಲಿ. 

ಹೀಗೆ ನೆನಪಿನ ಮಹಾಸಾಗರದಲ್ಲಿ ತೇಲುತ್ತಿದ್ದಂತೆ, ನೀಲಾ ಹೇಳಿದ ಮಾತುಗಳು ಕಿವಿಗೆ ಅಪ್ಪಳಿಸಿದವು - "ನೋಡಿ ರೀ, ನೀವು ಮಕ್ಕಳಿಗೆ ಅಂತ ಎಲ್ಲವನ್ನೂ ಮಾಡಿ ಇಟ್ಟಿದ್ದೀರಿ. ಆದರೆ, ಇವತ್ತು ಆ ಮಕ್ಕಳು, ನಮ್ಮನ್ನು ಒಂಟಿಯಾಗಿ ಬಿಟ್ಟು ದೂರ ಹೋಗಿದ್ದಾರೆ. ನಮ್ಮನ್ನು ಮರೆಯುವಂತಿದ್ದಾರೆ. ಈವಾಗಲೂ ಕಾಲ ಮಿಂಚಿಲ್ಲ. ಅವರನ್ನು ಬರಲು ಹೇಳೋಣ."

ಅಂದ ಹಾಗೆ, ನನಗೆ ಇಬ್ಬರು ಮಕ್ಕಳು. ದೊಡ್ಡವಳು ನನ್ನ ಪ್ರೀತಿಯ ನೀಲಿಮಾ. ನನ್ನ ಹೆಂಡತಿ ಹೆಸರು "ನೀಲಾ" ದಿಂದ ನೀಲಿ ಹಾಗೂ ನನ್ನ ಹೆಸರು "ರಾಮಾ"ದಿಂದ "ಮಾ" ಸೇರಿಸಿ ನೀಲಿಮಾ ಅಂತ ನಮ್ಮ ಪ್ರೀತಿಯ ಸಂಕೇತವಾಗಿ ಹೆಸರಿಟ್ಟಿದ್ದೆವು. ಚಿಕ್ಕವನು ನೀಲೇಶ. ಇಬ್ಬರನ್ನೂ ತುಂಬಾ ಪ್ರೀತಿಯಿಂದ ಸಾಕಿ, ಒಳ್ಳೆಯ ವಿದ್ಯೆ  ದೊರಕಿಸಿ ಕೊಟ್ಟೆವು. ನೀಲಿಮಾ ಡಾಕ್ಟರಾಗಿ, ಅವಳ ಜೊತೆ ಕಲಿತ ಸಂದೇಶನನ್ನು ಪ್ರೀತಿಸಿ ನಮಗೆ ಗೊತ್ಹಿಲ್ಲದ ಹಾಗೆ ಮದುವೆಯಾದಳು. ಆ ನಂತರ, ನಮ್ಮ ಮನೆಗೆ ಬರುವುದನ್ನೇ ನಿಲ್ಲಿಸಿದಳು. ನನ್ನ ಮಗ ನೀಲೇಶ, ನಾವು ನೋಡಿದ ಹೆಣ್ಣನ್ನೇ ಮದುವೆಯಾದರೂ ಕೂಡಾ, ಮದುವೆಯಾದ ಮರುಕ್ಷಣ ನಮ್ಮನ್ನು ದೂರ ಮಾಡಿದ. ಈಗ ಸುಮಾರು 10 ವರ್ಷಗಳಿಂದ ನಾವು ಒಂಟಿಯಾಗೇ ಬದುಕುತ್ತಿದ್ದೆವು. ಕಳೆದ ವರ್ಷ, ಮಕ್ಕಳು ಬಾರದ ಕೊರಗಿನಿಂದ ನೀಲಾ ಕೊನೆಯುಸಿರೆಳೆದಳು. 

ಇಷ್ಟು ನೆನಪಾಗುತ್ತಲೇ, ನರ್ಸಮ್ಮ ಬಂದು ಏನೋ ಒಂದು ಇಂಜೆಕ್ಷನ್ ಚುಚ್ಚಿದಳು. ನನ್ನ ಕಣ್ಣು ಮಂಜಾಗಿ, ನಿಧಾನಕ್ಕೆ ನಿದ್ದೆಗೆ ಜಾರಿದೆ. 

***

ನನ್ನ ಸುತ್ತಲೂ ದಟ್ಟವಾದ ಕಾಡು.  ಕತ್ತಲು ಕವಿದಿದೆ. ಒಂದಷ್ಟು ದೂರದಲ್ಲಿ ನಿಖರವಾದ ಬೆಳಕೊಂದು ಬೀರುತ್ತಿದೆ.  ಆ ಬೆಳಕು ಎಲ್ಲಿಗೆ ಬೀಳುತ್ತಿದೆ ಎಂದು ನೋಡಿದರೆ ಅಲ್ಲೇನೋ ಹೊಳೆಯುವಂತೆ ಕಾಣುತ್ತಿದೆ. ನಾನು ನಿಧಾನವಾಗಿ ಅದರ ಸಮೀಪಕ್ಕೆ ಹೋಗುತ್ತಿದ್ದೇನೆ. ಅಷ್ಟರಲ್ಲಿ ಹಿಂದಿನಿಂದ ನನ್ನನ್ನು ಯಾರೋ ತಟ್ಟಿದಂತಾಯಿತು. ಹಿಂತಿರುಗಿ ನೋಡಿದರೆ, ನೀಲಾ. "ರೀ, ಬನ್ನಿ ನನ್ನ ಜೊತೆ. ಒಂಟಿಯಾಗಿದ್ದು ಬೇಸರವಾಗುತ್ತಿದೆ." ಅಂತ ಹೇಳಿದಳು. ಅಷ್ಟರಲ್ಲಿ ಈಚೆಯಿಂದ "ಡಾಕ್ಟರ್, ಡಾಕ್ಟರ್, ಎಮರ್ಜೆನ್ಸಿ" ಅನ್ನುವ ಸಡ್ಡು ದೂರದಿಂದ ಕೇಳಿಸುತ್ತಿದೆ. ನನ್ನನ್ನು ನೀಲಾ ಹಿಡಿದು ಎಳೆದಂತಾಯಿತು.... ಎಲ್ಲವೂ ಮೌನವಾಯಿತು. ಬೆಳಕೂ ದೂರ ಆಯ್ತು. ಮತ್ತೆ ನಿಶ್ಶಬ್ಧ ಆವರಿಸಿತು... 

ಕಣ್ತೆರೆದಾಗ ಸುತ್ತಲೂ ಬೆಳಕು ಕಾಣಿಸುತ್ತಿತ್ತು. ಕಿವಿಗೆ ನನ್ನ ಎದೆಬಡಿತ ಪರಿಶೀಲಿಸುವ ಮಷೀನಿನ ಬೀಪ್ ಸದ್ದು  ಕೇಳಿಸುತ್ತಿತ್ತು. ಐಸಿಯುನಲ್ಲಿದ್ದೇನೆ ಎಂಬುದು ಖಚಿತವಾಯಿತು. ಸ್ವಲ್ಪ ಹೊತ್ತಿನಲ್ಲಿ ನರ್ಸಮ್ಮ ಬಂದು, ಡಾಕ್ಟರನ್ನು ಕರೆ ತಂದಳು. ಹಾಗೆ ಚೆಕ್ ಮಾಡಿದ ಡಾಕ್ಟ್ರು, ನನ್ನನ್ನು ವಾರ್ಡಿಗೆ ಶಿಫ್ಟ್ ಮಾಡಲು ತಿಳಿಸಿದರು. ಮಾತನಾಡಲು ಪ್ರಯತ್ನಿಸಿದೆ. ಆದರೆ ನಿಶ್ಶಕ್ತಿಯಿಂದಾಗಿ ಮಾತು ಗಂಟಲಲ್ಲೇ ಉಳಿಯಿತು. ಹೇಗೋ ವಾರ್ಡಿಗೆ ಕರೆದೊಯ್ದರು. ಇನ್ನೂ ನನ್ನ ಮನೆಯವರ ಸುದ್ದಿ ಇರಲಿಲ್ಲ. ಸ್ವಲ್ಪ ಶಕ್ತಿ ಬಂದಮೇಲೆ, ನರ್ಸಮ್ಮನಲ್ಲಿ ಕೇಳಿದೆ: "ನನಗೆ ಏನಾಗಿದೆ? ಯಾರು ನನ್ನನ್ನು ಆಸ್ಪತ್ರೆಗೆ ಕರೆತಂದರು?". "ತಾತ, ನಿಮಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಜೊತೆಗೆ, ರಕ್ತ ಕಡಿಮೆ ಆಗಿ, ಪ್ರಜ್ಞಾಹೀನರಾಗಿದ್ರಿ. ಇಲ್ಲಿಗೆ ಕರೆತಂದಾಗ ನಿಮಗೆ ಪ್ರಜ್ಞೆ ಇರಲಿಲ್ಲ. ನಿಮ್ಮನ್ನು ಇಲ್ಲಿಗೆ ಹರೀಶ ಅನ್ನುವವರು ಕರೆತಂದರು" ಅಂತ ಹೇಳಿದಳು. ಹರೀಶ ಅನ್ನುತ್ತಲೇ ನನ್ನ ನೆನಪುಗಳು 10 ವರ್ಷಗಳ ಹಿಂದೆಗೆ ಜಾರಿತು.

***

ಮನೆ ತುಂಬಾ ಸಡಗರ ಸಂಭ್ರಮ. ಯಾಕೆ ಅಂತೀರಾ? ಆ ದಿನ ನನ್ನ ಮಗ ನೀಲೇಶನ ಮದುವೆ ಸಮಾರಂಭ. ನೀಲಿಮಾ ಬಿಟ್ಟು ದೂರ ಉಳಿದಿದ್ದರೂ, ತಮ್ಮನ ಮದುವೆ  ಅಂತ ಮನೆಗೆ ಬಂದಿದ್ದಳು. ತನ್ನ ಪುಟ್ಟ ಮಗಳನ್ನೂ ಕರೆದುಕೊಂಡು ಬಂದಿದ್ದಳು. ಬೇಸರವೆಷ್ಟೇ  ಇದ್ದರೂ, ಪುಟ್ಟ ಮಗುವನ್ನು ನೋಡಿದಾಗ ಏನೋ ಒಂದು ಪ್ರೀತಿ ಹುಟ್ಟಿ, ಅವಳನ್ನು ಕ್ಷಮಿಸಿದೆವು. ಮದುವೆ ಮನೆ ತುಂಬಾ ಸಂಭ್ರಮದಿಂದ ಓಡಾಡಿ, ಇನ್ನು ನಮ್ಮ ಜವಾಬ್ದಾರಿಗಳೆಲ್ಲ ಕಳೆಯಿತು ಅಂತ ನೆಮ್ಮದಿಯಿಂದ ಕೂತಿದ್ರೆ, ಮಗಳು ನೀಲಿಮಾ ಬಂದು, " ಅಪ್ಪಾ, ಈಗ ನೀಲೇಶನ ಮದುವೆಯೂ ಮುಗಿಯಿತು. ಇನ್ನು ನನಗೆ ನನ್ನ ಜೀವನ ಕಟ್ಟಿಕೊಳ್ಳಲು ನಿಮ್ಮ ಆಸ್ತಿ ಪಾಲು ಬೇಕು. ನಾಳೆ ದಿನ ನಾನೂ ನೀಲೇಶನೂ ಜಗಳ ಆದಿ ದೂರ ಆಗಬಾರದೆಂದರೆ, ಈವಾಗಲೇ, ಆಸ್ತಿ ಪಾಲು ಮಾಡಿ ನನ್ನ ಪಾಲು ನನಗೆ ಕೊಟ್ಟು ಬಿಡಿ." ಅಂದಳು. ತುಂಬಿದ ಕುಟುಂಬದಲ್ಲಿ ಬೆಳೆದಿದ್ದ ನಾನು, ನನ್ನ ಅಪ್ಪ ಅಮ್ಮ ಬದುಕಿದ್ದ ತನಕ ಆಸ್ತಿ ಪಾಲು ಅಂತ ಮಾತನಾಡಿಯೇ ಇರಲಿಲ್ಲ. ಈಗಿನ ಮಕ್ಕಳ ಚಿಂತನೆ ನೋಡಿ ಅಲ್ಲೇ ಎದೆಗೆ ಚೂರಿ ಇರಿದಂತಾಯಿತು. ಸತಿ ಆಯ್ತು ಅಂದುಕೊಂಡು, ಮಕ್ಕಳಿಗೆ ಪಾಲು ಮಾಡಿ ನನ್ನ, ನೀಲಾಳ ಹೆಸರಲ್ಲಿ ನಮ್ಮ ಮನೆ ಅಡಿ ಜಾಗ ಮಾತ್ರ ಇರಿಸಿ, ಉಳಿದದ್ದೆಲ್ಲವನ್ನೂ ಮಕ್ಕ ಹೆಸರಿಗೆ ಮಾಡಿ ಕೈ ತೊಳೆದುಕೊಂಡೆ. ಆಸ್ತಿ ಪಾಲು ದೊರೆತದ್ದೇ  ತಡ, ಮಕ್ಕಳಿಬ್ಬರೂ ನಮ್ಮನ್ನು ಒಂಟಿಯಾಗಿ ಬಿಟ್ಟು, ದೂರ ಸಾರಿದರು. ದಿನಕ್ಕೊಮ್ಮೆ ಮಾತನಾಡುತ್ತಿದ್ದ ಮಕ್ಕಳು ವಾರಕ್ಕೊಮ್ಮೆ ಅಂತ ಆಗಿ, ಈಗ ವರ್ಷಕ್ಕೊಮ್ಮೆ ಮಾತನಾಡುವುದೂ ಕಡಿಮೆ ಆಯ್ತು. ಹಾಗೆ ಒಂಬತ್ತು ವರ್ಷಗಳೇ ಕಳೆದು, ಮಕ್ಕಳು ದೂರ ಆದ ಕೊರಗಿನಲ್ಲಿ ಅತ್ತು ಅತ್ತು, ನನ್ನ ನೀಲಾ ಕೊನೆಯುಸಿರೆಳೆದಳು. ಈ ಸಂದರ್ಭಗಳು ನೆನಪಾಗುತ್ತಲೇ ನನ್ನ ಕಣ್ಣ ಅಂಚಿಂದ ಹನಿ ನೀರು ಹರಿಯಿತು. 

ಆಗ ಅವಳ ಅಂತ್ಯ ಸಂಸ್ಕಾರ ಮಾಡಲೂ ನನ್ನ ಮಕ್ಕಳು ಬರಲಿಲ್ಲ. ನಾನು, ನನ್ನ ಕುಟುಂಬದವರೆಲ್ಲರೂ ಕರೆದರೂ, ಅವರಿಬ್ಬರೂ ಸಂಬಂಧವೇ ಇಲ್ಲದಂತೆ ನಡೆದುಕೊಂಡರು. ಈ ಬೇಸರದ ನಡುವೆ, ಮಗನಂತೆ ನನ್ನ ನೀಲಾಳ ಅಂತ್ಯ ಸಂಸ್ಕಾರ ಮಾಡಿದ್ದು, ನನ್ನ ಅಣ್ಣನ ಮಗ ಹರೀಶ. ಅಂದಿನಿಂದ ನನ್ನ ಪ್ರತಿದಿನ ಬಂದು ಮಾತಾಡಿಸಿಕೊಂಡು ಹೋಗುತ್ತಿದ್ದವನು ಹರೀಶನೇ. ತುಂಬಾ ಪ್ರೀತಿ ತುಂಬಿದ ಮನಸ್ಸು ಅವನದ್ದು. ಚಿಕ್ಕಪ್ಪ ಅಂದರೆ ಅಪ್ಪನಷ್ಟೇ ಗೌರವ ಪ್ರೀತಿ ಇಟ್ಟುಕೊಂಡು, ನನ್ನ ಆರೋಗ್ಯಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಸಮಯಕ್ಕೆ ಸರಿಯಾಗಿ, ಯಾವುದೇ ಉದಾಸೀನ ಅಥವಾ ಬೇಸರವಿಲ್ಲದೆ ಮಾಡಿಕೊಡುತ್ತಿದ್ದ. ಅವನ ಪ್ರೀತಿ ಕಂಡು ನಾನೇ ಬೆರಗಾಗಿದ್ದೆ. ಸ್ವಂತ ಮಕ್ಕಳೇ ತೋರಿಸದ ಪ್ರೀತಿಯನ್ನು ಅವನು ನನಗೆ ತೋರಿಸುತ್ತಿದ್ದ. ಅದೂ ಯಾವುದೇ ಸ್ವಾರ್ಥ ಮನಸ್ಸಲ್ಲಿ ಇಲ್ಲದೆ. ಅವನು ಬಂದು ಹೋಗಿ ಮಾಡುತ್ತಿದ್ದರಿಂದ ಇವತ್ತು ಸಮಯಕ್ಕೆ ಸರಿಯಾಗಿ ನನ್ನನ್ನು ಆಸ್ಪತ್ರೆಗೆ ಸೇರಿಸಿ ನನ್ನ ಪ್ರಾಣ ಉಳಿಸುವ ಪ್ರಯತ್ನ ಮಾಡುತ್ತಿದ್ದಾನೆ. ಹೀಗೆ ಯೋಚನೆ ಮಾಡುತ್ತಾ ಹಾಗೆಯೇ ನಿದ್ದೆಗೆ ಜಾರಿದೆ. 

***

Generated image 

 

ಆವಾಗಲೇ ಕೈ ಹಿಡಿದು ಎಳೆದ ನೀಲಾ ನನ್ನನ್ನು ಬೆಳಕಿನ ಕಡೆಗೆ ಕರೆದೊಯ್ಯುತ್ತಿದ್ದಾಳೆ. ಆ ಬೆಳಕಿನಲ್ಲಿ ಏನೋ ಸಂಭ್ರಮ, ಏನೋ ಪ್ರಶಾಂತತೆ. ಅಲ್ಲೇ ಇರೋಣ ಎನ್ನುವ ಭಾವನೆ. ದೂರದಲ್ಲಿ "ಡಾಕ್ಟರ್, ಎಮರ್ಜೆನ್ಸಿ" ಅನ್ನುವ ಧ್ವನಿ. ಆದರೆ ಆ ಧ್ವನಿ ಕಡಿಮೆ ಆಗುತ್ತಾ, ನನ್ನನ್ನು ಬೆಳಕಿನೆಡೆಗೆ ನೀಲಾ ಕರೆದೊಯ್ಯುತ್ತಿದ್ದಾಳೆ . ಆ ಬೆಳಕು "ರಾಮಾ, ಬಾ. ನನ್ನ ಜೊತೆ ಸೇರು." ಅಂತ ಕರೆಯುತ್ತಿತ್ತು. ನೀಲಿಮಾ ಆ ಬೆಳಕಿನ ನಡುವೆ ನಿಂತು ನನ್ನ ಕಡೆ ಮಂದಹಾಸ ಬೀರುತ್ತಿದ್ದಾಳೆ. ಹತ್ತಿರ ಹೋಗುತ್ತಿದ್ದಂತೆ, ನನ್ನ ಅಣ್ಣಂದಿರು, ಅತ್ತಿಗೆಯರು ಎಲ್ಲರೂ ಕಂಡರೂ. ಎಲ್ಲರೂ ನನ್ನನ್ನು ಕರೆಯುತ್ತಿರುವಂತೆ ಭಾಸವಾಯಿತು. ಎಲ್ಲರೂ ನನ್ನ ಕಡೆ ಮಂದಹಾಸ ಬೀರಿ ಬಾ ಎಂಬಂತೆ ಕೈ ಚಾಚಿ ಕರೆಯುತ್ತಿದ್ದಾರೆ. ಮುಂದೆ ಮುಂದೆ ಹೋಗುತ್ತಿದ್ದ ಹಾಗೆ ಬೆಳಕು ನನ್ನನ್ನು ಆವರಿಸತೊಡಗಿತು. ಆ ಬೆಳಕಿನಲ್ಲಿ ಒಂದಾದ ನಾನು ಏನೋ ಒಂದು ರೀತಿ ಸಂತೋಷ, ಶಾಂತಿಯನ್ನು ಅನುಭವಿಸುತ್ತಿದ್ದೆ. ಯಾವುದೇ ರೀತಿಯ ಆಲೋಚನೆ ನನಗೆ ಬರಲಿಲ್ಲ. ಹಾಗೆ ಸಂತೋಷದಿಂದ ಮಂದಹಾಸ ತಾನಾಗಿಯೇ ನನ್ನ ಮುಖದಲ್ಲಿ ಮನೆಮಾಡಿತು. 

ಈ ಅವಧಿಯಲ್ಲಿ ಒಂದು ನಿಶ್ಯಬ್ದ ಪಾತಾಳದಂತೆ ಒಡಲೊಳಗಿನ ಪ್ರಜ್ಞೆ ಸಂಪೂರ್ಣವಾಗಿ ಬೆಳಕಿನಿಂದ ತುಂಬಿತ್ತು. ಆ ಬೆಳಕು ದೈವತ್ವದಂತೆ ಭಾಸವಾಗುತ್ತಿತ್ತು. ಈಗ ನನಗೆ ಭಯವೂ ಇಲ್ಲ, ತೊಂದರೆಗೊಳಗಾದ ಆತ್ಮವೂ ಅಲ್ಲ. ಈ ಲೋಕದ ಗೊಂದಲ, ಮಕ್ಕಳ ನಿರ್ಲಕ್ಷ್ಯ, ನೋವು, ನಿರಾಸೆ ಇವೆಲ್ಲವೂ ದೂರವಾಗಿತ್ತು. ಅಲ್ಲಿಂದ ಹಿಂದೆ ತಿರುಗಿ ನೋಡಿದಾಗ – ನೋವುಗಳು ಎಷ್ಟು ದೂರವಿತ್ತು! ಕೇವಲ ಒಂದು ನಗು, ನೆನಪು, ಪ್ರೀತಿ ಮಾತ್ರ ಉಳಿದಿದ್ದವು.

ನನ್ನ ತಾಳ್ಮೆ, ನನ್ನ ಪ್ರೀತಿ, ನನ್ನ ಕಣ್ಣೀರು - ಇವೆಲ್ಲವೂ ಕಾಣದಂತೆ ಮಾಯವಾಗಿದ್ದವು. ನೋಡು ನೋಡುತ್ತಿದ್ದಂತೆಯೇ, ನಾನು ಮತ್ತೊಂದು ಮನೆ ಸೇರುತ್ತಿದ್ದೆ. ಇಲ್ಲಿ ನನ್ನ ನೀಲಾ, ನನ್ನ ಅಣ್ಣಂದಿರು, ಎಲ್ಲರೂ ನೆಮ್ಮದಿಯಿಂದ, ಸಂತೋಷದಿಂದ  ನನ್ನನ್ನು ಸ್ವಾಗತಿಸುತ್ತಿದ್ದಾರೆ. ಇದೊಂದು ಕನಸು ಇರಬಹುದು. ಇಲ್ಲವಾದರೂ, ಇದು ನನಗೆ ಜೀವನ. ನನ್ನ “ಕನಸು - ಜೀವನ”.

***

 

✍🏻 Deepalaxmi Bhat
Mangaluru 

ಭಾನುವಾರ, ಏಪ್ರಿಲ್ 27, 2025

ಹುಣಸೆ ಮರದ ನೆರಳಿನಲ್ಲಿ - ಒಂದು ಸತ್ಯಗಾಥೆ

✍🏻*ದೀಪಲಕ್ಷ್ಮಿ ಭಟ್*, ಮಂಗಳೂರು

 

ತುಂಬಾ ವರ್ಷಗಳ ಮೇಲಾಯ್ತು ನಾನು ಇಲ್ಲಿಗೆ ಬಂದು. ಇದು ನನ್ನ ಊರು. ನಾನು ಹುಟ್ಟಿ ಬೆಳೆದ ನನ್ನ ಸವಣೂರು. ನಾವು ಊರು ಬಿಟ್ಟು ಬೆಂಗಳೂರಿಗೆ ಹೋಗಿ ಹಲವಾರು ವರ್ಷಗಳೇ ಕಳೆದಿವೆ. ನಮ್ಮ ಊರಿನಲ್ಲಿ ಓದು ಬರಹಕ್ಕೆ ಪ್ರಾಶಸ್ತ್ಯ ಕಮ್ಮಿ. ಹಾಗಾಗಿ ನಾನು ಮೇಲ್ದರ್ಜೆಯ ಕಲಿಕೆಗಾಗಿ ಬೆಂಗಳೂರಿಗೆ ಬಂದವ, ಓದು ಮುಗಿಸಿ ಅಲ್ಲೇ ಕೆಲಸ ಗಿಟ್ಟಿಸಿಕೊಂಡು, ಹಾಯಾಗಿ ಅಲ್ಲೇ ಸಂಸಾರ ಹೂಡಿದೆ. ನನಗೋ, ಊರಿನಲ್ಲಿ ಹಿಂದೆ ಮುಂದೆ ಯಾರೂ ಇಲ್ಲದ ಕಾರಣ, ಊರಿಗೆ ಬರುವ ಗೋಜೇ ಇರಲಿಲ್ಲ. ಹಳೆಯ ಕಾಲದ ಬೀದಿ ದಾರಿಗಳಲ್ಲಿ ನನ್ನ ಹೆಜ್ಜೆಗಳು ಹೊಸದಾಗಿ ಅಟ್ಟಿಹಾಕಿದ ಧೂಳಿನ ಮೇಲೆ ಹೆಜ್ಜೆ ಗುರುತು ಬಿಟ್ಟವು. ನನ್ನ ಬಾಲ್ಯದ ನೆನಪುಗಳು ಪ್ರತಿಯೊಂದು ಕೂಡ ಈ  ಬೀದಿಗಳಲ್ಲಿ ಇನ್ನೂ ಜೀವಂತವಾಗಿಯೇ ಇವೆ. 

https://images.nativeplanet.com/webp/kn/img/2016/10/sbt-1-07-1475841725.jpg



ನನ್ನ ಹೆಸರು ರಾಜ. ನಾನು ಪದವಿ ಗಳಿಸಲೆಂದು ಬೆಂಗಳೂರಿಗೆ ಹೋದವ. ಅಲ್ಲೇ ಒಳ್ಳೆಯ ಕಂಪೆನಿಲಿ ಕೆಲಸ ಸಿಕ್ಕಿ ಅಲ್ಲೇ ಜೀವನದ ಬೇರೂರಿದ್ದರೂ, ನನ್ನ ಬಾಲ್ಯದ ನೆನಪುಗಳು ನನ್ನನ್ನು ಸದಾ ಸೆಳೆಯುತ್ತಿದ್ದವು. ಈ ಸಲ, ನಾನು ಊರಿಗೆ ಬಂದದ್ದು ಕೇವಲ ನೆನಪುಗಳಿಗಾಗಿ ಅಲ್ಲ, ಒಂದು ತೀವ್ರ ಆಕರ್ಷಣೆ, ಒಂದು ರಹಸ್ಯ ಪರಿಹರಿಸುವ ಸಂಕಲ್ಪ. ನನ್ನ ಕಾಲುಗಳು ಸವಣೂರಿನ ಹಳೆಯ ದಾರಿಗಳ ಮೇಲೆ ಸಾಗಿದಂತೆ, ನಾನು ನನ್ನ ಬಾಲ್ಯದ ನೆನಪುಗಳನ್ನು ಹಚ್ಚಿಹಾಕುತ್ತಿದ್ದೆ. ನಾನು ಎಲ್ಲಿದ್ದರೂ ನನ್ನ ಮನಸ್ಸು ಹಳೆಯ ದಾರಿಗಳತ್ತ, ದೊಡ್ಡ ಹುಣಸೆ ಮರದ ಕಡೆಗೆ, ನನ್ನ ಬಾಲ್ಯದ ನೆಲೆಮೂಡಿದ ಜಾಗಕ್ಕೆ ಹಿಂತಿರುಗುತ್ತಿತ್ತು.

ಆ ಮಂಗಳವಾರದ ಸಂಜೆ,ದೊಡ್ಡ ಹುಣಸೆ ಮರದ ಬಳಿ ನಾನು ನಿಂತಿದ್ದೆ. ಅದು ಕೇವಲ ಮರವಲ್ಲ; ನಮ್ಮ ಊರಿನ ಇತಿಹಾಸವನ್ನು ಹಂಚುವ ಜೀವಂತ ಸಾಕ್ಷಿ. ನಾನು ಹುಣಸೆ ಮರದ ಕೆಳಗೆ ನಿಂತು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾಗ, “ಇಲ್ಲಿ ಬಂದು ಏನನ್ನು ಹುಡುಕುತ್ತಿದ್ದೀನೋ?” ಎಂದು ನನ್ನನ್ನು ನಾನೇ ಪ್ರಶ್ನೆ ಕೇಳಿಕೊಂಡೆ. ನನ್ನ ಅಂತರಾಳದಲ್ಲಿ ಅರಳಿದ ಈ ಪ್ರಶ್ನೆಗೆ ಉತ್ತರವಿರಲಿಲ್ಲ. ಅಷ್ಟರಲ್ಲೇ, ಹೇಮಂತನ ಹೆಜ್ಜೆಗಳ ಧ್ವನಿ ಕೇಳಿಸಿತು. ಹೇಮಂತ ನನ್ನ ಬಾಲ್ಯದ ಗೆಳೆಯ. ನನ್ನ ಹಳೆಮನೆಯ ನೆರೆಮನೆಯ ರೈತ ಶಿವಣ್ಣನ ಮಗ. ಅವನು ನನ್ನನ್ನು ನೋಡಿ ಕ್ಷಣಕಾಲ ನಿಂತು, “ರಾಜ, ನೀನು ಊರಿಗೆ ಹಿಂದಿರುಗಿದ್ದೀಯ ಅಂತ ನನಗೆ ಗೊತ್ತಾಗಿತ್ತು. ಆದರೆ ನೀನು ಈ ಮರದ ಬಳಿ ನಿಂತಿದ್ದೀಯ ಅನ್ನೋದು ಅಷ್ಟೇ ಕಾಕತಾಳೀಯ!” ಎಂದು ನಗುತ್ತಲೇ ಹೇಳಿದ.

ನಾನು ಹುಣಸೆ ಮರದ ತಳದಲ್ಲಿ ಕುಳಿತುಕೊಂಡು ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಿದ್ದೆ. “ಈ ಮರದಲ್ಲಿ ಅದೆಷ್ಟೋ ದಿನ ನಾವು ಆಟವಾಡಿದ್ದು, ನಮ್ಮ ಬೇಸರ ಎಲ್ಲವೂ ಅಡಗಿ ಹೋಗಿ ಬದುಕು ಸುಂದರವಾಗಿ ಕಾಣಿಸುತ್ತಿತ್ತು. ಆದರೆ ಈಗ, ಹೇಮಂತ, ನೀನು ಹೇಳೋದು ಏನು? ಊರಿನಲ್ಲಿ ವಿಚಿತ್ರ ನಡೆಯುತ್ತಿದೆಯಾ? ಏನದು ಸ್ವಲ್ಪ ಬಿಡಿಸಿ ಹೇಳು.” ಎಂದು ಕೇಳಿದೆ.

ಹೇಮಂತ ತಕ್ಷಣ ಗಂಭೀರನಾದ. “ ನಮ್ಮ ಊರಿನ ಜಮೀನುಗಳ ದೊಡ್ಡ ಭಾಗ ಈಗ ಕಳ್ಳರ ಗುಂಪು ಮತ್ತು ರಾಜಕಾರಣಿಗಳ ಹಾವಳಿಗೆ ಸಿಲುಕಿದೆ. ಅಲ್ಲಿ ನಾನಾ ರೀತಿಯ ಗೋಪ್ಯ ಕ್ರಿಯೆಗಳು ನಡೆಯುತ್ತಿವೆ. ಇತ್ತೀಚಿಗೆ, ಗೋವುಗಳನ್ನು ಭಕ್ಷಿಸುವ ಜನರೂ ಹುಟ್ಟಿಕೊಂಡಿದ್ದಾರೆ. ಊರಿನ ಜನರು ಭಯದಿಂದ ದಿಕ್ಕು ತೋಚದೆ ಬದುಕುತ್ತಿದ್ದಾರೆ. ನಾವು ಏನು ಮಾಡಬೇಕು ಎಂಬುದು ಯಾರಿಗೂ ಗೊತ್ತಿಲ್ಲ. ಹಾಗೇ, ಈ ಮರದ ಪಕ್ಕದಲ್ಲಿದ್ದ ಗುಹೆಯ ಒಳಗೆ ನಾವು ಕೆಲವರು ಹೀಗೆ ಒಂದು ರಜೆಯ ಸಂಜೆ ಹೋಗಿದ್ದೆವು. ಆದರೆ ಈ ಬಗ್ಗೆ ಹೇಳಲು ಯಾರಿಗೂ ಧೈರ್ಯವಿಲ್ಲ. ಆ ಗುಹೆಯ ಒಳಗಿನ ಪಠ್ಯಗಳು, ಶಿಲ್ಪಗಳು, ಮತ್ತು ಬೆಳಕಿಲ್ಲದ ಒಂದು ಪ್ರಪಂಚ, ಅವುಗಳಿಗೆ ಅರ್ಥ ಕಲ್ಪಿಸಲು ನಮಗೆಲ್ಲ ಸಾಧ್ಯವೇ ಇಲ್ಲ,” ಎಂದು ಹೇಳಿದ. ಹೇಮಂತನ ಮಾತು ಕೇಳಿ, ನನ್ನ ಕುತೂಹಲ ತೀವ್ರವಾಯಿತು. ನಾವು ಆ ದಿನವೇ ಆ ಗುಹೆಯತ್ತ ಹೋಗುವ ತೀರ್ಮಾನ ಕೈಗೊಂಡೆವು. ದೊಡ್ಡ ಹುಣಸೆ ಮರದಿಂದ ಸ್ವಲ್ಪ ದೂರದಲ್ಲಿದ್ದ ಆ ಗುಹೆಯ ಸುತ್ತಮುತ್ತ ಗಾಢವಾದ ಶಾಂತತೆಯಿತ್ತು. ಅದರೊಳಗೆ ಪ್ರವೇಶಿಸುವಾಗ, ನನ್ನ ಮೊದಲ ಅನುಭವ ಬಹಳ ವಿಚಿತ್ರ. ತಂಪಾದ ಗಾಳಿ ನಮ್ಮ ಮೇಲೆ ಬೀಸುತ್ತಿದ್ದಂತೆ, ತುಂಬಾ ಹಳೆಯ ಕಾಲದ ವಾತಾವರಣದಂತೆ ಭಾಸವಾಯಿತು. ತಳದಲ್ಲಿ ಕಾಣಿಸಿಕೊಂಡ ಬ್ರಹ್ಮ ಲಿಪಿ ನನ್ನನ್ನು ನಿಖರವಾಗಿ ಸೆಳೆದಿತ್ತು. ಹೇಮಂತ, ಈ ಲಿಪಿಯನ್ನು ಓದುತ್ತಿದ್ದಂತೆ, ಪಠ್ಯವು ಬರೆದಿದ್ದ ಮಾತು ನನ್ನ ಬದುಕಿನ ದಿಕ್ಕು ತೋರಿಸಿತು:
"ನೀನು ನಿನ್ನ ಮನಸ್ಸಿನ ಶ್ರದ್ಧೆಯಿಂದ ನಿನ್ನ ಗತಿಯನ್ನು ಅರಿಯಬೇಕು. ಅನ್ಯಾಯವನ್ನು ಸೋಲಿಸಲು ದಾರಿ ಇದು."

ಆ ಶಿಲಾ ಲಿಪಿ ನಮ್ಮ ಮನಸ್ಸಿಗೆ ಗೊಂದಲ ಉಂಟುಮಾಡಿದರೂ, ನನಗೆ ಕೆಲವು ವಿಷಯಗಳು ಇನ್ನೂ ಅರ್ಥವಾಗಬೇಕಿತ್ತು. ಅಲ್ಲಿನ ವಾತಾವರಣಕ್ಕೂ ನಮ್ಮ ಅಂತರಾಳಕ್ಕೂ ಒಂದು ವಿಚಿತ್ರ ಸಂಬಂಧವಿರಬೇಕು ಎನಿಸಿತು. ಮುಂದೆ ಹೋಗುತ್ತಿದ್ದಂತೆ, ಗುಹೆಯ ಒಳಗಿನ ಶಿಲೆಗಳಲ್ಲಿ ಉಚ್ಚರಿಸಲಾಗದ ಪ್ರಾಚೀನ ಲಿಪಿಗಳು ಗೋಚರವಾಗುತ್ತಿದ್ದವು. ನನ್ನ ದೃಷ್ಟಿಗೆ ಬಿದ್ದದ್ದು ಮಾತ್ರ ಒಂದು ಬೃಹತ್ ಪೆಟ್ಟಿಗೆ. ಕಂಚಿನಲ್ಲಿ ಮಾಡಲಾಗಿದ್ದ ಆ ಸುಂದರವಾದ ಪೆಟ್ಟಿಗೆಯ  ಮೇಲೆ ಬ್ರಹ್ಮ ಲಿಪಿಯಲ್ಲಿ ಬರೆಯಲಾಗಿತ್ತು:
"ನೀನು ಈ ಪ್ರಪಂಚದ ಕತ್ತಲೆಯನ್ನು ಸೋಲಿಸಬೇಕಾದವನು."

ಆ ಪೆಟ್ಟಿಗೆಯನ್ನು ತೆರೆಯಲು ಪ್ರಯತ್ನಿಸಿದೆವು. ಹೇಮಂತನಿಗೆ ಸಾಧ್ಯವೇ ಆಗದ ಕೆಲಸ ನನ್ನ ಕೈಯಿಂದ ಸಾಧ್ಯವಾಯಿತು. ವಿಚಿತ್ರ ಎನಿಸಿ ರೋಮಾಂಚನವಾಯಿತು. ತೆರೆದ ಆ ಪೆಟ್ಟಿಗೆಯ ಒಳಗೆ ಒಂದು ಹೊಳೆಯುವ ಖಡ್ಗ ಮತ್ತು ಗ್ರಂಥ ನನ್ನ ಜೀವನದ ದಿಕ್ಕು ಬದಲಾಯಿಸುವುದಾಗಿತ್ತು. ಈ ಸಾಧನಗಳು ನನ್ನ ಬದುಕಿನಲ್ಲಿ ಏನನ್ನು ಬದಲಾಯಿಸುತ್ತವೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಆ ಖಡ್ಗ, ಸೂರ್ಯನ ಬೆಳಕಿನಂತೆ ಹೊಳೆಯುತ್ತಿತ್ತು. ಮತ್ತು ಆ ಗ್ರಂಥದ ಮೊದಲ ಪುಟದಲ್ಲಿ ಹೀಗೆ  ಬರೆಯಲಾಗಿತ್ತು:
"ನೀನು ಈ ಜ್ಞಾನವನ್ನು ಪಡೆದು, ಅನ್ಯಾಯವನ್ನು ಸೋಲಿಸಬೇಕು. ಇಲ್ಲವೇ ನಿನ್ನ ಪ್ರೀತಿಯ ಈ  ಊರಿನಿಂದ ತಲೆಮರೆಸಬೇಕು."

ನನ್ನೊಳಗಿನ ಹೆದರುವ ಜ್ವಾಲೆಗೂ, ಈ ಗ್ರಂಥದ ಸತ್ವಶಕ್ತಿಗೂ ನಡುವೆ ಒಂದು ಘರ್ಷಣೆ. ಆದರೂ, ನಾನು ಈ ಚಿನ್ನದ ಖಡ್ಗಯನ್ನು ಹಿಡಿಯಬೇಕೆಂದು ತೀರ್ಮಾನಿಸಿದೆ. ನನ್ನ ಬೆನ್ನುಹುರಿಯಲ್ಲಿ ಇರುವ ಶಕ್ತಿ ತುಂಬಿ, ನಾನು ಪೆಟ್ಟಿಗೆಯಿಂದ ಖಡ್ಗಯನ್ನು ಹೊರತೆಗೆದೆ. ಹೊಸ ಆತ್ಮಶಕ್ತಿಯೊಂದಿಗೆ ಹೊರಬಂದೆ. ಖಡ್ಗದ ಮೂಲಕ ನನಗೆ ಒಂದು ವಿಶೇಷ ಶಕ್ತಿ ದೊರೆತಂತಾಗಿ ನನಗೆ ಊರಿನ ಭವಿಷ್ಯದ ದೃಷ್ಟಾಂತವು ತೋರಿಸಿತು. ನಮ್ಮ ಊರಿನ ಜನರು ಅನ್ಯಾಯದಿಂದ ಪೀಡಿತರಾಗಿದ್ದರು. ನಾನು ಹೇಮಂತ ಮತ್ತು ಊರಿನ ಇನ್ನೂ ಕೆಲವು ಮಾನ್ಯರನ್ನು ಸೇರಿಸಿಕೊಂಡು, ನಾವು ಕಳ್ಳರು, ರಾಜಕಾರಣಿಗಳು ಹಾಗೂ ಗೋಭಕ್ಷಕರನ್ನು ಎದುರಿಸಲು ತಯಾರಾದೆವು. ಮೊದಲು ಊರಿನ ಜನರ ಭಯವನ್ನು ತೊಡೆದು ಹಾಕಲು ಸಾಧ್ಯವಿಲ್ಲ ಎಂದು ನನಗೆ ಅರ್ಥವಾಗಿತ್ತು. ಹೀಗಾಗಿ ನಾನು ಅವರ ಮಧ್ಯೆ ನಿಂತು - "ನಮ್ಮ ಊರಿನಲ್ಲಿ ಮೊದಲು ನೀವೆಲ್ಲರೂ ನಿಮ್ಮ ಭಯವನ್ನು ತೊಡೆದು ಹಾಕಬೇಕು," ಎಂದೆ. "ನಿಮ್ಮಲ್ಲಿರುವ ಅಪಾರ ಶಕ್ತಿಯನ್ನು ಮರೆತುಬಿಡಬೇಡಿ. ಇದು ನಮ್ಮ ನಾಡು, ನಮ್ಮ ಹಕ್ಕು, ಮತ್ತು ಅದನ್ನು ಉಳಿಸುವ ಜವಾಬ್ದಾರಿ ನಮ್ಮದು." ಧೈರ್ಯ ಪಡೆದುಕೊಂಡ ಜನರು ನನ್ನ ಬೆಂಬಲದಲ್ಲಿ ಬಲವಾಗಿರಲು ನಿರ್ಧರಿಸಿದರು.

ಮರುದಿನವೇ, ನಾವೆಲ್ಲರೂ ಜೊತೆ ಸೇರಿ, ಕಳ್ಳರ ಗುಂಪಿನ ನಾಯಕನಿಗೆ ಸವಾಲು ಹಾಕಿ, "ನೀನು ಈ ಊರಿನ ನೈಸರ್ಗಿಕ ಸಂಪತ್ತನ್ನು ಹಾಲು ಮಾಡಿದೆ ಅಲ್ಲವೇ? ಈಗ ನೀನು ನಮ್ಮ  ಸತ್ಯದ ಮುಂದೆ ಶರಣಾಗು," ಎಂದೆ. ನಾನು ಹಿಡಿದಿದ್ದ ಖಡ್ಗದ ಬೆಳಕು ನನ್ನ ನಂಬಿಕೆಯನ್ನು ಪ್ರತಿನಿಧಿಸುತ್ತಿತ್ತು. ಅನೇಕ ಗಂಟೆಗಳ ಸಂವಾದ, ಸವಾಲು, ಮತ್ತು ಖಡ್ಗದ ಶಕ್ತಿಯಿಂದ ಉಂಟಾದ ಪರಿಣಾಮದಿಂದ, ಕಳ್ಳರು ನಮ್ಮ ಗ್ರಾಮವನ್ನು ಬಿಟ್ಟು ಹೋದರು. ರಾಜಕಾರಣಿಗಳ ಸಹಾಯದಿಂದ ನೈಸರ್ಗಿಕ ಸಂಪತ್ತನ್ನು ಪುನಃ ನವೀಕರಿಸಲಾಯಿತು. ಗೋಭಕ್ಷಕರು ಭಯದಿಂದ ನಡುಗಿ, ಸಸ್ಯಾಹಾರಿಗಳಾಗಿ ಪರಿವರ್ತನೆಯಾದರು. ಊರಿನ ಜನರಲ್ಲಿ ನಂಬಿಕೆ ಮತ್ತು ಬಲ ಮತ್ತೆ ಮೂಡಿತು.

ಇಂದು, ದೊಡ್ಡ ಹುಣಸೆ ಮರ ಕೇವಲ ನಮ್ಮ ಬಾಲ್ಯದ ನೆನಪುಗಳೇ ಅಲ್ಲ, ಅದು ಈಗ ನಮ್ಮ ಹೋರಾಟದ ಸಂಕೇತವಾಗಿದೆ. ಈ ಅವಸಾನ ನಮ್ಮೊಳಗಿನ ಅನ್ಯಾಯದ ವಿರುದ್ಧ ಹೋರಾಡುವ ಶಕ್ತಿ ಉಳಿಸಿದೆ. ನಾನು ಊರಿನಿಂದ ಹೊರಡುವ ಮುನ್ನ ಮತ್ತೆ ಮರದ ಮುಂದೆ ನಿಂತು ತಲೆ ಎತ್ತಿ ನೋಡಿದೆ. ಅದು ಅಂದಿನಂತೆ ಶಕ್ತಿಯ ಚಿಹ್ನೆಯಾಗಿ ನಳನಳಿಸುತ್ತಿತ್ತು. ಶಾಂತಿಯ ಸಂಕೇತವಾಗಿ ನೆಮ್ಮದಿಯ ಗಾಳಿ ಬೀಸುತ್ತಿತ್ತು. ಸವಣೂರು ಈಗ ಶಾಂತ, ಸಶಕ್ತ, ಮತ್ತು ಹೊಸ ಆಕರ್ಷಣೆಗಳಿಗೆ ಮನೆಮಾಡಿದೆ. ಈಗ ನಾನು ಎಲ್ಲಿಯೇ ಹೋಗಿ ನೆಲೆಯಾದರೂ, ಈ ಮರದ ನೆರಳಿನಲ್ಲಿ ನನ್ನ ಹೃದಯವನ್ನು ಉಳಿಸಿರುತ್ತೇನೆ.

 

✍🏻 *Deepalaxmi Bhat*

Mangaluru