Saturday, July 23, 2022

ತುಳಸೀ ಗಿಡ ಒಣಗುವುದಕ್ಕೆ ಮುಖ್ಯ ಕಾರಣಗಳು‌...

ತುಳಸೀ ಗಿಡ ಒಣಗುವುದಕ್ಕೆ ಮುಖ್ಯ ಕಾರಣಗಳು‌...

🙏೧. ಕುಂಡದಲ್ಲಿ ಹಾಕಿದರೆ ಅಷ್ಟು ಬೆಳವಣಿಗೆ ಆಗುವುದಿಲ್ಲ, ಬೇರು ಬಿಡುವುದಕ್ಕೆ ಸ್ಥಳಾವಕಾಶ ಕಮ್ಮಿ ಇರುತ್ತೆ..
🙏೨. ತುಳಸೀ ಗಿಡವನ್ನು ಸ್ನಾನ ಮಾಡದೇ ಮುಟ್ಟಿದರೆ, ಮೈಲಿಗೆ ಇರುವಾಗ ಬಿಡಿಸಿದರೆ, ಮೈಲಿಗೆ ಇರುವವರು ಮುಟ್ಟಿದರೆ, ಬೇಗ ಒಣಗುವುದು..
🙏೩. ತುಳಸಿಯನ್ನು ಉಗುರಿನಿಂದ ಕಿತ್ತರೆ, ಊಟದ ನಂತರ ಪೂಜಿಸುವ ಗಿಡದಿಂದ ತುಳಸಿ ಕಿತ್ತರೆ ಬೇಗ ಒಣಗುತ್ತದೆ..
🙏೪. ಅಶುಚಿಯಾದ ನೀರನ್ನು, ಮಡಿಯಿಲ್ಲದ ನೀರನ್ನು ಹಾಕಿದರೂ ತುಳಸೀಗಿಡ ಒಣಗುವುದು..
🙏೫. ತುಳಸೀ ಗಿಡಕ್ಕೆ ಗಿಡ ಬೆಳೆದ ಹಾಗೇ ಬೇರೆ ಮಣ್ಣನ್ನು ಹಾಕುತ್ತಿರಬೇಕು, ಇಲ್ಲದಿದ್ದರೆ ಫಲವತ್ತತೆ ಇಲ್ಲದೇ ಬೇಗ ಒಣಗುವುದು..
🙏೬. ತುಂಬಾ ತುಳಸೀ ಗಿಡ ಒಣಗುತ್ತಿದ್ದರೆ ಮೃತ್ತಿಕೆಯನ್ನು ತಂದು ತುಳಸೀ ಗಿಡದಲ್ಲಿ ಹಾಕಿ , ಚೆನ್ನಾಗಿ ಬೆಳೆಯುವುದು..
🙏೭. ಮನೆಯ ಮೇಲೆ ದುಷ್ಟಗ್ರಹ ಪ್ರಭಾವ ಬಿದ್ದಾಗ, ಮಾಟ ಮಂತ್ರ ದೋಷವಾದಾಗ , ಅದನ್ನು ತುಳಸೀ ತಡೆಯುವುದು..ಕೆಲವೊಂದು ಅಹಿತಕರ ಸನ್ನಿವೇಶದಿಂದ ನಿಮ್ಮನ್ನು ರಕ್ಷಿಸುವ ಸಮಯದಲ್ಲಿ ತುಳಸೀ ಒಣಗುವುದು ಉಂಟು..ಇದು ಎಚ್ಚರಿಕೆಯ ಸಂದೇಷವೂ ಕೂಡ..
🙏೮. ಪ್ರತಿದಿನ ತುಳಸೀ ನೀರನ್ನು ಕುಡಿಯುವುದರಿಂದ ಮಾಟ ಮಂತ್ರ ತಟ್ಟುವುದಿಲ್ಲ..
🙏೯. ತುಳಸೀಗಿಡದ ಮುಂದೆ ಪ್ರತಿದಿನ ದೀಪ ಹಚ್ಚುವುದರಿಂದ ದುಷ್ಟಶಕ್ತಿಗಳು ಮನೆಯನ್ನು ಪ್ರವೇಶ ಮಾಡುವುದಿಲ್ಲ, ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಲಕ್ಷ್ಮೀಕಟಾಕ್ಷವಾಗುವುದು..
🙏೧೦. ತುಳಸೀ ಪೂಜೆಯನ್ನು ಪೂರ್ವ ಅಥವಾ ಉತ್ತರಾಭಿಮುಖವಾಗಿ ಮಾಡುವುದು ಶುಭ, ಉತ್ತರ ಅಥವಾ ಈಶಾನ್ಯ ಅಭಿಮುಖವಾಗಿ ಮಾಡುವುದು ಅತ್ಯಂತ ಶುಭ..
🙏೧೧. ತುಳಸೀ ಬಿಡಿಸುವಾಗ ವಿಷ್ಣುಪರಮಾತ್ಮರ ಕ್ಷಮೆ ಕೋರಿ, ಗಿಡವನ್ನು ಅಲ್ಲಾಡಿಸಿ, ಒಣಗಿದ ಎಲೆಯಲ್ಲಾ ಉದುರಿದ ನಂತರ ತುಳಸಿಯನ್ನು ಬಿಡಿಸಿ..
ನೀವು ತುಳಸೀ ಬಿಡಿಸುವಾಗ ತುಳಸಿ ನೆಲಕ್ಕೆ ಬಿದ್ದರೆ "ಬ್ರಹ್ಮಹತ್ಯಾ" ದೋಷ ಬರುವುದು..
ನೆಲಕ್ಕೆ ಬಿದ್ದ ತುಳಸೀ ಪೂಜಿಸಬಾರದು.

(ಸಂಗ್ರಹ)

Saturday, July 9, 2022

ನಾಮ ರಾಮಾಯಣ

ರಾಮಾಯಣವು  ಮಹರ್ಷಿ ವಾಲ್ಮೀಕಿ ಬರೆದ ಮಹಾ ಗ್ರಂಥ. ಈ ರಾಮಾಯಣ ೨೪೦೦೦ ಶ್ಲೋಕಗಳನ್ನೊಳಗೊಂಡು, ೭ ಪುಸ್ತಕಗಳಾಗಿ ವಿಭಜನೆ ಮಾಡಲಾಗಿದೆ. ಈ ರಾಮಾಯಣವನ್ನು ಒಂದೇ ಸಲಕ್ಕೆ ಓದಿ ಮುಗಿಸಲು ಅಸಾಧ್ಯವಾದ ಮಾತು. ಹೀಗಾಗಿ, ರಾಮಾಯಣದ ಶ್ಲೋಕವನ್ನು ಚಿಕ್ಕದಾಗಿ ಮಹರ್ಷಿ ವಾಲ್ಮೀಕಿ ಅವರು ೧೦೮ ಶ್ಲೋಕಗಳ ನಾಮ ರಾಮಾಯಣ ಎಂಬುದಾಗಿ ರಚಿಸಿದ್ದಾರೆ. ಇದು ಸಂಪೂರ್ಣ ರಾಮಾಯಣದ ಹಾಗೆಯೇ ಶ್ರೀ ರಾಮ ದೇವರ  ಎಲ್ಲ ಕಥೆಗಳನ್ನು ೧೦೮ ನಾಮದಲ್ಲಿ ವರ್ಣಿಸಿ ರಚಿಸಲಾಗಿದೆ. ಇದನ್ನು ಏಕಶ್ಲೋಕೀ ರಾಮಾಯಣ ಎಂದೂ ಕರೆಯುತ್ತಾರೆ. ಈ ಶ್ಲೋಕವನ್ನು ೭ ಭಾಗಗಳಾಗಿ ವಿಂಗಡಿಸಲಾಗಿದೆ - ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ಧ ಕಾಂಡ, ಉತ್ತರಕಾಂಡ. 


 ॥ ನಾಮರಾಮಾಯಣ ॥
॥ ಬಾಲಕಾಂಡಃ ॥


ಶುದ್ಧಬ್ರಹ್ಮಪರಾತ್ಪರ ರಾಮ ।
ಕಾಲಾತ್ಮಕಪರಮೇಶ್ವರ ರಾಮ ।
ಶೇಷತಲ್ಪಸುಖನಿದ್ರಿತ ರಾಮ ।
ಬ್ರಹ್ಮಾದ್ಯಮರಪ್ರಾರ್ಥಿತ ರಾಮ ।

ಚಂಡಕಿರಣಕುಲಮಂಡನ ರಾಮ ।
ಶ್ರೀಮದ್ದಶರಥನನ್ದನ ರಾಮ ।
ಕೌಸಲ್ಯಾಸುಖವರ್ಧನ ರಾಮ ।
ವಿಶ್ವಾಮಿತ್ರಪ್ರಿಯಧನ ರಾಮ ।

ಘೋರತಾಟಕಾಘಾತಕ ರಾಮ ।
ಮಾರೀಚಾದಿನಿಪಾತಕ ರಾಮ ।
ಕೌಶಿಕಮಖಸಂರಕ್ಷಕ ರಾಮ ।
ಶ್ರೀಮದಹಲ್ಯೋದ್ಧಾರಕ ರಾಮ ।

ಗೌತಮಮುನಿಸಮ್ಪೂಜಿತ ರಾಮ ।
ಸುರಮುನಿವರಗಣಸಂಸ್ತುತ ರಾಮ ।
ನಾವಿಕಧಾವಿಕಮೃದುಪದ ರಾಮ ।
ಮಿಥಿಲಾಪುರಜನಮೋಹಕ ರಾಮ ।

ವಿದೇಹಮಾನಸರಂಜಕ ರಾಮ ।
ತ್ರ್ಯಂಬಕಕಾರ್ಮುಖಭಂಜಕ ರಾಮ ।
ಸೀತಾರ್ಪಿತವರಮಾಲಿಕ ರಾಮ ।
ಕೃತವೈವಾಹಿಕಕೌತುಕ ರಾಮ ।

ಭಾರ್ಗವದರ್ಪವಿನಾಶಕ ರಾಮ ।
ಶ್ರೀಮದಯೋಧ್ಯಾಪಾಲಕ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥

 

 


 ॥ ಅಯೋಧ್ಯಾಕಾಂಡಃ ॥

ಅಗಣಿತಗುಣಗಣಭೂಷಿತ ರಾಮ ।
ಅವನೀತನಯಾಕಾಮಿತ ರಾಮ ।
ರಾಕಾಚನ್ದ್ರಸಮಾನನ ರಾಮ ।
ಪಿತೃವಾಕ್ಯಾಶ್ರಿತಕಾನನ ರಾಮ ।

ಪ್ರಿಯಗುಹವಿನಿವೇದಿತಪದ ರಾಮ ।
ತತ್ಕ್ಷಾಲಿತನಿಜಮೃದುಪದ ರಾಮ ।
ಭರದ್ವಾಜಮುಖಾನನ್ದಕ ರಾಮ ।
ಚಿತ್ರಕೂಟಾದ್ರಿನಿಕೇತನ ರಾಮ ।

ದಶರಥಸನ್ತತಚಿನ್ತಿತ ರಾಮ ।
ಕೈಕೇಯೀತನಯಾರ್ಪಿತ ರಾಮ ।
ವಿರಚಿತನಿಜಪಿತೃಕರ್ಮಕ ರಾಮ ।
ಭರತಾರ್ಪಿತನಿಜಪಾದುಕ ರಾಮ ॥
 
ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥

 

 

॥ ಅರಣ್ಯಕಾಂಡಃ ॥

ದಂಡಕಾವನಜನಪಾವನ ರಾಮ ।
ದುಷ್ಟವಿರಾಧವಿನಾಶನ ರಾಮ ।
ಶರಭಂಗಸುತೀಕ್ಷ್ಣಾರ್ಚಿತ ರಾಮ ।
ಅಗಸ್ತ್ಯಾನುಗ್ರಹವರ್ದಿತ ರಾಮ ।

ಗೃಧ್ರಾಧಿಪಸಂಸೇವಿತ ರಾಮ ।
ಪಂಚವಟೀತಟಸುಸ್ಥಿತ ರಾಮ ।
ಶೂರ್ಪಣಖಾರ್ತ್ತಿವಿಧಾಯಕ ರಾಮ ।
ಖರದೂಷಣಮುಖಸೂದಕ ರಾಮ ।

ಸೀತಾಪ್ರಿಯಹರಿಣಾನುಗ ರಾಮ ।
ಮಾರೀಚಾರ್ತಿಕೃತಾಶುಗ ರಾಮ ।
ವಿನಷ್ಟಸೀತಾನ್ವೇಷಕ ರಾಮ ।
ಗೃಧ್ರಾಧಿಪಗತಿದಾಯಕ ರಾಮ ।

ಶಬರೀದತ್ತಫಲಾಶನ ರಾಮ ।
ಕಬನ್ಧಬಾಹುಚ್ಛೇದನ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥


॥ ಕಿಷ್ಕಿಂಧಾಕಾಂಡಃ ॥

ಹನುಮತ್ಸೇವಿತನಿಜಪದ ರಾಮ ।
ನತಸುಗ್ರೀವಾಭೀಷ್ಟದ ರಾಮ ।
ಗರ್ವಿತವಾಲಿಸಂಹಾರಕ ರಾಮ ।
ವಾನರದೂತಪ್ರೇಷಕ ರಾಮ ।

ಹಿತಕರಲಕ್ಷ್ಮಣಸಂಯುತ ರಾಮ ।
ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ।



॥ ಸುಂದರಕಾಂಡಃ ॥

ಕಪಿವರಸನ್ತತಸಂಸ್ಮೃತ ರಾಮ ।
ತದ್ಗತಿವಿಘ್ನಧ್ವಂಸಕ ರಾಮ ।
ಸೀತಾಪ್ರಾಣಾಧಾರಕ ರಾಮ ।
ದುಷ್ಟದಶಾನನದೂಷಿತ ರಾಮ ।

ಶಿಷ್ಟಹನೂಮದ್ಭೂಷಿತ ರಾಮ ।
ಸೀತವೇದಿತಕಾಕಾವನ ರಾಮ ॥
ಕೃತಚೂಡಾಮಣಿದರ್ಶನ ರಾಮ ।
ಕಪಿವರವಚನಾಶ್ವಾಸಿತ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥


॥ ಯುದ್ಧಕಾಂಡಃ ॥

ರಾವಣನಿಧನಪ್ರಸ್ಥಿತ ರಾಮ ।
ವಾನರಸೈನ್ಯಸಮಾವೃತ ರಾಮ ।
ಶೋಷಿತಶರದೀಶಾರ್ತ್ತಿತ ರಾಮ ।
ವಿಭೀಷ್ಣಾಭಯದಾಯಕ ರಾಮ ।

ಪರ್ವತಸೇತುನಿಬನ್ಧಕ ರಾಮ ।
ಕುಮ್ಭಕರ್ಣಶಿರಶ್ಛೇದನ ರಾಮ ।
ರಾಕ್ಷಸಸಂಘವಿಮರ್ಧಕ ರಾಮ ।
ಅಹಿಮಹಿರಾವಣಚಾರಣ ರಾಮ ।

ಸಂಹೃತದಶಮುಖರಾವಣ ರಾಮ ।
ವಿಧಿಭವಮುಖಸುರಸಂಸ್ತುತ ರಾಮ ।
ಖಃಸ್ಥಿತದಶರಥವೀಕ್ಷಿತ ರಾಮ ।
ಸೀತಾದರ್ಶನಮೋದಿತ ರಾಮ ।

ಅಭಿಷಿಕ್ತವಿಭೀಷಣನುತ ರಾಮ ।
ಪುಷ್ಪಕಯಾನಾರೋಹಣ ರಾಮ ।
ಭರದ್ವಾಜಾದಿನಿಷೇವಣ ರಾಮ ।
ಭರತಪ್ರಾಣಪ್ರಿಯಕರ ರಾಮ ।

ಸಾಕೇತಪುರೀಭೂಷಣ ರಾಮ ।
ಸಕಲಸ್ವೀಯಸಮಾನಸ ರಾಮ ।
ರತ್ನಲಸತ್ಪೀಠಾಸ್ಥಿತ ರಾಮ ।
ಪಟ್ಟಾಭಿಷೇಕಾಲಂಕೃತ ರಾಮ ।

ಪಾರ್ಥಿವಕುಲಸಮ್ಮಾನಿತ ರಾಮ ।
ವಿಭೀಷಣಾರ್ಪಿತರಂಗಕ ರಾಮ ।
ಕೀಶಕುಲಾನುಗ್ರಹಕರ ರಾಮ ।
ಸಕಲಜೀವಸಂರಕ್ಷಕ ರಾಮ ।
ಸಮಸ್ತಲೋಕೋದ್ಧಾರಕ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥


 
॥ ಉತ್ತರಕಾಂಡಃ ॥

ಆಗತ ಮುನಿಗಣ ಸಂಸ್ತುತ ರಾಮ ।
ವಿಶ್ರುತದಶಕಂಠೋದ್ಭವ ರಾಮ ।
ಸಿತಾಲಿಂಗನನಿರ್ವೃತ ರಾಮ ।
ನೀತಿಸುರಕ್ಷಿತಜನಪದ ರಾಮ ।

ವಿಪಿನತ್ಯಾಜಿತಜನಕಜ ರಾಮ ।
ಕಾರಿತಲವಣಾಸುರವಧ ರಾಮ ।
ಸ್ವರ್ಗತಚಮ್ಬುಕ ಸಂಸ್ತುತ ರಾಮ ।
ಸ್ವತನಯಕುಶಲವನನ್ದಿತ ರಾಮ ।

ಅಶ್ವಮೇಧಕ್ರತುದಿಕ್ಷಿತ ರಾಮ ।
ಕಾಲಾವೇದಿತಸುರಪದ ರಾಮ ।
ಆಯೋಧ್ಯಕಜನಮುಕ್ತಿತ ರಾಮ ।
ವಿಧಿಮುಖವಿಭುದಾನನ್ದಕ ರಾಮ ।

ತೇಜೋಮಯನಿಜರೂಪಕ ರಾಮ ।
ಸಂಸೃತಿಬನ್ಧವಿಮೋಚಕ ರಾಮ ।
ಧರ್ಮಸ್ಥಾಪನತತ್ಪರ ರಾಮ ।
ಭಕ್ತಿಪರಾಯಣಮುಕ್ತಿದ ರಾಮ ।

ಸರ್ವಚರಾಚರಪಾಲಕ ರಾಮ ।
ಸರ್ವಭವಾಮಯವಾರಕ ರಾಮ ।
ವೈಕುಂಠಾಲಯಸಂಸ್ತಿತ ರಾಮ ।
ನಿತ್ಯನನ್ದಪದಸ್ತಿತ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥ 


-----------------*------------------*------------------*-----------------


Sunday, June 5, 2022

ಒದ್ದಾಟದ ಸಮಯ


ನೋಡುನೋಡುತ್ತಿದ್ದಂತೆಯೇ 

ಸಮಯ ಕಳೆದು ಹೋದಂತಿದೆ 

ಮನದಾಸೆಗಳಿದ್ದಂತೆಯೇ 

ಹೂತು ಮರೆಯಾದಂತೆನಿಸುತಿದೆ 


ಪೂರೈಸುವ ತವಕವಿದ್ದರೂ 

ಸಮಯದ ಅಂತರವಿದ್ದಂತಿದೆ. 

ಮುನ್ನಡೆಯುವ ಛಲವಿದ್ದರೂ 

ಅನುಗ್ರಹದ ಕೊರತೆಯಿದ್ದಂತಿದೆ 


ಬಲ್ಲೆ ನಾ ಇದು ಏನೆಂಬುದ 

ಆ ದೇವರ ಚೆಲ್ಲಾಟವೋ?

ಮುನ್ನುಗ್ಗುವ ಸಮಯದಾಟವೋ?

ಅಲ್ಲ ನನ್ನದೇ ಮನದೊದ್ದಾಟವೋ??

 

ಸಮಯವಿದ್ದರೂ ಸಮಯವಿರದಂತೆ 

ಮನಸ್ಸಿದ್ದರೂ ಮಾರ್ಗವೇ ಇರದಂತೆ 

ಛಲವಿದ್ದರೂ ಹಂಬಲವಿರದಂತೆ 

ಯಾವ ಕಾರ್ಯವೂ ಕೈಗೂಡದಂತೆ 

ಆಟವಾಡುತಿದೆ ನನ್ನೀ "ಸಮಯ"

Tuesday, May 24, 2022

*ಗುರುಸ್ಥಾನ*

 

https://media.newstrack.in/uploads/national-news//Aug/06/big_thumb/td_5f2b8ca7c8adc.jpg

ಗುರು ಎಂದರೆ ಯಾರು??? ಗುರು ಎಂದರೆ ಮಾರ್ಗದರ್ಶಕ. ಗುರು ಎಂದರೆ ಬೆಳವಣಿಗೆಯ ದಾರಿಯನ್ನು ತೋರುವವ. ಗುರು ಸ್ಥಾನದಲ್ಲಿರುವವನು ನಿಷ್ಕಲ್ಮಶ ಹೃದಯಿ ಆಗಿರಬೇಕು. ಯಾವುದೇ ಭೇದ ಭಾವ ಇಲ್ಲದೆ, ತನ್ನ ಸ್ಥಾನಕ್ಕೆ ನಿಜವಾದ ಅರ್ಥ ನೀಡುವಂಥವನಾಗಿರಬೇಕು. ಅದು ಬಿಟ್ಟು, ದ್ವೇಷ ಅಹಂಕಾರವನ್ನೊಳಗೊಂಡು  ಕಟು ಹೃದಯಿ ಆಗಿದ್ದರೆ, ಅವನು ಆ ಗುರು ಸ್ಥಾನಕ್ಕೆ ಸರಿಹೊಂದುವವನೇ ಅಲ್ಲ. ಅಂಥವನು ಯಾವುದೇ ರೀತಿಯ ಗೌರವಕ್ಕೆ ಅರ್ಹನಲ್ಲ. 

ಗುರುಸ್ಥಾನದಲ್ಲಿ "ನನ್ನದೇನಿದೆ" ಎಂಬುದಲ್ಲ, ಆದರೆ ನನ್ನಿಂದ ಎಷ್ಟು ಜನರಿಗೆ ಒಳಿತಾಗುತ್ತದೆ ಎಂಬುದನ್ನು ನೋಡುವಂಥವರಾಗಬೇಕು. ಮಹಾನುಭಾವರ ಲಕ್ಷಣ ಏನೆಂದರೆ ಕ್ಷಮಾಗುಣ. ಗುರುಸ್ಥಾನದಲ್ಲಿರುವವರು ಕ್ಷಮಾಗುಣವನ್ನು ಮೈಗೂಡಿಸಿಕೊಂಡಿರಬೇಕು. ಜ್ನಾನಾರ್ಥಿಗಳು ತಪ್ಪು ಮಾಡುವುದು ಸಹಜ. ಗುರುಸ್ಥಾನದಲ್ಲಿರುವವರು ಅದು ತಪ್ಪು ಎಂದು ತಿಳಿದಾಗ, ಅವರನ್ನು ತಿದ್ದುವುದು ಗುರುವಿನ ಮುಖ್ಯ ಕರ್ತವ್ಯ, ಆದರೆ, ಆ ತಪ್ಪನ್ನು ಅಪರಾಧವೆನ್ನುವಂತೆ ವರ್ಗೀಕರಿಸಿ, ದ್ವೇಷದ ಭಾವನೆ ಮನಸ್ಸಲ್ಲಿಟ್ಟುಕೊಂಡಾಗ ಅವನ ಗುರುಸ್ಥಾನ ಅಲ್ಲಿಗೆ ಕೊನೆಯಾಗುತ್ತದೆ. ಯಾವುದೇ ರೀತಿಯಲ್ಲಿ ಅವನು ಗುರು ಎಂಬ ಪದಕ್ಕೆ ಅರ್ಹನಾಗಿರುವುದಿಲ್ಲ.  ಅಧಮರು, ಪಕ್ಷಪಾತಿಗಳು, ಧನಪಿಶಾಚಿಗಳು ಗುರುಸ್ಥಾನವನ್ನು ಅಲಂಕರಿಸಲು ಯೋಗ್ಯರು ಅಲ್ಲವೇ ಅಲ್ಲ. "ಹರ ಮುನಿದರೆ ಗುರು ಕಾಯ್ವನು" ಎಂಬ ಉಕ್ತಿಯೇ ಇದೆ. ಹೀಗೆ, ಗುರು ಎಂದರೆ ಸಾಕಾರ ಸಿದ್ಧಿಯನ್ನು ಕೊಡುವಂತವನು, ಸಾಕಾರ ರೂಪವನ್ನು ಕೊಡುವಂತವನು. ವಿಷ್ಣು ಸ್ವರೂಪಿ ಅವನು. ಅಯೋಗ್ಯರನ್ನು ಗುರು ಎಂದು ಕರೆಯುವುದು ಅಸಾಧ್ಯದ ಮಾತು.

ಇಂದಿನ ಯುಗದಲ್ಲಿ, ಗುರು ಎಂಬ ಪದ ತುಂಬಾ ವ್ಯಾಪಾರಿಕವಾಗಿದೆ. ಕೇವಲ ದುಡ್ಡಿನ ಮುಖ ನೋಡಿ ಗುರುಸ್ಥಾನ ಸೃಷ್ಟಿಸಿಕೊಳ್ಳುವವರು ತುಂಬಾ ಜನ ಇದ್ದಾರೆ. ಯಾರೋ ಮಹಾತ್ಮರು ಮಾಡಿದ ಕೆಲಸಗಳನ್ನು ತಾವು ಮಾಡಿದವರೆಂಬಂತೆ ಬಿಂಬಿಸಿಕೊಂಡು ತಮ್ಮನ್ನು ತಾವೇ ದೇವರಿಗಿಂತಲೂ ಮಿಗಿಲಾದವರೆಂಬಂತೆ ಬಿಂಬಿಸಿಕೊಳ್ಳುತ್ತಾರೆ. ಗುರುಸ್ಥಾನದ ಮಹಿಮೆ ಯಾರು ತಿಳಿದುಕೊಂಡಿರುತ್ತಾರೋ, ಅವರು ಯಾವುದೇ ದ್ವೇಷದ ಭಾವನೆ ಹೊಂದಿಕೊಂಡಿರುವುದಿಲ್ಲ, ಬದಲಾಗಿ ಅಜ್ಞಾನವಿದ್ದಲ್ಲಿ ಜ್ಞಾನವನ್ನೂ, ಕತ್ತಲಿದ್ದಲ್ಲಿ ಬೆಳಕನ್ನೂ, ವಿಷವಿದ್ದಲ್ಲಿ ಅಮೃತವನ್ನೂ ಬೀರುವ ಪ್ರಯತ್ನ ಮಾಡುತ್ತಾರೆ. ತನ್ನ ಅನುಯಾಯಿಗಳ ಒಳಿತನ್ನು ಬಯಸುತ್ತಾರೆ. 

ಹೀಗೆ, ಗುರುಸ್ಥಾನದಲ್ಲಿರುವವನೂ ಕೂಡಾ ತನ್ನ ಸ್ಥಾನದ  ಮಹತ್ವವನ್ನು ಮೈಗೂಡಿಸಿಕೊಂಡವನಾಗಿರಬೇಕು. ಹಾಗೂ ಪ್ರತಿಯೊಬ್ಬರೂ ಕೂಡ ಗುರುಸ್ಥಾನದಲ್ಲಿ ಯಾರನ್ನಿಡುತ್ತಾರೋ, ಅವರು ಯೋಗ್ಯರಾಗಿದ್ದರೆ ಮಾತ್ರ ಆ ಸ್ಥಾನ ನೀಡಿ ಗೌರವಿಸಿ. ಯೋಗ್ಯರಿಗೆ ಗೌರವ ನೀಡಿದಷ್ಟು ಪುಣ್ಯ ನಿಮ್ಮದಾಗುತ್ತದೆ.





ಮಾನವ ಸಂಪನ್ಮೂಲ ನಿರ್ವಹಣೆ - ಕೊರೋನಾ ಭಯದ ಎಡೆಯಲ್ಲಿ ಹೇಗೆ?


ಅತಿಯಾದ ಮಳೆಯಿಂದ ಭೂಮಿಯೇ ಕೊಚ್ಚಿ ಹೋಗುವಂತೆ, ಅತಿಯಾದ ಅನಾಚಾರಗಳಿಂದ ಬೇಸತ್ತ ಆ ಭಗವಂತನೇ ಜಗತ್ತಿಗೆ ಬುದ್ಧಿ ಕಲಿಸಲು ಮುಂದಾದ ಹಾಗೆ ಚೀನಾ ಮೂಲದ ಕೋವಿಡ್-19 ಎಂಬ ವಿಷಾಣು ಪ್ರತಿಯೊಬ್ಬರೂ ಭಯದಿಂದ ನಲುಗುವಂತೆ ಮಾಡಿದೆ. ಈ ಕೋವಿಡ್-19 ಎಂಬ ಮಹಾಮಾರಿ ವಿಶ್ವದೆಲ್ಲೆಡೆ ತಾಂಡವವಾಡುತ್ತಿದ್ದಂತೆ, ಅಲ್ಲಿ ಕೆಲವರು ತಮ್ಮ ಮನೆಯಲ್ಲಿಯೇ ತಮ್ಮ ಲ್ಯಾಪ್ ಟಾಪನ್ನು ಆನ್ ಮಾಡಿ ತಾವು ಕೆಲಸ ಮಾಡುತ್ತಿರುವ ಕಚೇರಿಯ ಸಿಬ್ಬಂದಿಗಳೊಡನೆ ಚರ್ಚೆ, ಸಭೆ ನಡೆಸಲು ತಯಾರಿ ಮಾಡುತ್ತಿದ್ದಾರೆ. ಇನ್ನು ಕೆಲವರು ತಮಗಿದ್ದ ಕೆಲಸವನ್ನು ಕಳೆದುಕೊಂಡು ಹೊಸ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮತ್ತೆ ಕೆಲವರು ಕೆಲಸವಿಲ್ಲದೇ, ಮನೆಯಲ್ಲಿಯೇ ಕುಳಿತು ಮುಂದೇನು ಮಾಡಬಹುದು ಎನ್ನುವುದನ್ನು ಆಲೋಚಿಸುತ್ತಿದ್ದಾರೆ. ಈ ಕೋವಿಡ್-19 ಮಹಾಮಾರಿಯು ಎಲ್ಲರ ಜೀವನವನ್ನು ಅಸ್ತವ್ಯಸ್ತಗೊಳಿಸಿರುವುದಂತೂ ಕಟುಸತ್ಯ. ಸಣ್ಣ, ಮಧ್ಯಮದಿಂದ ಹಿಡಿದು ದೊಡ್ಡ ಉದ್ಯಮಗಳಿಗೂ ತಮ್ಮ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಗಳನ್ನು ಹೇಗೆ ನಿಭಾಯಿಸುವುದು ಎನ್ನುವುದು ಉತ್ತರ ಸಿಗದ ಪ್ರಶ್ನೆಯಂತೆ ಕಾಡುತ್ತಿದೆ. 

ಅನೇಕ ಉದ್ಯಮಗಳಿಗೆ ಮಾಮೂಲಿನಂತೆ ಕಾರ್ಯನಿರ್ವಹಿಸುವುದು ಕಷ್ಟಕರವೆನಿಸಿದೆ. ಲಾಕ್ ಡೌನ್, ಸಾರ್ವಜನಿಕರಿಗೆ ಹೇರಿದ ನಿರ್ಬಂಧನೆಗಳು ಇತ್ಯಾದಿಗಳಿಂದ ಅನೇಕ ಉದ್ಯಮಗಳು ಕಚೇರಿಗಳಲ್ಲಿ ಕಾರ್ಯನಿರ್ವಹಿಸದೇ, ತಮ್ಮ ಸಿಬ್ಬಂದಿವರ್ಗದವರನ್ನು ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಆದೇಶಿಸಿರುವುದು ಗೊತ್ತಿರುವ ಸಂಗತಿಯೇ. ಹಾಗೆ ಮಾಡದೆ ಬೇರೆ ಉಪಾಯವೂ ಇಲ್ಲವೆನ್ನುವುದು ಅರಗಿಸಲಾಗದ ಸತ್ಯ. ಹೀಗೆ ಕಾರ್ಯನಿರ್ವಹಣೆ ಮಾಡುವುದು ಬಹುತೇಕ ಕಚೇರಿಗಳಿಗೆ ಅಸಾಧ್ಯ, ಯಾಕೆಂದರೆ ಅವರ ಕಾರ್ಯನಿರ್ವಹಣೆಯ ಸ್ವರೂಪ ಅಂತಹುದು. ಮಾತ್ರವಲ್ಲದೆ, ಹಲವಾರು ಉದ್ಯಮಗಳಲ್ಲಿ ಸಿಬ್ಬಂದಿ ವರ್ಗಗಳಿಗೆ ದೂರಸ್ಥ ಕೆಲಸ ನಿರ್ವಹಿಸಲು ಬೇಕಾದ ಕೌಶಲ್ಯತೆಯ ಕೊರತೆ ಇರುತ್ತದೆ. ಇನ್ನು ಕೆಲವು ಉದ್ಯಮಗಳಲ್ಲಿ ಕೆಲಸಗಳನ್ನು ಪರೋಕ್ಷವಾದ ರೀತಿಯಲ್ಲಿ ನಿರ್ವಹಿಸುವುದು ಅಸಾಧ್ಯ ಮಾತು. ಹಾಗೆಂದು ಕೇವಲ ಕೆಲವು ತಿಂಗಳುಗಳ ಸಮಸ್ಯೆಗೆ ಈಗಿರುವ ಸಿಬ್ಬಂದಿಗಳನ್ನು ಕೆಲಸದಿಂದ ತೆರವುಗೊಳಿಸುವುದು ಕೂಡಾ ಸರಿಯಲ್ಲ. 

ಇಂಥ ಸಮಯದಲ್ಲಿ ಸಿಬ್ಬಂದಿ ವರ್ಗದ ಕಾರ್ಯಕ್ಷಮತೆಯನ್ನು ಹೇಗೆ ವಿಶ್ಲೇಷಿಸಿ ಬೆಲೆ ಕಟ್ಟುವುದು? ಹಲವಾರು ಕಚೇರಿಗಳಲ್ಲಿ ಇಂಥ ಸಮಯದಲ್ಲಿ ಸಿಬ್ಬಂದಿವರ್ಗದವರೊಡನೆ ನಿಯತಕಾಲಿಕ ಸಂಪರ್ಕ ನಡೆಸಲೂ ಅವಕಾಶಗಳು ಕಡಿಮೆ. ಸಣ್ಣ ಉದ್ಯಮಗಳಿಂದ ಹಿಡಿದು ದೊಡ್ಡ ದೊಡ್ಡ ಸಂಸ್ಥೆಗಳಿಗೂ ಮಾನವ ಸಂಪನ್ಮೂಲ ನಿರ್ವಹಣೆ ಈ ಸಮಯದಲ್ಲ ಕಷ್ಟ ಅನ್ನಿಸುತ್ತದೆ. ಈಗ ಪ್ರತಿಯೊಬ್ಬರಿಗೂ ಅನೇಕ ರೀತಿಯಲ್ಲಿ ಕಷ್ಟಗಳು ಬಂದೊದಗಿರುವ ಕಾರಣ ಪರಿಸ್ಥಿತಿಯ ಅನಾನುಕೂಲಗಳನ್ನು ಅರ್ಥೈಸಿಕೊಂಡು ಉದ್ಯಮ ಸಂಸ್ಥೆಗಳು ತಮ್ಮ ನಿರ್ಧಾರಗಳನ್ನು ಮಂಡಿಸಬೇಕು. ಇಲ್ಲವಾದಲ್ಲಿ ಉದ್ಯಮಗಳು ವ್ಯವಹಾರದಲ್ಲಿ ಕುಸಿತ ಕಾಣುವುದು ಖಂಡಿತ. 

ಅಂತರರಾಷ್ಟ್ರೀಯ ಕಾರ್ಮಿಕರ ಸಂಸ್ಥೆಯ ಪ್ರಕಾರ ಈ ಕೋವಿಡ್-19 ಪ್ರಭಾವದಿಂದಾಗಿ ಹಲವಾರು ಸಂಸ್ಥೆಗಳಲ್ಲಿ ಕೆಲಸದ ಕಾರ್ಯಾವಧಿಯು ಸುಮಾರು ೭ ಪ್ರತಿಶತದಷ್ಟು ಕಡಿಮೆಯಾಗುವ ಸಂಭವವಿದೆ. ಜೊತೆಗೆ ಹಲವಾರು ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿ ಉದ್ಯೋಗ ನಷ್ಟವಾಗುವ ಸಂಭವವೂ ಇದೆ ಹಾಗೂ ಹಲವಾರು ಉದ್ಯೋಗಿಗಳಿಗೆ ಕಡಿಮೆ ಸಂಬಳ, ತಾತ್ಕಾಲಿಕವಾಗಿ ನಿವೃತ್ತಿ ಹೊಂದಲು ಬಲವಂತ ಪಡಿಸುವುದು ಮುಂತಾದ ತೊಂದರೆಗಳು ಎದುರಿಸಬೇಕಾಗಿ ಬರಬಹುದು. ಹೀಗಿರುವಾಗ, ಪ್ರತಿಯೊಂದು ಉದ್ಯಮಗಳ ಮಾನವ ಸಂಪನ್ಮೂಲ ಅಧಿಕಾರಿಗಳು, ಸಮಯದ ರಿಕ್ತತೆಯನ್ನು ಅರಿತು ಉದ್ಯಮದ ಕಾರ್ಯಾಚರಣೆಗೆ ಅತ್ಯಂತ ಅಗತ್ಯವಿರುವ ಸಿಬ್ಬಂದಿಗಳ ಪಟ್ಟಿಯನ್ನು ಮಾಡುವುದು ಅನಿವಾರ್ಯ. ಮಾತ್ರವಲ್ಲದೆ, ಪ್ರತಿಯೊಬ್ಬ ಸಿಬ್ಬಂದಿಯ ಕೌಶಲ್ಯತೆ, ಸಂಸ್ಥೆಯ ಉಳಿಗಾಲಕ್ಕೆ ಹಾಗೂ ಕಾರ್ಯಾಚರಣೆಗೆ ಅವರ ವೃತ್ತಿಪರ ಬೆಂಬಲದ ಅಗತ್ಯತೆ, ಹಾಗೂ ಅವರನ್ನು ಇಂದಿನ ಕೆಲಸದ ಶೈಲಿಗೆ ಅನುಗುಣವಾಗಿ ತಯಾರಿಸಲು ಬೇಕಾದ ತರಬೇತಿಯ ಅಗತ್ಯತೆಯನ್ನು ಪರಿಶೀಲಿಸಿ ಅದಕ್ಕೆ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. 


ಉದ್ಯೋಗ ನೀತಿಯಲ್ಲಿ ಅಗತ್ಯವಾದ ಬದಲಾವಣೆಗಳು:

ಕೋವಿಡ್-19 ಮಹಾಮಾರಿಯ ಪರಿಣಾಮಗಳಿಂದಾಗಿ ಹಲವಾರು ಉದ್ಯಮಗಳಲ್ಲಿ  ಕಾರ್ಯಾವಧಿ ಕಡಿಮೆಗೊಳಿಸಿ, ಕೇವಲ ಕೆಲವೇ ಸಿಬ್ಬಂದಿಗಳ ಉಪಯೋಗದಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ. ಹೀಗಿರುವಾಗ ಉದ್ಯೋಗ ನೀತಿಯಲ್ಲಿ ಹಲವಾರು ಬದಲಾವಣೆಗಳನ್ನು ಮಂಡಿಸುವುದು ಅತಿ ಅಗತ್ಯ. ಕಾರ್ಯನಿಮಿತ್ತ ಚಟುವಟಿಕೆಗಳಲ್ಲಿ ಕೊರೋನಾ ಸೋಂಕಿಗೆ ತುತ್ತಾಗಬಹುದಾದ ಅಪಾಯ ಜಾಸ್ತಿ ಇರುವಂಥ ಸಿಬ್ಬಂದಿಗಳಿಗೆ ಒಂದು ರೀತಿಯ ನಿಯಮಗಳನ್ನು ಅಳವಡಿಸಿದರೆ, ಉಳಿದ ಸಿಬ್ಬಂದಿಗಳಿಗೆ ಇನ್ನೊಂದು ರೀತಿಯ ನಿಯಮಗಳನ್ನು ನಿರ್ಣಯಿಸಬೇಕಾಗಿದೆ. ಸಿಬ್ಬಂದಿಗಳ ಕಡೆಗೆ ಅನುಭೂತಿಯ ದೃಷ್ಟಿಯಿಂದ ಹಾಗೂ ಹೊಸ ಸಾಮಾನ್ಯತೆಗೆ ಅನುಗುಣವಾಗಿ ನಿಯಮಗಳನ್ನು ಮಂಡಿಸಿದಲ್ಲಿ ಉದ್ಯಮಕ್ಕೂ, ಸಿಬ್ಬಂದಿ ವರ್ಗಕ್ಕೂ ಸರಿಸಮಾನವಾಗಿ ಉಪಕಾರವಾದಂತೆ. 

 

ಸಿಬ್ಬಂದಿಗಳ ಕಾರ್ಯಕ್ಷಮತೆ ಹಾಗೂ ಪ್ರತಿಫಲ:

ಸೋಂಕು ಹರಡುವ ವೇಗವನ್ನು ನೋಡುವಾಗ, ಎಲ್ಲಾ ಉದ್ಯಮಗಳ ಸಿಬ್ಬಂದಿಗಳ ಕಾರ್ಯಕ್ಷಮತೆಯಲ್ಲಿ ಪ್ರತಿಕೂಲ ಪರಿಣಾಮ ಬೀರಿಯೇ ಇರುತ್ತದೆ. ಹಲವಾರು ಉದ್ಯೋಗಿಗಳಿಗೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವುದಕ್ಕೂ, ಮನೆಯಿಂದ ಕಾರ್ಯ ನಿರ್ವಹಿಸುವುದಕ್ಕೂ ಬಹಳ ವ್ಯತ್ಯಾಸ ಅನ್ನಿಸುತ್ತದೆ. ಕಚೇರಿಯಲ್ಲಿ ಕೆಲಸ  ಕ್ಷಮ್ಯತೆ ಮನೆಯಿಂದ ಕೆಲಸ ನಿರ್ವಹಿಸುವಾಗ ಇರುವುದಿಲ್ಲ. ಇನ್ನು ಕೆಲವರಿಗೆ ಮನೆಯಿಂದ ಕೆಲಸ ಮಾಡುವಾಗ ಮನ ಶಾಂತಿಯಿಂದಿರುತ್ತದೆ ಹಾಗೂ ಕಾರ್ಯದಲ್ಲಿ ಕ್ಷಮ್ಯತೆ ಹೆಚ್ಚಾಗಿರುತ್ತದೆ. ಇದೆಲ್ಲವನ್ನೂ ಈ ಲಾಕ್ ಡೌನ್ ಸಮಯದಲ್ಲಿ ಪರಿಶೀಲಿಸಲು ಸಾಧ್ಯವಾಗಿದೆ. ಮನೆಯಿಂದಲೇ ಕಾರ್ಯ ನಿರ್ವಹಿಸಿ ತಮ್ಮ ಕೆಲಸದ ಗುರಿಯನ್ನು ತಲುಪುವಂತಹ ಸಿಬ್ಬಂದಿಗಳಿಗೆ ಅವರ ಕಾರ್ಯಕ್ಷಮತೆಯನ್ನು ಗುರುತಿಸಿ ಸರಿಯಾದ ಬಹುಮಾನ, ಪ್ರತಿಫಲ ಹಾಗೂ ವೇತನ ಹೆಚ್ಚಳ ನೀಡಿದರೆ ಅವರ ಕಾರ್ಯಕ್ಷಮತೆ ಇನ್ನೂ ಹೆಚ್ಚಾಗುವುದು ಖಂಡಿತ. ಜೊತೆಗೆ, ಪ್ರತಿಯೊಬ್ಬ ಸಿಬ್ಬಂದಿಗೂ ಅಗತ್ಯವಿರುವ ತರಬೇತಿಗಳನ್ನು ಕಾಲಕಾಲಕ್ಕೆ ನೀಡಿದರೆ ಉತ್ತಮ. ಕೊರೋನಾ ಕಾರಣದಿಂದಾಗಿ ವಹಿವಾಟುಗಳು ಕುಸಿತವಾಗಿರುವ ಕಾರಣ ಕೆಲಸಗಳು ಕಡಿಮೆ ಇರುವುದು ಒಪ್ಪಲೇಬೇಕಾದ ಸಂಗತಿ. ಈ ಸಮಯವನ್ನು ವ್ಯರ್ಥ ಮಾಡದೆ, ಸಿಬ್ಬಂದಿಗಳಿಗೆ ಅವಶ್ಯಕವಾದ ತರಬೇತಿ ನೀಡಿ ಸ್ವಯಂಪ್ರೇರಿತ ಕಲಿಕೆಗೆ ಪ್ರೋತ್ಸಾಹಿಸಬೇಕು. ಇದರಿಂದ ಸಿಬ್ಬಂದಿಗಳು ಸಮರ್ಥವಾಗಿ ಕೆಲಸ ಮಾಡಿ ಉದ್ಯಮದ ಲಾಭದಾಯಕತೆಯನ್ನು ವೃದ್ಧಿಸುವಲ್ಲಿ ಸಹಕಾರವಾಗುವುದು. 

 

ಉದ್ಯಮಗಳ ಕೆಲಸ ಮಾಡುವ ಶೈಲಿ:

ಈ ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಆದಷ್ಟು ಈ ಮೂರು ವಿಚಾರಗಳನ್ನು ಪರಿಗಣಿಸಿ ಕಾರ್ಯ ನಿರ್ವಹಿಸುವ ಶೈಲಿಯಲ್ಲಿ ಸೂಕ್ತ ಬದಲಾವಣೆ ತರುವುದು ಉತ್ತಮಸಿಬ್ಬಂದಿಗಳ ಪ್ರತಿಭೆಯ ವರ್ಗ, ಯಾಂತ್ರೀಕೃತ ಕಾರ್ಯ ಪದ್ಧತಿ ಹಾಗೂ ಸಾಮಾಜಿಕ ಅಂತರದ  ಅವಶ್ಯಕತೆ.ಪ್ರತಿಯೊಬ್ಬ ಸಿಬ್ಬಂದಿಗಳಿಗೂ ಅವರದೇ ಆದ ಪ್ರತಿಭೆ, ದಕ್ಷತೆ ಹಾಗೂ ಅನನ್ಯತೆ ಇದೆ. ಅದನ್ನು ಗುರುತಿಸಿ ತಮ್ಮ ಉದ್ಯಮ ಸಂಸ್ಥೆಗೆ ಯಾವ ಸಿಬ್ಬಂದಿಯ ಅವಶ್ಯಕತೆ ಈ ಸಮಯದಲ್ಲಿ ಹೆಚ್ಚಿದೆ?, ಹೊಸ ಕಾರ್ಯಶೈಲಿಗಳನ್ನು ಬಹು ಬೇಗನೆ ಅರ್ಥೈಸಿಕೊಂಡು ದಕ್ಷತೆಯಿಂದ ಯಾವ ಸಿಬ್ಬಂದಿ ಕಾರ್ಯನಿರ್ವಹಣೆ ಮಾಡಬಹುದು?, ಇದ್ದ ಸಿಬ್ಬಂದಿಗಳಿಂದ ಯಾವ ರೀತಿಯಲ್ಲಿ ಕೆಲಸವನ್ನು ಮಾಡಿಸಿಕೊಳ್ಳಬಹುದು? ಕೆಲಸಗಳನ್ನು ಸ್ವ-ಉದ್ಯೋಗಿಗಳಿಗೆ ನೀಡಿದರೆ ನಿಯಮಿತ ಉದ್ಯೋಗಿಗಳಂತೆಯೇ ಜವಾಬ್ದಾರಿಯುತವಾಗಿ ನಿಭಾಯಿಸಲು ಸಾಧ್ಯವೇ?, ಯಾವ ಯಾವ ಕೆಲಸಗಳನ್ನು ಯಾಂತ್ರಿಕ ರೀತಿಯಿಂದ ನಿಭಾಯಿಸಲು ಸಾಧ್ಯ? ಅದಕ್ಕೆ ಉಂಟಾಗುವ ವೆಚ್ಚ ಎಷ್ಟಾಗಬಹುದು ಹಾಗೂ ಅದು ಉಪಯುಕ್ತ ವೆಚ್ಚ ಹೌದೇ ಅಲ್ಲವೇ?, ಸಾಮಾಜಿಕ ಅಂತರವನ್ನು ಕಾರ್ಯಕ್ಷೇತ್ರದಲ್ಲಿ ಹೇಗೆ ನಿಭಾಯಿಸಬಹುದು? ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. 

 

ಉದ್ಯಮದ ಬೆಳವಣಿಗೆಗೆ ಸಿಬ್ಬಂದಿಗಳ ಕೊಡುಗೆ:

ಯಾವುದೇ ಉದ್ಯಮವು ಬೆಳೆಯಬೇಕೆಂದರೆ ಅದರ ಸಿಬ್ಬಂದಿಗಳ ಪರ ಉದ್ಯಮ ಎಷ್ಟು ಜವಾಬ್ದಾರಿ ಮೆರೆಯುತ್ತದೆಯೋ ಅಷ್ಟೇ ಜವಾಬ್ದಾರಿಯುತವಾಗಿ ಸಿಬ್ಬಂದಿಗಳೂ ಕಾರ್ಯನಿರ್ವಹಿಸುವುದು ಅತ್ಯಗತ್ಯ. ಉದ್ಯಮ ಸಂಸ್ಥೆಯ ಏಳಿಗೆ ಬೀಳುವಿಕೆಗೆ ಉದ್ಯಮದ ಮಾಲೀಕರು ಎಷ್ಟು ಕಾರಣವೋ ಅಷ್ಟೇ ಕಾರಣ ಉದ್ಯಮದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳೂ ಆಗಿರುತ್ತಾರೆ. ಹೀಗಿರುವಾಗ, ಎಲ್ಲ ಸಿಬ್ಬಂದಿಗಳೂ ಜವಾದ್ದಾರಿಯುತವಾಗಿ ನಿರಂತರವಾಗಿ ಉದ್ಯಮದ ಪರವಾಗಿ ಕಾರ್ಯನಿರ್ವಹಿಸಿ ತಮ್ಮ ಪ್ರತಿಭೆಗಳನ್ನು ವೃದ್ಧಿಸಿ, ಉದ್ಯಮದ ಏಳಿಗೆಗಾಗಿ ಶ್ರಮಿಸುವುದು ತುಂಬಾ ಮುಖ್ಯ. ಉದ್ಯಮ ಸಂಸ್ಥೆ ಬೆಳೆದಾಗ ಮಾತ್ರವೇ ಅದರಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೂ ತಮ್ಮ ವೃತ್ತಿಜೀವನದಲ್ಲಿ ಏಳಿಗೆ ಸಿಗುವುದು. ಹೀಗಾಗಿ ಜವಾಬ್ದಾರಿ ಮೆರೆದು ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಸಿಬ್ಬಂದಿಯೂ ತಮ್ಮ ವೃತ್ತಿಜೀವನದಲ್ಲಿ ವೇಗವಾಗಿ ಎತ್ತರಕ್ಕೆ ಬೆಳೆಯುತ್ತಾರೆ. 

ದೂರಸ್ಥ ಕೆಲಸದಿಂದಾಗಿ ವೃತ್ತಿಗಳು ಚರವಾಗಿ, ಸಿಬ್ಬಂದಿಗಳು ಸ್ಥಿರವೆನಿಸುತ್ತದೆ. ಇದರಿಂದ ಯಾವುದೇ ನಿರ್ಬಂಧವಿಲ್ಲದಂತೆ ಎಲ್ಲ ಕೆಲಸಕಾರ್ಯಗಳೂ ಜಗತ್ತಿನ ಯಾವ ಮೂಲೆಯಿಂದಲೂ ಕಾರ್ಯನಿರ್ವಹಿಸುವುದು ಸಾಧ್ಯವಾಗಿದೆ. ಹಲವಾರು ಉದ್ಯಮಗಳು ಇದರಿಂದ ಲಾಭ ಪಡೆಯುತ್ತಿವೆ. ಅನೇಕ ರೀತಿಯ ಹೊಸ ಉದ್ಯೋಗಗಳಿಗೆ ಅವಕಾಶಗಳು ದೊರೆತಂತಿದೆ. ಹೊಸ ಹೊಸ ರೀತಿಯ ಉದ್ಯೋಗಗಳು ಜನ್ಮ ತಳೆದು, ಹೊಸ ರೀತಿಯ ವೃತ್ತಿ  ಸೃಷ್ಟಿಯಾಗಿದೆ. ಉದ್ಯೋಗಿಗಳ ಕೆಲಸ ಮಾಡುವ ಶೈಲಿ, ಉದ್ಯೋಗ ಸ್ವಭಾವಗಳು ಎಲ್ಲವೂ ಬದಲಾಗಿದೆ. ಆದ್ದರಿಂದ, ಅನೇಕ ರೀತಿಯ ಬದಲಾವಣೆಗಳು ಮಾನವ ಸಂಪನ್ಮೂಲ ನಿರ್ವಹಣೆಗೆ ಅತ್ಯಗತ್ಯ. ಉದ್ಯಮಗಳು ಯೋಚಿಸಿ, ಉಪಯುಕ್ತ ಬದಲಾವಣೆ ತರಲು ಇದೇ ಸೂಕ್ತ ಸಮಯ. ಅನೇಕ ರೀತಿಯ ವೆಚ್ಚಗಳನ್ನು ಕಡಿಮೆಗೊಳಿಸಿ ಮೊದಲಿನ ಪ್ರಮಾಣಕ್ಕಿಂತಲೂ ಹೆಚ್ಚಿನ ಸಾಮರ್ಥ್ಯದಿಂದ ಕೆಲಸವನ್ನು ಮಾಡಿಸಿಕೊಳ್ಳಲು ಇದು ಉತ್ತಮ ಅವಕಾಶ. ಧೃತಿಗೆಡದೆ, ಸರಿಯಾದ ನಿರ್ಧಾರ ತೆಗೆದುಕೊಂಡರೆ, ಉದ್ಯಮಗಳಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ ಒಂದು ಸುಲಭವಾದ ಕೆಲಸ ಅನ್ನಿಸುವುದರಲ್ಲಿ ಸಂದೇಹವೇ ಇಲ್ಲ.

Wednesday, October 6, 2021

ನವರಾತ್ರಿ

ನವರಾತ್ರಿ ಎಂದರೆ ನವದುರ್ಗೆಯರನ್ನು ಪೂಜಿಸುವ ಹಬ್ಬ. ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಶಕ್ತಿ ಸ್ವರೂಪಿಣಿಯಾದ ದುರ್ಗೆಯು ಒಂಭತ್ತು ಅವತಾರಗಳನ್ನು ತಾಳುತ್ತಾಳೆ.



*ನವರಾತ್ರಿಯ ಹಿನ್ನಲೆ*
ಪರಶಿವನ ಪತ್ನಿಯಾದ ದುರ್ಗಾಮಾತೆಯು ಅತ್ಯಂತ ಶಕ್ತಿಶಾಲಿಯಾದ ದೇವತೆಯಾಗಿದ್ದು, ಆದಿಶಕ್ತಿ ಎಂದು ಕರೆಯಲ್ಪಡುತ್ತಾಳೆ. ಆದಿ ಶಕ್ತಿಯನ್ನು ಕಾಳಿ, ಪಾರ್ವತಿ, ಗೌರಿ, ಸತಿ, ಮಹಾಮಾಯೆ ಹಾಗೂ ಮಹಿಷಾಸುರ ಮರ್ದಿನಿ ಮುಂತಾದ ವಿವಿಧ ರೂಪಗಳಲ್ಲಿ ಆರಾಧಿಸಲಾಗುತ್ತದೆ.

ಪುರಾಣಗಳಲ್ಲಿ ಹೇಳುವಂತೆ, ಮಹಿಷಾಸುರನೆಂಬ ಎಮ್ಮೆ ರೂಪದ ಅಸುರನು ತನ್ನ ಸೈನ್ಯದೊಂದಿಗೆ ದೇವಲೋಕಕ್ಕೆ ದಾಳಿ ಮಾಡಿ, ದೇವತೆಗಳನ್ನು ಹೊರಗೆ ಅಟ್ಟಿದನಂತೆ. ಆಗ ದೇವತೆಗಳೆಲ್ಲರೂ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಕಾಪಾಡುವಂತೆ ಕೇಳಿಕೊಂಡಾಗ, ಮೂರು ತ್ರಿಮೂರ್ತಿಗಳೂ ತಮ್ಮ ದೇಹದ ಶಕ್ತಿಯನ್ನೆಲ್ಲ ಸೇರಿಸಿ, ದೇವತೆಯನ್ನು ಸೃಷ್ಟಿಸಿದರು. ಎಲ್ಲಾ ದೇವರ ಶಕ್ತಿಯು ಸೇರಿ ದೇವಿಯು ದುರ್ಗೆಯ ಅವತಾರವೆತ್ತಿದಳು. ಶಕ್ತಿಗಳ ಸಂಗಮದಿಂದ ಆದ ದುರ್ಗಾ ದೇವಿಯ ಅವತಾರದಲ್ಲಿ ದೇವಿಯು 10 ಕೈಗಳನ್ನು ಹೊಂದಿರುವ ಸುಂದರವಾದ ಸ್ತ್ರೀಯಾಗಿ ಹುಟ್ಟಿದ ನಂತರ ದೇವತೆಗಳೆಲ್ಲ ಆಕೆಗೆ ಉಡುಗೊರೆಯನ್ನು ನೀಡಿದರು.

ಈಶ್ವರನು ತ್ರಿಶೂಲವನ್ನು, ವಿಷ್ಣುವು ಚಕ್ರವನ್ನು, ವರುಣ ದೇವನು ಪಾಶವನ್ನು, ಇಂದ್ರನು ವಜ್ರಾಯುಧವನ್ನು ಹಾಗೂ ವಾಯುವು ಬಾಣಗಳನ್ನು ದುರ್ಗೆಗೆ ನೀಡಿದರು. ವಸ್ತ್ರಗಳನ್ನು ಮತ್ತು ವಾಹನವಾದ ಸಿಂಹವನ್ನು ಪರ್ವತಗಳ ರಾಜ ಹಿಮವಂತನು ನೀಡಿದನು. ಎಲ್ಲಾ ಆಯುಧಗಳಿಂದ ಸನ್ನದ್ಧಳಾದ ದೇವಿಯು ಯುದ್ಧಕ್ಕೆ ಸಿದ್ಧಳಾಗಿ ಅಸುರ ಸೈನ್ಯದ ಮೇಲೆ ಆಕ್ರಮಣ ಮಾಡಿದಳು. ಒಂಭತ್ತು ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಮಹಿಷಾಸುರನನ್ನು ದೇವಿಯು ತನ್ನ ಸಿಂಹ ಹಾಗೂ ಆಯುಧಗಳ ಸಹಾಯದಿಂದ ಸಂಹರಿಸಿದಳು. ದುರ್ಗೆಯು ಮಹಿಷಾಸುರನನ್ನು ವಧಿಸಿದ ದಿನವೇ ವಿಜಯ ದಶಮಿ.

*ದುರ್ಗೆಯ ಒಂಭತ್ತು ಅವತಾರಗಳು*
ದುಷ್ಟರ ಸಂಹಾರಕ್ಕಾಗಿ, ಶಿಷ್ಟರ ರಕ್ಷಣೆಗಾಗಿ ನವ ಅವತಾರಗಳನ್ನು ಎತ್ತಿ, ಅಸುರರನ್ನು ಸಂಹರಿಸಿದ ಶಕ್ತಿ ರೂಪಿಣಿಯೇ ದುರ್ಗಾದೇವಿ. ನವರಾತ್ರಿಯ ಒಂಭತ್ತೂ ದಿನಗಳಲ್ಲಿ ನವದುರ್ಗೆಯರನ್ನಿಟ್ಟು ಪೂಜಿಸಲಾಗುತ್ತದೆ.

*ಶೈಲ ಪುತ್ರಿ*
ನವರಾತ್ರಿಯ ಮೊದಲನೇ ದಿನವನ್ನು ಪ್ರತಿಪಾದ ಎಂದು ಕರೆಯುತ್ತಾರೆ.ಈ ದಿನ ಶೈಲಪುತ್ರಿಯ ರೂಪವನ್ನು ಪೂಜಿಸಲಾಗುತ್ತದೆ. ಶೈಲಪುತ್ರಿಯೆಂದರೆ ಪರ್ವತರಾಜನ ಮಗಳು ಎಂದರ್ಥ, ಈಶ್ವರನ ಪತ್ನಿಯಾಗಿಯೂ ಶೈಲ ಪುತ್ರಿಯನ್ನು ಆರಾಧಿಸಲಾಗುತ್ತದೆ. ಶೈಲಪುತ್ರಿಯನ್ನು ಸತಿ ದೇವಿಯ ಪುನರ್ಜನ್ಮವೆಂದು ಕರೆಯಲಾಗುತ್ತದೆ. ಪತಿಯಾದ ಶಿವನನ್ನು ತಂದೆಯು ಅವಮಾನ ಮಾಡಿದ್ದಕ್ಕಾಗಿ ಸತಿ ದೇವಿಯು ತನ್ನ ತಂದೆ ಯಜ್ಞ ಮಾಡುತ್ತಿದ್ದ ವೇಳೆ ಅಗ್ನಿಕುಂಡಕ್ಕೆ ಜಿಗಿದು ಪ್ರಾಣಾರ್ಪಣೆಗೈಯುತ್ತಾಳೆ. ಶಿವನನ್ನು ಮರಳಿ ಪಡೆಯಲು ಅವಳು ಪುನರ್ಜನ್ಮ ಪಡೆಯುತ್ತಾಳೆ. ಆದರೆ ಸತಿ ಸಾವಿನ ಬಳಿಕ ಶಿವನು ದೀರ್ಘವಾದ ಧ್ಯಾನದಲ್ಲಿ ಮುಳುಗಿ ಹೋದ. ದೇವಿ ಶೈಲ ಪುತ್ರಿಯು ಕಾಡಿಗೆ ಹೋಗಿ 16ವರ್ಷ ಕಠಿಣ ತಪಸ್ಸಿನಲ್ಲಿ ತೊಡಗಿ ನಂತರ ಶಿವನನ್ನು ಪಡೆದಳು. ದುರ್ಗೆಯ ಶುದ್ಧ ರೂಪವಾಗಿರುವ ಶೈಲಪುತ್ರಿ ನಿಸರ್ಗದ ಮಾತೆ ಎಂಬುದಾಗಿ ಪರಿಗಣಿತವಾಗಿದ್ದಾಳೆ. ಗೂಳಿಯ ಮೇಲೆ ಕುಳಿತಿರುವ ಮಾತೆ ತ್ರಿಶೂಲವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾಳೆ ಮತ್ತು ಕೈಗಳಲ್ಲಿ ತಾವರೆ ಇದೆ. ಸತಿ, ಭವಾನಿ, ಪಾರ್ವತಿ ಮತ್ತು ಹೇಮಾವತಿ ಎಂಬ ಹೆಸರೂ ಶೈಲಪುತ್ರಿಗಿದೆ.

*ಬ್ರಹ್ಮಚಾರಿಣಿ*
ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಪಾರ್ವತಿಯಾಗಿ ಹಿಮಾಲಯನ ಪುತ್ರಿಯಾಗಿ ಜನಿಸಿದ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದಾಗಿ ದೇವಿಗೆ ತಪಶ್ಚಾರಿಣೀ ಅರ್ಥಾತ್‌ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂತು. ದೈವಿಕ ಅಂಶವನ್ನು ತನ್ನಲ್ಲಿ ಮೈಗೂಡಿಸಕೊಂಡು ಶುದ್ಧಳಾಗಿರುವವಳು ಎಂಬುದಾಗಿ ಪರಿಗಣಿಸಲಾಗುತ್ತದೆ. ಬಲಕೈಯಲ್ಲಿ ಗುಲಾಬಿ ಹೂವು ಮತ್ತು ಎಡಕೈಯಲ್ಲಿ ನೀರು ಇರುವ ಕಮಂಡಲವನ್ನು ದೇವಿ ಹಿಡಿದುಕೊಂಡಿದ್ದಾಳೆ. ಮೋಕ್ಷಕ್ಕೆ ದಾರಿ ತೋರುವ ಮಾತೆಯಾಗಿದ್ದಾಳೆ ಬ್ರಹ್ಮಚಾರಿಣಿ. ಶಾಂತಿ, ಸಮೃದ್ಧಿ ಮತ್ತು ವೈವಾಹಿಕ ಸುಖವನ್ನು ಭಕ್ತರಿಗೆ ದೇವಿ ನೀಡುತ್ತಾಳೆ.

*ಚಂದ್ರ ಘಂಟ ದೇವಿ*
ನವರಾತ್ರಿಯ ಮೂರನೇ ದಿನ ಚಂದ್ರಘಂಟ ದೇವಿಯನ್ನು ಪೂಜಿಸಲಾಗುತ್ತದೆ. ದುರ್ಗಾಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟೆಯನ್ನು ದುರ್ಗಾ ಮಾತೆಯ ರೌದ್ರ ಸ್ವರೂಪವೆಂಬುದಾಗಿಯೂ ಕರೆಯಲಾಗುತ್ತದೆ. ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟ ರೂಪದಲ್ಲಿ ತೋರಿಸಿದ್ದಾರೆ. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ. ತನ್ನ ಹಣೆಯಲ್ಲಿ ಗಂಟೆಯ ಆಕಾರದ ಚಂದ್ರನನ್ನು ಹೊಂದಿರುವವಳು ಎಂದಾಗಿದೆ. ಚಂದ್ರನನ್ನು ಹೊಂದಿರುವಂತೆ ಅವಳು ಶಾಂತಿಪ್ರಿಯಳಾಗಿದ್ದಾಳೆ. ಹತ್ತು ಕೈಗಳು ಮತ್ತು ಮೂರು ಕಣ್ಣುಗಳು ದೇವಿಗಿದೆ. ಅವರು ಎಲ್ಲವನ್ನೂ ನೋಡುತ್ತಿದ್ದಾಳೆ ಮತ್ತು ಕೆಟ್ಟದ್ದು ಯಾವ ಭಾಗದಿಂದ ಬಂದರೂ ಅವರು ಅದನ್ನು ನಾಶ ಮಾಡುತ್ತಾಳೆ ಎಂದಾಗಿದೆ.

*ಕೂಷ್ಮಾಂಡ ದೇವಿ*
ಚತುರ್ಥಿ ಅಥವಾ ನಾಲ್ಕನೇ ದಿನದಂದು ದೇವಿಯು ಕೂಷ್ಮಾಂಡಿನಿಯ ಅವತಾರವೆತ್ತುತ್ತಾಳೆ. ಕೂಷ್ಮಾಂಡಿನಿಯನ್ನು ಈ ಭೂಮಿಯ ಸೃಷ್ಟಿಕರ್ತೆ ಎಂದು ಹೇಳಲಾಗುತ್ತದೆ. ಎಂಟು ಭುಜಗಳಿರುವ ಕಾರಣ ಅಷ್ಟಭುಜಾದೇವಿ ಎಂದು ಕರೆಯಲಾಗುತ್ತದೆ. ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ಇದೇ ದೇವಿಯು ತನ್ನ 'ಈಶತ್‌' ಹಾಸ್ಯದಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಆದ್ದರಿಂದ ಇವಳೇ ಸೃಷ್ಟಿಯ ಆದಿ- ಸ್ವರೂಪ ಶಕ್ತಿಯಾಗಿದ್ದಾಳೆ. ಅವಳು ಅನೇಕ ಆಯುಧಗಳನ್ನು, ಗುಲಾಬಿ, ಕಮಾಂಡಲ ಮತ್ತು ಅವಳ ಕೈಯಲ್ಲಿ ಕೆಲವು ಮಿನುಗುವಿಕೆಗಳನ್ನು ಹೊಂದಿದ್ದಾರೆ. ಅವಳ ಕೈಯಿಂದ ಹೊರಬರುವ ಬೆಳಕು ಜಗತ್ತನ್ನು ಅಂಧಕಾರದಿಂದ ದೂರವಿರಿಸುತ್ತದೆ. ಅವಳ ಸಿಂಹ - ದೈಹಿಕ ಮತ್ತು ಭಾವನಾತ್ಮಕ ಶಕ್ತಿಯನ್ನು ಸಂಕೇತಿಸುತ್ತದೆ.

*ಸ್ಕಂದ ಮಾತೆ*
ನವರಾತ್ರಿಯ ಐದನೇ ದಿನದಂದು ದುರ್ಗೆಯ ಐದನೇ ಅವತಾರವಾಗಿರುವ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ. ಕಾರ್ತಿಕೇಯನನ್ನು ತನ್ನ ತೊಡೆಯ ಮೇಲೆ ಕೂರಿಸಿರುವ ರೂಪದಲ್ಲಿ ಈ ದೇವಿಯು ತಮ್ಮ ಬಲಗೈಯಲ್ಲಿ ಕಾರ್ತಿಕೇಯನನ್ನು ಎತ್ತಿಕೊಂಡಿದ್ದಾಳೆ. ಇನ್ನೊಂದು ಬಲಗೈಯಲ್ಲಿ ಭಕ್ತರನ್ನು ಹರಸುತ್ತಿದ್ದಾಳೆ ಮತ್ತು ಎಡಗೈಯಲ್ಲಿ ತಾವರೆಯನ್ನು ಹಿಡಿದುಕೊಂಡಿದ್ದಾಳೆ. ದೇವಿ ಸ್ಕಂದಮಾತೆಯು ನಾಲ್ಕು ಕೈಗಳು ಮತ್ತು ಮೂರು ಕಣ್ಣುಗಳನ್ನು ಹೊಂದಿದ್ದಾಳೆ.

*ಕಾತ್ಯಾಯಿನಿ*
ನವರಾತ್ರಿಯ ಆರನೇ ದಿನ ಕಾತ್ಯಾಯಿನಿಯನ್ನು ಆರಾಧಿಸಲಾಗುತ್ತದೆ. ಒಮ್ಮೆ ಕಾತ್ಯಾಯನ್‌ ಎನ್ನುವ ಋಷಿಯು ಪಾರ್ವತಿ ದೇವಿಯಂತಹ ಮಗಳನ್ನು ಪಡೆಯಬೇಕು ಎಂದು ಆಶಿಸಿ ಭಕ್ತಿಯಿಂದ ತಪಸ್ಸನ್ನು ಮಾಡುತ್ತಾನೆ. ಋಷಿಯ ಭಕ್ತಿಗೆ ಮೆಚ್ಚಿದ ದುರ್ಗಾ ಮಾತೆಯು ಆಶೀರ್ವಾದ ಮಾಡುತ್ತಾಳೆ. ಅಂತೆಯೇ ಮಗಳು ಹುಟ್ಟಿದ ಮೇಲೆ ಕಾತ್ಯಾಯಿನಿ ಎಂದು ಹೆಸರಿಟ್ಟರು. ಕಾತ್ಯಾಯಿನಿಯು ದೊಡ್ಡವಳಾದ ನಂತರ ತನ್ನ ಹತ್ತು ಕೈಗಳಲ್ಲಿ ಶಸ್ತ್ರಾಸ್ತ್ರ ಹಿಡಿದು ದುಷ್ಕೃತ್ಯ ಎಸಗುವ ರಾಕ್ಷಸರ ನಾಶ ಮಾಡಲು ಜಗತ್ತನ್ನು ಸುತ್ತಲು ಪ್ರಾರಂಭಿಸಿದಳು. ದುಷ್ಟ ರಾಕ್ಷಸರ ಸಂಹಾರಕ್ಕಾಗಿ ದುರ್ಗಾದೇವಿಯು ಅವತರಿಸಿ ಬಂದಳು ಎಂದು ಹೇಳಲಾಗುತ್ತದೆ. ಕಾತ್ಯಾಯಿನಿ ಉದ್ದನೆಯ ಕೂದಲನ್ನು ಮುಕ್ತವಾಗಿ ಬಿಟ್ಟಿದ್ದು ಮತ್ತು ತಮ್ಮ ಹದಿನೆಂಟು ಕೈಗಳಲ್ಲಿ ಒಂದೊಂದು ಆಯುಧವನ್ನು ಹೊಂದಿದ್ದಾಳೆ. ಕಾತ್ಯಾಯಿನಿ ರೂಪವು ಭಯವನ್ನುಂಟು ಮಾಡುವಂತಿದ್ದರೂ ಅವರು ತಾಳ್ಮೆ ಮತ್ತು ಶಾಂತಿಯನ್ನು ನೀಡುವವಳಾಗಿದ್ದಾಳೆ. ದೇವಿಯ ಮೈಯಿಂದ ಬಿಳಿ ಬಣ್ಣದ ಬೆಳಕೊಂದು ಬರುತ್ತಿದ್ದು ಇದು ಕತ್ತಲೆಯನ್ನು ದೂರಮಾಡುತ್ತದೆ ಮತ್ತು ಕೆಟ್ಟದ್ದನ್ನು ನಾಶ ಮಾಡುತ್ತದೆ.

*ಕಾಳ ರಾತ್ರಿ*
ನವರಾತ್ರಿಯ ಏಳನೇ ದಿನದಂದು ತಾಯಿ ಕಾಲರಾತ್ರಿಯನ್ನು ಪೂಜಿಸಲಾಗುವುದು. ಈ ರೂಪದಲ್ಲಿ ತಾಯಿಯು ತುಂಬಾ ರೌದ್ರಾವತಾರ ಮತ್ತು ಕಪ್ಪಾಗಿ ಕಾಣುತ್ತಾಳೆ. ಹೆಸರೇ ಹೇಳುವಂತೆ ಇದು ತಾಯಿಯ ಕರ್ಗತ್ತಲು ಮತ್ತು ಸಮಯದ ರೂಪವಾಗಿದೆ. ರೌದ್ರಾವತಾರ ಮತ್ತು ತುಂಬಾ ಉಗ್ರ ರೂಪದಲ್ಲಿರುವ ದುರ್ಗೆಯು ಕಾಲರಾತ್ರಿಯ ರೂಪ ಧಾರಣೆ ಮಾಡಿ, ತನ್ನ ಬಂಗಾರದ ಮೈಬಣ್ಣದ ಚರ್ಮವನ್ನು ಕಿತ್ತು ರಾಕ್ಷಸರ ವಿರುದ್ಧ ಹೋರಾಡಲು ಹೋಗುತ್ತಾಳೆ. ಕಾಳರಾತ್ರಿಯು ಎಲ್ಲಾ ರೀತಿಯ ದುಷ್ಟಶಕ್ತಿ, ದುಷ್ಟತೆ ಮತ್ತು ನಕಾರಾತ್ಮಕ ಶಕ್ತಿ ಹಾಗೂ ಭೀತಿ ದೂರ ಮಾಡುತ್ತಾಳೆ. ಕಾಲರಾತ್ರಿಯು ತನ್ನ ಭಕ್ತರಿಗೆ ಹೆಚ್ಚಿನ ಸಂತೋಷ ಹಾಗೂ ತೃಪ್ತಿ ಕರುಣಿಸುವುದರಿಂದಾಗಿ ಆಕೆಯನ್ನು ಶುಭಾಂಕರಿ ಅಥವಾ ಪವಿತ್ರವೆಂದು ಪರಿಗಣಿಸಲಾಗಿದೆ ಅವಳು ನಾಲ್ಕು ಕೈಗಳನ್ನು ಮತ್ತು ಮೂರು ಕಣ್ಣುಗಳನ್ನು ಹೊಂದಿರುತ್ತಾಳೆ. ಅವಳ ಎಡ ಕೈಗಳು ವಜ್ರವನ್ನು ಒಯ್ಯುತ್ತಿರುವಾಗ ಮತ್ತು ದುಷ್ಟ ಗುರಿಯನ್ನು ಕೆಟ್ಟದ್ದನ್ನು ಗುರಿಯಾಗಿಟ್ಟುಕೊಂಡು, ಬಲಗೈಗಳು ಭಕ್ತರನ್ನು ಆಶೀರ್ವದಿಸಿ ಮತ್ತು ಅವರಿಗೆ ರಕ್ಷಣೆ ನೀಡುತ್ತವೆ. ಅವಳು ದೇವತೆ ಮಹಾಕಾಳಿಯನ್ನು ಹೋಲುತ್ತಾಳೆ.

*ಮಹಾ ಗೌರಿ*
ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಮಹಾಗೌರಿಯು ತನ್ನ 16ನೇ ವಯಸ್ಸಿನ ಯೌವ್ವನೆಯಾಗಿ ಕಾಣಿಸಿಕೊಳ್ಳುತ್ತಾಳೆ. ಗೌರಿ ಎಂದರೆ ಆಕೆಯು ಗಿರಿ ಅಥವಾ ಪರ್ವತದ ಮಗಳೆಂದು ಹೇಳಲಾಗುತ್ತದೆ. ಗೂಳಿ ಮೇಲೆ ಪ್ರಯಾಣಿಸುವ ಗೌರಿ ತನ್ನ ಕೈಯಲ್ಲಿ ತ್ರಿಶೂಲದೊಂದಿಗೆ ಢಮರುವನ್ನು ಹಿಡಿಕೊಂಡಿರುತ್ತಾಳೆ. ತಾಯಿ ದುರ್ಗೆಯು ಭೂಮಿಯ ಮೇಲೆ ಜನ್ಮವನ್ನು ಪಡೆದು, ಮರಳಿ ದೇವಲೋಕಕ್ಕೆ ಹೋಗಿ ಶಿವನನ್ನು ಮದುವೆಯಾಗಲು ಬಯಸುತ್ತಾಳೆ. ನಾರದರ ಸಲಹೆಯಂತೆ ಶಿವನನ್ನು ಒಲಿಸಿಕೊಳ್ಳಲು ತಪಸ್ಸು ಮಾಡುತ್ತಾಳೆ. ಆಕೆ ಸಂಪೂರ್ಣವಾಗಿ ತಪಸ್ಸಿನಲ್ಲಿ ಮಗ್ನವಾಗಿ ಆಹಾರ, ನೀರನ್ನು ತ್ಯಜಿಸಿರುವ ಸಮಯದಲ್ಲಿ ಆಕೆಯ ದೇಹದಲ್ಲಿ ಧೂಳು, ಕೊಳೆ ತುಂಬಿಕೊಳ್ಳುತ್ತದೆ. ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗುತ್ತದೆ. ಸಾಔಇರಾರು ವರ್ಷಗಳ ತಪಸ್ಸಿನ ನಂತರ ಶಿವನು ಆಕೆಯಿಂದ ಪ್ರಭಾವಿತನಾಗಿ ಆಕೆಯ ದೇಹವನ್ನು ಹೊಳೆಯುವಂತೆ ಮಾಡಲು ಗಂಗೆಯನ್ನು ಹರಿಯಲು ಬಿಡುತ್ತಾನೆ. ಇದರಿಂದಾಗಿ ಗೌರಿಯು ಕಾಂತಿಯುತವಾಗಿ, ಶ್ವೇತವರ್ಣದಲ್ಲಿ ಧ್ಯಾನಾಸಕ್ತಳಾಗಿ ಕಾಣುತ್ತಾಳೆ.

*ಸಿದ್ಧಿಧಾತ್ರಿ*
ನವಮಿಯಂದು ದುರ್ಗೆಯು ಒಂಭತ್ತನೇ ಅವತಾರವಾದ ಸಿದ್ಧಿಧಾತ್ರಿಯ ರೂಪದಲ್ಲಿರುತ್ತಾಳೆ. ಸಿದ್ಧಿಧಾತ್ರಿ ದೇವಿಯು ತ್ರಿಮೂರ್ತಿಗಳಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಆಧ್ಯಾತ್ಮಿಕ ವೈಭವ ಹಾಗೂ ಪರಿಪೂರ್ಣತೆ ನೀಡುತ್ತಾಳೆ. ಅಷ್ಟ ಮಹಾಸಿದ್ಧಿಯನ್ನು ನಿರ್ಮಿಸಿ ಅದನ್ನು ತ್ರಿಮೂರ್ತಿಗಳಿಗೆ ನೀಡುತ್ತಾಳೆ. ತಾಯಿ ಸಿದ್ಧಿಧಾತ್ರಿಯು ಪರಿಪೂರ್ಣತೆ, ಎಲ್ಲಾ ರೀತಿಯ ಶಕ್ತಿ, ವೈಭವ ಮತ್ತು ಮಹಿಮೆಯ ಮೂಲ. ಅವರು ನಾಲ್ಕು ಕೈಗಳನ್ನು ಹೊಂದಿದ್ದು, ಅವಳು ತ್ರಿಶೂಲ, ಗದೆ, ಕಮಲ, ಶಂಖ ಮತ್ತು ಸುದರ್ಶನ ಚಕ್ರವನ್ನು ಹಿಡಿದುಕೊಂಡಿದ್ದಾರೆ. ಕಮಲದ ಮೇಲೆ ಕುಳಿತು, ಆಕೆಯು ಎಲ್ಲಾ ಭಕ್ತರ ಮೇಲೆ ಆಶೀರ್ವಾದವನ್ನು ನೀಡುತ್ತಿದ್ದಾಳೆ.

ಹೀಗೆ ನವರಾತ್ರಿಯ ಒಂಭತ್ತೂ ದಿನಗಳಲ್ಲಿ ನವದುರ್ಗೆಯರನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ ಎನ್ನಲಾಗುತ್ತದೆ..



Friday, January 8, 2021

ಮತ್ತೆ ಒಂದಾದ ಬದುಕು


"ನಮಸ್ಕಾರ ರಾಂ ಭಟ್ರೇ... ಊಟ ಆಯ್ತೋ??" ಎನ್ನುತ್ತಾ ತಮ್ಮ ಡೊಳ್ಳು ಹೊಟ್ಟೆಯನ್ನು ಆಡಿಸುತ್ತಾ, ಇನ್ನೇನು ಊಟಕ್ಕೆ ಹೊರಡೋಣ ಎನ್ನುತ್ತಿರುವಾಗ ಬಂದೇ  ಬಿಟ್ರು ಶ್ರೀನಿವಾಸರಾಯರು. ಶ್ರೀನಿವಾಸ ರಾಯರು ನಮ್ಮ ಆಪ್ತರು. ಅನೇಕ ವರ್ಷಗಳಿಂದಲೂ ನೆನಪಾದಾಗೆಲ್ಲ ನಮ್ಮ ಮನೆಗೆ ಬಂದು ವಿಚಾರಿಸಿ ಹೋಗುವವರು. ಇತ್ತೀಚಿಗೆ ನಮ್ಮ ಮನೆಯಲ್ಲಿ ನಾನು ಹಾಗೂ ನನ್ನ ಧರ್ಮಪತ್ನಿ ಜಾನಕಿ ಇಬ್ಬರೇ ಮನೆಯಲ್ಲಿ ಇರುವುದು ಅಂತ ಗೊತ್ತಾದ ಮೇಲಂತೂ ಬಂದು ವಿಚಾರಿಸಿಕೊಂಡು ಹೋಗೋದು ತಮ್ಮ ಕರ್ತವ್ಯ ಎಂಬಂತೆ ಪಾಲಿಸುತ್ತಾರೆ. 

"ಬನ್ನಿ ಬನ್ನಿ ಶ್ರೀನಿವಾಸರಾಯರೇ.ಈಗಷ್ಟೇ ಊಟಕ್ಕೆ ಹೊರಡಲು  ಎದ್ದಾಗ ನೀವು ಬಂದ್ರಿ. ನಮ್ಮ ಇಷ್ಟರು ಅಂತ ಇದಕ್ಕೆ ಹೇಳೋದು.... ಬನ್ನಿ ಜೊತೆಗೆ ಊಟ ಮಾಡೋಣಂತೆ.." ಅಂತ  ಅಂದು ಅವರಿಗೂ ಒಂದು ಬಾಳೆ ಎಲೆ ಹಾಸಲು ಜಾನಕಿಗೆ ತಿಳಿಸಿದೆ. ಈ ಇಳಿವಯಸ್ಸಿನಲ್ಲೂ ಒಂಚೂರೂ ಅಸಹಿಷ್ಣುತೆ ತೋರಿಸದೆ, ನಾನು ಹೇಳಿದ ಎಲ್ಲಾ ಕೆಲಸಗಳನ್ನೂ ನಗುಮೊಗದಿಂದ ಆನಂದಿಸಿ ಮಾಡೋದು ನನ್ನ ಜಾನಕಿಯ ಗುಣ. ಅಂತೆಯೇ ಆವತ್ತೂ ಕೂಡಾ ನಗುಮುಖದಿಂದ ಶ್ರೀನಿವಾಸರಾಯರನ್ನು ಸ್ವಾಗತಿಸಿ ಊಟಕ್ಕೆ ಎಂದು ಬಾಳೆ ಎಲೆ ಹಾಸಿದಳು. ಅವಳ ಆ ಮುದ್ದಾದ ಮುಖದಲ್ಲಿ ಸೌಂದರ್ಯ ಇನ್ನೂ ಹಸಿ ಹಸಿಯಾಗೇ  ಇತ್ತು. ನಮಗೆ ಊಟ ಬಡಿಸಿ  ಆದಮೇಲೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಫ್ಯಾನ್ ಹಾಕಿ ತಾನು ಊಟ ಮಾಡಲೆಂದು ಹೋದಳು. 

" ಏನೇ ಹೇಳಿ ರಾಂ ಭಟ್ರೇ, ಜಾನಕಿ ಅಕ್ಕ ಮಾಡೋ ಅಡುಗೆ ರುಚಿಯನ್ನು ಮೆಚ್ಚದೆ ಇರೋದು ಸಾಧ್ಯನೇ ಇಲ್ಲ ಬಿಡಿ." ಅಂತ ಹೇಳಿ ಗಟ್ಟಿಯಾಗೊಮ್ಮೆ ತೇಗಿದರು. ಅದನ್ನು ಕೇಳಿದಾಕ್ಷಣ ನಮ್  ಜಾನಕಿ ಕಣ್ಣಂಚಲ್ಲಿ ಕಣ್ಣೇರು ಬಂದಿಳಿದದ್ದು ನಂಗೆ ಮಾತ್ರ ಗೋಚರವಾಯ್ತು. "ಶ್ರೀನಿವಾಸಣ್ಣಾ, ನೀವು ಹೊಗಳೋವಷ್ಟೇನು ಇಲ್ಲ ಬಿಡಿ. ಆದ್ರೂ, ನಂಗೆ ನಿಮ್ಮ  ಮಾತು ಕೇಳಿ ನನ್  ಮಗನ ನೆನಪೇ ಕಾಡುತ್ತದೆ. ಅದ್ಯಾವ ದುಷ್ಟಕರ್ಮದ ಫಲವೋ, ನಮ್  ಮಗ ಸಂತೋಷ ನಮ್ಮಿಂದ ದೂರ ಆಗಿ ಎರಡು ವರ್ಷ ಕಳೆಯಿತು ಅಂತ ಅನ್ನಿಸೋದೇ ಇಲ್ಲ. ಮೊನ್ನೆ ಮೊನ್ನೆ ನಮ್  ಜೊತೆ ಖುಷಿಖುಷಿಯಾಗಿದ್ದ. ಅದ್ಯಾವ ಘಳಿಗೆಯಲ್ಲಿ ಅವನಿಗೆ ಆ ಬೈಕು ತೆಗೆದು ಕೊಟ್ಟೆವೋ ಏನೋ. ಯಮಪಾಶಕ್ಕೆ ಸಿಲುಕಿಸಿದ ಹಾಗೆ ಆಯಿತು." ಅಂತ ಹೇಳಿ ಗೊಳೋ ಎಂದು ಅಳಲು ಶುರು ಮಾಡಿದಾಗ ನಾನಂತೂ ಮೂಗನಂತಾದೆ. 

ಅಂದು ಸಂತೋಷನ ೧೨ನೇ ತರಗತಿಯ ಫಲಿತಾಂಶ ಉನ್ನತ ಶ್ರೇಣಿಯಲ್ಲಿದ್ದ ಕಾರಣ ಖುಷಿಯಿಂದ ಅವನಿಗೆಂದು ಬೈಕು ತೆಗೆದು ಕೊಟ್ಟಿದ್ದೆ. ಆ ಬೈಕು ಅವನ ಪ್ರಾಣವನ್ನೇ ಕಿತ್ತುಕೊಂಡಿತು. ಇರುವ ಒಬ್ಬ  ಕಳೆದುಕೊಂಡು ಜೀವನವೇ ಜಿಗುಪ್ಸೆ ಆದ ಸಮಯದಲ್ಲಿ ನಮ್ಮ ಮನಸ್ಸಿಗೆ ಧೈರ್ಯ ತುಂಬಿದವರೇ ಈ ಶ್ರೀನಿವಾಸರಾಯರು. ಈ ಶ್ರೀನಿವಾಸರಾಯರು ತಮ್ಮ ಮಗ ರಮೇಶನ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿ ಆದ ಒಂದು ವಾರದಲ್ಲೇ ಮನೆಗೆ ಬಂದ  ಸೊಸೆಯು ಅತ್ತೆ ಮಾವನಿಗೆ ನಾನಾ ರೀತಿಯ ಕಿರುಕುಳ ನೀಡಲು ಶುರು ಮಾಡಿದಳು. ಮಗ ಆಫೀಸಿಗೆ ಹೋದ ಮರುಕ್ಷಣ ಶ್ರೀನಿವಾಸರಾಯರನ್ನು ಕೋಣೆಯೊಳಗೆ ಬಂಧಿಸಿ, ಅತ್ತೆಯನ್ನು ಕೆಲಸದ ಹೆಣ್ಣಿಗಿಂತ ಕೀಳಾಗಿ ನೋಡುತ್ತಿದ್ದಳು. ಇದೆಲ್ಲದರ ಪರಿಣಾಮ ಅತ್ತೆ  ಬೇಗನೆ ಇಹಲೋಕ ತ್ಯಜಿಸುವಂತಾಯಿತು. ಅದರ ನಂತರ ಶ್ರೀನಿವಾಸರಾಯರನ್ನು ಒಬ್ಬರನ್ನೇ ಬಿಟ್ಟು ಮಗ ಸೊಸೆ ಹೊರತು ಹೋದರು. ಹೀಗಾಗಿ ಅವರು ತಮ್ಮ ಜೀವನವನ್ನೇ  ಸಮಾಜಸೇವೆಗೆಂದು ಮೀಸಲಿಟ್ಟು ಮನೆಯನ್ನೇ ಸಣ್ಣ ಮಟ್ಟಿನ ಆಶ್ರಮದಂತೆ ನಡೆಸುತ್ತಿದ್ದಾರೆ. ಹಾಗೆಯೇ ರಾಂಭಟ್ರನ್ನು ತಮ್ಮ ಅಣ್ಣನ ಸ್ಥಾನದಲ್ಲಿಟ್ಟು ವಿಚಾರಿಸಿಕೊಂಡು ಹೋಗಲು ಅವಾಗವಾಗ ಬಂದು  ಹೋಗಿ ಮಾಡುತ್ತಾರೆ. 

ಇದ್ದಕ್ಕಿದ್ದಂತೆ ನಮ್ಮ ಮನೆಗೆ ರಮೇಶ ಬಂದ. ಅವನು ಶ್ರೀನಿವಾಸರಾಯರನ್ನು ತೊರೆದು  ವರ್ಷಗಳೇ ಕಳೆದಿದ್ದರಿಂದ ಗುರುತು ಹಿಡಿಯಲು ಸ್ವಲ್ಪ ಸಮಯ ಕಳೆಯಿತು. ಶ್ರೀನಿವಾಸರಾಯರಿಗಂತೂ ತಮ್ಮ ಮಗನನ್ನು ಕಂಡಾಗ ಖುಷಿಯಾದರೂ ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದಕ್ಕೆ ದುಃಖವೂ ಜೊತೆಯಾಗಿ ಮಾತುಗಳೇ ನಿಂತಂತಾಗಿತ್ತು. ನಾನು ಮುಂದೆ ಹೋಗಿ "ಬಾ ರಮೇಶ, ಕುಳಿತುಕೋ. ಏನು ಈ  ಕಡೆ ಬಂದಿದ್ದು?" ಎಂದೆ. 

ರಮೇಶ ಏನು ಹೇಳುತ್ತಾನೋ ಎಂದು ಕುತೂಹಲದಲ್ಲಿದ್ದಾಗ ಕಣ್ಣಲ್ಲಿ ನೀರು ತುಂಬಿಕೊಂಡು ತನ್ನ ತಂದೆಯ ಕಾಲಿಗೆ ಬಿದ್ದು ಕ್ಷಮೆ ಕೇಳಲು ಶುರು ಮಾಡಿದ. ಅಷ್ಟು ಹೊತ್ತು ಕೋಪದಿಂದ ಮುಖ ತಿರುಗಿಸಿ ನಿಂತಿದ್ದ ಶ್ರೀನಿವಾಸರಾಯರು ಮಗನ ಕಣ್ಣೀರು ನೋಡಿ ಒದ್ದಾಡಿದರು. "ಏಳು ಮಗನೇ ... ಏನಾಯಿತು? ಯಾಕೆ ಈ ರೀತಿ ಅಳುತ್ತಿದ್ದೀಯಾ ?" ಎಂದು ಅವನನ್ನು ಎಬ್ಬಿಸಿ ಕಣ್ಣೀರು ಒರಸಿದರು. ಎಷ್ಟೇ ಆದರೂ ಮಗ ಮಗಾನೇ ತಾನೇ? ಮಗನ ಕಣ್ಣೀರು ನೋಡಿದರೆ ಹೇಗೆ ಹೃದಯವನ್ನು ಕಲ್ಲು ಮಾಡಲು ಸಾಧ್ಯ??

"ನನ್ನನ್ನು ಕ್ಷಮಿಸಿ ಅಪ್ಪಾ... ಪ್ರಾಯದ ಅಹಂಕಾರದಲ್ಲಿ ನಿಮ್ಮ ಹಾಗೂ ಅಮ್ಮನ ಬೆಲೆಯನ್ನು  ನಾನು ಮರೆತೆ. ದೇವತೆಯಂಥ ಅಮ್ಮನನ್ನು ಕಳೆದುಕೊಂಡೆ. ದುಡ್ಡಿನ ಪಿಶಾಚಿಯಂತಿದ್ದ ಹೆಣ್ಣಿನ ಬಲೆಗೆ ಬಿದ್ದು ಈಗ ಎಲ್ಲ ಅನುಭವಕ್ಕೆ ಬಂತು. ಅಪ್ಪಾ, ನಾನು ಆಕೆಯನ್ನು ತೊರೆದು ಬಂದಿದ್ದೇನೆ. ನಿಮ್ಮಲ್ಲಿಗೆ ಬರಲು ಹಿಂಜರಿಕೆಯಾಗಿ ರಾಂಭಟ್ರ ಮನೆಗೆ ಬಂದು ಅವರಲ್ಲಿ ಆಶ್ರಯ ಕೇಳೋಣ ಎಂದುಕೊಂಡು ಬಂದೆ. ನೀವು ಇಲ್ಲೇ ಇದ್ದಾಗ ಮನಸ್ಸಿಗೆ ಹಿತವಾಯ್ತು. ನನ್ನನ್ನು ಕ್ಷಮಿಸಿ ಅಪ್ಪಾ. ನನ್ನನ್ನು ದಯವಿಟ್ಟು ಕ್ಷಮಿಸಿ. ಇನ್ನು ಮುಂದೆ ನನ್ನ ಜೀವನ ಪೂರ್ತಿ ನಿಮ್ಮ ಸೇವೆಗೆಂದೇ ಮುಡಿಪಾಗಿಡುತ್ತೇನೆ. ನನ್ನನ್ನು ನಿಮ್ಮ ಜೊತೆ ಇರಲು ಬಿಡಿ ಅಪ್ಪ..." ಎಂದು ಒಂದೇ ಉಸಿರಿನಲ್ಲಿ ಹೇಳಿದ. 

ಶ್ರೀನಿವಾಸರಾಯರು ಹೇಳುವ ಮುನ್ನ ನಾನೇ ಅಂದೇ - "ನೋಡು ರಮೇಶ. ನೀನು ಮಾಡಿರುವುದು ಅಪರಾಧವೇನೋ ನಿಜ. ಆದರೆ, ನಿನ್ನ ಅಪ್ಪನಿಗೆ ಯಾವತ್ತಿಗೂ ನೀನು ಮಗನೇ . ನನಗೆ ನೋಡು ಮಗನನ್ನೇ ಆ ಭಗವಂತ ಕಿತ್ತುಕೊಂಡ. ಆದರೆ ನೀನು ನಿನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಟ್ಟುಕೊಂಡು ಬಂದಿರುವೆ. ಹೀಗಿರುವಾಗ ನಿನಗೆ ಖಂಡಿತವಾಗಿಯೂ ಕ್ಷಮೆ ಇದೆ. ನಾಳೇನೇ ನಾವೆಲ್ಲರೂ ದೇವಸ್ಥಾನಕ್ಕೆ ಹೋಗಿ ದೇವರಿಗೆ ತಪ್ಪು ಕಾಣಿಕೆ ಹಾಕಿ ಬರೋಣ. ಇನ್ನು ಮುಂದೆ ನೀನು ಶ್ರೀನಿವಾಸರಾಯರನ್ನು ಚೆನ್ನಾಗಿ ನೋಡಿಕೋ. ಅವರ ಸೇವಾ ಮನೋಭಾವಕ್ಕೆ ಧಕ್ಕೆ ಬಾರದ ಹಾಗೆ ಆಶ್ರಮವನ್ನು ವಹಿಸಿಕೋ." 

" ಖಂಡಿತ ರಾಂಭಟ್ರೇ. ಅಪ್ಪ ತಮ್ಮ ಬಾಯಿಂದ ನನ್ನನ್ನು ಕ್ಷಮಿಸಿದ್ದೇನೆ ಅಂದರೆ ನನಗೂ ಸಂತೋಷವಾಗುತ್ತದೆ" ಅಂದ ರಮೇಶ. ಶ್ರೀನಿವಾಸರಾಯರು ಮೊದಲಿಗೆ ದೇವರಿಗೆ ವಂದಿಸಿ, ಅವನನ್ನು ಬಿಗಿದಪ್ಪಿ "ಮಗನೇ , ಈಗಲಾದರೂ ನಿನ್ನ ತಪ್ಪಿನ ಅರಿವಾಯಿತಲ್ಲವೇ ನಿನಗೆ. ನನಗೆ ನೀನು ನನ್ನ ಜೊತೆ ಇದ್ದರೆ  ಅಷ್ಟೇ ಸಾಕು." ಅಂದು ಅವನ ಹಣೆಗೆ ಮುತ್ತಿಕ್ಕಿದರು. 

ಅವರು ಒಂದಾದ ನೋಟ ನೋಡಿ ನಮ್ಮ ಜಾನಕಿಗೆ ಹಾಗೂ ನನಗೆ ನಮ್ಮ ಮಗನೇ  ಹಿಂದೆ ಬಂದಷ್ಟು ಸಂತೋಷವಾಯಿತು. ಅವರಿಬ್ಬರೂ ಹೀಗೆ ಚೆನ್ನಾಗಿ ಬಳಲಿ ಅಂತ ಹರಸಿ ಅವರಿಬ್ಬರನ್ನೂ ಬೀಳ್ಕೊಟ್ಟೆವು. 

ಜೀವನ ಅಂದರೆ ಇಷ್ಟೇ. ಇದ್ದಾಗ ಸಂತೋಷವನ್ನು ಹಂಚಿಕೊಂಡು ಸಂಬಂಧಗಳಿಗೆ ಅದರಲ್ಲೂ ಹೆತ್ತವರ ಬಂಧಕ್ಕೆ  ಬೆಲೆ ಕೊಟ್ಟು ಅವರನ್ನು ಚೆನ್ನಾಗಿ ನೋಡಿಕೊಳ್ಳುವುದೇ ಪರಮ ಧರ್ಮ . ಅಲ್ಲವೇ?