(ಒಂದು ದಿನ ನನ್ನ ಕಥೆಗಳನ್ನು ಓದಲು ಯಾರಾದರೂ ಇರುತ್ತಾರಾ?)
✍🏻ದೀಪಲಕ್ಷ್ಮಿ ಭಟ್, ಮಂಗಳೂರು
ಅಮಿತ ಮತ್ತು ಪ್ರತಾಪ ದಂಪತಿಗಳ ಮನೆಯ ಏಕೈಕ ಸಂತಾನ ಅಪ್ರಮೇಯ. ಮನೆಯ ಎಲ್ಲರ ಪ್ರೀತಿಯ "ಅಪ್ಪು". ಒಂದು ಸುಂದರವಾದ ಸಂಜೆ. ಸಮಯ ಐದು ಗಂಟೆ. ಅಪ್ರಮೇಯ ಆಗ ತಾನೇ ಶಾಲೆಯಿಂದ ಬಂದವನೇ ತನ್ನ ರೈನ್ ಕೋಟ್ ತೆಗೆದು ಬಾಗಿಲ ಬಳಿ ಬಿಸಾಡಿ, ಕೈ ಕಾಲೂ ತೊಳೆಯದೆ, ಒಳಗೆ ಬಂದು ಶಾಲೆಯ ಬ್ಯಾಗ್ ಅನ್ನು ಅಲ್ಲೇ ಸೋಫಾದ ಮೇಲೆ ಬಿಸಾಡಿ ಧೊಪ್ಪನೆ ಕುಳಿತು, ಟಿವಿ ಆನ್ ಮಾಡಿ ತನ್ನ ಇಷ್ಟವಾದ ನಿಕ್ ಚಾನೆಲ್ ಅನ್ನು ಇಟ್ಟು ಕುಳಿತ.
ಅವನ ಅಮ್ಮ ಅಮಿತಾ ಅವನನ್ನು ನೋಡಿದ ಕೂಡಲೇ, "ಅಪ್ಪೂ, ನಿನ್ನ ಅಜ್ಜ ಇವತ್ತು ಯಾವ ಕಥೆ ಹೇಳ್ತಿದ್ರು ಗೊತ್ತಾ? " ಎಂದು ಕೇಳಿದಳು. ಟಿವಿ ಪರದೆಯಲ್ಲೇ ಕಣ್ಣು ನೆಟ್ಟಿದ್ದ ಅಪ್ರಮೇಯ ಕಣ್ಣೆತ್ತಿಯೂ ನೋಡದೆ, "ಮಾಮ್ ಪ್ಲೀಸ್, ನಾನು ಬಂದಿದ್ದಷ್ಟೇ, ಇನ್ನು ಸ್ವಲ್ಪ ಹೊತ್ತಲ್ಲಿ ಆನ್ಲೈನ್ ಕ್ಲಾಸ್ ಇದೆ. ನಿನ್ನ ಪುರಾಣ ಶುರು ಮಾಡ್ಬೇಡ." ಅಂದ. ಅಮಿತಾ ಸುಮ್ಮನಾದಳು. ಮಗನಿಗೆ ಕುಡಿಯಲು ಹಾರ್ಲಿಕ್ಸ್ ಕೊಟ್ಟು, "ಕೈಕಾಲಾದ್ರೂ ತೊಳೆದು ಬಾ ಕಂದ" ಅಂದಳು. ಅಪ್ಪು ಮಾತ್ರ ಟಿವಿಯಿಂದ ಕಣ್ಣು ಕದಲಿಸದೆ, ಹಾರ್ಲಿಕ್ಸ್ ಕುಡಿದ.
ಸಂಜೆ ಎಂಟು ಗಂಟೆ ಸಮಯಕ್ಕೆ ಅಪ್ರಮೇಯನ ತಂದೆ ಪ್ರತಾಪ ಆಫೀಸಿನಿಂದ ಮನೆಗೆ ಬಂದ. ಅಡಿಗೆ ಮನೆಯಲ್ಲಿದ್ದ ಅಮಿತ ಊಟಕ್ಕೆ ತಯಾರಿ ಮಾಡುತ್ತಿದ್ದಳು. ಅಜ್ಜಿ ದೇವರ ಕೋಣೆಯಲ್ಲಿ ಶ್ಲೋಕ ಹೇಳುತ್ತಿದ್ದರು.ಅಜ್ಜ ಕಿಟಕಿಯ ಹತ್ತಿರ ಕುಳಿತು ಹೊರಗಿನ ಮರಗಳನ್ನು ನೋಡುತ್ತಿದ್ದರು. ಆಗ ಅಪ್ರಮೇಯ ತನ್ನ ಕೊಠಡಿಯಲ್ಲಿ ಮೊಬೈಲ್ ಹಿಡಿದು ರೀಲ್ಸ್ ನೋಡುತ್ತಿದ್ದ. ಈ ಟಿವಿ ಮತ್ತು ಮೊಬೈಲ್ ಅವನ ಬದುಕಿನ ಒಂದು ಭಾಗವಾಗಿರಲಿಲ್ಲ; ಅದುವೇ ಅವನ ಪ್ರಪಂಚವಾಗಿಬಿಟ್ಟಿದ್ದವು.
ಅಮಿತ ಜೋರಾಗಿ ಕೂಗಿದಳು - "ಅಪ್ಪೂ ಊಟಕ್ಕೆ ಬಾ. ಎಲ್ಲರಿಗೂ ಬರೋದಿಕ್ಕೆ ಹೇಳು" ಅಂತ. "ಬರ್ತೀನಿ ಮಾಮ್" ಎಂದವನು ಹತ್ತು ನಿಮಿಷ ಕಳೆದರೂ ಬರಲಿಲ್ಲ. ಎಲ್ಲರೂ ಬಂದಿದ್ದರೂ ಅವನನ್ನು ಮತ್ತೆ ಜೋರಾಗಿ ಕೂಗಿ ಕರೆಯಬೇಕಾಯಿತು. ಅಷ್ಟರಲ್ಲಿ ಮೊಬೈಲ್ ಕೈಯಲ್ಲಿ ಹಿಡಿದುಕೊಂಡೇ ಬಂದು ಮೇಜಿನ ಬಳಿ ಕುಳಿತ. ಊಟ ಮಾಡುವಾಗಲೂ ಕಣ್ಣು ಮೊಬೈಲ್ನಲ್ಲೇ.
ಅಜ್ಜ ಅವನನ್ನು ನೋಡಿ ನಗುತ್ತ ಕೇಳಿದರು - "ಅಪ್ಪು, ಇವತ್ತು ಶಾಲೆಯಲ್ಲಿ ಏನು ಕಲಿಸಿದ್ರು?". ಕಣ್ಣೆತ್ತಿಯೂ ನೋಡದೆ "ಏನಿಲ್ಲ" ಅಂತ ಉತ್ತರಿಸಿದ. "ಸ್ನೇಹಿತರ ಜೊತೆ ಆಟ ಆಡಿದಿಯಾ?" ಎಂದು ಕೇಳಿದರೆ ಮತ್ತೆ "ಹೂಂ" ಅಂತ ಅಷ್ಟೇ ಹೇಳಿದ.
ಹೀಗೆ ಒಂದೇ ಮನೆಯ ನಾಲ್ಕು ಗೋಡೆಗಳ ಒಳಗೆ ನಾಲ್ಕು ಪ್ರಪಂಚಗಳಿದ್ದವು. ಅಜ್ಜನ ಪ್ರಪಂಚ ಪುಸ್ತಕಗಳು. ಅಜ್ಜಿಯ ಪ್ರಪಂಚ ದೇವರ ಕೋಣೆ. ಅಪ್ಪ-ಅಮ್ಮನ ಪ್ರಪಂಚ ಕೆಲಸದ ಒತ್ತಡ. ಅಪ್ಪುವಿನ ಪ್ರಪಂಚ ಮೊಬೈಲ್, ಟಿವಿ, ಗೇಮ್ ಮತ್ತು ರೀಲ್ಸ್. ಊಟದ ಸಮಯದಲ್ಲಿ ಮಾತಿಲ್ಲ. ಸಂಜೆಯ ಸಮಯದಲ್ಲಿ ನಗುವಿಲ್ಲ. ರಾತ್ರಿ ಸಮಯದಲ್ಲಿ ಕಥೆಗಳಿಲ್ಲ. ಇಡೀ ಮನೆಯಲ್ಲಿ ವೈ-ಫೈ ಸಿಗ್ನಲ್ ಮಾತ್ರ ತುಂಬಾ ಬಲವಾಗಿತ್ತು. ಆದರೆ ಮನಸ್ಸುಗಳ ನಡುವಿನ ಸಂಪರ್ಕ ಸಂಪೂರ್ಣವಾಗಿ ಕಡಿತವಾಗಿತ್ತು.
ಅಜ್ಜ ಪ್ರತಿದಿನ ಸಂಜೆ ಮನೆಯ ಮುಂದಿನ ಜಗಲಿಯಲ್ಲಿ ಕುಳಿತುಕೊಂಡು "ಮೊಮ್ಮಗ ಬರುವನೇ ತನ್ನ ಜೊತೆ ಮಾತಾಡಲು" ಎಂದು ಕಾಯುತ್ತಿದ್ದ. "ಅಪ್ಪು, ಬಾ, ಒಂದು ಕಥೆ ಹೇಳ್ತೀನಿ." ಅಂತ ಕರೆದಾಗ, ಅಪ್ಪು ಮಾತ್ರ "ನಂತರ ಅಜ್ಜ. ನಂಗೆ ಬೇರೆ ಕೆಲಸ ಇದೆ" ಅಂತ ತಪ್ಪಿಸಿಕೊಳ್ಳುತ್ತಿದ್ದ. "ಒಂದು ಗಾದೆ ಹೇಳ್ತೀನಿ. ಬಾ ಪುಟ್ಟ" ಅಂದರೆ, "ಟೈಮ್ ಇಲ್ಲ ಅಜ್ಜ." ಅನ್ನುತ್ತಿದ್ದ. "ನಮ್ಮ ಊರಿನ ಬಗ್ಗೆ ಹೇಳ್ತೀನಿ. ಬಾ ಕಂದ" ಅಂದರೆ, "ನಂತರ ನೋಡೋಣ."ಅನ್ನುತ್ತಿದ್ದ. ಆ "ನಂತರ" ಎಂದಿಗೂ ಬರುತ್ತಿರಲಿಲ್ಲ.
ಅಜ್ಜನಿಗೆ ಕಥೆ ಹೇಳುವುದು ತುಂಬ ಇಷ್ಟ. ಅವರ ಬಾಲ್ಯದಲ್ಲಿ ವಿದ್ಯುತ್ ಇರಲಿಲ್ಲ. ಟಿವಿ ಇರಲಿಲ್ಲ. ಮೊಬೈಲ್ ಎಂಬ ಪದವೇ ಇರಲಿಲ್ಲ. ಸಂಜೆ ಆದಾಕ್ಷಣ ಮನೆಯ ಹಿರಿಯರು ಮಕ್ಕಳನ್ನು ಸುತ್ತ ಕುಳ್ಳಿರಿಸಿಕೊಂಡು ಕಥೆ ಹೇಳುತ್ತಿದ್ದರು. ಆ ಕಥೆಗಳಲ್ಲಿ ರಾಜರು ಇರುತ್ತಿದ್ದರು. ರಾಣಿಯರು ಇರುತ್ತಿದ್ದರು. ವೀರರು ಇರುತ್ತಿದ್ದರು. ದೇವರು ಇರುತ್ತಿದ್ದರು. ಕೆಲವೊಮ್ಮೆ ಬದುಕನ್ನು ಬದಲಿಸುವ ಪಾಠಗಳೂ ಇರುತ್ತಿದ್ದವು. ಅದೇ ಸಂಪ್ರದಾಯವನ್ನು ಅಜ್ಜ ತಮ್ಮ ಮೊಮ್ಮಗನಿಗೂ ನೀಡಲು ಬಯಸಿದ್ದರು. ಆದರೆ ಅಪ್ರಮೇಯನಿಗೆ ಕಥೆಗಳಿಗಿಂತ ರೀಲ್ಸ್ ಹೆಚ್ಚು ಆಸಕ್ತಿದಾಯಕವಾಗಿದ್ದವು.
ಒಂದು ದಿನ ಅಪ್ಪು ಶಾಲೆಯಿಂದ ಬಂದಾಗ ಅಜ್ಜನ ಬಳಿಯಲ್ಲಿ ಕುಳಿತಿದ್ದ ಅಜ್ಜಿ ಮಾತನಾಡುತ್ತಿದ್ದರು - "ನಮ್ಮ ಕಾಲದಲ್ಲಿ ಕನ್ನಡ ಹಾಡುಗಳು ಎಷ್ಟು ಚೆನ್ನಾಗಿದ್ದವು ಅಲ್ವಾ?". ಅದನ್ನ ಕೇಳಿದೊಡನೆ ಅಪ್ರಮೇಯ ಜೋರಾಗಿ ನಕ್ಕು "ಈಗಿನ ಕಾಲದಲ್ಲಿ ಕನ್ನಡ ಸಾಂಗ್ಸ್ ಯಾರೂ ಕೇಳೋದಿಲ್ಲ ಅಜ್ಜಿ." ಆಶ್ಚರ್ಯದಿಂದ ಅಜ್ಜಿ "ಯಾಕೆ?" ಅಂತ ಕೇಳಿದರು. "ಅದು ಓಲ್ಡ್ ಫ್ಯಾಷನ್." ಅಂತ ಹೇಳಿದ. ಅಜ್ಜನ ಮುಖ ಸ್ವಲ್ಪ ಮಂಕಾಯಿತು. "ಮಗಾ, ಭಾಷೆ ಹಳೆಯದು ಅಂತ ಆಗೋದಿಲ್ಲ. ನಾವು ನಮ್ಮ ಸಂಸ್ಕೃತಿ ಮತ್ತು ಭಾಷೆಯನ್ನೂ ಮರೆತಾಗ ಮಾತ್ರ ಅದು ಹಳೆಯದಾಗುತ್ತದೆ." ಆದರೆ ಅಜ್ಜನ ಮಾತು ಅವನಿಗೆ ಕೇಳಲೇ ಇಲ್ಲ. ಯಾಕಂದರೆ, ಅವನ ಕಿವಿಯಲ್ಲಿ ಇಯರ್ ಫೋನ್ ಇತ್ತು.
ಕಾಲ ಹೀಗೆ ಸಾಗುತ್ತಿತ್ತು. ಮನೆಯಲ್ಲೇ ಎಲ್ಲರೂ ಜೊತೆಯಾಗಿ ವಾಸಿಸುತ್ತಿದ್ದರು. ಆದರೆ ಮಾತುಕತೆ ಮಾತ್ರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿತ್ತು. ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಅವನ ಕೈಯಲ್ಲಿ ಮೊಬೈಲ್ ಇತ್ತು. ಮನೆಯವರಿಗಿಂತ ಪರದೆಗಳ ಜೊತೆಗಿನ ಅವನ ಸಂಭಾಷಣೆಯೇ ಹೆಚ್ಚು. ಅಜ್ಜನ ಕಥೆಗಳಿಗೆ ಸಮಯ ಇರಲಿಲ್ಲ. ಅಜ್ಜಿಯ ನೆನಪುಗಳ ಬಗ್ಗೆ ಕೇಳಲು ಆಸಕ್ತಿ ಇರಲಿಲ್ಲ.
ಕಾಲ ಅನ್ನೋದು ನಮಗಾಗಿ ನಿಲ್ಲೋದು ಅಂತ ಇದೆಯೇ? ಅಂತೆಯೇ, ಆ ದಿನ ಬೆಳಗಿನ ಜಾವ ಯಾವಾಗಲೂ ಎದ್ದು ಸಣ್ಣದಾಗಿ ವ್ಯಾಯಾಮ ಮಾಡುತ್ತಿದ್ದ ಅಜ್ಜ ಏಳಲೇ ಇಲ್ಲ. ಅವರ ಉಸಿರು ನಿಂತು ಹೋಗಿತ್ತು. ಮನೆ ತುಂಬ ಜನ. ಅಜ್ಜಿಯ ಆಕ್ರಂದನ. ಮನೆ ಮಂದಿ ಎಲ್ಲರ ಕಣ್ಣೀರು. ಬಂದವರ ಸಾಂತ್ವನದ ಮಾತುಗಳು. ಮೂರು ದಿನ, ಹತ್ತು ದಿನ, ಹದಿಮೂರು ದಿನ. ಹೀಗೆ ದಿನಗಳು ಕಳೆದವು. ಆಮೇಲೆ ಎಲ್ಲರ ಜೀವನ ಮತ್ತೆ ಹಳೆಯ ಹಾದಿಗೆ ಮರಳಿತು.
***
ಆ ದಿನ ಮಳೆಗಾಲದ ರಜೆ. ಮನೆಯವರಲ್ಲರೂ ಸೇರಿ ಕೋಣೆಯೊಂದನ್ನು ಸ್ವಚ್ಛಗೊಳಿಸುವ ನಿರ್ಧಾರ ಮಾಡಿದರು. ಅದು ತಾತನ ಹಳೆಕಾಲದ ವಸ್ತುಗಳಿರುವ ಕೋಣೆಯಾಗಿತ್ತು. ಅಲ್ಲಿ ಸ್ವಚ್ಛಗೊಳಿಸುತ್ತಿರುವಾಗ ಅಪ್ರಮೇಯನ ಕೈಗೆ ಒಂದು ಹಳೆಯ ಮರದ ಪೆಟ್ಟಿಗೆ ಸಿಕ್ಕಿತು. ದಪ್ಪ ಧೂಳು ತುಂಬಿಕೊಂಡಿತ್ತು. ಹಳೆಯ ಕಬ್ಬಿಣದ ಬೀಗ ಇತ್ತು. ಪೆಟ್ಟಿಗೆಯ ಮುಚ್ಚಳದ ಮೇಲೆ ತಾತನ ಕೈಯಿಂದ ಕೆತ್ತಿದ ಎರಡು ಅಕ್ಷರಗಳು ಕಾಣಿಸಿದವು.
"ರಾ.ಭ."
ಅದನ್ನು ಸ್ಪರ್ಶಿಸಿದಾಗ ಅಪ್ಪುವಿಗೆ ಗೊತ್ತಿಲ್ಲದ ನಡುಕವೊಂದು ಮನಸ್ಸಿನೊಳಗೆ ಓಡಿತು. ಕಷ್ಟಪಟ್ಟು ಬೀಗವನ್ನು ತೆರೆದ. ಅದರಲ್ಲಿ ಹಳೆಯ ಪುಸ್ತಕಗಳು. ಹಳದಿ ಬಣ್ಣಕ್ಕೆ ತಿರುಗಿದ ಹಾಳೆಗಳು. ದುಂಡು ದುಂಡಗಿನ ಸುಂದರವಾದ ಕೈಬರಹದ ಡೈರಿಗಳು. ಹಳೆಯ ಛಾಯಾಚಿತ್ರಗಳು. ತಾತನೇ ಕೈಯಾರೆ ಬರೆದ ಪತ್ರಗಳು, ಕವನಗಳು, ಗಾದೆಗಳ ಸಂಗ್ರಹ, ಕಥೆಗಳ ಹಾಳೆಗಳು. ಎಲ್ಲದರ ಮೇಲೂ ಒಂದೇ ಹೆಸರಿನ ಹಸ್ತಾಕ್ಷರ. ಅದು "ರಾಮ ಭಟ್" - ಅಂದರೆ ಅಪ್ಪುವಿನ ಅಜ್ಜ.
ಕುತೂಹಲ ತಡೆಯಲಾರದೆ ಅಪ್ರಮೇಯ ಒಂದು ಹಾಳೆ ತೆಗೆದು ಓದಿದ. ಅದು ಅವನ ಅಜ್ಜ ಬರೆದಂಥ ಮೊದಲ ಕಥೆ. ಒಬ್ಬ ಬಡ ಕುಟುಂಬದ ಹುಡುಗ ತನ್ನ ವಿದ್ಯೆಯ ಬಲದಿಂದ ತನ್ನ ಊರಿನ ಮಕ್ಕಳ ಬದುಕು ಬದಲಿಸಿದ ಕಥೆ. ತುಂಬಾ ಆಕರ್ಷಕವಾಗಿ ನೀತಿಬೋಧೆಯಂತೆ ಬರೆದಿದ್ದಂತಹ, ಜೀವನದ ಪಾಠ ತಿಳಿಸುವಂತ ಕಥೆ. ಅಪ್ರಮೇಯ ಓದುತ್ತ ಹೋದ. ಮೊದಲ ಬಾರಿಗೆ ಅಪ್ರಮೇಯನಿಗೆ ಮೊಬೈಲ್ ಮರೆತು ಹೋಯಿತು.
ಕಥೆ ಮುಗಿದಾಗ ಒಂದು ಸಾಲು ಬರೆದಿತ್ತು - "ಜ್ಞಾನವನ್ನು ಸಂಪಾದಿಸಿದವನು ಶ್ರೀಮಂತನಾಗಬಹುದು. ಆದರೆ ಜ್ಞಾನವನ್ನು ಹಂಚಿದವನು ಅಮರನಾಗುತ್ತಾನೆ." ಅಪ್ರಮೇಯ ಓದಿ ಮುಗಿಸಿದಾಗ " ಈ ಕಥೆಯನ್ನು ಅಜ್ಜ ಇರುವಾಗಲೇ ಅವರ ಬಾಯಿಂದ ಕೇಳುವಂತಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು" ಅಂತ ಮರುಗಿದ.
ಮತ್ತೆ ಎರಡನೇ ಕಥೆ - "ಸ್ನೇಹದ ಮಹತ್ವ". ಓದಿ ಮುಗಿಸುತ್ತಿದ್ದಂತೆ, "ಜೀವನದ ಪಾಠವನ್ನೇ ಹೇಳಿಕೊಡುವಂಥ ಕಥೆ. ಅಜ್ಜ ಈ ಕಥೆ ಹೇಳೋಕೆ ಎಷ್ಟೋ ಸಲ ಕರೆದಿದ್ದರು,
ನಾನು ಮಾತ್ರ 'ಟೈಮ್ ಇಲ್ಲ' ಅಂತ ಹೇಳಿ ಎದ್ದೇ ಹೋಗಿದ್ದೆ.." ಎಂದು ದುಃಖಗೊಂಡ. ಆಮೇಲೆ ಮೂರನೇ ಕಥೆ - "ಸತ್ಯದ ಬೆಲೆ", ನಾಲ್ಕನೇ ಕಥೆ "ತಾಯಿಯ ತ್ಯಾಗ", ಐದನೆಯದಾಗಿ ಒಬ್ಬ ರೈತನ ಕಥೆ - ಹೀಗೆ ಒಂದೊಂದೇ ಕಥೆಗಳನ್ನು ಓದಿದಾಗಲೂ ಒಂದೊಂದು ರೀತಿಯ ಜೀವನದ ಪಾಠ ಹೇಳಿಕೊಟ್ಟಂತೆ ಭಾಸವಾಯಿತು ಅಪ್ರಮೇಯನಿಗೆ. ಪ್ರತಿಯೊಂದು ಕಥೆಯೂ ಬದುಕಿನ ಇನ್ನೊಂದು ಮುಖವನ್ನು ಅವನ ಮುಂದೆ ತೆರೆದಿಡುತ್ತಿತ್ತು.
ಮುಂದೆ ಕವನಗಳ ಪುಟಗಳು. ಪ್ರಕೃತಿಯ ಬಗ್ಗೆ, ತಾಯಿಯ ಬಗ್ಗೆ, ನಾಡಿನ ಬಗ್ಗೆ, ದೇಶದ ಬಗ್ಗೆ, ನಮ್ಮ ಭಾಷೆಯ ಬಗ್ಗೆ, ಗೆಳೆತನದ ಬಗ್ಗೆ, ಮಾನವೀಯತೆ ಬಗ್ಗೆ - ಹೀಗೆ ಹಲವಾರು ರೀತಿಯ ಕವನಗಳನ್ನು ಓದಿದ ಅಪ್ರಮೇಯನ ಮನಸ್ಸಲ್ಲಿ ಏನೋ ಬದಲಾವಣೆ ಆದಂತಿತ್ತು. ಒಂದೊಂದು ಕವನ ಓದುತ್ತಿದ್ದಾಗಲೂ ಅವನಿಗೆ ಆಶ್ಚರ್ಯವಾಯಿತು. ಅಜ್ಜ ಎಷ್ಟು ಸುಂದರವಾಗಿ ಬರೆಯುತ್ತಿದ್ದರು! ತನ್ನ ಮನೆಯಲ್ಲೇ ಇಷ್ಟೊಂದು ದೊಡ್ಡ ಲೇಖಕ ಬದುಕಿದ್ದನೆಂಬ ಸತ್ಯ ಅವನಿಗೆ ಮೊದಲ ಬಾರಿಗೆ ಅರಿವಾಯಿತು.
ಮುಂದೆ ಗಾದೆಗಳ ಸಂಗ್ರಹ. ಪ್ರತಿಯೊಂದು ಗಾದೆ ಮಾತಿನ ಕೆಳಗೆ ಅದರ ಅರ್ಥವನ್ನು ಅತ್ಯಂತ ಸುದಾರವಾಗಿ ವಿಶ್ಲೇಷಣೆ ಮಾಡಿದ್ದರು ಅಪ್ರಮೇಯನ ಅಜ್ಜ. "ಮಾತು ಬೆಳ್ಳಿ, ಮೌನ ಬಂಗಾರ.", "ಅನುಭವವೇ ಗುರು.", "ಬಿತ್ತಿದಂತೆ ಬೆಳೆಯುತ್ತದೆ.", "ಅರಿತವನಿಗೆ ಅರ್ಧ ಮಾತು ಸಾಕು." - ಇಂಥ ಅನೇಕ ಗಾದೆಗಳನ್ನು ಬರೆದು ಪ್ರತಿ ಗಾದೆಯ ಅರ್ಥವನ್ನು ಅಜ್ಜ ತಮ್ಮ ಕೈಯಾರೆ ವಿಶ್ಲೇಷಿಸಿ ಬರೆದಿದ್ದರು. ಮೊದಲ ಬಾರಿಗೆ ಅಪ್ರಮೇಯನಿಗೆ "ಕನ್ನಡ" ಎಷ್ಟು ಸುಂದರ ಭಾಷೆ ಎಂಬುದು ಅರ್ಥವಾಗತೊಡಗಿತು. ಅವನೊಳಗೆ ಕನ್ನಡದ ಮೇಲೆ ಹೊಸ ಪ್ರೀತಿ ಹುಟ್ಟಿತ್ತು. ತನ್ನ ಅಜ್ಜ ಬರೆದಂಥ ಗಾದೆಗಳ ವಿಶ್ಲೇಷಣೆ ವಿಶೇಷವಾದ ರೀತಿಯಲ್ಲಿ ಮನ ಮುಟ್ಟುವಂತಿತ್ತು. ಜೀವನಕ್ಕೆ ಪಾಠದಂತಿತ್ತು.
ಕೊನೆಗೆ ಪತ್ರಗಳ ಕಟ್ಟು. ಸ್ವಲ್ಪ ಹೊಸದಾದ ಹಾಳೆಯಂತೆ ಭಾಸವಾಯಿತು. ಆ ಪತ್ರಗಳ ಕಟ್ಟನ್ನು ಒಂದು ಕೆಂಪಗಿನ ದಾರ ಸುತ್ತಿ ಕಟ್ಟಿದ್ದರು. ಆ ದಾರದ ಕೊನೆಯಲ್ಲಿ ಒಂದು ಚಿಕ್ಕ ಕವರನ್ನು ಅಂಟಿಸಿದ್ದರು. ಆ ಕವರಿನಲ್ಲಿ - "ನನ್ನ ಮುದ್ದಾದ ಮೊಮ್ಮಗ ಅಪ್ಪುವಿಗೆ" ಎಂದು ಬರೆದಿತ್ತು.
ಕವರ್ ತೆರೆದಾಗ ಅದರಲ್ಲಿ ಒಂದು ಚಿಕ್ಕ ಪತ್ರ ಇತ್ತು.
"ನನ್ನ ಪ್ರೀತಿಯ ಮೊಮ್ಮಗ ಅಪ್ಪು, ನೀನು ದೊಡ್ಡವನಾದಾಗ ಈ ಪತ್ರ ಓದುತ್ತೀಯೋ ಇಲ್ಲವೋ ಗೊತ್ತಿಲ್ಲ. ನೀನು ಓದುವಾಗ ನಾನು ಇರುತ್ತೇನೋ ಇಲ್ಲವೋ ತಿಳಿದಿಲ್ಲ. ಆದರೆ ಒಂದು ಮಾತು ನೆನಪಿಡು. ಇಂಗ್ಲಿಷ್ ಕಲಿತು ಜಗತ್ತನ್ನು ಗೆಲ್ಲು. ಆದರೆ ಕನ್ನಡವನ್ನು ಮರೆತು ನಿನ್ನನ್ನೇ ಕಳೆದುಕೊಳ್ಳಬೇಡ. ನಿನ್ನ ತಾಯಿ ಭಾಷೆಯನ್ನು ಕಳೆದುಕೊಂಡರೆ ನಿನ್ನ ಬೇರುಗಳನ್ನು ಕಳೆದುಕೊಳ್ಳುತ್ತೀಯ. ಜೊತೆಗೆ ನಮ್ಮ ಮನೆತನದ ಸಂಸ್ಕೃತಿಯನ್ನು ಬೆಳೆಸುವ ಯುವಕನಾಗು." ಎಂದು ಬರೆದಿತ್ತು. ಅಜ್ಜನ ಸುಂದರವಾದ ಕೈಬರಹದಲ್ಲಿ ಬರೆದಿದ್ದ ಈ ಪತ್ರ ಓದಿ ಅಪ್ರಮೇಯನ ಕಣ್ಣು ತುಂಬಿ ಬಂತು.
ಒಂದೊಂದಾಗಿ ಪತ್ರಗಳನ್ನು ಓದುತ್ತಾ ಹೋದ ಅಪ್ರಮೇಯನಿಗೆ ತನ್ನ ಅಜ್ಜ ತನ್ನೊಡನೆ ಮಾತಾಡಬೇಕು ಅಂತಿದ್ದ ಎಲ್ಲ ವಿಷಯಗಳನ್ನೂ ಪತ್ರದ ಮೂಲಕ ನೀಡಿ ಹೋಗಿದ್ದಾರೆಂದು ಗೊತ್ತಾಯಿತು. ಎರಡನೇ ಪತ್ರದಲ್ಲಿ ನಮ್ಮ ದೇಶ, ದೇಶದ ಸಂಸ್ಕೃತಿ ಇದರ ಬಗ್ಗೆ ಉಲ್ಲೇಖಿಸಿ, "ನಮ್ಮ ದೇಶವನ್ನು ಪ್ರೀತಿಸು. ಯಾಕೆಂದರೆ ನಮ್ಮ ಬೇರುಗಳು ಇಲ್ಲಿ ಇವೆ." ಎಂದು ಬರೆದಿದ್ದರು. ಮೂರನೇ ಪತ್ರದಲ್ಲಿ ಮನುಷ್ಯತ್ವ ಹಾಗೂ ಒಳ್ಳೆ ಗುಣಗಳು ಯಾಕೆ ಇರಬೇಕು ಅನ್ನುವುದನ್ನು ಉಲ್ಲೇಖಿಸಿ "ಹಣ ಸಂಪಾದಿಸುವುದು, ಸಿರಿತನ ಅನ್ನುವುದು ಯಶಸ್ಸಲ್ಲ. ಒಳ್ಳೆಯ ಗುಣವನ್ನು ಹೊಂದಿ ಒಳ್ಳೆಯ ಮನುಷ್ಯನಾಗುವುದು ನಿಜವಾದ ಯಶಸ್ಷು" ಅಂತ ಬರೆದಿದ್ದರು.
ಹೀಗೆ ಒಂದು ರಾತ್ರಿ, ಎರಡು ರಾತ್ರಿ, ಹತ್ತು ರಾತ್ರಿಗಳು ಕಳೆಯಿತು. ಅಜ್ಜ ಬರೆದ ಪತ್ರಗಳನ್ನು ಓದಿ ಮುಗಿಸಿದ ಅಪ್ರಮೇಯನ ತನ್ನ ಅಜ್ಜ ಎಷ್ಟೊಂದು ವಿಚಾರಗಳನ್ನು ಮಾತನಾಡಬೇಕೆಂದಿದ್ದರು. ಪ್ರತಿ ಪತ್ರದಲ್ಲೂ ಪ್ರೀತಿ ಮಾತ್ರ ಇತ್ತು. ಯಾವುದೇ ದೂರು ಇರಲಿಲ್ಲ. ಯಾವುದೇ ಬೇಸರ ಇರಲಿಲ್ಲ. ಮೊಮ್ಮಗನ ಮೇಲಿನ ಪ್ರೀತಿಯೇ ತುಂಬಿಕೊಂಡಿತ್ತು. "ನಾನು ಅಜ್ಜನಿಗೆ ಸಮಯವನ್ನೇ ನೀಡಲಿಲ್ಲ" ಅಂತ ಮರುಗಿದ.
ಕೊನೆಯದಾಗಿ ಒಂದು ಡೈರಿ ಕೈಗೆ ಸಿಕ್ಕಿತು. ಅದರ ಕೊನೆಯ ಪುಟದಲ್ಲಿ ಕೇವಲ ಒಂದು ಸಾಲು. ಅಜ್ಜನ ನಡುಗುವ ಕೈಬರಹ.
"ಒಂದು ದಿನ ನನ್ನ ಕಥೆಗಳು ಓದಲು ಯಾರಾದರೂ ಇರುತ್ತಾರಾ?".
ಇದನ್ನು ಓದುತ್ತಿದ್ದಂತೆಯೇ ಅಪ್ರಮೇಯನ ಕಣ್ಣೀರಿನ ಹನಿ ಆ ಪದಗಳ ಮೇಲೆ ಬಿತ್ತು. ಕೈಯಿಂದ ಡೈರಿ ಜಾರಿ ಬಿತ್ತು. ಆ ಕ್ಷಣದಲ್ಲಿ ಅವನು ಒಡೆದು ಹೋದ. "ಅಜ್ಜಾ, ನನ್ನ ಮುಂದೆ ಹಿರಿದಾದ ಒಂದು ನಿಧಿಯೇ ಇತ್ತು, ನಾನು ಅದನ್ನು ನೋಡಲಿಲ್ಲ, ಕೇಳಲಿಲ್ಲ, ಅರ್ಥ ಮಾಡಿಕೊಳ್ಳಲಿಲ್ಲ, " ಎಂದು ಜೋರಾಗಿ ಅತ್ತ. ಆದರೆ ಆ ಅಳುವನ್ನು ಕೇಳಲು ಅಜ್ಜ ಮಾತ್ರ ಅಲ್ಲಿ ಇರಲಿಲ್ಲ.
ಆ ಕ್ಷಣದಲ್ಲಿ ಅವನಿಗೆ ಅರ್ಥವಾಯಿತು. "ತಾನು ಕಳೆದುಕೊಂಡದ್ದು ಒಬ್ಬ ವ್ಯಕ್ತಿಯಲ್ಲ, ಒಂದು ಜೀವಂತ ಗ್ರಂಥಾಲಯವನ್ನು. ಒಂದು ವಿಶ್ವವಿದ್ಯಾಲಯವನ್ನು. ಅನುಭವದ ಮಹಾಸಾಗರವನ್ನು. ಬದುಕಿನ ಪ್ರತಿಯೊಂದು ತಿರುವಿಗೂ ಬೆಳಕು ತೋರಿಸಬಹುದಾದ ದಾರಿದೀಪವನ್ನು. ಆ ಅಮೂಲ್ಯ ನಿಧಿ ತನ್ನ ಮನೆಯಲ್ಲೇ ಇತ್ತು, ಆದರೆ ಅದನ್ನು ಅರಿತುಕೊಳ್ಳುವಷ್ಟರಲ್ಲಿ, ಆ ನಿಧಿಯ ಬಾಗಿಲು ಶಾಶ್ವತವಾಗಿ ಮುಚ್ಚಿಹೋಗಿತ್ತು.."
ಆ ದಿನದಿಂದ ಅಪ್ರಮೇಯ ಬದಲಾಗಲು ಆರಂಭಿಸಿದ. ದೊಡ್ಡವನಾಗಿ ಅವನು ಕನ್ನಡ ಸಾಹಿತ್ಯ ಓದಿದ. ಹಳೆಯ ಗ್ರಂಥಗಳನ್ನು ಹುಡುಕಿದ. ಕನ್ನಡ ಲೇಖಕರನ್ನು ಅಧ್ಯಯನ ಮಾಡಿದ. ಸಂಶೋಧನೆ ನಡೆಸಿದ. ಭಾಷೆಯ ಬಗ್ಗೆ ಲೇಖನಗಳನ್ನು ಬರೆದ.
***
ವರ್ಷಗಳು ಕಳೆದವು. ಇಂದು ಡಾ. ಅಪ್ರಮೇಯ ರಾಮ ಭಟ್ ರಾಜ್ಯದ ಪ್ರಸಿದ್ಧ ಕನ್ನಡ ಪ್ರಾಧ್ಯಾಪಕರಲ್ಲಿ ಒಬ್ಬ. ಅವನ ಮೇಜಿನ ಮೇಲೆ ಯಾವಾಗಲೂ ಅಜ್ಜನ ಹಳೆಯ ಮರದ ಪೆಟ್ಟಿಗೆ ಇರುತ್ತಿತ್ತು. ಪೆಟ್ಟಿಗೆ ನೋಡಿ ಕುತೂಹಲದಿಂದ ಯಾವ ವಿದ್ಯಾರ್ಥಿ ಕೇಳಿದರೂ ಅವನು ಹೇಳುತ್ತಿದ್ದ:
"ನನ್ನ ಜೀವನದ ದೊಡ್ಡ ಗುರು ನನ್ನ ಅಜ್ಜ. ನಾನು ಅವರನ್ನು ಬದುಕಿರುವಾಗ ಕೇಳಲಿಲ್ಲ. ಆದರೆ ಅವರು ಬರೆದ ಪತ್ರಗಳು ನನ್ನ ಬದುಕಿನುದ್ದಕ್ಕೂ ಮಾರ್ಗದರ್ಶಿಯಾಗಿವೆ. ಜೀವನದ ಪಾಠವನ್ನು ಕಲಿಸುತ್ತಿವೆ."
ಇಂದು ಮನೆಗಳಲ್ಲಿ ವೈ-ಫೈ ಇದೆ. ಸ್ಮಾರ್ಟ್ಫೋನ್ ಇದೆ. ಆನ್ಲೈನ್ ಕ್ಲಾಸ್ ಇದೆ. ಕೃತಕ ಬುದ್ಧಿಮತ್ತೆ ಇದೆ. ಜಗತ್ತಿನ ಯಾವುದೇ ಮಾಹಿತಿಯೂ ಕ್ಷಣಾರ್ಧದಲ್ಲಿ ಸಿಗುತ್ತದೆ. ಆದರೆ ಅಜ್ಜ-ಅಜ್ಜಿಯರ ಕಥೆ ಕೇಳುವ ಸಮಯ ಇದೆಯೇ? ಅವರ ಅನುಭವ ಕೇಳುವ ತಾಳ್ಮೆ ಇದೆಯೇ? ಅವರ ಜೊತೆ ಕುಳಿತು ಮಾತನಾಡುವ ಮನಸ್ಸಿದೆಯೇ?
ಅಜ್ಜ-ಅಜ್ಜಿಯರ ಅನುಭವವನ್ನು ಗೂಗಲ್ನಲ್ಲಿ ಹುಡುಕಲು ಸಾಧ್ಯವಿಲ್ಲ. ಅವರ ಪ್ರೀತಿಯನ್ನು ಯೂಟ್ಯೂಬ್ನಲ್ಲಿ ನೋಡಲು ಸಾಧ್ಯವಿಲ್ಲ. ಅವರ ಮಮತೆಯನ್ನು ಯಾವುದೇ ಆ್ಯಪ್ ಡೌನ್ಲೋಡ್ ಮಾಡಿ ಪಡೆಯಲು ಸಾಧ್ಯವಿಲ್ಲ. ಅವರು ಬದುಕಿರುವಾಗ ಅವರ ಜೊತೆ ಕಳೆದ ಹತ್ತು ನಿಮಿಷ, ಅವರು ಹೋದ ನಂತರ ಜೀವನಪೂರ್ತಿ ನಮ್ಮನ್ನು ಬೆಳಗಿಸುವ ನೆನಪಾಗುತ್ತದೆ.
ನಾವು ನಮ್ಮ ಮಕ್ಕಳಿಗೆ ಆಸ್ತಿ ಕೊಡಬಹುದು. ವಿದ್ಯೆ ಕೊಡಬಹುದು. ಸೌಲಭ್ಯಗಳನ್ನು ಕೊಡಬಹುದು. ಆದರೆ ಅಜ್ಜ-ಅಜ್ಜಿಯರ ಕಥೆಗಳನ್ನು ಇಂದು ಕಳೆದುಕೊಳ್ಳಲು ಬಿಡುತ್ತಿದ್ದರೆ, ಅವರು ಕಳೆದುಕೊಳ್ಳುವುದು ಒಂದು ಭಾಷೆಯನ್ನಲ್ಲ, ಒಂದು ಪೀಳಿಗೆಯ ಜ್ಞಾನ. ಒಂದು ಸಂಸ್ಕೃತಿ, ಒಂದು ಬದುಕಿನ ದಾರಿದೀಪ. ಒಂದು ಜೀವನದ ಅನುಭವ. ಒಂದು ಅಮೂಲ್ಯವಾದ ನಿಧಿ.
ಆದ್ದರಿಂದ, ಇಂದು ಮನೆಗೆ ಹೋದ ಕೂಡಲೇ ಒಂದು ಕೆಲಸ ಮಾಡಿ. ನಿಮ್ಮ ಅಜ್ಜ ಅಥವಾ ಅಜ್ಜಿಯ ಬಳಿ ಕುಳಿತು ಕೇವಲ ಹತ್ತು ನಿಮಿಷ ಮಾತಾಡಿ. ಏಕೆಂದರೆ, ಇಂದು ನಮ್ಮ ಮನೆಯಲ್ಲಿರುವ ಅಜ್ಜ-ಅಜ್ಜಿ - ನಾಳೆ ನೆನಪುಗಳಾಗಬಹುದು. ಅವರ ಕಥೆಗಳು - ಒಂದು ದಿನ ಸಿಗದ ನಿಧಿಯಾಗಬಹುದು. ನಾಳೆ ಅವರ ಪೆಟ್ಟಿಗೆ ಸಿಗಬಹುದು, ಆದರೆ ಅವರ ಧ್ವನಿ ಮತ್ತೆ ಎಂದಿಗೂ ಸಿಗುವುದಿಲ್ಲ.
✍🏻 Deepalaxmi Bhat
Mangaluru


