Friday, September 4, 2020

ಕೊರೋನಾ ಎಂಬ ವಿಷಾಸುರನ ದಯೆಯಿಂದ ಬದಲಿಸಬೇಕಾದ ನಿರ್ಣಯಗಳು (28-08-2020 ರಂದು ಹೊಸದಿಗಂತದ ವೆಬ್ ಸೈಟ್ ನಲ್ಲಿ ಪ್ರಕಟವಾದ ಬರಹ )

ಅಂದು ಬೆಳಿಗ್ಗೆ ಎಂಟು ಗಂಟೆಗೆ ಸರಿಯಾಗಿ, ಬೆಳಗ್ಗಿನ ಸ್ನಾನಾದಿ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಬೆಚ್ಚಗಿನ ಕಾಫಿಯನ್ನು ಹೀರುತ್ತಾ ದಿನಪತ್ರಿಕೆಯನ್ನು ಓದುತ್ತಿದ್ದೆ. ಆವಾಗಲೇ ನೆನಪಾಗಿದ್ದು, ಹಿಂದಿನ ದಿನ ಮಧ್ಯರಾತ್ರಿಯಿಂದ ಲಾಕ್ ಡೌನ್ ಹೇರಲಾಗಿದೆ ಅನ್ನೋದು. "ಏನು ಮಾಡುವುದು? ಇನ್ನು ೧೫ ದಿನಗಳನ್ನು ಮನೆಯ ಒಳಗಡೆ ಹೇಗೆ ಕಳೆಯುವುದು?" ಎನ್ನುವುದೇ ಮಹಾ ಚಿಂತೆಯಾಗಿ ಹೋಯಿತು.ಈ ಚಿಂತೆಯು ನನಗೊಬ್ಬಳಿಗೇ ಕಾಡಿರುವುದಲ್ಲ. ವಿಶ್ವದ ಮೂಲೆಮೂಲೆಗಳಲ್ಲೂ ಅನೇಕರಿಗೆ ಕಾಡಿರುವಂಥದ್ದು. 

ಈ "ಕೊರೊನ" ಎಂಬ ವಿಷಾಸುರ ಪ್ರತಿಯೊಬ್ಬರಿಗೂ ಭಯದ ಜೊತೆಗೆ ಸಂಕಟವನ್ನೂ ನೀಡಿರುವುದು ವಾಸ್ತವಿಕ ಸತ್ಯ. ಸುಮಾರು ಅರ್ಧ ವರ್ಷದಿಂದಲೇ ಕಾಡುತ್ತಿರುವ ಈ ಸೋಂಕಿನಿಂದ ಜಗತ್ತಿನ ವ್ಯಾವಹಾರಿಕ ವಾತಾವರಣಕ್ಕೆ ಬೀರಿರುವ ಅಡ್ಡ ಪರಿಣಾಮಗಳನ್ನು ಸರಿಪಡಿಸಲು ಏನು ಮಾಡಬಹುದು ಎನ್ನುವುದು ಆಲೋಚಿಸಲೇಬೇಕಾದ ಸಂಗತಿ. ಇಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ, ಸಣ್ಣ ಪುಟ್ಟ ವ್ಯವಹಾರ ನಡೆಸುತ್ತಿರುವ ಉದ್ಯಮಿಗಳಿಗೆ, ಸಣ್ಣ ಕೈಗಾರಿಕಾ ಉದ್ಯಮಿಗಳು ಹಾಗೂ ಅಲ್ಲಿ ಸಣ್ಣ ಮಟ್ಟಿನ ಸಂಬಳ ಪಡೆದುಕೊಂಡು ಕೆಲಸ ಮಾಡುತ್ತಿರುವ ಜನರು - ಇವರೆಲ್ಲಾ ತುಂಬಾ ಹಾನಿ ಅನುಭವಿಸುವ ಭಯದಲ್ಲಿ ದಿನ ಕಳೆಯುತ್ತಿರುವುದು ತಿಳಿದಿರುವ ಸಂಗತಿ. ಹೀಗಿರುವಾಗ, ಎಲ್ಲರೂ ಅವರವರ ಆಯವ್ಯಯದ ಯೋಜನೆಗಳನ್ನು ಚೆನ್ನಾಗಿ ಅರ್ಥೈಸಿಕೊಂಡು ಇತಿಮಿತಿಗಳನ್ನು ಮತ್ತೆ ವ್ಯಾಖ್ಯಾನಿಸುವುದು ಅನಿವಾರ್ಯ. ಇದಕ್ಕೆ ಏನು ಮಾಡಬಹುದು ಎನ್ನುವುದನ್ನು ಮುಂದೆ ಓದೋಣ ಬನ್ನಿ.. 

ಇಡೀ ಜಗತ್ತೇ ಈ ಕೊರೋನಾಸುರನ ಹರಡುವಿಕೆಗೆ ತತ್ತರಿಸುತ್ತಿದೆ. ಜೊತೆಗೆ ಮನೆಮನೆಯಲ್ಲೂ, ವ್ಯಾಪಾರ ಘಟಕಗಳಲ್ಲೂ, ಸಣ್ಣ ಹಾಗೂ ಮಧ್ಯಮ ಸಂಸ್ಥೆಗಳಲ್ಲೂ ಆರ್ಥಿಕ ಬಿಕ್ಕಟ್ಟು ತಡೆಗಟ್ಟಲಾಗದ ಸಮಸ್ಯೆಯಾಗಿ ಪರಿಣಮಿಸಿದೆ. ಇಂಥ ಸಮಯದಲ್ಲಿ ಎಲ್ಲರೂ ಗಾಬರಿಗೊಳ್ಳದೆ ಮುಂಬರುವ ದಿನಗಳಲ್ಲಿ ಏನು ಕಾದಿದೆ ಅನ್ನುವುದನ್ನು ವಿಶ್ಲೇಷಿಸಿ ನಿರ್ಧಾರಗಳನ್ನು ಕೈಗೊಳ್ಳುವುದು ಉತ್ತಮ. ಕೌಟುಂಬಿಕವಾಗಿರಲಿ, ವ್ಯಾವಹಾರಿಕವಾಗಿರಲಿ - ಈ ಪರಿಸ್ಥಿತಿಯಿಂದ ನೋವಿಗೊಳಗಾಗದೆ ಹೊರಬರುವುದೇ ಅತಿ ಅಗತ್ಯವಾದ ಸಂಗತಿ. ಈ ಸಾಂಕ್ರಾಮಿಕ ರೋಗವು ಪ್ರತಿಯೊಬ್ಬರ ಜೀವನ ಶೈಲಿ, ಸಾಮಾಜಿಕ ನಡವಳಿಕೆ, ಪ್ರವಾಸ ಅಭ್ಯಾಸಗಳು, ಖರ್ಚುವೆಚ್ಚಗಳ ಮಾದರಿ, ದೇಶವಿದೇಶಗಳ ಪರಸ್ಪರಾವಲಂಬನೆ, ವ್ಯಾವಹಾರಿಕ ವಾತಾವರಣ - ಎಲ್ಲವನ್ನೂ ಬದಲಿಸಿದೆ. ಈ ಬದಲಾವಣೆಯಿಂದ ಒಳ್ಳೆಯದಾಗುವುದೋ, ಕೆಟ್ಟದ್ದಾಗುವುದೋ ಎಂಬುದು ಈಗಲೇ ಅರ್ಥ ಮಾಡಿಕೊಳ್ಳುವುದು ಕಷ್ಟಕರ. 

ಈ ಪರಿಣಾಮಗಳಿಂದ ಆರ್ಥಿಕತೆಯ ಮೇಲೆ ಎಂಥ ಪ್ರಭಾವ ಬೀರುವುದು ಎನ್ನುವುದು ಇಷ್ಟು ಹೊತ್ತಿಗೆ ಎಲ್ಲರಿಗೂ ತಿಳಿದಿದೆ. ಆದರೆ,ಆರ್ಥಿಕತೆಯನ್ನು ಸ್ಥಿರವಾಗಿಡುವುದು ದೇಶದ ಸರಕಾರದ ಜವಾಬ್ದಾರಿ ಮಾತ್ರವಲ್ಲದೆ, ದೇಶದಲ್ಲಿರುವ ಪ್ರತಿಯೊಬ್ಬ ಉದ್ಯಮಿ, ಸಣ್ಣ ಹಾಗೂ ಮಧ್ಯಮ ಸಂಸ್ಥೆಗಳ ಜವಾಬ್ದಾರಿಯೂ ಆಗಿದೆ. ಭಾರತ ಸರಕಾರವು ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಹಲವಾರು ರೀತಿಯಲ್ಲಿ ಸಹಕಾರ ನೀಡುವಂಥ ಹಣಕಾಸು ಕ್ರಮಗಳನ್ನು ಜನರಿಗೆ ಉಪಯೋಗವಾಗುವಂತೆ ಜಾರಿಗೊಳಿಸಿದೆ. ಮಾತ್ರವಲ್ಲದೆ ಸ್ವದೇಶೀ ಕಾಯ್ದೆ, ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ  ಕೈಗಾರಿಕೆಗಳ ಅಭಿವೃದ್ಧಿ ಕಾಯ್ದೆ ಮುಂತಾಗಿ ಹಲವಾರು ರೀತಿಯಲ್ಲಿ ಉದ್ಯಮಿಗಳಿಗೆ ಬಲ ನೀಡುವಂಥ ಯೋಜನೆಗಳನ್ನು ಪರಿಚಯಿಸಿದೆ. ಈ ಎಲ್ಲ ಸೌಲಭ್ಯಗಳ ಬಲ ಪಡೆದು ಲಾಕ್ ಡೌನ್ ತೆರೆದಂತೆ ತಮ್ಮ ಉದ್ಯಮವನ್ನು ಮತ್ತೆ ಜೀವಭರಿಸಲು ತಂತ್ರವನ್ನು ಯೋಜಿಸಬೇಕಾಗಿದೆ. ಇಲ್ಲವಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಬದುಕುಳಿಯುವುದು ತುಂಬಾ ಕಷ್ಟಕರ. 

ಮೌಲ್ಯಮಾಪನ, ಅಂದಾಜು ಹಾಗೂ ಯೋಜನೆ:  

ಕೊರೋನಾ  ಶುರುವಾದಾಗಿನಿಂದ ಇವತ್ತಿನವರೆಗೆ ವ್ಯವಹಾರ ಹೇಗೆ ನಡೆದಿದೆ, ಎಷ್ಟು ಹಾನಿಯುಂಟಾಗಿದೆ, ಹಿಂದಿನ ವರ್ಷ ಇದೇ ಸಮಯದಲ್ಲಿ ಹೇಗೆ ನಡೆದಿದೆ, ಈಗ ಹೇಗೆ ನಡೆಯುತ್ತಿದೆ, ಎಷ್ಟು ಜನ ನೌಕರರನ್ನು ಕೆಲಸದಿಂದ ತೆಗೆಯಲಾಗಿದೆ, ಎಷ್ಟು ಸರಕುಗಳು ವ್ಯವಹಾರದಲ್ಲಿ ಇದೆ, ಇಂದಿನ ವಹಿವಾಟಿನ ರೀತಿಯಲ್ಲಿ ಅಂದಾಜು ಎಷ್ಟು ಸರಕು ಬೇಕಾಗುತ್ತದೆ - ಹೀಗೆ ಎಲ್ಲ ವಿಚಾರಗಳನ್ನು  ಯೋಚಿಸಿ, ಚರ್ಚಿಸಿ ಮುಂದಿನ ತಿಂಗಳುಗಳ ಉಳಿಯುವಿಕೆಗೆ ಯೋಜನೆಗಳನ್ನು ನಿರ್ಧರಿಸಬೇಕು. 

 ಒಂದು ನಿರ್ಧಾರಕ್ಕೆ ಬಂದ ಮೇಲೆ ಆ ಯೋಜನೆಗಳ ಸಾಧಕ-ಬಾಧಕಗಳ ಬಗ್ಗೆ ಚಿಂತನೆ ನಡೆಸಿ, ನಿಯತಕಾಲಿಕವಾಗಿ ಪರಿಶೀಲಿಸುತ್ತಿರಬೇಕು. ಕೆಲಸಕ್ಕೆ ಬಾರದ ಯೋಜನೆಗಳನ್ನು ಸರಿಪಡಿಸಿ ಉಪಯೋಗಕ್ಕೆ ಬರುವಂತೆ ಮಾಡಬೇಕು. 

ಆರ್ಥಿಕ ಪರಿಸ್ಥಿತಿ:

ಉದ್ಯಮಗಳು ತಮ್ಮ ಹಣಕಾಸಿನ ಪರಿಸ್ಥಿತಿಯನ್ನು ಗಮನಿಸಿ, ಸರಕಾರವು ಜಾರಿಗೊಳಿಸಿರುವ ಸಾಲ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು. ಹಣವನ್ನು ಮಾಡುವ ಮೊದಲು ಹಣವನ್ನು ವ್ಯಯಿಯಾಬೇಕಾಗುತ್ತದೆ ಅನ್ನುವುದನ್ನು ತಿಳಿದು, ಹಣವನ್ನು ಎಲ್ಲಿ ವ್ಯಯಿಸಬೇಕು ಅನ್ನೋದನ್ನು ಸರಿಯಾಗಿ ನಿರ್ಧಾರ ಮಾಡಬೇಕು. ಇಲ್ಲವಾದಲ್ಲಿ ಒಮ್ಮೆ ವ್ಯಯಿಸಿದ ಹಣವನ್ನು ಮತ್ತೆ ಗಳಿಸಲು ತುಂಬಾ ಶ್ರಮ ಪಡಬೇಕಾಗುತ್ತದೆ. ಅತಿಯಾದ ಸಾಲ ಮಾಡದೆ, ವಹಿವಾಟುಗಳನ್ನು ಹೆಚ್ಚಿಸಲು ಮಾರ್ಕೆಟಿಂಗ್ ಮಾಡಿ ಹಣವನ್ನು ಹೂಡಿಕೆ ಮಾಡುವಾಗ ಜಾಸ್ತಿಯಾಗಿ ಚಲಾವಣೆಯಲ್ಲಿರುವ ಅಗತ್ಯ ಸರಕುಗಳನ್ನು ಖರೀದಿಸಬೇಕು. ಇದರಿಂದ ಸರಕುಗಳು ಬೇಗನೆ ಚಲಾವಣೆ ಆಗಿ ಬಂಡವಾಳ ವೃದ್ಧಿಸುವಲ್ಲಿ ಉಪಯೋಗವಾಗುತ್ತದೆ. 

ಸಿಬ್ಬಂದಿ ವರ್ಗ, ಕಾರ್ಯಾಚರಣೆ ಹಾಗೂ ಮೂಲ ಸೌಕರ್ಯಗಳು:

ಕೊರೋನಾದಿಂದಾಗಿ ಮನೆಯಿಂದಲೇ ಕೆಲಸ ಮಾಡುವಂಥ ಪರಿಸ್ಥಿತಿಗಳು ಹೆಚ್ಚಾಗಿದೆ. ಹಲವಾರು ಉದ್ಯಮಗಳಲ್ಲಿ ಮಾಡಬೇಕಾದ ಕೆಲಸಗಳು ಮನೆಯಿಂದ ನಿರ್ವಹಿಸುವುದು ಕಷ್ಟಕರ. ಆದರೆ ಅಂತ ಸೌಲಭ್ಯ ಇರುವಲ್ಲಿ ಮನೆಯಿಂದಲೇ ಕಾರ್ಯಾಚರಣೆ ಮಾಡುವಾಗ ಅನೇಕ ರೀತಿಯ ಸೌಕರ್ಯಗಳನ್ನು ನೀಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಸಿಬ್ಬಂದಿಗಳ ಸಹಕಾರವೂ ಅತ್ಯಗತ್ಯ. ಡಿಜಿಟಲ್ ಆಗಿ ಕೆಲಸ ಮಾಡಬೇಕಾದಾಗ ಉದ್ಯಮಗಳು ಹಲವಾರು ಸೌಕರ್ಯಗಳನ್ನು ಸಿಬ್ಬಂದಿಗಳಿಗೂ ನೀಡಬೇಕು, ಜೊತೆಗೆ ಗ್ರಾಹಕರಿಗೂ ಡಿಜಿಟಲ್ ಆಗಿ ಹಣ ಪಾವತಿ ಮಾಡುವ ಸೌಕರ್ಯಗಳನ್ನೂ ಒದಗಿಸಬೇಕಾಗುತ್ತದೆ. 

ಡಿಜಿಟಲ್ ಆಗಿ ಕಾರ್ಯ ನಿರ್ವಹಿಸಲು ಉದ್ಯಮಗಳು ಬಹಳ ಎಚ್ಚರಿಕೆಯಿಂದ ಖರ್ಚುಗಳನ್ನು ನಿರ್ಧರಿಸಬೇಕು.  ಬ್ಯಾಂಕುಗಳಿಂದ ಸಿಗುವ ಸೌಕರ್ಯಗಳ ಲಾಭ ಪಡೆದರೂ, ಆ ದುಡ್ಡು ಸಾಕಾಗದೆ ಇರಬಹುದು. ಇಂಥ ಪರಿಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕಾರ್ಯನಿರ್ವಹಿಸಬೇಕಾಗುತ್ತದೆ. 

ಪೂರೈಕೆದಾರರ ನಿರ್ಬಂಧನೆಗಳು 

ಉದ್ಯಮಗಳು ತಮ್ಮ ನ್ಯೂನ್ಯತೆಗಳನ್ನು ಅರ್ಥಿಸಿಕೊಳ್ಳುವುದರ ಜೊತೆಗೆ ತಮ್ಮ ಪೂರೈಕೆದಾರರ ನಿರ್ಬಂಧನೆಗಳನ್ನೂ ಅರ್ಥೈಸಿಕೊಳ್ಳಬೇಕು. ಹಾಗೂ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಬೇರೆ ಬೇರೆ ಪೂರೈಕೆದಾರರ ಜೊತೆಗೆ ಒಳ್ಳೆಯ ನಂಟು ಬೆಳೆಸಿಕೊಳ್ಳಬೇಕು. ಇದರಿಂದ ತಮ್ಮ ವಹಿವಾಟುಗಳಿಗೆ ನಿಲುಗಡೆಯಾಗುವಂಥ ಸಂಭವಗಳು ಕಡಿಮೆಯಾಗುತ್ತದೆ. 

ಉತ್ಪನ್ನಗಳು 

ಕೊರೋನಾ ಹರಡುವುದರ ಮೊದಲು ಚಾಲ್ತಿಯಲ್ಲಿದ್ದ ಸರಕುಗಳು ಈಗ ಮಾನ್ಯತೆ ಪಡೆಯದೇ ಇರಬಹುದು. ಹಾಗಾಗಿ ಉದ್ಯಮಗಳು ತಾವು ಒದಗಿಸುತ್ತಿರುವ ಉತ್ಪನ್ನಗಳನ್ನು ಕಾಲದ ಬೇಡಿಕೆಗಳ ಅನುಗುಣವಾಗಿ ನಿರ್ಧರಿಸಿ ಗ್ರಾಹಕರಿಗೆ ಒದಗಿಸಿ ಕೊಡಬೇಕು. ಇದರಿಂದ ವಹಿವಾಟು ನಿಶ್ಚಲವಾಗದೆ ನಡೆಯುತ್ತಲೇ ಇರುತ್ತದೆ. 

ಈ ಮೇಲಿನಂತೆ ಉದ್ಯಮಗಳು ತಮ್ಮ ಯೋಜನೆಗಳನ್ನು ನಿರ್ಧರಿಸಿದರೆ, ಈ ಕಷ್ಟಕರ ಪರಿಸ್ಥಿತಿಗಳಿಂದ ಹಾನಿಯಾಗದಂತೆ ಮುಂದೆ ಚಲಿಸಬಹುದು. 

ಹಾಗೆಯೇ, ಮನೆಮನೆಗಳಲ್ಲೂ ತಮ್ಮ ಖರ್ಚುವೆಚ್ಚಗಳನ್ನು ಆಲೋಚಿಸಿ ನಿರ್ಧರಿಸಿದರೆ ಕಷ್ಟಕರ ಪರಿಸ್ಥಿತಿಗಳಲ್ಲಿ ಭಯವಿಲ್ಲದೆ ಜೀವನ ಸಾಗಿಸಬಹುದು.ಅಗತ್ಯವಿರುವ ವಸ್ತುಗಳನ್ನು ಮಾತ್ರವೇ ತೆಗೆದುಕೊಂಡು, ಹಣವನ್ನು ಉಳಿಸಬೇಕು. ಕಷ್ಟಪಟ್ಟು ಗಳಿಸಿದ ಹಣವನ್ನು  ನಿಮಿಷಾರ್ಧದಲ್ಲಿ ವೆಚ್ಚ ಮಾಡಬಹುದು. ಆದರೆ ಅದೇ ಹಣವನ್ನು ಮತ್ತೆ ಗಳಿಸಲು ಅಷ್ಟೇ ಕಷ್ಟಪಡಬೇಕಾಗುತ್ತದೆ ಅನ್ನೋದನ್ನು ತಿಳಿದು ವ್ಯವಹರಿಸಿದರೆ ಉತ್ತಮ.

ಕೊರೋನಾ ಎನ್ನುವುದು ಸದ್ಯದಲ್ಲಿ ದೂರವಾಗುವ ಸಮಸ್ಯೆ ಅಲ್ಲ. ಅದರೊಂದಿಗೆ ಬದುಕುವುದನ್ನು ನಾವು ಕಲಿಯಬೇಕಾಗಿದೆ. ಈಗ ಅತಿಯಾದ ಲಾಭ ಗಳಿಸುವುದಾಗಲೀ, ಐಷಾರಾಮಿಜೀವನ ನಡೆಸುವುದಾಗಲಿ ಹಲವರಿಗೆ ಸಾಧ್ಯವಿಲ್ಲ. ನೂತನವಾದ ಸಾಮಾನ್ಯತೆಯನ್ನು ಅರಿತು, ಅದರಂತೆಯೇ ಬದುಕುವುದನ್ನು ಕಲಿತು, ಜೀವಿಸುವುದೇ ಇಂದಿಗೆ ಒಳಿತು. 


- ದೀಪಲಕ್ಷ್ಮಿ ಭಟ್

Monday, June 22, 2020

ಯುದ್ಧ ಮತ್ತು ಶಾಂತಿ (2003)

*೨೦೦೩-೦೪ ನೇ ಸಾಲಿನಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ  ದೊರೆತ ಪ್ರಬಂಧ*

ದಿನಾಂಕ: ೦೭-೦೭-೨೦೦೩


"ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್।
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ।।"
-ಎಂದು ಶ್ರೀ ಕೃಷ್ಣಪರಮಾತ್ಮನು ಮಹಾಭಾರತ ಯುದ್ಧದ ಸಮಯದಲ್ಲಿ ಹೇಳಿರುವನು. ಈ ಮಾತನ್ನು ಭಗವದ್ ವಾಣಿ ಎಂದೇ ಪರಿಗಣಿಸಲಾಗಿದೆ. "ಸಜ್ಜನರನ್ನು ಕಾಪಾಡುವುದಕ್ಕಾಗಿಯೂ, ಪಾಪಿಗಳಾದವರ ವಿನಾಶಕ್ಕಾಗಿಯೂ, ಧರ್ಮವನ್ನು ನೆಲೆಗೊಳಿಸುವುದಕ್ಕಾಗಿಯೂ ನಾನು ಯುಗಯುಗಗಳಲ್ಲಿಯೂ ಅವತರಿಸುತ್ತೇನೆ." ಎಂದು ಶ್ರೀ ಕೃಷ್ಣಪರಮಾತ್ಮನು ಜಗತ್ತಿನಲ್ಲಿ ಶಾಂತಿ ನೆಲೆಯೂರಿಸುವ ಸಲುವಾಗಿ ನುಡಿದಿದ್ದಾನೆ. ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸುತ್ತಿದ್ದ ಸಂದರ್ಭದಲ್ಲಿ ಶ್ರೀ ಕೃಷ್ಣಪರಮಾತ್ಮನು ನುಡಿದ ವಾಕ್ಯ ಸುಳ್ಳು ಎಂದು ಹೇಳಲು ಸಾಧ್ಯವಿಕ್ಕ. ಇಂದಿಗೂ ಜಗತ್ತಿನ ಮೂಲೆಮೂಲೆಗಳಲ್ಲಿ ಅಂತಹ  ಘಟನೆಗಳು ನಡೆಯುತ್ತಲೇ ಇವೆ. ಯುದ್ಧ ನಡೆದು ಕೆಲವು ಕಾರಣಾಂತರಗಳಿಂದಾಗಿ ನಿಂತು ವಿಶ್ವದಲ್ಲಿ ಶಾಂತಿ ಸೆಳೆಸುತದೆ. ಮತ್ತೆ ಯುದ್ಧವು ಪ್ರಾರಂಭವಾಗಿ ಸ್ವಲ್ಪ ದಿನಗಳವರೆಗೆ ಇರುತ್ತದೆ. ಕೊನೆಗೆ ಶಾಂತಿಯೇ ನಮ್ಮ ಉಸಿರಾಗಿರುತ್ತದೆ. ಹೀಗೆ ಯುದ್ಧ ಮತ್ತು ಶಾಂತಿ ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ. ಯಾವುದು ಯಾವತ್ತು ಬರುತ್ತದೆಂಬುದು ತಿಳಿಯದು. ಯುದ್ಧದ ನಂತರ ಶಾಂತಿ, ಪುನಃ ಯುದ್ಧ - ಹೀಗೆ  ಭೂಮಿ ಇರುವ ತನಕ ನಡೆಯುತ್ತಲೇ ಇರುತ್ತದೆ. ಈ ಯುದ್ಧಗಳು ಪ್ರಾರಂಭವಾಗಲು ತಳಹದಿಯಾದ ಕಾರಣಗಳೇನು?...

ಅತಿಯಾಸೆ, ದುರಾಸೆ, ಮತ್ಸರ, ಅಸ್ತ್ರ ಶಾಸ್ತ್ರಗಳ ಪ್ರದರ್ಶನ ಹಾಗೂ ಪುರುಷರಿಗರುವ ಭುಜಬಲ, ಅಧಿಕಾರಬಾಳ ಇತ್ಯಾದಿಗಳು ಯುದ್ಧಕ್ಕೆ ಮುಖ್ಯವಾದ ಕಾರಣಗಳು. ಪ್ರಪ್ರಥಮವಾಗಿ ಯುದ್ಧಕ್ಕೆ ಕಾರಣ ಸ್ವಾರ್ಥ. ಮನುಷ್ಯನಾದವನಿಗೆ ಸ್ವಾರ್ಥವಿರುವುದು ಸಹಜ. ಆದರೆ ಈ ಸ್ವಾರ್ಥವನ್ನು ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಹಿಡಿತದಲ್ಲಿಟ್ಟುಕೊಳ್ಳುವುದು ನಮ್ಮ ಧರ್ಮ. ಮಾತ್ರವಲ್ಲ, ಅದರಲ್ಲಿಯೇ ಜಗತ್ತಿನ ಭವಿಷ್ಯ ಅಡಗಿದೆ; ಜಗತ್ತಿನ ಶಾಂತಿ ಅಡಗಿದೆ. ಮನುಷ್ಯಮಾತ್ರನಿಗೆ "ತಾನು" "ತನ್ನದು" ಎಂಬ ಸ್ವಾರ್ಥ ಮತ್ತು ಅಹಂಕಾರದಿಂದ ಕೂಡಿದ ಭಾವನೆಯಿದೆ. ಇದು ಅನೇಕ ಯುದ್ಧಗಳಿಗೆ ಕಾರಣವಾಗಿದೆ. ೨೦೦೩ನೆಯ ಮಾರ್ಚ್ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಿದ್ದ ಅಮೇರಿಕಾ- ಇರಾಕ್ ನಡುವಣ ಯುದ್ಧ ನಡೆಯಲು ಕಾರಣ ಅಮೇರಿಕಾದ ಸ್ವಾರ್ಥವೂ ಒಂದಾಗಿದೆ. ಸೂಕ್ಷ್ಮವಾಗಿ ಪರಾಂಬರಿಸಿ ನೋಡಿದರೆ, ಇರಾಕಿಗೆ ಮೋಸಮಾಡಿದ ಅಮೆರಿಕಾವು ತನ್ನ ಸ್ವಾರ್ಥವನ್ನು ಪ್ರದರ್ಶಿಸುತ್ತದೆ. ಬ್ರಿಟನ್ ದೇಶವು ಅಮೆರಿಕಾಗೆ ಸಹಾಯ ಮಾಡಿದ್ದೂ ಒಂದು ರೀತಿಯಲ್ಲಿ ತನ್ನ ಸ್ವಾರ್ಥದಿಂದಲೇ. ಪಾಕಿಸ್ತಾನವು ಕಾಶ್ಮೀರದಂಥ ಸುಂದರ ಮತ್ತು ಪ್ರಕೃತಿ ಸಿರಿವಂತ ಪ್ರದೇಶವನ್ನು ಪಡೆಯುವ ಸ್ವಾರ್ಥದಿಂದ ಭಾರತದ ಮೇಲೆ ಯುದ್ಧ ನಡೆಸಲು ಹೊಂಚು ಹಾಕುತ್ತಿದೆ.

ಎರಡನೆಯದಾಗಿ, ಯುದ್ಧವು ರಾಜಕಾರಣದ ಪರಿಣಾಮವಾಗಿರುತ್ತದೆ. ರಾಜಕೀಯ ವಿಚಾರಗಳಿಂದಾಗಿ ಅನೇಕ ಬಾರಿ ಯುದ್ಧ ನಡೆಯುತ್ತದೆ. ಭಾರತವು ಪಾಕಿಸ್ತಾನಕ್ಕೆ ಹಾಗೂ ಪಾಕಿಸ್ತಾನವು ಭಾರತಕ್ಕೆ ಬಂದು ಕಾಶ್ಮೀರ  ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಮಾತನ್ನು ಆಡುತ್ತಿರುತ್ತಾರೆ. ಇದು ಆಗುವುದೂ ರಾಜಕೀಯದಲ್ಲೇ. ರಾಜಕಾರಣಿಗಳು ಇದಕ್ಕೆ ಮುಖ್ಯ ಆಟಗಾರರು. ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಭಾರತ - ಪಾಕಿಸ್ತಾನ ನಡುವೆ ಇರುವ ವಾಗ್ವಾದ ಕೂಡ ರಾಜಕೀಯ ಕಾರಣಗಳಿಂದಲೇ ಇರಬಹುದು. ರಾಜಕಾರಣ ಧರ್ಮಕ್ಕೆ ತುಳುಕು ಹಾಕಿಕೊಂಡು ಮತೀಯ ಗಲಭೆಗಳು ಹೆಚ್ಚಿ, ದೇಶವನ್ನೂ ವಿಶ್ವವನ್ನೂ ಅವನತಿಗೆ ಸಾಗಿಸುತ್ತಿದೆ.

ಯುದ್ಧವು ವೈಜ್ಞಾನಿಕತೆಯ ಕಾರಣದಿಂದಲೂ ನಡೆಯುತ್ತದೆ. ಅತ್ಯಂತ ಮುಂದುವರೆದ ವೈಜ್ಞಾನಿಕತೆಯು ಅನೇಕ ಘೋರವಾದ ವಿಶ್ವನಾಶಕ ವಸ್ತುಗಳನ್ನು ನಿರ್ಮಿಸುತ್ತದೆ. ಲೋಕಶಾಂತಿಗೆ ಅಗತ್ಯವಾದ ಅಹಿಂಸೆಯನ್ನು ಅಧ್ಯಾತ್ಮ ವಿಜ್ಞಾನ ಶೋಧಿಸಿದರೆ, ಭೌತ ವಿಜ್ಞಾನವು ಲೋಕ ಭಯಂಕರವಾದ ವಿಶ್ವನಾಶಕವಾದ ಹಿಂಸಾಮಯವಾದ "ಪರಮಾಣು ಬಾಂಬ್"ಗಳನ್ನೂ ನಿರ್ಮಿಸಿದ್ದು ನಿಜಕ್ಕೂ ಕಳವಳಕಾರಿಯಾಗಿದೆ. ದೇಹಬಲ, ಅಧಿಕಾರಬಲಗಳು ಭಯೋತ್ಪಾದನೆ, ಹಿಂಸೆ , ದಬ್ಬಾಳಿಕೆಗಳಿಗೆ ಬಳಸಲ್ಪಟ್ಟರೆ, ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ. ವಿವಿಧ ಬಳಗಳ ಬಳಕೆಯ ರೀತಿ ಶಾಂತಿಭರಿತವಾಗಿರಬೇಕು. ಇದರಲ್ಲಿಯೇ ಎಲ್ಲರ ಭವಿಷ್ಯ ಅಡಗಿದೆ. ವೈಜ್ಞಾನಿಕತೆಯಿಂದ ಲಾಭವೂ ಇದೆ. ಆದರೆ ನಾವು ವಿಶ್ವನಾಶಕ ವಸ್ತುಗಳನ್ನು ಸಂಶೋಧಿಸುವ ಬದಲಿಗೆ ವಿಷವೋಪಯುಕ್ತ ವಸ್ತುಗಳನ್ನು ಸಮಾಧಿಸಲು ಪ್ರಾರಂಭಿಸಬೇಕು, ಹೆಚ್ಚಿಸಬೇಕು. ಆಗ ಜಗತ್ತಿಗೆ ಉಳಿಗಾಲವಿರುತ್ತದೆ.

ಯುದ್ಧಕ್ಕೆ ಇನ್ನೊಂದು ಕರಣ "ಜಾತಿ-ಮತ ಭೇದ". ಒಂದು ಮತದವರಿಗೆ ಇನ್ನೊಂದು ಮತದವರೊಡನೆ ತಿಕ್ಕಾಟ ಪ್ರಾರಂಭವಾದಾಗ ಕೋಮು ಗಲಭೆಯುಂಟಾಗಿ ಕೊನೆಗೆ ಯುದ್ಧವಾಗಿ ಪರಿಣಮಿಸಬಹುದು. ತಾನು ನಂಬಿದ್ದಕ್ಕೂ ಇತರರು ನಂಬುವ ಶ್ರದ್ಧಾ ಸಂಬಂಧಿಯಾದ ಸಂಗತಿಗಳಿಗೂ ವ್ಯತ್ಯಾಸವಿದ್ದಾಗ ಯುಧ್ಧವುಂಟಾಗಬಹುದು.
"ಓಲೆ ಹತ್ತಿ ಉರಿದರೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದರೆ ನಿಲಬಾರದು
ಏರಿ ನೀರುಂಬೊಡೆ ಬೇಲಿ ಕೆೈಯ ಮೇವೊಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ? ಕೂಡಲಸಂಗಮದೇವಾ" - ಎಂಬ ಬಸವಣ್ಣನವರ ವಚನದ ಪ್ರಾಯರ ಜಾತಿ ಎಂಬ ಉರಿಯು ಭೂಮಿಯಲ್ಲೆಲ್ಲೆಡೆ ಹರಡಿರುವಾಗ ಮುಂದೊಂದು ದಿನ ನಾವು ಯಾರೂ ಜೀವಿಸಲು ಸಾಧ್ಯವಾಗುವುದಿಲ್ಲ. ಜಾತಿಯ ಉರಿಯು ಇಂದು ಮೈಯೆಲ್ಲಾ ನಾಲಗೆಯಾಗಿ ರಾಷ್ಟ್ರವನ್ನು ಸುಡುತ್ತಿದೆ. ಈ ಮಧ್ಯೆ ಕ್ಷುದ್ರ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ, ಪ್ರತಿಷ್ಠೆಗಾಗಿ ಧರ್ಮಕ್ಕೆ ಜಾತಿಯ ಸ್ವರೂಪ ಕೊಟ್ಟು, ಜನಾಂಗೀಯ ಭಾವನೆಗಳನ್ನು ಕೆರಳಿಸಿ ಯುದ್ಧ ಪ್ರಾರಂಭಿಸುತ್ತಾರೆ. ಗಲಭೆಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಚೋದಿಸುತ್ತಾರೆ.

ಯುದ್ಧಕ್ಕೆ ಬಾಹ್ಯ ಶಕ್ತಿಗಳ ಒತ್ತಡವೂ ಒಂದು ಕಾರಣವಾಗಿದೆ. "ತನ್ನ ಪ್ರದೇಶ ಮೇಲು ಇತರರ ಪ್ರದೇಶ ಕೀಳು. ಆದುದರಿಂದ ತಾನು ಅವರಲ್ಲಿ ಯುದ್ಧ ಮಾಡಿದರೆ ತಮಗೆ ಜಯ ಖಂಡಿತ" ಎಂಬ ಭಾವನೆಯಿನಾಗಿ ಅನೇಕ ಸಲ ಯುದ್ಧಗಳು ನಡೆಯುತ್ತವೆ. ಹೀಗೆ ಯುದ್ಧಕ್ಕೆ ಅನೇಕ ಕಾರಣಗಳಿವೆ.

ಪ್ರಥಮ ಜಾಗತಿಕ ಯುದ್ಧವು ನಡೆದಾಗ ಜಗತ್ತಿನ ಶಾಂತಿ ಕಾದಾಡಿತು. ಆಗ ಶಾಂತಿ ಸ್ಥಾಪನೆಗಾಗಿಯೇ "ಜನಾಂಗ ಸಂಘ"ವನ್ನು ೧೯೨೦ರಲ್ಲಿ ಸ್ಥಾಪಿಸಲಾಯಿತು. ಆದರೆ ಅದು ಎರಡನೇ ಮಹಾಯುದ್ಧ ನಡೆಯುವ ವೇಳೆಗೆ ತನ್ನ ಕರ್ತವ್ಯದಿಂದ ವಿಮುಖವಾಯಿತು. ಶಾಂತಿಸ್ಥಾಪನೆ ವಿಫಲವಾಯಿತು. ೧೯೪೫ರಲ್ಲಿ ಎರಡನೇ ಜಾಗತಿಕ ಯುದ್ಧ ಮುಗಿದಾಗ "ಸಂಯುಕ್ತ ರಾಷ್ಟ್ರ ಸಂಘ"ವನ್ನು ಸ್ಥಾಪಿಸಿದರು. ಆದರೆ ಅದು ಇಂದಿಗೆ ತನ್ನ ಕರ್ತವ್ಯದಿಂದ ವಿಮುಖವಾಗುತ್ತಿದೆ. ೨೦೦೩ನೇ ಮಾರ್ಚ್ ೨೧ಕ್ಕೆ ಇರಾಕ್-ಅಮೇರಿಕಾ ಯುದ್ಧ ನಡೆದಾಗ ತನ್ನ ಕರ್ತವ್ಯದಿಂದ ಸ್ವಲ್ಪ ಮಟ್ಟಿಗೆ ವಿಫಲವಾಯಿತು. ಆದಕಾರಣ ಶಾಂತಿ ಸ್ಥಾಪನೆ ತುಂಬಾ ಕಷ್ಟಕರವಾಗಿದೆ. ಯುದ್ಧಕ್ಕೆ ಆಯುಧವೇ "ಹಿಂಸೆ". ಹಿಂಸೆ ಮಾಡಿ ಜನರಿಗೆ ಹಾನಿಯುಂಟು ಮಾಡುವುದೇ ಯುದ್ಧದ ಪರಿಣಾಮ. ಅನೇಕ ಜನರಿಗೆ ಹಿಂಸೆ ನೀಡಿ ಅವರನ್ನು ದುಃಖಿಸುವ ಈ ಯುದ್ಧ ನಮಗೆ ಬೇಡ. ಯುದ್ಧ ಬೇಡವಾದಲ್ಲಿ ಅಹಿಂಸೆ ಬೆಳೆಯಬೇಕು. "ಅಹಿಂಸಾ ಪರಮೋಧರ್ಮ" ಎನ್ನುವಂತೆ ಅಹಿಂಸೆಯೇ ನಮ್ಮ ಮುಖ್ಯವಾದ ಕರ್ತವ್ಯವಾಗಬೇಕು. ಅಹಿಂಸೆಗೆ ಮೇಲಾದ ಧರ್ಮ  ಬೇರೊಂದಿಲ್ಲ. ಮಹಾತ್ಮಾಗಾಂಧೀಜಿಯವರ ಕೈಯಲ್ಲಿ "ಅಹಿಂಸೆ" ಬ್ರಿಟಿಷ್ ಸಾಮ್ರಾಜ್ಯ ಶಾಹಿಯನ್ನು ಭಾರತದಿಂದೋಡಿಸುವ ಅಸ್ತ್ರವಾಯಿತು.

ಆದರೂ ಪಾಶ್ಚಾತ್ಯ ಸಂಸ್ಕೃತಿಯನ್ನು ಸಂಪೂರ್ಣವಾಗಿ ತ್ಯಜಿಸಲು ಸಾಧ್ಯವಾಗಿಲ್ಲ. ಪಾಶಾತ್ಯ ವಿಜ್ಞಾನ ಪ್ರಗತಿ, ಯಂತ್ರ ಸಾಧನಗಳು, ರಾಜಕೀಯ, ಸಾಮಾಜಿಕ ಪ್ರಗತಿಪರ ಧ್ಯೇಯಗಳು ಮತ್ತು ಅದರ ಸ್ವತಂತ್ರ ವೈಚಾರಿಕ ಪ್ರವೃತ್ತಿ - ಇವು ಅಗತ್ಯವಾಗಿಯೂ ನಾವು ಸ್ವೀಕರಿಸಬೇಕಾದ ಸಂಗತಿಗಳು. ಆದರೆ ಅಶಾಂತಿ ನೆಲೆಸುವ ಸಂಗತಿ, ಸಂಸ್ಕೃತಿಗಳನ್ನು ತಿರಸ್ಕರಿಸಲೇ ಬೇಕು.

ತನ್ನ ಮತವನ್ನು ಪ್ರೀತಿಸುವಂತೆಯೇ ಇತರ ಮತಗಳನ್ನು ಗೌರವಿಸುವುದು ತುಂಬಾ ಮುಖ್ಯ. ಸುಖ ಶಾಂತಿ ಇರುವುದು ವಿಜ್ಞಾನ ನೀಡುವ ವಸ್ತುಗಳಲ್ಲಲ್ಲ. ಅವನ್ನು ಅನುಭವಿಸುವ ಅಂತರಂಗದಲ್ಲಿ. ಅದಕ್ಕಾಗಿ ಅಂತರಂಗದ ಸಂಸ್ಕಾರ್ರ ಅನ್ವೇಷಣೆ ಮತ್ತು ಶಾಂತಿ ಇರಲೇಬೇಕು. ಇಲ್ಲವಾದಲ್ಲಿ ಯುದ್ಧವು ಪ್ರಾರಂಭವಾಗಿ ಶಾಂತಿ ನೆಲೆಸುವ ಸಲುವಾಗಿ ಹವಣಿಸುವ ಪರಿಸ್ಥಿತಿ ಬರಬಹುದು. ಯುದ್ಧ ನಡೆಯದಂತಹ ಕಾಲವೇ ಇಲ್ಲ. ಯುದ್ಧವನ್ನು ಮಾಡದೆ ಶಾಂತಿ ನೆಲೆಸುವ ಮಾತೇ  ಇಲ್ಲ. ಆದರೆ ಒಮ್ಮೆ ಯುದ್ಧವಾಗಿ ಶಾಂತಿ ನೆಲೆಸಿದ ನಂತರ ಪುನಃ ಆ ಶಾಂತಿಯನ್ನು ಕೆಡಿಸಬಾರದು. ಅದನ್ನು ಉಳಿಸಿಕೊಳ್ಳಬೇಕು.

ಯುದ್ಧದಿಂದ ಅನೇಕ ಬಾರಿ ಒಳ್ಳೆಯ ಪಾಠ ದೊರೆತಿದೆ ಕೂಡಾ. ಉರುಕ್ಷೇತ್ರ ಯುದ್ಧ ನಡೆಯದಿರುತ್ತಿದ್ದರೆ ಪವಿತ್ರವಾದ ಭಗವದ್ಗೀತೆ ನಮಗೆ ದೊರೆಯುತ್ತಿರಲಿಲ್ಲ. ರಾಮ- ರಾವಣರ ನಡುವಿನ ಯುದ್ಧ ರಾಮಾಯಣದ ರೂಪ ತಾಳಿತು. ಯುದ್ಧದಿಂದ ಅನೇಕ ಪಾಠ ದೊರೆತರೂ ಕೂಡಾ ನಾವು ಅದರಿಂದ ಆದ ಜೀವಹಾನಿಗಳನ್ನು, ಕಷ್ಟ, ನಷ್ಟ, ದುಃಖ, ನೋವುಗಳನ್ನು ಮರೆಯಲಾಗದು. ಯುದ್ಧವು ನಡೆದ ಕಾರಣಕ್ಕೆ ಎಂದಾದರೂ ಪರಿಝಾರ ದೊರೆತಿದೆಯಾ? ಯುದ್ಧವು ಈ ಜಗದ ಅಂತ್ಯದವರೆಗೆ ನಡೆಯುತ್ತಲೇ ಇರುತ್ತದೆಯೋ ಅಥವಾ ಶಾಂತಿಯಿಂದ ಈ ಜಗತ್ತು ಇರುತ್ತದೆಯೋ? ಎಂಬುದಿನ್ನೂ ಉತ್ತರಿಸಲಾಗದ ಪ್ರಶ್ನೆ.



Monday, June 8, 2020

ಚಿಂತೆಯ ಬಿಡು

ನೆನೆಯುತ ಆ ಕ್ಷಣಗಳ ತುಡಿತವ
ಬಯಸಿದೆ ನಿದಿರೆಯ ಆಲಿಂಗನವ
ಕೆಡಿಸಿತು ಮನಸಿನ ಶಾಂತಭಾವವ
ಚಿಂತೆಯ ಅಲೆಗಳ ಅಬ್ಬರವು.

ಅರ್ಥವ ಪಡೆಯದ ಚಿಂತೆಗೆ ಕಾಣದು
ಅಂತ್ಯವ ಹಾಡುವ ಬೆಳ್ಚುಕ್ಕೆಯು
ಚಿಂತಿಸಿ ಅರ್ಥವು ಅನರ್ಥವಾಗುವುದು
ಚಿಂತಿಸುವುದರಿಂದ ಫಲವೇನು?

ಚಿಂತೆಯ ಮರೆತು ನಿರಾಳವಾಗಿರಲು
ಚಿಂತೆಗೆ ದೊರೆವುದು ಸದುತ್ತರವು
ಆಲೋಚಿಸುವ ಬುದ್ಧಿಯು ದೊರೆಯದು
ಬಲಿನೀಡಿದರೆ ಚಿಂತೆಗೆ ಮನಸ್ಸನ್ನು

ಪ್ರಶಾಂತಗೊಳಿಸು ಮನಸನು ಎಂದಿಗೂ
ನಿದಿರೆಯೂ ಬರುವಳು ಪ್ರೀತಿ ಉದುರುತ
ನಿಶ್ಚಿಂತೆಯ ನಿದಿರೆಯ ಪಡೆದರೆ
ಚಿಂತೆಗೆ ದೊರೆವುದು ದೊಡ್ಡ ಅಂತ್ಯ.

ಚಿಂತೆಯ ಬಿಡು. ನಿದಿರೆಯ ಆಲಂಗಿಸು...