Wednesday, October 6, 2021

ನವರಾತ್ರಿ

ನವರಾತ್ರಿ ಎಂದರೆ ನವದುರ್ಗೆಯರನ್ನು ಪೂಜಿಸುವ ಹಬ್ಬ. ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಶಕ್ತಿ ಸ್ವರೂಪಿಣಿಯಾದ ದುರ್ಗೆಯು ಒಂಭತ್ತು ಅವತಾರಗಳನ್ನು ತಾಳುತ್ತಾಳೆ.



*ನವರಾತ್ರಿಯ ಹಿನ್ನಲೆ*
ಪರಶಿವನ ಪತ್ನಿಯಾದ ದುರ್ಗಾಮಾತೆಯು ಅತ್ಯಂತ ಶಕ್ತಿಶಾಲಿಯಾದ ದೇವತೆಯಾಗಿದ್ದು, ಆದಿಶಕ್ತಿ ಎಂದು ಕರೆಯಲ್ಪಡುತ್ತಾಳೆ. ಆದಿ ಶಕ್ತಿಯನ್ನು ಕಾಳಿ, ಪಾರ್ವತಿ, ಗೌರಿ, ಸತಿ, ಮಹಾಮಾಯೆ ಹಾಗೂ ಮಹಿಷಾಸುರ ಮರ್ದಿನಿ ಮುಂತಾದ ವಿವಿಧ ರೂಪಗಳಲ್ಲಿ ಆರಾಧಿಸಲಾಗುತ್ತದೆ.

ಪುರಾಣಗಳಲ್ಲಿ ಹೇಳುವಂತೆ, ಮಹಿಷಾಸುರನೆಂಬ ಎಮ್ಮೆ ರೂಪದ ಅಸುರನು ತನ್ನ ಸೈನ್ಯದೊಂದಿಗೆ ದೇವಲೋಕಕ್ಕೆ ದಾಳಿ ಮಾಡಿ, ದೇವತೆಗಳನ್ನು ಹೊರಗೆ ಅಟ್ಟಿದನಂತೆ. ಆಗ ದೇವತೆಗಳೆಲ್ಲರೂ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಕಾಪಾಡುವಂತೆ ಕೇಳಿಕೊಂಡಾಗ, ಮೂರು ತ್ರಿಮೂರ್ತಿಗಳೂ ತಮ್ಮ ದೇಹದ ಶಕ್ತಿಯನ್ನೆಲ್ಲ ಸೇರಿಸಿ, ದೇವತೆಯನ್ನು ಸೃಷ್ಟಿಸಿದರು. ಎಲ್ಲಾ ದೇವರ ಶಕ್ತಿಯು ಸೇರಿ ದೇವಿಯು ದುರ್ಗೆಯ ಅವತಾರವೆತ್ತಿದಳು. ಶಕ್ತಿಗಳ ಸಂಗಮದಿಂದ ಆದ ದುರ್ಗಾ ದೇವಿಯ ಅವತಾರದಲ್ಲಿ ದೇವಿಯು 10 ಕೈಗಳನ್ನು ಹೊಂದಿರುವ ಸುಂದರವಾದ ಸ್ತ್ರೀಯಾಗಿ ಹುಟ್ಟಿದ ನಂತರ ದೇವತೆಗಳೆಲ್ಲ ಆಕೆಗೆ ಉಡುಗೊರೆಯನ್ನು ನೀಡಿದರು.

ಈಶ್ವರನು ತ್ರಿಶೂಲವನ್ನು, ವಿಷ್ಣುವು ಚಕ್ರವನ್ನು, ವರುಣ ದೇವನು ಪಾಶವನ್ನು, ಇಂದ್ರನು ವಜ್ರಾಯುಧವನ್ನು ಹಾಗೂ ವಾಯುವು ಬಾಣಗಳನ್ನು ದುರ್ಗೆಗೆ ನೀಡಿದರು. ವಸ್ತ್ರಗಳನ್ನು ಮತ್ತು ವಾಹನವಾದ ಸಿಂಹವನ್ನು ಪರ್ವತಗಳ ರಾಜ ಹಿಮವಂತನು ನೀಡಿದನು. ಎಲ್ಲಾ ಆಯುಧಗಳಿಂದ ಸನ್ನದ್ಧಳಾದ ದೇವಿಯು ಯುದ್ಧಕ್ಕೆ ಸಿದ್ಧಳಾಗಿ ಅಸುರ ಸೈನ್ಯದ ಮೇಲೆ ಆಕ್ರಮಣ ಮಾಡಿದಳು. ಒಂಭತ್ತು ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ಮಹಿಷಾಸುರನನ್ನು ದೇವಿಯು ತನ್ನ ಸಿಂಹ ಹಾಗೂ ಆಯುಧಗಳ ಸಹಾಯದಿಂದ ಸಂಹರಿಸಿದಳು. ದುರ್ಗೆಯು ಮಹಿಷಾಸುರನನ್ನು ವಧಿಸಿದ ದಿನವೇ ವಿಜಯ ದಶಮಿ.

*ದುರ್ಗೆಯ ಒಂಭತ್ತು ಅವತಾರಗಳು*
ದುಷ್ಟರ ಸಂಹಾರಕ್ಕಾಗಿ, ಶಿಷ್ಟರ ರಕ್ಷಣೆಗಾಗಿ ನವ ಅವತಾರಗಳನ್ನು ಎತ್ತಿ, ಅಸುರರನ್ನು ಸಂಹರಿಸಿದ ಶಕ್ತಿ ರೂಪಿಣಿಯೇ ದುರ್ಗಾದೇವಿ. ನವರಾತ್ರಿಯ ಒಂಭತ್ತೂ ದಿನಗಳಲ್ಲಿ ನವದುರ್ಗೆಯರನ್ನಿಟ್ಟು ಪೂಜಿಸಲಾಗುತ್ತದೆ.

*ಶೈಲ ಪುತ್ರಿ*
ನವರಾತ್ರಿಯ ಮೊದಲನೇ ದಿನವನ್ನು ಪ್ರತಿಪಾದ ಎಂದು ಕರೆಯುತ್ತಾರೆ.ಈ ದಿನ ಶೈಲಪುತ್ರಿಯ ರೂಪವನ್ನು ಪೂಜಿಸಲಾಗುತ್ತದೆ. ಶೈಲಪುತ್ರಿಯೆಂದರೆ ಪರ್ವತರಾಜನ ಮಗಳು ಎಂದರ್ಥ, ಈಶ್ವರನ ಪತ್ನಿಯಾಗಿಯೂ ಶೈಲ ಪುತ್ರಿಯನ್ನು ಆರಾಧಿಸಲಾಗುತ್ತದೆ. ಶೈಲಪುತ್ರಿಯನ್ನು ಸತಿ ದೇವಿಯ ಪುನರ್ಜನ್ಮವೆಂದು ಕರೆಯಲಾಗುತ್ತದೆ. ಪತಿಯಾದ ಶಿವನನ್ನು ತಂದೆಯು ಅವಮಾನ ಮಾಡಿದ್ದಕ್ಕಾಗಿ ಸತಿ ದೇವಿಯು ತನ್ನ ತಂದೆ ಯಜ್ಞ ಮಾಡುತ್ತಿದ್ದ ವೇಳೆ ಅಗ್ನಿಕುಂಡಕ್ಕೆ ಜಿಗಿದು ಪ್ರಾಣಾರ್ಪಣೆಗೈಯುತ್ತಾಳೆ. ಶಿವನನ್ನು ಮರಳಿ ಪಡೆಯಲು ಅವಳು ಪುನರ್ಜನ್ಮ ಪಡೆಯುತ್ತಾಳೆ. ಆದರೆ ಸತಿ ಸಾವಿನ ಬಳಿಕ ಶಿವನು ದೀರ್ಘವಾದ ಧ್ಯಾನದಲ್ಲಿ ಮುಳುಗಿ ಹೋದ. ದೇವಿ ಶೈಲ ಪುತ್ರಿಯು ಕಾಡಿಗೆ ಹೋಗಿ 16ವರ್ಷ ಕಠಿಣ ತಪಸ್ಸಿನಲ್ಲಿ ತೊಡಗಿ ನಂತರ ಶಿವನನ್ನು ಪಡೆದಳು. ದುರ್ಗೆಯ ಶುದ್ಧ ರೂಪವಾಗಿರುವ ಶೈಲಪುತ್ರಿ ನಿಸರ್ಗದ ಮಾತೆ ಎಂಬುದಾಗಿ ಪರಿಗಣಿತವಾಗಿದ್ದಾಳೆ. ಗೂಳಿಯ ಮೇಲೆ ಕುಳಿತಿರುವ ಮಾತೆ ತ್ರಿಶೂಲವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾಳೆ ಮತ್ತು ಕೈಗಳಲ್ಲಿ ತಾವರೆ ಇದೆ. ಸತಿ, ಭವಾನಿ, ಪಾರ್ವತಿ ಮತ್ತು ಹೇಮಾವತಿ ಎಂಬ ಹೆಸರೂ ಶೈಲಪುತ್ರಿಗಿದೆ.

*ಬ್ರಹ್ಮಚಾರಿಣಿ*
ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಪಾರ್ವತಿಯಾಗಿ ಹಿಮಾಲಯನ ಪುತ್ರಿಯಾಗಿ ಜನಿಸಿದ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದಾಗಿ ದೇವಿಗೆ ತಪಶ್ಚಾರಿಣೀ ಅರ್ಥಾತ್‌ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂತು. ದೈವಿಕ ಅಂಶವನ್ನು ತನ್ನಲ್ಲಿ ಮೈಗೂಡಿಸಕೊಂಡು ಶುದ್ಧಳಾಗಿರುವವಳು ಎಂಬುದಾಗಿ ಪರಿಗಣಿಸಲಾಗುತ್ತದೆ. ಬಲಕೈಯಲ್ಲಿ ಗುಲಾಬಿ ಹೂವು ಮತ್ತು ಎಡಕೈಯಲ್ಲಿ ನೀರು ಇರುವ ಕಮಂಡಲವನ್ನು ದೇವಿ ಹಿಡಿದುಕೊಂಡಿದ್ದಾಳೆ. ಮೋಕ್ಷಕ್ಕೆ ದಾರಿ ತೋರುವ ಮಾತೆಯಾಗಿದ್ದಾಳೆ ಬ್ರಹ್ಮಚಾರಿಣಿ. ಶಾಂತಿ, ಸಮೃದ್ಧಿ ಮತ್ತು ವೈವಾಹಿಕ ಸುಖವನ್ನು ಭಕ್ತರಿಗೆ ದೇವಿ ನೀಡುತ್ತಾಳೆ.

*ಚಂದ್ರ ಘಂಟ ದೇವಿ*
ನವರಾತ್ರಿಯ ಮೂರನೇ ದಿನ ಚಂದ್ರಘಂಟ ದೇವಿಯನ್ನು ಪೂಜಿಸಲಾಗುತ್ತದೆ. ದುರ್ಗಾಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟೆಯನ್ನು ದುರ್ಗಾ ಮಾತೆಯ ರೌದ್ರ ಸ್ವರೂಪವೆಂಬುದಾಗಿಯೂ ಕರೆಯಲಾಗುತ್ತದೆ. ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟ ರೂಪದಲ್ಲಿ ತೋರಿಸಿದ್ದಾರೆ. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ. ತನ್ನ ಹಣೆಯಲ್ಲಿ ಗಂಟೆಯ ಆಕಾರದ ಚಂದ್ರನನ್ನು ಹೊಂದಿರುವವಳು ಎಂದಾಗಿದೆ. ಚಂದ್ರನನ್ನು ಹೊಂದಿರುವಂತೆ ಅವಳು ಶಾಂತಿಪ್ರಿಯಳಾಗಿದ್ದಾಳೆ. ಹತ್ತು ಕೈಗಳು ಮತ್ತು ಮೂರು ಕಣ್ಣುಗಳು ದೇವಿಗಿದೆ. ಅವರು ಎಲ್ಲವನ್ನೂ ನೋಡುತ್ತಿದ್ದಾಳೆ ಮತ್ತು ಕೆಟ್ಟದ್ದು ಯಾವ ಭಾಗದಿಂದ ಬಂದರೂ ಅವರು ಅದನ್ನು ನಾಶ ಮಾಡುತ್ತಾಳೆ ಎಂದಾಗಿದೆ.

*ಕೂಷ್ಮಾಂಡ ದೇವಿ*
ಚತುರ್ಥಿ ಅಥವಾ ನಾಲ್ಕನೇ ದಿನದಂದು ದೇವಿಯು ಕೂಷ್ಮಾಂಡಿನಿಯ ಅವತಾರವೆತ್ತುತ್ತಾಳೆ. ಕೂಷ್ಮಾಂಡಿನಿಯನ್ನು ಈ ಭೂಮಿಯ ಸೃಷ್ಟಿಕರ್ತೆ ಎಂದು ಹೇಳಲಾಗುತ್ತದೆ. ಎಂಟು ಭುಜಗಳಿರುವ ಕಾರಣ ಅಷ್ಟಭುಜಾದೇವಿ ಎಂದು ಕರೆಯಲಾಗುತ್ತದೆ. ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ಇದೇ ದೇವಿಯು ತನ್ನ 'ಈಶತ್‌' ಹಾಸ್ಯದಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಆದ್ದರಿಂದ ಇವಳೇ ಸೃಷ್ಟಿಯ ಆದಿ- ಸ್ವರೂಪ ಶಕ್ತಿಯಾಗಿದ್ದಾಳೆ. ಅವಳು ಅನೇಕ ಆಯುಧಗಳನ್ನು, ಗುಲಾಬಿ, ಕಮಾಂಡಲ ಮತ್ತು ಅವಳ ಕೈಯಲ್ಲಿ ಕೆಲವು ಮಿನುಗುವಿಕೆಗಳನ್ನು ಹೊಂದಿದ್ದಾರೆ. ಅವಳ ಕೈಯಿಂದ ಹೊರಬರುವ ಬೆಳಕು ಜಗತ್ತನ್ನು ಅಂಧಕಾರದಿಂದ ದೂರವಿರಿಸುತ್ತದೆ. ಅವಳ ಸಿಂಹ - ದೈಹಿಕ ಮತ್ತು ಭಾವನಾತ್ಮಕ ಶಕ್ತಿಯನ್ನು ಸಂಕೇತಿಸುತ್ತದೆ.

*ಸ್ಕಂದ ಮಾತೆ*
ನವರಾತ್ರಿಯ ಐದನೇ ದಿನದಂದು ದುರ್ಗೆಯ ಐದನೇ ಅವತಾರವಾಗಿರುವ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ. ಕಾರ್ತಿಕೇಯನನ್ನು ತನ್ನ ತೊಡೆಯ ಮೇಲೆ ಕೂರಿಸಿರುವ ರೂಪದಲ್ಲಿ ಈ ದೇವಿಯು ತಮ್ಮ ಬಲಗೈಯಲ್ಲಿ ಕಾರ್ತಿಕೇಯನನ್ನು ಎತ್ತಿಕೊಂಡಿದ್ದಾಳೆ. ಇನ್ನೊಂದು ಬಲಗೈಯಲ್ಲಿ ಭಕ್ತರನ್ನು ಹರಸುತ್ತಿದ್ದಾಳೆ ಮತ್ತು ಎಡಗೈಯಲ್ಲಿ ತಾವರೆಯನ್ನು ಹಿಡಿದುಕೊಂಡಿದ್ದಾಳೆ. ದೇವಿ ಸ್ಕಂದಮಾತೆಯು ನಾಲ್ಕು ಕೈಗಳು ಮತ್ತು ಮೂರು ಕಣ್ಣುಗಳನ್ನು ಹೊಂದಿದ್ದಾಳೆ.

*ಕಾತ್ಯಾಯಿನಿ*
ನವರಾತ್ರಿಯ ಆರನೇ ದಿನ ಕಾತ್ಯಾಯಿನಿಯನ್ನು ಆರಾಧಿಸಲಾಗುತ್ತದೆ. ಒಮ್ಮೆ ಕಾತ್ಯಾಯನ್‌ ಎನ್ನುವ ಋಷಿಯು ಪಾರ್ವತಿ ದೇವಿಯಂತಹ ಮಗಳನ್ನು ಪಡೆಯಬೇಕು ಎಂದು ಆಶಿಸಿ ಭಕ್ತಿಯಿಂದ ತಪಸ್ಸನ್ನು ಮಾಡುತ್ತಾನೆ. ಋಷಿಯ ಭಕ್ತಿಗೆ ಮೆಚ್ಚಿದ ದುರ್ಗಾ ಮಾತೆಯು ಆಶೀರ್ವಾದ ಮಾಡುತ್ತಾಳೆ. ಅಂತೆಯೇ ಮಗಳು ಹುಟ್ಟಿದ ಮೇಲೆ ಕಾತ್ಯಾಯಿನಿ ಎಂದು ಹೆಸರಿಟ್ಟರು. ಕಾತ್ಯಾಯಿನಿಯು ದೊಡ್ಡವಳಾದ ನಂತರ ತನ್ನ ಹತ್ತು ಕೈಗಳಲ್ಲಿ ಶಸ್ತ್ರಾಸ್ತ್ರ ಹಿಡಿದು ದುಷ್ಕೃತ್ಯ ಎಸಗುವ ರಾಕ್ಷಸರ ನಾಶ ಮಾಡಲು ಜಗತ್ತನ್ನು ಸುತ್ತಲು ಪ್ರಾರಂಭಿಸಿದಳು. ದುಷ್ಟ ರಾಕ್ಷಸರ ಸಂಹಾರಕ್ಕಾಗಿ ದುರ್ಗಾದೇವಿಯು ಅವತರಿಸಿ ಬಂದಳು ಎಂದು ಹೇಳಲಾಗುತ್ತದೆ. ಕಾತ್ಯಾಯಿನಿ ಉದ್ದನೆಯ ಕೂದಲನ್ನು ಮುಕ್ತವಾಗಿ ಬಿಟ್ಟಿದ್ದು ಮತ್ತು ತಮ್ಮ ಹದಿನೆಂಟು ಕೈಗಳಲ್ಲಿ ಒಂದೊಂದು ಆಯುಧವನ್ನು ಹೊಂದಿದ್ದಾಳೆ. ಕಾತ್ಯಾಯಿನಿ ರೂಪವು ಭಯವನ್ನುಂಟು ಮಾಡುವಂತಿದ್ದರೂ ಅವರು ತಾಳ್ಮೆ ಮತ್ತು ಶಾಂತಿಯನ್ನು ನೀಡುವವಳಾಗಿದ್ದಾಳೆ. ದೇವಿಯ ಮೈಯಿಂದ ಬಿಳಿ ಬಣ್ಣದ ಬೆಳಕೊಂದು ಬರುತ್ತಿದ್ದು ಇದು ಕತ್ತಲೆಯನ್ನು ದೂರಮಾಡುತ್ತದೆ ಮತ್ತು ಕೆಟ್ಟದ್ದನ್ನು ನಾಶ ಮಾಡುತ್ತದೆ.

*ಕಾಳ ರಾತ್ರಿ*
ನವರಾತ್ರಿಯ ಏಳನೇ ದಿನದಂದು ತಾಯಿ ಕಾಲರಾತ್ರಿಯನ್ನು ಪೂಜಿಸಲಾಗುವುದು. ಈ ರೂಪದಲ್ಲಿ ತಾಯಿಯು ತುಂಬಾ ರೌದ್ರಾವತಾರ ಮತ್ತು ಕಪ್ಪಾಗಿ ಕಾಣುತ್ತಾಳೆ. ಹೆಸರೇ ಹೇಳುವಂತೆ ಇದು ತಾಯಿಯ ಕರ್ಗತ್ತಲು ಮತ್ತು ಸಮಯದ ರೂಪವಾಗಿದೆ. ರೌದ್ರಾವತಾರ ಮತ್ತು ತುಂಬಾ ಉಗ್ರ ರೂಪದಲ್ಲಿರುವ ದುರ್ಗೆಯು ಕಾಲರಾತ್ರಿಯ ರೂಪ ಧಾರಣೆ ಮಾಡಿ, ತನ್ನ ಬಂಗಾರದ ಮೈಬಣ್ಣದ ಚರ್ಮವನ್ನು ಕಿತ್ತು ರಾಕ್ಷಸರ ವಿರುದ್ಧ ಹೋರಾಡಲು ಹೋಗುತ್ತಾಳೆ. ಕಾಳರಾತ್ರಿಯು ಎಲ್ಲಾ ರೀತಿಯ ದುಷ್ಟಶಕ್ತಿ, ದುಷ್ಟತೆ ಮತ್ತು ನಕಾರಾತ್ಮಕ ಶಕ್ತಿ ಹಾಗೂ ಭೀತಿ ದೂರ ಮಾಡುತ್ತಾಳೆ. ಕಾಲರಾತ್ರಿಯು ತನ್ನ ಭಕ್ತರಿಗೆ ಹೆಚ್ಚಿನ ಸಂತೋಷ ಹಾಗೂ ತೃಪ್ತಿ ಕರುಣಿಸುವುದರಿಂದಾಗಿ ಆಕೆಯನ್ನು ಶುಭಾಂಕರಿ ಅಥವಾ ಪವಿತ್ರವೆಂದು ಪರಿಗಣಿಸಲಾಗಿದೆ ಅವಳು ನಾಲ್ಕು ಕೈಗಳನ್ನು ಮತ್ತು ಮೂರು ಕಣ್ಣುಗಳನ್ನು ಹೊಂದಿರುತ್ತಾಳೆ. ಅವಳ ಎಡ ಕೈಗಳು ವಜ್ರವನ್ನು ಒಯ್ಯುತ್ತಿರುವಾಗ ಮತ್ತು ದುಷ್ಟ ಗುರಿಯನ್ನು ಕೆಟ್ಟದ್ದನ್ನು ಗುರಿಯಾಗಿಟ್ಟುಕೊಂಡು, ಬಲಗೈಗಳು ಭಕ್ತರನ್ನು ಆಶೀರ್ವದಿಸಿ ಮತ್ತು ಅವರಿಗೆ ರಕ್ಷಣೆ ನೀಡುತ್ತವೆ. ಅವಳು ದೇವತೆ ಮಹಾಕಾಳಿಯನ್ನು ಹೋಲುತ್ತಾಳೆ.

*ಮಹಾ ಗೌರಿ*
ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಮಹಾಗೌರಿಯು ತನ್ನ 16ನೇ ವಯಸ್ಸಿನ ಯೌವ್ವನೆಯಾಗಿ ಕಾಣಿಸಿಕೊಳ್ಳುತ್ತಾಳೆ. ಗೌರಿ ಎಂದರೆ ಆಕೆಯು ಗಿರಿ ಅಥವಾ ಪರ್ವತದ ಮಗಳೆಂದು ಹೇಳಲಾಗುತ್ತದೆ. ಗೂಳಿ ಮೇಲೆ ಪ್ರಯಾಣಿಸುವ ಗೌರಿ ತನ್ನ ಕೈಯಲ್ಲಿ ತ್ರಿಶೂಲದೊಂದಿಗೆ ಢಮರುವನ್ನು ಹಿಡಿಕೊಂಡಿರುತ್ತಾಳೆ. ತಾಯಿ ದುರ್ಗೆಯು ಭೂಮಿಯ ಮೇಲೆ ಜನ್ಮವನ್ನು ಪಡೆದು, ಮರಳಿ ದೇವಲೋಕಕ್ಕೆ ಹೋಗಿ ಶಿವನನ್ನು ಮದುವೆಯಾಗಲು ಬಯಸುತ್ತಾಳೆ. ನಾರದರ ಸಲಹೆಯಂತೆ ಶಿವನನ್ನು ಒಲಿಸಿಕೊಳ್ಳಲು ತಪಸ್ಸು ಮಾಡುತ್ತಾಳೆ. ಆಕೆ ಸಂಪೂರ್ಣವಾಗಿ ತಪಸ್ಸಿನಲ್ಲಿ ಮಗ್ನವಾಗಿ ಆಹಾರ, ನೀರನ್ನು ತ್ಯಜಿಸಿರುವ ಸಮಯದಲ್ಲಿ ಆಕೆಯ ದೇಹದಲ್ಲಿ ಧೂಳು, ಕೊಳೆ ತುಂಬಿಕೊಳ್ಳುತ್ತದೆ. ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗುತ್ತದೆ. ಸಾಔಇರಾರು ವರ್ಷಗಳ ತಪಸ್ಸಿನ ನಂತರ ಶಿವನು ಆಕೆಯಿಂದ ಪ್ರಭಾವಿತನಾಗಿ ಆಕೆಯ ದೇಹವನ್ನು ಹೊಳೆಯುವಂತೆ ಮಾಡಲು ಗಂಗೆಯನ್ನು ಹರಿಯಲು ಬಿಡುತ್ತಾನೆ. ಇದರಿಂದಾಗಿ ಗೌರಿಯು ಕಾಂತಿಯುತವಾಗಿ, ಶ್ವೇತವರ್ಣದಲ್ಲಿ ಧ್ಯಾನಾಸಕ್ತಳಾಗಿ ಕಾಣುತ್ತಾಳೆ.

*ಸಿದ್ಧಿಧಾತ್ರಿ*
ನವಮಿಯಂದು ದುರ್ಗೆಯು ಒಂಭತ್ತನೇ ಅವತಾರವಾದ ಸಿದ್ಧಿಧಾತ್ರಿಯ ರೂಪದಲ್ಲಿರುತ್ತಾಳೆ. ಸಿದ್ಧಿಧಾತ್ರಿ ದೇವಿಯು ತ್ರಿಮೂರ್ತಿಗಳಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಆಧ್ಯಾತ್ಮಿಕ ವೈಭವ ಹಾಗೂ ಪರಿಪೂರ್ಣತೆ ನೀಡುತ್ತಾಳೆ. ಅಷ್ಟ ಮಹಾಸಿದ್ಧಿಯನ್ನು ನಿರ್ಮಿಸಿ ಅದನ್ನು ತ್ರಿಮೂರ್ತಿಗಳಿಗೆ ನೀಡುತ್ತಾಳೆ. ತಾಯಿ ಸಿದ್ಧಿಧಾತ್ರಿಯು ಪರಿಪೂರ್ಣತೆ, ಎಲ್ಲಾ ರೀತಿಯ ಶಕ್ತಿ, ವೈಭವ ಮತ್ತು ಮಹಿಮೆಯ ಮೂಲ. ಅವರು ನಾಲ್ಕು ಕೈಗಳನ್ನು ಹೊಂದಿದ್ದು, ಅವಳು ತ್ರಿಶೂಲ, ಗದೆ, ಕಮಲ, ಶಂಖ ಮತ್ತು ಸುದರ್ಶನ ಚಕ್ರವನ್ನು ಹಿಡಿದುಕೊಂಡಿದ್ದಾರೆ. ಕಮಲದ ಮೇಲೆ ಕುಳಿತು, ಆಕೆಯು ಎಲ್ಲಾ ಭಕ್ತರ ಮೇಲೆ ಆಶೀರ್ವಾದವನ್ನು ನೀಡುತ್ತಿದ್ದಾಳೆ.

ಹೀಗೆ ನವರಾತ್ರಿಯ ಒಂಭತ್ತೂ ದಿನಗಳಲ್ಲಿ ನವದುರ್ಗೆಯರನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ ಎನ್ನಲಾಗುತ್ತದೆ..



Friday, January 8, 2021

ಮತ್ತೆ ಒಂದಾದ ಬದುಕು


"ನಮಸ್ಕಾರ ರಾಂ ಭಟ್ರೇ... ಊಟ ಆಯ್ತೋ??" ಎನ್ನುತ್ತಾ ತಮ್ಮ ಡೊಳ್ಳು ಹೊಟ್ಟೆಯನ್ನು ಆಡಿಸುತ್ತಾ, ಇನ್ನೇನು ಊಟಕ್ಕೆ ಹೊರಡೋಣ ಎನ್ನುತ್ತಿರುವಾಗ ಬಂದೇ  ಬಿಟ್ರು ಶ್ರೀನಿವಾಸರಾಯರು. ಶ್ರೀನಿವಾಸ ರಾಯರು ನಮ್ಮ ಆಪ್ತರು. ಅನೇಕ ವರ್ಷಗಳಿಂದಲೂ ನೆನಪಾದಾಗೆಲ್ಲ ನಮ್ಮ ಮನೆಗೆ ಬಂದು ವಿಚಾರಿಸಿ ಹೋಗುವವರು. ಇತ್ತೀಚಿಗೆ ನಮ್ಮ ಮನೆಯಲ್ಲಿ ನಾನು ಹಾಗೂ ನನ್ನ ಧರ್ಮಪತ್ನಿ ಜಾನಕಿ ಇಬ್ಬರೇ ಮನೆಯಲ್ಲಿ ಇರುವುದು ಅಂತ ಗೊತ್ತಾದ ಮೇಲಂತೂ ಬಂದು ವಿಚಾರಿಸಿಕೊಂಡು ಹೋಗೋದು ತಮ್ಮ ಕರ್ತವ್ಯ ಎಂಬಂತೆ ಪಾಲಿಸುತ್ತಾರೆ. 

"ಬನ್ನಿ ಬನ್ನಿ ಶ್ರೀನಿವಾಸರಾಯರೇ.ಈಗಷ್ಟೇ ಊಟಕ್ಕೆ ಹೊರಡಲು  ಎದ್ದಾಗ ನೀವು ಬಂದ್ರಿ. ನಮ್ಮ ಇಷ್ಟರು ಅಂತ ಇದಕ್ಕೆ ಹೇಳೋದು.... ಬನ್ನಿ ಜೊತೆಗೆ ಊಟ ಮಾಡೋಣಂತೆ.." ಅಂತ  ಅಂದು ಅವರಿಗೂ ಒಂದು ಬಾಳೆ ಎಲೆ ಹಾಸಲು ಜಾನಕಿಗೆ ತಿಳಿಸಿದೆ. ಈ ಇಳಿವಯಸ್ಸಿನಲ್ಲೂ ಒಂಚೂರೂ ಅಸಹಿಷ್ಣುತೆ ತೋರಿಸದೆ, ನಾನು ಹೇಳಿದ ಎಲ್ಲಾ ಕೆಲಸಗಳನ್ನೂ ನಗುಮೊಗದಿಂದ ಆನಂದಿಸಿ ಮಾಡೋದು ನನ್ನ ಜಾನಕಿಯ ಗುಣ. ಅಂತೆಯೇ ಆವತ್ತೂ ಕೂಡಾ ನಗುಮುಖದಿಂದ ಶ್ರೀನಿವಾಸರಾಯರನ್ನು ಸ್ವಾಗತಿಸಿ ಊಟಕ್ಕೆ ಎಂದು ಬಾಳೆ ಎಲೆ ಹಾಸಿದಳು. ಅವಳ ಆ ಮುದ್ದಾದ ಮುಖದಲ್ಲಿ ಸೌಂದರ್ಯ ಇನ್ನೂ ಹಸಿ ಹಸಿಯಾಗೇ  ಇತ್ತು. ನಮಗೆ ಊಟ ಬಡಿಸಿ  ಆದಮೇಲೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಫ್ಯಾನ್ ಹಾಕಿ ತಾನು ಊಟ ಮಾಡಲೆಂದು ಹೋದಳು. 

" ಏನೇ ಹೇಳಿ ರಾಂ ಭಟ್ರೇ, ಜಾನಕಿ ಅಕ್ಕ ಮಾಡೋ ಅಡುಗೆ ರುಚಿಯನ್ನು ಮೆಚ್ಚದೆ ಇರೋದು ಸಾಧ್ಯನೇ ಇಲ್ಲ ಬಿಡಿ." ಅಂತ ಹೇಳಿ ಗಟ್ಟಿಯಾಗೊಮ್ಮೆ ತೇಗಿದರು. ಅದನ್ನು ಕೇಳಿದಾಕ್ಷಣ ನಮ್  ಜಾನಕಿ ಕಣ್ಣಂಚಲ್ಲಿ ಕಣ್ಣೇರು ಬಂದಿಳಿದದ್ದು ನಂಗೆ ಮಾತ್ರ ಗೋಚರವಾಯ್ತು. "ಶ್ರೀನಿವಾಸಣ್ಣಾ, ನೀವು ಹೊಗಳೋವಷ್ಟೇನು ಇಲ್ಲ ಬಿಡಿ. ಆದ್ರೂ, ನಂಗೆ ನಿಮ್ಮ  ಮಾತು ಕೇಳಿ ನನ್  ಮಗನ ನೆನಪೇ ಕಾಡುತ್ತದೆ. ಅದ್ಯಾವ ದುಷ್ಟಕರ್ಮದ ಫಲವೋ, ನಮ್  ಮಗ ಸಂತೋಷ ನಮ್ಮಿಂದ ದೂರ ಆಗಿ ಎರಡು ವರ್ಷ ಕಳೆಯಿತು ಅಂತ ಅನ್ನಿಸೋದೇ ಇಲ್ಲ. ಮೊನ್ನೆ ಮೊನ್ನೆ ನಮ್  ಜೊತೆ ಖುಷಿಖುಷಿಯಾಗಿದ್ದ. ಅದ್ಯಾವ ಘಳಿಗೆಯಲ್ಲಿ ಅವನಿಗೆ ಆ ಬೈಕು ತೆಗೆದು ಕೊಟ್ಟೆವೋ ಏನೋ. ಯಮಪಾಶಕ್ಕೆ ಸಿಲುಕಿಸಿದ ಹಾಗೆ ಆಯಿತು." ಅಂತ ಹೇಳಿ ಗೊಳೋ ಎಂದು ಅಳಲು ಶುರು ಮಾಡಿದಾಗ ನಾನಂತೂ ಮೂಗನಂತಾದೆ. 

ಅಂದು ಸಂತೋಷನ ೧೨ನೇ ತರಗತಿಯ ಫಲಿತಾಂಶ ಉನ್ನತ ಶ್ರೇಣಿಯಲ್ಲಿದ್ದ ಕಾರಣ ಖುಷಿಯಿಂದ ಅವನಿಗೆಂದು ಬೈಕು ತೆಗೆದು ಕೊಟ್ಟಿದ್ದೆ. ಆ ಬೈಕು ಅವನ ಪ್ರಾಣವನ್ನೇ ಕಿತ್ತುಕೊಂಡಿತು. ಇರುವ ಒಬ್ಬ  ಕಳೆದುಕೊಂಡು ಜೀವನವೇ ಜಿಗುಪ್ಸೆ ಆದ ಸಮಯದಲ್ಲಿ ನಮ್ಮ ಮನಸ್ಸಿಗೆ ಧೈರ್ಯ ತುಂಬಿದವರೇ ಈ ಶ್ರೀನಿವಾಸರಾಯರು. ಈ ಶ್ರೀನಿವಾಸರಾಯರು ತಮ್ಮ ಮಗ ರಮೇಶನ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿ ಆದ ಒಂದು ವಾರದಲ್ಲೇ ಮನೆಗೆ ಬಂದ  ಸೊಸೆಯು ಅತ್ತೆ ಮಾವನಿಗೆ ನಾನಾ ರೀತಿಯ ಕಿರುಕುಳ ನೀಡಲು ಶುರು ಮಾಡಿದಳು. ಮಗ ಆಫೀಸಿಗೆ ಹೋದ ಮರುಕ್ಷಣ ಶ್ರೀನಿವಾಸರಾಯರನ್ನು ಕೋಣೆಯೊಳಗೆ ಬಂಧಿಸಿ, ಅತ್ತೆಯನ್ನು ಕೆಲಸದ ಹೆಣ್ಣಿಗಿಂತ ಕೀಳಾಗಿ ನೋಡುತ್ತಿದ್ದಳು. ಇದೆಲ್ಲದರ ಪರಿಣಾಮ ಅತ್ತೆ  ಬೇಗನೆ ಇಹಲೋಕ ತ್ಯಜಿಸುವಂತಾಯಿತು. ಅದರ ನಂತರ ಶ್ರೀನಿವಾಸರಾಯರನ್ನು ಒಬ್ಬರನ್ನೇ ಬಿಟ್ಟು ಮಗ ಸೊಸೆ ಹೊರತು ಹೋದರು. ಹೀಗಾಗಿ ಅವರು ತಮ್ಮ ಜೀವನವನ್ನೇ  ಸಮಾಜಸೇವೆಗೆಂದು ಮೀಸಲಿಟ್ಟು ಮನೆಯನ್ನೇ ಸಣ್ಣ ಮಟ್ಟಿನ ಆಶ್ರಮದಂತೆ ನಡೆಸುತ್ತಿದ್ದಾರೆ. ಹಾಗೆಯೇ ರಾಂಭಟ್ರನ್ನು ತಮ್ಮ ಅಣ್ಣನ ಸ್ಥಾನದಲ್ಲಿಟ್ಟು ವಿಚಾರಿಸಿಕೊಂಡು ಹೋಗಲು ಅವಾಗವಾಗ ಬಂದು  ಹೋಗಿ ಮಾಡುತ್ತಾರೆ. 

ಇದ್ದಕ್ಕಿದ್ದಂತೆ ನಮ್ಮ ಮನೆಗೆ ರಮೇಶ ಬಂದ. ಅವನು ಶ್ರೀನಿವಾಸರಾಯರನ್ನು ತೊರೆದು  ವರ್ಷಗಳೇ ಕಳೆದಿದ್ದರಿಂದ ಗುರುತು ಹಿಡಿಯಲು ಸ್ವಲ್ಪ ಸಮಯ ಕಳೆಯಿತು. ಶ್ರೀನಿವಾಸರಾಯರಿಗಂತೂ ತಮ್ಮ ಮಗನನ್ನು ಕಂಡಾಗ ಖುಷಿಯಾದರೂ ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದಕ್ಕೆ ದುಃಖವೂ ಜೊತೆಯಾಗಿ ಮಾತುಗಳೇ ನಿಂತಂತಾಗಿತ್ತು. ನಾನು ಮುಂದೆ ಹೋಗಿ "ಬಾ ರಮೇಶ, ಕುಳಿತುಕೋ. ಏನು ಈ  ಕಡೆ ಬಂದಿದ್ದು?" ಎಂದೆ. 

ರಮೇಶ ಏನು ಹೇಳುತ್ತಾನೋ ಎಂದು ಕುತೂಹಲದಲ್ಲಿದ್ದಾಗ ಕಣ್ಣಲ್ಲಿ ನೀರು ತುಂಬಿಕೊಂಡು ತನ್ನ ತಂದೆಯ ಕಾಲಿಗೆ ಬಿದ್ದು ಕ್ಷಮೆ ಕೇಳಲು ಶುರು ಮಾಡಿದ. ಅಷ್ಟು ಹೊತ್ತು ಕೋಪದಿಂದ ಮುಖ ತಿರುಗಿಸಿ ನಿಂತಿದ್ದ ಶ್ರೀನಿವಾಸರಾಯರು ಮಗನ ಕಣ್ಣೀರು ನೋಡಿ ಒದ್ದಾಡಿದರು. "ಏಳು ಮಗನೇ ... ಏನಾಯಿತು? ಯಾಕೆ ಈ ರೀತಿ ಅಳುತ್ತಿದ್ದೀಯಾ ?" ಎಂದು ಅವನನ್ನು ಎಬ್ಬಿಸಿ ಕಣ್ಣೀರು ಒರಸಿದರು. ಎಷ್ಟೇ ಆದರೂ ಮಗ ಮಗಾನೇ ತಾನೇ? ಮಗನ ಕಣ್ಣೀರು ನೋಡಿದರೆ ಹೇಗೆ ಹೃದಯವನ್ನು ಕಲ್ಲು ಮಾಡಲು ಸಾಧ್ಯ??

"ನನ್ನನ್ನು ಕ್ಷಮಿಸಿ ಅಪ್ಪಾ... ಪ್ರಾಯದ ಅಹಂಕಾರದಲ್ಲಿ ನಿಮ್ಮ ಹಾಗೂ ಅಮ್ಮನ ಬೆಲೆಯನ್ನು  ನಾನು ಮರೆತೆ. ದೇವತೆಯಂಥ ಅಮ್ಮನನ್ನು ಕಳೆದುಕೊಂಡೆ. ದುಡ್ಡಿನ ಪಿಶಾಚಿಯಂತಿದ್ದ ಹೆಣ್ಣಿನ ಬಲೆಗೆ ಬಿದ್ದು ಈಗ ಎಲ್ಲ ಅನುಭವಕ್ಕೆ ಬಂತು. ಅಪ್ಪಾ, ನಾನು ಆಕೆಯನ್ನು ತೊರೆದು ಬಂದಿದ್ದೇನೆ. ನಿಮ್ಮಲ್ಲಿಗೆ ಬರಲು ಹಿಂಜರಿಕೆಯಾಗಿ ರಾಂಭಟ್ರ ಮನೆಗೆ ಬಂದು ಅವರಲ್ಲಿ ಆಶ್ರಯ ಕೇಳೋಣ ಎಂದುಕೊಂಡು ಬಂದೆ. ನೀವು ಇಲ್ಲೇ ಇದ್ದಾಗ ಮನಸ್ಸಿಗೆ ಹಿತವಾಯ್ತು. ನನ್ನನ್ನು ಕ್ಷಮಿಸಿ ಅಪ್ಪಾ. ನನ್ನನ್ನು ದಯವಿಟ್ಟು ಕ್ಷಮಿಸಿ. ಇನ್ನು ಮುಂದೆ ನನ್ನ ಜೀವನ ಪೂರ್ತಿ ನಿಮ್ಮ ಸೇವೆಗೆಂದೇ ಮುಡಿಪಾಗಿಡುತ್ತೇನೆ. ನನ್ನನ್ನು ನಿಮ್ಮ ಜೊತೆ ಇರಲು ಬಿಡಿ ಅಪ್ಪ..." ಎಂದು ಒಂದೇ ಉಸಿರಿನಲ್ಲಿ ಹೇಳಿದ. 

ಶ್ರೀನಿವಾಸರಾಯರು ಹೇಳುವ ಮುನ್ನ ನಾನೇ ಅಂದೇ - "ನೋಡು ರಮೇಶ. ನೀನು ಮಾಡಿರುವುದು ಅಪರಾಧವೇನೋ ನಿಜ. ಆದರೆ, ನಿನ್ನ ಅಪ್ಪನಿಗೆ ಯಾವತ್ತಿಗೂ ನೀನು ಮಗನೇ . ನನಗೆ ನೋಡು ಮಗನನ್ನೇ ಆ ಭಗವಂತ ಕಿತ್ತುಕೊಂಡ. ಆದರೆ ನೀನು ನಿನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಟ್ಟುಕೊಂಡು ಬಂದಿರುವೆ. ಹೀಗಿರುವಾಗ ನಿನಗೆ ಖಂಡಿತವಾಗಿಯೂ ಕ್ಷಮೆ ಇದೆ. ನಾಳೇನೇ ನಾವೆಲ್ಲರೂ ದೇವಸ್ಥಾನಕ್ಕೆ ಹೋಗಿ ದೇವರಿಗೆ ತಪ್ಪು ಕಾಣಿಕೆ ಹಾಕಿ ಬರೋಣ. ಇನ್ನು ಮುಂದೆ ನೀನು ಶ್ರೀನಿವಾಸರಾಯರನ್ನು ಚೆನ್ನಾಗಿ ನೋಡಿಕೋ. ಅವರ ಸೇವಾ ಮನೋಭಾವಕ್ಕೆ ಧಕ್ಕೆ ಬಾರದ ಹಾಗೆ ಆಶ್ರಮವನ್ನು ವಹಿಸಿಕೋ." 

" ಖಂಡಿತ ರಾಂಭಟ್ರೇ. ಅಪ್ಪ ತಮ್ಮ ಬಾಯಿಂದ ನನ್ನನ್ನು ಕ್ಷಮಿಸಿದ್ದೇನೆ ಅಂದರೆ ನನಗೂ ಸಂತೋಷವಾಗುತ್ತದೆ" ಅಂದ ರಮೇಶ. ಶ್ರೀನಿವಾಸರಾಯರು ಮೊದಲಿಗೆ ದೇವರಿಗೆ ವಂದಿಸಿ, ಅವನನ್ನು ಬಿಗಿದಪ್ಪಿ "ಮಗನೇ , ಈಗಲಾದರೂ ನಿನ್ನ ತಪ್ಪಿನ ಅರಿವಾಯಿತಲ್ಲವೇ ನಿನಗೆ. ನನಗೆ ನೀನು ನನ್ನ ಜೊತೆ ಇದ್ದರೆ  ಅಷ್ಟೇ ಸಾಕು." ಅಂದು ಅವನ ಹಣೆಗೆ ಮುತ್ತಿಕ್ಕಿದರು. 

ಅವರು ಒಂದಾದ ನೋಟ ನೋಡಿ ನಮ್ಮ ಜಾನಕಿಗೆ ಹಾಗೂ ನನಗೆ ನಮ್ಮ ಮಗನೇ  ಹಿಂದೆ ಬಂದಷ್ಟು ಸಂತೋಷವಾಯಿತು. ಅವರಿಬ್ಬರೂ ಹೀಗೆ ಚೆನ್ನಾಗಿ ಬಳಲಿ ಅಂತ ಹರಸಿ ಅವರಿಬ್ಬರನ್ನೂ ಬೀಳ್ಕೊಟ್ಟೆವು. 

ಜೀವನ ಅಂದರೆ ಇಷ್ಟೇ. ಇದ್ದಾಗ ಸಂತೋಷವನ್ನು ಹಂಚಿಕೊಂಡು ಸಂಬಂಧಗಳಿಗೆ ಅದರಲ್ಲೂ ಹೆತ್ತವರ ಬಂಧಕ್ಕೆ  ಬೆಲೆ ಕೊಟ್ಟು ಅವರನ್ನು ಚೆನ್ನಾಗಿ ನೋಡಿಕೊಳ್ಳುವುದೇ ಪರಮ ಧರ್ಮ . ಅಲ್ಲವೇ?