Saturday, July 23, 2022

ತುಳಸೀ ಗಿಡ ಒಣಗುವುದಕ್ಕೆ ಮುಖ್ಯ ಕಾರಣಗಳು‌...

ತುಳಸೀ ಗಿಡ ಒಣಗುವುದಕ್ಕೆ ಮುಖ್ಯ ಕಾರಣಗಳು‌...

🙏೧. ಕುಂಡದಲ್ಲಿ ಹಾಕಿದರೆ ಅಷ್ಟು ಬೆಳವಣಿಗೆ ಆಗುವುದಿಲ್ಲ, ಬೇರು ಬಿಡುವುದಕ್ಕೆ ಸ್ಥಳಾವಕಾಶ ಕಮ್ಮಿ ಇರುತ್ತೆ..
🙏೨. ತುಳಸೀ ಗಿಡವನ್ನು ಸ್ನಾನ ಮಾಡದೇ ಮುಟ್ಟಿದರೆ, ಮೈಲಿಗೆ ಇರುವಾಗ ಬಿಡಿಸಿದರೆ, ಮೈಲಿಗೆ ಇರುವವರು ಮುಟ್ಟಿದರೆ, ಬೇಗ ಒಣಗುವುದು..
🙏೩. ತುಳಸಿಯನ್ನು ಉಗುರಿನಿಂದ ಕಿತ್ತರೆ, ಊಟದ ನಂತರ ಪೂಜಿಸುವ ಗಿಡದಿಂದ ತುಳಸಿ ಕಿತ್ತರೆ ಬೇಗ ಒಣಗುತ್ತದೆ..
🙏೪. ಅಶುಚಿಯಾದ ನೀರನ್ನು, ಮಡಿಯಿಲ್ಲದ ನೀರನ್ನು ಹಾಕಿದರೂ ತುಳಸೀಗಿಡ ಒಣಗುವುದು..
🙏೫. ತುಳಸೀ ಗಿಡಕ್ಕೆ ಗಿಡ ಬೆಳೆದ ಹಾಗೇ ಬೇರೆ ಮಣ್ಣನ್ನು ಹಾಕುತ್ತಿರಬೇಕು, ಇಲ್ಲದಿದ್ದರೆ ಫಲವತ್ತತೆ ಇಲ್ಲದೇ ಬೇಗ ಒಣಗುವುದು..
🙏೬. ತುಂಬಾ ತುಳಸೀ ಗಿಡ ಒಣಗುತ್ತಿದ್ದರೆ ಮೃತ್ತಿಕೆಯನ್ನು ತಂದು ತುಳಸೀ ಗಿಡದಲ್ಲಿ ಹಾಕಿ , ಚೆನ್ನಾಗಿ ಬೆಳೆಯುವುದು..
🙏೭. ಮನೆಯ ಮೇಲೆ ದುಷ್ಟಗ್ರಹ ಪ್ರಭಾವ ಬಿದ್ದಾಗ, ಮಾಟ ಮಂತ್ರ ದೋಷವಾದಾಗ , ಅದನ್ನು ತುಳಸೀ ತಡೆಯುವುದು..ಕೆಲವೊಂದು ಅಹಿತಕರ ಸನ್ನಿವೇಶದಿಂದ ನಿಮ್ಮನ್ನು ರಕ್ಷಿಸುವ ಸಮಯದಲ್ಲಿ ತುಳಸೀ ಒಣಗುವುದು ಉಂಟು..ಇದು ಎಚ್ಚರಿಕೆಯ ಸಂದೇಷವೂ ಕೂಡ..
🙏೮. ಪ್ರತಿದಿನ ತುಳಸೀ ನೀರನ್ನು ಕುಡಿಯುವುದರಿಂದ ಮಾಟ ಮಂತ್ರ ತಟ್ಟುವುದಿಲ್ಲ..
🙏೯. ತುಳಸೀಗಿಡದ ಮುಂದೆ ಪ್ರತಿದಿನ ದೀಪ ಹಚ್ಚುವುದರಿಂದ ದುಷ್ಟಶಕ್ತಿಗಳು ಮನೆಯನ್ನು ಪ್ರವೇಶ ಮಾಡುವುದಿಲ್ಲ, ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಲಕ್ಷ್ಮೀಕಟಾಕ್ಷವಾಗುವುದು..
🙏೧೦. ತುಳಸೀ ಪೂಜೆಯನ್ನು ಪೂರ್ವ ಅಥವಾ ಉತ್ತರಾಭಿಮುಖವಾಗಿ ಮಾಡುವುದು ಶುಭ, ಉತ್ತರ ಅಥವಾ ಈಶಾನ್ಯ ಅಭಿಮುಖವಾಗಿ ಮಾಡುವುದು ಅತ್ಯಂತ ಶುಭ..
🙏೧೧. ತುಳಸೀ ಬಿಡಿಸುವಾಗ ವಿಷ್ಣುಪರಮಾತ್ಮರ ಕ್ಷಮೆ ಕೋರಿ, ಗಿಡವನ್ನು ಅಲ್ಲಾಡಿಸಿ, ಒಣಗಿದ ಎಲೆಯಲ್ಲಾ ಉದುರಿದ ನಂತರ ತುಳಸಿಯನ್ನು ಬಿಡಿಸಿ..
ನೀವು ತುಳಸೀ ಬಿಡಿಸುವಾಗ ತುಳಸಿ ನೆಲಕ್ಕೆ ಬಿದ್ದರೆ "ಬ್ರಹ್ಮಹತ್ಯಾ" ದೋಷ ಬರುವುದು..
ನೆಲಕ್ಕೆ ಬಿದ್ದ ತುಳಸೀ ಪೂಜಿಸಬಾರದು.

(ಸಂಗ್ರಹ)

Saturday, July 9, 2022

ನಾಮ ರಾಮಾಯಣ

ರಾಮಾಯಣವು  ಮಹರ್ಷಿ ವಾಲ್ಮೀಕಿ ಬರೆದ ಮಹಾ ಗ್ರಂಥ. ಈ ರಾಮಾಯಣ ೨೪೦೦೦ ಶ್ಲೋಕಗಳನ್ನೊಳಗೊಂಡು, ೭ ಪುಸ್ತಕಗಳಾಗಿ ವಿಭಜನೆ ಮಾಡಲಾಗಿದೆ. ಈ ರಾಮಾಯಣವನ್ನು ಒಂದೇ ಸಲಕ್ಕೆ ಓದಿ ಮುಗಿಸಲು ಅಸಾಧ್ಯವಾದ ಮಾತು. ಹೀಗಾಗಿ, ರಾಮಾಯಣದ ಶ್ಲೋಕವನ್ನು ಚಿಕ್ಕದಾಗಿ ಮಹರ್ಷಿ ವಾಲ್ಮೀಕಿ ಅವರು ೧೦೮ ಶ್ಲೋಕಗಳ ನಾಮ ರಾಮಾಯಣ ಎಂಬುದಾಗಿ ರಚಿಸಿದ್ದಾರೆ. ಇದು ಸಂಪೂರ್ಣ ರಾಮಾಯಣದ ಹಾಗೆಯೇ ಶ್ರೀ ರಾಮ ದೇವರ  ಎಲ್ಲ ಕಥೆಗಳನ್ನು ೧೦೮ ನಾಮದಲ್ಲಿ ವರ್ಣಿಸಿ ರಚಿಸಲಾಗಿದೆ. ಇದನ್ನು ಏಕಶ್ಲೋಕೀ ರಾಮಾಯಣ ಎಂದೂ ಕರೆಯುತ್ತಾರೆ. ಈ ಶ್ಲೋಕವನ್ನು ೭ ಭಾಗಗಳಾಗಿ ವಿಂಗಡಿಸಲಾಗಿದೆ - ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ಧ ಕಾಂಡ, ಉತ್ತರಕಾಂಡ. 


 ॥ ನಾಮರಾಮಾಯಣ ॥
॥ ಬಾಲಕಾಂಡಃ ॥


ಶುದ್ಧಬ್ರಹ್ಮಪರಾತ್ಪರ ರಾಮ ।
ಕಾಲಾತ್ಮಕಪರಮೇಶ್ವರ ರಾಮ ।
ಶೇಷತಲ್ಪಸುಖನಿದ್ರಿತ ರಾಮ ।
ಬ್ರಹ್ಮಾದ್ಯಮರಪ್ರಾರ್ಥಿತ ರಾಮ ।

ಚಂಡಕಿರಣಕುಲಮಂಡನ ರಾಮ ।
ಶ್ರೀಮದ್ದಶರಥನನ್ದನ ರಾಮ ।
ಕೌಸಲ್ಯಾಸುಖವರ್ಧನ ರಾಮ ।
ವಿಶ್ವಾಮಿತ್ರಪ್ರಿಯಧನ ರಾಮ ।

ಘೋರತಾಟಕಾಘಾತಕ ರಾಮ ।
ಮಾರೀಚಾದಿನಿಪಾತಕ ರಾಮ ।
ಕೌಶಿಕಮಖಸಂರಕ್ಷಕ ರಾಮ ।
ಶ್ರೀಮದಹಲ್ಯೋದ್ಧಾರಕ ರಾಮ ।

ಗೌತಮಮುನಿಸಮ್ಪೂಜಿತ ರಾಮ ।
ಸುರಮುನಿವರಗಣಸಂಸ್ತುತ ರಾಮ ।
ನಾವಿಕಧಾವಿಕಮೃದುಪದ ರಾಮ ।
ಮಿಥಿಲಾಪುರಜನಮೋಹಕ ರಾಮ ।

ವಿದೇಹಮಾನಸರಂಜಕ ರಾಮ ।
ತ್ರ್ಯಂಬಕಕಾರ್ಮುಖಭಂಜಕ ರಾಮ ।
ಸೀತಾರ್ಪಿತವರಮಾಲಿಕ ರಾಮ ।
ಕೃತವೈವಾಹಿಕಕೌತುಕ ರಾಮ ।

ಭಾರ್ಗವದರ್ಪವಿನಾಶಕ ರಾಮ ।
ಶ್ರೀಮದಯೋಧ್ಯಾಪಾಲಕ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥

 

 


 ॥ ಅಯೋಧ್ಯಾಕಾಂಡಃ ॥

ಅಗಣಿತಗುಣಗಣಭೂಷಿತ ರಾಮ ।
ಅವನೀತನಯಾಕಾಮಿತ ರಾಮ ।
ರಾಕಾಚನ್ದ್ರಸಮಾನನ ರಾಮ ।
ಪಿತೃವಾಕ್ಯಾಶ್ರಿತಕಾನನ ರಾಮ ।

ಪ್ರಿಯಗುಹವಿನಿವೇದಿತಪದ ರಾಮ ।
ತತ್ಕ್ಷಾಲಿತನಿಜಮೃದುಪದ ರಾಮ ।
ಭರದ್ವಾಜಮುಖಾನನ್ದಕ ರಾಮ ।
ಚಿತ್ರಕೂಟಾದ್ರಿನಿಕೇತನ ರಾಮ ।

ದಶರಥಸನ್ತತಚಿನ್ತಿತ ರಾಮ ।
ಕೈಕೇಯೀತನಯಾರ್ಪಿತ ರಾಮ ।
ವಿರಚಿತನಿಜಪಿತೃಕರ್ಮಕ ರಾಮ ।
ಭರತಾರ್ಪಿತನಿಜಪಾದುಕ ರಾಮ ॥
 
ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥

 

 

॥ ಅರಣ್ಯಕಾಂಡಃ ॥

ದಂಡಕಾವನಜನಪಾವನ ರಾಮ ।
ದುಷ್ಟವಿರಾಧವಿನಾಶನ ರಾಮ ।
ಶರಭಂಗಸುತೀಕ್ಷ್ಣಾರ್ಚಿತ ರಾಮ ।
ಅಗಸ್ತ್ಯಾನುಗ್ರಹವರ್ದಿತ ರಾಮ ।

ಗೃಧ್ರಾಧಿಪಸಂಸೇವಿತ ರಾಮ ।
ಪಂಚವಟೀತಟಸುಸ್ಥಿತ ರಾಮ ।
ಶೂರ್ಪಣಖಾರ್ತ್ತಿವಿಧಾಯಕ ರಾಮ ।
ಖರದೂಷಣಮುಖಸೂದಕ ರಾಮ ।

ಸೀತಾಪ್ರಿಯಹರಿಣಾನುಗ ರಾಮ ।
ಮಾರೀಚಾರ್ತಿಕೃತಾಶುಗ ರಾಮ ।
ವಿನಷ್ಟಸೀತಾನ್ವೇಷಕ ರಾಮ ।
ಗೃಧ್ರಾಧಿಪಗತಿದಾಯಕ ರಾಮ ।

ಶಬರೀದತ್ತಫಲಾಶನ ರಾಮ ।
ಕಬನ್ಧಬಾಹುಚ್ಛೇದನ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥


॥ ಕಿಷ್ಕಿಂಧಾಕಾಂಡಃ ॥

ಹನುಮತ್ಸೇವಿತನಿಜಪದ ರಾಮ ।
ನತಸುಗ್ರೀವಾಭೀಷ್ಟದ ರಾಮ ।
ಗರ್ವಿತವಾಲಿಸಂಹಾರಕ ರಾಮ ।
ವಾನರದೂತಪ್ರೇಷಕ ರಾಮ ।

ಹಿತಕರಲಕ್ಷ್ಮಣಸಂಯುತ ರಾಮ ।
ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ।



॥ ಸುಂದರಕಾಂಡಃ ॥

ಕಪಿವರಸನ್ತತಸಂಸ್ಮೃತ ರಾಮ ।
ತದ್ಗತಿವಿಘ್ನಧ್ವಂಸಕ ರಾಮ ।
ಸೀತಾಪ್ರಾಣಾಧಾರಕ ರಾಮ ।
ದುಷ್ಟದಶಾನನದೂಷಿತ ರಾಮ ।

ಶಿಷ್ಟಹನೂಮದ್ಭೂಷಿತ ರಾಮ ।
ಸೀತವೇದಿತಕಾಕಾವನ ರಾಮ ॥
ಕೃತಚೂಡಾಮಣಿದರ್ಶನ ರಾಮ ।
ಕಪಿವರವಚನಾಶ್ವಾಸಿತ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥


॥ ಯುದ್ಧಕಾಂಡಃ ॥

ರಾವಣನಿಧನಪ್ರಸ್ಥಿತ ರಾಮ ।
ವಾನರಸೈನ್ಯಸಮಾವೃತ ರಾಮ ।
ಶೋಷಿತಶರದೀಶಾರ್ತ್ತಿತ ರಾಮ ।
ವಿಭೀಷ್ಣಾಭಯದಾಯಕ ರಾಮ ।

ಪರ್ವತಸೇತುನಿಬನ್ಧಕ ರಾಮ ।
ಕುಮ್ಭಕರ್ಣಶಿರಶ್ಛೇದನ ರಾಮ ।
ರಾಕ್ಷಸಸಂಘವಿಮರ್ಧಕ ರಾಮ ।
ಅಹಿಮಹಿರಾವಣಚಾರಣ ರಾಮ ।

ಸಂಹೃತದಶಮುಖರಾವಣ ರಾಮ ।
ವಿಧಿಭವಮುಖಸುರಸಂಸ್ತುತ ರಾಮ ।
ಖಃಸ್ಥಿತದಶರಥವೀಕ್ಷಿತ ರಾಮ ।
ಸೀತಾದರ್ಶನಮೋದಿತ ರಾಮ ।

ಅಭಿಷಿಕ್ತವಿಭೀಷಣನುತ ರಾಮ ।
ಪುಷ್ಪಕಯಾನಾರೋಹಣ ರಾಮ ।
ಭರದ್ವಾಜಾದಿನಿಷೇವಣ ರಾಮ ।
ಭರತಪ್ರಾಣಪ್ರಿಯಕರ ರಾಮ ।

ಸಾಕೇತಪುರೀಭೂಷಣ ರಾಮ ।
ಸಕಲಸ್ವೀಯಸಮಾನಸ ರಾಮ ।
ರತ್ನಲಸತ್ಪೀಠಾಸ್ಥಿತ ರಾಮ ।
ಪಟ್ಟಾಭಿಷೇಕಾಲಂಕೃತ ರಾಮ ।

ಪಾರ್ಥಿವಕುಲಸಮ್ಮಾನಿತ ರಾಮ ।
ವಿಭೀಷಣಾರ್ಪಿತರಂಗಕ ರಾಮ ।
ಕೀಶಕುಲಾನುಗ್ರಹಕರ ರಾಮ ।
ಸಕಲಜೀವಸಂರಕ್ಷಕ ರಾಮ ।
ಸಮಸ್ತಲೋಕೋದ್ಧಾರಕ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥


 
॥ ಉತ್ತರಕಾಂಡಃ ॥

ಆಗತ ಮುನಿಗಣ ಸಂಸ್ತುತ ರಾಮ ।
ವಿಶ್ರುತದಶಕಂಠೋದ್ಭವ ರಾಮ ।
ಸಿತಾಲಿಂಗನನಿರ್ವೃತ ರಾಮ ।
ನೀತಿಸುರಕ್ಷಿತಜನಪದ ರಾಮ ।

ವಿಪಿನತ್ಯಾಜಿತಜನಕಜ ರಾಮ ।
ಕಾರಿತಲವಣಾಸುರವಧ ರಾಮ ।
ಸ್ವರ್ಗತಚಮ್ಬುಕ ಸಂಸ್ತುತ ರಾಮ ।
ಸ್ವತನಯಕುಶಲವನನ್ದಿತ ರಾಮ ।

ಅಶ್ವಮೇಧಕ್ರತುದಿಕ್ಷಿತ ರಾಮ ।
ಕಾಲಾವೇದಿತಸುರಪದ ರಾಮ ।
ಆಯೋಧ್ಯಕಜನಮುಕ್ತಿತ ರಾಮ ।
ವಿಧಿಮುಖವಿಭುದಾನನ್ದಕ ರಾಮ ।

ತೇಜೋಮಯನಿಜರೂಪಕ ರಾಮ ।
ಸಂಸೃತಿಬನ್ಧವಿಮೋಚಕ ರಾಮ ।
ಧರ್ಮಸ್ಥಾಪನತತ್ಪರ ರಾಮ ।
ಭಕ್ತಿಪರಾಯಣಮುಕ್ತಿದ ರಾಮ ।

ಸರ್ವಚರಾಚರಪಾಲಕ ರಾಮ ।
ಸರ್ವಭವಾಮಯವಾರಕ ರಾಮ ।
ವೈಕುಂಠಾಲಯಸಂಸ್ತಿತ ರಾಮ ।
ನಿತ್ಯನನ್ದಪದಸ್ತಿತ ರಾಮ ॥

ರಾಮ ರಾಮ ಜಯ ರಾಜಾ ರಾಮ ।
ರಾಮ ರಾಮ ಜಯ ಸೀತಾ ರಾಮ ॥ 


-----------------*------------------*------------------*-----------------


Sunday, June 5, 2022

ಒದ್ದಾಟದ ಸಮಯ


ನೋಡುನೋಡುತ್ತಿದ್ದಂತೆಯೇ 

ಸಮಯ ಕಳೆದು ಹೋದಂತಿದೆ 

ಮನದಾಸೆಗಳಿದ್ದಂತೆಯೇ 

ಹೂತು ಮರೆಯಾದಂತೆನಿಸುತಿದೆ 


ಪೂರೈಸುವ ತವಕವಿದ್ದರೂ 

ಸಮಯದ ಅಂತರವಿದ್ದಂತಿದೆ. 

ಮುನ್ನಡೆಯುವ ಛಲವಿದ್ದರೂ 

ಅನುಗ್ರಹದ ಕೊರತೆಯಿದ್ದಂತಿದೆ 


ಬಲ್ಲೆ ನಾ ಇದು ಏನೆಂಬುದ 

ಆ ದೇವರ ಚೆಲ್ಲಾಟವೋ?

ಮುನ್ನುಗ್ಗುವ ಸಮಯದಾಟವೋ?

ಅಲ್ಲ ನನ್ನದೇ ಮನದೊದ್ದಾಟವೋ??

 

ಸಮಯವಿದ್ದರೂ ಸಮಯವಿರದಂತೆ 

ಮನಸ್ಸಿದ್ದರೂ ಮಾರ್ಗವೇ ಇರದಂತೆ 

ಛಲವಿದ್ದರೂ ಹಂಬಲವಿರದಂತೆ 

ಯಾವ ಕಾರ್ಯವೂ ಕೈಗೂಡದಂತೆ 

ಆಟವಾಡುತಿದೆ ನನ್ನೀ "ಸಮಯ"

Tuesday, May 24, 2022

*ಗುರುಸ್ಥಾನ*

 

https://media.newstrack.in/uploads/national-news//Aug/06/big_thumb/td_5f2b8ca7c8adc.jpg

ಗುರು ಎಂದರೆ ಯಾರು??? ಗುರು ಎಂದರೆ ಮಾರ್ಗದರ್ಶಕ. ಗುರು ಎಂದರೆ ಬೆಳವಣಿಗೆಯ ದಾರಿಯನ್ನು ತೋರುವವ. ಗುರು ಸ್ಥಾನದಲ್ಲಿರುವವನು ನಿಷ್ಕಲ್ಮಶ ಹೃದಯಿ ಆಗಿರಬೇಕು. ಯಾವುದೇ ಭೇದ ಭಾವ ಇಲ್ಲದೆ, ತನ್ನ ಸ್ಥಾನಕ್ಕೆ ನಿಜವಾದ ಅರ್ಥ ನೀಡುವಂಥವನಾಗಿರಬೇಕು. ಅದು ಬಿಟ್ಟು, ದ್ವೇಷ ಅಹಂಕಾರವನ್ನೊಳಗೊಂಡು  ಕಟು ಹೃದಯಿ ಆಗಿದ್ದರೆ, ಅವನು ಆ ಗುರು ಸ್ಥಾನಕ್ಕೆ ಸರಿಹೊಂದುವವನೇ ಅಲ್ಲ. ಅಂಥವನು ಯಾವುದೇ ರೀತಿಯ ಗೌರವಕ್ಕೆ ಅರ್ಹನಲ್ಲ. 

ಗುರುಸ್ಥಾನದಲ್ಲಿ "ನನ್ನದೇನಿದೆ" ಎಂಬುದಲ್ಲ, ಆದರೆ ನನ್ನಿಂದ ಎಷ್ಟು ಜನರಿಗೆ ಒಳಿತಾಗುತ್ತದೆ ಎಂಬುದನ್ನು ನೋಡುವಂಥವರಾಗಬೇಕು. ಮಹಾನುಭಾವರ ಲಕ್ಷಣ ಏನೆಂದರೆ ಕ್ಷಮಾಗುಣ. ಗುರುಸ್ಥಾನದಲ್ಲಿರುವವರು ಕ್ಷಮಾಗುಣವನ್ನು ಮೈಗೂಡಿಸಿಕೊಂಡಿರಬೇಕು. ಜ್ನಾನಾರ್ಥಿಗಳು ತಪ್ಪು ಮಾಡುವುದು ಸಹಜ. ಗುರುಸ್ಥಾನದಲ್ಲಿರುವವರು ಅದು ತಪ್ಪು ಎಂದು ತಿಳಿದಾಗ, ಅವರನ್ನು ತಿದ್ದುವುದು ಗುರುವಿನ ಮುಖ್ಯ ಕರ್ತವ್ಯ, ಆದರೆ, ಆ ತಪ್ಪನ್ನು ಅಪರಾಧವೆನ್ನುವಂತೆ ವರ್ಗೀಕರಿಸಿ, ದ್ವೇಷದ ಭಾವನೆ ಮನಸ್ಸಲ್ಲಿಟ್ಟುಕೊಂಡಾಗ ಅವನ ಗುರುಸ್ಥಾನ ಅಲ್ಲಿಗೆ ಕೊನೆಯಾಗುತ್ತದೆ. ಯಾವುದೇ ರೀತಿಯಲ್ಲಿ ಅವನು ಗುರು ಎಂಬ ಪದಕ್ಕೆ ಅರ್ಹನಾಗಿರುವುದಿಲ್ಲ.  ಅಧಮರು, ಪಕ್ಷಪಾತಿಗಳು, ಧನಪಿಶಾಚಿಗಳು ಗುರುಸ್ಥಾನವನ್ನು ಅಲಂಕರಿಸಲು ಯೋಗ್ಯರು ಅಲ್ಲವೇ ಅಲ್ಲ. "ಹರ ಮುನಿದರೆ ಗುರು ಕಾಯ್ವನು" ಎಂಬ ಉಕ್ತಿಯೇ ಇದೆ. ಹೀಗೆ, ಗುರು ಎಂದರೆ ಸಾಕಾರ ಸಿದ್ಧಿಯನ್ನು ಕೊಡುವಂತವನು, ಸಾಕಾರ ರೂಪವನ್ನು ಕೊಡುವಂತವನು. ವಿಷ್ಣು ಸ್ವರೂಪಿ ಅವನು. ಅಯೋಗ್ಯರನ್ನು ಗುರು ಎಂದು ಕರೆಯುವುದು ಅಸಾಧ್ಯದ ಮಾತು.

ಇಂದಿನ ಯುಗದಲ್ಲಿ, ಗುರು ಎಂಬ ಪದ ತುಂಬಾ ವ್ಯಾಪಾರಿಕವಾಗಿದೆ. ಕೇವಲ ದುಡ್ಡಿನ ಮುಖ ನೋಡಿ ಗುರುಸ್ಥಾನ ಸೃಷ್ಟಿಸಿಕೊಳ್ಳುವವರು ತುಂಬಾ ಜನ ಇದ್ದಾರೆ. ಯಾರೋ ಮಹಾತ್ಮರು ಮಾಡಿದ ಕೆಲಸಗಳನ್ನು ತಾವು ಮಾಡಿದವರೆಂಬಂತೆ ಬಿಂಬಿಸಿಕೊಂಡು ತಮ್ಮನ್ನು ತಾವೇ ದೇವರಿಗಿಂತಲೂ ಮಿಗಿಲಾದವರೆಂಬಂತೆ ಬಿಂಬಿಸಿಕೊಳ್ಳುತ್ತಾರೆ. ಗುರುಸ್ಥಾನದ ಮಹಿಮೆ ಯಾರು ತಿಳಿದುಕೊಂಡಿರುತ್ತಾರೋ, ಅವರು ಯಾವುದೇ ದ್ವೇಷದ ಭಾವನೆ ಹೊಂದಿಕೊಂಡಿರುವುದಿಲ್ಲ, ಬದಲಾಗಿ ಅಜ್ಞಾನವಿದ್ದಲ್ಲಿ ಜ್ಞಾನವನ್ನೂ, ಕತ್ತಲಿದ್ದಲ್ಲಿ ಬೆಳಕನ್ನೂ, ವಿಷವಿದ್ದಲ್ಲಿ ಅಮೃತವನ್ನೂ ಬೀರುವ ಪ್ರಯತ್ನ ಮಾಡುತ್ತಾರೆ. ತನ್ನ ಅನುಯಾಯಿಗಳ ಒಳಿತನ್ನು ಬಯಸುತ್ತಾರೆ. 

ಹೀಗೆ, ಗುರುಸ್ಥಾನದಲ್ಲಿರುವವನೂ ಕೂಡಾ ತನ್ನ ಸ್ಥಾನದ  ಮಹತ್ವವನ್ನು ಮೈಗೂಡಿಸಿಕೊಂಡವನಾಗಿರಬೇಕು. ಹಾಗೂ ಪ್ರತಿಯೊಬ್ಬರೂ ಕೂಡ ಗುರುಸ್ಥಾನದಲ್ಲಿ ಯಾರನ್ನಿಡುತ್ತಾರೋ, ಅವರು ಯೋಗ್ಯರಾಗಿದ್ದರೆ ಮಾತ್ರ ಆ ಸ್ಥಾನ ನೀಡಿ ಗೌರವಿಸಿ. ಯೋಗ್ಯರಿಗೆ ಗೌರವ ನೀಡಿದಷ್ಟು ಪುಣ್ಯ ನಿಮ್ಮದಾಗುತ್ತದೆ.





ಮಾನವ ಸಂಪನ್ಮೂಲ ನಿರ್ವಹಣೆ - ಕೊರೋನಾ ಭಯದ ಎಡೆಯಲ್ಲಿ ಹೇಗೆ?


ಅತಿಯಾದ ಮಳೆಯಿಂದ ಭೂಮಿಯೇ ಕೊಚ್ಚಿ ಹೋಗುವಂತೆ, ಅತಿಯಾದ ಅನಾಚಾರಗಳಿಂದ ಬೇಸತ್ತ ಆ ಭಗವಂತನೇ ಜಗತ್ತಿಗೆ ಬುದ್ಧಿ ಕಲಿಸಲು ಮುಂದಾದ ಹಾಗೆ ಚೀನಾ ಮೂಲದ ಕೋವಿಡ್-19 ಎಂಬ ವಿಷಾಣು ಪ್ರತಿಯೊಬ್ಬರೂ ಭಯದಿಂದ ನಲುಗುವಂತೆ ಮಾಡಿದೆ. ಈ ಕೋವಿಡ್-19 ಎಂಬ ಮಹಾಮಾರಿ ವಿಶ್ವದೆಲ್ಲೆಡೆ ತಾಂಡವವಾಡುತ್ತಿದ್ದಂತೆ, ಅಲ್ಲಿ ಕೆಲವರು ತಮ್ಮ ಮನೆಯಲ್ಲಿಯೇ ತಮ್ಮ ಲ್ಯಾಪ್ ಟಾಪನ್ನು ಆನ್ ಮಾಡಿ ತಾವು ಕೆಲಸ ಮಾಡುತ್ತಿರುವ ಕಚೇರಿಯ ಸಿಬ್ಬಂದಿಗಳೊಡನೆ ಚರ್ಚೆ, ಸಭೆ ನಡೆಸಲು ತಯಾರಿ ಮಾಡುತ್ತಿದ್ದಾರೆ. ಇನ್ನು ಕೆಲವರು ತಮಗಿದ್ದ ಕೆಲಸವನ್ನು ಕಳೆದುಕೊಂಡು ಹೊಸ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮತ್ತೆ ಕೆಲವರು ಕೆಲಸವಿಲ್ಲದೇ, ಮನೆಯಲ್ಲಿಯೇ ಕುಳಿತು ಮುಂದೇನು ಮಾಡಬಹುದು ಎನ್ನುವುದನ್ನು ಆಲೋಚಿಸುತ್ತಿದ್ದಾರೆ. ಈ ಕೋವಿಡ್-19 ಮಹಾಮಾರಿಯು ಎಲ್ಲರ ಜೀವನವನ್ನು ಅಸ್ತವ್ಯಸ್ತಗೊಳಿಸಿರುವುದಂತೂ ಕಟುಸತ್ಯ. ಸಣ್ಣ, ಮಧ್ಯಮದಿಂದ ಹಿಡಿದು ದೊಡ್ಡ ಉದ್ಯಮಗಳಿಗೂ ತಮ್ಮ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಗಳನ್ನು ಹೇಗೆ ನಿಭಾಯಿಸುವುದು ಎನ್ನುವುದು ಉತ್ತರ ಸಿಗದ ಪ್ರಶ್ನೆಯಂತೆ ಕಾಡುತ್ತಿದೆ. 

ಅನೇಕ ಉದ್ಯಮಗಳಿಗೆ ಮಾಮೂಲಿನಂತೆ ಕಾರ್ಯನಿರ್ವಹಿಸುವುದು ಕಷ್ಟಕರವೆನಿಸಿದೆ. ಲಾಕ್ ಡೌನ್, ಸಾರ್ವಜನಿಕರಿಗೆ ಹೇರಿದ ನಿರ್ಬಂಧನೆಗಳು ಇತ್ಯಾದಿಗಳಿಂದ ಅನೇಕ ಉದ್ಯಮಗಳು ಕಚೇರಿಗಳಲ್ಲಿ ಕಾರ್ಯನಿರ್ವಹಿಸದೇ, ತಮ್ಮ ಸಿಬ್ಬಂದಿವರ್ಗದವರನ್ನು ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಆದೇಶಿಸಿರುವುದು ಗೊತ್ತಿರುವ ಸಂಗತಿಯೇ. ಹಾಗೆ ಮಾಡದೆ ಬೇರೆ ಉಪಾಯವೂ ಇಲ್ಲವೆನ್ನುವುದು ಅರಗಿಸಲಾಗದ ಸತ್ಯ. ಹೀಗೆ ಕಾರ್ಯನಿರ್ವಹಣೆ ಮಾಡುವುದು ಬಹುತೇಕ ಕಚೇರಿಗಳಿಗೆ ಅಸಾಧ್ಯ, ಯಾಕೆಂದರೆ ಅವರ ಕಾರ್ಯನಿರ್ವಹಣೆಯ ಸ್ವರೂಪ ಅಂತಹುದು. ಮಾತ್ರವಲ್ಲದೆ, ಹಲವಾರು ಉದ್ಯಮಗಳಲ್ಲಿ ಸಿಬ್ಬಂದಿ ವರ್ಗಗಳಿಗೆ ದೂರಸ್ಥ ಕೆಲಸ ನಿರ್ವಹಿಸಲು ಬೇಕಾದ ಕೌಶಲ್ಯತೆಯ ಕೊರತೆ ಇರುತ್ತದೆ. ಇನ್ನು ಕೆಲವು ಉದ್ಯಮಗಳಲ್ಲಿ ಕೆಲಸಗಳನ್ನು ಪರೋಕ್ಷವಾದ ರೀತಿಯಲ್ಲಿ ನಿರ್ವಹಿಸುವುದು ಅಸಾಧ್ಯ ಮಾತು. ಹಾಗೆಂದು ಕೇವಲ ಕೆಲವು ತಿಂಗಳುಗಳ ಸಮಸ್ಯೆಗೆ ಈಗಿರುವ ಸಿಬ್ಬಂದಿಗಳನ್ನು ಕೆಲಸದಿಂದ ತೆರವುಗೊಳಿಸುವುದು ಕೂಡಾ ಸರಿಯಲ್ಲ. 

ಇಂಥ ಸಮಯದಲ್ಲಿ ಸಿಬ್ಬಂದಿ ವರ್ಗದ ಕಾರ್ಯಕ್ಷಮತೆಯನ್ನು ಹೇಗೆ ವಿಶ್ಲೇಷಿಸಿ ಬೆಲೆ ಕಟ್ಟುವುದು? ಹಲವಾರು ಕಚೇರಿಗಳಲ್ಲಿ ಇಂಥ ಸಮಯದಲ್ಲಿ ಸಿಬ್ಬಂದಿವರ್ಗದವರೊಡನೆ ನಿಯತಕಾಲಿಕ ಸಂಪರ್ಕ ನಡೆಸಲೂ ಅವಕಾಶಗಳು ಕಡಿಮೆ. ಸಣ್ಣ ಉದ್ಯಮಗಳಿಂದ ಹಿಡಿದು ದೊಡ್ಡ ದೊಡ್ಡ ಸಂಸ್ಥೆಗಳಿಗೂ ಮಾನವ ಸಂಪನ್ಮೂಲ ನಿರ್ವಹಣೆ ಈ ಸಮಯದಲ್ಲ ಕಷ್ಟ ಅನ್ನಿಸುತ್ತದೆ. ಈಗ ಪ್ರತಿಯೊಬ್ಬರಿಗೂ ಅನೇಕ ರೀತಿಯಲ್ಲಿ ಕಷ್ಟಗಳು ಬಂದೊದಗಿರುವ ಕಾರಣ ಪರಿಸ್ಥಿತಿಯ ಅನಾನುಕೂಲಗಳನ್ನು ಅರ್ಥೈಸಿಕೊಂಡು ಉದ್ಯಮ ಸಂಸ್ಥೆಗಳು ತಮ್ಮ ನಿರ್ಧಾರಗಳನ್ನು ಮಂಡಿಸಬೇಕು. ಇಲ್ಲವಾದಲ್ಲಿ ಉದ್ಯಮಗಳು ವ್ಯವಹಾರದಲ್ಲಿ ಕುಸಿತ ಕಾಣುವುದು ಖಂಡಿತ. 

ಅಂತರರಾಷ್ಟ್ರೀಯ ಕಾರ್ಮಿಕರ ಸಂಸ್ಥೆಯ ಪ್ರಕಾರ ಈ ಕೋವಿಡ್-19 ಪ್ರಭಾವದಿಂದಾಗಿ ಹಲವಾರು ಸಂಸ್ಥೆಗಳಲ್ಲಿ ಕೆಲಸದ ಕಾರ್ಯಾವಧಿಯು ಸುಮಾರು ೭ ಪ್ರತಿಶತದಷ್ಟು ಕಡಿಮೆಯಾಗುವ ಸಂಭವವಿದೆ. ಜೊತೆಗೆ ಹಲವಾರು ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿ ಉದ್ಯೋಗ ನಷ್ಟವಾಗುವ ಸಂಭವವೂ ಇದೆ ಹಾಗೂ ಹಲವಾರು ಉದ್ಯೋಗಿಗಳಿಗೆ ಕಡಿಮೆ ಸಂಬಳ, ತಾತ್ಕಾಲಿಕವಾಗಿ ನಿವೃತ್ತಿ ಹೊಂದಲು ಬಲವಂತ ಪಡಿಸುವುದು ಮುಂತಾದ ತೊಂದರೆಗಳು ಎದುರಿಸಬೇಕಾಗಿ ಬರಬಹುದು. ಹೀಗಿರುವಾಗ, ಪ್ರತಿಯೊಂದು ಉದ್ಯಮಗಳ ಮಾನವ ಸಂಪನ್ಮೂಲ ಅಧಿಕಾರಿಗಳು, ಸಮಯದ ರಿಕ್ತತೆಯನ್ನು ಅರಿತು ಉದ್ಯಮದ ಕಾರ್ಯಾಚರಣೆಗೆ ಅತ್ಯಂತ ಅಗತ್ಯವಿರುವ ಸಿಬ್ಬಂದಿಗಳ ಪಟ್ಟಿಯನ್ನು ಮಾಡುವುದು ಅನಿವಾರ್ಯ. ಮಾತ್ರವಲ್ಲದೆ, ಪ್ರತಿಯೊಬ್ಬ ಸಿಬ್ಬಂದಿಯ ಕೌಶಲ್ಯತೆ, ಸಂಸ್ಥೆಯ ಉಳಿಗಾಲಕ್ಕೆ ಹಾಗೂ ಕಾರ್ಯಾಚರಣೆಗೆ ಅವರ ವೃತ್ತಿಪರ ಬೆಂಬಲದ ಅಗತ್ಯತೆ, ಹಾಗೂ ಅವರನ್ನು ಇಂದಿನ ಕೆಲಸದ ಶೈಲಿಗೆ ಅನುಗುಣವಾಗಿ ತಯಾರಿಸಲು ಬೇಕಾದ ತರಬೇತಿಯ ಅಗತ್ಯತೆಯನ್ನು ಪರಿಶೀಲಿಸಿ ಅದಕ್ಕೆ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. 


ಉದ್ಯೋಗ ನೀತಿಯಲ್ಲಿ ಅಗತ್ಯವಾದ ಬದಲಾವಣೆಗಳು:

ಕೋವಿಡ್-19 ಮಹಾಮಾರಿಯ ಪರಿಣಾಮಗಳಿಂದಾಗಿ ಹಲವಾರು ಉದ್ಯಮಗಳಲ್ಲಿ  ಕಾರ್ಯಾವಧಿ ಕಡಿಮೆಗೊಳಿಸಿ, ಕೇವಲ ಕೆಲವೇ ಸಿಬ್ಬಂದಿಗಳ ಉಪಯೋಗದಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ. ಹೀಗಿರುವಾಗ ಉದ್ಯೋಗ ನೀತಿಯಲ್ಲಿ ಹಲವಾರು ಬದಲಾವಣೆಗಳನ್ನು ಮಂಡಿಸುವುದು ಅತಿ ಅಗತ್ಯ. ಕಾರ್ಯನಿಮಿತ್ತ ಚಟುವಟಿಕೆಗಳಲ್ಲಿ ಕೊರೋನಾ ಸೋಂಕಿಗೆ ತುತ್ತಾಗಬಹುದಾದ ಅಪಾಯ ಜಾಸ್ತಿ ಇರುವಂಥ ಸಿಬ್ಬಂದಿಗಳಿಗೆ ಒಂದು ರೀತಿಯ ನಿಯಮಗಳನ್ನು ಅಳವಡಿಸಿದರೆ, ಉಳಿದ ಸಿಬ್ಬಂದಿಗಳಿಗೆ ಇನ್ನೊಂದು ರೀತಿಯ ನಿಯಮಗಳನ್ನು ನಿರ್ಣಯಿಸಬೇಕಾಗಿದೆ. ಸಿಬ್ಬಂದಿಗಳ ಕಡೆಗೆ ಅನುಭೂತಿಯ ದೃಷ್ಟಿಯಿಂದ ಹಾಗೂ ಹೊಸ ಸಾಮಾನ್ಯತೆಗೆ ಅನುಗುಣವಾಗಿ ನಿಯಮಗಳನ್ನು ಮಂಡಿಸಿದಲ್ಲಿ ಉದ್ಯಮಕ್ಕೂ, ಸಿಬ್ಬಂದಿ ವರ್ಗಕ್ಕೂ ಸರಿಸಮಾನವಾಗಿ ಉಪಕಾರವಾದಂತೆ. 

 

ಸಿಬ್ಬಂದಿಗಳ ಕಾರ್ಯಕ್ಷಮತೆ ಹಾಗೂ ಪ್ರತಿಫಲ:

ಸೋಂಕು ಹರಡುವ ವೇಗವನ್ನು ನೋಡುವಾಗ, ಎಲ್ಲಾ ಉದ್ಯಮಗಳ ಸಿಬ್ಬಂದಿಗಳ ಕಾರ್ಯಕ್ಷಮತೆಯಲ್ಲಿ ಪ್ರತಿಕೂಲ ಪರಿಣಾಮ ಬೀರಿಯೇ ಇರುತ್ತದೆ. ಹಲವಾರು ಉದ್ಯೋಗಿಗಳಿಗೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವುದಕ್ಕೂ, ಮನೆಯಿಂದ ಕಾರ್ಯ ನಿರ್ವಹಿಸುವುದಕ್ಕೂ ಬಹಳ ವ್ಯತ್ಯಾಸ ಅನ್ನಿಸುತ್ತದೆ. ಕಚೇರಿಯಲ್ಲಿ ಕೆಲಸ  ಕ್ಷಮ್ಯತೆ ಮನೆಯಿಂದ ಕೆಲಸ ನಿರ್ವಹಿಸುವಾಗ ಇರುವುದಿಲ್ಲ. ಇನ್ನು ಕೆಲವರಿಗೆ ಮನೆಯಿಂದ ಕೆಲಸ ಮಾಡುವಾಗ ಮನ ಶಾಂತಿಯಿಂದಿರುತ್ತದೆ ಹಾಗೂ ಕಾರ್ಯದಲ್ಲಿ ಕ್ಷಮ್ಯತೆ ಹೆಚ್ಚಾಗಿರುತ್ತದೆ. ಇದೆಲ್ಲವನ್ನೂ ಈ ಲಾಕ್ ಡೌನ್ ಸಮಯದಲ್ಲಿ ಪರಿಶೀಲಿಸಲು ಸಾಧ್ಯವಾಗಿದೆ. ಮನೆಯಿಂದಲೇ ಕಾರ್ಯ ನಿರ್ವಹಿಸಿ ತಮ್ಮ ಕೆಲಸದ ಗುರಿಯನ್ನು ತಲುಪುವಂತಹ ಸಿಬ್ಬಂದಿಗಳಿಗೆ ಅವರ ಕಾರ್ಯಕ್ಷಮತೆಯನ್ನು ಗುರುತಿಸಿ ಸರಿಯಾದ ಬಹುಮಾನ, ಪ್ರತಿಫಲ ಹಾಗೂ ವೇತನ ಹೆಚ್ಚಳ ನೀಡಿದರೆ ಅವರ ಕಾರ್ಯಕ್ಷಮತೆ ಇನ್ನೂ ಹೆಚ್ಚಾಗುವುದು ಖಂಡಿತ. ಜೊತೆಗೆ, ಪ್ರತಿಯೊಬ್ಬ ಸಿಬ್ಬಂದಿಗೂ ಅಗತ್ಯವಿರುವ ತರಬೇತಿಗಳನ್ನು ಕಾಲಕಾಲಕ್ಕೆ ನೀಡಿದರೆ ಉತ್ತಮ. ಕೊರೋನಾ ಕಾರಣದಿಂದಾಗಿ ವಹಿವಾಟುಗಳು ಕುಸಿತವಾಗಿರುವ ಕಾರಣ ಕೆಲಸಗಳು ಕಡಿಮೆ ಇರುವುದು ಒಪ್ಪಲೇಬೇಕಾದ ಸಂಗತಿ. ಈ ಸಮಯವನ್ನು ವ್ಯರ್ಥ ಮಾಡದೆ, ಸಿಬ್ಬಂದಿಗಳಿಗೆ ಅವಶ್ಯಕವಾದ ತರಬೇತಿ ನೀಡಿ ಸ್ವಯಂಪ್ರೇರಿತ ಕಲಿಕೆಗೆ ಪ್ರೋತ್ಸಾಹಿಸಬೇಕು. ಇದರಿಂದ ಸಿಬ್ಬಂದಿಗಳು ಸಮರ್ಥವಾಗಿ ಕೆಲಸ ಮಾಡಿ ಉದ್ಯಮದ ಲಾಭದಾಯಕತೆಯನ್ನು ವೃದ್ಧಿಸುವಲ್ಲಿ ಸಹಕಾರವಾಗುವುದು. 

 

ಉದ್ಯಮಗಳ ಕೆಲಸ ಮಾಡುವ ಶೈಲಿ:

ಈ ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಆದಷ್ಟು ಈ ಮೂರು ವಿಚಾರಗಳನ್ನು ಪರಿಗಣಿಸಿ ಕಾರ್ಯ ನಿರ್ವಹಿಸುವ ಶೈಲಿಯಲ್ಲಿ ಸೂಕ್ತ ಬದಲಾವಣೆ ತರುವುದು ಉತ್ತಮಸಿಬ್ಬಂದಿಗಳ ಪ್ರತಿಭೆಯ ವರ್ಗ, ಯಾಂತ್ರೀಕೃತ ಕಾರ್ಯ ಪದ್ಧತಿ ಹಾಗೂ ಸಾಮಾಜಿಕ ಅಂತರದ  ಅವಶ್ಯಕತೆ.ಪ್ರತಿಯೊಬ್ಬ ಸಿಬ್ಬಂದಿಗಳಿಗೂ ಅವರದೇ ಆದ ಪ್ರತಿಭೆ, ದಕ್ಷತೆ ಹಾಗೂ ಅನನ್ಯತೆ ಇದೆ. ಅದನ್ನು ಗುರುತಿಸಿ ತಮ್ಮ ಉದ್ಯಮ ಸಂಸ್ಥೆಗೆ ಯಾವ ಸಿಬ್ಬಂದಿಯ ಅವಶ್ಯಕತೆ ಈ ಸಮಯದಲ್ಲಿ ಹೆಚ್ಚಿದೆ?, ಹೊಸ ಕಾರ್ಯಶೈಲಿಗಳನ್ನು ಬಹು ಬೇಗನೆ ಅರ್ಥೈಸಿಕೊಂಡು ದಕ್ಷತೆಯಿಂದ ಯಾವ ಸಿಬ್ಬಂದಿ ಕಾರ್ಯನಿರ್ವಹಣೆ ಮಾಡಬಹುದು?, ಇದ್ದ ಸಿಬ್ಬಂದಿಗಳಿಂದ ಯಾವ ರೀತಿಯಲ್ಲಿ ಕೆಲಸವನ್ನು ಮಾಡಿಸಿಕೊಳ್ಳಬಹುದು? ಕೆಲಸಗಳನ್ನು ಸ್ವ-ಉದ್ಯೋಗಿಗಳಿಗೆ ನೀಡಿದರೆ ನಿಯಮಿತ ಉದ್ಯೋಗಿಗಳಂತೆಯೇ ಜವಾಬ್ದಾರಿಯುತವಾಗಿ ನಿಭಾಯಿಸಲು ಸಾಧ್ಯವೇ?, ಯಾವ ಯಾವ ಕೆಲಸಗಳನ್ನು ಯಾಂತ್ರಿಕ ರೀತಿಯಿಂದ ನಿಭಾಯಿಸಲು ಸಾಧ್ಯ? ಅದಕ್ಕೆ ಉಂಟಾಗುವ ವೆಚ್ಚ ಎಷ್ಟಾಗಬಹುದು ಹಾಗೂ ಅದು ಉಪಯುಕ್ತ ವೆಚ್ಚ ಹೌದೇ ಅಲ್ಲವೇ?, ಸಾಮಾಜಿಕ ಅಂತರವನ್ನು ಕಾರ್ಯಕ್ಷೇತ್ರದಲ್ಲಿ ಹೇಗೆ ನಿಭಾಯಿಸಬಹುದು? ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. 

 

ಉದ್ಯಮದ ಬೆಳವಣಿಗೆಗೆ ಸಿಬ್ಬಂದಿಗಳ ಕೊಡುಗೆ:

ಯಾವುದೇ ಉದ್ಯಮವು ಬೆಳೆಯಬೇಕೆಂದರೆ ಅದರ ಸಿಬ್ಬಂದಿಗಳ ಪರ ಉದ್ಯಮ ಎಷ್ಟು ಜವಾಬ್ದಾರಿ ಮೆರೆಯುತ್ತದೆಯೋ ಅಷ್ಟೇ ಜವಾಬ್ದಾರಿಯುತವಾಗಿ ಸಿಬ್ಬಂದಿಗಳೂ ಕಾರ್ಯನಿರ್ವಹಿಸುವುದು ಅತ್ಯಗತ್ಯ. ಉದ್ಯಮ ಸಂಸ್ಥೆಯ ಏಳಿಗೆ ಬೀಳುವಿಕೆಗೆ ಉದ್ಯಮದ ಮಾಲೀಕರು ಎಷ್ಟು ಕಾರಣವೋ ಅಷ್ಟೇ ಕಾರಣ ಉದ್ಯಮದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳೂ ಆಗಿರುತ್ತಾರೆ. ಹೀಗಿರುವಾಗ, ಎಲ್ಲ ಸಿಬ್ಬಂದಿಗಳೂ ಜವಾದ್ದಾರಿಯುತವಾಗಿ ನಿರಂತರವಾಗಿ ಉದ್ಯಮದ ಪರವಾಗಿ ಕಾರ್ಯನಿರ್ವಹಿಸಿ ತಮ್ಮ ಪ್ರತಿಭೆಗಳನ್ನು ವೃದ್ಧಿಸಿ, ಉದ್ಯಮದ ಏಳಿಗೆಗಾಗಿ ಶ್ರಮಿಸುವುದು ತುಂಬಾ ಮುಖ್ಯ. ಉದ್ಯಮ ಸಂಸ್ಥೆ ಬೆಳೆದಾಗ ಮಾತ್ರವೇ ಅದರಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೂ ತಮ್ಮ ವೃತ್ತಿಜೀವನದಲ್ಲಿ ಏಳಿಗೆ ಸಿಗುವುದು. ಹೀಗಾಗಿ ಜವಾಬ್ದಾರಿ ಮೆರೆದು ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಸಿಬ್ಬಂದಿಯೂ ತಮ್ಮ ವೃತ್ತಿಜೀವನದಲ್ಲಿ ವೇಗವಾಗಿ ಎತ್ತರಕ್ಕೆ ಬೆಳೆಯುತ್ತಾರೆ. 

ದೂರಸ್ಥ ಕೆಲಸದಿಂದಾಗಿ ವೃತ್ತಿಗಳು ಚರವಾಗಿ, ಸಿಬ್ಬಂದಿಗಳು ಸ್ಥಿರವೆನಿಸುತ್ತದೆ. ಇದರಿಂದ ಯಾವುದೇ ನಿರ್ಬಂಧವಿಲ್ಲದಂತೆ ಎಲ್ಲ ಕೆಲಸಕಾರ್ಯಗಳೂ ಜಗತ್ತಿನ ಯಾವ ಮೂಲೆಯಿಂದಲೂ ಕಾರ್ಯನಿರ್ವಹಿಸುವುದು ಸಾಧ್ಯವಾಗಿದೆ. ಹಲವಾರು ಉದ್ಯಮಗಳು ಇದರಿಂದ ಲಾಭ ಪಡೆಯುತ್ತಿವೆ. ಅನೇಕ ರೀತಿಯ ಹೊಸ ಉದ್ಯೋಗಗಳಿಗೆ ಅವಕಾಶಗಳು ದೊರೆತಂತಿದೆ. ಹೊಸ ಹೊಸ ರೀತಿಯ ಉದ್ಯೋಗಗಳು ಜನ್ಮ ತಳೆದು, ಹೊಸ ರೀತಿಯ ವೃತ್ತಿ  ಸೃಷ್ಟಿಯಾಗಿದೆ. ಉದ್ಯೋಗಿಗಳ ಕೆಲಸ ಮಾಡುವ ಶೈಲಿ, ಉದ್ಯೋಗ ಸ್ವಭಾವಗಳು ಎಲ್ಲವೂ ಬದಲಾಗಿದೆ. ಆದ್ದರಿಂದ, ಅನೇಕ ರೀತಿಯ ಬದಲಾವಣೆಗಳು ಮಾನವ ಸಂಪನ್ಮೂಲ ನಿರ್ವಹಣೆಗೆ ಅತ್ಯಗತ್ಯ. ಉದ್ಯಮಗಳು ಯೋಚಿಸಿ, ಉಪಯುಕ್ತ ಬದಲಾವಣೆ ತರಲು ಇದೇ ಸೂಕ್ತ ಸಮಯ. ಅನೇಕ ರೀತಿಯ ವೆಚ್ಚಗಳನ್ನು ಕಡಿಮೆಗೊಳಿಸಿ ಮೊದಲಿನ ಪ್ರಮಾಣಕ್ಕಿಂತಲೂ ಹೆಚ್ಚಿನ ಸಾಮರ್ಥ್ಯದಿಂದ ಕೆಲಸವನ್ನು ಮಾಡಿಸಿಕೊಳ್ಳಲು ಇದು ಉತ್ತಮ ಅವಕಾಶ. ಧೃತಿಗೆಡದೆ, ಸರಿಯಾದ ನಿರ್ಧಾರ ತೆಗೆದುಕೊಂಡರೆ, ಉದ್ಯಮಗಳಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ ಒಂದು ಸುಲಭವಾದ ಕೆಲಸ ಅನ್ನಿಸುವುದರಲ್ಲಿ ಸಂದೇಹವೇ ಇಲ್ಲ.