ಗುರುವಾರ, ಜೂನ್ 25, 2026

ಅಜ್ಜನ ಪೆಟ್ಟಿಗೆ

(ಒಂದು ದಿನ ನನ್ನ ಕಥೆಗಳನ್ನು ಓದಲು ಯಾರಾದರೂ ಇರುತ್ತಾರಾ?)
 
✍🏻ದೀಪಲಕ್ಷ್ಮಿ ಭಟ್, ಮಂಗಳೂರು   

  

ಅಮಿತ ಮತ್ತು ಪ್ರತಾಪ ದಂಪತಿಗಳ ಮನೆಯ ಏಕೈಕ ಸಂತಾನ ಅಪ್ರಮೇಯ. ಮನೆಯ ಎಲ್ಲರ ಪ್ರೀತಿಯ "ಅಪ್ಪು". ಒಂದು ಸುಂದರವಾದ ಸಂಜೆ. ಸಮಯ ಐದು ಗಂಟೆ. ಅಪ್ರಮೇಯ ಆಗ ತಾನೇ ಶಾಲೆಯಿಂದ ಬಂದವನೇ ತನ್ನ ರೈನ್ ಕೋಟ್ ತೆಗೆದು ಬಾಗಿಲ ಬಳಿ ಬಿಸಾಡಿ, ಕೈ ಕಾಲೂ ತೊಳೆಯದೆ, ಒಳಗೆ ಬಂದು ಶಾಲೆಯ ಬ್ಯಾಗ್ ಅನ್ನು ಅಲ್ಲೇ ಸೋಫಾದ ಮೇಲೆ ಬಿಸಾಡಿ ಧೊಪ್ಪನೆ ಕುಳಿತು, ಟಿವಿ ಆನ್ ಮಾಡಿ ತನ್ನ ಇಷ್ಟವಾದ ನಿಕ್ ಚಾನೆಲ್ ಅನ್ನು ಇಟ್ಟು  ಕುಳಿತ. 

ಅವನ ಅಮ್ಮ ಅಮಿತಾ ಅವನನ್ನು ನೋಡಿದ ಕೂಡಲೇ, "ಅಪ್ಪೂ, ನಿನ್ನ ಅಜ್ಜ ಇವತ್ತು ಯಾವ ಕಥೆ ಹೇಳ್ತಿದ್ರು ಗೊತ್ತಾ? " ಎಂದು ಕೇಳಿದಳು. ಟಿವಿ ಪರದೆಯಲ್ಲೇ ಕಣ್ಣು ನೆಟ್ಟಿದ್ದ ಅಪ್ರಮೇಯ ಕಣ್ಣೆತ್ತಿಯೂ ನೋಡದೆ, "ಮಾಮ್ ಪ್ಲೀಸ್,  ನಾನು ಬಂದಿದ್ದಷ್ಟೇ, ಇನ್ನು ಸ್ವಲ್ಪ ಹೊತ್ತಲ್ಲಿ ಆನ್ಲೈನ್ ಕ್ಲಾಸ್ ಇದೆ. ನಿನ್ನ ಪುರಾಣ ಶುರು ಮಾಡ್ಬೇಡ." ಅಂದ. ಅಮಿತಾ ಸುಮ್ಮನಾದಳು. ಮಗನಿಗೆ ಕುಡಿಯಲು ಹಾರ್ಲಿಕ್ಸ್ ಕೊಟ್ಟು, "ಕೈಕಾಲಾದ್ರೂ ತೊಳೆದು ಬಾ ಕಂದ" ಅಂದಳು. ಅಪ್ಪು ಮಾತ್ರ ಟಿವಿಯಿಂದ ಕಣ್ಣು ಕದಲಿಸದೆ, ಹಾರ್ಲಿಕ್ಸ್ ಕುಡಿದ. 

ಸಂಜೆ ಎಂಟು ಗಂಟೆ ಸಮಯಕ್ಕೆ ಅಪ್ರಮೇಯನ ತಂದೆ ಪ್ರತಾಪ ಆಫೀಸಿನಿಂದ ಮನೆಗೆ ಬಂದ. ಅಡಿಗೆ ಮನೆಯಲ್ಲಿದ್ದ ಅಮಿತ ಊಟಕ್ಕೆ ತಯಾರಿ ಮಾಡುತ್ತಿದ್ದಳು. ಅಜ್ಜಿ ದೇವರ ಕೋಣೆಯಲ್ಲಿ ಶ್ಲೋಕ ಹೇಳುತ್ತಿದ್ದರು.ಅಜ್ಜ ಕಿಟಕಿಯ ಹತ್ತಿರ ಕುಳಿತು ಹೊರಗಿನ ಮರಗಳನ್ನು ನೋಡುತ್ತಿದ್ದರು. ಆಗ ಅಪ್ರಮೇಯ ತನ್ನ ಕೊಠಡಿಯಲ್ಲಿ ಮೊಬೈಲ್ ಹಿಡಿದು ರೀಲ್ಸ್ ನೋಡುತ್ತಿದ್ದ. ಈ ಟಿವಿ ಮತ್ತು ಮೊಬೈಲ್ ಅವನ ಬದುಕಿನ ಒಂದು ಭಾಗವಾಗಿರಲಿಲ್ಲ; ಅದುವೇ ಅವನ ಪ್ರಪಂಚವಾಗಿಬಿಟ್ಟಿದ್ದವು. 

ಅಮಿತ ಜೋರಾಗಿ ಕೂಗಿದಳು - "ಅಪ್ಪೂ ಊಟಕ್ಕೆ ಬಾ. ಎಲ್ಲರಿಗೂ ಬರೋದಿಕ್ಕೆ ಹೇಳು" ಅಂತ. "ಬರ್ತೀನಿ ಮಾಮ್" ಎಂದವನು ಹತ್ತು ನಿಮಿಷ ಕಳೆದರೂ ಬರಲಿಲ್ಲ. ಎಲ್ಲರೂ ಬಂದಿದ್ದರೂ ಅವನನ್ನು ಮತ್ತೆ ಜೋರಾಗಿ ಕೂಗಿ ಕರೆಯಬೇಕಾಯಿತು. ಅಷ್ಟರಲ್ಲಿ ಮೊಬೈಲ್ ಕೈಯಲ್ಲಿ ಹಿಡಿದುಕೊಂಡೇ ಬಂದು ಮೇಜಿನ ಬಳಿ ಕುಳಿತ. ಊಟ ಮಾಡುವಾಗಲೂ ಕಣ್ಣು ಮೊಬೈಲ್‌ನಲ್ಲೇ.

ಅಜ್ಜ ಅವನನ್ನು ನೋಡಿ ನಗುತ್ತ ಕೇಳಿದರು - "ಅಪ್ಪು, ಇವತ್ತು ಶಾಲೆಯಲ್ಲಿ ಏನು ಕಲಿಸಿದ್ರು?". ಕಣ್ಣೆತ್ತಿಯೂ ನೋಡದೆ "ಏನಿಲ್ಲ" ಅಂತ ಉತ್ತರಿಸಿದ. "ಸ್ನೇಹಿತರ ಜೊತೆ ಆಟ ಆಡಿದಿಯಾ?" ಎಂದು ಕೇಳಿದರೆ ಮತ್ತೆ "ಹೂಂ" ಅಂತ ಅಷ್ಟೇ ಹೇಳಿದ. 

ಹೀಗೆ ಒಂದೇ ಮನೆಯ ನಾಲ್ಕು ಗೋಡೆಗಳ ಒಳಗೆ ನಾಲ್ಕು ಪ್ರಪಂಚಗಳಿದ್ದವು. ಅಜ್ಜನ ಪ್ರಪಂಚ ಪುಸ್ತಕಗಳು. ಅಜ್ಜಿಯ ಪ್ರಪಂಚ ದೇವರ ಕೋಣೆ. ಅಪ್ಪ-ಅಮ್ಮನ ಪ್ರಪಂಚ ಕೆಲಸದ ಒತ್ತಡ. ಅಪ್ಪುವಿನ ಪ್ರಪಂಚ ಮೊಬೈಲ್, ಟಿವಿ, ಗೇಮ್ ಮತ್ತು ರೀಲ್ಸ್. ಊಟದ ಸಮಯದಲ್ಲಿ ಮಾತಿಲ್ಲ. ಸಂಜೆಯ ಸಮಯದಲ್ಲಿ ನಗುವಿಲ್ಲ. ರಾತ್ರಿ ಸಮಯದಲ್ಲಿ ಕಥೆಗಳಿಲ್ಲ.  ಇಡೀ ಮನೆಯಲ್ಲಿ ವೈ-ಫೈ ಸಿಗ್ನಲ್ ಮಾತ್ರ  ತುಂಬಾ ಬಲವಾಗಿತ್ತು.  ಆದರೆ ಮನಸ್ಸುಗಳ ನಡುವಿನ ಸಂಪರ್ಕ ಸಂಪೂರ್ಣವಾಗಿ  ಕಡಿತವಾಗಿತ್ತು.

ಅಜ್ಜ ಪ್ರತಿದಿನ ಸಂಜೆ ಮನೆಯ ಮುಂದಿನ ಜಗಲಿಯಲ್ಲಿ ಕುಳಿತುಕೊಂಡು "ಮೊಮ್ಮಗ ಬರುವನೇ ತನ್ನ ಜೊತೆ ಮಾತಾಡಲು" ಎಂದು  ಕಾಯುತ್ತಿದ್ದ. "ಅಪ್ಪು, ಬಾ,  ಒಂದು ಕಥೆ ಹೇಳ್ತೀನಿ." ಅಂತ ಕರೆದಾಗ, ಅಪ್ಪು ಮಾತ್ರ "ನಂತರ ಅಜ್ಜ. ನಂಗೆ ಬೇರೆ ಕೆಲಸ ಇದೆ" ಅಂತ ತಪ್ಪಿಸಿಕೊಳ್ಳುತ್ತಿದ್ದ. "ಒಂದು ಗಾದೆ ಹೇಳ್ತೀನಿ. ಬಾ ಪುಟ್ಟ" ಅಂದರೆ, "ಟೈಮ್ ಇಲ್ಲ ಅಜ್ಜ." ಅನ್ನುತ್ತಿದ್ದ.  "ನಮ್ಮ ಊರಿನ ಬಗ್ಗೆ ಹೇಳ್ತೀನಿ. ಬಾ ಕಂದ" ಅಂದರೆ, "ನಂತರ ನೋಡೋಣ."ಅನ್ನುತ್ತಿದ್ದ. ಆ "ನಂತರ" ಎಂದಿಗೂ ಬರುತ್ತಿರಲಿಲ್ಲ.  

ಅಜ್ಜನಿಗೆ ಕಥೆ ಹೇಳುವುದು ತುಂಬ ಇಷ್ಟ. ಅವರ ಬಾಲ್ಯದಲ್ಲಿ ವಿದ್ಯುತ್ ಇರಲಿಲ್ಲ. ಟಿವಿ ಇರಲಿಲ್ಲ. ಮೊಬೈಲ್ ಎಂಬ ಪದವೇ ಇರಲಿಲ್ಲ. ಸಂಜೆ ಆದಾಕ್ಷಣ ಮನೆಯ ಹಿರಿಯರು ಮಕ್ಕಳನ್ನು ಸುತ್ತ ಕುಳ್ಳಿರಿಸಿಕೊಂಡು ಕಥೆ ಹೇಳುತ್ತಿದ್ದರು. ಆ ಕಥೆಗಳಲ್ಲಿ ರಾಜರು ಇರುತ್ತಿದ್ದರು. ರಾಣಿಯರು ಇರುತ್ತಿದ್ದರು. ವೀರರು ಇರುತ್ತಿದ್ದರು. ದೇವರು ಇರುತ್ತಿದ್ದರು. ಕೆಲವೊಮ್ಮೆ ಬದುಕನ್ನು ಬದಲಿಸುವ ಪಾಠಗಳೂ ಇರುತ್ತಿದ್ದವು. ಅದೇ ಸಂಪ್ರದಾಯವನ್ನು ಅಜ್ಜ ತಮ್ಮ ಮೊಮ್ಮಗನಿಗೂ ನೀಡಲು ಬಯಸಿದ್ದರು. ಆದರೆ ಅಪ್ರಮೇಯನಿಗೆ ಕಥೆಗಳಿಗಿಂತ ರೀಲ್ಸ್ ಹೆಚ್ಚು ಆಸಕ್ತಿದಾಯಕವಾಗಿದ್ದವು.

ಒಂದು ದಿನ ಅಪ್ಪು ಶಾಲೆಯಿಂದ ಬಂದಾಗ ಅಜ್ಜನ ಬಳಿಯಲ್ಲಿ ಕುಳಿತಿದ್ದ ಅಜ್ಜಿ ಮಾತನಾಡುತ್ತಿದ್ದರು - "ನಮ್ಮ ಕಾಲದಲ್ಲಿ ಕನ್ನಡ ಹಾಡುಗಳು ಎಷ್ಟು ಚೆನ್ನಾಗಿದ್ದವು ಅಲ್ವಾ?". ಅದನ್ನ ಕೇಳಿದೊಡನೆ ಅಪ್ರಮೇಯ ಜೋರಾಗಿ ನಕ್ಕು "ಈಗಿನ ಕಾಲದಲ್ಲಿ ಕನ್ನಡ ಸಾಂಗ್ಸ್ ಯಾರೂ ಕೇಳೋದಿಲ್ಲ ಅಜ್ಜಿ." ಆಶ್ಚರ್ಯದಿಂದ ಅಜ್ಜಿ "ಯಾಕೆ?" ಅಂತ ಕೇಳಿದರು. "ಅದು ಓಲ್ಡ್ ಫ್ಯಾಷನ್." ಅಂತ ಹೇಳಿದ. ಅಜ್ಜನ ಮುಖ ಸ್ವಲ್ಪ ಮಂಕಾಯಿತು. "ಮಗಾ, ಭಾಷೆ ಹಳೆಯದು ಅಂತ ಆಗೋದಿಲ್ಲ. ನಾವು ನಮ್ಮ ಸಂಸ್ಕೃತಿ ಮತ್ತು ಭಾಷೆಯನ್ನೂ ಮರೆತಾಗ ಮಾತ್ರ ಅದು ಹಳೆಯದಾಗುತ್ತದೆ." ಆದರೆ ಅಜ್ಜನ ಮಾತು ಅವನಿಗೆ ಕೇಳಲೇ ಇಲ್ಲ. ಯಾಕಂದರೆ, ಅವನ ಕಿವಿಯಲ್ಲಿ ಇಯರ್ ಫೋನ್ ಇತ್ತು. 
 
ಕಾಲ ಹೀಗೆ ಸಾಗುತ್ತಿತ್ತು. ಮನೆಯಲ್ಲೇ ಎಲ್ಲರೂ ಜೊತೆಯಾಗಿ ವಾಸಿಸುತ್ತಿದ್ದರು. ಆದರೆ ಮಾತುಕತೆ ಮಾತ್ರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿತ್ತು. ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ಅವನ ಕೈಯಲ್ಲಿ ಮೊಬೈಲ್ ಇತ್ತು. ಮನೆಯವರಿಗಿಂತ ಪರದೆಗಳ ಜೊತೆಗಿನ ಅವನ ಸಂಭಾಷಣೆಯೇ ಹೆಚ್ಚು. ಅಜ್ಜನ ಕಥೆಗಳಿಗೆ ಸಮಯ ಇರಲಿಲ್ಲ. ಅಜ್ಜಿಯ ನೆನಪುಗಳ ಬಗ್ಗೆ ಕೇಳಲು  ಆಸಕ್ತಿ ಇರಲಿಲ್ಲ.  

ಕಾಲ ಅನ್ನೋದು ನಮಗಾಗಿ ನಿಲ್ಲೋದು ಅಂತ ಇದೆಯೇ? ಅಂತೆಯೇ, ಆ ದಿನ ಬೆಳಗಿನ ಜಾವ ಯಾವಾಗಲೂ ಎದ್ದು ಸಣ್ಣದಾಗಿ ವ್ಯಾಯಾಮ ಮಾಡುತ್ತಿದ್ದ ಅಜ್ಜ ಏಳಲೇ ಇಲ್ಲ. ಅವರ ಉಸಿರು ನಿಂತು ಹೋಗಿತ್ತು. ಮನೆ ತುಂಬ ಜನ. ಅಜ್ಜಿಯ ಆಕ್ರಂದನ. ಮನೆ ಮಂದಿ ಎಲ್ಲರ ಕಣ್ಣೀರು. ಬಂದವರ ಸಾಂತ್ವನದ ಮಾತುಗಳು. ಮೂರು ದಿನ, ಹತ್ತು ದಿನ, ಹದಿಮೂರು ದಿನ. ಹೀಗೆ ದಿನಗಳು ಕಳೆದವು. ಆಮೇಲೆ ಎಲ್ಲರ ಜೀವನ ಮತ್ತೆ ಹಳೆಯ ಹಾದಿಗೆ ಮರಳಿತು.  

***

ಆ ದಿನ ಮಳೆಗಾಲದ ರಜೆ. ಮನೆಯವರಲ್ಲರೂ ಸೇರಿ ಕೋಣೆಯೊಂದನ್ನು ಸ್ವಚ್ಛಗೊಳಿಸುವ ನಿರ್ಧಾರ ಮಾಡಿದರು. ಅದು ತಾತನ ಹಳೆಕಾಲದ ವಸ್ತುಗಳಿರುವ ಕೋಣೆಯಾಗಿತ್ತು.  ಅಲ್ಲಿ ಸ್ವಚ್ಛಗೊಳಿಸುತ್ತಿರುವಾಗ ಅಪ್ರಮೇಯನ ಕೈಗೆ ಒಂದು ಹಳೆಯ ಮರದ ಪೆಟ್ಟಿಗೆ ಸಿಕ್ಕಿತು. ದಪ್ಪ ಧೂಳು ತುಂಬಿಕೊಂಡಿತ್ತು. ಹಳೆಯ ಕಬ್ಬಿಣದ ಬೀಗ ಇತ್ತು. ಪೆಟ್ಟಿಗೆಯ ಮುಚ್ಚಳದ ಮೇಲೆ ತಾತನ ಕೈಯಿಂದ ಕೆತ್ತಿದ ಎರಡು ಅಕ್ಷರಗಳು ಕಾಣಿಸಿದವು. 
"ರಾ.ಭ." 
ಅದನ್ನು ಸ್ಪರ್ಶಿಸಿದಾಗ ಅಪ್ಪುವಿಗೆ ಗೊತ್ತಿಲ್ಲದ ನಡುಕವೊಂದು ಮನಸ್ಸಿನೊಳಗೆ ಓಡಿತು. ಕಷ್ಟಪಟ್ಟು ಬೀಗವನ್ನು ತೆರೆದ. ಅದರಲ್ಲಿ ಹಳೆಯ ಪುಸ್ತಕಗಳು. ಹಳದಿ ಬಣ್ಣಕ್ಕೆ ತಿರುಗಿದ ಹಾಳೆಗಳು. ದುಂಡು ದುಂಡಗಿನ ಸುಂದರವಾದ ಕೈಬರಹದ ಡೈರಿಗಳು. ಹಳೆಯ ಛಾಯಾಚಿತ್ರಗಳು. ತಾತನೇ ಕೈಯಾರೆ ಬರೆದ ಪತ್ರಗಳು, ಕವನಗಳು, ಗಾದೆಗಳ ಸಂಗ್ರಹ, ಕಥೆಗಳ ಹಾಳೆಗಳು. ಎಲ್ಲದರ ಮೇಲೂ ಒಂದೇ ಹೆಸರಿನ ಹಸ್ತಾಕ್ಷರ. ಅದು "ರಾಮ ಭಟ್" - ಅಂದರೆ ಅಪ್ಪುವಿನ ಅಜ್ಜ. 

ಕುತೂಹಲ ತಡೆಯಲಾರದೆ ಅಪ್ರಮೇಯ ಒಂದು ಹಾಳೆ ತೆಗೆದು ಓದಿದ. ಅದು ಅವನ ಅಜ್ಜ ಬರೆದಂಥ ಮೊದಲ ಕಥೆ. ಒಬ್ಬ ಬಡ ಕುಟುಂಬದ ಹುಡುಗ ತನ್ನ ವಿದ್ಯೆಯ ಬಲದಿಂದ ತನ್ನ ಊರಿನ ಮಕ್ಕಳ ಬದುಕು ಬದಲಿಸಿದ ಕಥೆ. ತುಂಬಾ ಆಕರ್ಷಕವಾಗಿ ನೀತಿಬೋಧೆಯಂತೆ ಬರೆದಿದ್ದಂತಹ, ಜೀವನದ ಪಾಠ ತಿಳಿಸುವಂತ ಕಥೆ. ಅಪ್ರಮೇಯ ಓದುತ್ತ ಹೋದ. ಮೊದಲ ಬಾರಿಗೆ ಅಪ್ರಮೇಯನಿಗೆ ಮೊಬೈಲ್ ಮರೆತು ಹೋಯಿತು. 

ಕಥೆ ಮುಗಿದಾಗ ಒಂದು ಸಾಲು ಬರೆದಿತ್ತು - "ಜ್ಞಾನವನ್ನು ಸಂಪಾದಿಸಿದವನು ಶ್ರೀಮಂತನಾಗಬಹುದು. ಆದರೆ ಜ್ಞಾನವನ್ನು ಹಂಚಿದವನು ಅಮರನಾಗುತ್ತಾನೆ." ಅಪ್ರಮೇಯ ಓದಿ ಮುಗಿಸಿದಾಗ " ಈ ಕಥೆಯನ್ನು ಅಜ್ಜ ಇರುವಾಗಲೇ ಅವರ ಬಾಯಿಂದ ಕೇಳುವಂತಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು" ಅಂತ ಮರುಗಿದ. 

ಮತ್ತೆ ಎರಡನೇ ಕಥೆ - "ಸ್ನೇಹದ ಮಹತ್ವ". ಓದಿ ಮುಗಿಸುತ್ತಿದ್ದಂತೆ, "ಜೀವನದ ಪಾಠವನ್ನೇ ಹೇಳಿಕೊಡುವಂಥ ಕಥೆ. ಅಜ್ಜ ಈ ಕಥೆ ಹೇಳೋಕೆ ಎಷ್ಟೋ ಸಲ ಕರೆದಿದ್ದರು, 
ನಾನು ಮಾತ್ರ 'ಟೈಮ್ ಇಲ್ಲ' ಅಂತ ಹೇಳಿ ಎದ್ದೇ ಹೋಗಿದ್ದೆ.." ಎಂದು ದುಃಖಗೊಂಡ. ಆಮೇಲೆ ಮೂರನೇ ಕಥೆ - "ಸತ್ಯದ ಬೆಲೆ",  ನಾಲ್ಕನೇ ಕಥೆ "ತಾಯಿಯ ತ್ಯಾಗ", ಐದನೆಯದಾಗಿ ಒಬ್ಬ ರೈತನ ಕಥೆ - ಹೀಗೆ ಒಂದೊಂದೇ ಕಥೆಗಳನ್ನು ಓದಿದಾಗಲೂ ಒಂದೊಂದು ರೀತಿಯ ಜೀವನದ ಪಾಠ ಹೇಳಿಕೊಟ್ಟಂತೆ ಭಾಸವಾಯಿತು ಅಪ್ರಮೇಯನಿಗೆ. ಪ್ರತಿಯೊಂದು ಕಥೆಯೂ ಬದುಕಿನ ಇನ್ನೊಂದು ಮುಖವನ್ನು ಅವನ ಮುಂದೆ ತೆರೆದಿಡುತ್ತಿತ್ತು.

ಮುಂದೆ ಕವನಗಳ ಪುಟಗಳು. ಪ್ರಕೃತಿಯ ಬಗ್ಗೆ, ತಾಯಿಯ ಬಗ್ಗೆ, ನಾಡಿನ ಬಗ್ಗೆ, ದೇಶದ ಬಗ್ಗೆ, ನಮ್ಮ ಭಾಷೆಯ ಬಗ್ಗೆ, ಗೆಳೆತನದ ಬಗ್ಗೆ, ಮಾನವೀಯತೆ ಬಗ್ಗೆ - ಹೀಗೆ ಹಲವಾರು ರೀತಿಯ ಕವನಗಳನ್ನು ಓದಿದ ಅಪ್ರಮೇಯನ ಮನಸ್ಸಲ್ಲಿ ಏನೋ ಬದಲಾವಣೆ ಆದಂತಿತ್ತು. ಒಂದೊಂದು ಕವನ ಓದುತ್ತಿದ್ದಾಗಲೂ ಅವನಿಗೆ ಆಶ್ಚರ್ಯವಾಯಿತು. ಅಜ್ಜ ಎಷ್ಟು ಸುಂದರವಾಗಿ ಬರೆಯುತ್ತಿದ್ದರು! ತನ್ನ ಮನೆಯಲ್ಲೇ ಇಷ್ಟೊಂದು ದೊಡ್ಡ ಲೇಖಕ ಬದುಕಿದ್ದನೆಂಬ ಸತ್ಯ ಅವನಿಗೆ ಮೊದಲ ಬಾರಿಗೆ ಅರಿವಾಯಿತು. 

ಮುಂದೆ ಗಾದೆಗಳ ಸಂಗ್ರಹ. ಪ್ರತಿಯೊಂದು ಗಾದೆ ಮಾತಿನ ಕೆಳಗೆ ಅದರ ಅರ್ಥವನ್ನು ಅತ್ಯಂತ ಸುದಾರವಾಗಿ ವಿಶ್ಲೇಷಣೆ ಮಾಡಿದ್ದರು ಅಪ್ರಮೇಯನ ಅಜ್ಜ. "ಮಾತು ಬೆಳ್ಳಿ, ಮೌನ ಬಂಗಾರ.", "ಅನುಭವವೇ ಗುರು.", "ಬಿತ್ತಿದಂತೆ ಬೆಳೆಯುತ್ತದೆ.", "ಅರಿತವನಿಗೆ ಅರ್ಧ ಮಾತು ಸಾಕು." - ಇಂಥ ಅನೇಕ ಗಾದೆಗಳನ್ನು ಬರೆದು ಪ್ರತಿ ಗಾದೆಯ ಅರ್ಥವನ್ನು ಅಜ್ಜ ತಮ್ಮ ಕೈಯಾರೆ ವಿಶ್ಲೇಷಿಸಿ ಬರೆದಿದ್ದರು. ಮೊದಲ ಬಾರಿಗೆ ಅಪ್ರಮೇಯನಿಗೆ "ಕನ್ನಡ" ಎಷ್ಟು ಸುಂದರ ಭಾಷೆ ಎಂಬುದು ಅರ್ಥವಾಗತೊಡಗಿತು. ಅವನೊಳಗೆ ಕನ್ನಡದ ಮೇಲೆ ಹೊಸ ಪ್ರೀತಿ ಹುಟ್ಟಿತ್ತು. ತನ್ನ ಅಜ್ಜ ಬರೆದಂಥ ಗಾದೆಗಳ ವಿಶ್ಲೇಷಣೆ ವಿಶೇಷವಾದ ರೀತಿಯಲ್ಲಿ ಮನ ಮುಟ್ಟುವಂತಿತ್ತು. ಜೀವನಕ್ಕೆ ಪಾಠದಂತಿತ್ತು.

ಕೊನೆಗೆ ಪತ್ರಗಳ ಕಟ್ಟು. ಸ್ವಲ್ಪ ಹೊಸದಾದ ಹಾಳೆಯಂತೆ ಭಾಸವಾಯಿತು. ಆ ಪತ್ರಗಳ ಕಟ್ಟನ್ನು ಒಂದು ಕೆಂಪಗಿನ ದಾರ ಸುತ್ತಿ ಕಟ್ಟಿದ್ದರು. ಆ ದಾರದ ಕೊನೆಯಲ್ಲಿ ಒಂದು ಚಿಕ್ಕ ಕವರನ್ನು ಅಂಟಿಸಿದ್ದರು. ಆ ಕವರಿನಲ್ಲಿ - "ನನ್ನ ಮುದ್ದಾದ ಮೊಮ್ಮಗ ಅಪ್ಪುವಿಗೆ" ಎಂದು ಬರೆದಿತ್ತು. 

ಕವರ್ ತೆರೆದಾಗ ಅದರಲ್ಲಿ ಒಂದು ಚಿಕ್ಕ ಪತ್ರ ಇತ್ತು. 
"ನನ್ನ ಪ್ರೀತಿಯ ಮೊಮ್ಮಗ ಅಪ್ಪು, ನೀನು ದೊಡ್ಡವನಾದಾಗ ಈ ಪತ್ರ ಓದುತ್ತೀಯೋ ಇಲ್ಲವೋ ಗೊತ್ತಿಲ್ಲ. ನೀನು ಓದುವಾಗ ನಾನು ಇರುತ್ತೇನೋ ಇಲ್ಲವೋ ತಿಳಿದಿಲ್ಲ. ಆದರೆ ಒಂದು ಮಾತು ನೆನಪಿಡು. ಇಂಗ್ಲಿಷ್ ಕಲಿತು ಜಗತ್ತನ್ನು ಗೆಲ್ಲು. ಆದರೆ ಕನ್ನಡವನ್ನು ಮರೆತು ನಿನ್ನನ್ನೇ ಕಳೆದುಕೊಳ್ಳಬೇಡ. ನಿನ್ನ ತಾಯಿ ಭಾಷೆಯನ್ನು ಕಳೆದುಕೊಂಡರೆ ನಿನ್ನ ಬೇರುಗಳನ್ನು ಕಳೆದುಕೊಳ್ಳುತ್ತೀಯ. ಜೊತೆಗೆ ನಮ್ಮ ಮನೆತನದ ಸಂಸ್ಕೃತಿಯನ್ನು ಬೆಳೆಸುವ ಯುವಕನಾಗು." ಎಂದು ಬರೆದಿತ್ತು. ಅಜ್ಜನ ಸುಂದರವಾದ ಕೈಬರಹದಲ್ಲಿ ಬರೆದಿದ್ದ ಈ ಪತ್ರ  ಓದಿ ಅಪ್ರಮೇಯನ ಕಣ್ಣು ತುಂಬಿ ಬಂತು. 

ಒಂದೊಂದಾಗಿ ಪತ್ರಗಳನ್ನು ಓದುತ್ತಾ ಹೋದ ಅಪ್ರಮೇಯನಿಗೆ ತನ್ನ ಅಜ್ಜ ತನ್ನೊಡನೆ ಮಾತಾಡಬೇಕು ಅಂತಿದ್ದ ಎಲ್ಲ ವಿಷಯಗಳನ್ನೂ ಪತ್ರದ ಮೂಲಕ ನೀಡಿ ಹೋಗಿದ್ದಾರೆಂದು ಗೊತ್ತಾಯಿತು. ಎರಡನೇ ಪತ್ರದಲ್ಲಿ ನಮ್ಮ ದೇಶ, ದೇಶದ ಸಂಸ್ಕೃತಿ ಇದರ ಬಗ್ಗೆ ಉಲ್ಲೇಖಿಸಿ, "ನಮ್ಮ ದೇಶವನ್ನು ಪ್ರೀತಿಸು. ಯಾಕೆಂದರೆ ನಮ್ಮ ಬೇರುಗಳು ಇಲ್ಲಿ ಇವೆ." ಎಂದು ಬರೆದಿದ್ದರು. ಮೂರನೇ ಪತ್ರದಲ್ಲಿ ಮನುಷ್ಯತ್ವ ಹಾಗೂ ಒಳ್ಳೆ ಗುಣಗಳು ಯಾಕೆ ಇರಬೇಕು ಅನ್ನುವುದನ್ನು ಉಲ್ಲೇಖಿಸಿ "ಹಣ ಸಂಪಾದಿಸುವುದು, ಸಿರಿತನ ಅನ್ನುವುದು ಯಶಸ್ಸಲ್ಲ. ಒಳ್ಳೆಯ ಗುಣವನ್ನು ಹೊಂದಿ ಒಳ್ಳೆಯ ಮನುಷ್ಯನಾಗುವುದು ನಿಜವಾದ ಯಶಸ್ಷು" ಅಂತ ಬರೆದಿದ್ದರು. 

ಹೀಗೆ ಒಂದು ರಾತ್ರಿ, ಎರಡು ರಾತ್ರಿ, ಹತ್ತು ರಾತ್ರಿಗಳು ಕಳೆಯಿತು. ಅಜ್ಜ ಬರೆದ ಪತ್ರಗಳನ್ನು ಓದಿ ಮುಗಿಸಿದ ಅಪ್ರಮೇಯನ ತನ್ನ ಅಜ್ಜ ಎಷ್ಟೊಂದು ವಿಚಾರಗಳನ್ನು ಮಾತನಾಡಬೇಕೆಂದಿದ್ದರು. ಪ್ರತಿ ಪತ್ರದಲ್ಲೂ ಪ್ರೀತಿ ಮಾತ್ರ ಇತ್ತು. ಯಾವುದೇ ದೂರು ಇರಲಿಲ್ಲ. ಯಾವುದೇ ಬೇಸರ ಇರಲಿಲ್ಲ. ಮೊಮ್ಮಗನ ಮೇಲಿನ ಪ್ರೀತಿಯೇ ತುಂಬಿಕೊಂಡಿತ್ತು. "ನಾನು ಅಜ್ಜನಿಗೆ ಸಮಯವನ್ನೇ ನೀಡಲಿಲ್ಲ" ಅಂತ ಮರುಗಿದ.

ಕೊನೆಯದಾಗಿ ಒಂದು ಡೈರಿ ಕೈಗೆ ಸಿಕ್ಕಿತು. ಅದರ ಕೊನೆಯ ಪುಟದಲ್ಲಿ ಕೇವಲ ಒಂದು ಸಾಲು. ಅಜ್ಜನ ನಡುಗುವ ಕೈಬರಹ. 
"ಒಂದು ದಿನ ನನ್ನ ಕಥೆಗಳು ಓದಲು ಯಾರಾದರೂ ಇರುತ್ತಾರಾ?". 
ಇದನ್ನು ಓದುತ್ತಿದ್ದಂತೆಯೇ ಅಪ್ರಮೇಯನ ಕಣ್ಣೀರಿನ ಹನಿ ಆ ಪದಗಳ ಮೇಲೆ ಬಿತ್ತು. ಕೈಯಿಂದ ಡೈರಿ ಜಾರಿ ಬಿತ್ತು. ಆ ಕ್ಷಣದಲ್ಲಿ ಅವನು ಒಡೆದು ಹೋದ. "ಅಜ್ಜಾ,  ನನ್ನ ಮುಂದೆ ಹಿರಿದಾದ ಒಂದು ನಿಧಿಯೇ ಇತ್ತು,  ನಾನು ಅದನ್ನು ನೋಡಲಿಲ್ಲ,  ಕೇಳಲಿಲ್ಲ,  ಅರ್ಥ ಮಾಡಿಕೊಳ್ಳಲಿಲ್ಲ, " ಎಂದು ಜೋರಾಗಿ ಅತ್ತ. ಆದರೆ ಆ ಅಳುವನ್ನು ಕೇಳಲು ಅಜ್ಜ ಮಾತ್ರ ಅಲ್ಲಿ ಇರಲಿಲ್ಲ. 

ಆ ಕ್ಷಣದಲ್ಲಿ ಅವನಿಗೆ ಅರ್ಥವಾಯಿತು. "ತಾನು ಕಳೆದುಕೊಂಡದ್ದು ಒಬ್ಬ ವ್ಯಕ್ತಿಯಲ್ಲ,  ಒಂದು ಜೀವಂತ ಗ್ರಂಥಾಲಯವನ್ನು. ಒಂದು ವಿಶ್ವವಿದ್ಯಾಲಯವನ್ನು. ಅನುಭವದ ಮಹಾಸಾಗರವನ್ನು. ಬದುಕಿನ ಪ್ರತಿಯೊಂದು ತಿರುವಿಗೂ ಬೆಳಕು ತೋರಿಸಬಹುದಾದ ದಾರಿದೀಪವನ್ನು. ಆ ಅಮೂಲ್ಯ ನಿಧಿ ತನ್ನ ಮನೆಯಲ್ಲೇ ಇತ್ತು,  ಆದರೆ ಅದನ್ನು ಅರಿತುಕೊಳ್ಳುವಷ್ಟರಲ್ಲಿ, ಆ ನಿಧಿಯ ಬಾಗಿಲು ಶಾಶ್ವತವಾಗಿ ಮುಚ್ಚಿಹೋಗಿತ್ತು.."

ಆ ದಿನದಿಂದ ಅಪ್ರಮೇಯ ಬದಲಾಗಲು ಆರಂಭಿಸಿದ. ದೊಡ್ಡವನಾಗಿ ಅವನು ಕನ್ನಡ ಸಾಹಿತ್ಯ ಓದಿದ. ಹಳೆಯ ಗ್ರಂಥಗಳನ್ನು ಹುಡುಕಿದ. ಕನ್ನಡ ಲೇಖಕರನ್ನು ಅಧ್ಯಯನ ಮಾಡಿದ. ಸಂಶೋಧನೆ ನಡೆಸಿದ. ಭಾಷೆಯ ಬಗ್ಗೆ ಲೇಖನಗಳನ್ನು ಬರೆದ. 

***

ವರ್ಷಗಳು ಕಳೆದವು. ಇಂದು ಡಾ. ಅಪ್ರಮೇಯ ರಾಮ ಭಟ್ ರಾಜ್ಯದ ಪ್ರಸಿದ್ಧ ಕನ್ನಡ ಪ್ರಾಧ್ಯಾಪಕರಲ್ಲಿ ಒಬ್ಬ. ಅವನ ಮೇಜಿನ ಮೇಲೆ ಯಾವಾಗಲೂ ಅಜ್ಜನ ಹಳೆಯ ಮರದ ಪೆಟ್ಟಿಗೆ ಇರುತ್ತಿತ್ತು. ಪೆಟ್ಟಿಗೆ ನೋಡಿ ಕುತೂಹಲದಿಂದ ಯಾವ ವಿದ್ಯಾರ್ಥಿ ಕೇಳಿದರೂ ಅವನು ಹೇಳುತ್ತಿದ್ದ: 
"ನನ್ನ ಜೀವನದ ದೊಡ್ಡ ಗುರು ನನ್ನ ಅಜ್ಜ. ನಾನು ಅವರನ್ನು ಬದುಕಿರುವಾಗ ಕೇಳಲಿಲ್ಲ. ಆದರೆ ಅವರು ಬರೆದ ಪತ್ರಗಳು ನನ್ನ ಬದುಕಿನುದ್ದಕ್ಕೂ ಮಾರ್ಗದರ್ಶಿಯಾಗಿವೆ. ಜೀವನದ  ಪಾಠವನ್ನು ಕಲಿಸುತ್ತಿವೆ."

ಇಂದು ಮನೆಗಳಲ್ಲಿ ವೈ-ಫೈ ಇದೆ. ಸ್ಮಾರ್ಟ್‌ಫೋನ್ ಇದೆ. ಆನ್‌ಲೈನ್ ಕ್ಲಾಸ್ ಇದೆ. ಕೃತಕ ಬುದ್ಧಿಮತ್ತೆ ಇದೆ. ಜಗತ್ತಿನ ಯಾವುದೇ ಮಾಹಿತಿಯೂ ಕ್ಷಣಾರ್ಧದಲ್ಲಿ ಸಿಗುತ್ತದೆ. ಆದರೆ ಅಜ್ಜ-ಅಜ್ಜಿಯರ ಕಥೆ ಕೇಳುವ ಸಮಯ ಇದೆಯೇ? ಅವರ ಅನುಭವ ಕೇಳುವ ತಾಳ್ಮೆ ಇದೆಯೇ? ಅವರ ಜೊತೆ ಕುಳಿತು ಮಾತನಾಡುವ ಮನಸ್ಸಿದೆಯೇ?  

ಅಜ್ಜ-ಅಜ್ಜಿಯರ ಅನುಭವವನ್ನು ಗೂಗಲ್‌ನಲ್ಲಿ ಹುಡುಕಲು ಸಾಧ್ಯವಿಲ್ಲ. ಅವರ ಪ್ರೀತಿಯನ್ನು ಯೂಟ್ಯೂಬ್‌ನಲ್ಲಿ ನೋಡಲು ಸಾಧ್ಯವಿಲ್ಲ. ಅವರ ಮಮತೆಯನ್ನು ಯಾವುದೇ ಆ್ಯಪ್ ಡೌನ್‌ಲೋಡ್ ಮಾಡಿ ಪಡೆಯಲು ಸಾಧ್ಯವಿಲ್ಲ. ಅವರು ಬದುಕಿರುವಾಗ ಅವರ ಜೊತೆ ಕಳೆದ ಹತ್ತು ನಿಮಿಷ, ಅವರು ಹೋದ ನಂತರ ಜೀವನಪೂರ್ತಿ ನಮ್ಮನ್ನು ಬೆಳಗಿಸುವ ನೆನಪಾಗುತ್ತದೆ. 

ನಾವು ನಮ್ಮ ಮಕ್ಕಳಿಗೆ ಆಸ್ತಿ ಕೊಡಬಹುದು. ವಿದ್ಯೆ ಕೊಡಬಹುದು. ಸೌಲಭ್ಯಗಳನ್ನು ಕೊಡಬಹುದು. ಆದರೆ ಅಜ್ಜ-ಅಜ್ಜಿಯರ ಕಥೆಗಳನ್ನು ಇಂದು ಕಳೆದುಕೊಳ್ಳಲು ಬಿಡುತ್ತಿದ್ದರೆ, ಅವರು ಕಳೆದುಕೊಳ್ಳುವುದು ಒಂದು ಭಾಷೆಯನ್ನಲ್ಲ, ಒಂದು ಪೀಳಿಗೆಯ ಜ್ಞಾನ. ಒಂದು ಸಂಸ್ಕೃತಿ, ಒಂದು ಬದುಕಿನ ದಾರಿದೀಪ. ಒಂದು ಜೀವನದ ಅನುಭವ. ಒಂದು ಅಮೂಲ್ಯವಾದ ನಿಧಿ.

ಆದ್ದರಿಂದ,  ಇಂದು ಮನೆಗೆ ಹೋದ ಕೂಡಲೇ ಒಂದು ಕೆಲಸ ಮಾಡಿ. ನಿಮ್ಮ ಅಜ್ಜ ಅಥವಾ ಅಜ್ಜಿಯ ಬಳಿ ಕುಳಿತು ಕೇವಲ ಹತ್ತು ನಿಮಿಷ ಮಾತಾಡಿ. ಏಕೆಂದರೆ, ಇಂದು ನಮ್ಮ ಮನೆಯಲ್ಲಿರುವ ಅಜ್ಜ-ಅಜ್ಜಿ - ನಾಳೆ ನೆನಪುಗಳಾಗಬಹುದು. ಅವರ ಕಥೆಗಳು - ಒಂದು ದಿನ ಸಿಗದ ನಿಧಿಯಾಗಬಹುದು. ನಾಳೆ ಅವರ ಪೆಟ್ಟಿಗೆ ಸಿಗಬಹುದು,  ಆದರೆ ಅವರ ಧ್ವನಿ ಮತ್ತೆ ಎಂದಿಗೂ ಸಿಗುವುದಿಲ್ಲ. 

✍🏻 Deepalaxmi Bhat
Mangaluru  

ಮಂಗಳವಾರ, ಜೂನ್ 2, 2026

ಅನನ್ಯ – ಮರಣವನ್ನೂ ಮೀರಿದ ಪ್ರೀತಿ

 ✍🏻ದೀಪಲಕ್ಷ್ಮಿ ಭಟ್, ಮಂಗಳೂರು  

ಒಂದು ಸುಂದರವಾದ ಜೋಡಿ ಅಮಿತ್ - ಅನನ್ಯ. ಮದುವೆಯಾಗಿ 12 ವರ್ಷಗಳಾಗಿದ್ದವು. ಮುದ್ದಾದ ಎರಡು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಅಮಿತ್ ಅನನ್ಯ ಇಬ್ಬರೂ ಸಾಫ್ಟ್ ವೇರ್ ಕೆಲಸ ಮಾಡುತ್ತಿದ್ದರು. ವಾರದಲ್ಲಿ ಮೂರು ದಿನ ಮನೆಯಲ್ಲಿಯೇ ವರ್ಕ್ ಫ್ರಮ್ ಹೋಂ ಮಾಡಿಕೊಂಡು, ಮನೆ, ಆಫೀಸ್ ಎರಡೂ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸುತ್ತಿದ್ದರು. ಈಗಿನ ಕಾಲದ ನ್ಯೂಕ್ಲಿಯರ್ ಫ್ಯಾಮಿಲಿ ಅವರದ್ದು. ಇಬ್ಬರ ತಂದೆ ತಾಯಂದಿರು, ಊರಿನಲ್ಲಿ ಮನೆ ಮಾಡಿಕೊಂಡಿದ್ದರು. ಇವರಿಬ್ಬರೂ ಬೆಂಗಳೂರಿನಲ್ಲಿದ್ದರು.  ಸ್ವಂತವಾಗಿ 4 ಬೆಡ್ ರೂಮಿನ ಫ್ಲಾಟ್ ಒಂದನ್ನು ಖರೀದಿಸಿ, ಆರಾಮ ಜೀವನ ಸಾಗಿಸುತ್ತಿದ್ದರು. ಕುಟುಂಬದಲ್ಲಿ ಪ್ರೀತಿ ಹೇಗಿರಬೇಕು ಎಂಬುದನ್ನು ಇವರನ್ನು ನೋಡಿ ಕಲಿಯಬೇಕಾದದ್ದು ಅನ್ನುವಂತೆ ಪರಸ್ಪರ ಪ್ರೀತಿಯಿಂದ ಜೀವನ ನಡೆಸುತ್ತಿದ್ದರು. ಯಾವುದಕ್ಕೂ ಕೊರತೆಯಿಲ್ಲದ ಜೀವನವಾದ್ದರಿಂದ, ಅನೇಕ ಬಡ ಜನರಿಗೆ ತಮ್ಮಿಂದಾಗುವ ರೀತಿಯಲ್ಲಿ ಸಹಾಯ ಮಾಡುತ್ತಿದ್ದರು. 



"ಅನನ್ಯಾ... ನನ್ನ ಪರ್ಸು ಕಾಣಿಸುತ್ತಿಲ್ಲ..." ಎಂದು ಅಮಿತ್ ಹೇಳುತ್ತಿದ್ದಂತೆ, " ಅಮ್ಮಾ.. ನನ್ನ ಸೋಶಿಯಲ್ ನೋಟ್ಸ್ ಸಿಗುತ್ತಿಲ್ಲ" ಅಂತ ಅಮೂಲ್ಯ ಕೂಗಿದಳು. "ಅಮ್ಮಾ... ಆಟೋ ಬಂದಿದೆ. ನನ್ನ ಟಿಫಿನ್ ಕೊಡು" ಅಂತ ಅಮರ್ಥ್ಯ ಕೂಗಿದ. ಎಲ್ಲರಿಗೂ ಅನನ್ಯ ಇಲ್ಲದಿದ್ದರೆ, ದಿನವೇ ಹೋಗುವುದಿಲ್ಲ ಅನ್ನುವ ರೀತಿಯಲ್ಲಿ ಅವರ ಸಂಸಾರ. ಒಂದೇ ಉಸಿರಿನಲ್ಲಿ ಅನನ್ಯ ಒಂದು ಕೈಯಲ್ಲಿ ಮಕ್ಕಳ ಟಿಫಿನ್ ಬ್ಯಾಗ್ಸ್ ಹಿಡಿದುಕೊಂಡು ಬಂದು, ಮೊದಲು ಅಮೂಲ್ಯಳ ಟೇಬಲ್ ಇಂದ ಸೋಶಿಯಲ್ ನೋಟ್ಸ್ ತೆಗೆದುಕೊಟ್ಟು - "ನೋಡು ಅಮ್ಮು, ನೀಟ್ ಆಗಿ ಟೇಬಲ್ನಲ್ಲಿ ಇಟ್ಟುಕೊಂಡ್ರೆ, ಎಲ್ಲ ಕೈಗೆ ಬೇಕಿದ್ದ ಹಾಗೆ ಸಿಗುತ್ತೆ. ನೀನು ಇನ್ನು ಯಾವಾಗ ಒರ್ಗನೈಸ್ಡ್ ಆಗಿ ಇರೋದನ್ನು ಕಲೀತಿ" ಅಂತ ಹೇಳಿ ಮಕ್ಕಳನ್ನು ಕಳುಹಿಸಿಕೊಟ್ಟಳು. ಆಮೇಲೆ ಅಮಿತ್ ನ ಪರ್ಸು ಅವನ ಕೈಗೆ ಕೊಟ್ಟು, ತಾನೂ ಹೊರಟಳು. ಅಮಿತ್ ಅನನ್ಯ ಇಬ್ಬರ ಆಫೀಸ್ ಒಂದೇ ಕಡೆ ಆದ ಕಾರಣ ಒಟ್ಟಿಗ ಮನೆಯಿಂದ ಹೊರಟರು. ಬೇಸ್ಮೆಂಟ್ ರೀಚ್ ಆದ ಹಾಗೆ, ಅನನ್ಯಳಿಗೆ ತಲೆ ಸುತ್ತು ಬಂದಂತಾಗಿ ಕುಸಿದಳು. "ಅನನ್ಯಾ, ಏನಾಯ್ತು? ಎದ್ದೇಳು" ಅಂತ ಹೇಳಿ ಅಮಿತ್ ಅನನ್ಯಾಳಿಗೆ ನೀರು ಚುಮುಕಿಸಿದ. ಎಚ್ಚರವಾದರೂ ಅನನ್ಯಾಳಿಗೆ ನಡೆಯಲು ಕಷ್ಟವಾಯಿತು. ಭೀತಗೊಂಡ ಅಮಿತ್, ಅನನ್ಯಳನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದ. 

ಪ್ರಿಲಿಮಿನರಿ ಟೆಸ್ಟ್ ಎಲ್ಲ ಆದ ಮೇಲೆ ಡಾಕ್ಟರ್ ಅಮಿತ್ ನ ಕರೆದು, "ಅಮಿತ್ ಅವರೇ, ಐ ಆಮ್ ಸಾರೀ ಟು ಸೇ, ಅನನ್ಯ ಅವರಿಗೆ ಗ್ರೇಡ್ 4  ಬ್ರೈನ್ ಟ್ಯೂಮರ್ ಆಗಿದೆ. ಫೈನಲ್ ಸ್ಟೇಜ್ ಬೇರೆ. ಹೆಚ್ಚೆಂದರೆ, 4 ತಿಂಗಳು ಲೈಫ್ ಇದೆ ಅಂತ ಹೇಳಬಹುದು." ಅಮಿತ್ ಗೆ ಜಗತ್ತೇ ಕುಸಿದಂತಾಯಿತು.  ನಡುಗುವ ಧ್ವನಿಯಲ್ಲಿ, "ಡಾಕ್ಟರ್... ನೀವು ಏನೋ ತಪ್ಪು ಹೇಳ್ತಿದ್ದೀರಾ... ನನ್ನ ಹೆಂಡತಿ ಆರೋಗ್ಯವಾಗಿದ್ದಾಳೆ... ನಿನ್ನೆವರೆಗೂ ಚೆನ್ನಾಗೇ ಇದ್ದಳು..." ಎಂದು ತಡವರಿಸುತ್ತಾ ಕೇಳಿದ. ಡಾಕ್ಟರ್ ಮೌನವಾಗಿ ಸ್ಕ್ಯಾನ್ ವರದಿಯನ್ನು ಅವನ ಮುಂದೆ ಇಟ್ಟರು. "ನಮಗೂ ಇದೇ ಆಶ್ಚರ್ಯವಾಗಿದೆ. ಕೆಲವೊಮ್ಮೆ ಬ್ರೈನ್ ಟ್ಯೂಮರ್ ಯಾವುದೇ ಲಕ್ಷಣಗಳಿಲ್ಲದೇ ಬೆಳೆಯುತ್ತದೆ. ಈಗಾಗಲೇ ಅದು ಮೆದುಳಿನ ಬಹುತೇಕ ಭಾಗವನ್ನು ಆವರಿಸಿದೆ." ಅಮಿತ್ ಕುರ್ಚಿಯ ಮೇಲೆಯೇ ಕುಸಿದು ಕುಳಿತ. ಅವನ ಕಣ್ಣುಗಳ ಮುಂದೆ ಅನನ್ಯಳ ಮುಖ ತೇಲತೊಡಗಿತು.

"ಬೆಳಿಗ್ಗೆ ಎದ್ದು ಮಕ್ಕಳಿಗೆ ಊಟ ಮಾಡಿಸುವುದು... ಅವನಿಗೆ ಟೈ ಕಟ್ಟಿಕೊಡುವುದು... ತಾಯಿಯಂತೆ ಎಲ್ಲರನ್ನು ನೋಡಿಕೊಳ್ಳುವುದು... ಇನ್ನೇನು ನಾಲ್ಕು ತಿಂಗಳು ಮಾತ್ರವೇ?" - ಅವನ ಮನಸ್ಸು ಅದನ್ನು ಒಪ್ಪಿಕೊಳ್ಳಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಅನನ್ಯ ಚೇತರಿಸಿಕೊಂಡಳು. ಅಲ್ಲಿಂದ ಮನೆಗೆ ವಾಪಾಸ್ ಹೋಗುವ ಕ್ಷಣಗಳೆಲ್ಲ ಅಮಿತ್ ತಲೆಗೆ ಕಲ್ಲುಬಂಡೆ ಬಿದ್ದಿರುವಂಥ ಅನುಭವ. ಮನೆಗೆ ಹಿಂದಿರುಗುವ ದಾರಿಯೆಲ್ಲಾ ಅಮಿತ್ ಮೌನವಾಗಿದ್ದ. ಅನನ್ಯ ಮಾತ್ರ ಅವನನ್ನು ನೋಡಿ ನಗುತ್ತಿದ್ದಳು. "ಅಮಿತ್, ಏನಾಯ್ತು? ಯಾಕೆ ಇಷ್ಟು ಸೀರಿಯಸ್ ಆಗಿದ್ದೀಯಾ? ಡಾಕ್ಟರ್ ಏನಂದ್ರು?" ಅಮಿತ್ ಕ್ಷಣಕಾಲ ಕಣ್ಣು ಮುಚ್ಚಿದ. ನಂತರ ಸುಳ್ಳು ಹೇಳಿದ. "ವಿಟಮಿನ್ ಡಿಫಿಶಿಯನ್ಸಿ ಅಂತೆ. ಸ್ವಲ್ಪ ರೆಸ್ಟ್ ತೆಗೆದುಕೊಳ್ಳಬೇಕಂತೆ." ಅನನ್ಯ ಮತ್ತೆ ನಕ್ಕಳು. "ಅಷ್ಟೇನಾ? ನಿನ್ನ ಮುಖ ನೋಡಿ ನಾನು ಅಂದುಕೊಂಡೆ ಏನೋ ದೊಡ್ಡ ವಿಷಯ ಇದೆ ಅಂತ." ಆ ನಗುವನ್ನು ನೋಡಿದ ಅಮಿತ್ ನ ಹೃದಯ ಸಾವಿರ ತುಂಡಾಯಿತು.

 ಆ ರಾತ್ರಿ ಅವನಿಗೆ ನಿದ್ರೆ ಬರಲಿಲ್ಲ. ಅನನ್ಯ ಅವನ ಪಕ್ಕದಲ್ಲಿ ಮಗುವಿನಂತೆ ಮಲಗಿದ್ದಳು. ಅವಳ ಕೂದಲನ್ನು ಸವರುತ್ತಾ ಅಮಿತ್ ಕಣ್ಣೀರು ಸುರಿಸಿದ. "ದೇವರೇ... ನನ್ನ ಆಯಸ್ಸು ಬೇಕಾದ್ರೆ ಅವಳಿಗೆ ಕೊಡು... ಆದರೆ ಅವಳನ್ನು ನನ್ನಿಂದ ಕಿತ್ತುಕೊಳ್ಳಬೇಡ..." - ಎಂದು ಮೊದಲ ಬಾರಿಗೆ ಅಮಿತ್ ದೇವರ ಮುಂದೆ ಸೋತವನಂತೆ ಪ್ರಾರ್ಥಿಸುತ್ತಿದ್ದ. 

ಮುಂದಿನ ದಿನಗಳಿಂದ ಅಮಿತ್ ಒಂದು ನಿರ್ಧಾರಕ್ಕೆ ಬಂದಿದ್ದ. "ಅನನ್ಯಳಿಗೆ ಅವಳ ಈ ಖಾಯಿಲೆ ಬಗ್ಗೆ  ಹೇಳಲೇಬಾರದು. ಅವಳ ಉಳಿದ ದಿನಗಳನ್ನು ದುಃಖದಲ್ಲಿ ಕಳೆಯಲು ಬಿಡಬಾರದು. ಅವಳ ಜೀವನದ ಕೊನೆಯ ಕ್ಷಣದವರೆಗೂ ಸಂತೋಷವಾಗಿರಿಸಬೇಕು." ಎಂದು. ಆ ದಿನದಿಂದ ಪ್ರತಿದಿನವನ್ನು ಒಂದು ಹಬ್ಬದಂತೆ ಆಚರಿಸಲು ಆರಂಭಿಸಿದ. "ಮನೆ ಜವಾಬ್ದಾರಿ ನಾನೇ ನೋಡಿಕೊಳ್ಳುತ್ತೇನೆ. ನೀನು ಕೆಲಸ ಬಿಡು. ಒಂದು ನಾಲ್ಕು ತಿಂಗಳು ನಾವು ಫ್ರೀ ಮಾಡಿಕೊಳ್ಳೋಣ" ಅಂದ. ಅವನೂ ಕೆಲಸಕ್ಕೆ ನಾಲ್ಕು ತಿಂಗಳುಗಳ ಕಾಲ ರಜೆ ಮಾಡಿ, ಅನನ್ಯಾ ಹಾಗೂ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಲು ಆರಂಭಿಸಿದ. ಅನನ್ಯ ಕೂಡ ಅಮಿತ್ ಹೇಳಿದಂತೆ ಕೆಲಸದಿಂದ ರಿಸೈನ್ ಮಾಡಿದಳು. 

ಆ ತಿಂಗಳು ಪೂರ್ತಿ ಅಮಿತ್ - ಕುಟುಂಬ ಸಮೇತ ಪ್ರವಾಸಗಳು...ಹಳೆಯ ನೆನಪುಗಳನ್ನು ಮರುಕಳಿಸುವುದು...ಅವಳ ನೆಚ್ಚಿನ ಹಾಡುಗಳನ್ನು ಕೇಳಿಸುವುದು...ಪ್ರತಿ ಕ್ಷಣವನ್ನು ನೆನಪಾಗುವಂತೆ ಉಳಿಸಿಕೊಳ್ಳುತ್ತಿದ್ದ. ಆದರೆ ವಿಧಿ ಮಾತ್ರ ತನ್ನ ಕೆಲಸವನ್ನು ನಿಧಾನವಾಗಿ ಮಾಡುತ್ತಿತ್ತು... ಅನನ್ಯಳಿಗೆ ಆಗಾಗ ತಲೆನೋವು ಶುರುವಾಯಿತು. ಕೆಲವೊಮ್ಮೆ ಮಾತನಾಡುತ್ತಾ ಪದಗಳನ್ನು ಮರೆತು ಬಿಡುತ್ತಿದ್ದಳು. ಒಮ್ಮೆ ಅಡಿಗೆ ಮಾಡುತ್ತಿದ್ದಾಗ ಗ್ಯಾಸ್ ಆಫ್ ಮಾಡುವುದನ್ನೇ ಮರೆತಳು. ಹಲವಾರು ಬಾರಿ ಮಕ್ಕಳ ಹೆಸರನ್ನು ಕೂಡಾ ಮರೆತಳು. ಇದೆಲ್ಲ ನೋಡುತ್ತಾ ಅಮಿತ್ ಹೃದಯ ಪ್ರತಿದಿನ ಸಾಯುತ್ತಿತ್ತು...ಆದರೆ ಮುಖದಲ್ಲಿ ಮಾತ್ರ ನಗುವನ್ನು ಇಟ್ಟುಕೊಂಡಿದ್ದ. 

ಅನನ್ಯಳ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿತ್ತು. ಒಂದು ದಿನ ಅಮಿತ್ ದಿನಸಿ ಸಾಮಾನು ಖರೀದಿಸಲೆಂದು ಹೊರಗೆ ಹೋಗಿದ್ದ. ಶಾಪಿಂಗ್ ನಿಂದ ಮನೆಗೆ ಬಂದಾಗ, ಅವನಿಗೆ ಬಿಸಿ ಬಿಸಿ ಕಾಪಿ ಮಾಡಿ ಕೊಟ್ಟ ಅನನ್ಯ ಸೋಫಾದಲ್ಲಿ ಕುಳಿತು  "ಅಮಿತ್... ನಾನು ನಿಂಗೆ ಒಂದು ವಿಷಯ ಹೇಳಬೇಕಿದೆ." ಎಂದಳು. ಅಮಿತ್ ಬೆಚ್ಚಿಬಿದ್ದ. "ಏನಾಯ್ತು ಅನನ್ಯಾ?" ಎಂದು ಕೇಳಿದ. ಅನನ್ಯ "ನನಗೆ ಎಲ್ಲ ಗೊತ್ತು." ಅಂತ ಹೇಳಿದಳು. ಅಮಿತ್ ಮುಖ ಬಿಳಿಚಿತು. "ಏನು ಗೊತ್ತು?" ಅಂತ ಕೇಳಿದ. "ನನಗೆ ಬ್ರೈನ್ ಟ್ಯೂಮರ್ ಇದೆ. ನಾಲ್ಕು ತಿಂಗಳು ಮಾತ್ರ ಅಂತ ಡಾಕ್ಟರ್ ಹೇಳಿದ್ದು ನನಗೆ ಗೊತ್ತು." ಅಂದಳು.  ಅಮಿತ್ ಕೈಯಲ್ಲಿದ್ದ ಕಾಫಿ ಕಪ್ ನೆಲಕ್ಕೆ ಬಿತ್ತು.

" ನಿಂಗೆ.....ಹೇಗೆ???" ಅಂತ ಅಮಿತ್ ತಡವರಿಸಿದ. "ಆ ದಿನ ಆಸ್ಪತ್ರೆಯಿಂದ ಬಂದ ಮೇಲೆ, ನೀನು ತುಂಬ ಅಪ್ಸೆಟ್ ಆಗಿದ್ದು ನೋಡಿ, ನಿನ್ನ ಬ್ಯಾಗ್ ನಲ್ಲಿ ಇದ್ದ ನನ್ನ ಮೆಡಿಕಲ್ ರಿಪೋರ್ಟ್ ನೋಡಿದ್ದೆ." ಅಮಿತ್ ಕಣ್ಣೀರು ಹಾಕುತ್ತಾ ಅವಳ ಕಾಲ ಬಳಿ ಕುಸಿದು ಕುಳಿತ. "ಕ್ಷಮಿಸು ಅನನ್ಯಾ...ನಿಂಗೆ ವಿಷಯ ತಿಳಿಸಲು ನಂಗೆ ಧೈರ್ಯ ಇರ್ಲಿಲ್ಲ. ನಂಗೆ - ನಿನ್ನನ್ನು ಉಳಿಸಿಕೊಳ್ಳಲಾಗಲಿಲ್ಲ..." ಅಂತ ಬಿಕ್ಕಿ ಬಿಕ್ಕಿ ಅತ್ತ. ಅನನ್ಯ ಅವನ ತಲೆಯನ್ನು ಸವರುತ್ತಾ "ನಾನು ನಿನ್ನನ್ನು ಕ್ಷಮಿಸುವಂತದ್ದು ಏನೂ ಇಲ್ಲ. ಆದರೆ ನೀನು ನನಗೆ ಒಂದು ಮಾತು ಕೊಡಬೇಕು." - ಅಂದಳು. "ಏನು?" ಅಂತ ಅಮಿತ್ ಕೇಳಿದ. ಅನನ್ಯ "ನಾನು ಹೋದ ಮೇಲೆ ನೀನು ಮತ್ತೊಮ್ಮೆ ಮದುವೆಯಾಗಬೇಕು." ಅಂದಳು. ಶಾಕ್ ಆದ ಅಮಿತ್  "ಅಸಾಧ್ಯ!" - ಅಂತ ಕೂಗಿದ. ಆಗ ನಗುಮುಖದಲ್ಲೇ ಇದ್ದ ಅನನ್ಯ, "ನಾನು ನಿನ್ನ ಪರ್ಮಿಷನ್ ಕೇಳುತ್ತಿಲ್ಲ ಅಮಿತ್... ನಿನ್ನಿಂದ ಮಾತು ತೆಗೆದುಕೊಳ್ಳುತ್ತಿದ್ದೇನೆ." ಅಂದಳು.

ಕೆಲವೇ ವಾರಗಳಲ್ಲಿ ಅನನ್ಯ ಸಾವನ್ನಪ್ಪಿದಳು. ಮನೆ ಮೌನವಾಗಿತ್ತು. ಮಕ್ಕಳು ತಾಯಿಯನ್ನು ಹುಡುಕುತ್ತಿದ್ದರು. ಅಮಿತ್ ಬದುಕಿದ್ದರೂ ಜೀವಂತ ಶವದಂತಾಗಿದ್ದ. 

ಅನನ್ಯ ಸತ್ತ ಮೂರು ತಿಂಗಳ ನಂತರ, ಒಂದು ದಿನ ಒಬ್ಬ ವಕೀಲರಿಂದ ಕರೆ ಬಂತು. "ಅಮಿತ್ ಸರ್, ಅನನ್ಯ ಮ್ಯಾಡಮ್ ನಿಮಗಾಗಿ ಒಂದು ಲೆಟರ್ ಮತ್ತು ಒಂದು ಫೈಲ್ ಬಿಟ್ಟು ಹೋಗಿದ್ದಾರೆ." ಅಮಿತ್ ಆಶ್ಚರ್ಯದಿಂದ ಲಾಯರ್ ಆಫೀಸ್ ಗೆ ಹೋದ. ಅಲ್ಲಿ ಒಂದು ಸೀಲ್ಡ್ ಕವರ್ ಇತ್ತು. ಅದರ ಮೇಲೆ ಬರೆಯಲಾಗಿತ್ತು: "ನನ್ನ ನಾಲ್ಕನೇ ಮಗುವಿಗೆ..."

ಅಮಿತ್ ಗಾಬರಿಯಾದ. "ನಾಲ್ಕನೇ ಮಗು?" ಅವರಿಗೆ ಇಬ್ಬರು ಮಕ್ಕಳು ಮಾತ್ರ ಇದ್ದರು. ಕವರ್ ತೆರೆದ. ಒಳಗೆ ಒಂದು ಪತ್ರ.

--- 

"ಪ್ರಿಯ ಅಮಿತ್,

ನೀನು ಈ ಪತ್ರ ಓದುತ್ತಿದ್ದರೆ, ನಾನು ನಿನ್ನ ಜೊತೆಗೆ ಇಲ್ಲ ಎನ್ನುವುದು ಖಚಿತ. ಆದರೆ ನಾನು ನಿನ್ನನ್ನು ಬಿಟ್ಟು ಹೋಗಿಲ್ಲ.

ನಿಂಗೆ ನೆನಪಿದೆಯಾ? ಮೂರು ವರ್ಷಗಳ ಹಿಂದೆ ನಾವು ಒಂದು ವಿಶೇಷ ವೈದ್ಯಕೀಯ ಪ್ರೋಗ್ರಾಂಗೆ ಹೋಗಿದ್ದೆವು. ಅಲ್ಲಿ ನಮ್ಮ ಜೀನ್ಸ್ ಮತ್ತು ಸ್ಟೆಮ್ ಸೆಲ್ಸ್ ಸಂಗ್ರಹಿಸಿದ್ದರು. ನನ್ನ ಕಾಯಿಲೆ ಗೊತ್ತಾದ ದಿನ, ನಾನು ಗುಪ್ತವಾಗಿ ಒಂದು ನಿರ್ಧಾರ ಮಾಡಿದೆ. ನನ್ನ ಅಂಡಾಣುಗಳನ್ನು ಸಂರಕ್ಷಿಸಿ, ನಮ್ಮ ಭವಿಷ್ಯವನ್ನು ಉಳಿಸಿದ್ದೇನೆ. ಈ ಫೈಲ್ ನಲ್ಲಿ ಎಲ್ಲಾ ಕಾನೂನು ಅನುಮತಿಗಳು, ವೈದ್ಯಕೀಯ ದಾಖಲೆಗಳು ಮತ್ತು ನನ್ನ ಒಪ್ಪಿಗೆ ಇದೆ. ನೀನು ಒಪ್ಪಿದರೆ, ನಾನು ಸತ್ತ ನಂತರವೂ ನಮ್ಮ ಮಗುವಿಗೆ ಜನ್ಮ ನೀಡಬಹುದು. ಅದು ನನ್ನ ಕೊನೆಯ ಆಸೆ ಮತ್ತು ಉಡುಗೊರೆ.

ನಾನು ಬದುಕಿರದಿದ್ದರೂ, ನಮ್ಮ ಪ್ರೀತಿ ಬದುಕಿರಲಿ.

– ನಿನ್ನ ಅನನ್ಯ"

---

ಲೆಟರ್ ಓದಿದ ಅಮಿತ್ ಸ್ತಬ್ಧನಾಗಿ ಕುಳಿತ. ಅವನ ಕೈಗಳು ನಡುಗುತ್ತಿದ್ದವು. ಅನನ್ಯಾ ತನ್ನ ಮರಣದ ನಂತರವೂ ಅವನ ಏಕಾಂತದ ಬಗ್ಗೆ, ಅವನ ಏಕಾಂತ ನಿವಾರಿಸುವ ಬಗ್ಗೆ ಯೋಚಿಸಿದ್ದಳು. ಅವನ ಭವಿಷ್ಯವನ್ನು ಯೋಚಿಸಿದ್ದಳು. ಆದರೆ ನಿಜವಾದ ತಿರುವು ಇನ್ನೂ ಬಾಕಿಯಿತ್ತು.

ಅಮಿತ್ ನೆನಪಿಸಿಕೊಂಡ. ಅಮೂಲ್ಯ ಮತ್ತು ಅಮರ್ಥ್ಯ... ಅವನ ಸ್ವಂತ ಮಕ್ಕಳು ಅಲ್ಲ. ಅವರು ಅನನ್ಯಳ ತಂಗಿಯ ಮಕ್ಕಳಾಗಿದ್ದರು. ಬಸುರಿಯಾಗಿದ್ದ ಅನನ್ಯ, ಹೆರಿಗೆಗೆಂದು ತವರು ಮನೆಗೆ ಹೋಗಿದ್ದಳು. ಅದೇ ಸಮಯದಲ್ಲಿ ಅನನ್ಯಳ ತಂಗಿ ಕೂಡ ಹೆರಿಗೆಗೆಂದು ತವರಿಗೆ ಬಂದಿದ್ದಳು. ಒಂದು ದಿನ ಹಿಂದೆ, ಅನನ್ಯಳ ತಂಗಿಗೆ ಹೆರಿಗೆ  ಆಗಿ ಎರಡು ಮುದ್ದಾದ ಅವಳಿ ಜವಳಿ ಮಕ್ಕಳಿಗೆ ತಾಯಿಯಾಗಿದ್ದಳು.  ಆ ದಿನ, ಅನನ್ಯಳ ತಂಗಿ ಮತ್ತು ಭಾವ ಆಸ್ಪತ್ರೆಯಿಂದ ಮನೆಗೆ ಹೋಗಬೇಕಾದರೆ ದೊಡ್ಡದಾದ ರಸ್ತೆ ಅಪಘಾತದಲ್ಲಿ ಮೃತರಾದರು. ಅನನ್ಯ ಅಪಘಾತದ ವಿಷಯ ತಿಳಿದು ದುಃಖದಲ್ಲಿ, ಅವಳಿಗೆ ಹೆರಿಗೆ ನೋವು ಬಂತು. ಬೇಗವಾದ ಕಾರಣ, ಅವಳ ಮಗು ಹುಟ್ಟಿದಾಗಲೇ ಸತ್ತು ಹೋಗಿತ್ತು. ತನ್ನ ತಂಗಿ ಮಕ್ಕಳು ಅನಾಥರಾಗಬಾರದೆಂದು, ಅನನ್ಯಳೇ ಆ ಮಕ್ಕಳನ್ನು ತನ್ನ ಮಕ್ಕಳೆಂದು ಭಾವಿಸಿದಳು. ಮಕ್ಕಳ ಮನಸ್ಸಿಗೆ ನೋವಾಗಬಾರದೆಂದು ಅನನ್ಯ ಸತ್ಯವನ್ನು ಮಕ್ಕಳಿಗೆ ತಿಳಿಸಿರಲಿಲ್ಲ. ಹಾಗೆ ತಮ್ಮ ಸ್ವಂತ ಮಗುವಿಗಾಗಿ ಪ್ರಯತ್ನಿಸಲಿಲ್ಲ.  ಹನ್ನೆರಡು ವರ್ಷಗಳಿಂದ ಅವಳು ಆ ಮಕ್ಕಳನ್ನೇ ತನ್ನ ಸ್ವಂತ ಮಕ್ಕಳಂತೆ ಬೆಳೆಸಿದ್ದಳು. ಅಮಿತ್ ಗಾಗಿ ಮಾತ್ರವಲ್ಲ...ಆ ಮಕ್ಕಳಿಗಾಗಿಯೂ ಅವಳು ತನ್ನ ಜೀವನವನ್ನು ಅರ್ಪಿಸಿದ್ದಳು.

ಆ ರಾತ್ರಿ ಅಮಿತ್ ತನ್ನ ಕೋಣೆಯಲ್ಲಿ ಒಬ್ಬನೇ ಕುಳಿತಿದ್ದ. ಅನನ್ಯ ಬರೆದ ಪತ್ರವನ್ನು ಎದೆಯ ಮೇಲೆ ಇಟ್ಟುಕೊಂಡೇ ಕಿಟಕಿಯಾಚೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಿದ್ದ. ಅಮೂಲ್ಯ ಮತ್ತು ಅಮರ್ಥ್ಯ ಪಕ್ಕದ ಕೋಣೆಯಲ್ಲಿ ಮಲಗಿದ್ದರು. ಅವರನ್ನು ನೋಡುತ್ತಿದ್ದಂತೆ ಅವನಿಗೆ ಅನನ್ಯ ನೆನಪಾಗುತ್ತಿದ್ದಳು. ತನ್ನ ಗರ್ಭದಲ್ಲಿ ಹುಟ್ಟದ ಮಕ್ಕಳನ್ನೂ ಸಹ ತನ್ನ ಹೃದಯದಲ್ಲಿ ಹೊತ್ತು ಬೆಳೆಸಿದ ತಾಯಿ...ತನ್ನ ಮರಣದ ನಂತರವೂ ಗಂಡನ ಏಕಾಂತದ ಬಗ್ಗೆ ಯೋಚಿಸಿದ ಹೆಂಡತಿ...ತನ್ನ ದುಃಖವನ್ನು ಮರೆತು ಎಲ್ಲರ ಬದುಕನ್ನು ಬೆಳಗಿಸಿದ ಹೆಣ್ಣು... "ಅನನ್ಯಾ... ನೀನು ನನಗೆ ಸಿಕ್ಕ ಹೆಂಡತಿ ಅಲ್ಲ... ದೇವರು ಕೊಟ್ಟ ಆಶೀರ್ವಾದ..." ಎಂದು ಅಮಿತ್ ಕಣ್ಣೀರಿಟ್ಟ.

ಅಷ್ಟರಲ್ಲಿ ಮೇಜಿನ ಮೇಲಿದ್ದ ಅನನ್ಯಳ ಫೋಟೋ ಪಕ್ಕದ ದೀಪದ ಜ್ಯೋತಿ ಗಾಳಿಯಿಲ್ಲದಿದ್ದರೂ ಮೆಲ್ಲನೆ ಅಲುಗಾಡಿತು. ಅಮಿತ್ ಎದ್ದು ಫೋಟೋ ಹತ್ತಿರ ಹೋದ. ಫೋಟೋದಲ್ಲಿದ್ದ ಅನನ್ಯ ಎಂದಿನಂತೆ ನಗುತ್ತಿದ್ದಳು. ಆ ನಗುವಿನಲ್ಲೇ ಅವನಿಗೆ ಒಂದು ಉತ್ತರ ಸಿಕ್ಕಿತು. "ಪ್ರೀತಿ ಎಂದರೆ ಜೊತೆಯಲ್ಲಿ ಬದುಕುವುದು ಮಾತ್ರವಲ್ಲ... ಯಾರಾದರೂ ಇಲ್ಲದ ನಂತರವೂ ಅವರ ಒಳ್ಳೆಯತನದ ನೆರಳಿನಲ್ಲಿ ಬದುಕುವುದು."

ಅವನು ನಿಧಾನವಾಗಿ ಎದ್ದು ಮಕ್ಕಳ ಕೋಣೆಗೆ ಹೋದ. ಮಲಗಿದ್ದ ಅಮೂಲ್ಯ ಮತ್ತು ಅಮರ್ಥ್ಯರನ್ನು ತಬ್ಬಿಕೊಂಡ.  "ನಿಮ್ಮ ಅಮ್ಮ ಹೋಗಿಲ್ಲ ಮಕ್ಕಳೇ.. ಅವಳು ನಿಮ್ಮ ನಗುವಿನಲ್ಲಿ ಇದ್ದಾಳೆ...ನಿಮ್ಮ ಕನಸುಗಳಲ್ಲಿ ಇದ್ದಾಳೆ... ನಿಮ್ಮ ಒಳ್ಳೆಯತನದಲ್ಲಿ ಇದ್ದಾಳೆ...ನಿಮ್ಮ ಪ್ರತಿಯೊಂದು ಉಸಿರಿನಲ್ಲೂ ಇದ್ದಾಳೆ...". ಅವನ ಕಣ್ಣೀರಿನ ಹನಿ ಮಕ್ಕಳ ಹಣೆಯ ಮೇಲೆ ಬಿತ್ತು. 

ಹೊರಗೆ ಮಳೆ ನಿಂತಿತ್ತು. ಮೋಡಗಳ ಹಿಂದೆ ಅಡಗಿದ್ದ ಚಂದ್ರ ನಿಧಾನವಾಗಿ ಹೊರಬಂದ.ಅನನ್ಯ ಹೋಗಿರಲಿಲ್ಲ...ಅವಳು ಹೆಂಡತಿಯಾಗಿ ಬಂದಿದ್ದಳು...ತಾಯಿಯಾಗಿ ಉಳಿದಿದ್ದಳು...ಪ್ರೀತಿಯಾಗಿ ಶಾಶ್ವತವಾಗಿದ್ದಳು...

ಅಮಿತ್ ಕಣ್ಣು ಮುಚ್ಚಿ ನಿಧಾನವಾಗಿ ನುಡಿದ: "ಅನನ್ಯಾ...ನಿನ್ನ ಜೀವನ ಕೇವಲ ಹನ್ನೆರಡು ವರ್ಷಗಳ ದಾಂಪತ್ಯವಲ್ಲ...ಒಂದು ಜೀವಮಾನಕ್ಕೆ ಸಾಕಾಗುವಷ್ಟು ಪ್ರೀತಿಯ ಪಾಠ..."

ಆ ಕ್ಷಣ ಗಾಳಿಯಲ್ಲಿ ಮಲ್ಲಿಗೆಯ ಸುವಾಸನೆ ಹರಡಿತು. ಅದು ಬಹುಶಃ ಅನನ್ಯಳ ಕೊನೆಯ ಸ್ಪರ್ಶವಾಗಿರಬಹುದು...ಯಾಕೆಂದರೆ ಕೆಲವು ಪ್ರೇಮಗಳು ಕೈ ಹಿಡಿದು ನಡೆಯುವುದಕ್ಕಾಗಿ ಹುಟ್ಟುವುದಿಲ್ಲ...ಒಬ್ಬರ ಬದುಕನ್ನು ಬೆಳಗಿಸಿ, ಅವರ ಆತ್ಮದೊಳಗೆ ಶಾಶ್ವತವಾಗಿ ನೆಲೆಸುವುದಕ್ಕಾಗಿ ಹುಟ್ಟುತ್ತವೆ.

ಪ್ರೀತಿಗೆ ಅಂತ್ಯವಿಲ್ಲ. ದೇಹಗಳು ದೂರವಾಗಬಹುದು...ಸಮಯ ಕಳೆಯಬಹುದು...ಜನ್ಮಗಳು ಬದಲಾಗಬಹುದು...ಆದರೆ ನಿಜವಾದ ಪ್ರೀತಿ —ಒಮ್ಮೆ ಹೃದಯದಲ್ಲಿ ನೆಲೆಸಿದರೆ, ಅದು ನೆನಪಾಗಿ ಅಲ್ಲ...ಉಸಿರಾಗಿ ಬದುಕುತ್ತದೆ.

❤️

✍🏻 Deepalaxmi Bhat
Mangaluru  

ಶನಿವಾರ, ಮೇ 16, 2026

ಅಪೂರ್ವ ಪ್ರೇಮ - ಜನ್ಮಾಂತರದ ಪ್ರೀತಿ

✍🏻ದೀಪಲಕ್ಷ್ಮಿ ಭಟ್, ಮಂಗಳೂರು  

ಅಂದು ಜಡ ಹಿಡಿಸುವಂತೆ ಬೀಳುತ್ತಿದ್ದ ಮಳೆ. ಮಳೆ ಹನಿಗಳು ಕಿಟಕಿಯ ಗಾಜಿನ ಮೇಲೆ ಮುತ್ತಿನ ಹಾರ ಪೋಣಿಸಿದಂತೆ ಒಂದೊಂದಾಗಿ ಜಾರುತ್ತಿದ್ದವು. ಆ ಹೊತ್ತಿಗೆ, ಮೋಡ ಕವಿದ ಆ ಆಕಾಶವೇ ಯಾರೋ ಒಬ್ಬರ ಮನಸ್ಸಿನಲ್ಲಿದ್ದ ನೋವನ್ನು ಹೊತ್ತು ಅಳುತ್ತಿರುವಂತೆ ಕಾಣುತ್ತಿತ್ತು… ಆ ದಿನ, ಆದಿತ್ಯ ತನ್ನ ಮಗಳಾದ ಆರಾಧ್ಯಾಳ ಕೂದಲನ್ನು ಸವರಿಸುತ್ತಾ ಕಿಟಕಿಯ ಬಳಿ ನಿಂತಿದ್ದ. ಆರಾಧ್ಯಾಳ ಕಣ್ಣುಗಳಲ್ಲಿ ತನ್ನ ಹೆಂಡತಿ ಅಪೂರ್ವಳ ನಗು ಅವನಿಗೆ ಕಾಣಿಸುತ್ತಿತ್ತು…ಆ ನಗುವೇ ಅವನ ಹೃದಯವನ್ನು ಪ್ರತಿದಿನ ಚೂರು ಚೂರು ಮಾಡುತ್ತಿತ್ತು…

ಅಪೂರ್ವಳ ಮರಣದ ನಂತರ ಆ ಮನೆ, ಆದಿತ್ಯನ ಮನ ಎಲ್ಲವೂ ಬದಲಾಗಿತ್ತು. ಹಿಂದೆ ಒಮ್ಮೆ ನಗುವಿನಿಂದ ತುಂಬಿದ್ದ ಮನೆ, ಈಗ ಮೌನದ ದೇಗುಲದಂತಾಗಿತ್ತು. ಆದಿತ್ಯನ ಅಮ್ಮ ಅನುರಾಧ ದೇವರ ಕೋಣೆಯಲ್ಲಿ ಗಂಟೆಗಳ ಕಾಲ ದೀಪ ಹಚ್ಚಿ ಕಣ್ಣೇರಿಡುತ್ತಾ ಕುಳಿತುಕೊಳ್ಳುತ್ತಿದ್ದಳು. ಆದಿತ್ಯನ ಅಪ್ಪ ಚಂದ್ರಮೋಹನ ಪುಸ್ತಕ ಹಿಡಿದುಕೊಂಡಿದ್ದರೂ, ಓದುತ್ತಿರಲಿಲ್ಲ…ಪ್ರತಿ ಪುಟದಲ್ಲೂ ಅವನಿಗೆ ಸೊಸೆಯ ಮುಖವೇ ಕಾಣಿಸುತ್ತಿತ್ತು. ಆದಿತ್ಯ ಮಾತ್ರ ಜೀವಂತ ಶವದಂತೆ ಬದುಕುತ್ತಿದ್ದ.

ಪ್ರತಿ ರಾತ್ರಿ, ಅಪೂರ್ವಳ ಫೋಟೋ ಎದುರು ಕುಳಿತು ಮಾತನಾಡುತ್ತಿದ್ದ…“ಅಪೂರ್ವ… ನೀನು ಹೀಗೆ ಹೋಗ್ಬಾರ್ದಿತ್ತು…ನಮ್ಮ ಆರಾಧ್ಯಾ ಇನ್ನೂ ನಿನ್ನ ಮಡಿಲಿನ ಆಸರೆ  ಹುಡುಕುತ್ತಾಳೆ…ನಾನು ಅವಳಿಗೆ ಅಪ್ಪ ಆಗಲೋ, ಅಮ್ಮ ಆಗಲೋ? ನನ್ನನ್ಯಾಕೆ ಹೀಗೆ ಒಬ್ಬಂಟಿಯಾಗಿ ಬಿಟ್ಟು ಹೋದೆ?”. ಅವನ ಮಾತುಗಳಿಗೆ ಉತ್ತರವಾಗಿ ಕಿಟಕಿಯ ಪರದೆ ಮಾತ್ರ ನಿಧಾನವಾಗಿ ಅಲುಗಾಡುತ್ತಿತ್ತು - ಬಹುಶಃ ಅಪೂರ್ವಳೇ ಅಲ್ಲಿ ನಿಂತು "ನಾನಿಲ್ಲೇ ಇದ್ದೇನೆ, ನಿನ್ನ ಸನಿಹ. ನಿನ್ನ ಆಸರೆಯಾಗಿ" ಎಂಬಂತೆ. 

 

*** 

ಆ ಅಪಘಾತದ ದಿನ ಇನ್ನೂ ಆದಿತ್ಯನ ಮನಸ್ಸಿನಲ್ಲಿ ಜೀವಂತವಾಗಿತ್ತು…ಅದು ಅವರ  ವಿವಾಹದ  ಎರಡನೇ ವರ್ಷ ವಾರ್ಷಿಕೋತ್ಸವದ ಪ್ರವಾಸ. ಮಂಜಿನಿಂದ ಆವರಿಸಿದ್ದ ಬೆಟ್ಟಗಳು…ಕೈ ಕೈ ಹಿಡಿದು ನಡೆದ ದಾರಿಗಳು…ಮಳೆಯ ಹನಿಗಳ ಮಧ್ಯೆ ಅಪೂರ್ವಳ ನಗು…ಆಗತಾನೆ ೬ ತಿಂಗಳು ಹಿಡಿದ ಮಗು ಆರಾಧ್ಯಳ ಜೊತೆಗಿನ ಮೊದಲ ಪ್ರವಾಸ. ಪ್ರವಾಸದ ಎಲ್ಲ ಖುಷಿಯ ಕ್ಷಣಗಳು ಕಳೆದು ಮನೆಗೆ ಹಿಂದಿರುಗುವ ಪ್ರಯಾಣ. “ಆದಿ… ಜೀವನ ಹೀಗೆನೇ ನಿಂತುಬಿಟ್ಟರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ?” ಎಂದು ಅವಳು ಕಾರಿನ ಕಿಟಕಿಯಿಂದ ಹೊರಗೆ ನೋಡುತ್ತಾ ಕೇಳಿದ್ದಳು. ಆ ಮಾತಿಗೆ ಆದಿತ್ಯ ನಗುತ್ತಾ—“ನಿನ್ನ ಜೊತೆ ಇದ್ದರೆ ಯಾವ ಜನ್ಮವೂ ಚಿಕ್ಕದಾಗಿಬಿಡುತ್ತೆ ಅಪೂರ್ವ…” ಎಂದಿದ್ದ.

ಆದರೆ ವಿಧಿ ಅವರ ಮಾತುಗಳನ್ನು ಕೇಳಿ ಕ್ರೂರವಾಗಿ ನಕ್ಕಿತೇನೋ…ಹಿಂತಿರುಗುವಾಗ ರಾತ್ರಿ ಕತ್ತಲೆ ಗಾಢವಾಗಿತ್ತು. ಮಳೆ ಹೆಚ್ಚಾಗಿತ್ತು. ರಸ್ತೆಯ ಮೇಲೆ ಮಂಜು ಇಳಿದಿತ್ತು. ಆರಾಧ್ಯಾ ಹಿಂದಿನ ಸೀಟಿನಲ್ಲಿ ಮಲಗಿದ್ದಳು. ಅಪೂರ್ವ ಆದಿತ್ಯನ ಭುಜದ ಮೇಲೆ ತಲೆ ಇಟ್ಟುಕೊಂಡಿದ್ದಳು. ಅಷ್ಟರಲ್ಲಿ…ಎದುರಿನಿಂದ ನಿಯಂತ್ರಣ ತಪ್ಪಿದ ಒಂದು ಲಾರಿ ಅವರ ಕಾರಿನ ಕಡೆ ಅಬ್ಬರಿಸಿ ಬಂದಿತು. “ಆದಿ…!” ಎಂದು ಅಪೂರ್ವ ಕಿರುಚಿದ ಧ್ವನಿ…ಅದರ ನಂತರ ಒಂದು ಭೀಕರ ಶಬ್ದ…ಕಾರು ಗಾಳಿಯಲ್ಲಿ ತಿರುಗಿದಂತೆ ಅನುಭವ…ಗಾಜಿನ ಚೂರುಗಳು…ರಕ್ತ…ಮಳೆಯ ನೀರಿನಲ್ಲಿ ಬೆರೆತ ಜೀವಗಳ ಹೋರಾಟ…

ಆದಿತ್ಯನಿಗೆ ಎಚ್ಚರವಾದಾಗ ಆಸ್ಪತ್ರೆಯ ಬಿಳಿ ಗೋಡೆಗಳು ಕಾಣಿಸಿದ್ದವು. ತಲೆಗೆ ಬ್ಯಾಂಡೇಜ್. ಕೈಗಳಿಗೆ ಗಾಯ. ಆದರೆ ಅವನ ಮೊದಲ ಪ್ರಶ್ನೆ ಒಂದೇ— “ಅಪೂರ್ವ…? ನನ್ನ ಹೆಂಡತಿ ಎಲ್ಲಿದ್ದಾಳೆ …?” ಡಾಕ್ಟರ್ ಮುಖ ತಗ್ಗಿಸಿದ್ದರು.“ ಅವರಿಗೆ ತುಂಬಾ ಗಂಭೀರ ಗಾಯಗಳಾಗಿವೆ…ಕೋಮಾ ಪರಿಸ್ಥಿತಿಯಲ್ಲಿದ್ದಾರೆ. ಅಪಘಾತ ನಡೆದು ಮೂರು ದಿನಗಳೇ ಆಗಿವೆ. ನೀವು ಈಗ ತಾನೇ ಚೇತರಿಸಿಕೊಂಡಿದ್ದೀರಾ. ಸ್ವಲ್ಪ ರೆಸ್ಟ್  ಮಾಡಿ.” ಆದರೆ, ಡಾಕ್ಟರ್ ನ ಮಾತುಗಳು ಅವನಿಗೆ ಕೇಳಿಸಲೇ ಇಲ್ಲ. ಕೋಮಾ ಎಂಬ ಶಬ್ದ ಕೇಳುತ್ತಲೇ, ಆದಿತ್ಯ ಹಾಸಿಗೆಯಿಂದ ಎದ್ದು ಓಡಿದ್ದ. ಐಸಿಯುವಿನ ಗಾಜಿನ ಆಚೆ ಅಪೂರ್ವ ಮಲಗಿದ್ದಳು. ದೇಹದ ತುಂಬ ಯಂತ್ರಗಳು… ಉಸಿರಾಟಕ್ಕೆ ವೆಂಟಿಲೇಟರ್… ಮುಖದ ಮೇಲೆ ಗಾಯಗಳ ಗುರುತು… ಆ ದೃಶ್ಯ ನೋಡಿ ಆದಿತ್ಯ ಕುಸಿದುಬಿದ್ದ.

“ಇದು ನನ್ನ ಅಪೂರ್ವ ಅಲ್ಲ…ನನ್ನ ಜೊತೆ ನಗ್ತಿದ್ದ ಅಪೂರ್ವ ಹೀಗೆ ಮಲಗಿರೋಕೆ ಸಾಧ್ಯವಿಲ್ಲ…” ಎಂದು ಅತ್ತ. ಮಗು ಅಪೂರ್ವ ಮಾತ್ರ ವಿಚಿತ್ರವಾಗಿ ಪಾರಾಗಿದ್ದಳು. ಆ ದಿನದಿಂದ ಆದಿತ್ಯನ ಜೀವನವೇ ಆಸ್ಪತ್ರೆಯ ಗೋಡೆಗಳೊಳಗೆ ಸಿಕ್ಕಿಹಾಕಿಕೊಂಡಿತು. ಬೆಳಿಗ್ಗೆ ಎದ್ದು ಮೊದಲ ಕೆಲಸ — ಅಪೂರ್ವಳ ಕೈ ಹಿಡಿದು ಮಾತನಾಡುವುದು. “ಅಪೂರ್ವ… ನೋಡು ನಾನು ಬಂದಿದ್ದೀನಿ…ನೀನು ಕಣ್ಣು ತೆರೆಯಬೇಕು…ನಿನ್ನ ಆದಿ ಕರೀತಿದ್ದಾನೆ…” . ಆದರೆ ಅವಳು ಮಾತ್ರ ಮೌನ.

ಆದಿತ್ಯ ದೇಶದ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಕರೆದೊಯ್ದ. ಬೆಂಗಳೂರು… ಚೆನ್ನೈ… ಮುಂಬೈ…ವಿದೇಶದ ಚಿಕಿತ್ಸೆಯ ವಿಚಾರವನ್ನೂ ನೋಡಿದ. ತನ್ನ ಸಂಗ್ರಹಿಸಿದ ಹಣವನ್ನೆಲ್ಲ ಖರ್ಚು ಮಾಡಿದ. ಅನುರಾಧ ತನ್ನ ಆಭರಣಗಳನ್ನೇ ಮಾರಿದಳು. ಚಂದ್ರಮೋಹನ ನಿವೃತ್ತಿ ಹಣವನ್ನೂ ಬಳಸಿದರು. ಆದರೆ ಅಪೂರ್ವಳ ಕಣ್ಣು ಮಾತ್ರ ತೆರೆಯಲಿಲ್ಲ…

ಒಂದು ರಾತ್ರಿ ಆಸ್ಪತ್ರೆಯಲ್ಲಿ ಎಲ್ಲರೂ ಮಲಗಿದ್ದಾಗ, ಆದಿತ್ಯ ಅವಳ ಕೈ ಹಿಡಿದು ಅತ್ತಿದ್ದ. “ನೀನು ಹೀಗೆ ಮೌನದಲ್ಲಿರಬೇಡ ಅಪೂರ್ವ…ಒಮ್ಮೆ ನನಗೆ ಬೈದುಬಿಡು… ಒಮ್ಮೆ ನಗು… ಆದ್ರೆ ಹೀಗೆ ನನ್ನ ಒಂಟಿಯಾಗಿ ಬಿಡಬೇಡ …” ಅಷ್ಟರಲ್ಲಿ…ಅಪೂರ್ವಳ ಬೆರಳುಗಳು ನಿಧಾನವಾಗಿ ಕದಲಿದವು. ಆದಿತ್ಯನ ಮಾತುಗಳಿಗೆ ನಿಧಾನವಾಗಿ  ಸ್ಪಂದಿಸಲು ಪ್ರಯತ್ನಿಸಿದಂತೆ ಭಾಸವಾಯಿತು. ಆದಿತ್ಯನ ಕಣ್ಣುಗಳಲ್ಲಿ ಆಶೆಯದ  ಬೆಳಕು ಹೊಮ್ಮಿತು.“ಡಾಕ್ಟರ್! ಡಾಕ್ಟರ್!” ಎಂದು ಓಡಿದ್ದ. ಆದರೆ ಡಾಕ್ಟರ್ ಹೇಳಿದ್ದು— “ಇದು ಸಾಮಾನ್ಯವಾದ  ನರ ಪ್ರತಿಕ್ರಿಯೆ…” ಆ ಕ್ಷಣ ಆದಿತ್ಯನ ಆಶೆಯೇ ಚೂರುಚೂರಾಯಿತು.ಆ ವಿಧಿಗೆ ಅವರ ಮೇಲೆ ಏನು ದ್ವೇಷವೋ? ತಿಂಗಳುಗಳು ಕಳೆಯುತ್ತಾ ಹೋದವು. ಆರಾಧ್ಯಾ ದಿನವೂ ಆಸ್ಪತ್ರೆ ಬಂದು— “ಅಮ್ಮಾ… ಎದ್ದು ಬಾ…” ಎಂದು ಗಲ್ಲಕ್ಕೆ ಮುತ್ತಿಡುತ್ತಿದ್ದಳು.

ಒಂದು ದಿನ ಪುಟ್ಟ ಕೈಯಿಂದ ಅಪೂರ್ವಳ ಕೂದಲು ಸವರಿಸುತ್ತಾ— “ಅಮ್ಮಾ… ನಾನು ಒಳ್ಳೆ ಹುಡುಗಿಯಾಗ್ತೀನಿ… ನೀನು ಮನೆಗೆ ಬಾ…” ಎಂದಳು. ಆಗ ಅಲ್ಲಿದ್ದ ನರ್ಸ್‌ಗಳಿಗೂ ಕಣ್ಣೀರು ಬಂದಿತ್ತು.

ಕೊನೆಗೆ…ಒಂದು ಮಳೆಯ ರಾತ್ರಿ…ಆಸ್ಪತ್ರೆಯ ಮಾನಿಟರ್ ಶಬ್ದ ಏಕಾಏಕಿ ಬದಲಾಗಿತ್ತು.  ಡಾಕ್ಟರ್‌ಗಳು ಓಡಿದರು. ಆದಿತ್ಯ ಬೆಚ್ಚಿಬಿದ್ದು ಅವಳ ಕೈ ಹಿಡಿದ. “ಅಪೂರ್ವ! ಕಣ್ಣು ತೆರೆ… ನನ್ನ ನೋಡ್ಬಿಡು ಒಮ್ಮೆ…ನಾನು ಇಲ್ಲೇ ಇದ್ದೀನಿ…” ಆ ಕ್ಷಣ…ತುಂಬಾ ತಿಂಗಳುಗಳ ನಂತರ… ಅಪೂರ್ವಳ ಕಣ್ಣಂಚಿನಲ್ಲಿ ಒಂದು ಸಣ್ಣ ಕಣ್ಣೀರು ಜಾರಿತು. ಅವಳ ತುಟಿಗಳು ಅಲುಗಾಡಿದವು. “ಆ…ದಿ…” - ಅದೇ ಅವಳ ಕೊನೆಯ ಶಬ್ದ. ಮಾನಿಟರ್‌ನಲ್ಲಿ ನೇರ ರೇಖೆ ಮೂಡಿತು. ಆದಿತ್ಯನ ಪ್ರಪಂಚವೇ ಅಲ್ಲೇ ನಿಂತುಹೋಯಿತು… ಮಳೆ ಮಾತ್ರ ಆಸ್ಪತ್ರೆಯ ಕಿಟಕಿಯ ಮೇಲೆ ಇನ್ನೂ ಅಳುತ್ತಲೇ ಇತ್ತು… 

*** 

ಒಂದು ದಿನ, ಅನುರಾಧ ಮನೆ ಸ್ವಚ್ಛಗೊಳಿಸುತ್ತಿದ್ದಾಗ, ಹಳೆಯ ಮರದ ಪೆಟ್ಟಿಗೆಯೊಂದು ಸಿಕ್ಕಿತು. ಅದು ಚಂದ್ರಮೋಹನನ ತಾತನ ಕಾಲದ ಪೆಟ್ಟಿಗೆ. ಅದರೊಳಗೆ ಹಳೆಯ ಜಾತಕಗಳು, ಕೆಲವು ಮಂತ್ರಪತ್ರಗಳು, ಮತ್ತು ಒಂದು ವಿಚಿತ್ರ ದಿನಚರಿ ಇತ್ತು. ಆ ದಿನಚರಿಯಲ್ಲಿ ಒಂದು ಸಾಲು ಕೆಂಪು ಮಸಿಯಲ್ಲಿ ಬರೆಯಲಾಗಿತ್ತು— “ಈ ವಂಶದಲ್ಲಿ ಜನಿಸುವ ಒಬ್ಬ ದಂಪತಿಗಳು, ಹಿಂದಿನ ಜನ್ಮದ ಅಪೂರ್ಣ ಪ್ರೇಮದ ಶಾಪವನ್ನು ಅನುಭವಿಸುವರು…” ಆ ಮಾತು ಓದಿದ ಕ್ಷಣ ಅನುರಾಧಳ ಕೈ ನಡುಗಿತು. ಕೂಡಲೇ, ಚಂದ್ರಮೋಹನನನ್ನು ಕರೆದು, "ರೀ, ನಮ್ಮಮಗನ ಸಂಸಾರ ಹೀಗೆ ಆಗಲು, ಇದೇ  ಕಾರಣ ಇರಬಹುದೇ?" ಎಂದು ದುಃಖದಿಂದ ಪ್ರಶ್ನಿಸಿದಳು. ಚಂದ್ರಮೋಹನ ಅದನ್ನು ಓದಿದವನೇ, ಕ್ಷಣಕಾಲ ಭೀತನಾದನು. ಅವನಿಗೆ ಇದರ ವಿಚಾರವಾಗಿ ಎಳ್ಳಷ್ಟೂ ಗೊತ್ತಿರಲಿಲ್ಲ. ಅವನ ಪೂರ್ವಜರು ಇದರ ಬಗ್ಗೆ ಏನೂ ಹೇಳಿರಲಿಲ್ಲ. ಆ ಕೂಡಲೇ, ಅವರು ಆದಿತ್ಯನನ್ನೂ ಕರೆದುಕೊಂಡು ಊರಿನ ಹೊರಗಿದ್ದ ವಯಸ್ಸಾದ ಜ್ಯೋತಿಷಿ “ವೇದಬ್ರಹ್ಮ ಶಿವಾನಂದ ಶಾಸ್ತ್ರಿ” ಅವರನ್ನು ಭೇಟಿ ಮಾಡಿದರು.

ಶಾಸ್ತ್ರಿಗಳು ತುಂಬಾ ಹಿರಿಯರು ಹಾಗೂ ಜ್ಯೋತಿಷ್ಯದಲ್ಲಿ ತುಂಬಾ ಪರಿಣಿತರು. ಊರಿಗೆ ಊರೇ ಅವರನ್ನು ಗೌರವಿಸುತ್ತಿತ್ತು. ಅನುರಾಧ ನೀಡಿದ ಆದಿತ್ಯ ಹಾಗೂ ಅಪೂರ್ವಳ ಜಾತಕಗಳನ್ನು ನೋಡಿ ಶಾಸ್ತ್ರಿಗಳು ಕ್ಷಣಕಾಲ ಕಣ್ಣು ಮುಚ್ಚಿದರು… “ಅಪೂರ್ವ ಮತ್ತು ಆದಿತ್ಯ… ಸಾಮಾನ್ಯ ದಂಪತಿಗಳಲ್ಲ…“ಹಿಂದಿನ ಜನ್ಮದಲ್ಲಿ ಅವರು ಪ್ರೇಮಿಗಳು…
ಆದರೆ ಅವರ ಪ್ರೇಮದ ಕಾರಣದಿಂದ ಅನೇಕ ಜೀವಗಳು ನಾಶವಾದವು…ಒಬ್ಬ ತಾಯಿಯ ಶಾಪ ಅವರಿಗೆ ಬಿದ್ದಿತ್ತು…”

ಆದಿತ್ಯ ಬೆಚ್ಚಿಬಿದ್ದ. “ಯಾವ ಶಾಪ…?”

ಶಾಸ್ತ್ರಿಗಳು ನಿಧಾನವಾಗಿ ಹೇಳಿದರು —  “ನೀವು ಹಿಂದಿನ ಜನ್ಮದಲ್ಲಿ ಒಬ್ಬ ರಾಜಕುಮಾರ…ಅಪೂರ್ವ ಒಬ್ಬ ನೃತ್ಯಾಂಗಿ…ನಿಮ್ಮಿಬ್ಬರ ಪ್ರೇಮಕ್ಕಾಗಿ ನಡೆದ ಯುದ್ಧದಲ್ಲಿ ನೂರಾರು ಜನ ಸತ್ತರು…ಒಬ್ಬ ತಾಯಿ ತನ್ನ ಮಗನ ಶವ ಹಿಡಿದು ಶಪಿಸಿದ್ದಳು — ‘ನಿಮ್ಮ ಪ್ರೇಮ ಯಾವ ಜನ್ಮದಲ್ಲೂ ಪೂರ್ಣವಾಗಬಾರದು'…”

ಈ ವಿಚಾರ ಕೇಳಿದಂತೆ, ಆದಿತ್ಯನ ಮನ ನೊಂದಿತು. ಮನೆ ತುಂಬ ಮೌನ ಆವರಿಸಿತು…ಆ ದಿನದಿಂದ ವಿಚಿತ್ರ ಘಟನೆಗಳು ಆರಂಭವಾದವು. ಆರಾಧ್ಯಾ ಕೆಲವೊಮ್ಮೆ ಖಾಲಿ ಕೋಣೆಯ ಕಡೆ ನೋಡಿ ನಗುತ್ತಿದ್ದಳು… “ಅಮ್ಮ ಬಂದಿದ್ದಾರೆ…” ಎಂದು ಹೇಳುತ್ತಿದ್ದಳು.

ಒಂದು ರಾತ್ರಿ, ಆದಿತ್ಯಗೆ ಕನಸು ಬಂತು: ಬಿಳಿ ವಸ್ತ್ರದಲ್ಲಿ ಅಪೂರ್ವ ನಿಂತಿದ್ದಳು…ಅವಳ ಕಣ್ಣುಗಳಲ್ಲಿ ನೋವಿತ್ತು… ಆದರೆ ಮುಖದಲ್ಲಿ ದಿವ್ಯ ಶಾಂತಿ. “ಆದಿ… ನಾನು ಹೋಗಿಲ್ಲ…ನಿನ್ನ ಪ್ರೀತಿಯೊಳಗೆ ನಾನು ಇನ್ನೂ ಜೀವಂತ…ಆದರೆ ನಮ್ಮ ಶಾಪ ಈ ಜನ್ಮಕ್ಕೆ ಕೊನೆಯಾಗಬೇಕು…”

“ಹೇಗೆ…?” ಎಂದು ಅತ್ತ ಆದಿತ್ಯ. ಉತ್ತರವಾಗಿ ಅಪೂರ್ವ - “ಒಬ್ಬರನ್ನೊಬ್ಬರು ಹಿಡಿದುಕೊಳ್ಳುವ ಪ್ರೇಮಕ್ಕಿಂತ, ಬಿಡುವ ಪ್ರೇಮ ದೊಡ್ಡದು…” ಎಂದು ನಿಧಾನವಾಗಿ ಗಾಳಿಯಲ್ಲಿ ಸೇರಿಕೊಂಡಳು. ಆ ಕೂಡಲೇ ಎಚ್ಚರವಾದ ಆದಿತ್ಯ, ಬೆವತು ಹೋಗಿದ್ದ. ಅಪೂರ್ವ ಹೇಳಿದ ಮಾತನ್ನು ನೆನೆದು ಕಣ್ಣೀರಿಟ್ಟ. ಅಲ್ಲೇ ಶಾಂತವಾಗಿ ಮಲಗಿದ್ದ ಮಗಳು ಆರಾಧ್ಯಳನ್ನು ಗಟ್ಟಿಯಾಗಿ ತಬ್ಬಿಕೊಂಡು ಮನಸೋ ಇಚ್ಛೆ ಅತ್ತು ತನ್ನ ದುಃಖವನ್ನು ಇಳಿಸಿದ. 

*** 

 

ಮರುದಿನ ಮತ್ತೆ ಶಾಸ್ತ್ರಿಗಳತ್ತ ಹೋಗಿ ಆದಿತ್ಯ ತನ್ನ ಕನಸಿನ ಬಗ್ಗೆ ಹೇಳಿಕೊಂಡ. ಶಾಸ್ತ್ರಿಗಳು ಒಂದು ದೇವಾಲಯದ ಬಗ್ಗೆ ಹೇಳಿದರು. ಅದು ಕಾಡಿನ ಮಧ್ಯೆ ಇದ್ದ ಪುರಾತನ ದೇವಿಯ ದೇವಸ್ಥಾನ. ಅಲ್ಲಿ ಅಪಮೃತ್ಯು ಪಡೆದ ಆತ್ಮಗಳಿಗೆ, ಅವರು ಸತ್ತ ತಿಥಿಯ ತಿಂಗಳಿನ ಪಿತೃ ಪಕ್ಷದ ಅಮಾವಾಸ್ಯೆ ದಿನ “ಅಪೂರ್ಣ ಆತ್ಮಗಳ ದೀಪ” ಹಚ್ಚಿದರೆ ಮಾತ್ರ ಶಾಪ ಮುಕ್ತವಾಗುತ್ತದೆ ಎಂದು ನಂಬಿಕೆ. ಹಲವಾರು ವಿಷಯಗಳನ್ನು ಕೇಳಿ ತಿಳಿದುಕೊಂಡ ಆದಿತ್ಯ ಮನೆಗೆ ಬಂದು ಶಾಸ್ತ್ರಿಗಳು ಹೇಳಿದಂತ ಎಲ್ಲ ವಿಚಾರಗಳನ್ನೂ ಹೇಳಿದ. 

ಅದೇ ತಿಂಗಳು ಅಪೂರ್ವ ಸತ್ತು ಒಂದು ವರ್ಷ ಪೂರ್ಣವಾಗುತ್ತಿತ್ತು. ಅಂದು ಪಿತೃ ಪಕ್ಷದ ಅಮಾವಾಸ್ಯೆ ದಿನ. ಆದಿತ್ಯ, ಅನುರಾಧ, ಚಂದ್ರಮೋಹನ ಮತ್ತು ಪುಟ್ಟ ಆರಾಧ್ಯಾ ಎಲ್ಲರೂ ಅಲ್ಲಿ ಹೋದರು. 

ಆ ದೇವಾಲಯವೇ ಒಂದು ಥರಾ ವಿಚಿತ್ರವಾಗಿತ್ತು… ಗಂಟೆ ಶಬ್ದಗಳೇ ಗಾಳಿಯಲ್ಲಿ ತೇಲುತ್ತಿದ್ದಂತ ಭಾಸವಾಗುತ್ತಿತ್ತು. 

ಆ ದೇವಸ್ಥಾನದ ಒಳಗೆ ಕಾಲಿಡುತ್ತಿದ್ದಂತೆ, ಏನೋ ಒಂದು ವಿಚಿತ್ರವಾದ ಅನುಭವ. ಶಾಸ್ತ್ರಿಗಳು ತಿಳಿಸಿದಂತೆ, "ಅಪೂರ್ಣ ಆತ್ಮಗಳ ದೀಪ" ಹಚ್ಚುವಾಗ, ಆರಾಧ್ಯಾ ಏಕಾಏಕಿ ಹೇಳಿದಳು— “ಅಪ್ಪಾ, ಅಲ್ಲಿ ನೋಡು... ಅಮ್ಮ ಈಗ ನನ್ನ ಕಡೆ ನೋಡುತ್ತಾ ಖುಷಿಯಿಂದ ನಗ್ತಿದ್ದಾರೆ…”

ಆ ಕ್ಷಣ, ದೇವಾಲಯದೊಳಗಿನ ದೀಪಗಳು ಗಾಳಿಯಿಲ್ಲದೇ ತೇಲಿದಂತೆ ಕಂಪಿಸಿದವು…ಆದಿತ್ಯ ಕಣ್ಣುಮುಚ್ಚಿ ಅತ್ತ…“ಅಪೂರ್ವ… ನಿನ್ನನ್ನು ಬಂಧಿಸಿಕೊಳ್ಳಲು ನಾನು ಇನ್ನು ಬಯಸಲ್ಲ… ನೀನು ಶಾಂತಿಯಿಂದ ಹೋಗು…” ಆ ಮಾತಿನ ನಂತರ, ಅವನ ಹೃದಯದೊಳಗಿನ ಭಾರ ಏಕಾಏಕಿ ಕಡಿಮೆಯಾಯಿತು. ಅವನ ಕಣ್ಣಿಂದ ಕಣ್ಣೀರು ಜಲಪಾತದಂತೆ ಹರಿಯುತ್ತಿತ್ತು. ಅವನು ಅಳುವುದನ್ನು ನೋಡಿ ಆರಾಧ್ಯ ಗಲಿಬಿಲಿಯಾದರೂ ಅವನನ್ನು ಗಟ್ಟಿಯಾಗಿ ಅಪ್ಪಿಕೊಂಡಳು. ಮಗಳ ಅಪ್ಪುಗೆಯಲ್ಲಿ ತನ್ನ ನೋವನ್ನು ಮರೆತು ಆದಿತ್ಯ ಚೇತರಿಸಿಕೊಂಡ. ಅದಾದಮೇಲೆ, ಎಲ್ಲರೂ ಮನೆಗೆ ಹಿಂದಿರುಗಿದರು. 

ಅದರ ನಂತರ ಅವರ ಜೀವನ ನಿಧಾನವಾಗಿ ಬದಲಾಗತೊಡಗಿತು. ಆರಾಧ್ಯಾ ದೊಡ್ಡವಳಾಗುತ್ತಾ ಅಪೂರ್ವಳಂತೆಯೇ ಸಂಗೀತ ಮತ್ತು ಚಿತ್ರಕಲೆಯಲ್ಲಿ ಅದ್ಭುತ ಪ್ರತಿಭೆ ತೋರಿಸಿದಳು. ಆದಿತ್ಯ ತನ್ನ ಹೆಂಡತಿಯ ನೆನಪಿಗಾಗಿ ಒಂದು ಟ್ರಸ್ಟ್ ಆರಂಭಿಸಿದ— “ಅಪೂರ್ವ ಫೌಂಡೇಶನ್”

ಅದು ಅಪಘಾತದಲ್ಲಿ ಕುಟುಂಬವನ್ನು  ಕಳೆದುಕೊಂಡ ಮಕ್ಕಳಿಗೆ ಸಹಾಯ ಮಾಡುವ ಸಂಸ್ಥೆಯಾಯಿತು. ಅನುರಾಧ ಮತ್ತೆ ತನ್ನ ಉದ್ಯಮ ಆರಂಭಿಸಿದಳು. ಚಂದ್ರಮೋಹನ ಜೀವನದ ಕುರಿತು ಪುಸ್ತಕ ಬರೆಯಲು ಶುರುಮಾಡಿದರು.

***

ವರ್ಷಗಳ ನಂತರ…ಒಂದು ಸಂಜೆ, ಜಡಿಯಾಗಿ ಮಳೆ ಬೀಳುತ್ತಿತ್ತು…ಆರಾಧ್ಯಾ ವೀಣೆ ನುಡಿಸುತ್ತಿದ್ದಳು… ಆದಿತ್ಯನಿಗೆ ಆ ವೀಣೆಯ ನಾದ, ಸ್ವರದಲ್ಲಿ ಅಪೂರ್ವಳ ಆತ್ಮವೇ ಹರಿಯುತ್ತಿದ್ದಂತೆ ಅನಿಸಿತು… ಅಪೂರ್ವಳನ್ನು ನೆನೆಯುತ್ತಾ ಆದಿತ್ಯ ಕಣ್ಣು ಮುಚ್ಚಿ ಮಂದಹಾಸ ಬೀರಿದ.

ಅವನಿಗೆ ಗಾಳಿಯೊಳಗೆ ಒಂದು ಧ್ವನಿ ಕೇಳಿಸಿತು— “ಆದಿ…ಈ ಜನ್ಮದಲ್ಲಿ ಅಲ್ಲದಿದ್ದರೂ…ಪ್ರತಿ ಜನ್ಮದಲ್ಲೂ ನಾನು ನಿನ್ನನ್ನು ಹುಡುಕುತ್ತೇನೆ…”

ಕಿಟಕಿಯ ಬಳಿಯ ದೀಪ ನಿಧಾನವಾಗಿ ತೇಲಿತು…ಆಕಾಶದಲ್ಲಿ ಮಿಂಚು ಹೊಳೆಯಿತು…

ಆದರೆ ಆ ಮನೆಯಲ್ಲಿ ಮೊದಲ ಬಾರಿಗೆ, ನೋವಿನ ಮಧ್ಯೆ ಶಾಂತಿ ಹುಟ್ಟಿತ್ತು…

ಯಾಕೆಂದರೆ ಕೆಲವು ಪ್ರೇಮಗಳು…ಒಟ್ಟಿಗೆ ಬದುಕುವುದಕ್ಕಲ್ಲ…ಆತ್ಮವಾಗಿ ಶಾಶ್ವತವಾಗುವುದಕ್ಕೇ ಹುಟ್ಟುತ್ತವೆ… 

❤️ 

 ✍🏻 Deepalaxmi Bhat
Mangaluru 

ಶುಕ್ರವಾರ, ಮೇ 1, 2026

ನಾಗಶಾಪದ ಮುಕ್ತಿ

✍🏻ದೀಪಲಕ್ಷ್ಮಿ ಭಟ್, ಮಂಗಳೂರು 

ಬೇಸಿಗೆಯ ಬಿಸಿಲು ತೀವ್ರವಾಗಿದ್ದರೂ, ಹಳ್ಳಿಯ ಸೊಗಸು ಎಂದಿಗೂ ಕಡಿಮೆಯಾಗುವುದಿಲ್ಲ. ಹಸಿರು ಹೊಲಗಳು, ಮಳೆಯ ವಾಸನೆ ಉಳಿಸಿಕೊಂಡ ಮಣ್ಣು,  ಮಂಗಳವಾದ ಮುಸ್ಸಂಜೆಯ ಗಾಳಿ—ಇವುಗಳ ನಡುವೆ ತನ್ನ ರಜೆಯನ್ನು ಕಳೆಯಲು ವಿಕ್ರಮ ತನ್ನ ಅತ್ತೆ ವಿಮಲಾಳ ಮನೆಗೆ ಬಂದಿದ್ದ. 

ವಿಕ್ರಮ ಇಂಜಿನಿಯರಿಂಗ್ ಮೂರನೇ ವರ್ಷದ ವಿದ್ಯಾರ್ಥಿ. ಚತುರ, ಧೈರ್ಯಶಾಲಿ ಮತ್ತು ಮನಸಾರೆ ಪ್ರೀತಿಸುವ ಸ್ವಭಾವದವನು. ಅವನಿಗೆ ತನ್ನ ಅತ್ತೆ ಮಗಳು ವಿನುತಾಳ ಮೇಲೆ ವಿಶೇಷವಾದ ಮಮತೆ. ಆ ಮಮತೆ, ಪ್ರೀತಿಯಾಗಿ ಅರಳಿತ್ತು. ವಿನುತಾಳಿಗೂ ಅವನೆಂದರೆ ಪ್ರಾಣವೇ.

ವಿನುತಾ, ಹತ್ತನೇ ತರಗತಿಯ ಪರೀಕ್ಷೆ ಮುಗಿಸಿ, ರಜೆಯಲ್ಲಿದ್ದಳು. ಅವಳ ಸುಂದರವಾದ ಮಂದಹಾಸ, ಅವಳ ಕಣ್ಣುಗಳಲ್ಲಿನ ಹೊಳಪು — ಎಲ್ಲವೂ ವಿಕ್ರಮನ ಮನಸ್ಸನ್ನು ಸೆಳೆದಿದ್ದವು.

ವಿಮಲಾ, ವಿನೋದ ದಂಪತಿಗಳಿಗೂ, ವಿಕ್ರಮನೆಂದರೆ ತುಂಬಾ ಪ್ರೀತಿ. ವಿಕ್ರಮನ ಹೆತ್ತವರಾದ ವಿಜಯ ಹಾಗೂ ಅನುರಾಧ ಕೂಡ ಈ ಸಂಬಂಧಕ್ಕೆ ಮೊದಲೇ ಸೈ ಅಂದಿದ್ದರು. ಇವರಿಬ್ಬರ ಸಂಬಂಧವನ್ನು ಎರಡೂ ಕುಟುಂಬದವರು ಕೂಡ ಮನಸಾರೆ ಒಪ್ಪಿಕೊಂಡಿದ್ದರು. ಹೀಗಾಗಿ ಅವರು ಒಟ್ಟಿಗೆ ಹೊಲಗಳಲ್ಲಿ ತಿರುಗಾಡುವುದು, ಸಂಜೆಯ ಹೊತ್ತಿನಲ್ಲಿ ಮಾತುಕತೆ ನಡೆಸುವುದು ಎಲ್ಲವೂ ಸಾಮಾನ್ಯವಾಗಿತ್ತು.  "ವಿಕ್ಕಿ... ನನ್ ಜೊತೆ ಟ್ರೀ ಹೌಸ್ ಗೆ ಬಾ.." ಅಂತ ಹೇಳಿ, ವಿನುತಾ ವಿಕ್ರಮನ  ಜೊತೆ, ಚಿಕ್ಕಂದಿನಿಂದಲೂ, ಅವಳಿಗೆ ಆಟವಾಡಲೆಂದೇ ವಿನೋದ ಕೈಯಾರೆ ತಯಾರಿಸಿದ್ದ ಮರದ ಮೇಲಿನ ಟ್ರೀ ಹೌಸ್  ಒಳಗೆ ಕೂತು ಆಟ ಆಡುತ್ತಿದ್ದರು. ಹಾಗೆ, ಆಟವಾಡಿ ಸುಸ್ತಾದರೆ, ಅದರಲ್ಲೇ ಮಲಗುತ್ತಿದ್ದರು.  ದೊಡ್ಡವರಾದ ಮೇಲೂ ಈ ರೀತಿ ಟ್ರೀ ಹೌಸ್ ನಲ್ಲಿ ಕೂತು ಹರಟೆ ಹೊಡೆಯುತ್ತಾ ಕಾಲ ಕಳೆಯೋದು ಅವರಿಬ್ಬರಿಗೂ ಇಷ್ಟವಾದ ವಿಷಯವಾಗಿತ್ತು. 

*** 

 

ಅಂದು ಪಂಚಮಿಯ ದಿನ. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮುಗಿಸಿದ ವಿನುತಾ, ಮನೆಯೆದುರು ರಂಗೋಲಿ ಬಿಡಿಸಿ, ದೇವರ ಪೂಜೆಗೆಂದು ಹೂ ಕೊಯ್ದು,  ಅಮ್ಮ ಮಾಡಿ ಕೊಟ್ಟ ಕಾಫಿ ಕುಡಿಯುತ್ತಿದ್ದಳು. ಆಗ ತಾನೇ ಎದ್ದ ವಿಕ್ರಮ, ವಿನುತಾಳನ್ನು ಎದ್ದ ಕೂಡಲೇ ನೋಡಿ ಮನದಲ್ಲೇ ಸಂತೋಷಗೊಂಡು, ತನ್ನ ಬೆಳಗಿನ ದಿನಚರಿ ಮುಗಿಸಿದ. ತಿಂಡಿ ತಿಂದಾದಮೇಲೆ. ವಿನುತಾ ವಿಕ್ರಮ್  ಇಬ್ಬರೂ ಟ್ರೀ ಹೌಸ್ ಕಡೆ ಹೋದರು. ಹೊಲದಲ್ಲೆಲ್ಲಾ ಸುತ್ತಾಡಿ, ತಮ್ಮ ಶಾಲೆ ಕಾಲೇಜಿನ ಕಥೆಗಳನ್ನು ಮಾತನಾಡುತ್ತಾ, ಸುಸ್ತಾದ ಹಾಗೆ ಟ್ರೀ ಹೌಸ್ ಒಳಗೆ ಹೋಗಿ ತಾವು ತಂದಿದ್ದ ಜ್ಯೂಸು ಕುಡಿದು ಹರಟೆಗೆ ಕೂತರು.  ವಿಕ್ರಮ ಕಾಲೇಜಿನಲ್ಲಿ ಪ್ರೀತಿಸುತ್ತಿದ್ದ ಒಂದೆರಡು ಜೋಡಿಗಳ ಕಥೆ ಹೇಳಿದರೆ, ವಿನುತಾ ಶಾಲೆಯಲ್ಲಿ ಪಾಠ ಕಲಿಸುತ್ತಿದ್ದ ಮೇಷ್ಟ್ರುಗಳ ಮೇಲೆ ಕೆಲವೊಂದು ಹುಡುಗಿಯರಿಗಿದ್ದ ಕ್ರಶ್ ಬಗ್ಗೆ ಹೇಳುತ್ತಿದ್ದಳು. ಮಾತು ಮಾತಿಗೂ ಅವಳ ನಗು ವಿಕ್ರಮನ ಮನಸ್ಸಿಗೆ ತಂಪೆರೆಯುತ್ತಿತ್ತು. ಹಾಗೆ ಅವಳನ್ನು ನೋಡಿ ಅವಳನ್ನು ಬರಸೆಳೆದು ಅವಳ ಹಣೆಗೆ ಹಾಗೂ ಕೆನ್ನೆಗೆ ಒಂದು ಸುಂದರವಾದ ಮುತ್ತಿಟ್ಟು ಮನೆಗೆ ಹೋಗುತ್ತೇನೆಂದು ಹೊರಟ. ಅಚಾನಕ್ಕಾಗಿ ಸಿಕ್ಕ ಮುತ್ತಿನಿಂದ ಪುಳಕಿತಳಾದ ವಿನುತಾ ಕೆನ್ನೆಯೆಲ್ಲ ನಾಚಿಕೆಯಿಂದ ಕೆಂಪಗಾಗಿತ್ತು.  ಆ ಮುತ್ತಿನ ಗುಂಗಿನಲ್ಲೇ ಕೆಲಕಾಲ ಮುಗುಳ್ನಗೆಯಲ್ಲಿ ಕಳೆದಳು. ಆಮೇಲೆ ನಿಧಾನಕ್ಕೆ ಟ್ರೀ ಹೌಸ್ ನಿಂದ ಕೆಳಗಿಳಿದು ಮನೆಗೆ ಹೋದಳು.

ಆ ರಾತ್ರಿ - ಪಂಚಮಿಯ ರಾತ್ರಿ. ವಿಚಿತ್ರವಾದ ನಿಶಬ್ದದಿಂದ ಕೂಡಿತ್ತು.  ಎಲ್ಲರೂ ರಾತ್ರಿ ಊಟ ಮುಗಿಸಿ ಮಲಗಲು ತಯಾರಾಗುತ್ತಿದ್ದರು. "ವಿಕ್ರಮ, ನಾಳೆ ಷಷ್ಠಿ ಆದ ಕಾರಣ, ನಮ್ಮೂರಿನ ದೇವಸ್ಥಾನಕ್ಕೆ ಹೋಗಿ ನಾಗನ ಕಲ್ಲಿಗೆ ಹಾಲೆರೆಯಲು ಹೋಗಲಿಕ್ಕಿದೆ. ಬೆಳಿಗ್ಗೆ ಬೇಗನೆ ತಯಾರಾಗು." ಅಂತ ವಿಮಲಾ ನೆನಪಿಸಿದಳು. "ಸರಿ ಅತ್ತೆ. ಬೆಳಿಗ್ಗೆ ಬೇಗನೆ ತಯಾರಾಗ್ತೇನೆ" ಅಂದು ವಿಕ್ರಮ ತನ್ನ ಕೋಣೆಗೆ ಹೋದ. ಎಲ್ಲ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಟ್ಟು ವಿಮಲಾ ಕೂಡ ತನ್ನ ಕೊನೆಗೆ ಹೋಗಿ ಮಲಗಿದಳು. ಸುಮಾರು ಅರ್ಧರಾತ್ರಿಯ ಸಮಯ. ವಿಕ್ರಮ ಗಾಢವಾದ ನಿದ್ರೆಯಲ್ಲಿದ್ದ. ಏಕಾಏಕಿಯಾಗಿ ಒಂದು ವಿಚಿತ್ರವಾದ ಸದ್ದು ಕೇಳಿಸಿ ವಿಕ್ರಮ ಎಚ್ಚರಗೊಂಡ. 

ಆ ಸದ್ದು ವಿನುತಾಳ ಕೋಣೆ ಕಡೆಯಿಂದ ಕೇಳಿಸಿದಂತೆ ಭಾಸವಾಯಿತು. ಭೀತಗೊಂಡ ವಿಕ್ರಮ ಎದೆ ತಡಕಾಡುತ್ತಾ ತನ್ನ ಕೋಣೆಯಿಂದ ಹೊರಬಂದ. ಆ ಸಮಯಕ್ಕೆ ವಿನುತಾಳ ಕೋಣೆಯ ಕಡೆಯಿಂದ ಹೊರಬಂದ ದೊಡ್ಡ ನಗರಹಾವೊಂದು ಹೊರಗೆ ಹೋಗುತ್ತಿತ್ತು. ಮತ್ತಷ್ಟು ಭಯಗೊಂಡ ವಿಕ್ರಮ ವಿನುತಾಳ ಕೋಣೆ  ಕಡೆ ಓಡಿದ. ಮೃದುವಾದ ದನಿಯಲ್ಲಿ "ವಿನುತಾ" ಎಂದು ಕರೆದ. ಮೆಲ್ಲನೆ ಅವಳ ಕೋಣೆಯ  ಬಾಗಿಲು ದೂಡಿ ನೋಡಿದ. ಅವಳು ಅಲ್ಲಿ ಕಾಣಿಸಲಿಲ್ಲ.  ಭಯದಿಂದ ಹೊರಗೆ ಓಡಿ  ಸುತ್ತಲೂ ಹುಡುಕಾಡಿದ. ಆದರೆ ಅವಳ ಸುಳಿವು ಸಿಗಲಿಲ್ಲ. ಅಷ್ಟರಲ್ಲಿ ಅದೇ ನಾಗರಹಾವು ಅವನತ್ತ ಹೆಡೆಯೆತ್ತಿ ತಿರುಗಿ ನೋಡಿತು. ವಿಕ್ರಮನಿಗೆ ಅದೊಂದು ಸಂದೇಶದಂತೆ ಭಾಸವಾಯಿತು.  ನನ್ನ ಹಿಂದೆ ಬಾ ಅಂತ ಸನ್ನೆ ಮಾಡಿದಂತೆ ವಿಕ್ರಮನಿಗೆ  ಅನಿಸಿತು. ಹಾವು ನಿಧಾನವಾಗಿ ಮುಂದೆ ಸರಿಯಿತು. ವಿಕ್ರಮನಿಗೆ ಏನೋ ಆಕರ್ಷಣೆಯಾದಂತಾಗಿ, ಆ ಹಾವನ್ನು ಹಿಂಬಾಲಿಸಿದ. 

***

ಆ ಹಾವು ಮನೆಯ ಪಕ್ಕದಲ್ಲಿದ್ದ  ನದಿ ಮಾರ್ಗವಾಗಿ  ಚಲಿಸಿ, ಒಂದು ಬೆಟ್ಟದ ಬುಡದಲ್ಲಿದ್ದ ಗುಹೆಯೊಳಗೆ ಪ್ರವೇಶಿಸಿತು. ಹಾವನ್ನು ಹಿಂಬಾಲಿಸಿದ ವಿಕ್ರಮನೂ ಆ ಗುಹೆ ಪ್ರವೇಶಿಸಿದ. ತಂಪಾಗಿದ್ದ ಆ ಗುಹೆಯೊಳಗೆ ಸ್ವಲ್ಪ ಮುಂದೆ ಸಾಗಿದಾಗ, ಒಂದು ದೊಡ್ಡ ಹಳೆಯ ಪೆಟ್ಟಿಗೆ ಕಂಡಿತು. ಅದು ಸಾಮಾನ್ಯವಾದ  ಪೆಟ್ಟಿಗೆಯಾಗಿರಲಿಲ್ಲ. ರಾಜಮಹಾರಾಜರ ಕಾಲದ ಪೆಟ್ಟಿಗೆಯಂತೆ ಭಾಸವಾಯಿತು. ವಿಕ್ರಮನಿಗೆ ಕುತೂಹಲವಿದ್ದರೂ, ಮನೆಯಲ್ಲಿ ಹೇಳದೆ ಅದನ್ನು ತೆರೆಯಲು ಯತ್ನಿಸಲಿಲ್ಲ. ಮನೆಯಲ್ಲಿ ಮಾತನಾಡಿ ಆಮೇಲೆ ಇದರ ಬಗ್ಗೆ ನೋಡೋಣ ಅಂದುಕೊಂಡು, ಮನೆಗೆ ಹಿಂದಿರುಗಿದ. ಯಾರನ್ನೂ ಗಾಬರಿಗೊಳಿಸುವುದು ಬೇಡ ಅಂದುಕೊಂಡು, ತನ್ನ ಕೊನೆಗೆ ಬಂದು ಮಲಗಿದ. 

ಬೆಳಿಗ್ಗೆ ಎದ್ದ ಕೂಡಲೇ ವಿನುತಾಳ ಕೋಣೆ ಕಡೆ ನೋಡಿದ ವಿಕ್ರಮನಿಗೆ, ವಿನುತಾ ಅಲ್ಲಿರುವುದನ್ನು ಕಂಡು ನಿರಾಳವಾಯಿತು. ಆದರೆ, ಅವಳ ಮೈಯಲ್ಲೆಲ್ಲಾ ಹಳದಿ ಬಣ್ಣದ ಗುಳ್ಳೆಗಳಿದ್ದವು. ಮೆಲ್ಲನೆ ವಿನುತಾಳ ಪಕ್ಕ ಹೋಗಿ, "ನಿನ್ನೆ ರಾತ್ರಿ ನಿನಗೇನಾಗಿತ್ತು?" ಅಂತ ಪ್ರಶ್ನಿಸಿದ. "ಗೊತ್ತಿಲ್ಲ. ನಂಗೆ ತುಂಬಾನೇ ಸುಸ್ತಾಗುತ್ತಿದೆ" ಅಂತ ನಿಧಾನವಾಗಿ ಹೇಳಿ ವಿನುತಾ  ನಿದ್ದೆಗೆ ಜಾರಿದಳು.  ವಿಕ್ರಮನ ಅನುಮಾನ  ಗಟ್ಟಿಯಾಗತೊಡಗಿತು. ಮನೆಯಲ್ಲಿ ಈ ವಿಚಾರವಾಗಿ ಮಾತನಾಡಲೇಬೇಕು ಅಂದುಕೊಂಡು, ಸರಿಯಾದ ಸಮಯಕ್ಕಾಗಿ ಲೆಕ್ಕ ಹಾಕಿದ.

ಆ ದಿನ ಸಾಯಂಕಾಲದ ಹೊತ್ತಿಗೆ, ವಿಮಲಾ ಹಾಗೂ ವಿನೋದ ಇಬ್ಬರೂ ಚಹಾ ಕುಡಿಯುತ್ತಿದ್ದರು. ಅದೇ ಸರಿಯಾದ ಸಮಯ ಎಂದು ವಿಕ್ರಮ ನಿಧಾನವಾಗಿ ವಿಷಯವನ್ನು ಪ್ರಸ್ತಾಪಿಸಿ, ತನ್ನ ಅನುಮಾನವನ್ನು ಸ್ಪಷ್ಟೀಕರಿಸಿದ ವಿಕ್ರಮ. ವಿಮಲಾ ಕಣ್ಣೀರಿಡುತ್ತಾ "ವಿಕ್ರಮ, ನಮ್ಮ ಮನೆತನಕ್ಕೆ ಒಂದು ದೊಡ್ಡ ಹಳೆಕಾಲದ ಶಾಪ ಇದೆ. ಹಳೆಯ ಕಾಲದಲ್ಲಿ, ಇಲ್ಲಿ ಒಂದು ಮಹಾಶಿವನ ದೇವಸ್ಥಾನ ಇತ್ತು. ಸುಮಾರು 5000 ವರ್ಷಗಳಷ್ಟು ಹಳೆಯದು. ಅದನ್ನು ಕಾಪಾಡುತ್ತಿದ್ದ ನಾಗದೇವತೆಯನ್ನು ನಮ್ಮ ಪೂರ್ವಜರು ಅವಮಾನಿಸಿದ್ದರು… ಆಗಿನಿಂದ, ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಈ ಶಾಪ. ಬೇಸರದ ವಿಷಯವೆಂದರೆ, ವಿನುತಾಳೇ ಆ ಶಾಪದ ಬಲಿಯಾಗಿದ್ದಳು. ಪ್ರತಿ ಪಂಚಮಿಯ ರಾತ್ರಿ, ಅವಳು ನಾಗರೂಪಕ್ಕೆ ಬದಲಾಗುತ್ತಾಳೆ… ನಾವು ಏನೂ ಮಾಡಲು ಸಾಧ್ಯವಾಗುತ್ತಿಲ್ಲ." ಅಂತ ಗದ್ಗದಿತ ಕಂಠದಲ್ಲಿ ಹೇಳಿಕೊಂಡಳು. "ಇದಕ್ಕೇನೂ ಪರಿಹಾರವಿಲ್ಲವೇ?" ಎಂದು ವಿಕ್ರಮ ಪ್ರಶ್ನಿಸಿದ. "ತುಂಬ ಪ್ರಯತ್ನ ಪಟ್ಟೆವು ವಿಕ್ರಮ. ಆದರೆ ಪರಿಹಾರ ಏನು ಎಂಬುದು ನಮಗೆ ತಿಳಿಯಲಿಲ್ಲ" ಅಂತ ವಿನೋದ ಹೇಳಿದನು.

"ಈ ಶಾಪವನ್ನು ಮುರಿಯಲೇಬೇಕು." ಎಂದು ತೀರ್ಮಾನಿಸಿಕೊಂಡು ವಿಕ್ರಮ ಮೊತ್ತ ಮೊದಲಿಗೆ ಆ ಹಳ್ಳಿಯ ಜನರೆಲ್ಲರನ್ನೂ ಒಟ್ಟು ಸೇರಿಸಿದ. ಗುಹೆಯ ವಿಚಾರ, ಗುಹೆಯಲ್ಲಿದ್ದ ಪೆಟ್ಟಿಗೆಯ ವಿಚಾರ ತಿಳಿಸಿ, ಊರ ಹಿರಿಯ ಸಮಸ್ತರ ಅನುಮತಿಯಂತೆ, ಆ ಪೆಟ್ಟಿಗೆಯನ್ನು ತೆರೆದ. ಅದರೊಳಗೆ ಪವಿತ್ರವಾದ ಶಿವಲಿಂಗ, ನಾಗನ ಕಲ್ಲುಗಳು ಹಾಗೂ ದೇವಸ್ಥಾನದ ಒಡವೆ ಶಾಸನಗಳು ಸಿಕ್ಕವು. ಅದು ಪುರಾತನ ದೇವಾಲಯದ ಮೂಲ ವಸ್ತುಗಳಾಗಿದ್ದವು. 

ಪ್ರಶ್ನೆ ಇಟ್ಟಾಗ, ಮುಂದಿನ ಪಂಚಮಿಯೊಳಗೆ,ದೇವಸ್ಥಾನದ ಪುನರ್ ನಿರ್ಮಾಣ ಆಗಬೇಕು ಎಂದು ಉತ್ತರ ದೊರಕಿತು.  ಹಳ್ಳಿಯ ಜನರೆಲ್ಲರೂ ಒಟ್ಟು ಸೇರಿ, ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡರು. ಪ್ರತಿ ದಿನ ಹೋಮ, ಪೂಜೆ, ನಾಗಪೂಜೆ ಇತ್ಯಾದಿಗಳು ನಡೆದು, ದೇವಸ್ಥಾನ ನಿರ್ಮಾಣವಾಗಿ, ಅದ್ಧೂರಿಯಾಗಿ ಎಲ್ಲ ಕಾರ್ಯಗಳು ಪಂಚಮಿ ಆಗುತ್ತಲೇ ನಡೆಯಿತು. 

***

ಅಂದು ಮತ್ತೆ ಪಂಚಮಿ. ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಮಂಗಳವಾದ ವಾತಾವರಣ. ಬೆಳ್ಳಗಿನ ಬೆಳಕಿನಲ್ಲಿ ಶಿವಲಿಂಗ ಹೊಳೆಯುತ್ತಿತ್ತು. ಹೋಮದ ಧೂಪದ ವಾಸನೆ ಗಾಳಿಯಲ್ಲಿ ಹರಡಿಕೊಂಡಿತ್ತು. ಹಳ್ಳಿಯ ಪ್ರತಿಯೊಬ್ಬರ ಕಣ್ಣುಗಳಲ್ಲಿ ಒಂದೇ ಆಶೆ— “ಇಂದು ಈ ಶಾಪ ಕೊನೆಯಾಗಬೇಕು."
ಬೆಳಗ್ಗಿನ ಸಮಯದಲ್ಲಿ, ದೇವರ ಪೂಜಾಕಾರ್ಯಗಳು ನೆರವೇರಿತು. ವಿಕ್ರಮ ಹಾಗೂ ವಿನುತಾ ಇಬ್ಬರೂ ಒಟ್ಟಿಗೆ ದೇವರಲ್ಲಿ ಪ್ರಾರ್ಥಿಸಿದರು. ವಿನುತಾಳ ಕಣ್ಣುಗಳಲ್ಲಿ ಭಯವೂ ಇತ್ತು… ಆದರೆ ವಿಕ್ರಮನ ಕೈ ಹಿಡಿದಿದ್ದ ವಿಶ್ವಾಸವೂ ಇತ್ತು. “ನಿನ್ನ ಜೊತೆಗೆ ನಾನು ಇದ್ದೇನೆ…” ಎಂದು ಅವನು ನಿಧಾನವಾಗಿ ಹೇಳಿದ.

ಆ ರಾತ್ರಿ, ವಿನುತಾ ಹಾಗೂ ಮನೆಯವರೆಲ್ಲ ದೇವಸ್ಥಾನದಲ್ಲೇ ಇದ್ದರು. ಹನ್ನೆರಡು ಗಂಟೆ ಆಗುತ್ತಿದ್ದಂತೆ, ಗಾಳಿಯ ಸದ್ದು ಬದಲಾಯಿತು. ದೀಪಗಳ ಜ್ವಾಲೆ ತೂಗತೊಡಗಿತು. ವಿನುತಾಳ ದೇಹ ನಿಧಾನವಾಗಿ ಕಂಪಿಸತೊಡಗಿತು…ಅವಳ ಕಣ್ಣುಗಳು ಬದಲಾಗತೊಡಗಿದವು…ವಿನುತಾ ಮತ್ತೆ ನಾಗರೂಪಕ್ಕೆ ಬದಲಾಗುತ್ತಿದ್ದಾಗ, ದೇವಸ್ಥಾನದ ಗಂಟೆ ತಾನಾಗಿಯೇ "ಢಣ್ ಢಣ್ " ಎಂದು ಮೊಳಗಿತು. ತೂಗುತ್ತಿದ್ದ ದೀಪಗಳ ಆ ಕಿರಣದಲ್ಲಿ—ಒಂದು ಮಹಾ ನಾಗದೇವತೆ ಪ್ರತ್ಯಕ್ಷವಾಯಿತು! ಅದು ಭಯಾನಕವಾಗಿರಲಿಲ್ಲ…ಅದು ದಿವ್ಯವಾಗಿತ್ತು… ಕರುಣೆಯಿಂದ ಕೂಡಿತ್ತು…

ನಾಗದೇವತೆ ಗಂಭೀರ ಧ್ವನಿಯಲ್ಲಿ ಹೇಳಿತು: "ನಿಮ್ಮ ಭಕ್ತಿ, ಶ್ರಮ ಹಾಗೂ ಸ್ಥಿರವಾದ ಬದ್ಧತೆಗೆ ನಾನು ಮೆಚ್ಚಿದೆ. “ಮಾನವನ ಅಹಂಕಾರದಿಂದ ಹುಟ್ಟಿದ ಶಾಪ…
ಇಂದು ಮಾನವನ ಭಕ್ತಿ ಮತ್ತು ಪ್ರೀತಿಯಿಂದ ಮುಕ್ತವಾಗುತ್ತಿದೆ…ವಿಕ್ರಮ…ನಿನ್ನ ಧೈರ್ಯ, ನಿನ್ನ ನಿಷ್ಠೆ…ಮತ್ತು ಈ ಹಳ್ಳಿಯ ಜನರ ಒಗ್ಗಟ್ಟಿನ ಶ್ರಮ— ಇವೆಲ್ಲವು ಈ 5000 ವರ್ಷದ ಶಾಪವನ್ನು ಕೊನೆಗೊಳಿಸಿದೆ…ಇಂದಿಗೆ ನಿಮ್ಮ ಮನೆತನಕ್ಕೆ ಅಂತಿದ್ದ ಶಾಪ ಮುಕ್ತಿಯಾಯಿತು. ನಿಮ್ಮ ಬದುಕು ಬಂಗಾರವಾಗಲಿ" ಎಂದು ಹೇಳಿತು. ವಿನುತಾಳ ನಾಗರೂಪ ನಿಧಾನವಾಗಿ ಕರಗತೊಡಗಿತು. ವಿನುತಾ ತನ್ನ ಸ್ವರೂಪಕ್ಕೆ ಮರಳಿದಳು. ಅವಳು ಅಚಾನಕ್ ನೆಲಕ್ಕೆ ಕುಸಿದು ಬಿದ್ದಳು. “ವಿನುತಾ…!” ಎಂದು ಕರೆದ ವಿಕ್ರಮ ಅವಳತ್ತ ಓಡಿದ. ಮಹಾಶಿವನ ಲಿಂಗಪ್ರಸಾದವನ್ನು ಅರ್ಚಕರು ವಿನುತಾಳ ಹಣೆಗೆ ಹಚ್ಚಿದರು. 

ಕೆಲ ಕ್ಷಣಗಳ ಮೌನ…ವಿನುತಾಳ ಕಣ್ಣಲ್ಲಿ ಮತ್ತೆ ಜೀವ ಬಂದಂತಾಗಿತ್ತು. ಅವಳ ಕಣ್ಣುಗಳು ನಿಧಾನವಾಗಿ ತೆರೆದವು…ಅವಳ ಮುಖದಲ್ಲಿ ಮತ್ತೆ ಆ ಹಳೆಯ ಮಂದಹಾಸ ಅರಳಿತು…ವಿಕ್ರಮನನ್ನು ಅಪ್ಪಿಕೊಂಡು, ಧನ್ಯವಾದ ಸೂಚಿಸಿದಳು. ಗಟ್ಟಿಯಾಗಿ ವಿಕ್ರಮನ ಕೈ ಹಿಡಿದುಕೊಂಡು ಮಂದಹಾಸ ಬೀರುತ್ತಿದ್ದಳು. ಈ ಎರಡು ಜನರ ಜೋಡಿ ಸುಂದರವಾಗಿ ಕಾಣುತ್ತಿತ್ತು. ಹಳ್ಳಿಯ ಜನರೆಲ್ಲ “ಹರ ಹರ ಮಹಾದೇವ!” ಎಂದು ಕೂಗಿ ಸಂತೋಷಪಟ್ಟರು. ಆ ಪುರಾತನ ದೇವಾಲಯ ಮತ್ತೆ ಜೀವಂತವಾಯಿತು. 

ದೇವಾಲಯದ ಗಂಟೆಗಳು ನಿರಂತರವಾಗಿ ಮೊಳಗುತ್ತಾ…ಆಕಾಶದಲ್ಲೇನೋ ಒಂದು ಶಾಂತಿ ಹರಡಿದಂತೆ ಅನಿಸಿತು. ಪ್ರತಿ ವರ್ಷ ಪಂಚಮಿಯಂದು ಮಹೋತ್ಸವ ನಡೆಯತೊಡಗಿತು. 

ವಿಕ್ರಮ ಮತ್ತು ವಿನುತಾ— ಕೇವಲ ಪ್ರೇಮಿಗಳಲ್ಲ…ಒಂದು ಶಾಪವನ್ನು ಮುರಿದ ಜೋಡಿ. ಅವರ ಪ್ರೀತಿ—ಒಂದು ಮನೆತನವನ್ನು ಉಳಿಸಿತು…ಒಂದು ಹಳ್ಳಿಯನ್ನು ಪುನರ್ಜೀವಗೊಳಿಸಿತು… ಕೆಲವು ಶಾಪಗಳು ಭಯದಿಂದ ಅಲ್ಲ, ಭಕ್ತಿಯಿಂದ ಮುರಿಯುತ್ತದೆ. ಕೆಲವು ಪ್ರೇಮಗಳು ಭಾವನೆಗಳನ್ನಲ್ಲ, ಜೀವನವನ್ನು ರೂಪಿಸುತ್ತವೆ. ನಿಜವಾದ ಪ್ರೀತಿ ಇದ್ದಲ್ಲಿ… ದೈವವೂ ತಲೆಬಾಗುತ್ತದೆ…

*** 

  ✍🏻 Deepalaxmi Bhat
Mangaluru  

ಶುಕ್ರವಾರ, ಜನವರಿ 23, 2026

ಮರೆತುಹೋದ ಬೇರುಗಳು

 

✍🏻ದೀಪಲಕ್ಷ್ಮಿ ಭಟ್, ಮಂಗಳೂರು 

ಶ್ರೀ ರಾಮ ಶರ್ಮ ಎಂಬ ಹೆಸರು ಊರಿನ ಹಳೆಯ ಕಾಲದ ನೆನಪುಗಳಲ್ಲೊಂದಾಗಿತ್ತು. ಈಗಿನ ಪೀಳಿಗೆಗೆ ಅದು ಕೇವಲ ಒಂದು ಸಾಮಾನ್ಯ ಹೆಸರು ಮಾತ್ರ. ಆದರೆ ಆ ಹೆಸರಿನ ಹಿಂದೆ ಅಡಗಿದ್ದ ಕಥೆ, ಒಂದು ಊರಿನ ಬೆಳವಣಿಗೆಯ ಮೌನ ಸಾಕ್ಷಿಯಾಗಿತ್ತು.

ಶ್ರೀ ರಾಮ ಶರ್ಮಾ ಅವರ ಬದುಕು ಬಡತನದ ಮಣ್ಣಿನಲ್ಲಿ ಬೇರು ಬಿಟ್ಟಿತ್ತು. ದೊಡ್ಡ ಕೂಡು ಕುಟುಂಬ, ಹಸಿದ ಹೊಟ್ಟೆಗಳು, ಹೊಟ್ಟೆ ತುಂಬಿಸಿಕೊಳ್ಳಲು ಮಾಡುವ ಹೋರಾಟ, ಹಂಚಿಕೊಂಡ ಕನಸುಗಳು — ಇವೆಲ್ಲದರ ಮಧ್ಯೆ ವಿದ್ಯೆಯ ಕೈ ಬಿಡದೇ ಹಿಡಿದುಕೊಂಡು ಹೋಗಿದ್ದರು ಅವರು. ಅಣ್ಣಂದಿರ ಚಿಕ್ಕ ಕ್ಯಾಂಟೀನ್‌ನಲ್ಲಿ ಚಿಕ್ಕಪುಟ್ಟ ಕೆಲಸ, ಹಗಲು ಮರದ ಮಿಲ್ಲಿನಲ್ಲಿ ಅಟೆಂಡರ್ ಕೆಲಸ, ಸಂಜೆ ಕಾಲೇಜು — ಹೀಗೆ ಅವನ ದಿನಗಳು ಓಡುತ್ತಿದ್ದವು. ದುಡ್ಡಿಗಿಂತ ಜವಾಬ್ದಾರಿ ದೊಡ್ಡದಾಗಿದ್ದ ಕಾಲ ಅದು. ಕಾಲೇಜಿನ ಪುಸ್ತಕಗಳನ್ನು ಚೀಲದಲ್ಲಿ ಹಾಕಿಕೊಂಡು, ಕೈಯಲ್ಲಿ ತಟ್ಟೆ ತೊಳೆಯುವ ಚಿಂದಿ ಹಿಡಿದು, ಅವರು ಜೀವನದ ಪಾಠವನ್ನು ಕಲಿಯುತ್ತಿದ್ದರು. ಮಿಲ್ಲಿನಲ್ಲಿ ಆ ಮರದ ಸದ್ದು, ಧೂಳು, ಬೆವರು — ಇವೆಲ್ಲದರ  ನಡುವೆ ಬದುಕು ಸಾಗುತ್ತಿತ್ತು. ಕಣ್ಣು ತುಂಬಾ ನಿದ್ದೆ, ಮನಸ್ಸು ತುಂಬಾ ಕನಸು. “ಒಂದು ದಿನ ಒಳ್ಳೆಯ ಕೆಲಸ ಸಿಗಬೇಕು” ಅನ್ನೋ ಕನಸು ಮಾತ್ರ ಅವರಿಗೆ ದಾರಿ ತೋರಿಸುತ್ತಿತ್ತು. ಆ ಕನಸು ದೇವರ ಕೃಪೆಯಿಂದ ಸಾಕಾರವಾಯಿತು. ಸರಕಾರಿ ಕೆಲಸ. ದೊಡ್ಡ ಹುದ್ದೆ ಅಲ್ಲ. ಆದರೆ ಸ್ಥಿರ ಸಂಬಳ, ಗೌರವ. ಮೊದಲ ತಿಂಗಳ ಸಂಬಳ ಬಂದ ದಿನ, ಮನೆಗೆ ಹೊಸ ತಟ್ಟೆ, ಮನೆಗೆ ಉಪಯೋಗವಾಗುವ ವಸ್ತುಗಳು, ತೋಟಕ್ಕೆ ಗಿಡಗಳು, ಅಮ್ಮನ ಕೈಗೆ ಒಂದು ಸೀರೆ —ಅದೇ ಅವರ ಸಂತೋಷ.

 

*** 

ಅದೇ ಸಮಯದಲ್ಲಿ ಬಂದ ಒಳ್ಳೆಯ ಸಂಬಂಧ, ಪಲ್ಲವಿ. ಸೌಮ್ಯ ಸ್ವಭಾವದ, ಹೊಂದಾಣಿಕೆಯ ಹೆಣ್ಣು. ಸರಕಾರಿ ಕೆಲಸ, ಸುಂದರವಾದ ಮುಖ, ಗಟ್ಟಿಮುಟ್ಟಾದ ಮೈಕಟ್ಟು, ಜವಾಬ್ದಾರಿಯುತ ನಡೆ ನುಡಿ, ಈ ಎಲ್ಲ ಗುಣಗಳಿಂದಾಗಿ ಎಲ್ಲರಿಗೂ ಶರ್ಮ ಅವರು ಇಷ್ಟವಾದರು. ಸಂಬಂಧ ಒಪ್ಪಿಗೆಯಾಗಿ, ಮದುವೆಯಾದ ಮೇಲೆ ಅವರ  ಜೀವನ ನಿಧಾನವಾಗಿ ನೆಮ್ಮದಿಯ ಹಾದಿ ಹಿಡಿಯಿತು. ಪುಟ್ಟ ಮಗಳು ಹುಟ್ಟಿದಾಗ, ಶರ್ಮರ ಕಣ್ಣುಗಳಲ್ಲಿ ಮಿಂಚಿದ ಸಂತೋಷವನ್ನು ಯಾರೂ ಮರೆತಿರಲಿಲ್ಲ. ಮಗಳು ರಮ್ಯಾ ಪಲ್ಲವಿಯ ಪ್ರತಿಬಿಂಬದಂತೆ ಕಾಣುತ್ತಿದ್ದಳು. ಆ ವರ್ಷವೇ, ಕೂಡು ಕುಟುಂಬವಾಗಿದ್ದ ಅವರ ಕುಟುಂಬ ಬೇರೆಬೇರೆಯಾಯಿತು. ದೊಡ್ಡ ಅಣ್ಣ ಮನೆತನದ ಮನೆಯಲ್ಲಿದ್ದರೆ, ಚಿಕ್ಕ ಅಣ್ಣ ಇನ್ನೊಂದು ಮನೆ ಕಟ್ಟಿಸಿ, ಸ್ವಂತ ದಿನಸಿ ಅಂಗಡಿ ಒಂದನ್ನು ಇಟ್ಟು, ಸ್ವಂತ ಕುಟುಂಬ ರೂಪಿಸಿಕೊಂಡರು. ಹಾಗಿರುವಾಗ, ಒಲ್ಲದ ಮನಸ್ಸಿನಲ್ಲಿಯೇ, ಶರ್ಮರೂ ಕೂಡಾ ತಮ್ಮ ಸ್ವಂತ ದುಡ್ಡಿನಲ್ಲಿ ಮನೆಯೊಂದನ್ನು ಕಟ್ಟಿಸಿ, ಬೇರೆ ಕುಳಿತರು. ಕೂಡು ಕುಟುಂಬದಲ್ಲಿದ್ದ ಅವರು ಈಗ ಮೂರು ಜನರ ಪುಟ್ಟ ಕುಟುಂಬವಾಗಿ ಬದಲಾದರು. ಆದರೂ ತಮ್ಮ ಪುಟ್ಟದಾದ ಸಂಸಾರದಲ್ಲಿ ಸಂತೋಷದಿಂದ ಕಾಲ ಕಳೆಯುತ್ತಿದ್ದರು. 

ಆದರೆ ಅವರ ಸಂತೋಷ ದೇವರಿಗೆ ಹೆಚ್ಚು ದಿನ ಇಷ್ಟವಾಗಲಿಲ್ಲವೇನೋ. ಮುಂದಿನ ವರ್ಷವೇ, ಎರಡನೇ ಹೆರಿಗೆಯ ಸಮಯದಲ್ಲಿ ಪಲ್ಲವಿ ಕಾಮಾಲೆ ರೋಗಕ್ಕೆ  ತುತ್ತಾಗಿ ಜೀವ ಕಳೆದುಕೊಂಡಳು. ಶರ್ಮರಿಗೆ ಲೋಕವೇ ಕತ್ತಲಾಗಿತ್ತು. ಎರಡು ವರ್ಷದ ಆ ಪುಟ್ಟ ಮಗು ರಮ್ಯಾಳನ್ನು  ಕೈಯಲ್ಲಿ ಹಿಡಿದುಕೊಂಡಾಗ, “ನಾನು ಇದಕ್ಕೆ ಅಪ್ಪ ಅಮ್ಮ - ಎರಡೂ  ಆಗಬೇಕಾ?” ಅನ್ನೋ ಪ್ರಶ್ನೆ ಅವರನ್ನು ಕಾಡುತ್ತಿತ್ತು. ಎರಡು ವರ್ಷದ ಮಗಳು ರಮ್ಯಾಳನ್ನು ಎದೆಗೆ ಒತ್ತಿಕೊಂಡು ಶರ್ಮಾರು  ಅತ್ತದ್ದು ಯಾರಿಗೂ ಕಾಣಲಿಲ್ಲ—ಅವರ ಕಣ್ಣೀರು ಒಳಗೇ ಹರಿಯಿತು.

*** 

ಆ ಸಮಯದಲ್ಲೇ ಒಂದು ವಿಚಿತ್ರ ಘಟನೆ ನಡೆಯಿತು. ರಮ್ಯಾ ತನ್ನ ಚಿಕ್ಕಮ್ಮ ಜಾನಕಿಯನ್ನು “ಅಮ್ಮ” ಎಂದು ಕರೆಯಲು ಶುರುಮಾಡಿದಳು. ಅದು ಒಮ್ಮೆ ಅಲ್ಲ, ಪ್ರತಿದಿನ. ಆ ಪದ ಜಾನಕಿಯ ಹೃದಯವನ್ನೇ ಬದಲಾಯಿಸಿತು. ಹಿರಿಯರ ಮಾತಿನಂತೆ, ಸಮಾಜದ ನಿರೀಕ್ಷೆಯಂತೆ, ಜಾನಕಿ ಶರ್ಮರ ಜೀವನಕ್ಕೆ ಕಾಲಿಟ್ಟಳು — ತನ್ನ ಬದುಕಿಗಿಂತ ಆ ಪುಟ್ಟ ಮಗುವಿನ ಬದುಕು ಮುಖ್ಯ ಎಂದುಕೊಂಡು. . ಆ ಮದುವೆ ಒಬ್ಬ ಹೆಣ್ಣಿನ ತ್ಯಾಗ ಮಾತ್ರವಲ್ಲ — ಒಬ್ಬ ಮಗುವಿನ ಬದುಕಿಗೆ ಹೊಸ ಉಸಿರು. ಜಾನಕಿ ಕಾಲಿಟ್ಟ ನಂತರ ಶರ್ಮಾರ ಮನೆಗೆ ಬೆಳಕು ಬಂತು.

ಜಾನಕಿ ಬಂದ ಮೇಲೆ ಶರ್ಮರ ಬದುಕು ಸುಗಮವಾಗಿ ಸಾಗಿತು. ಇಬ್ಬರಿಗೂ ಸರಕಾರಿ ಕೆಲಸ. ಶ್ರಮ, ಶಿಸ್ತು, ಪ್ರಾಮಾಣಿಕತೆ—ಇವುಗಳೇ ಅವರ ಮನೆತನದ ಅಡಿಪಾಯ. ಜಾನಕಿ ರಮ್ಯಾಳನ್ನು “ಮಲತಾಯಿ” ಎಂದಲ್ಲ, ತನ್ನ ಉಸಿರಿನ ಭಾಗವೆಂದು ನೋಡಿದಳು. ಆ ಪ್ರೀತಿ ನಂತರ ಹುಟ್ಟಿದ ಕೃಷ್ಣ, ಸೌಮ್ಯರಿಗೂ ಹಂಚಿತು. ಮೂರು ಮಕ್ಕಳು—ಒಂದೇ ತಾಯಿಯ ಮಕ್ಕಳೆಂಬಂತೆ ಬೆಳೆದರು.

ಊರಿನ ಜನರು ಹೇಳುತ್ತಿದ್ದರು: “ಇವರ ಮಕ್ಕಳನ್ನ ನೋಡಿ ಕಲಿಯಬೇಕು. ರಕ್ತ ಬೇರೆ ಆದ್ರೂ ಮನಸ್ಸು ಒಂದೇ.”

*** 

ಶರ್ಮಾ ಅವರು ತುಂಬಾ ದೂರದೃಷ್ಟಿತ್ವ ಹೊಂದಿದ ವ್ಯಕ್ತಿಯಾದ ಕಾರಣ ಅವರ ದೃಷ್ಟಿ ಅಷ್ಟಕ್ಕೆ ನಿಂತಿರಲಿಲ್ಲ. “ನಮ್ಮ ಊರಿನ ಮಕ್ಕಳು ದೂರದ ಆಂಗ್ಲ ಮಾಧ್ಯಮ ಶಾಲೆಗೆ ಹೋಗಬೇಕಾ?” ಅನ್ನೋ ಪ್ರಶ್ನೆ ಅವರನ್ನು ಕಾಡಿತು. ನಮ್ಮ ಊರಿನಲ್ಲಿಯೇ ಒಂದು ಆಂಗ್ಲ ಮಾಧ್ಯಮ ಶಾಲೆ ನಿರ್ಮಾಣವಾಗಬೇಕು ಎಂದುಕೊಂಡು, ತಮ್ಮ ಮನೆಯ ಒಂದು ಭಾಗದಲ್ಲೇ, ಎರಡು ಶಿಕ್ಷಕಿಯರ ಜೊತೆ ಸೇರಿ, ಶಾಲೆ ಆರಂಭಿಸಿದರು. ಮೊದಲ ವರ್ಷ ಕೇವಲ ಹತ್ತು ಮಕ್ಕಳು. ಎರಡನೇ ವರ್ಷ ಐವತ್ತು. ನಂತರ ನೂರು. ಹೀಗೆ ಶಾಲೆ ಬೆಳೆಯುತ್ತಿತ್ತು. ಶಾಲೆಯ ಹೆಸರೂ ಬೆಳೆಯಿತು. ಕ್ರಮೇಣ ಮಕ್ಕಳು ಜಾಸ್ತಿ ಆದಂತೆ, ಮನೆಯ ಆ ಪುಟ್ಟ ಜಾಗ ಸಾಲಲಿಲ್ಲ. ಪಿತ್ರಾರ್ಜಿತ ಆಸ್ತಿ ಹಂಚಿಕೆಯ ಸಮಯದಲ್ಲಿ, ದಾರಿ ಇಲ್ಲದ ಜಾಗ ಒಂದನ್ನು ಶರ್ಮರಿಗೆ ಕೊಟ್ಟಿದ್ದರು. ಆಗ ಅವರು ವಿರೋಧಿಸಿರಲಿಲ್ಲ. “ನನಗೆ ಕೆಲಸಕ್ಕೆ ಬರುತ್ತದೆ” ಎಂದು ಪಿತ್ರಾರ್ಜಿತವಾಗಿ ದೊರೆತ ದಾರಿ ಇಲ್ಲದ ಜಾಗವನ್ನು ಸಂಪೂರ್ಣ ಮನಸ್ಸಿನಿಂದ ತೆಗೆದುಕೊಂಡಿದ್ದರು. ಮಗಳು ರಮ್ಯಾಳಿಗೆ ಹದಿನೆಂಟು ತುಂಬಿದ ದಿನ ಆ ಜಾಗದ ಅರ್ಧದಷ್ಟನ್ನು ಶಾಲೆಗೆಂದು ದಾನ ಮಾಡಿದರು. ಆಗ ಶಾಲೆಯ ಕಾರಣದಿಂದ ಆ ಜಾಗಕ್ಕೆ ದಾರಿ ಬಂತು. ಶಾಲೆಗೂ ಊರಿಗೂ ದಾರಿ ತೆರೆದಿತು.

ವರ್ಷಗಳು ಉರುಳಿದವು.

ಶಾಲೆ ದೊಡ್ಡದಾಯಿತು. ಹೊಸ ಬೋರ್ಡ್, ಹೊಸ ಟ್ರಸ್ಟ್, ಹೊಸ ಮ್ಯಾನೇಜ್ಮೆಂಟ್. ಶರ್ಮರ ಹೆಸರು ನಿಧಾನವಾಗಿ ದಾಖಲೆಗಳ ಅಂಚಿಗೆ ಸರಿಯಿತು. ಹೊಸ ಮಕ್ಕಳು, ಹೊಸ ಶಿಕ್ಷಕರು—ಯಾರಿಗೂ “ಈ ಶಾಲೆ ಯಾರು ಶುರು ಮಾಡಿದ್ರು?” ಅನ್ನೋ ಪ್ರಶ್ನೆಯೇ ಇರಲಿಲ್ಲ. ಅದು ಅವರಿಗೆ ಗೊತ್ತಿರಬೇಕಾದದ್ದು ಅನ್ನೋ ವಿಷಯಾನೂ ಅವರಿಗೆ ಬೇಡವಾಗಿತ್ತು.  ಶಾಲೆಯಲ್ಲಿ ಕಲಿಯುತ್ತಿರುವವರಿಗೆ, ಕಲಿಸುತ್ತಿರುವವರಿಗೆ, ಮ್ಯಾನೇಜ್ಮೆಂಟ್ ಗೆ ಎಲ್ಲರಿಗೂ ಆ ವಿಷಯ ಅಗತ್ಯವಾದದ್ದು ಎಂದು ಎನಿಸಲಿಲ್ಲವೋ ಏನೋ. 

ಇಂದು ಶರ್ಮರು ವೃದ್ಧರಾಗಿದ್ದರು. ಜಾನಕಿ ಜೊತೆ ವಾಕಿಂಗ್ ಎಂದು ಹೊರಟು, ಶಾಲೆಯ ದಾರಿಯಲ್ಲಿ ನಿಂತು ಶಾಲೆ ಹೇಗೆ ನಡೆಯುತ್ತಿದೆ ಅಂಬುದನ್ನು ನೋಡುತ್ತಿದ್ದರು. ಸಂಜೆ ಸಮಯವಾದ ಕಾರಣ, ಶಾಲೆಯ ಮಕ್ಕಳೆಲ್ಲ ಆಟ ಆಡುತ್ತಿದ್ದರು. ಆಡುತ್ತಿದ್ದ ಮಕ್ಕಳು ಅವರನ್ನು “ಯಾರಪ್ಪಾ?” ಅನ್ನುವ ದೃಷ್ಟಿಯಿಂದ ನೋಡುತ್ತಾರೆ. ಯಾರಿಗೂ ಗೊತ್ತಿಲ್ಲ—ಅವರು ಕೊಟ್ಟಂಥ ಜಾಗವೇ ಒಮ್ಮೆ ಆ ಮಕ್ಕಳ ಶಾಲೆಯ ಮೊದಲ ತರಗತಿ ಆಗಿತ್ತು ಅನ್ನೋದು.

ಹಾಗೆ ದಿನ ಕಳೆದು ಒಂದು ದಿನ ಶಾಲೆಯ ವಾರ್ಷಿಕೋತ್ಸವ ದಿನ. ಮುಖ್ಯ ಅತಿಥಿಗಳು, ಭಾಷಣಗಳು. ಶರ್ಮರು ಜಾನಕಿ ಜೊತೆ ಬಂದು  ಹಿಂಬದಿ ಸಾಲಿನಲ್ಲಿ ಮೌನವಾಗಿ ಕುಳಿತಿದ್ದರು. ಯಾರೂ ಕರೆಯಲಿಲ್ಲ. ಯಾರೂ ಗುರುತಿಸಲಿಲ್ಲ.

ಆದರೆ ಶರ್ಮರು ಬೇಸರಪಡಲಿಲ್ಲ. "ಒಳ್ಳೆಯದು ಮಾಡಿದವರು ಹೆಸರು ಕಳೆದುಕೊಂಡರೆ, ಅದೇ ಅವರ ಸೋಲಾ? ಅಥವಾ, ಹೆಸರು ಇಲ್ಲದೇ ಉಳಿದ ಒಳ್ಳೆಯದೇ ಅವರ ನಿಜವಾದ ಗೆಲುವಾ?"ಆದರೆ ಜಾನಕಿಗೆ ಮಾತ್ರ ಬೇಸರವಾಗಿತ್ತು, ಆದರೂ ಅಷ್ಟೊಂದು ಮಕ್ಕಳನ್ನು ನೋಡುತ್ತಾ ಸಂತೋಷ ಪಡುತ್ತಿದ್ದರು.
ಶರ್ಮರು ಜಾನಕಿಯ ಕೈ ಹಿಡಿದು ನಿಧಾನವಾಗಿ ಹೇಳಿದರು: “ನಾವು ಬೀಜ ಬಿತ್ತಿದ್ದೇವೆ. ಮರ ಬೆಳೆದಿದೆ. ಹಣ್ಣು ಯಾರಿಗೆ ಸಿಗುತ್ತೋ ಅದು ಆ ಭಗವಂತನ ಇಚ್ಛೆ.” ಆ ಮಾತು ಜಾನಕಿಯ ಕಣ್ಣಲ್ಲಿ ನೀರಾಗಿ ಹೊರಬಂತು.



 

***

ಆ ವಾರ್ಷಿಕೋತ್ಸವದ ದಿನ ಮುಗಿದ ಮೇಲೆ, ಶಾಲೆಯ ಆವರಣ ನಿಧಾನವಾಗಿ ಖಾಲಿಯಾಗುತ್ತಿತ್ತು. ಬಣ್ಣದ ಬ್ಯಾನರ್‌ಗಳು ಇನ್ನೂ ತೂಗಾಡುತ್ತಿದ್ದವು. ವೇದಿಕೆಯ ಮೇಲೆ ಹಾಕಿದ್ದ ಹೂವುಗಳು ಒಣಗತೊಡಗಿದ್ದವು. ಮೈಕ್‌ಗಳ ಶಬ್ದ ಮೌನವಾಯಿತು. ಶ್ರೀ ರಾಮ ಶರ್ಮರು ಮತ್ತು ಜಾನಕಿ ನಿಧಾನವಾಗಿ ಎದ್ದು ಹೊರಟರು.

ಅಷ್ಟರಲ್ಲಿ, ಶಾಲೆಯ ಹೊಸ ಪ್ರಾಂಶುಪಾಲರು ಒಬ್ಬ ಶಿಕ್ಷಕರಿಗೆ ಕೇಳಿದರು: “ಆ ಹಳೆಯ ದಂಪತಿ ಯಾರು? ದಿನವಿಡೀ ಹಿಂಬದಿ ಕುಳಿತು ನೋಡ್ತಿದ್ರಲ್ಲ?”

ಶಿಕ್ಷಕಿ ಕ್ಷಣ ಯೋಚಿಸಿ ಹೇಳಿದಳು: “ಗೊತ್ತಿಲ್ಲ ಮೇಡಂ… ಬಹುಶಃ ಹತ್ತಿರದ ಮನೆಗಳ ಯಾರೋ ಹಿರಿಯರು ಇರಬೇಕು.”

ಆ ಮಾತು ಕೇಳಿದ ಕ್ಷಣಕ್ಕೆ, ಜಾನಕಿಯ ಕೈ ಕಂಪಿಸಿತು. ಮನಸ್ಸು ಒಡೆಯಿತು. ಶರ್ಮರು ಒಂದು ಕ್ಷಣ ನಿಂತು ಹಿಂತಿರುಗಿ ನೋಡಿದರು. ವೇದಿಕೆ, ಶಾಲೆಯ ಕಟ್ಟಡ, ಮಕ್ಕಳ ನಗು— ಎಲ್ಲವೂ ಅವರದೇ ದೊರದೃಷ್ಟಿತ್ವದಿಂದ ಹುಟ್ಟಿದ ಕನಸಾಗಿತ್ತು. ಆದರೆ ಇಂದು ಆ ಕನಸುಗಾರನೇ ಅನಾಥನಾಗಿದ್ದ. 

ಅವರು ಏನೂ ಹೇಳಲಿಲ್ಲ. ಹಾಗೆ ತಮ್ಮ ಮನೆಗೆ ಹಿಂದಿರುಗಿದರು. 

*** 

ಮರುದಿನ ಬೆಳಿಗ್ಗೆ, ಶಾಲೆಯ ಆವರಣದಲ್ಲಿ ಗದ್ದಲ. ಪೇಪರ್‌ವಾಲಾ ಬಂದು, “ಇವತ್ತು ನಮ್ಮ ಶಾಲೆಯ ಬಗ್ಗೆ ನ್ಯೂಸ್ ಇದೆ” ಅಂದ. ಎಲ್ಲರೂ ಬೇಗನೆ ನ್ಯೂಸ್ ಪೇಪರ್ ಬಿಡಿಸಿ ನೋಡಿದರು. ಶಾಲೆಯ ಬಗ್ಗೆ ಮುಖ್ಯ ಸುದ್ದಿಯ ಶೀರ್ಷಿಕೆ ಹೀಗೆ ಇತ್ತು:

“ಶಾಲೆ ಸ್ಥಾಪಕನ ಹೆಸರೇ ಮರೆತುಹೋದ ಊರು – ಸಾಮಾಜಿಕ ನಿರ್ಲಕ್ಷ್ಯದ ಮತ್ತೊಂದು ಮುಖ”

ಒಬ್ಬ ಯುವ ಪತ್ರಕರ್ತ, ಊರಿನ ಹಳೆಯ ದಾಖಲೆಗಳನ್ನು ಹುಡುಕಿ, ಶರ್ಮರ ಕಥೆಯನ್ನು ಬರೆದಿದ್ದ. ಶಾಲೆ ಶುರು ಮಾಡಿದ ದಿನದಿಂದ, ಆಸ್ತಿ ದಾನ ಮಾಡಿದ ದಾಖಲೆಗಳವರೆಗೆ—ಎಲ್ಲವೂ ಅಕ್ಷರಗಳಲ್ಲಿ ನಿಂತಿದ್ದವು.

ಶಾಲೆಯ ಮಕ್ಕಳು ಮೊದಲ ಬಾರಿಗೆ ಕೇಳಿದರು: “ನಮ್ಮ ಶಾಲೆಯನ್ನು ಯಾರು ಶುರು ಮಾಡಿದ್ರು?”

ಶಿಕ್ಷಕರಿಗೆ ಉತ್ತರ ಇರಲಿಲ್ಲ.

ಆ ದಿನ ತಮ್ಮ ತಪ್ಪುಗಳ ಅರಿವಾಗಿ, ಶಾಲೆಯಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಿದರು. ಶರ್ಮರನ್ನು ವೇದಿಕೆಗೆ ಕರೆದು ಗೌರವಿಸಲಾಯಿತು. ಶಾಲೆಯ ಬ್ಯಾನರ್ ಮೇಲೆ ಹೊಸ ಸಾಲು ಸೇರಿತು:

“ಸ್ಥಾಪಕರು – ಶ್ರೀ ರಾಮ ಶರ್ಮ”

ಹಸ್ತಾಲಾಪದ ಸಡ್ಡು ಕೇಳಿದಾಗ ಶ್ರೀ ರಾಮ ಶರ್ಮರು ಸುಮ್ಮನೆ ನಕ್ಕರು. ಆದರೆ ಆ ನಗುವಿನಲ್ಲಿ ಗೆಲುವಿನ ಹೆಮ್ಮೆ ಇರಲಿಲ್ಲ. ಕೇವಲ ಒಂದು ಮೃದುವಾದ ನೋವು ಮಾತ್ರ.

ಅವರು ಮೈಕ್ ಹಿಡಿದು ಒಂದೇ ವಾಕ್ಯ ಹೇಳಿದರು: “ಗೌರವ ಬೇಕು ಅಂತ ನಾನು ಶಾಲೆ ಶುರು ಮಾಡಿಲ್ಲ. ಊರಿನ ಸಮಸ್ತ ಜನರ ಉಪಕಾರಕ್ಕೆಂದು ಈ ಶಾಲೆ ನಿರ್ಮಾಣವಾಯಿತು. ಇದು ಊರಿನ ಹಲವಾರು ಮಂದಿಯ ಕಷ್ಟದ ಪ್ರತಿಫಲ. ಬೆಳೆದು ದೊಡ್ಡದಾದ ಮರ ಅದರ ಬೇರನ್ನು ನೆನಪಿಟ್ಟುಕೊಳ್ಳೋದನ್ನು ಕಲಿಯಬೇಕು ಅಂತ ಮಾತ್ರ ನಾನು ಹೇಳಬಲ್ಲೆ.”

ಆ ಮಾತು ಮಕ್ಕಳ ಹೃದಯಕ್ಕೆ ಬಿತ್ತು. ಆದರೆ ಸಮಾಜಕ್ಕೆ?

ಆ ವಾರದ ನಂತರ, ಮತ್ತೆ ಹೊಸ ಸುದ್ದಿಗಳು, ಹೊಸ ವಿಷಯಗಳು. ಶರ್ಮರ ಹೆಸರು ಮತ್ತೆ ನಿಧಾನವಾಗಿ ಹಿನ್ನೋಟಕ್ಕೆ ಸರಿಯತೊಡಗಿತು. ಶರ್ಮರು ಅದನ್ನೂ ನೋಡಿದರು. ಮೌನವಾಗಿ ಒಪ್ಪಿಕೊಂಡರು. ಊರು ಬೆಳೆಯುತ್ತಲೇ ಇತ್ತು. ಶಾಲೆ ಮುಂದುವರಿಯುತ್ತಲೇ ಇತ್ತು. ಆದರೆ, ಒಂದು ಊರು ತನ್ನ ಬೇರುಗಳನ್ನು ನೆನಪಿಟ್ಟುಕೊಳ್ಳುವ ತನಕ, ಆ ಬೆಳವಣಿಗೆ ಕೇವಲ ಕಟ್ಟಡಗಳದ್ದೇ ಹೊರತು ಮೌಲ್ಯಗಳದ್ದಾಗುವುದಿಲ್ಲ ಎಂಬ ಸತ್ಯ ಮತ್ತೆ ಮಣ್ಣಿನಲ್ಲಿ ಮರೆತುಹೋಯಿತು.

ಇದು ಶರ್ಮರ ಕಥೆಯ ಅಂತ್ಯ ಅಲ್ಲ. ಇದು, ಒಳ್ಳೆಯತನವನ್ನು ಉಪಯೋಗಿಸಿ ನೆನಪುಗಳನ್ನು ಮರೆತ ಸಮಾಜದ ಕಥೆ. ಇತಿಹಾಸವನ್ನು ಬರೆಯದ ಸಮಾಜದಲ್ಲಿ, ಒಳ್ಳೆಯವರು ಸದಾ ಮೌನದೊಳಗೆ ಸಮಾಧಿಯಾಗುತ್ತಾರೆ  ಸಮಾಜಕ್ಕೆ ನೆನಪಿಡಲು ಸುಲಭವಾಗಿರೋದು ಹೆಸರುಗಳು ಅಲ್ಲ. ಫಲವನ್ನು ಹಂಚಿಕೊಳ್ಳುವ ಸಮಾಜಕ್ಕೆ, ಬೇರುಗಳನ್ನು ನೆನಪಿಡುವ ಶಿಸ್ತು ಇಲ್ಲ. ಅದಕ್ಕೇ ಮೌಲ್ಯಗಳಿಲ್ಲದ ಕಟ್ಟಡಗಳು ಮಾತ್ರ ಬೆಳೆಯುತ್ತವೆ.

ಇಲ್ಲಿ, ಒಂದು ಪ್ರಶ್ನೆ ಮಾತ್ರ ಉಳಿಯುತ್ತದೆ— " ಒಂದು ಊರು ತನ್ನ ಬೇರುಗಳನ್ನು ಮರೆತರೆ, ಆ ಊರು ಬೆಳೆಯುತ್ತದಾ? ಅಥವಾ ನೆನಪುಗಳಿಲ್ಲದ ಮರವಾಗಿ ಒಣಗುತ್ತದಾ?"

***  

✍🏻 Deepalaxmi Bhat
Mangaluru