ಮಂಗಳವಾರ, ಜೂನ್ 2, 2026

ಅನನ್ಯ – ಮರಣವನ್ನೂ ಮೀರಿದ ಪ್ರೀತಿ

 ✍🏻ದೀಪಲಕ್ಷ್ಮಿ ಭಟ್, ಮಂಗಳೂರು  

ಒಂದು ಸುಂದರವಾದ ಜೋಡಿ ಅಮಿತ್ - ಅನನ್ಯ. ಮದುವೆಯಾಗಿ 12 ವರ್ಷಗಳಾಗಿದ್ದವು. ಮುದ್ದಾದ ಎರಡು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಅಮಿತ್ ಅನನ್ಯ ಇಬ್ಬರೂ ಸಾಫ್ಟ್ ವೇರ್ ಕೆಲಸ ಮಾಡುತ್ತಿದ್ದರು. ವಾರದಲ್ಲಿ ಮೂರು ದಿನ ಮನೆಯಲ್ಲಿಯೇ ವರ್ಕ್ ಫ್ರಮ್ ಹೋಂ ಮಾಡಿಕೊಂಡು, ಮನೆ, ಆಫೀಸ್ ಎರಡೂ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸುತ್ತಿದ್ದರು. ಈಗಿನ ಕಾಲದ ನ್ಯೂಕ್ಲಿಯರ್ ಫ್ಯಾಮಿಲಿ ಅವರದ್ದು. ಇಬ್ಬರ ತಂದೆ ತಾಯಂದಿರು, ಊರಿನಲ್ಲಿ ಮನೆ ಮಾಡಿಕೊಂಡಿದ್ದರು. ಇವರಿಬ್ಬರೂ ಬೆಂಗಳೂರಿನಲ್ಲಿದ್ದರು.  ಸ್ವಂತವಾಗಿ 4 ಬೆಡ್ ರೂಮಿನ ಫ್ಲಾಟ್ ಒಂದನ್ನು ಖರೀದಿಸಿ, ಆರಾಮ ಜೀವನ ಸಾಗಿಸುತ್ತಿದ್ದರು. ಕುಟುಂಬದಲ್ಲಿ ಪ್ರೀತಿ ಹೇಗಿರಬೇಕು ಎಂಬುದನ್ನು ಇವರನ್ನು ನೋಡಿ ಕಲಿಯಬೇಕಾದದ್ದು ಅನ್ನುವಂತೆ ಪರಸ್ಪರ ಪ್ರೀತಿಯಿಂದ ಜೀವನ ನಡೆಸುತ್ತಿದ್ದರು. ಯಾವುದಕ್ಕೂ ಕೊರತೆಯಿಲ್ಲದ ಜೀವನವಾದ್ದರಿಂದ, ಅನೇಕ ಬಡ ಜನರಿಗೆ ತಮ್ಮಿಂದಾಗುವ ರೀತಿಯಲ್ಲಿ ಸಹಾಯ ಮಾಡುತ್ತಿದ್ದರು. 



"ಅನನ್ಯಾ... ನನ್ನ ಪರ್ಸು ಕಾಣಿಸುತ್ತಿಲ್ಲ..." ಎಂದು ಅಮಿತ್ ಹೇಳುತ್ತಿದ್ದಂತೆ, " ಅಮ್ಮಾ.. ನನ್ನ ಸೋಶಿಯಲ್ ನೋಟ್ಸ್ ಸಿಗುತ್ತಿಲ್ಲ" ಅಂತ ಅಮೂಲ್ಯ ಕೂಗಿದಳು. "ಅಮ್ಮಾ... ಆಟೋ ಬಂದಿದೆ. ನನ್ನ ಟಿಫಿನ್ ಕೊಡು" ಅಂತ ಅಮರ್ಥ್ಯ ಕೂಗಿದ. ಎಲ್ಲರಿಗೂ ಅನನ್ಯ ಇಲ್ಲದಿದ್ದರೆ, ದಿನವೇ ಹೋಗುವುದಿಲ್ಲ ಅನ್ನುವ ರೀತಿಯಲ್ಲಿ ಅವರ ಸಂಸಾರ. ಒಂದೇ ಉಸಿರಿನಲ್ಲಿ ಅನನ್ಯ ಒಂದು ಕೈಯಲ್ಲಿ ಮಕ್ಕಳ ಟಿಫಿನ್ ಬ್ಯಾಗ್ಸ್ ಹಿಡಿದುಕೊಂಡು ಬಂದು, ಮೊದಲು ಅಮೂಲ್ಯಳ ಟೇಬಲ್ ಇಂದ ಸೋಶಿಯಲ್ ನೋಟ್ಸ್ ತೆಗೆದುಕೊಟ್ಟು - "ನೋಡು ಅಮ್ಮು, ನೀಟ್ ಆಗಿ ಟೇಬಲ್ನಲ್ಲಿ ಇಟ್ಟುಕೊಂಡ್ರೆ, ಎಲ್ಲ ಕೈಗೆ ಬೇಕಿದ್ದ ಹಾಗೆ ಸಿಗುತ್ತೆ. ನೀನು ಇನ್ನು ಯಾವಾಗ ಒರ್ಗನೈಸ್ಡ್ ಆಗಿ ಇರೋದನ್ನು ಕಲೀತಿ" ಅಂತ ಹೇಳಿ ಮಕ್ಕಳನ್ನು ಕಳುಹಿಸಿ ಕೊಟ್ಟಳು. ಆಮೇಲೆ ಅಮಿತ್ ನ ಪರ್ಸು ಅವನ ಕೈಗೆ ಕೊಟ್ಟು, ತಾನೂ ಹೊರಟಳು. ಅಮಿತ್ ಅನನ್ಯ ಇಬ್ಬರ ಆಫೀಸ್ ಒಂದೇ ಕಡೆ ಆದ ಕಾರಣ ಒಟ್ಟಿಗ ಮನೆಯಿಂದ ಹೊರಟರು. ಬೇಸ್ಮೆಂಟ್ ರೀಚ್ ಆದ ಹಾಗೆ, ಅನನ್ಯಳಿಗೆ ತಲೆ ಸುತ್ತು ಬಂದಂತಾಗಿ ಕುಸಿದಳು. " ಅನನ್ಯಾ, ಏನಾಯ್ತು? ಎದ್ದೇಳು" ಅಂತ ಹೇಳಿ ಅಮಿತ್ ಅನನ್ಯಾಳಿಗೆ ನೀರು ಚುಮುಕಿಸಿದ. ಎಚ್ಚರವಾದರೂ ಅನನ್ಯಾಳಿಗೆ ನಡೆಯಲು ಕಷ್ಟವಾಯಿತು. ಭೀತಗೊಂಡ ಅಮಿತ್, ಅನನ್ಯಳನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದ. 

ಪ್ರಿಲಿಮಿನರಿ ಟೆಸ್ಟ್ ಎಲ್ಲ ಆದ ಮೇಲೆ ಡಾಕ್ಟರ್ ಅಮಿತ್ ನ ಕರೆದು, "ಅಮಿತ್ ಅವರೇ, ಐ ಆಮ್ ಸಾರೀ ಟು ಸೇ, ಅನನ್ಯ ಅವರಿಗೆ ಗ್ರೇಡ್ 4  ಬ್ರೈನ್ ಟ್ಯೂಮರ್ ಆಗಿದೆ. ಫೈನಲ್ ಸ್ಟೇಜ್ ಬೇರೆ. ಹೆಚ್ಚೆಂದರೆ, 4 ತಿಂಗಳು ಲೈಫ್ ಇದೆ ಅಂತ ಹೇಳಬಹುದು. ಅಮಿತ್ ಗೆ ಜಗತ್ತೇ ಕುಸಿದಂತಾಯಿತು.  ನಡುಗುವ ಧ್ವನಿಯಲ್ಲಿ, "ಡಾಕ್ಟರ್... ನೀವು ಏನೋ ತಪ್ಪು ಹೇಳ್ತಿದ್ದೀರಾ... ನನ್ನ ಹೆಂಡತಿ ಆರೋಗ್ಯವಾಗಿದ್ದಾಳೆ... ನಿನ್ನೆವರೆಗೂ ಚೆನ್ನಾಗೇ ಇದ್ದಳು..." ಎಂದು ತಡವರಿಸುತ್ತಾ ಕೇಳಿದ. ಡಾಕ್ಟರ್ ಮೌನವಾಗಿ ಸ್ಕ್ಯಾನ್ ವರದಿಯನ್ನು ಅವನ ಮುಂದೆ ಇಟ್ಟರು. "ನಮಗೂ ಇದೇ ಆಶ್ಚರ್ಯವಾಗಿದೆ. ಕೆಲವೊಮ್ಮೆ ಬ್ರೈನ್ ಟ್ಯೂಮರ್ ಯಾವುದೇ ಲಕ್ಷಣಗಳಿಲ್ಲದೇ ಬೆಳೆಯುತ್ತದೆ. ಈಗಾಗಲೇ ಅದು ಮೆದುಳಿನ ಬಹುತೇಕ ಭಾಗವನ್ನು ಆವರಿಸಿದೆ." ಅಮಿತ್ ಕುರ್ಚಿಯ ಮೇಲೆಯೇ ಕುಸಿದು ಕುಳಿತ. ಅವನ ಕಣ್ಣುಗಳ ಮುಂದೆ ಅನನ್ಯಳ ಮುಖ ತೇಲತೊಡಗಿತು.

"ಬೆಳಿಗ್ಗೆ ಎದ್ದು ಮಕ್ಕಳಿಗೆ ಊಟ ಮಾಡಿಸುವುದು... ಅವನಿಗೆ ಟೈ ಕಟ್ಟಿಕೊಡುವುದು... ತಾಯಿಯಂತೆ ಎಲ್ಲರನ್ನು ನೋಡಿಕೊಳ್ಳುವುದು... ಇನ್ನೇನು ನಾಲ್ಕು ತಿಂಗಳು ಮಾತ್ರ?" - ಅವನ ಮನಸ್ಸು ಅದನ್ನು ಒಪ್ಪಿಕೊಳ್ಳಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಅನನ್ಯ ಚೇತರಿಸಿಕೊಂಡಳು. ಅಲ್ಲಿಂದ ಮನೆಗೆ ವಾಪಾಸ್ ಹೋಗುವ ಕ್ಷಣಗಳೆಲ್ಲ ಅಮಿತ್ ತಲೆಗೆ ಕಲ್ಲುಬಂಡೆ ಬಿದ್ದಿರುವಂಥ ಅನುಭವ. ಮನೆಗೆ ಹಿಂದಿರುಗುವ ದಾರಿಯೆಲ್ಲಾ ಅಮಿತ್ ಮೌನವಾಗಿದ್ದ. ಅನನ್ಯ ಮಾತ್ರ ಅವನನ್ನು ನೋಡಿ ನಗುತ್ತಿದ್ದಳು. "ಅಮಿತ್, ಏನಾಯ್ತು? ಯಾಕೆ ಇಷ್ಟು ಸೀರಿಯಸ್ ಆಗಿದ್ದೀಯಾ? ಡಾಕ್ಟರ್ ಏನಂದ್ರು?" ಅಮಿತ್ ಕ್ಷಣಕಾಲ ಕಣ್ಣು ಮುಚ್ಚಿದ. ನಂತರ ಸುಳ್ಳು ಹೇಳಿದ. "ವಿಟಮಿನ್ ಡಿಫಿಶಿಯನ್ಸಿ ಅಂತೆ. ಸ್ವಲ್ಪ ರೆಸ್ಟ್ ತೆಗೆದುಕೊಳ್ಳಬೇಕಂತೆ." ಅನನ್ಯ ಮತ್ತೆ ನಕ್ಕಳು. "ಅಷ್ಟೇನಾ? ನಿನ್ನ ಮುಖ ನೋಡಿ ನಾನು ಅಂದುಕೊಂಡೆ ಏನೋ ದೊಡ್ಡ ವಿಷಯ ಇದೆ ಅಂತ." ಆ ನಗುವನ್ನು ನೋಡಿದ ಅಮಿತ್ ನ ಹೃದಯ ಸಾವಿರ ತುಂಡಾಯಿತು.

 ಆ ರಾತ್ರಿ ಅವನಿಗೆ ನಿದ್ರೆ ಬರಲಿಲ್ಲ. ಅನನ್ಯ ಅವನ ಪಕ್ಕದಲ್ಲಿ ಮಗುವಿನಂತೆ ಮಲಗಿದ್ದಳು. ಅವಳ ಕೂದಲನ್ನು ಸವರುತ್ತಾ ಅಮಿತ್ ಕಣ್ಣೀರು ಸುರಿಸಿದ. "ದೇವರೇ... ನನ್ನ ಆಯಸ್ಸು ಬೇಕಾದ್ರೆ ಅವಳಿಗೆ ಕೊಡು... ಆದರೆ ಅವಳನ್ನು ನನ್ನಿಂದ ಕಿತ್ತುಕೊಳ್ಳಬೇಡ..." - ಎಂದು ಮೊದಲ ಬಾರಿಗೆ ಅಮಿತ್ ದೇವರ ಮುಂದೆ ಸೋತವನಂತೆ ಪ್ರಾರ್ಥಿಸುತ್ತಿದ್ದ. 

ಮುಂದಿನ ದಿನಗಳಿಂದ ಅಮಿತ್ ಒಂದು ನಿರ್ಧಾರಕ್ಕೆ ಬಂದಿದ್ದ. "ಅನನ್ಯಳಿಗೆ ಅವಳ ಈ ಖಾಯಿಲೆ ಬಗ್ಗೆ  ಹೇಳಲೇಬಾರದು. ಅವಳ ಉಳಿದ ದಿನಗಳನ್ನು ದುಃಖದಲ್ಲಿ ಕಳೆಯಲು ಬಿಡಬಾರದು. ಅವಳ ಜೀವನದ ಕೊನೆಯ ಕ್ಷಣದವರೆಗೂ ಸಂತೋಷವಾಗಿರಿಸಬೇಕು." ಎಂದು. ಆ ದಿನದಿಂದ ಪ್ರತಿದಿನವನ್ನು ಒಂದು ಹಬ್ಬದಂತೆ ಆಚರಿಸಲು ಆರಂಭಿಸಿದ. "ಮನೆ ಜವಾಬ್ದಾರಿ ನಾನೇ ನೋಡಿಕೊಳ್ಳುತ್ತೇನೆ. ನೀನು ಕೆಲಸ ಬಿಡು. ಒಂದು ನಾಲ್ಕು ತಿಂಗಳು ನಾವು ಫ್ರೀ ಮಾಡಿಕೊಳ್ಳೋಣ" ಅಂದ. ಅವನೂ ಕೆಲಸಕ್ಕೆ ನಾಲ್ಕು ತಿಂಗಳುಗಳ ಕಾಲ ರಜೆ ಮಾಡಿ, ಅನನ್ಯಾ ಹಾಗೂ ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಲು ಆರಂಭಿಸಿದ. ಅನನ್ಯ ಕೂಡ ಅಮಿತ್ ಹೇಳಿದಂತೆ ಕೆಲಸದಿಂದ ರಿಸೈನ್ ಮಾಡಿದಳು. 

ಆ ತಿಂಗಳು ಪೂರ್ತಿ ಅಮಿತ್ - ಕುಟುಂಬ ಸಮೇತ ಪ್ರವಾಸಗಳು...ಹಳೆಯ ನೆನಪುಗಳನ್ನು ಮರುಕಳಿಸುವುದು...ಅವಳ ನೆಚ್ಚಿನ ಹಾಡುಗಳನ್ನು ಕೇಳಿಸುವುದು...ಪ್ರತಿ ಕ್ಷಣವನ್ನು ನೆನಪಾಗುವಂತೆ ಉಳಿಸಿಕೊಳ್ಳುತ್ತಿದ್ದ. ಆದರೆ ವಿಧಿ ಮಾತ್ರ ತನ್ನ ಕೆಲಸವನ್ನು ನಿಧಾನವಾಗಿ ಮಾಡುತ್ತಿತ್ತು... ಅನನ್ಯಳಿಗೆ ಆಗಾಗ ತಲೆನೋವು ಶುರುವಾಯಿತು. ಕೆಲವೊಮ್ಮೆ ಮಾತನಾಡುತ್ತಾ ಪದಗಳನ್ನು ಮರೆತು ಬಿಡುತ್ತಿದ್ದಳು. ಒಮ್ಮೆ ಅಡಿಗೆ ಮಾಡುತ್ತಿದ್ದಾಗ ಗ್ಯಾಸ್ ಆಫ್ ಮಾಡಿರುವುದನ್ನೇ ಮರೆತಳು. ಹಲವಾರು ಬಾರಿ ಮಕ್ಕಳ ಹೆಸರನ್ನು ಮರೆತಳು. ಇದೆಲ್ಲ ನೋಡುತ್ತಾ ಅಮಿತ್ ಹೃದಯ ಪ್ರತಿದಿನ ಸಾಯುತ್ತಿತ್ತು...ಆದರೆ ಮುಖದಲ್ಲಿ ಮಾತ್ರ ನಗುವನ್ನು ಇಟ್ಟುಕೊಂಡಿದ್ದ. 

ಅನನ್ಯಳ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿತ್ತು. ಒಂದು ದಿನ ಅಮಿತ್ ದಿನಸಿ ಸಾಮಾನು ಖರೀದಿಸಲೆಂದು ಹೊರಗೆ ಹೋಗಿದ್ದ. ಶಾಪಿಂಗ್ ನಿಂದ ಮನೆಗೆ ಬಂದಾಗ, ಅವನಿಗೆ ಬಿಸಿ ಬಿಸಿ ಕಾಪಿ ಮಾಡಿ ಕೊಟ್ಟ ಅನನ್ಯ ಸೋಫಾದಲ್ಲಿ ಕುಳಿತು  "ಅಮಿತ್... ನಾನು ನಿಂಗೆ ಒಂದು ವಿಷಯ ಹೇಳಬೇಕಿದೆ." ಅಮಿತ್ ಬೆಚ್ಚಿಬಿದ್ದ. "ಏನಾಯ್ತು ಅನನ್ಯಾ?" ಎಂದು ಕೇಳಿದ. ಅನನ್ಯ "ನನಗೆ ಎಲ್ಲ ಗೊತ್ತು." ಅಂತ ಹೇಳಿದಳು. ಅಮಿತ್ ಮುಖ ಬಿಳಿಚಿತು. "ಏನು ಗೊತ್ತು?" ಅಂತ ಕೇಳಿದ. "ನನಗೆ ಬ್ರೈನ್ ಟ್ಯೂಮರ್ ಇದೆ. ನಾಲ್ಕು ತಿಂಗಳು ಮಾತ್ರ ಅಂತ ಡಾಕ್ಟರ್ ಹೇಳಿದ್ದು ನನಗೆ ಗೊತ್ತು." ಅಂದಳು.  ಅಮಿತ್ ಕೈಯಲ್ಲಿದ್ದ ಕಾಫಿ ಕಪ್ ನೆಲಕ್ಕೆ ಬಿತ್ತು.

" ನಿಂಗೆ.....ಹೇಗೆ???" ಅಂತ ಅಮಿತ್ ತಡವರಿಸಿದ. "ಆ ದಿನ ಆಸ್ಪತ್ರೆಯಿಂದ ಬಂದ ಮೇಲೆ, ನೀನು ತುಂಬ ಅಪ್ಸೆಟ್ ಆಗಿದ್ದು ನೋಡಿ, ನಿನ್ನ ಬ್ಯಾಗ್ ನಲ್ಲಿ ಇದ್ದ ನನ್ನ ಮೆಡಿಕಲ್ ರಿಪೋರ್ಟ್ ನೋಡಿದ್ದೆ." ಅಮಿತ್ ಕಣ್ಣೀರು ಹಾಕುತ್ತಾ ಅವಳ ಕಾಲ ಬಳಿ ಕುಸಿದು ಕುಳಿತ. "ಕ್ಷಮಿಸು ಅನನ್ಯಾ...ನಿಂಗೆ ವಿಷಯ ತಿಳಿಸಲು ನಂಗೆ ಧೈರ್ಯ ಇರ್ಲಿಲ್ಲ. ನಂಗೆ - ನಿನ್ನನ್ನು ಉಳಿಸಿಕೊಳ್ಳಲಾಗಲಿಲ್ಲ..." ಅಂತ ಬಿಕ್ಕಿ ಬಿಕ್ಕಿ ಅತ್ತ. ಅನನ್ಯ ಅವನ ತಲೆಯನ್ನು ಸವರುತ್ತಾ "ನಾನು ನಿನ್ನನ್ನು ಕ್ಷಮಿಸುವಂತದ್ದು ಏನೂ ಇಲ್ಲ. ಆದರೆ ನೀನು ನನಗೆ ಒಂದು ಮಾತು ಕೊಡಬೇಕು." - ಅಂದಳು. "ಏನು?" ಅಂತ ಅಮಿತ್ ಕೇಳಿದ. ಅನನ್ಯ "ನಾನು ಹೋದ ಮೇಲೆ ನೀನು ಮತ್ತೊಮ್ಮೆ ಮದುವೆಯಾಗಬೇಕು." ಅಂದಳು. ಶಾಕ್ ಆದ ಅಮಿತ್  "ಅಸಾಧ್ಯ!" - ಅಂತ ಕೂಗಿದ. ಆಗ ನಗುಮುಖದಲ್ಲೇ ಇದ್ದ ಅನನ್ಯ, "ನಾನು ನಿನ್ನ ಪರ್ಮಿಷನ್ ಕೇಳುತ್ತಿಲ್ಲ ಅಮಿತ್... ನಿನ್ನಿಂದ ಮಾತು ತೆಗೆದುಕೊಳ್ಳುತ್ತಿದ್ದೇನೆ." ಅಂದಳು.

ಕೆಲವೇ ವಾರಗಳಲ್ಲಿ ಅನನ್ಯ ಸಾವನ್ನಪ್ಪಿದಳು. ಮನೆ ಮೌನವಾಗಿತ್ತು. ಮಕ್ಕಳು ತಾಯಿಯನ್ನು ಹುಡುಕುತ್ತಿದ್ದರು. ಅಮಿತ್ ಬದುಕಿದ್ದರೂ ಜೀವಂತ ಶವದಂತಾಗಿದ್ದ. 

ಅನನ್ಯ ಸತ್ತ ಮೂರು ತಿಂಗಳ ನಂತರ, ಒಂದು ದಿನ ಒಬ್ಬ ವಕೀಲರಿಂದ ಕರೆ ಬಂತು. "ಅಮಿತ್ ಸರ್, ಅನನ್ಯ ಮ್ಯಾಡಮ್ ನಿಮಗಾಗಿ ಒಂದು ಲೆಟರ್ ಮತ್ತು ಒಂದು ಫೈಲ್ ಬಿಟ್ಟು ಹೋಗಿದ್ದಾರೆ." ಅಮಿತ್ ಆಶ್ಚರ್ಯದಿಂದ ಲಾಯರ್ ಆಫೀಸ್ ಗೆ ಹೋದ. ಅಲ್ಲಿ ಒಂದು ಸೀಲ್ಡ್ ಕವರ್ ಇತ್ತು. ಅದರ ಮೇಲೆ ಬರೆಯಲಾಗಿತ್ತು: "ನನ್ನ ನಾಲ್ಕನೇ ಮಗುವಿಗೆ..."

ಅಮಿತ್ ಗಾಬರಿಯಾದ. "ನಾಲ್ಕನೇ ಮಗು?" ಅವರಿಗೆ ಇಬ್ಬರು ಮಕ್ಕಳು ಮಾತ್ರ ಇದ್ದರು. ಕವರ್ ತೆರೆದ. ಒಳಗೆ ಒಂದು ಪತ್ರ.

--- 

"ಪ್ರಿಯ ಅಮಿತ್,

ನೀನು ಈ ಪತ್ರ ಓದುತ್ತಿದ್ದರೆ, ನಾನು ನಿನ್ನ ಜೊತೆಗೆ ಇಲ್ಲ ಎನ್ನುವುದು ಖಚಿತ. ಆದರೆ ನಾನು ನಿನ್ನನ್ನು ಬಿಟ್ಟು ಹೋಗಿಲ್ಲ.

ನೀನು ನೆನಪಿದೆಯಾ? ಮೂರು ವರ್ಷಗಳ ಹಿಂದೆ ನಾವು ಒಂದು ವಿಶೇಷ ವೈದ್ಯಕೀಯ ಪ್ರೋಗ್ರಾಂಗೆ ಹೋಗಿದ್ದೆವು. ಅಲ್ಲಿ ನಮ್ಮ ಜೀನ್ಸ್ ಮತ್ತು ಸ್ಟೆಮ್ ಸೆಲ್ಸ್ ಸಂಗ್ರಹಿಸಿದ್ದರು. ನನ್ನ ಕಾಯಿಲೆ ಗೊತ್ತಾದ ದಿನ, ನಾನು ಗುಪ್ತವಾಗಿ ಒಂದು ನಿರ್ಧಾರ ಮಾಡಿದೆ. ನನ್ನ ಅಂಡಾಣುಗಳನ್ನು ಸಂರಕ್ಷಿಸಿ, ನಮ್ಮ ಭವಿಷ್ಯವನ್ನು ಉಳಿಸಿದ್ದೇನೆ. ಈ ಫೈಲ್ ನಲ್ಲಿ ಎಲ್ಲಾ ಕಾನೂನು ಅನುಮತಿಗಳು, ವೈದ್ಯಕೀಯ ದಾಖಲೆಗಳು ಮತ್ತು ನನ್ನ ಒಪ್ಪಿಗೆ ಇದೆ. ನೀನು ಒಪ್ಪಿದರೆ, ನಾನು ಸತ್ತ ನಂತರವೂ ನಮ್ಮ ಮಗುವಿಗೆ ಜನ್ಮ ನೀಡಬಹುದು. ಅದು ನನ್ನ ಕೊನೆಯ ಆಸೆ ಮತ್ತು ಉಡುಗೊರೆ.

ನಾನು ಬದುಕಿರದಿದ್ದರೂ, ನಮ್ಮ ಪ್ರೀತಿ ಬದುಕಿರಲಿ.

– ನಿನ್ನ ಅನನ್ಯ"

---

ಲೆಟರ್ ಓದಿದ ಅಮಿತ್ ಸ್ತಬ್ಧನಾಗಿ ಕುಳಿತ. ಅವನ ಕೈಗಳು ನಡುಗುತ್ತಿದ್ದವು. ಅನನ್ಯಾ ತನ್ನ ಮರಣದ ನಂತರವೂ ಅವನ ಏಕಾಂತದ ಬಗ್ಗೆ, ಅವನ ಏಕಾಂತ ನಿವಾರಿಸುವ ಬಗ್ಗೆ ಯೋಚಿಸಿದ್ದಳು. ಅವನ ಭವಿಷ್ಯವನ್ನು ಯೋಚಿಸಿದ್ದಳು. ಆದರೆ ನಿಜವಾದ ತಿರುವು ಇನ್ನೂ ಬಾಕಿಯಿತ್ತು.

ಅಮಿತ್ ನೆನಪಿಸಿಕೊಂಡ. ಅಮೂಲ್ಯ ಮತ್ತು ಅಮರ್ಥ್ಯ... ಅವನ ಸ್ವಂತ ಮಕ್ಕಳು ಅಲ್ಲ. ಅವರು ಅನನ್ಯಳ ತಂಗಿಯ ಮಕ್ಕಳಾಗಿದ್ದರು. ಬಸುರಿಯಾಗಿದ್ದ ಅನನ್ಯ, ಹೆರಿಗೆಗೆಂದು ತವರು ಮನೆಗೆ ಹೋಗಿದ್ದಳು. ಅದೇ ಸಮಯದಲ್ಲಿ ಅನನ್ಯಳ ತಂಗಿ ಕೂಡ ಹೆರಿಗೆಗೆಂದು ತವರಿಗೆ ಬಂದಿದ್ದಳು. ಒಂದು ದಿನ ಹಿಂದೆ, ಅನನ್ಯಳ ತಂಗಿಗೆ ಹೆರಿಗೆ  ಆಗಿ ಎರಡು ಮುದ್ದಾದ ಅವಳಿ ಜವಳಿ ಮಕ್ಕಳಿಗೆ ತಾಯಿಯಾಗಿದ್ದಳು.  ಆ ದಿನ, ಅನನ್ಯಳ ತಂಗಿ ಮತ್ತು ಭಾವ ಆಸ್ಪತ್ರೆಯಿಂದ ಮನೆಗೆ ಹೋಗಬೇಕಾದರೆ ದೊಡ್ಡದಾದ ರಸ್ತೆ ಅಪಘಾತದಲ್ಲಿ ಮೃತರಾದರು. ಅನನ್ಯ ಅಪಘಾತದ ವಿಷಯ ತಿಳಿದು ದುಃಖದಲ್ಲಿ, ಅವಳಿಗೆ ಹೆರಿಗೆ ನೋವು ಬಂತು. ಬೇಗವಾದ ಕಾರಣ, ಅವಳ ಮಗು ಹುಟ್ಟಿದಾಗಲೇ ಸತ್ತು ಹೋಗಿತ್ತು. ತನ್ನ ತಂಗಿ ಮಕ್ಕಳು ಅನಾಥರಾಗಬಾರದೆಂದು, ಅನನ್ಯಳೇ ಆ ಮಕ್ಕಳನ್ನು ತನ್ನ ಮಕ್ಕಳೆಂದು ಭಾವಿಸಿದಳು. ಮಕ್ಕಳ ಮನಸ್ಸಿಗೆ ನೋವಾಗಬಾರದೆಂದು ಅನನ್ಯ ಸತ್ಯವನ್ನು ಮಕ್ಕಳಿಗೆ ತಿಳಿಸಿರಲಿಲ್ಲ. ಹಾಗೆ ತಮ್ಮ ಸ್ವಂತ ಮಗುವಿಗಾಗಿ ಪ್ರಯತ್ನಿಸಲಿಲ್ಲ.  ಹನ್ನೆರಡು ವರ್ಷಗಳಿಂದ ಅವಳು ಆ ಮಕ್ಕಳನ್ನೇ ತನ್ನ ಸ್ವಂತ ಮಕ್ಕಳಂತೆ ಬೆಳೆಸಿದ್ದಳು. ಅಮಿತ್ ಗಾಗಿ ಮಾತ್ರವಲ್ಲ...ಆ ಮಕ್ಕಳಿಗಾಗಿಯೂ ಅವಳು ತನ್ನ ಜೀವನವನ್ನು ಅರ್ಪಿಸಿದ್ದಳು.

ಆ ರಾತ್ರಿ ಅಮಿತ್ ತನ್ನ ಕೋಣೆಯಲ್ಲಿ ಒಬ್ಬನೇ ಕುಳಿತಿದ್ದ. ಅನನ್ಯ ಬರೆದ ಪತ್ರವನ್ನು ಎದೆಯ ಮೇಲೆ ಇಟ್ಟುಕೊಂಡೇ ಕಿಟಕಿಯಾಚೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಿದ್ದ. ಅಮೂಲ್ಯ ಮತ್ತು ಅಮರ್ಥ್ಯ ಪಕ್ಕದ ಕೋಣೆಯಲ್ಲಿ ಮಲಗಿದ್ದರು. ಅವರನ್ನು ನೋಡುತ್ತಿದ್ದಂತೆ ಅವನಿಗೆ ಅನನ್ಯ ನೆನಪಾಗುತ್ತಿದ್ದಳು. ತನ್ನ ಗರ್ಭದಲ್ಲಿ ಹುಟ್ಟದ ಮಕ್ಕಳನ್ನೂ ಸಹ ತನ್ನ ಹೃದಯದಲ್ಲಿ ಹೊತ್ತು ಬೆಳೆಸಿದ ತಾಯಿ...ತನ್ನ ಮರಣದ ನಂತರವೂ ಗಂಡನ ಏಕಾಂತದ ಬಗ್ಗೆ ಯೋಚಿಸಿದ ಹೆಂಡತಿ...ತನ್ನ ದುಃಖವನ್ನು ಮರೆತು ಎಲ್ಲರ ಬದುಕನ್ನು ಬೆಳಗಿಸಿದ ಹೆಣ್ಣು... "ಅನನ್ಯಾ... ನೀನು ನನಗೆ ಸಿಕ್ಕ ಹೆಂಡತಿ ಅಲ್ಲ... ದೇವರು ಕೊಟ್ಟ ಆಶೀರ್ವಾದ..." ಎಂದು ಅಮಿತ್ ಕಣ್ಣೀರಿಟ್ಟ.

ಅಷ್ಟರಲ್ಲಿ ಮೇಜಿನ ಮೇಲಿದ್ದ ಅನನ್ಯಳ ಫೋಟೋ ಪಕ್ಕದ ದೀಪದ ಜ್ಯೋತಿ ಗಾಳಿಯಿಲ್ಲದಿದ್ದರೂ ಮೆಲ್ಲನೆ ಅಲುಗಾಡಿತು. ಅಮಿತ್ ಎದ್ದು ಫೋಟೋ ಹತ್ತಿರ ಹೋದ. ಫೋಟೋದಲ್ಲಿದ್ದ ಅನನ್ಯ ಎಂದಿನಂತೆ ನಗುತ್ತಿದ್ದಳು. ಆ ನಗುವಿನಲ್ಲೇ ಅವನಿಗೆ ಒಂದು ಉತ್ತರ ಸಿಕ್ಕಿತು. "ಪ್ರೀತಿ ಎಂದರೆ ಜೊತೆಯಲ್ಲಿ ಬದುಕುವುದು ಮಾತ್ರವಲ್ಲ... ಯಾರಾದರೂ ಇಲ್ಲದ ನಂತರವೂ ಅವರ ಒಳ್ಳೆಯತನದ ನೆರಳಿನಲ್ಲಿ ಬದುಕುವುದು."

ಅವನು ನಿಧಾನವಾಗಿ ಎದ್ದು ಮಕ್ಕಳ ಕೋಣೆಗೆ ಹೋದ. ಮಲಗಿದ್ದ ಅಮೂಲ್ಯ ಮತ್ತು ಅಮರ್ಥ್ಯರನ್ನು ತಬ್ಬಿಕೊಂಡ.  "ನಿಮ್ಮ ಅಮ್ಮ ಹೋಗಿಲ್ಲ ಮಕ್ಕಳೇ.. ಅವಳು ನಿಮ್ಮ ನಗುವಿನಲ್ಲಿ ಇದ್ದಾಳೆ...ನಿಮ್ಮ ಕನಸುಗಳಲ್ಲಿ ಇದ್ದಾಳೆ... ನಿಮ್ಮ ಒಳ್ಳೆಯತನದಲ್ಲಿ ಇದ್ದಾಳೆ...ನಿಮ್ಮ ಪ್ರತಿಯೊಂದು ಉಸಿರಿನಲ್ಲೂ ಇದ್ದಾಳೆ...". ಅವನ ಕಣ್ಣೀರಿನ ಹನಿ ಮಕ್ಕಳ ಹಣೆಯ ಮೇಲೆ ಬಿತ್ತು. 

ಹೊರಗೆ ಮಳೆ ನಿಂತಿತ್ತು. ಮೋಡಗಳ ಹಿಂದೆ ಅಡಗಿದ್ದ ಚಂದ್ರ ನಿಧಾನವಾಗಿ ಹೊರಬಂದ.ಅನನ್ಯ ಹೋಗಿರಲಿಲ್ಲ...ಅವಳು ಹೆಂಡತಿಯಾಗಿ ಬಂದಿದ್ದಳು...ತಾಯಿಯಾಗಿ ಉಳಿದಿದ್ದಳು...ಪ್ರೀತಿಯಾಗಿ ಶಾಶ್ವತವಾಗಿದ್ದಳು...

ಅಮಿತ್ ಕಣ್ಣು ಮುಚ್ಚಿ ನಿಧಾನವಾಗಿ ನುಡಿದ: "ಅನನ್ಯಾ...ನಿನ್ನ ಜೀವನ ಕೇವಲ ಹನ್ನೆರಡು ವರ್ಷಗಳ ದಾಂಪತ್ಯವಲ್ಲ...ಒಂದು ಜೀವಮಾನಕ್ಕೆ ಸಾಕಾಗುವಷ್ಟು ಪ್ರೀತಿಯ ಪಾಠ..."

ಆ ಕ್ಷಣ ಗಾಳಿಯಲ್ಲಿ ಮಲ್ಲಿಗೆಯ ಸುವಾಸನೆ ಹರಡಿತು. ಅದು ಬಹುಶಃ ಅನನ್ಯಳ ಕೊನೆಯ ಸ್ಪರ್ಶವಾಗಿರಬಹುದು...ಯಾಕೆಂದರೆ ಕೆಲವು ಪ್ರೇಮಗಳು ಕೈ ಹಿಡಿದು ನಡೆಯುವುದಕ್ಕಾಗಿ ಹುಟ್ಟುವುದಿಲ್ಲ...ಒಬ್ಬರ ಬದುಕನ್ನು ಬೆಳಗಿಸಿ, ಅವರ ಆತ್ಮದೊಳಗೆ ಶಾಶ್ವತವಾಗಿ ನೆಲೆಸುವುದಕ್ಕಾಗಿ ಹುಟ್ಟುತ್ತವೆ.

ಪ್ರೀತಿಗೆ ಅಂತ್ಯವಿಲ್ಲ. ದೇಹಗಳು ದೂರವಾಗಬಹುದು...ಸಮಯ ಕಳೆಯಬಹುದು...ಜನ್ಮಗಳು ಬದಲಾಗಬಹುದು...ಆದರೆ ನಿಜವಾದ ಪ್ರೀತಿ —ಒಮ್ಮೆ ಹೃದಯದಲ್ಲಿ ನೆಲೆಸಿದರೆ, ಅದು ನೆನಪಾಗಿ ಅಲ್ಲ...ಉಸಿರಾಗಿ ಬದುಕುತ್ತದೆ.

❤️

✍🏻 Deepalaxmi Bhat
Mangaluru