ಶುಕ್ರವಾರ, ಮೇ 1, 2026

ನಾಗಶಾಪದ ಮುಕ್ತಿ

✍🏻ದೀಪಲಕ್ಷ್ಮಿ ಭಟ್, ಮಂಗಳೂರು 

ಬೇಸಿಗೆಯ ಬಿಸಿಲು ತೀವ್ರವಾಗಿದ್ದರೂ, ಹಳ್ಳಿಯ ಸೊಗಸು ಎಂದಿಗೂ ಕಡಿಮೆಯಾಗುವುದಿಲ್ಲ. ಹಸಿರು ಹೊಲಗಳು, ಮಳೆಯ ವಾಸನೆ ಉಳಿಸಿಕೊಂಡ ಮಣ್ಣು,  ಮಂಗಳವಾದ ಮುಸ್ಸಂಜೆಯ ಗಾಳಿ—ಇವುಗಳ ನಡುವೆ ತನ್ನ ರಜೆಯನ್ನು ಕಳೆಯಲು ವಿಕ್ರಮ ತನ್ನ ಅತ್ತೆ ವಿಮಲಾಳ ಮನೆಗೆ ಬಂದಿದ್ದ. 

ವಿಕ್ರಮ ಇಂಜಿನಿಯರಿಂಗ್ ಮೂರನೇ ವರ್ಷದ ವಿದ್ಯಾರ್ಥಿ. ಚತುರ, ಧೈರ್ಯಶಾಲಿ ಮತ್ತು ಮನಸಾರೆ ಪ್ರೀತಿಸುವ ಸ್ವಭಾವದವನು. ಅವನಿಗೆ ತನ್ನ ಅತ್ತೆ ಮಗಳು ವಿನುತಾಳ ಮೇಲೆ ವಿಶೇಷವಾದ ಮಮತೆ. ಆ ಮಮತೆ, ಪ್ರೀತಿಯಾಗಿ ಅರಳಿತ್ತು. ವಿನುತಾಳಿಗೂ ಅವನೆಂದರೆ ಪ್ರಾಣವೇ.

ವಿನುತಾ, ಹತ್ತನೇ ತರಗತಿಯ ಪರೀಕ್ಷೆ ಮುಗಿಸಿ, ರಜೆಯಲ್ಲಿದ್ದಳು. ಅವಳ ಸುಂದರವಾದ ಮಂದಹಾಸ, ಅವಳ ಕಣ್ಣುಗಳಲ್ಲಿನ ಹೊಳಪು — ಎಲ್ಲವೂ ವಿಕ್ರಮನ ಮನಸ್ಸನ್ನು ಸೆಳೆದಿದ್ದವು.

ವಿಮಲಾ, ವಿನೋದ ದಂಪತಿಗಳಿಗೂ, ವಿಕ್ರಮನೆಂದರೆ ತುಂಬಾ ಪ್ರೀತಿ. ವಿಕ್ರಮನ ಹೆತ್ತವರಾದ ವಿಜಯ ಹಾಗೂ ಅನುರಾಧ ಕೂಡ ಈ ಸಂಬಂಧಕ್ಕೆ ಮೊದಲೇ ಸೈ ಅಂದಿದ್ದರು. ಇವರಿಬ್ಬರ ಸಂಬಂಧವನ್ನು ಎರಡೂ ಕುಟುಂಬದವರು ಕೂಡ ಮನಸಾರೆ ಒಪ್ಪಿಕೊಂಡಿದ್ದರು. ಹೀಗಾಗಿ ಅವರು ಒಟ್ಟಿಗೆ ಹೊಲಗಳಲ್ಲಿ ತಿರುಗಾಡುವುದು, ಸಂಜೆಯ ಹೊತ್ತಿನಲ್ಲಿ ಮಾತುಕತೆ ನಡೆಸುವುದು ಎಲ್ಲವೂ ಸಾಮಾನ್ಯವಾಗಿತ್ತು.  "ವಿಕ್ಕಿ... ನನ್ ಜೊತೆ ಟ್ರೀ ಹೌಸ್ ಗೆ ಬಾ.." ಅಂತ ಹೇಳಿ, ವಿನುತಾ ವಿಕ್ರಮನ  ಜೊತೆ, ಚಿಕ್ಕಂದಿನಿಂದಲೂ, ಅವಳಿಗೆ ಆಟವಾಡಲೆಂದೇ ವಿನೋದ ಕೈಯಾರೆ ತಯಾರಿಸಿದ್ದ ಮರದ ಮೇಲಿನ ಟ್ರೀ ಹೌಸ್  ಒಳಗೆ ಕೂತು ಆಟ ಆಡುತ್ತಿದ್ದರು. ಹಾಗೆ, ಆಟವಾಡಿ ಸುಸ್ತಾದರೆ, ಅದರಲ್ಲೇ ಮಲಗುತ್ತಿದ್ದರು.  ದೊಡ್ಡವರಾದ ಮೇಲೂ ಈ ರೀತಿ ಟ್ರೀ ಹೌಸ್ ನಲ್ಲಿ ಕೂತು ಹರಟೆ ಹೊಡೆಯುತ್ತಾ ಕಾಲ ಕಳೆಯೋದು ಅವರಿಬ್ಬರಿಗೂ ಇಷ್ಟವಾದ ವಿಷಯವಾಗಿತ್ತು. 

*** 

 

ಅಂದು ಪಂಚಮಿಯ ದಿನ. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮುಗಿಸಿದ ವಿನುತಾ, ಮನೆಯೆದುರು ರಂಗೋಲಿ ಬಿಡಿಸಿ, ದೇವರ ಪೂಜೆಗೆಂದು ಹೂ ಕೊಯ್ದು,  ಅಮ್ಮ ಮಾಡಿ ಕೊಟ್ಟ ಕಾಫಿ ಕುಡಿಯುತ್ತಿದ್ದಳು. ಆಗ ತಾನೇ ಎಡ್ಡಾ ವಿಕ್ರಮ, ವಿನುತಾಳನ್ನು ಎಡ್ಡಾ ಕೂಡಲೇ ನೋಡಿ ಮನದಲ್ಲೇ ಸಂತೋಷಗೊಂಡು, ತನ್ನ ಬೆಳಗಿನ ದಿನಚರಿ ಮುಗಿಸಿದ. ತಿಂಡಿ ತಿಂದಾದಮೇಲೆ. ವಿನುತಾ ವಿಕ್ರಮ್  ಇಬ್ಬರೂ ಟ್ರೀ ಹೌಸ್ ಕಡೆ ಹೋದರು. ಹೊಲದಲ್ಲೆಲ್ಲಾ ಸುತ್ತಾಡಿ, ತಮ್ಮ ಶಾಲೆ ಕಾಲೇಜಿನ ಕಥೆಗಳನ್ನು ಮಾತನಾಡುತ್ತಾ, ಸುಸ್ತಾದ ಹಾಗೆ ಟ್ರೀ ಹೌಸ್ ಒಳಗೆ ಹೋಗಿ ತಾವು ತಂದಿದ್ದ ಜ್ಯೂಸು ಕುಡಿದು ಹರಟೆಗೆ ಕೂತರು.  ವಿಕ್ರಮ ಕಾಲೇಜಿನಲ್ಲಿ ಪ್ರೀತಿಸುತ್ತಿದ್ದ ಒಂದೆರಡು ಜೋಡಿಗಳ ಕಥೆ ಹೇಳಿದರೆ, ವಿನುತಾ ಶಾಲೆಯಲ್ಲಿ ಪಾಠ ಕಲಿಸುತ್ತಿದ್ದ ಮೇಷ್ಟ್ರುಗಳ ಮೇಲೆ ಕೆಲವೊಂದು ಹುಡುಗಿಯರಿಗಿದ್ದ ಕ್ರಶ್ ಬಗ್ಗೆ ಹೇಳುತ್ತಿದ್ದಳು. ಮಾತು ಮಾತಿಗೂ ಅವಳ ನಗು ವಿಕ್ರಮನ ಮನಸ್ಸಿಗೆ ತಂಪೆರೆಯುತ್ತಿತ್ತು. ಹಾಗೆ ಅವಳನ್ನು ನೋಡಿ ಅವಳನ್ನು ಬರಸೆಳೆದು ಅವಳ ಹಣೆಗೆ ಹಾಗೂ ಕೆನ್ನೆಗೆ ಒಂದು ಸುಂದರವಾದ ಮುತ್ತಿಟ್ಟು ಮನೆಗೆ ಹೋಗುತ್ತೇನೆಂದು ಹೊರಟ. ಅಚಾನಕ್ಕಾಗಿ ಸಿಕ್ಕ ಮುತ್ತಿನಿಂದ ಪುಳಕಿತಳಾದ ವಿನುತಾ ಕೆನ್ನೆಯೆಲ್ಲ ನಾಚಿಕೆಯಿಂದ ಕೆಂಪಗಾಗಿತ್ತು.  ಆ ಮುತ್ತಿನ ಗುಂಗಿನಲ್ಲೇ ಕೆಲಕಾಲ ಮುಗುಳ್ನಗೆಯಲ್ಲಿ ಕಳೆದಳು. ಆಮೇಲೆ ನಿಧಾನಕ್ಕೆ ಟ್ರೀ ಹೌಸ್ ನಿಂದ ಕೆಳಗಿಳಿದು ಮನೆಗೆ ಹೋದಳು.

ಆ ರಾತ್ರಿ - ಪಂಚಮಿಯ ರಾತ್ರಿ. ವಿಚಿತ್ರವಾದ ನಿಶಬ್ದದಿಂದ ಕೂಡಿತ್ತು.  ಎಲ್ಲರೂ ರಾತ್ರಿ ಊಟ ಮುಗಿಸಿ ಮಲಗಲು ತಯಾರಾಗುತ್ತಿದ್ದರು. "ವಿಕ್ರಮ, ನಾಳೆ ಷಷ್ಠಿ ಆದ ಕಾರಣ, ನಮ್ಮೂರಿನ ದೇವಸ್ಥಾನಕ್ಕೆ ಹೋಗಿ ನಾಗನ ಕಲ್ಲಿಗೆ ಹಾಲೆರೆಯಲು ಹೋಗಲಿಕ್ಕಿದೆ. ಬೆಳಿಗ್ಗೆ ಬೇಗನೆ ತಯಾರಾಗು." ಅಂತ ವಿಮಲಾ ನೆನಪಿಸಿದಳು. "ಸರಿ ಅತ್ತೆ. ಬೆಳಿಗ್ಗೆ ಬೇಗನೆ ತಯಾರಾಗ್ತೇನೆ" ಅಂದು ವಿಕ್ರಮ ತನ್ನ ಕೋಣೆಗೆ ಹೋದ. ಎಲ್ಲ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಟ್ಟು ವಿಮಲಾ ಕೂಡ ತನ್ನ ಕೊನೆಗೆ ಹೋಗಿ ಮಲಗಿದಳು. ಸುಮಾರು ಅರ್ಧರಾತ್ರಿಯ ಸಮಯ. ವಿಕ್ರಮ ಗಾಢವಾದ ನಿದ್ರೆಯಲ್ಲಿದ್ದ. ಏಕಾಏಕಿಯಾಗಿ ಒಂದು ವಿಚಿತ್ರವಾದ ಸಡ್ಡು ಕೇಳಿಸಿ ವಿಕ್ರಮ ಎಚ್ಚರಗೊಂಡ. 

ಆ ಸಡ್ಡು ವಿನುತಾಳ ಕೊನೆ ಕಡೆಯಿಂದ ಕೇಳಿಸಿದಂತೆ ಭಾಸವಾಯಿತು. ಭೀತಗೊಂಡ ವಿಕ್ರಮ ಎದೆ ತಡಕಾಡುತ್ತಾ ತನ್ನ ಕೋಣೆಯಿಂದ ಹೊರಬಂದ. ಆ ಸಮಯಕ್ಕೆ ವಿನುತಾಳ ಕೋಣೆಯ ಕಡೆಯಿಂದ ಹೊರಬಂದ ದೊಡ್ಡ ನಗರಹಾವೊಂದು ಹೊರಗೆ ಹೋಗುತ್ತಿತ್ತು. ಮತ್ತಷ್ಟು ಭಯಗೊಂಡ ವಿಕ್ರಮ ವಿನುತಾಳ ಕೋಣೆ  ಕಡೆ ಓಡಿದ. ಮೃದುವಾದ ದನಿಯಲ್ಲಿ "ವಿನುತಾ" ಎಂದು ಕರೆದ. ಮೆಲ್ಲನೆ ಅವಳ ಕೋಣೆಯ  ಬಾಗಿಲು ದೂಡಿ ನೋಡಿದ. ಅವಳು ಅಲ್ಲಿ ಕಾಣಿಸಲಿಲ್ಲ.  ಭಯದಿಂದ ಹೊರಗೆ ಓಡಿ  ಸುತ್ತಲೂ ಹುಡುಕಾಡಿದ. ಆದರೆ ಅವಳ ಸುಳಿವು ಸಿಗಲಿಲ್ಲ. ಅಷ್ಟರಲ್ಲಿ ಅದೇ ನಾಗರಹಾವು ಅವನತ್ತ ಹೆಡೆಯೆತ್ತಿ ತಿರುಗಿ ನೋಡಿತು. ವಿಕ್ರಮನಿಗೆ ಅದೊಂದು ಸಂದೇಶದಂತೆ ಭಾಸವಾಯಿತು.  ನನ್ನ ಹಿಂದೆ ಬಾ ಅಂತ ಸನ್ನೆ ಮಾಡಿದಂತೆ ವಿಕ್ರಮನಿಗೆ  ಅನಿಸಿತು. ಹಾವು ನಿಧಾನವಾಗಿ ಮುಂದೆ ಸರಿಯಿತು. ವಿಕ್ರಮನಿಗೆ ಏನೋ ಆಕರ್ಷಣೆಯಾದಂತಾಗಿ, ಆ ಹಾವನ್ನು ಹಿಂಬಾಲಿಸಿದ. 

***

ಆ ಹಾವು ಮನೆಯ ಪಕ್ಕದಲ್ಲಿದ್ದ  ನದಿ ಮಾರ್ಗವಾಗಿ  ಚಲಿಸಿ, ಒಂದು ಬೆಟ್ಟದ ಬುಡದಲ್ಲಿದ್ದ ಗುಹೆಯೊಳಗೆ ಪ್ರವೇಶಿಸಿತು. ಹಾವನ್ನು ಹಿಂಬಾಲಿಸಿದ ವಿಕ್ರಮನೂ ಆ ಗುಹೆ ಪ್ರವೇಶಿಸಿದ. ತಂಪಾಗಿದ್ದ ಆ ಗುಹೆಯೊಳಗೆ ಸ್ವಲ್ಪ ಮುಂದೆ ಸಾಗಿದಾಗ, ಒಂದು ದೊಡ್ಡ ಹಳೆಯ ಪೆಟ್ಟಿಗೆ ಕಂಡಿತು. ಅದು ಸಾಮಾನ್ಯವಾದ  ಪೆಟ್ಟಿಗೆಯಾಗಿರಲಿಲ್ಲ. ರಾಜಮಹಾರಾಜರ ಕಾಲದ ಪೆಟ್ಟಿಗೆಯಂತೆ ಭಾಸವಾಯಿತು. ವಿಕ್ರಮನಿಗೆ ಕುತೂಹಲವಿದ್ದರೂ, ಮನೆಯಲ್ಲಿ ಹೇಳದೆ ಅದನ್ನು ತೆರೆಯಲು ಯತ್ನಿಸಲಿಲ್ಲ. ಮನೆಯಲ್ಲಿ ಮಾತನಾಡಿ ಆಮೇಲೆ ಇದರ ಬಗ್ಗೆ ನೋಡೋಣ ಅಂದುಕೊಂಡು, ಮನೆಗೆ ಹಿಂದಿರುಗಿದ. ಯಾರನ್ನೂ ಗಾಬರಿಗೊಳಿಸುವುದು ಬೇಡ ಅಂದುಕೊಂಡು, ತನ್ನ ಕೊನೆಗೆ ಬಂದು ಮಲಗಿದ. 

ಬೆಳಿಗ್ಗೆ ಎದ್ದ ಕೂಡಲೇ ವಿನುತಾಳ ಕೊನೆ ಕಡೆ ನೋಡಿದ ವಿಕ್ರಮನಿಗೆ, ವಿನುತಾ ಅಲ್ಲಿರುವುದನ್ನು ಕಂಡು ನಿರಾಳವಾಯಿತು. ಆದರೆ, ಅವಳ ಮೈಯಲ್ಲೆಲ್ಲಾ ಹಳದಿ ಬಣ್ಣದ ಗುಳ್ಳೆಗಳಿದ್ದವು. ಮೆಲ್ಲನೆ ವಿನುತಾಳ ಪಕ್ಕ ಹೋಗಿ, "ನಿನ್ನೆ ರಾತ್ರಿ ನಿನಗೇನಾಗಿತ್ತು?" ಅಂತ ಪ್ರಶ್ನಿಸಿದ. "ಗೊತ್ತಿಲ್ಲ. ನಂಗೆ ತುಂಬಾನೇ ಸುಸ್ತಾಗುತ್ತಿದೆ" ಅಂತ ನಿಧಾನವಾಗಿ ಹೇಳಿ ವಿನುತಾ  ನಿದ್ದೆಗೆ ಜಾರಿದಳು.  ವಿಕ್ರಮನ ಅನುಮಾನ  ಗಟ್ಟಿಯಾಗತೊಡಗಿತು. ಮನೆಯಲ್ಲಿ ಈ ವಿಚಾರವಾಗಿ ಮಾತನಾಡಲೇಬೇಕು ಅಂದುಕೊಂಡು, ಸರಿಯಾದ ಸಮಯಕ್ಕಾಗಿ ಲೆಕ್ಕ ಹಾಕಿದ.

ಆ ದಿನ ಸಾಯಂಕಾಲದ ಹೊತ್ತಿಗೆ, ವಿಮಲಾ ಹಾಗೂ ವಿನೋದ ಇಬ್ಬರೂ ಚಹಾ ಕುಡಿಯುತ್ತಿದ್ದರು. ಅದೇ ಸರಿಯಾದ ಸಮಯ ಎಂದು ವಿಕ್ರಮ ನಿಧಾನವಾಗಿ ವಿಷಯವನ್ನು ಪ್ರಸ್ತಾಪಿಸಿ, ತನ್ನ ಅನುಮಾನವನ್ನು ಸ್ಪಷ್ಟೀಕರಿಸಿದ ವಿಕ್ರಮ. ವಿಮಲಾ ಕಣ್ಣೀರಿಡುತ್ತಾ "ವಿಕ್ರಮ, ನಮ್ಮ ಮನೆತನಕ್ಕೆ ಒಂದು ದೊಡ್ಡ ಹಳೆಕಾಲದ ಶಾಪ ಇದೆ. ಹಳೆಯ ಕಾಲದಲ್ಲಿ, ಇಲ್ಲಿ ಒಂದು ಮಹಾಶಿವನ ದೇವಸ್ಥಾನ ಇತ್ತು. ಸುಮಾರು 5000 ವರ್ಷಗಳಷ್ಟು ಹಳೆಯದು. ಅದನ್ನು ಕಾಪಾಡುತ್ತಿದ್ದ ನಾಗದೇವತೆಯನ್ನು ನಮ್ಮ ಪೂರ್ವಜರು ಅವಮಾನಿಸಿದ್ದರು… ಆಗಿನಿಂದ, ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಈ ಶಾಪ. ಬೇಸರದ ವಿಷಯವೆಂದರೆ, ವಿನುತಾಳೇ ಆ ಶಾಪದ ಬಲಿಯಾಗಿದ್ದಳು. ಪ್ರತಿ ಪಂಚಮಿಯ ರಾತ್ರಿ, ಅವಳು ನಾಗರೂಪಕ್ಕೆ ಬದಲಾಗುತ್ತಾಳೆ… ನಾವು ಏನೂ ಮಾಡಲು ಸಾಧ್ಯವಾಗುತ್ತಿಲ್ಲ." ಅಂತ ಗದ್ಗದಿತ ಕಂಠದಲ್ಲಿ ಹೇಳಿಕೊಂಡಳು. "ಇದಕ್ಕೇನೂ ಪರಿಹಾರವಿಲ್ಲವೇ?" ಎಂದು ವಿಕ್ರಮ ಪ್ರಶ್ನಿಸಿದ. "ತುಂಬ ಪ್ರಯತ್ನ ಪಟ್ಟೆವು ವಿಕ್ರಮ. ಆದರೆ ಪರಿಹಾರ ಏನು ಎಂಬುದು ನಮಗೆ ತಿಳಿಯಲಿಲ್ಲ" ಅಂತ ವಿನೋದ ಹೇಳಿದನು.

"ಈ ಶಾಪವನ್ನು ಮುರಿಯಲೇಬೇಕು." ಎಂದು ತೀರ್ಮಾನಿಸಿಕೊಂಡು ವಿಕ್ರಮ ಮೊತ್ತ ಮೊದಲಿಗೆ ಆ ಹಳ್ಳಿಯ ಜನರೆಲ್ಲರನ್ನೂ ಒಟ್ಟು ಸೇರಿಸಿದ. ಗುಹೆಯ ವಿಚಾರ, ಗುಹೆಯಲ್ಲಿದ್ದ ಪೆಟ್ಟಿಗೆಯ ವಿಚಾರ ತಿಳಿಸಿ, ಊರ ಹಿರಿಯ ಸಮಸ್ತರ ಅನುಮತಿಯಂತೆ, ಆ ಪೆಟ್ಟಿಗೆಯನ್ನು ತೆರೆದ. ಅದರೊಳಗೆ ಪವಿತ್ರವಾದ ಶಿವಲಿಂಗ, ನಾಗನ ಕಲ್ಲುಗಳು ಹಾಗೂ ದೇವಸ್ಥಾನದ ಒಡವೆ ಶಾಸನಗಳು ಸಿಕ್ಕವು. ಅದು ಪುರಾತನ ದೇವಾಲಯದ ಮೂಲ ವಸ್ತುಗಳಾಗಿದ್ದವು. 

ಪ್ರಶ್ನೆ ಇಟ್ಟಾಗ, ಮುಂದಿನ ಪಂಚಮಿಯೊಳಗೆ,ದೇವಸ್ಥಾನದ ಪುನರ್ ನಿರ್ಮಾಣ ಆಗಬೇಕು ಎಂದು ಉತ್ತರ ದೊರಕಿತು.  ಹಳ್ಳಿಯ ಜನರೆಲ್ಲರೂ ಒಟ್ಟು ಸೇರಿ, ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡರು. ಪ್ರತಿ ದಿನ ಹೋಮ, ಪೂಜೆ, ನಾಗಪೂಜೆ ಇತ್ಯಾದಿಗಳು ನಡೆದು, ದೇವಸ್ಥಾನ ನಿರ್ಮಾಣವಾಗಿ, ಅದ್ಧೂರಿಯಾಗಿ ಎಲ್ಲ ಕಾರ್ಯಗಳು ಪಂಚಮಿ ಆಗುತ್ತಲೇ ನಡೆಯಿತು. 

***

ಅಂದು ಮತ್ತೆ ಪಂಚಮಿ. ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಮಂಗಳವಾದ ವಾತಾವರಣ. ಬೆಳ್ಳಗಿನ ಬೆಳಕಿನಲ್ಲಿ ಶಿವಲಿಂಗ ಹೊಳೆಯುತ್ತಿತ್ತು. ಹೋಮದ ಧೂಪದ ವಾಸನೆ ಗಾಳಿಯಲ್ಲಿ ಹರಡಿಕೊಂಡಿತ್ತು. ಹಳ್ಳಿಯ ಪ್ರತಿಯೊಬ್ಬರ ಕಣ್ಣುಗಳಲ್ಲಿ ಒಂದೇ ಆಶೆ— “ಇಂದು ಈ ಶಾಪ ಕೊನೆಯಾಗಬೇಕು."
ಬೆಳಗ್ಗಿನ ಸಮಯದಲ್ಲಿ, ದೇವರ ಪೂಜಾಕಾರ್ಯಗಳು ನೆರವೇರಿತು. ವಿಕ್ರಮ ಹಾಗೂ ವಿನುತಾ ಇಬ್ಬರೂ ಒಟ್ಟಿಗೆ ದೇವರಲ್ಲಿ ಪ್ರಾರ್ಥಿಸಿದರು. ವಿನುತಾಳ ಕಣ್ಣುಗಳಲ್ಲಿ ಭಯವೂ ಇತ್ತು… ಆದರೆ ವಿಕ್ರಮನ ಕೈ ಹಿಡಿದಿದ್ದ ವಿಶ್ವಾಸವೂ ಇತ್ತು. “ನಿನ್ನ ಜೊತೆಗೆ ನಾನು ಇದ್ದೇನೆ…” ಎಂದು ಅವನು ನಿಧಾನವಾಗಿ ಹೇಳಿದ.

ಆ ರಾತ್ರಿ, ವಿನುತಾ ಹಾಗೂ ಮನೆಯವರೆಲ್ಲ ದೇವಸ್ಥಾನದಲ್ಲೇ ಇದ್ದರು. ಹನ್ನೆರಡು ಗಂಟೆ ಆಗುತ್ತಿದ್ದಂತೆ, ಗಾಳಿಯ ಸದ್ದು ಬದಲಾಯಿತು. ದೀಪಗಳ ಜ್ವಾಲೆ ತೂಗತೊಡಗಿತು. ವಿನುತಾಳ ದೇಹ ನಿಧಾನವಾಗಿ ಕಂಪಿಸತೊಡಗಿತು…ಅವಳ ಕಣ್ಣುಗಳು ಬದಲಾಗತೊಡಗಿದವು…ವಿನುತಾ ಮತ್ತೆ ನಾಗರೂಪಕ್ಕೆ ಬದಲಾಗುತ್ತಿದ್ದಾಗ, ದೇವಸ್ಥಾನದ ಗಂಟೆ ತಾನಾಗಿಯೇ "ಢಣ್ ಢಣ್ " ಎಂದು ಮೊಳಗಿತು. ತೂಗುತ್ತಿದ್ದ ದೀಪಗಳ ಆ ಕಿರಣದಲ್ಲಿ—ಒಂದು ಮಹಾ ನಾಗದೇವತೆ ಪ್ರತ್ಯಕ್ಷವಾಯಿತು! ಅದು ಭಯಾನಕವಾಗಿರಲಿಲ್ಲ…ಅದು ದಿವ್ಯವಾಗಿತ್ತು… ಕರುಣೆಯಿಂದ ಕೂಡಿತ್ತು…

ನಾಗದೇವತೆ ಗಂಭೀರ ಧ್ವನಿಯಲ್ಲಿ ಹೇಳಿತು: "ನಿಮ್ಮ ಭಕ್ತಿ, ಶ್ರಮ ಹಾಗೂ ಸ್ಥಿರವಾದ ಬದ್ಧತೆಗೆ ನಾನು ಮೆಚ್ಚಿದೆ. “ಮಾನವನ ಅಹಂಕಾರದಿಂದ ಹುಟ್ಟಿದ ಶಾಪ…
ಇಂದು ಮಾನವನ ಭಕ್ತಿ ಮತ್ತು ಪ್ರೀತಿಯಿಂದ ಮುಕ್ತವಾಗುತ್ತಿದೆ…ವಿಕ್ರಮ…ನಿನ್ನ ಧೈರ್ಯ, ನಿನ್ನ ನಿಷ್ಠೆ…ಮತ್ತು ಈ ಹಳ್ಳಿಯ ಜನರ ಒಗ್ಗಟ್ಟಿನ ಶ್ರಮ— ಇವೆಲ್ಲವು ಈ 5000 ವರ್ಷದ ಶಾಪವನ್ನು ಕೊನೆಗೊಳಿಸಿದೆ…ಇಂದಿಗೆ ನಿಮ್ಮ ಮನೆತನಕ್ಕೆ ಅಂತಿದ್ದ ಶಾಪ ಮುಕ್ತಿಯಾಯಿತು. ನಿಮ್ಮ ಬದುಕು ಬಂಗಾರವಾಗಲಿ" ಎಂದು ಹೇಳಿತು. ವಿನುತಾಳ ನಾಗರೂಪ ನಿಧಾನವಾಗಿ ಕರಗತೊಡಗಿತು. ವಿನುತಾ ತನ್ನ ಸ್ವರೂಪಕ್ಕೆ ಮರಳಿದಳು. ಅವಳು ಅಚಾನಕ್ ನೆಲಕ್ಕೆ ಕುಸಿದು ಬಿದ್ದಳು. “ವಿನುತಾ…!” ಎಂದು ಕರೆದ ವಿಕ್ರಮ ಅವಳತ್ತ ಓಡಿದ. ಮಹಾಶಿವನ ಲಿಂಗಪ್ರಸಾದವನ್ನು ಅರ್ಚಕರು ವಿನುತಾಳ ಹಣೆಗೆ ಹಚ್ಚಿದರು. 

ಕೆಲ ಕ್ಷಣಗಳ ಮೌನ…ವಿನುತಾಳ ಕಣ್ಣಲ್ಲಿ ಮತ್ತೆ ಜೀವ ಬಂದಂತಾಗಿತ್ತು. ಅವಳ ಕಣ್ಣುಗಳು ನಿಧಾನವಾಗಿ ತೆರೆದವು…ಅವಳ ಮುಖದಲ್ಲಿ ಮತ್ತೆ ಆ ಹಳೆಯ ಮಂದಹಾಸ ಅರಳಿತು…ವಿಕ್ರಮನನ್ನು ಅಪ್ಪಿಕೊಂಡು, ಧನ್ಯವಾದ ಸೂಚಿಸಿದಳು. ಗಟ್ಟಿಯಾಗಿ ವಿಕ್ರಮನ ಕೈ ಹಿಡಿದುಕೊಂಡು ಮಂದಹಾಸ ಬೀರುತ್ತಿದ್ದಳು. ಈ ಎರಡು ಜನರ ಜೋಡಿ ಸುಂದರವಾಗಿ ಕಾಣುತ್ತಿತ್ತು. ಹಳ್ಳಿಯ ಜನರೆಲ್ಲ “ಹರ ಹರ ಮಹಾದೇವ!” ಎಂದು ಕೂಗಿ ಸಂತೋಷಪಟ್ಟರು. ಆ ಪುರಾತನ ದೇವಾಲಯ ಮತ್ತೆ ಜೀವಂತವಾಯಿತು. 

ದೇವಾಲಯದ ಗಂಟೆಗಳು ನಿರಂತರವಾಗಿ ಮೊಳಗುತ್ತಾ…ಆಕಾಶದಲ್ಲೇನೋ ಒಂದು ಶಾಂತಿ ಹರಡಿದಂತೆ ಅನಿಸಿತು. ಪ್ರತಿ ವರ್ಷ ಪಂಚಮಿಯಂದು ಮಹೋತ್ಸವ ನಡೆಯತೊಡಗಿತು. 

ವಿಕ್ರಮ ಮತ್ತು ವಿನುತಾ— ಕೇವಲ ಪ್ರೇಮಿಗಳಲ್ಲ…ಒಂದು ಶಾಪವನ್ನು ಮುರಿದ ಜೋಡಿ. ಅವರ ಪ್ರೀತಿ—ಒಂದು ಮನೆತನವನ್ನು ಉಳಿಸಿತು…ಒಂದು ಹಳ್ಳಿಯನ್ನು ಪುನರ್ಜೀವಗೊಳಿಸಿತು… ಕೆಲವು ಶಾಪಗಳು ಭಯದಿಂದ ಅಲ್ಲ, ಭಕ್ತಿಯಿಂದ ಮುರಿಯುತ್ತದೆ. ಕೆಲವು ಪ್ರೇಮಗಳು ಭಾವನೆಗಳನ್ನಲ್ಲ, ಜೀವನವನ್ನು ರೂಪಿಸುತ್ತವೆ. ನಿಜವಾದ ಪ್ರೀತಿ ಇದ್ದಲ್ಲಿ… ದೈವವೂ ತಲೆಬಾಗುತ್ತದೆ…

*** 

  ✍🏻 Deepalaxmi Bhat
Mangaluru