ಶನಿವಾರ, ಮೇ 16, 2026

ಅಪೂರ್ವ ಪ್ರೇಮ - ಜನ್ಮಾಂತರದ ಪ್ರೀತಿ

✍🏻ದೀಪಲಕ್ಷ್ಮಿ ಭಟ್, ಮಂಗಳೂರು  

ಅಂದು ಜಡ ಹಿಡಿಸುವಂತೆ ಬೀಳುತ್ತಿದ್ದ ಮಳೆ. ಮಳೆ ಹನಿಗಳು ಕಿಟಕಿಯ ಗಾಜಿನ ಮೇಲೆ ಮುತ್ತಿನ ಹಾರ ಪೋಣಿಸಿದಂತೆ ಒಂದೊಂದಾಗಿ ಜಾರುತ್ತಿದ್ದವು. ಆ ಹೊತ್ತಿಗೆ, ಮೋಡ ಕವಿದ ಆ ಆಕಾಶವೇ ಯಾರೋ ಒಬ್ಬರ ಮನಸ್ಸಿನಲ್ಲಿದ್ದ ನೋವನ್ನು ಹೊತ್ತು ಅಳುತ್ತಿರುವಂತೆ ಕಾಣುತ್ತಿತ್ತು… ಆ ದಿನ, ಆದಿತ್ಯ ತನ್ನ ಮಗಳಾದ ಆರಾಧ್ಯಾಳ ಕೂದಲನ್ನು ಸವರಿಸುತ್ತಾ ಕಿಟಕಿಯ ಬಳಿ ನಿಂತಿದ್ದ. ಆರಾಧ್ಯಾಳ ಕಣ್ಣುಗಳಲ್ಲಿ ತನ್ನ ಹೆಂಡತಿ ಅಪೂರ್ವಳ ನಗು ಅವನಿಗೆ ಕಾಣಿಸುತ್ತಿತ್ತು…ಆ ನಗುವೇ ಅವನ ಹೃದಯವನ್ನು ಪ್ರತಿದಿನ ಚೂರು ಚೂರು ಮಾಡುತ್ತಿತ್ತು…

ಅಪೂರ್ವಳ ಮರಣದ ನಂತರ ಆ ಮನೆ, ಆದಿತ್ಯನ ಮನ ಎಲ್ಲವೂ ಬದಲಾಗಿತ್ತು. ಹಿಂದೆ ಒಮ್ಮೆ ನಗುವಿನಿಂದ ತುಂಬಿದ್ದ ಮನೆ, ಈಗ ಮೌನದ ದೇಗುಲದಂತಾಗಿತ್ತು. ಆದಿತ್ಯನ ಅಮ್ಮ ಅನುರಾಧ ದೇವರ ಕೋಣೆಯಲ್ಲಿ ಗಂಟೆಗಳ ಕಾಲ ದೀಪ ಹಚ್ಚಿ ಕಣ್ಣೇರಿಡುತ್ತಾ ಕುಳಿತುಕೊಳ್ಳುತ್ತಿದ್ದಳು. ಆದಿತ್ಯನ ಅಪ್ಪ ಚಂದ್ರಮೋಹನ ಪುಸ್ತಕ ಹಿಡಿದುಕೊಂಡಿದ್ದರೂ, ಓದುತ್ತಿರಲಿಲ್ಲ…ಪ್ರತಿ ಪುಟದಲ್ಲೂ ಅವನಿಗೆ ಸೊಸೆಯ ಮುಖವೇ ಕಾಣಿಸುತ್ತಿತ್ತು. ಆದಿತ್ಯ ಮಾತ್ರ ಜೀವಂತ ಶವದಂತೆ ಬದುಕುತ್ತಿದ್ದ.

ಪ್ರತಿ ರಾತ್ರಿ, ಅಪೂರ್ವಳ ಫೋಟೋ ಎದುರು ಕುಳಿತು ಮಾತನಾಡುತ್ತಿದ್ದ…“ಅಪೂರ್ವ… ನೀನು ಹೀಗೆ ಹೋಗ್ಬಾರ್ದಿತ್ತು…ನಮ್ಮ ಆರಾಧ್ಯಾ ಇನ್ನೂ ನಿನ್ನ ಮಡಿಲಿನ ಆಸರೆ  ಹುಡುಕುತ್ತಾಳೆ…ನಾನು ಅವಳಿಗೆ ಅಪ್ಪ ಆಗಲೋ, ಅಮ್ಮ ಆಗಲೋ? ನನ್ನನ್ಯಾಕೆ ಹೀಗೆ ಒಬ್ಬಂಟಿಯಾಗಿ ಬಿಟ್ಟು ಹೋದೆ?”. ಅವನ ಮಾತುಗಳಿಗೆ ಉತ್ತರವಾಗಿ ಕಿಟಕಿಯ ಪರದೆ ಮಾತ್ರ ನಿಧಾನವಾಗಿ ಅಲುಗಾಡುತ್ತಿತ್ತು - ಬಹುಶಃ ಅಪೂರ್ವಳೇ ಅಲ್ಲಿ ನಿಂತು "ನಾನಿಲ್ಲೇ ಇದ್ದೇನೆ, ನಿನ್ನ ಸನಿಹ. ನಿನ್ನ ಆಸರೆಯಾಗಿ" ಎಂಬಂತೆ. 

 

*** 

ಆ ಅಪಘಾತದ ದಿನ ಇನ್ನೂ ಆದಿತ್ಯನ ಮನಸ್ಸಿನಲ್ಲಿ ಜೀವಂತವಾಗಿತ್ತು…ಅದು ಅವರ  ವಿವಾಹದ  ಎರಡನೇ ವರ್ಷ ವಾರ್ಷಿಕೋತ್ಸವದ ಪ್ರವಾಸ. ಮಂಜಿನಿಂದ ಆವರಿಸಿದ್ದ ಬೆಟ್ಟಗಳು…ಕೈ ಕೈ ಹಿಡಿದು ನಡೆದ ದಾರಿಗಳು…ಮಳೆಯ ಹನಿಗಳ ಮಧ್ಯೆ ಅಪೂರ್ವಳ ನಗು…ಆಗತಾನೆ ೬ ತಿಂಗಳು ಹಿಡಿದ ಮಗು ಆರಾಧ್ಯಳ ಜೊತೆಗಿನ ಮೊದಲ ಪ್ರವಾಸ. ಪ್ರವಾಸದ ಎಲ್ಲ ಖುಷಿಯ ಕ್ಷಣಗಳು ಕಳೆದು ಮನೆಗೆ ಹಿಂದಿರುಗುವ ಪ್ರಯಾಣ. “ಆದಿ… ಜೀವನ ಹೀಗೆನೇ ನಿಂತುಬಿಟ್ಟರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ?” ಎಂದು ಅವಳು ಕಾರಿನ ಕಿಟಕಿಯಿಂದ ಹೊರಗೆ ನೋಡುತ್ತಾ ಕೇಳಿದ್ದಳು. ಆ ಮಾತಿಗೆ ಆದಿತ್ಯ ನಗುತ್ತಾ—“ನಿನ್ನ ಜೊತೆ ಇದ್ದರೆ ಯಾವ ಜನ್ಮವೂ ಚಿಕ್ಕದಾಗಿಬಿಡುತ್ತೆ ಅಪೂರ್ವ…” ಎಂದಿದ್ದ.

ಆದರೆ ವಿಧಿ ಅವರ ಮಾತುಗಳನ್ನು ಕೇಳಿ ಕ್ರೂರವಾಗಿ ನಕ್ಕಿತೇನೋ…ಹಿಂತಿರುಗುವಾಗ ರಾತ್ರಿ ಕತ್ತಲೆ ಗಾಢವಾಗಿತ್ತು. ಮಳೆ ಹೆಚ್ಚಾಗಿತ್ತು. ರಸ್ತೆಯ ಮೇಲೆ ಮಂಜು ಇಳಿದಿತ್ತು. ಆರಾಧ್ಯಾ ಹಿಂದಿನ ಸೀಟಿನಲ್ಲಿ ಮಲಗಿದ್ದಳು. ಅಪೂರ್ವ ಆದಿತ್ಯನ ಭುಜದ ಮೇಲೆ ತಲೆ ಇಟ್ಟುಕೊಂಡಿದ್ದಳು. ಅಷ್ಟರಲ್ಲಿ…ಎದುರಿನಿಂದ ನಿಯಂತ್ರಣ ತಪ್ಪಿದ ಒಂದು ಲಾರಿ ಅವರ ಕಾರಿನ ಕಡೆ ಅಬ್ಬರಿಸಿ ಬಂದಿತು. “ಆದಿ…!” ಎಂದು ಅಪೂರ್ವ ಕಿರುಚಿದ ಧ್ವನಿ…ಅದರ ನಂತರ ಒಂದು ಭೀಕರ ಶಬ್ದ…ಕಾರು ಗಾಳಿಯಲ್ಲಿ ತಿರುಗಿದಂತೆ ಅನುಭವ…ಗಾಜಿನ ಚೂರುಗಳು…ರಕ್ತ…ಮಳೆಯ ನೀರಿನಲ್ಲಿ ಬೆರೆತ ಜೀವಗಳ ಹೋರಾಟ…

ಆದಿತ್ಯನಿಗೆ ಎಚ್ಚರವಾದಾಗ ಆಸ್ಪತ್ರೆಯ ಬಿಳಿ ಗೋಡೆಗಳು ಕಾಣಿಸಿದ್ದವು. ತಲೆಗೆ ಬ್ಯಾಂಡೇಜ್. ಕೈಗಳಿಗೆ ಗಾಯ. ಆದರೆ ಅವನ ಮೊದಲ ಪ್ರಶ್ನೆ ಒಂದೇ— “ಅಪೂರ್ವ…? ನನ್ನ ಹೆಂಡತಿ ಎಲ್ಲಿದ್ದಾಳೆ …?” ಡಾಕ್ಟರ್ ಮುಖ ತಗ್ಗಿಸಿದ್ದರು.“ ಅವರಿಗೆ ತುಂಬಾ ಗಂಭೀರ ಗಾಯಗಳಾಗಿವೆ…ಕೋಮಾ ಪರಿಸ್ಥಿತಿಯಲ್ಲಿದ್ದಾರೆ. ಅಪಘಾತ ನಡೆದು ಮೂರು ದಿನಗಳೇ ಆಗಿವೆ. ನೀವು ಈಗ ತಾನೇ ಚೇತರಿಸಿಕೊಂಡಿದ್ದೀರಾ. ಸ್ವಲ್ಪ ರೆಸ್ಟ್  ಮಾಡಿ.” ಆದರೆ, ಡಾಕ್ಟರ್ ನ ಮಾತುಗಳು ಅವನಿಗೆ ಕೇಳಿಸಲೇ ಇಲ್ಲ. ಕೋಮಾ ಎಂಬ ಶಬ್ದ ಕೇಳುತ್ತಲೇ, ಆದಿತ್ಯ ಹಾಸಿಗೆಯಿಂದ ಎದ್ದು ಓಡಿದ್ದ. ಐಸಿಯುವಿನ ಗಾಜಿನ ಆಚೆ ಅಪೂರ್ವ ಮಲಗಿದ್ದಳು. ದೇಹದ ತುಂಬ ಯಂತ್ರಗಳು… ಉಸಿರಾಟಕ್ಕೆ ವೆಂಟಿಲೇಟರ್… ಮುಖದ ಮೇಲೆ ಗಾಯಗಳ ಗುರುತು… ಆ ದೃಶ್ಯ ನೋಡಿ ಆದಿತ್ಯ ಕುಸಿದುಬಿದ್ದ.

“ಇದು ನನ್ನ ಅಪೂರ್ವ ಅಲ್ಲ…ನನ್ನ ಜೊತೆ ನಗ್ತಿದ್ದ ಅಪೂರ್ವ ಹೀಗೆ ಮಲಗಿರೋಕೆ ಸಾಧ್ಯವಿಲ್ಲ…” ಎಂದು ಅತ್ತ. ಮಗು ಅಪೂರ್ವ ಮಾತ್ರ ವಿಚಿತ್ರವಾಗಿ ಪಾರಾಗಿದ್ದಳು. ಆ ದಿನದಿಂದ ಆದಿತ್ಯನ ಜೀವನವೇ ಆಸ್ಪತ್ರೆಯ ಗೋಡೆಗಳೊಳಗೆ ಸಿಕ್ಕಿಹಾಕಿಕೊಂಡಿತು. ಬೆಳಿಗ್ಗೆ ಎದ್ದು ಮೊದಲ ಕೆಲಸ — ಅಪೂರ್ವಳ ಕೈ ಹಿಡಿದು ಮಾತನಾಡುವುದು. “ಅಪೂರ್ವ… ನೋಡು ನಾನು ಬಂದಿದ್ದೀನಿ…ನೀನು ಕಣ್ಣು ತೆರೆಯಬೇಕು…ನಿನ್ನ ಆದಿ ಕರೀತಿದ್ದಾನೆ…” . ಆದರೆ ಅವಳು ಮಾತ್ರ ಮೌನ.

ಆದಿತ್ಯ ದೇಶದ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಕರೆದೊಯ್ದ. ಬೆಂಗಳೂರು… ಚೆನ್ನೈ… ಮುಂಬೈ…ವಿದೇಶದ ಚಿಕಿತ್ಸೆಯ ವಿಚಾರವನ್ನೂ ನೋಡಿದ. ತನ್ನ ಸಂಗ್ರಹಿಸಿದ ಹಣವನ್ನೆಲ್ಲ ಖರ್ಚು ಮಾಡಿದ. ಅನುರಾಧ ತನ್ನ ಆಭರಣಗಳನ್ನೇ ಮಾರಿದಳು. ಚಂದ್ರಮೋಹನ ನಿವೃತ್ತಿ ಹಣವನ್ನೂ ಬಳಸಿದರು. ಆದರೆ ಅಪೂರ್ವಳ ಕಣ್ಣು ಮಾತ್ರ ತೆರೆಯಲಿಲ್ಲ…

ಒಂದು ರಾತ್ರಿ ಆಸ್ಪತ್ರೆಯಲ್ಲಿ ಎಲ್ಲರೂ ಮಲಗಿದ್ದಾಗ, ಆದಿತ್ಯ ಅವಳ ಕೈ ಹಿಡಿದು ಅತ್ತಿದ್ದ. “ನೀನು ಹೀಗೆ ಮೌನದಲ್ಲಿರಬೇಡ ಅಪೂರ್ವ…ಒಮ್ಮೆ ನನಗೆ ಬೈದುಬಿಡು… ಒಮ್ಮೆ ನಗು… ಆದ್ರೆ ಹೀಗೆ ನನ್ನ ಒಂಟಿಯಾಗಿ ಬಿಡಬೇಡ …” ಅಷ್ಟರಲ್ಲಿ…ಅಪೂರ್ವಳ ಬೆರಳುಗಳು ನಿಧಾನವಾಗಿ ಕದಲಿದವು. ಆದಿತ್ಯನ ಮಾತುಗಳಿಗೆ ನಿಧಾನವಾಗಿ  ಸ್ಪಂದಿಸಲು ಪ್ರಯತ್ನಿಸಿದಂತೆ ಭಾಸವಾಯಿತು. ಆದಿತ್ಯನ ಕಣ್ಣುಗಳಲ್ಲಿ ಆಶೆಯದ  ಬೆಳಕು ಹೊಮ್ಮಿತು.“ಡಾಕ್ಟರ್! ಡಾಕ್ಟರ್!” ಎಂದು ಓಡಿದ್ದ. ಆದರೆ ಡಾಕ್ಟರ್ ಹೇಳಿದ್ದು— “ಇದು ಸಾಮಾನ್ಯವಾದ  ನರ ಪ್ರತಿಕ್ರಿಯೆ…” ಆ ಕ್ಷಣ ಆದಿತ್ಯನ ಆಶೆಯೇ ಚೂರುಚೂರಾಯಿತು.ಆ ವಿಧಿಗೆ ಅವರ ಮೇಲೆ ಏನು ದ್ವೇಷವೋ? ತಿಂಗಳುಗಳು ಕಳೆಯುತ್ತಾ ಹೋದವು. ಆರಾಧ್ಯಾ ದಿನವೂ ಆಸ್ಪತ್ರೆ ಬಂದು— “ಅಮ್ಮಾ… ಎದ್ದು ಬಾ…” ಎಂದು ಗಲ್ಲಕ್ಕೆ ಮುತ್ತಿಡುತ್ತಿದ್ದಳು.

ಒಂದು ದಿನ ಪುಟ್ಟ ಕೈಯಿಂದ ಅಪೂರ್ವಳ ಕೂದಲು ಸವರಿಸುತ್ತಾ— “ಅಮ್ಮಾ… ನಾನು ಒಳ್ಳೆ ಹುಡುಗಿಯಾಗ್ತೀನಿ… ನೀನು ಮನೆಗೆ ಬಾ…” ಎಂದಳು. ಆಗ ಅಲ್ಲಿದ್ದ ನರ್ಸ್‌ಗಳಿಗೂ ಕಣ್ಣೀರು ಬಂದಿತ್ತು.

ಕೊನೆಗೆ…ಒಂದು ಮಳೆಯ ರಾತ್ರಿ…ಆಸ್ಪತ್ರೆಯ ಮಾನಿಟರ್ ಶಬ್ದ ಏಕಾಏಕಿ ಬದಲಾಗಿತ್ತು.  ಡಾಕ್ಟರ್‌ಗಳು ಓಡಿದರು. ಆದಿತ್ಯ ಬೆಚ್ಚಿಬಿದ್ದು ಅವಳ ಕೈ ಹಿಡಿದ. “ಅಪೂರ್ವ! ಕಣ್ಣು ತೆರೆ… ನನ್ನ ನೋಡ್ಬಿಡು ಒಮ್ಮೆ…ನಾನು ಇಲ್ಲೇ ಇದ್ದೀನಿ…” ಆ ಕ್ಷಣ…ತುಂಬಾ ತಿಂಗಳುಗಳ ನಂತರ… ಅಪೂರ್ವಳ ಕಣ್ಣಂಚಿನಲ್ಲಿ ಒಂದು ಸಣ್ಣ ಕಣ್ಣೀರು ಜಾರಿತು. ಅವಳ ತುಟಿಗಳು ಅಲುಗಾಡಿದವು. “ಆ…ದಿ…” - ಅದೇ ಅವಳ ಕೊನೆಯ ಶಬ್ದ. ಮಾನಿಟರ್‌ನಲ್ಲಿ ನೇರ ರೇಖೆ ಮೂಡಿತು. ಆದಿತ್ಯನ ಪ್ರಪಂಚವೇ ಅಲ್ಲೇ ನಿಂತುಹೋಯಿತು… ಮಳೆ ಮಾತ್ರ ಆಸ್ಪತ್ರೆಯ ಕಿಟಕಿಯ ಮೇಲೆ ಇನ್ನೂ ಅಳುತ್ತಲೇ ಇತ್ತು… 

*** 

ಒಂದು ದಿನ, ಅನುರಾಧ ಮನೆ ಸ್ವಚ್ಛಗೊಳಿಸುತ್ತಿದ್ದಾಗ, ಹಳೆಯ ಮರದ ಪೆಟ್ಟಿಗೆಯೊಂದು ಸಿಕ್ಕಿತು. ಅದು ಚಂದ್ರಮೋಹನನ ತಾತನ ಕಾಲದ ಪೆಟ್ಟಿಗೆ. ಅದರೊಳಗೆ ಹಳೆಯ ಜಾತಕಗಳು, ಕೆಲವು ಮಂತ್ರಪತ್ರಗಳು, ಮತ್ತು ಒಂದು ವಿಚಿತ್ರ ದಿನಚರಿ ಇತ್ತು. ಆ ದಿನಚರಿಯಲ್ಲಿ ಒಂದು ಸಾಲು ಕೆಂಪು ಮಸಿಯಲ್ಲಿ ಬರೆಯಲಾಗಿತ್ತು— “ಈ ವಂಶದಲ್ಲಿ ಜನಿಸುವ ಒಬ್ಬ ದಂಪತಿಗಳು, ಹಿಂದಿನ ಜನ್ಮದ ಅಪೂರ್ಣ ಪ್ರೇಮದ ಶಾಪವನ್ನು ಅನುಭವಿಸುವರು…” ಆ ಮಾತು ಓದಿದ ಕ್ಷಣ ಅನುರಾಧಳ ಕೈ ನಡುಗಿತು. ಕೂಡಲೇ, ಚಂದ್ರಮೋಹನನನ್ನು ಕರೆದು, "ರೀ, ನಮ್ಮಮಗನ ಸಂಸಾರ ಹೀಗೆ ಆಗಲು, ಇದೇ  ಕಾರಣ ಇರಬಹುದೇ?" ಎಂದು ದುಃಖದಿಂದ ಪ್ರಶ್ನಿಸಿದಳು. ಚಂದ್ರಮೋಹನ ಅದನ್ನು ಓದಿದವನೇ, ಕ್ಷಣಕಾಲ ಭೀತನಾದನು. ಅವನಿಗೆ ಇದರ ವಿಚಾರವಾಗಿ ಎಳ್ಳಷ್ಟೂ ಗೊತ್ತಿರಲಿಲ್ಲ. ಅವನ ಪೂರ್ವಜರು ಇದರ ಬಗ್ಗೆ ಏನೂ ಹೇಳಿರಲಿಲ್ಲ. ಆ ಕೂಡಲೇ, ಅವರು ಆದಿತ್ಯನನ್ನೂ ಕರೆದುಕೊಂಡು ಊರಿನ ಹೊರಗಿದ್ದ ವಯಸ್ಸಾದ ಜ್ಯೋತಿಷಿ “ವೇದಬ್ರಹ್ಮ ಶಿವಾನಂದ ಶಾಸ್ತ್ರಿ” ಅವರನ್ನು ಭೇಟಿ ಮಾಡಿದರು.

ಶಾಸ್ತ್ರಿಗಳು ತುಂಬಾ ಹಿರಿಯರು ಹಾಗೂ ಜ್ಯೋತಿಷ್ಯದಲ್ಲಿ ತುಂಬಾ ಪರಿಣಿತರು. ಊರಿಗೆ ಊರೇ ಅವರನ್ನು ಗೌರವಿಸುತ್ತಿತ್ತು. ಅನುರಾಧ ನೀಡಿದ ಆದಿತ್ಯ ಹಾಗೂ ಅಪೂರ್ವಳ ಜಾತಕಗಳನ್ನು ನೋಡಿ ಶಾಸ್ತ್ರಿಗಳು ಕ್ಷಣಕಾಲ ಕಣ್ಣು ಮುಚ್ಚಿದರು… “ಅಪೂರ್ವ ಮತ್ತು ಆದಿತ್ಯ… ಸಾಮಾನ್ಯ ದಂಪತಿಗಳಲ್ಲ…“ಹಿಂದಿನ ಜನ್ಮದಲ್ಲಿ ಅವರು ಪ್ರೇಮಿಗಳು…
ಆದರೆ ಅವರ ಪ್ರೇಮದ ಕಾರಣದಿಂದ ಅನೇಕ ಜೀವಗಳು ನಾಶವಾದವು…ಒಬ್ಬ ತಾಯಿಯ ಶಾಪ ಅವರಿಗೆ ಬಿದ್ದಿತ್ತು…”

ಆದಿತ್ಯ ಬೆಚ್ಚಿಬಿದ್ದ. “ಯಾವ ಶಾಪ…?”

ಶಾಸ್ತ್ರಿಗಳು ನಿಧಾನವಾಗಿ ಹೇಳಿದರು —  “ನೀವು ಹಿಂದಿನ ಜನ್ಮದಲ್ಲಿ ಒಬ್ಬ ರಾಜಕುಮಾರ…ಅಪೂರ್ವ ಒಬ್ಬ ನೃತ್ಯಾಂಗಿ…ನಿಮ್ಮಿಬ್ಬರ ಪ್ರೇಮಕ್ಕಾಗಿ ನಡೆದ ಯುದ್ಧದಲ್ಲಿ ನೂರಾರು ಜನ ಸತ್ತರು…ಒಬ್ಬ ತಾಯಿ ತನ್ನ ಮಗನ ಶವ ಹಿಡಿದು ಶಪಿಸಿದ್ದಳು — ‘ನಿಮ್ಮ ಪ್ರೇಮ ಯಾವ ಜನ್ಮದಲ್ಲೂ ಪೂರ್ಣವಾಗಬಾರದು'…”

ಈ ವಿಚಾರ ಕೇಳಿದಂತೆ, ಆದಿತ್ಯನ ಮನ ನೊಂದಿತು. ಮನೆ ತುಂಬ ಮೌನ ಆವರಿಸಿತು…ಆ ದಿನದಿಂದ ವಿಚಿತ್ರ ಘಟನೆಗಳು ಆರಂಭವಾದವು. ಆರಾಧ್ಯಾ ಕೆಲವೊಮ್ಮೆ ಖಾಲಿ ಕೋಣೆಯ ಕಡೆ ನೋಡಿ ನಗುತ್ತಿದ್ದಳು… “ಅಮ್ಮ ಬಂದಿದ್ದಾರೆ…” ಎಂದು ಹೇಳುತ್ತಿದ್ದಳು.

ಒಂದು ರಾತ್ರಿ, ಆದಿತ್ಯಗೆ ಕನಸು ಬಂತು: ಬಿಳಿ ವಸ್ತ್ರದಲ್ಲಿ ಅಪೂರ್ವ ನಿಂತಿದ್ದಳು…ಅವಳ ಕಣ್ಣುಗಳಲ್ಲಿ ನೋವಿತ್ತು… ಆದರೆ ಮುಖದಲ್ಲಿ ದಿವ್ಯ ಶಾಂತಿ. “ಆದಿ… ನಾನು ಹೋಗಿಲ್ಲ…ನಿನ್ನ ಪ್ರೀತಿಯೊಳಗೆ ನಾನು ಇನ್ನೂ ಜೀವಂತ…ಆದರೆ ನಮ್ಮ ಶಾಪ ಈ ಜನ್ಮಕ್ಕೆ ಕೊನೆಯಾಗಬೇಕು…”

“ಹೇಗೆ…?” ಎಂದು ಅತ್ತ ಆದಿತ್ಯ. ಉತ್ತರವಾಗಿ ಅಪೂರ್ವ - “ಒಬ್ಬರನ್ನೊಬ್ಬರು ಹಿಡಿದುಕೊಳ್ಳುವ ಪ್ರೇಮಕ್ಕಿಂತ, ಬಿಡುವ ಪ್ರೇಮ ದೊಡ್ಡದು…” ಎಂದು ನಿಧಾನವಾಗಿ ಗಾಳಿಯಲ್ಲಿ ಸೇರಿಕೊಂಡಳು. ಆ ಕೂಡಲೇ ಎಚ್ಚರವಾದ ಆದಿತ್ಯ, ಬೆವತು ಹೋಗಿದ್ದ. ಅಪೂರ್ವ ಹೇಳಿದ ಮಾತನ್ನು ನೆನೆದು ಕಣ್ಣೀರಿಟ್ಟ. ಅಲ್ಲೇ ಶಾಂತವಾಗಿ ಮಲಗಿದ್ದ ಮಗಳು ಆರಾಧ್ಯಳನ್ನು ಗಟ್ಟಿಯಾಗಿ ತಬ್ಬಿಕೊಂಡು ಮನಸೋ ಇಚ್ಛೆ ಅತ್ತು ತನ್ನ ದುಃಖವನ್ನು ಇಳಿಸಿದ. 

*** 

 

ಮರುದಿನ ಮತ್ತೆ ಶಾಸ್ತ್ರಿಗಳತ್ತ ಹೋಗಿ ಆದಿತ್ಯ ತನ್ನ ಕನಸಿನ ಬಗ್ಗೆ ಹೇಳಿಕೊಂಡ. ಶಾಸ್ತ್ರಿಗಳು ಒಂದು ದೇವಾಲಯದ ಬಗ್ಗೆ ಹೇಳಿದರು. ಅದು ಕಾಡಿನ ಮಧ್ಯೆ ಇದ್ದ ಪುರಾತನ ದೇವಿಯ ದೇವಸ್ಥಾನ. ಅಲ್ಲಿ ಅಪಮೃತ್ಯು ಪಡೆದ ಆತ್ಮಗಳಿಗೆ, ಅವರು ಸತ್ತ ತಿಥಿಯ ತಿಂಗಳಿನ ಪಿತೃ ಪಕ್ಷದ ಅಮಾವಾಸ್ಯೆ ದಿನ “ಅಪೂರ್ಣ ಆತ್ಮಗಳ ದೀಪ” ಹಚ್ಚಿದರೆ ಮಾತ್ರ ಶಾಪ ಮುಕ್ತವಾಗುತ್ತದೆ ಎಂದು ನಂಬಿಕೆ. ಹಲವಾರು ವಿಷಯಗಳನ್ನು ಕೇಳಿ ತಿಳಿದುಕೊಂಡ ಆದಿತ್ಯ ಮನೆಗೆ ಬಂದು ಶಾಸ್ತ್ರಿಗಳು ಹೇಳಿದಂತ ಎಲ್ಲ ವಿಚಾರಗಳನ್ನೂ ಹೇಳಿದ. 

ಅದೇ ತಿಂಗಳು ಅಪೂರ್ವ ಸತ್ತು ಒಂದು ವರ್ಷ ಪೂರ್ಣವಾಗುತ್ತಿತ್ತು. ಅಂದು ಪಿತೃ ಪಕ್ಷದ ಅಮಾವಾಸ್ಯೆ ದಿನ. ಆದಿತ್ಯ, ಅನುರಾಧ, ಚಂದ್ರಮೋಹನ ಮತ್ತು ಪುಟ್ಟ ಆರಾಧ್ಯಾ ಎಲ್ಲರೂ ಅಲ್ಲಿ ಹೋದರು. 

ಆ ದೇವಾಲಯವೇ ಒಂದು ಥರಾ ವಿಚಿತ್ರವಾಗಿತ್ತು… ಗಂಟೆ ಶಬ್ದಗಳೇ ಗಾಳಿಯಲ್ಲಿ ತೇಲುತ್ತಿದ್ದಂತ ಭಾಸವಾಗುತ್ತಿತ್ತು. 

ಆ ದೇವಸ್ಥಾನದ ಒಳಗೆ ಕಾಲಿಡುತ್ತಿದ್ದಂತೆ, ಏನೋ ಒಂದು ವಿಚಿತ್ರವಾದ ಅನುಭವ. ಶಾಸ್ತ್ರಿಗಳು ತಿಳಿಸಿದಂತೆ, "ಅಪೂರ್ಣ ಆತ್ಮಗಳ ದೀಪ" ಹಚ್ಚುವಾಗ, ಆರಾಧ್ಯಾ ಏಕಾಏಕಿ ಹೇಳಿದಳು— “ಅಪ್ಪಾ, ಅಲ್ಲಿ ನೋಡು... ಅಮ್ಮ ಈಗ ನನ್ನ ಕಡೆ ನೋಡುತ್ತಾ ಖುಷಿಯಿಂದ ನಗ್ತಿದ್ದಾರೆ…”

ಆ ಕ್ಷಣ, ದೇವಾಲಯದೊಳಗಿನ ದೀಪಗಳು ಗಾಳಿಯಿಲ್ಲದೇ ತೇಲಿದಂತೆ ಕಂಪಿಸಿದವು…ಆದಿತ್ಯ ಕಣ್ಣುಮುಚ್ಚಿ ಅತ್ತ…“ಅಪೂರ್ವ… ನಿನ್ನನ್ನು ಬಂಧಿಸಿಕೊಳ್ಳಲು ನಾನು ಇನ್ನು ಬಯಸಲ್ಲ… ನೀನು ಶಾಂತಿಯಿಂದ ಹೋಗು…” ಆ ಮಾತಿನ ನಂತರ, ಅವನ ಹೃದಯದೊಳಗಿನ ಭಾರ ಏಕಾಏಕಿ ಕಡಿಮೆಯಾಯಿತು. ಅವನ ಕಣ್ಣಿಂದ ಕಣ್ಣೀರು ಜಲಪಾತದಂತೆ ಹರಿಯುತ್ತಿತ್ತು. ಅವನು ಅಳುವುದನ್ನು ನೋಡಿ ಆರಾಧ್ಯ ಗಲಿಬಿಲಿಯಾದರೂ ಅವನನ್ನು ಗಟ್ಟಿಯಾಗಿ ಅಪ್ಪಿಕೊಂಡಳು. ಮಗಳ ಅಪ್ಪುಗೆಯಲ್ಲಿ ತನ್ನ ನೋವನ್ನು ಮರೆತು ಆದಿತ್ಯ ಚೇತರಿಸಿಕೊಂಡ. ಅದಾದಮೇಲೆ, ಎಲ್ಲರೂ ಮನೆಗೆ ಹಿಂದಿರುಗಿದರು. 

ಅದರ ನಂತರ ಅವರ ಜೀವನ ನಿಧಾನವಾಗಿ ಬದಲಾಗತೊಡಗಿತು. ಆರಾಧ್ಯಾ ದೊಡ್ಡವಳಾಗುತ್ತಾ ಅಪೂರ್ವಳಂತೆಯೇ ಸಂಗೀತ ಮತ್ತು ಚಿತ್ರಕಲೆಯಲ್ಲಿ ಅದ್ಭುತ ಪ್ರತಿಭೆ ತೋರಿಸಿದಳು. ಆದಿತ್ಯ ತನ್ನ ಹೆಂಡತಿಯ ನೆನಪಿಗಾಗಿ ಒಂದು ಟ್ರಸ್ಟ್ ಆರಂಭಿಸಿದ— “ಅಪೂರ್ವ ಫೌಂಡೇಶನ್”

ಅದು ಅಪಘಾತದಲ್ಲಿ ಕುಟುಂಬವನ್ನು  ಕಳೆದುಕೊಂಡ ಮಕ್ಕಳಿಗೆ ಸಹಾಯ ಮಾಡುವ ಸಂಸ್ಥೆಯಾಯಿತು. ಅನುರಾಧ ಮತ್ತೆ ತನ್ನ ಉದ್ಯಮ ಆರಂಭಿಸಿದಳು. ಚಂದ್ರಮೋಹನ ಜೀವನದ ಕುರಿತು ಪುಸ್ತಕ ಬರೆಯಲು ಶುರುಮಾಡಿದರು.

***

ವರ್ಷಗಳ ನಂತರ…ಒಂದು ಸಂಜೆ, ಜಡಿಯಾಗಿ ಮಳೆ ಬೀಳುತ್ತಿತ್ತು…ಆರಾಧ್ಯಾ ವೀಣೆ ನುಡಿಸುತ್ತಿದ್ದಳು… ಆದಿತ್ಯನಿಗೆ ಆ ವೀಣೆಯ ನಾದ, ಸ್ವರದಲ್ಲಿ ಅಪೂರ್ವಳ ಆತ್ಮವೇ ಹರಿಯುತ್ತಿದ್ದಂತೆ ಅನಿಸಿತು… ಅಪೂರ್ವಳನ್ನು ನೆನೆಯುತ್ತಾ ಆದಿತ್ಯ ಕಣ್ಣು ಮುಚ್ಚಿ ಮಂದಹಾಸ ಬೀರಿದ.

ಅವನಿಗೆ ಗಾಳಿಯೊಳಗೆ ಒಂದು ಧ್ವನಿ ಕೇಳಿಸಿತು— “ಆದಿ…ಈ ಜನ್ಮದಲ್ಲಿ ಅಲ್ಲದಿದ್ದರೂ…ಪ್ರತಿ ಜನ್ಮದಲ್ಲೂ ನಾನು ನಿನ್ನನ್ನು ಹುಡುಕುತ್ತೇನೆ…”

ಕಿಟಕಿಯ ಬಳಿಯ ದೀಪ ನಿಧಾನವಾಗಿ ತೇಲಿತು…ಆಕಾಶದಲ್ಲಿ ಮಿಂಚು ಹೊಳೆಯಿತು…

ಆದರೆ ಆ ಮನೆಯಲ್ಲಿ ಮೊದಲ ಬಾರಿಗೆ, ನೋವಿನ ಮಧ್ಯೆ ಶಾಂತಿ ಹುಟ್ಟಿತ್ತು…

ಯಾಕೆಂದರೆ ಕೆಲವು ಪ್ರೇಮಗಳು…ಒಟ್ಟಿಗೆ ಬದುಕುವುದಕ್ಕಲ್ಲ…ಆತ್ಮವಾಗಿ ಶಾಶ್ವತವಾಗುವುದಕ್ಕೇ ಹುಟ್ಟುತ್ತವೆ… 

❤️ 

 ✍🏻 Deepalaxmi Bhat
Mangaluru 

ಶುಕ್ರವಾರ, ಮೇ 1, 2026

ನಾಗಶಾಪದ ಮುಕ್ತಿ

✍🏻ದೀಪಲಕ್ಷ್ಮಿ ಭಟ್, ಮಂಗಳೂರು 

ಬೇಸಿಗೆಯ ಬಿಸಿಲು ತೀವ್ರವಾಗಿದ್ದರೂ, ಹಳ್ಳಿಯ ಸೊಗಸು ಎಂದಿಗೂ ಕಡಿಮೆಯಾಗುವುದಿಲ್ಲ. ಹಸಿರು ಹೊಲಗಳು, ಮಳೆಯ ವಾಸನೆ ಉಳಿಸಿಕೊಂಡ ಮಣ್ಣು,  ಮಂಗಳವಾದ ಮುಸ್ಸಂಜೆಯ ಗಾಳಿ—ಇವುಗಳ ನಡುವೆ ತನ್ನ ರಜೆಯನ್ನು ಕಳೆಯಲು ವಿಕ್ರಮ ತನ್ನ ಅತ್ತೆ ವಿಮಲಾಳ ಮನೆಗೆ ಬಂದಿದ್ದ. 

ವಿಕ್ರಮ ಇಂಜಿನಿಯರಿಂಗ್ ಮೂರನೇ ವರ್ಷದ ವಿದ್ಯಾರ್ಥಿ. ಚತುರ, ಧೈರ್ಯಶಾಲಿ ಮತ್ತು ಮನಸಾರೆ ಪ್ರೀತಿಸುವ ಸ್ವಭಾವದವನು. ಅವನಿಗೆ ತನ್ನ ಅತ್ತೆ ಮಗಳು ವಿನುತಾಳ ಮೇಲೆ ವಿಶೇಷವಾದ ಮಮತೆ. ಆ ಮಮತೆ, ಪ್ರೀತಿಯಾಗಿ ಅರಳಿತ್ತು. ವಿನುತಾಳಿಗೂ ಅವನೆಂದರೆ ಪ್ರಾಣವೇ.

ವಿನುತಾ, ಹತ್ತನೇ ತರಗತಿಯ ಪರೀಕ್ಷೆ ಮುಗಿಸಿ, ರಜೆಯಲ್ಲಿದ್ದಳು. ಅವಳ ಸುಂದರವಾದ ಮಂದಹಾಸ, ಅವಳ ಕಣ್ಣುಗಳಲ್ಲಿನ ಹೊಳಪು — ಎಲ್ಲವೂ ವಿಕ್ರಮನ ಮನಸ್ಸನ್ನು ಸೆಳೆದಿದ್ದವು.

ವಿಮಲಾ, ವಿನೋದ ದಂಪತಿಗಳಿಗೂ, ವಿಕ್ರಮನೆಂದರೆ ತುಂಬಾ ಪ್ರೀತಿ. ವಿಕ್ರಮನ ಹೆತ್ತವರಾದ ವಿಜಯ ಹಾಗೂ ಅನುರಾಧ ಕೂಡ ಈ ಸಂಬಂಧಕ್ಕೆ ಮೊದಲೇ ಸೈ ಅಂದಿದ್ದರು. ಇವರಿಬ್ಬರ ಸಂಬಂಧವನ್ನು ಎರಡೂ ಕುಟುಂಬದವರು ಕೂಡ ಮನಸಾರೆ ಒಪ್ಪಿಕೊಂಡಿದ್ದರು. ಹೀಗಾಗಿ ಅವರು ಒಟ್ಟಿಗೆ ಹೊಲಗಳಲ್ಲಿ ತಿರುಗಾಡುವುದು, ಸಂಜೆಯ ಹೊತ್ತಿನಲ್ಲಿ ಮಾತುಕತೆ ನಡೆಸುವುದು ಎಲ್ಲವೂ ಸಾಮಾನ್ಯವಾಗಿತ್ತು.  "ವಿಕ್ಕಿ... ನನ್ ಜೊತೆ ಟ್ರೀ ಹೌಸ್ ಗೆ ಬಾ.." ಅಂತ ಹೇಳಿ, ವಿನುತಾ ವಿಕ್ರಮನ  ಜೊತೆ, ಚಿಕ್ಕಂದಿನಿಂದಲೂ, ಅವಳಿಗೆ ಆಟವಾಡಲೆಂದೇ ವಿನೋದ ಕೈಯಾರೆ ತಯಾರಿಸಿದ್ದ ಮರದ ಮೇಲಿನ ಟ್ರೀ ಹೌಸ್  ಒಳಗೆ ಕೂತು ಆಟ ಆಡುತ್ತಿದ್ದರು. ಹಾಗೆ, ಆಟವಾಡಿ ಸುಸ್ತಾದರೆ, ಅದರಲ್ಲೇ ಮಲಗುತ್ತಿದ್ದರು.  ದೊಡ್ಡವರಾದ ಮೇಲೂ ಈ ರೀತಿ ಟ್ರೀ ಹೌಸ್ ನಲ್ಲಿ ಕೂತು ಹರಟೆ ಹೊಡೆಯುತ್ತಾ ಕಾಲ ಕಳೆಯೋದು ಅವರಿಬ್ಬರಿಗೂ ಇಷ್ಟವಾದ ವಿಷಯವಾಗಿತ್ತು. 

*** 

 

ಅಂದು ಪಂಚಮಿಯ ದಿನ. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮುಗಿಸಿದ ವಿನುತಾ, ಮನೆಯೆದುರು ರಂಗೋಲಿ ಬಿಡಿಸಿ, ದೇವರ ಪೂಜೆಗೆಂದು ಹೂ ಕೊಯ್ದು,  ಅಮ್ಮ ಮಾಡಿ ಕೊಟ್ಟ ಕಾಫಿ ಕುಡಿಯುತ್ತಿದ್ದಳು. ಆಗ ತಾನೇ ಎದ್ದ ವಿಕ್ರಮ, ವಿನುತಾಳನ್ನು ಎದ್ದ ಕೂಡಲೇ ನೋಡಿ ಮನದಲ್ಲೇ ಸಂತೋಷಗೊಂಡು, ತನ್ನ ಬೆಳಗಿನ ದಿನಚರಿ ಮುಗಿಸಿದ. ತಿಂಡಿ ತಿಂದಾದಮೇಲೆ. ವಿನುತಾ ವಿಕ್ರಮ್  ಇಬ್ಬರೂ ಟ್ರೀ ಹೌಸ್ ಕಡೆ ಹೋದರು. ಹೊಲದಲ್ಲೆಲ್ಲಾ ಸುತ್ತಾಡಿ, ತಮ್ಮ ಶಾಲೆ ಕಾಲೇಜಿನ ಕಥೆಗಳನ್ನು ಮಾತನಾಡುತ್ತಾ, ಸುಸ್ತಾದ ಹಾಗೆ ಟ್ರೀ ಹೌಸ್ ಒಳಗೆ ಹೋಗಿ ತಾವು ತಂದಿದ್ದ ಜ್ಯೂಸು ಕುಡಿದು ಹರಟೆಗೆ ಕೂತರು.  ವಿಕ್ರಮ ಕಾಲೇಜಿನಲ್ಲಿ ಪ್ರೀತಿಸುತ್ತಿದ್ದ ಒಂದೆರಡು ಜೋಡಿಗಳ ಕಥೆ ಹೇಳಿದರೆ, ವಿನುತಾ ಶಾಲೆಯಲ್ಲಿ ಪಾಠ ಕಲಿಸುತ್ತಿದ್ದ ಮೇಷ್ಟ್ರುಗಳ ಮೇಲೆ ಕೆಲವೊಂದು ಹುಡುಗಿಯರಿಗಿದ್ದ ಕ್ರಶ್ ಬಗ್ಗೆ ಹೇಳುತ್ತಿದ್ದಳು. ಮಾತು ಮಾತಿಗೂ ಅವಳ ನಗು ವಿಕ್ರಮನ ಮನಸ್ಸಿಗೆ ತಂಪೆರೆಯುತ್ತಿತ್ತು. ಹಾಗೆ ಅವಳನ್ನು ನೋಡಿ ಅವಳನ್ನು ಬರಸೆಳೆದು ಅವಳ ಹಣೆಗೆ ಹಾಗೂ ಕೆನ್ನೆಗೆ ಒಂದು ಸುಂದರವಾದ ಮುತ್ತಿಟ್ಟು ಮನೆಗೆ ಹೋಗುತ್ತೇನೆಂದು ಹೊರಟ. ಅಚಾನಕ್ಕಾಗಿ ಸಿಕ್ಕ ಮುತ್ತಿನಿಂದ ಪುಳಕಿತಳಾದ ವಿನುತಾ ಕೆನ್ನೆಯೆಲ್ಲ ನಾಚಿಕೆಯಿಂದ ಕೆಂಪಗಾಗಿತ್ತು.  ಆ ಮುತ್ತಿನ ಗುಂಗಿನಲ್ಲೇ ಕೆಲಕಾಲ ಮುಗುಳ್ನಗೆಯಲ್ಲಿ ಕಳೆದಳು. ಆಮೇಲೆ ನಿಧಾನಕ್ಕೆ ಟ್ರೀ ಹೌಸ್ ನಿಂದ ಕೆಳಗಿಳಿದು ಮನೆಗೆ ಹೋದಳು.

ಆ ರಾತ್ರಿ - ಪಂಚಮಿಯ ರಾತ್ರಿ. ವಿಚಿತ್ರವಾದ ನಿಶಬ್ದದಿಂದ ಕೂಡಿತ್ತು.  ಎಲ್ಲರೂ ರಾತ್ರಿ ಊಟ ಮುಗಿಸಿ ಮಲಗಲು ತಯಾರಾಗುತ್ತಿದ್ದರು. "ವಿಕ್ರಮ, ನಾಳೆ ಷಷ್ಠಿ ಆದ ಕಾರಣ, ನಮ್ಮೂರಿನ ದೇವಸ್ಥಾನಕ್ಕೆ ಹೋಗಿ ನಾಗನ ಕಲ್ಲಿಗೆ ಹಾಲೆರೆಯಲು ಹೋಗಲಿಕ್ಕಿದೆ. ಬೆಳಿಗ್ಗೆ ಬೇಗನೆ ತಯಾರಾಗು." ಅಂತ ವಿಮಲಾ ನೆನಪಿಸಿದಳು. "ಸರಿ ಅತ್ತೆ. ಬೆಳಿಗ್ಗೆ ಬೇಗನೆ ತಯಾರಾಗ್ತೇನೆ" ಅಂದು ವಿಕ್ರಮ ತನ್ನ ಕೋಣೆಗೆ ಹೋದ. ಎಲ್ಲ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಟ್ಟು ವಿಮಲಾ ಕೂಡ ತನ್ನ ಕೊನೆಗೆ ಹೋಗಿ ಮಲಗಿದಳು. ಸುಮಾರು ಅರ್ಧರಾತ್ರಿಯ ಸಮಯ. ವಿಕ್ರಮ ಗಾಢವಾದ ನಿದ್ರೆಯಲ್ಲಿದ್ದ. ಏಕಾಏಕಿಯಾಗಿ ಒಂದು ವಿಚಿತ್ರವಾದ ಸದ್ದು ಕೇಳಿಸಿ ವಿಕ್ರಮ ಎಚ್ಚರಗೊಂಡ. 

ಆ ಸದ್ದು ವಿನುತಾಳ ಕೋಣೆ ಕಡೆಯಿಂದ ಕೇಳಿಸಿದಂತೆ ಭಾಸವಾಯಿತು. ಭೀತಗೊಂಡ ವಿಕ್ರಮ ಎದೆ ತಡಕಾಡುತ್ತಾ ತನ್ನ ಕೋಣೆಯಿಂದ ಹೊರಬಂದ. ಆ ಸಮಯಕ್ಕೆ ವಿನುತಾಳ ಕೋಣೆಯ ಕಡೆಯಿಂದ ಹೊರಬಂದ ದೊಡ್ಡ ನಗರಹಾವೊಂದು ಹೊರಗೆ ಹೋಗುತ್ತಿತ್ತು. ಮತ್ತಷ್ಟು ಭಯಗೊಂಡ ವಿಕ್ರಮ ವಿನುತಾಳ ಕೋಣೆ  ಕಡೆ ಓಡಿದ. ಮೃದುವಾದ ದನಿಯಲ್ಲಿ "ವಿನುತಾ" ಎಂದು ಕರೆದ. ಮೆಲ್ಲನೆ ಅವಳ ಕೋಣೆಯ  ಬಾಗಿಲು ದೂಡಿ ನೋಡಿದ. ಅವಳು ಅಲ್ಲಿ ಕಾಣಿಸಲಿಲ್ಲ.  ಭಯದಿಂದ ಹೊರಗೆ ಓಡಿ  ಸುತ್ತಲೂ ಹುಡುಕಾಡಿದ. ಆದರೆ ಅವಳ ಸುಳಿವು ಸಿಗಲಿಲ್ಲ. ಅಷ್ಟರಲ್ಲಿ ಅದೇ ನಾಗರಹಾವು ಅವನತ್ತ ಹೆಡೆಯೆತ್ತಿ ತಿರುಗಿ ನೋಡಿತು. ವಿಕ್ರಮನಿಗೆ ಅದೊಂದು ಸಂದೇಶದಂತೆ ಭಾಸವಾಯಿತು.  ನನ್ನ ಹಿಂದೆ ಬಾ ಅಂತ ಸನ್ನೆ ಮಾಡಿದಂತೆ ವಿಕ್ರಮನಿಗೆ  ಅನಿಸಿತು. ಹಾವು ನಿಧಾನವಾಗಿ ಮುಂದೆ ಸರಿಯಿತು. ವಿಕ್ರಮನಿಗೆ ಏನೋ ಆಕರ್ಷಣೆಯಾದಂತಾಗಿ, ಆ ಹಾವನ್ನು ಹಿಂಬಾಲಿಸಿದ. 

***

ಆ ಹಾವು ಮನೆಯ ಪಕ್ಕದಲ್ಲಿದ್ದ  ನದಿ ಮಾರ್ಗವಾಗಿ  ಚಲಿಸಿ, ಒಂದು ಬೆಟ್ಟದ ಬುಡದಲ್ಲಿದ್ದ ಗುಹೆಯೊಳಗೆ ಪ್ರವೇಶಿಸಿತು. ಹಾವನ್ನು ಹಿಂಬಾಲಿಸಿದ ವಿಕ್ರಮನೂ ಆ ಗುಹೆ ಪ್ರವೇಶಿಸಿದ. ತಂಪಾಗಿದ್ದ ಆ ಗುಹೆಯೊಳಗೆ ಸ್ವಲ್ಪ ಮುಂದೆ ಸಾಗಿದಾಗ, ಒಂದು ದೊಡ್ಡ ಹಳೆಯ ಪೆಟ್ಟಿಗೆ ಕಂಡಿತು. ಅದು ಸಾಮಾನ್ಯವಾದ  ಪೆಟ್ಟಿಗೆಯಾಗಿರಲಿಲ್ಲ. ರಾಜಮಹಾರಾಜರ ಕಾಲದ ಪೆಟ್ಟಿಗೆಯಂತೆ ಭಾಸವಾಯಿತು. ವಿಕ್ರಮನಿಗೆ ಕುತೂಹಲವಿದ್ದರೂ, ಮನೆಯಲ್ಲಿ ಹೇಳದೆ ಅದನ್ನು ತೆರೆಯಲು ಯತ್ನಿಸಲಿಲ್ಲ. ಮನೆಯಲ್ಲಿ ಮಾತನಾಡಿ ಆಮೇಲೆ ಇದರ ಬಗ್ಗೆ ನೋಡೋಣ ಅಂದುಕೊಂಡು, ಮನೆಗೆ ಹಿಂದಿರುಗಿದ. ಯಾರನ್ನೂ ಗಾಬರಿಗೊಳಿಸುವುದು ಬೇಡ ಅಂದುಕೊಂಡು, ತನ್ನ ಕೊನೆಗೆ ಬಂದು ಮಲಗಿದ. 

ಬೆಳಿಗ್ಗೆ ಎದ್ದ ಕೂಡಲೇ ವಿನುತಾಳ ಕೋಣೆ ಕಡೆ ನೋಡಿದ ವಿಕ್ರಮನಿಗೆ, ವಿನುತಾ ಅಲ್ಲಿರುವುದನ್ನು ಕಂಡು ನಿರಾಳವಾಯಿತು. ಆದರೆ, ಅವಳ ಮೈಯಲ್ಲೆಲ್ಲಾ ಹಳದಿ ಬಣ್ಣದ ಗುಳ್ಳೆಗಳಿದ್ದವು. ಮೆಲ್ಲನೆ ವಿನುತಾಳ ಪಕ್ಕ ಹೋಗಿ, "ನಿನ್ನೆ ರಾತ್ರಿ ನಿನಗೇನಾಗಿತ್ತು?" ಅಂತ ಪ್ರಶ್ನಿಸಿದ. "ಗೊತ್ತಿಲ್ಲ. ನಂಗೆ ತುಂಬಾನೇ ಸುಸ್ತಾಗುತ್ತಿದೆ" ಅಂತ ನಿಧಾನವಾಗಿ ಹೇಳಿ ವಿನುತಾ  ನಿದ್ದೆಗೆ ಜಾರಿದಳು.  ವಿಕ್ರಮನ ಅನುಮಾನ  ಗಟ್ಟಿಯಾಗತೊಡಗಿತು. ಮನೆಯಲ್ಲಿ ಈ ವಿಚಾರವಾಗಿ ಮಾತನಾಡಲೇಬೇಕು ಅಂದುಕೊಂಡು, ಸರಿಯಾದ ಸಮಯಕ್ಕಾಗಿ ಲೆಕ್ಕ ಹಾಕಿದ.

ಆ ದಿನ ಸಾಯಂಕಾಲದ ಹೊತ್ತಿಗೆ, ವಿಮಲಾ ಹಾಗೂ ವಿನೋದ ಇಬ್ಬರೂ ಚಹಾ ಕುಡಿಯುತ್ತಿದ್ದರು. ಅದೇ ಸರಿಯಾದ ಸಮಯ ಎಂದು ವಿಕ್ರಮ ನಿಧಾನವಾಗಿ ವಿಷಯವನ್ನು ಪ್ರಸ್ತಾಪಿಸಿ, ತನ್ನ ಅನುಮಾನವನ್ನು ಸ್ಪಷ್ಟೀಕರಿಸಿದ ವಿಕ್ರಮ. ವಿಮಲಾ ಕಣ್ಣೀರಿಡುತ್ತಾ "ವಿಕ್ರಮ, ನಮ್ಮ ಮನೆತನಕ್ಕೆ ಒಂದು ದೊಡ್ಡ ಹಳೆಕಾಲದ ಶಾಪ ಇದೆ. ಹಳೆಯ ಕಾಲದಲ್ಲಿ, ಇಲ್ಲಿ ಒಂದು ಮಹಾಶಿವನ ದೇವಸ್ಥಾನ ಇತ್ತು. ಸುಮಾರು 5000 ವರ್ಷಗಳಷ್ಟು ಹಳೆಯದು. ಅದನ್ನು ಕಾಪಾಡುತ್ತಿದ್ದ ನಾಗದೇವತೆಯನ್ನು ನಮ್ಮ ಪೂರ್ವಜರು ಅವಮಾನಿಸಿದ್ದರು… ಆಗಿನಿಂದ, ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಈ ಶಾಪ. ಬೇಸರದ ವಿಷಯವೆಂದರೆ, ವಿನುತಾಳೇ ಆ ಶಾಪದ ಬಲಿಯಾಗಿದ್ದಳು. ಪ್ರತಿ ಪಂಚಮಿಯ ರಾತ್ರಿ, ಅವಳು ನಾಗರೂಪಕ್ಕೆ ಬದಲಾಗುತ್ತಾಳೆ… ನಾವು ಏನೂ ಮಾಡಲು ಸಾಧ್ಯವಾಗುತ್ತಿಲ್ಲ." ಅಂತ ಗದ್ಗದಿತ ಕಂಠದಲ್ಲಿ ಹೇಳಿಕೊಂಡಳು. "ಇದಕ್ಕೇನೂ ಪರಿಹಾರವಿಲ್ಲವೇ?" ಎಂದು ವಿಕ್ರಮ ಪ್ರಶ್ನಿಸಿದ. "ತುಂಬ ಪ್ರಯತ್ನ ಪಟ್ಟೆವು ವಿಕ್ರಮ. ಆದರೆ ಪರಿಹಾರ ಏನು ಎಂಬುದು ನಮಗೆ ತಿಳಿಯಲಿಲ್ಲ" ಅಂತ ವಿನೋದ ಹೇಳಿದನು.

"ಈ ಶಾಪವನ್ನು ಮುರಿಯಲೇಬೇಕು." ಎಂದು ತೀರ್ಮಾನಿಸಿಕೊಂಡು ವಿಕ್ರಮ ಮೊತ್ತ ಮೊದಲಿಗೆ ಆ ಹಳ್ಳಿಯ ಜನರೆಲ್ಲರನ್ನೂ ಒಟ್ಟು ಸೇರಿಸಿದ. ಗುಹೆಯ ವಿಚಾರ, ಗುಹೆಯಲ್ಲಿದ್ದ ಪೆಟ್ಟಿಗೆಯ ವಿಚಾರ ತಿಳಿಸಿ, ಊರ ಹಿರಿಯ ಸಮಸ್ತರ ಅನುಮತಿಯಂತೆ, ಆ ಪೆಟ್ಟಿಗೆಯನ್ನು ತೆರೆದ. ಅದರೊಳಗೆ ಪವಿತ್ರವಾದ ಶಿವಲಿಂಗ, ನಾಗನ ಕಲ್ಲುಗಳು ಹಾಗೂ ದೇವಸ್ಥಾನದ ಒಡವೆ ಶಾಸನಗಳು ಸಿಕ್ಕವು. ಅದು ಪುರಾತನ ದೇವಾಲಯದ ಮೂಲ ವಸ್ತುಗಳಾಗಿದ್ದವು. 

ಪ್ರಶ್ನೆ ಇಟ್ಟಾಗ, ಮುಂದಿನ ಪಂಚಮಿಯೊಳಗೆ,ದೇವಸ್ಥಾನದ ಪುನರ್ ನಿರ್ಮಾಣ ಆಗಬೇಕು ಎಂದು ಉತ್ತರ ದೊರಕಿತು.  ಹಳ್ಳಿಯ ಜನರೆಲ್ಲರೂ ಒಟ್ಟು ಸೇರಿ, ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡರು. ಪ್ರತಿ ದಿನ ಹೋಮ, ಪೂಜೆ, ನಾಗಪೂಜೆ ಇತ್ಯಾದಿಗಳು ನಡೆದು, ದೇವಸ್ಥಾನ ನಿರ್ಮಾಣವಾಗಿ, ಅದ್ಧೂರಿಯಾಗಿ ಎಲ್ಲ ಕಾರ್ಯಗಳು ಪಂಚಮಿ ಆಗುತ್ತಲೇ ನಡೆಯಿತು. 

***

ಅಂದು ಮತ್ತೆ ಪಂಚಮಿ. ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಮಂಗಳವಾದ ವಾತಾವರಣ. ಬೆಳ್ಳಗಿನ ಬೆಳಕಿನಲ್ಲಿ ಶಿವಲಿಂಗ ಹೊಳೆಯುತ್ತಿತ್ತು. ಹೋಮದ ಧೂಪದ ವಾಸನೆ ಗಾಳಿಯಲ್ಲಿ ಹರಡಿಕೊಂಡಿತ್ತು. ಹಳ್ಳಿಯ ಪ್ರತಿಯೊಬ್ಬರ ಕಣ್ಣುಗಳಲ್ಲಿ ಒಂದೇ ಆಶೆ— “ಇಂದು ಈ ಶಾಪ ಕೊನೆಯಾಗಬೇಕು."
ಬೆಳಗ್ಗಿನ ಸಮಯದಲ್ಲಿ, ದೇವರ ಪೂಜಾಕಾರ್ಯಗಳು ನೆರವೇರಿತು. ವಿಕ್ರಮ ಹಾಗೂ ವಿನುತಾ ಇಬ್ಬರೂ ಒಟ್ಟಿಗೆ ದೇವರಲ್ಲಿ ಪ್ರಾರ್ಥಿಸಿದರು. ವಿನುತಾಳ ಕಣ್ಣುಗಳಲ್ಲಿ ಭಯವೂ ಇತ್ತು… ಆದರೆ ವಿಕ್ರಮನ ಕೈ ಹಿಡಿದಿದ್ದ ವಿಶ್ವಾಸವೂ ಇತ್ತು. “ನಿನ್ನ ಜೊತೆಗೆ ನಾನು ಇದ್ದೇನೆ…” ಎಂದು ಅವನು ನಿಧಾನವಾಗಿ ಹೇಳಿದ.

ಆ ರಾತ್ರಿ, ವಿನುತಾ ಹಾಗೂ ಮನೆಯವರೆಲ್ಲ ದೇವಸ್ಥಾನದಲ್ಲೇ ಇದ್ದರು. ಹನ್ನೆರಡು ಗಂಟೆ ಆಗುತ್ತಿದ್ದಂತೆ, ಗಾಳಿಯ ಸದ್ದು ಬದಲಾಯಿತು. ದೀಪಗಳ ಜ್ವಾಲೆ ತೂಗತೊಡಗಿತು. ವಿನುತಾಳ ದೇಹ ನಿಧಾನವಾಗಿ ಕಂಪಿಸತೊಡಗಿತು…ಅವಳ ಕಣ್ಣುಗಳು ಬದಲಾಗತೊಡಗಿದವು…ವಿನುತಾ ಮತ್ತೆ ನಾಗರೂಪಕ್ಕೆ ಬದಲಾಗುತ್ತಿದ್ದಾಗ, ದೇವಸ್ಥಾನದ ಗಂಟೆ ತಾನಾಗಿಯೇ "ಢಣ್ ಢಣ್ " ಎಂದು ಮೊಳಗಿತು. ತೂಗುತ್ತಿದ್ದ ದೀಪಗಳ ಆ ಕಿರಣದಲ್ಲಿ—ಒಂದು ಮಹಾ ನಾಗದೇವತೆ ಪ್ರತ್ಯಕ್ಷವಾಯಿತು! ಅದು ಭಯಾನಕವಾಗಿರಲಿಲ್ಲ…ಅದು ದಿವ್ಯವಾಗಿತ್ತು… ಕರುಣೆಯಿಂದ ಕೂಡಿತ್ತು…

ನಾಗದೇವತೆ ಗಂಭೀರ ಧ್ವನಿಯಲ್ಲಿ ಹೇಳಿತು: "ನಿಮ್ಮ ಭಕ್ತಿ, ಶ್ರಮ ಹಾಗೂ ಸ್ಥಿರವಾದ ಬದ್ಧತೆಗೆ ನಾನು ಮೆಚ್ಚಿದೆ. “ಮಾನವನ ಅಹಂಕಾರದಿಂದ ಹುಟ್ಟಿದ ಶಾಪ…
ಇಂದು ಮಾನವನ ಭಕ್ತಿ ಮತ್ತು ಪ್ರೀತಿಯಿಂದ ಮುಕ್ತವಾಗುತ್ತಿದೆ…ವಿಕ್ರಮ…ನಿನ್ನ ಧೈರ್ಯ, ನಿನ್ನ ನಿಷ್ಠೆ…ಮತ್ತು ಈ ಹಳ್ಳಿಯ ಜನರ ಒಗ್ಗಟ್ಟಿನ ಶ್ರಮ— ಇವೆಲ್ಲವು ಈ 5000 ವರ್ಷದ ಶಾಪವನ್ನು ಕೊನೆಗೊಳಿಸಿದೆ…ಇಂದಿಗೆ ನಿಮ್ಮ ಮನೆತನಕ್ಕೆ ಅಂತಿದ್ದ ಶಾಪ ಮುಕ್ತಿಯಾಯಿತು. ನಿಮ್ಮ ಬದುಕು ಬಂಗಾರವಾಗಲಿ" ಎಂದು ಹೇಳಿತು. ವಿನುತಾಳ ನಾಗರೂಪ ನಿಧಾನವಾಗಿ ಕರಗತೊಡಗಿತು. ವಿನುತಾ ತನ್ನ ಸ್ವರೂಪಕ್ಕೆ ಮರಳಿದಳು. ಅವಳು ಅಚಾನಕ್ ನೆಲಕ್ಕೆ ಕುಸಿದು ಬಿದ್ದಳು. “ವಿನುತಾ…!” ಎಂದು ಕರೆದ ವಿಕ್ರಮ ಅವಳತ್ತ ಓಡಿದ. ಮಹಾಶಿವನ ಲಿಂಗಪ್ರಸಾದವನ್ನು ಅರ್ಚಕರು ವಿನುತಾಳ ಹಣೆಗೆ ಹಚ್ಚಿದರು. 

ಕೆಲ ಕ್ಷಣಗಳ ಮೌನ…ವಿನುತಾಳ ಕಣ್ಣಲ್ಲಿ ಮತ್ತೆ ಜೀವ ಬಂದಂತಾಗಿತ್ತು. ಅವಳ ಕಣ್ಣುಗಳು ನಿಧಾನವಾಗಿ ತೆರೆದವು…ಅವಳ ಮುಖದಲ್ಲಿ ಮತ್ತೆ ಆ ಹಳೆಯ ಮಂದಹಾಸ ಅರಳಿತು…ವಿಕ್ರಮನನ್ನು ಅಪ್ಪಿಕೊಂಡು, ಧನ್ಯವಾದ ಸೂಚಿಸಿದಳು. ಗಟ್ಟಿಯಾಗಿ ವಿಕ್ರಮನ ಕೈ ಹಿಡಿದುಕೊಂಡು ಮಂದಹಾಸ ಬೀರುತ್ತಿದ್ದಳು. ಈ ಎರಡು ಜನರ ಜೋಡಿ ಸುಂದರವಾಗಿ ಕಾಣುತ್ತಿತ್ತು. ಹಳ್ಳಿಯ ಜನರೆಲ್ಲ “ಹರ ಹರ ಮಹಾದೇವ!” ಎಂದು ಕೂಗಿ ಸಂತೋಷಪಟ್ಟರು. ಆ ಪುರಾತನ ದೇವಾಲಯ ಮತ್ತೆ ಜೀವಂತವಾಯಿತು. 

ದೇವಾಲಯದ ಗಂಟೆಗಳು ನಿರಂತರವಾಗಿ ಮೊಳಗುತ್ತಾ…ಆಕಾಶದಲ್ಲೇನೋ ಒಂದು ಶಾಂತಿ ಹರಡಿದಂತೆ ಅನಿಸಿತು. ಪ್ರತಿ ವರ್ಷ ಪಂಚಮಿಯಂದು ಮಹೋತ್ಸವ ನಡೆಯತೊಡಗಿತು. 

ವಿಕ್ರಮ ಮತ್ತು ವಿನುತಾ— ಕೇವಲ ಪ್ರೇಮಿಗಳಲ್ಲ…ಒಂದು ಶಾಪವನ್ನು ಮುರಿದ ಜೋಡಿ. ಅವರ ಪ್ರೀತಿ—ಒಂದು ಮನೆತನವನ್ನು ಉಳಿಸಿತು…ಒಂದು ಹಳ್ಳಿಯನ್ನು ಪುನರ್ಜೀವಗೊಳಿಸಿತು… ಕೆಲವು ಶಾಪಗಳು ಭಯದಿಂದ ಅಲ್ಲ, ಭಕ್ತಿಯಿಂದ ಮುರಿಯುತ್ತದೆ. ಕೆಲವು ಪ್ರೇಮಗಳು ಭಾವನೆಗಳನ್ನಲ್ಲ, ಜೀವನವನ್ನು ರೂಪಿಸುತ್ತವೆ. ನಿಜವಾದ ಪ್ರೀತಿ ಇದ್ದಲ್ಲಿ… ದೈವವೂ ತಲೆಬಾಗುತ್ತದೆ…

*** 

  ✍🏻 Deepalaxmi Bhat
Mangaluru