✍🏻ದೀಪಲಕ್ಷ್ಮಿ ಭಟ್, ಮಂಗಳೂರು
ಬೆಟ್ಟದ ತಪ್ಪಲಿನಲ್ಲಿದ್ದ ಚಂದನಹಳ್ಳಿ ಹೆಸರಿನಂತೆಯೇ ಚಂದನದ ಪರಿಮಳ ಹೊತ್ತಿದ್ದ ಊರು. ಮಳೆಗಾಲದಲ್ಲಿ ಹಸಿರು ಹೊದ್ದು ನಿಂತ ಗದ್ದೆಗಳು, ಬೇಸಿಗೆಯಲ್ಲಿ ಬಿರುಕು ಬಿಟ್ಟ ಕೆರೆ, ಮಧ್ಯದಲ್ಲಿ ನೂರಾರು ವರ್ಷಗಳ ಹಳೆಯ ಬಸವೇಶ್ವರನ ಗುಡಿ — ಇವೇ ಆ ಊರಿನ ಗುರುತುಗಳು. ಊರಿನ ಪೂರ್ವದ ತುದಿಯಲ್ಲಿ, ಮಣ್ಣಿನ ಗೋಡೆ ಮತ್ತು ಹೆಂಚಿನ ಸೂರಿನ ಪುಟ್ಟ ಗುಡಿಸಲಿನಂತಹ ಮನೆಯಲ್ಲಿ ಪಾಂಡುರಂಗ, ಅವನ ಹೆಂಡತಿ ಸುಜಾತ, ಮಗಳು ಪಲ್ಲವಿ ಮತ್ತು ಮಗ ಸುಮಂತ ವಾಸವಾಗಿದ್ದರು.
ಪಾಂಡುರಂಗನಿಗೆ ಸ್ವಂತ ಜಮೀನಿರಲಿಲ್ಲ. ಯಾರ ಗದ್ದೆಯಲ್ಲಿ ಕೆಲಸ ಸಿಕ್ಕಿದರೂ ಅಲ್ಲಿ ಕೂಲಿ ಮಾಡುತ್ತಿದ್ದ. ಮಳೆ ಹೆಚ್ಚಾದರೂ ಕೆಲಸವಿರಲಿಲ್ಲ; ಮಳೆ ಬರದಿದ್ದರೂ ಕೆಲಸವಿರಲಿಲ್ಲ. ಬಡವನ ಬದುಕಿನಲ್ಲಿ ಮಳೆಯೂ ಒಂದು ಸಮಸ್ಯೆ, ಬಿಸಿಲೂ ಇನ್ನೊಂದು ಸಮಸ್ಯೆ. ಸುಜಾತ ನಾಲ್ಕು ಮನೆಗಳಲ್ಲಿ ಪಾತ್ರೆ ತೊಳೆದು, ಹಬ್ಬದ ದಿನಗಳಲ್ಲಿ ಹಪ್ಪಳ–ಸಂಡಿಗೆ ಮಾಡಿ ಕೊಟ್ಟು, ಸಿಕ್ಕಷ್ಟು ಹಣವನ್ನು ಮನೆಗೆ ತರುತ್ತಿದ್ದಳು. ಆ ಮನೆಯ ಒಲೆ ಹೊತ್ತಿಕೊಳ್ಳುವುದು ಪ್ರತಿದಿನದ ಹೋರಾಟವಾಗಿದ್ದರೂ, ಮಕ್ಕಳ ಓದು ನಿಲ್ಲಬಾರದು ಎಂಬುದು ಗಂಡ–ಹೆಂಡತಿಯ ಒಂದೇ ಹಠವಾಗಿತ್ತು.
ಪಲ್ಲವಿ ಆ ಮನೆಯ ಹಿರಿಯ ಮಗಳು. ವಯಸ್ಸು ಹದಿನೇಳು. ಬಡತನ ಅವಳ ಮುಖದ ಹೊಳಪನ್ನು ಕಸಿದುಕೊಳ್ಳಲಿಲ್ಲ; ಬದಲಾಗಿ ಕಣ್ಣಿಗೆ ವಯಸ್ಸಿಗಿಂತ ಹೆಚ್ಚಿನ ಗಾಂಭೀರ್ಯ ಕೊಟ್ಟಿತ್ತು. ಶಾಲೆಯಲ್ಲಿ ಯಾವಾಗಲೂ ಮೊದಲ ಸ್ಥಾನ. ಶಿಕ್ಷಕರು ಕೇಳುವ ಪ್ರಶ್ನೆಗೆ ಉತ್ತರ ಗೊತ್ತಿದ್ದರೂ, ಪಕ್ಕದಲ್ಲಿದ್ದ ಗೆಳತಿಗೆ ಅವಕಾಶ ಸಿಗಲಿ ಎಂದು ಕೆಲವೊಮ್ಮೆ ಕೈ ಎತ್ತದೆ ಕುಳಿತುಕೊಳ್ಳುವಷ್ಟು ಮೃದು ಮನಸ್ಸು. ಅವಳ ತಮ್ಮ ಸುಮಂತ ಎಂಟನೇ ತರಗತಿಯಲ್ಲಿ ಓದುತ್ತಿದ್ದ. ಓದಿಗಿಂತ ಗಾಳಿಪಟ, ಗಿಲ್ಲಿದಾಂಡು ಮತ್ತು ಊರ ಕೆರೆಯ ಮೀನುಗಳ ಮೇಲೆಯೇ ಅವನಿಗೆ ಹೆಚ್ಚು ಪ್ರೀತಿ. ಆದರೂ ಅಕ್ಕ ಹೇಳಿದರೆ ಪುಸ್ತಕ ಹಿಡಿದುಕೊಳ್ಳುತ್ತಿದ್ದ.
ಒಂದು ವರ್ಷ ಮಳೆ ಕೈಕೊಟ್ಟಾಗ ಪಾಂಡುರಂಗನಿಗೆ ತಿಂಗಳುಗಟ್ಟಲೆ ಸರಿಯಾದ ಕೆಲಸ ಸಿಗಲಿಲ್ಲ. ಮನೆಯಲ್ಲಿದ್ದ ಅಕ್ಕಿಯ ಡಬ್ಬಿಯ ತಳ ಕಾಣಿಸತೊಡಗಿತು. ಅದೇ ಸಮಯದಲ್ಲಿ ಸುಜಾತಳಿಗೆ ಜ್ವರ ಬಂದು ಕೆಲಸಕ್ಕೆ ಹೋಗಲಾಗಲಿಲ್ಲ. ಆ ರಾತ್ರಿ ಪಲ್ಲವಿ ಅಮ್ಮನ ಹಳೆಯ ಸೀರೆಯನ್ನು ಕೈಯಲ್ಲಿ ಹಿಡಿದು ಬಹಳ ಹೊತ್ತು ನೋಡಿದಳು. ಸೀರೆಯ ಅಂಚು ಹರಿದಿತ್ತು. ಮೂಲೆಯಲ್ಲಿ ಅವಳ ಅಜ್ಜಿ ಬಳಸುತ್ತಿದ್ದ ಕಪ್ಪುಬಣ್ಣದ ಹೊಲಿಗೆ ಯಂತ್ರ ಧೂಳು ಹಿಡಿದು ಕುಳಿತಿತ್ತು.
“ಅಮ್ಮಾ, ಈ ಯಂತ್ರ ಕೆಲಸ ಮಾಡುತ್ತದಾ?” ಎಂದು ಕೇಳಿದಳು.
“ಮಾಡಬಹುದು. ಆದರೆ ಅದನ್ನು ಉಪಯೋಗಿಸಲು ಯಾರಿಗೆ ಬರುತ್ತದೆ? ನಿನ್ನ ಅಜ್ಜಿ ಇದ್ದಾಗ ಎಂಥೆಂಥ ರವಿಕೆ ಹೊಲಿಯುತ್ತಿದ್ದರು ಗೊತ್ತಾ?!” ಎಂದು ಸುಜಾತ ನಿಟ್ಟುಸಿರು ಬಿಟ್ಟಳು.
***
ಮರುದಿನ ಪಲ್ಲವಿ ಶಾಲೆ ಮುಗಿಸಿ ಊರಿನ ದರ್ಜಿಯಾದ ಹಮೀದ್ ಚಾಚಾ ಅವರ ಅಂಗಡಿಗೆ ಹೋದಳು. “ಚಾಚಾ, ನನಗೆ ಹೊಲಿಗೆ ಕಲಿಸುತ್ತೀರಾ? ಹಣ ಈಗ ಕೊಡಲಾಗುವುದಿಲ್ಲ. ಅಂಗಡಿ ಗುಡಿಸುತ್ತೇನೆ, ಗುಂಡಿ ಹೊಲಿಯುತ್ತೇನೆ, ದಾರ ಸುತ್ತಿಡುತ್ತೇನೆ,” ಎಂದಳು.
ಹಮೀದ್ ಚಾಚಾ ಅವಳ ಕಣ್ಣಿನಲ್ಲಿದ್ದ ಸಂಕಲ್ಪವನ್ನು ನೋಡಿ ನಕ್ಕರು. “ಕಲಿಯುವವನಿಂದ ಗುರು ಮೊದಲು ಹಣ ಕೇಳಿದರೆ ವಿದ್ಯೆ ಮುನಿಯುತ್ತದೆ, ಮಗಳೇ. ಬಾ, ಕಲಿಸುತ್ತೇನೆ.”
ಪಲ್ಲವಿಯ ಬೆರಳುಗಳು ಅಕ್ಷರ ಬರೆಯುವುದರಲ್ಲಿ ಎಷ್ಟು ಚುರುಕಾಗಿದ್ದವೋ, ಬಟ್ಟೆಯ ಮೇಲೆ ಗೆರೆ ಎಳೆಯುವುದಲ್ಲಿಯೂ ಅಷ್ಟೇ ಚುರುಕಾದವು. ಮೂರು ತಿಂಗಳಲ್ಲಿ ಸರಳ ರವಿಕೆ, ಮಕ್ಕಳ ಲಂಗ, ದಾವಣಿ, ಚೂಡಿದಾರದ ಮೇಲಂಗಿ ಹೊಲಿಯುವುದನ್ನು ಕಲಿತುಬಿಟ್ಟಳು. ರಾತ್ರಿ ಸೀಮೆಎಣ್ಣೆಯ ದೀಪದ ಬೆಳಕಿನಲ್ಲಿ ಓದುತ್ತಿದ್ದಳು; ಎಲ್ಲರೂ ಮಲಗಿದ ಮೇಲೆ ಯಂತ್ರ ಓಡಿಸುತ್ತಿದ್ದಳು. ಯಂತ್ರದ ಟಕಟಕ ಸದ್ದು ಆ ಮನೆಯ ಬಡತನದ ಎದೆಯ ಮೇಲೆ ಬಡಿಯುವ ಪುಟ್ಟ ಆಶೆಯ ಹೃದಯಬಡಿತದಂತಿತ್ತು.
ಮೊದಲ ಬಾರಿ ನೆರೆಮನೆಯ ಲಕ್ಷ್ಮಕ್ಕ ಕೊಟ್ಟ ರವಿಕೆ ಹೊಲಿದು ಪಲ್ಲವಿಗೆ ಮೂವತ್ತು ರೂಪಾಯಿ ಸಿಕ್ಕಿತು. ಆ ನೋಟನ್ನು ಅವಳು ತನ್ನ ಕಣ್ಣಿಗೊತ್ತಿಕೊಂಡು ಅಮ್ಮನ ಕೈಯಲ್ಲಿಟ್ಟಾಗ ಸುಜಾತಳ ಕಣ್ಣು ತುಂಬಿ ಬಂತು
“ಇದು ನಿನ್ನ ದುಡ್ಡು. ಪುಸ್ತಕ ತೆಗೆದುಕೋ,” ಎಂದಳು.
“ನನ್ನ ಪುಸ್ತಕ ಇನ್ನೂ ಎರಡು ತಿಂಗಳು ಬರುತ್ತದೆ. ಮೊದಲು ಸುಮಂತನ ಶಾಲೆಯ ಶುಲ್ಕ ಕಟ್ಟೋಣ,” ಎಂದ ಪಲ್ಲವಿಯನ್ನು ಪಾಂಡುರಂಗ ಮೌನವಾಗಿ ನೋಡಿದ. ಆ ಕ್ಷಣದಲ್ಲಿ ಮಗಳು ತನಗಿಂತ ಎತ್ತರವಾಗಿ ಬೆಳೆದಿದ್ದಾಳೆ ಎಂದು ಅವನಿಗೆ ಅನಿಸಿತು.
ಹೀಗೆ ದಿನಗಳು ಕಳೆದವು. “ಪಲ್ಲವಿಯ ಕೈಯಲ್ಲಿ ಹೊಲಿಸಿದರೆ ಬಟ್ಟೆ ಮೈಮೇಲೆ ಚೆನ್ನಾಗಿ ಕೂರುತ್ತದೆ,” ಎಂಬ ಮಾತು ಊರಲ್ಲಿ ಹರಡಿತು. ಅವಳು ಅಳತೆ ತೆಗೆದುಕೊಳ್ಳುವಾಗ ಯಾರ ಬಡತನವನ್ನೂ, ಯಾರ ಸಿರಿತನವನ್ನೂ ಅಳೆಯುತ್ತಿರಲಿಲ್ಲ. ಸಮಯಕ್ಕೆ ಕೆಲಸ ಕೊಡುವುದು, ಉಳಿದ ಬಟ್ಟೆಯನ್ನು ಮರಳಿ ಕೊಡುವುದು, ಹಣವಿಲ್ಲದವರಿಗೆ ಕಾಯುವುದು— ಇವುಗಳಿಂದ ಪಲ್ಲವಿಯ ಹೆಸರು ಊರಿನ ನಾಲ್ಕು ಬೀದಿಗಳಿಗೂ ತಲುಪಿತು. ದಿನದಿಂದ ದಿನಕ್ಕೆ, ಅವಳಿಗೆ ಬರುವ ಹೋಳಿಗೆಯ ಸಂಖ್ಯೆ ಕೂಡ ಹೆಚ್ಚಾಯಿತು. ಸಂಪಾದನೆಯೂ ಮನೆಯ ಖರ್ಚು ಕಳೆಯುವಷ್ಟು ಬರತೊಡಗಿತು.
ಒಂದು ಕಾರ್ತಿಕದ ಸಂಜೆ ಹಳೆಯ ಯಂತ್ರದ ಕೆಳಗಿನ ಪೆಟ್ಟಿಗೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಅವಳಿಗೆ ಚಂದನದ ಮರದಿಂದ ಮಾಡಿದ ಪುಟ್ಟ ಪೆಟ್ಟಿಗೆಯೊಂದು ಸಿಕ್ಕಿತು. ಅದರ ಮುಚ್ಚಳದ ಮೇಲೆ ಅರ್ಧಚಂದ್ರ ಮತ್ತು ನಂದಿಯ ಚಿತ್ರ ಕೆತ್ತಲಾಗಿತ್ತು. ಒಳಗೆ ಬೆಳ್ಳಿಯಂತೆ ಹೊಳೆಯುವ ಒಂದು ದಾರದ ಉಂಡೆ, ತಾಮ್ರದ ಸೂಜಿ ಮತ್ತು ಮಸುಕಾದ ಕಾಗದ ಇತ್ತು. ಕಾಗದದಲ್ಲಿ ಅವಳ ಅಜ್ಜಿಯ ಕೈಬರಹ:
“ಈ ದಾರ ಬಟ್ಟೆಯನ್ನು ಮಾತ್ರ ಹೊಲಿಯುವುದಿಲ್ಲ. ಕರುಣೆ ತುಂಬಿದ ಕೈಗೆ ಸಿಕ್ಕರೆ ಮುರಿದ ಮನಸ್ಸನ್ನೂ ಜೋಡಿಸುತ್ತದೆ. ಆದರೆ ಸ್ವಾರ್ಥಕ್ಕಾಗಿ ಬಳಸಿದರೆ ಬಂಧವನ್ನೇ ಹರಿದುಬಿಡುತ್ತದೆ. ಹುಣ್ಣಿಮೆಯ ಬೆಳಕಿನಲ್ಲಿ ಇದರ ನಿಜಬಣ್ಣ ಕಾಣುತ್ತದೆ.”
ಪಲ್ಲವಿ ಅದನ್ನು ಓದಿ ನಕ್ಕಳು. “ಅಜ್ಜಿಯ ಕಥೆಗಳೂ ಅಜ್ಜಿಯ ಜೊತೆಗೆ ಹೋಗಲಿಲ್ಲವಲ್ಲ!” ಎಂದು ದಾರವನ್ನು ಮತ್ತೆ ಪೆಟ್ಟಿಗೆಯಲ್ಲಿ ಇಟ್ಟಳು. ಆದರೆ ಆ ರಾತ್ರಿ ಕಿಟಕಿಯಿಂದ ಬಿದ್ದ ಚಂದ್ರನ ಬೆಳಕು ಪೆಟ್ಟಿಗೆಯ ಸಣ್ಣ ಸಂದಿಯಿಂದ ಒಳನುಗ್ಗಿದಾಗ, ದಾರ ನೀಲಿಬಣ್ಣದ ಮಿಂಚಿನಂತೆ ಹೊಳೆಯುವುದನ್ನು ಅವಳು ಗಮನಿಸಲಿಲ್ಲ.
***
ಚಂದನಹಳ್ಳಿಯ ಪಶ್ಚಿಮ ತುದಿಯಲ್ಲಿ ಶಂಕರೇಗೌಡರ ದೊಡ್ಡ ಮನೆ ಇತ್ತು. ವಿಶಾಲವಾದ ಅಂಗಳ, ತೆಂಗು–ಅಡಿಕೆ ತೋಟ, ಕೊಟ್ಟಿಗೆಯಲ್ಲಿ ಹಸುಗಳು, ಬಾಗಿಲ ಮುಂದೆ ಯಾವಾಗಲೂ ಜನ. ಹಣ, ಜಮೀನು, ಹೆಸರು — ಯಾವುದಕ್ಕೂ ಕೊರತೆಯಿರಲಿಲ್ಲ. ಆದರೆ ಆ ಮನೆಯೊಳಗೆ ಯಾರೂ ಜೋರಾಗಿ ಮಾತನಾಡದ ಒಂದು ದುಃಖವಿತ್ತು. ಅದು ಶಂಕರೇಗೌಡರ ಮೊಮ್ಮಗ ಬಸವ.
ಬಸವ ಹುಟ್ಟಿದಾಗಲೇ ಬೇರೆ ಮಕ್ಕಳಿಗಿಂತ ನಿಧಾನವಾಗಿದ್ದ. ಮಾತು ತಡವಾಗಿ ಬಂತು. ಅಕ್ಷರಗಳು ನೆನಪಿನಲ್ಲಿ ಉಳಿಯಲಿಲ್ಲ. ಮುಖಗಳನ್ನು ಗುರುತಿಸುತ್ತಿದ್ದರೂ, ಜನರ ಮಾತಿನ ಒಳಾರ್ಥ ಅವನಿಗೆ ಅರ್ಥವಾಗುತ್ತಿರಲಿಲ್ಲ. ಜೊತೆಗೆ ಆಗಾಗ ಮೂರ್ಛೆ ಬಂದು ಕೈಕಾಲು ಸೆಳೆತವಾಗುತ್ತಿತ್ತು. ಊರವರು ಅವನನ್ನು “ಪೆದ್ದ ಬಸವ” ಎಂದು ಕರೆಯುತ್ತಿದ್ದರು. ಮಕ್ಕಳು ಹಿಂದೆ ಬಿದ್ದು ಕಿಚಾಯಿಸಿದರೆ ಅವನು ಸಿಟ್ಟಾಗದೆ, ಅವರೊಂದಿಗೆ ನಗುತ್ತಿದ್ದ. ಏಕೆಂದರೆ ಅವರು ತನ್ನನ್ನು ನೋಡಿ ನಗುತ್ತಿದ್ದಾರೆ ಎನ್ನುವುದು ಅವನಿಗೆ ತಿಳಿಯುತ್ತಿರಲಿಲ್ಲ.
ಬಸವನ ತಂದೆ–ತಾಯಿ ಅವನು ಚಿಕ್ಕವನಿದ್ದಾಗಲೇ ಅಪಘಾತದಲ್ಲಿ ಸತ್ತಿದ್ದರು. ಶಂಕರೇಗೌಡ ಮತ್ತು ಅವರ ಹೆಂಡತಿ ಗೌರಮ್ಮನೇ ಅವನನ್ನು ಸಾಕಿದ್ದರು. ನಗರದ ದೊಡ್ಡ ಆಸ್ಪತ್ರೆಗಳು, ದೂರದ ವೈದ್ಯರು, ಔಷಧಿ, ಪೂಜೆ, ಹರಕೆ — ಯಾವುದನ್ನೂ ಬಿಟ್ಟಿರಲಿಲ್ಲ. ಔಷಧಿಯಿಂದ ಮೂರ್ಛೆಯ ತೀವ್ರತೆ ಸ್ವಲ್ಪ ಕಡಿಮೆಯಾಗುತ್ತಿತ್ತು. ಆದರೆ ನಿಯಮಿತವಾಗಿ ಮಾತ್ರೆ ಕೊಡಲು ಮನೆಯವರು ಮರೆತರೆ ಮತ್ತೆ ಹೆಚ್ಚುತ್ತಿತ್ತು. ಕೆಲವು ಮಂದಿ ಜ್ಯೋತಿಷಿಗಳು, “ಮದುವೆಯಾದೊಡನೆ ರೋಗ ಕಡಿಮೆಯಾಗುತ್ತದೆ. ಹೆಂಡತಿಯ ಭಾಗ್ಯದಿಂದ ಹೊಸ ಜೀವನ ಸಿಗುತ್ತದೆ,” ಎಂದಿದ್ದರು.
ಶಂಕರೇಗೌಡರಿಗೆ ಆ ಮಾತು ಕಲ್ಲಿನ ಮೇಲೆ ಬರೆದ ಅಕ್ಷರದಂತಾಯಿತು. ವೈದ್ಯರ ಎಚ್ಚರಿಕೆಗಿಂತ ಜಾತಕದ ಭರವಸೆಯೇ ಅವರ ಮನಸ್ಸಿಗೆ ಸುಲಭವಾಗಿ ಹಿಡಿಸಿತು. ಮೊಮ್ಮಗನ ಮದುವೆಗೆ ಹುಡುಗಿಯರನ್ನು ನೋಡತೊಡಗಿದರು. ಆದರೆ ಬಸವನ ಸ್ಥಿತಿ ತಿಳಿದ ಕೂಡಲೇ ಎಲ್ಲರೂ ಹಿಂದೆ ಸರಿಯುತ್ತಿದ್ದರು.
ಒಂದು ದಿನ ಗೌರಮ್ಮನ ರವಿಕೆ ಹೊಲಿಸಲು ಪಲ್ಲವಿ ದೊಡ್ಡ ಮನೆಗೆ ಹೋದಳು. ಅಂಗಳದಲ್ಲಿ ಬಸವ ನೆಲದ ಮೇಲೆ ಕುಳಿತು ಒಣ ಎಲೆಗಳಿಂದ ನಂದಿಯ ಆಕಾರ ಮಾಡುತ್ತಿದ್ದ. ಗಾಳಿಗೆ ಎಲೆಗಳು ಹಾರಿ ಹೋದಾಗ ಅವನ ಕಣ್ಣು ತುಂಬಿತು. ಕೆಲಸದವರು ನಕ್ಕರು.
“ಮತ್ತೆ ಮಾಡಬಹುದು ಅಲ್ವಾ?” ಎಂದು ಪಲ್ಲವಿ ಅವನ ಬಳಿಯಲ್ಲಿ ಕುಳಿತು ಕೇಳಿದಳು.
“ಗಾಳಿ ಅದನ್ನು ತೆಗೆದುಕೊಂಡು ಹೋಯಿತು. ಗಾಳಿಗೆ ನಂದಿ ಬೇಕಿತ್ತಾ?” ಎಂದು ಅವನು ಮಗುವಿನಂತೆ ಕೇಳಿದ.
“ಬಹುಶಃ ಬೇಕಿರಬಹುದು. ನಾವು ಇನ್ನೊಂದು ಮಾಡೋಣ. ಇದು ಗಾಳಿಗೆ, ಮುಂದಿನದು ನಿನಗೆ,” ಎಂದಳು.
ಅವಳು ಎರಡು ನಿಮಿಷಗಳಲ್ಲಿ ಎಲೆಗಳನ್ನು ಜೋಡಿಸಿ ನಂದಿಯ ರೂಪ ಮಾಡಿಕೊಟ್ಟಳು. ಬಸವ ಅವಳನ್ನು ಅಚ್ಚರಿಯಿಂದ ನೋಡಿದ. “ನಿನ್ನ ಬೆರಳಿಗೆ ಮಾತು ಬರುತ್ತದಾ?” ಎಂದನು.
ಆ ಪ್ರಶ್ನೆ ಪಲ್ಲವಿಗೆ ನಗು ತಂದರೂ, ಮನಸ್ಸಿನ ಆಳದಲ್ಲಿ ಎಲ್ಲೋ ತಾಕಿತು. ಇತರರು ಅವನನ್ನು ದಡ್ಡನೆಂದು ನೋಡಿದರೆ, ಅವನು ಅವಳ ಕೈಯಲ್ಲಿದ್ದ ಸೃಜನಶೀಲತೆ, ಸೃಷ್ಟಿಸುವ ಶಕ್ತಿಯನ್ನು ಕಂಡಿದ್ದ.
ದೂರದಿಂದ ಇದನ್ನೆಲ್ಲ ನೋಡುತ್ತಿದ್ದ ಶಂಕರೇಗೌಡರ ಮನಸ್ಸಿನಲ್ಲಿ ಒಂದು ಯೋಚನೆ ಮೂಡಿತು. "ಪಲ್ಲವಿ ಬಡವಳು, ಆದರೆ ಜಾಣೆ; ಕೆಲಸಗಾರ್ತಿ, ಸಹನೆಯುಳ್ಳವಳು. ಅವಳು ಬಸವನನ್ನು ಮದುವೆಯಾಗಿ ಈ ಮನೆಗೆ ಬಂದರೆ ಬಸವನನ್ನು ಚೆನ್ನಾಗಿ ನೋಡಿಕೊಳ್ಳಬಲ್ಲಳು. ಆದರೆ ಬಸವನ ಆರೋಗ್ಯದ ಬಗ್ಗೆ ತಿಳಿದ ಅವರು ಒಪ್ಪಬಹುದೇ? ಆದರೂ, ಅವಳ ಕುಟುಂಬದ ಬಡತನ — ನಮ್ಮ ಅಂತಸ್ತು, ಹೆಸರು, ಹಣದ ಮುಂದೆ ಅವಳ ಮನೆಯವರು ಒಪ್ಪಬಹುದು" ಎಂದುಕೊಂಡರು.
***
ಮರುದಿನವೇ ಪಾಂಡುರಂಗನ ಮನೆಗೆ ಬಂದರು. ಅವರೊಂದಿಗೆ ಹಣ್ಣು, ಸಿಹಿತಿಂಡಿ, ಹೊಸ ಬಟ್ಟೆ ಮತ್ತು ಮಾತಿನೊಳಗೆ ಮರೆಮಾಡಿದ ಅಧಿಕಾರವೂ ಬಂದಿತ್ತು.
“ನಿನ್ನ ಮಗಳು ನಮ್ಮ ಬಸವನಿಗೆ ಇಷ್ಟವಾಗಿದ್ದಾಳೆ. ಮದುವೆ ಮಾಡಿದರೆ ನಿಮ್ಮ ಸಾಲ ತೀರಿಸುತ್ತೇನೆ. ಮನೆ ಕಟ್ಟಿಸಿಕೊಡುತ್ತೇನೆ. ಸುಮಂತನ ಓದಿನ ಹೊಣೆ ನಮ್ಮದು,” ಎಂದರು.
ಪಾಂಡುರಂಗ ಬೆಚ್ಚಿಬಿದ್ದ. “ಆದರೆ ಗೌಡರೇ... ಬಸವನ ಆರೋಗ್ಯ...”
“ದೇವರ ದಯೆ ಇದ್ದಾರೆ ಸರಿಯಾಗುತ್ತದೆ. ಜಾತಕದಲ್ಲಿ ಸ್ಪಷ್ಟವಾಗಿ ಹೇಳಿದೆ - ಬಸವನಿಗೆ ಮದುವೆಯಾದ ಕೂಡಲೇ ಅವನ ಆರೋಗ್ಯ ಸುಧಾರಿಸಿ, ಹೆಂಡತಿಯ ಭಾಗ್ಯದಿಂದ ಅವನಿಗೆ ಹೊಸ ಹೇವನ ಸಿಗುತ್ತದೆ ಅಂತ. ನಿಮ್ಮ ಮಗಳು ನಮ್ಮ ಮನೆಗೆ ರಾಣಿಯಾಗಿ ಬರುತ್ತಾಳೆ.”
ಪಾಂಡುರಂಗನ ಮನಸ್ಸು ಎರಡು ಭಾಗವಾಯಿತು. ಒಂದು ಭಾಗ, “ಮಗಳನ್ನು ಬಲಿಕೊಡಬೇಡ,” ಎಂದಿತು. ಇನ್ನೊಂದು ಭಾಗ, “ಮಗನ ಓದು, ಹೆಂಡತಿಯ ಔಷಧಿ, ಸಾಲ, ಹಸಿವು—ಎಲ್ಲವೂ ಮುಗಿಯುತ್ತದೆ,” ಎಂದಿತು. ಆ ರಾತ್ರಿ ಅವನು ಸರಿಯಾಗಿ ನಿದ್ರೆ ಮಾಡಲಿಲ್ಲ. ಬೆಳಗ್ಗೆ ಪಲ್ಲವಿಯ ಅಭಿಪ್ರಾಯ ಕೇಳದೇ ಒಪ್ಪಿಗೆ ನೀಡಿಬಿಟ್ಟ.
ವಿಷಯ ತಿಳಿದಾಗ ಪಲ್ಲವಿ ಕಲ್ಲಿನಂತೆ ನಿಂತಳು. “ಅಪ್ಪಾ, ನನ್ನ ಬದುಕಿನ ಬಗ್ಗೆ ನನ್ನನ್ನೇ ಕೇಳಬೇಕೆಂದು ನಿಮಗೆ ಅನಿಸಲಿಲ್ಲವೇ?” ಎಂದು ಕೇಳಿದಳು.
ಪಾಂಡುರಂಗ ತಲೆತಗ್ಗಿಸಿದ. “ನಾನು ತಪ್ಪು ಮಾಡಿದ್ದೇನೆ ಮಗಳೇ. ಆದರೆ ಈ ಬಡತನ... ಸುಮಂತನ ಭವಿಷ್ಯ...”
“ನಮ್ಮ ಬಡತನವನ್ನು ನಾನು ಹೊಲಿಗೆ ಮಾಡಿ ನಿಧಾನವಾಗಿ ಸರಿಪಡಿಸುತ್ತೇನೆ. ಅದಕ್ಕಾಗಿ ನನ್ನ ಜೀವನವನ್ನು ಯಾರಿಗಾದರೂ ಮಾರಬೇಕಾ?” ಅವಳ ಧ್ವನಿ ಗಟ್ಟಿಯಾಗಿದ್ದರೂ ಕಣ್ಣಲ್ಲಿ ನೀರಿತ್ತು.
ಸುಜಾತ ಮಗಳನ್ನು ಅಪ್ಪಿಕೊಂಡಳು. “ನಿನಗೆ ಇಷ್ಟವಿಲ್ಲದಿದ್ದರೆ ಈ ಮದುವೆ ಬೇಡ. ಹಸಿದುಕೊಂಡಾದರೂ ಬದುಕೋಣ.”
ಅದೇ ಸಂಜೆ ಬಸವ ಅವರ ಮನೆಗೆ ಒಬ್ಬನೇ ಬಂದ. ಕೈಯಲ್ಲಿ ಪಲ್ಲವಿ ಮಾಡಿಕೊಟ್ಟ ಒಣ ಎಲೆಯ ನಂದಿ ಇತ್ತು.
“ತಾತ ಹೇಳಿದ, ನೀನು ನಮ್ಮ ಮನೆಗೆ ಬರ್ತೀಯಂತೆ. ಆದರೆ ನೀನು ಅತ್ತಿದ್ದೀಯಂತೆ. ನಾನು ಬೇಡ ಎಂದರೆ ನೀನು ಅಳುವುದಿಲ್ಲವಾ?” ಎಂದು ಕೇಳಿದ.
ಪಲ್ಲವಿ ಅವನ ಮುಖ ನೋಡಿದಳು. ಆ ಮುಖದಲ್ಲಿ ಆಸೆಗಿಂತ ಭಯ ಹೆಚ್ಚಿತ್ತು.
“ನಿನಗೆ ಮದುವೆ ಅಂದ್ರೆ ಏನು ಗೊತ್ತಾ, ಬಸವ?”
“ಗೊತ್ತಿಲ್ಲ. ಗೌರಮ್ಮಜ್ಜಿ ಹೇಳಿದಳು, ನನ್ನ ಮಾತ್ರೆ ಸಮಯಕ್ಕೆ ಕೊಡುವವಳು ಬರುತ್ತಾಳೆ ಅಂತ. ಆದರೆ ನೀನು ನನ್ನ ಅಮ್ಮ ಅಲ್ಲ ಆಲ್ವಾ. ನಿನಗೆ ಇಷ್ಟವಿಲ್ಲದಿದ್ದರೆ ನೀನು ಬರಬೇಡ. ತಾತನಿಗೆ ನಾನು ಹೇಳುತ್ತೇನೆ.”
ಅವನ ಮಾತು ಪಲ್ಲವಿಯ ಮನಸ್ಸಿನೊಳಗೆ ಅಸ್ಪಷ್ಟವಾದ ಬಾಗಿಲೊಂದನ್ನು ತೆರೆದಿತು. ತನ್ನ ಸಮ್ಮತಿಯಿಲ್ಲದೆ ನಡೆಯುತ್ತಿರುವ ಮದುವೆಯಲ್ಲಿ ಬಸವನ ಸಮ್ಮತಿಯೂ ಇಲ್ಲವೆಂಬುದು ಅವಳಿಗೆ ಅರ್ಥವಾಯಿತು. ಸಮಸ್ಯೆ ಬಸವನದಲ್ಲ; ಅವನ ಹೆಸರಿನಲ್ಲಿ ನಿರ್ಧಾರ ಮಾಡುತ್ತಿರುವ ಜನರಲ್ಲಿ ಇದೆ.
ಆ ಕೂಡಲೇ ಅವಳು ಶಂಕರೇಗೌಡರ ಮನೆಗೆ ಹೋದಳು. “ನಾನು ಮದುವೆಗೆ ಒಪ್ಪುತ್ತೇನೆ. ಆದರೆ ಮೂರು ಷರತ್ತುಗಳಿವೆ,” ಎಂದಳು.
ಮನೆಯವರೆಲ್ಲ ಆಶ್ಚರ್ಯದಿಂದ ನೋಡಿದರು.
“ಮೊದಲನೆಯದು, ನನ್ನ ಓದು ನಿಲ್ಲಬಾರದು. ಎರಡನೆಯದು, ನನ್ನ ಅಪ್ಪನ ಸಾಲ ತೀರಿಸುವುದು ಮದುವೆಯ ಬೆಲೆಯಾಗಬಾರದು; ನಾನು ಸಂಪಾದಿಸಿ ಮರಳಿಸುತ್ತೇನೆ. ಮೂರನೆಯದು, ಬಸವನ ಚಿಕಿತ್ಸೆಯನ್ನು ವೈದ್ಯರು ಹೇಳಿದಂತೆ ಮುಂದುವರಿಸಬೇಕು. ಜಾತಕದ ಹೆಸರಿನಲ್ಲಿ ಮಾತ್ರೆ ನಿಲ್ಲಿಸುವಂತಿಲ್ಲ.”
ಶಂಕರೇಗೌಡರಿಗೆ ಅವಳ ಗಟ್ಟಿತನ ಇಷ್ಟವಾಗಲಿಲ್ಲ. ಆದರೂ ಬೇರೆ ದಾರಿ ಇರಲಿಲ್ಲ. “ಆಯಿತು,” ಎಂದರು.
***
ಮದುವೆ ಬಹಳ ಅದ್ದೂರಿಯಾಗಿ ನಡೆಯಿತು. ಊರವರು ಪಲ್ಲವಿಗೆ ದೊರೆತ ಹೊಸ ಸೀರೆ, ಚಿನ್ನದ ಒಡವೆ ನೋಡಿ, “ಪಲ್ಲವಿಯ ಅದೃಷ್ಟ ಚೆನ್ನಾಗಿದೆ. ಒಳ್ಳೆ ಭವಿಷ್ಯ ದೊರೆಯಿತು,” ಎಂದರು. ಕೆಲವರು ಹಿಂದೆ ನಿಂತು, “ಹಣಕ್ಕಾಗಿ ಪೆದ್ದನನ್ನು ಕಟ್ಟಿಕೊಂಡಳು, ಎಂಥಾ ದುರಾಸೆ?” ಎಂದು ಗುಸುಗುಸು ಮಾಡಿದರು. ಮಂಟಪದಲ್ಲಿ ಕುಳಿತ ಪಲ್ಲವಿಗೆ ಎಲ್ಲವೂ ಕೇಳಿಸಿತು. ಬಸವ ಮಾತ್ರ ಮಂಗಳವಾದ್ಯದ ಸದ್ದಿಗೆ ಹೆದರಿ ಕಿವಿ ಮುಚ್ಚಿಕೊಂಡಿದ್ದ.
ತಾಳಿ ಕಟ್ಟುವ ಹೊತ್ತಿಗೆ ದೇವಾಲಯದ ಗಂಟೆ ಯಾರೂ ಮುಟ್ಟದೆ ಮೂರು ಬಾರಿ ಮೊಳಗಿತು. ಅದೇ ಕ್ಷಣದಲ್ಲಿ ಪಲ್ಲವಿಯ ಮನೆಯಲ್ಲಿ ಬಿಟ್ಟಿದ್ದ ಚಂದನದ ಪೆಟ್ಟಿಗೆಯ ಮುಚ್ಚಳ ತಾನೇ ತೆರೆದು, ಬೆಳ್ಳಿನೂಲಿನ ಉಂಡೆಯಿಂದ ಒಂದು ತುದಿ ಹೊರಬಂತು. ಮಂಟಪದಲ್ಲಿ ಬಸವ ಹಠಾತ್ತನೆ ಪಲ್ಲವಿಯ ಕೈ ಹಿಡಿದ.
“ಆ ಗಂಟೆ ನನ್ನನ್ನು ಕರೆಯುತ್ತಿದೆ,” ಎಂದು ನಡುಗಿದ.
“ಯಾವ ಗಂಟೆ?”
“ನೆಲದ ಕೆಳಗಿರುವ ಗಂಟೆ.”
ಅವನ ಮಾತನ್ನು ಯಾರೂ ಗಮನಿಸಲಿಲ್ಲ. ಆದರೆ ಪಲ್ಲವಿಯ ಎದೆಯೊಳಗೆ ಕಾರಣವಿಲ್ಲದ ಚಳಿ ಹರಿಯಿತು.
ಮದುವೆಯ ಮೊದಲ ರಾತ್ರಿ ಬಸವನನ್ನು ಅಲಂಕರಿಸಿದ ಕೋಣೆಗೆ ಕಳುಹಿಸಿ ಹೊರಗೆ ಹೆಂಗಸರು ನಗುತ್ತಿದ್ದರು. ಬಸವ ಬಾಗಿಲ ಬಳಿ ನಿಂತೇ ಇದ್ದ. “ಇಲ್ಲಿ ತುಂಬಾ ಹೂವಿದೆ. ನನಗೆ ವಾಸನೆ ಬೇಡ,” ಎಂದನು. ಪಲ್ಲವಿ ಒಂದೊಂದೇ ಹಾರವನ್ನು ತೆಗೆದು ಹೊರಗಿಟ್ಟಳು. ಹಾಸಿಗೆಯ ಬದಲು ನೆಲದಲ್ಲಿ ಚಾಪೆ ಹಾಸಿ, ಅವನಿಗೆ ನೀರು ಕೊಟ್ಟಳು.
“ಎಲ್ಲರೂ ನೀನು ನನ್ನ ಹೆಂಡತಿ ಅಂದರು. ಹೆಂಡತಿ ಅಂದರೆ ಹೆದರಿಸದವಳಾ?” ಎಂದು ಕೇಳಿದ.
“ಹೆಂಡತಿ ಅಂದರೆ ಜೊತೆಯಾಗಿ ನಡೆಯುವವಳು. ಆದರೆ ನಾವು ಮೊದಲು ಸ್ನೇಹಿತರಾಗೋಣ,” ಎಂದಳು.
“ಆದರೆ ನನಗೆ ವೇಗವಾಗಿ ನಡೆಯಲು ಆಗುವುದಿಲ್ಲ. ನೀನು ಓಡಿದರೆ ನಾನು ಬೀಳುತ್ತೇನೆ. ನಿಧಾನವಾಗಿ ನಡೆ,” ಎಂದನು.
ಪಲ್ಲವಿಯ ತುಟಿಯಲ್ಲಿ ನಗು ಮೂಡಿತು. “ಸರಿ ಆಯ್ತು. ನಿಧಾನವಾಗಿಯೇ ನಡೆಯೋಣ.”
***
ಮದುವೆಯ ಮರುದಿನ ಬೆಳಿಗ್ಗೆ ಬಸವನಿಗೆ ತೀವ್ರ ಮೂರ್ಛೆ ಬಂತು. “ಮದುವೆಯಾದ ತಕ್ಷಣ ಎಲ್ಲ ಸರಿಯಾಗುತ್ತದೆ ಎಂದರಲ್ಲ!” ಎಂದು ಶಂಕರೇಗೌಡ ಕೋಪಗೊಂಡರು. ಮನೆಯವರು ಅವನ ಬಾಯಿಗೆ ಚಮಚ ಹಾಕಲು ಓಡಿದರು. ಪಲ್ಲವಿ ಅವರನ್ನು ತಡೆದು, ವೈದ್ಯರು ಹೇಳಿದ್ದನ್ನು ನೆನಪಿಸಿಕೊಂಡು ಬಸವನ ಸುತ್ತಲಿದ್ದ ಅಪಾಯಕಾರಿ ವಸ್ತುಗಳನ್ನು ದೂರ ಮಾಡಿದಳು, ತಲೆಯ ಕೆಳಗೆ ಮಡಿಸಿದ ಬಟ್ಟೆ ಇಟ್ಟು, ಅವನನ್ನು ಒಂದು ಬದಿಗೆ ಮಲಗಿಸಿ ಸಮಯ ಗಮನಿಸಿದಳು. ಸೆಳೆತ ನಿಂತ ನಂತರ ವೈದ್ಯರಿಗೆ ಕರೆ ಮಾಡಿಸಿದಳು.
ನಗರದ ನರರೋಗ ತಜ್ಞರಾದ ಡಾ. ಅನಿರುದ್ಧ ಬಂದರು. ಹಳೆಯ ಔಷಧಿ ಚೀಟಿಗಳನ್ನು ನೋಡಿ, ಮಾತ್ರೆಗಳು ಸಮಯಕ್ಕೆ ನೀಡಲಾಗದಿರುವುದನ್ನು ತಿಳಿದು ಬೇಸರಪಟ್ಟರು. “ಮದುವೆ ಔಷಧಿಯಲ್ಲ, ಗೌಡರೇ. ಅವನಿಗೆ ನಿಯಮಿತ ಚಿಕಿತ್ಸೆ, ನಿದ್ರೆ, ಸರಿಯಾದ ಆಹಾರ ಮತ್ತು ಒತ್ತಡವಿಲ್ಲದ ವಾತಾವರಣ ಬೇಕು,” ಎಂದರು.
ಪಲ್ಲವಿ ಒಂದು ಪುಸ್ತಕ ಮಾಡಿಕೊಂಡಳು. ಮಾತ್ರೆಯ ಸಮಯ, ನಿದ್ರೆ, ಊಟ, ಮೂರ್ಛೆ ಬಂದ ದಿನ, ಅವಧಿ — ಎಲ್ಲವನ್ನೂ ಬರೆದಳು. ಬಸವನಿಗೆ ದೊಡ್ಡ ಗಡಿಯಾರ ಓದಲು ಆಗದ ಕಾರಣ ಸೂರ್ಯ, ತಟ್ಟೆ, ಚಂದ್ರ ಎಂಬ ಚಿತ್ರಗಳನ್ನು ಬರೆದು ಬೆಳಗಿನ, ಮಧ್ಯಾಹ್ನದ, ರಾತ್ರಿಯ ಮಾತ್ರೆಗಳನ್ನು ಬೇರೆಬೇರೆ ಡಬ್ಬಿಗಳಲ್ಲಿ ಇಟ್ಟಳು. ಪಲ್ಲವಿ ಹೇಳಿದಂತೆ, ಮಾತ್ರೆ ತೆಗೆದುಕೊಂಡಾಗ ಬಸವ ಒಂದು ನಕ್ಷತ್ರಕ್ಕೆ ಬಣ್ಣ ತುಂಬುತ್ತಿದ್ದ.
“ಮೂವತ್ತು ನಕ್ಷತ್ರ ತುಂಬಿದರೆ ಏನು ಕೊಡುತ್ತೀಯ?”
“ಏನು ಬೇಕು?”
“ನಿನ್ನ ಬೆರಳಿಗೆ ಬರುವ ಮಾತುಗಳನ್ನು ನನಗೂ ಕಲಿಸು.”
ಪಲ್ಲವಿ ಅವನಿಗೆ ಹೊಲಿಗೆ ಕಲಿಸಲು ಆರಂಭಿಸಿದಳು. ಮೊದಲು ಬಟ್ಟೆಯ ತುಂಡಿನಲ್ಲಿ ನೇರಗೆರೆ. ಬಸವನ ಕೈ ನಡುಗುತ್ತಿತ್ತು. ದಾರ ಮತ್ತೆ ಮತ್ತೆ ಗಂಟಾಗುತ್ತಿತ್ತು. ಕೆಲಸದವರು ನಕ್ಕಾಗ ಪಲ್ಲವಿ ಯಂತ್ರ ನಿಲ್ಲಿಸಿ, “ಕಲಿಯುವವನನ್ನು ನೋಡಿ ನಗುವವರು ತಮ್ಮ ಅಜ್ಞಾನವನ್ನು ತಾವೇ ತೋರಿಸುತ್ತಾರೆ,” ಎಂದಳು. ಆ ದಿನದಿಂದ ಅವನ ಎದುರು ಯಾರೂ ನಗಲಿಲ್ಲ.
***
ಮದುವೆಯಾದ ಒಂದು ತಿಂಗಳ ನಂತರ ಮೊದಲ ಹುಣ್ಣಿಮೆ ಬಂತು. ಆ ದಿನ ರಾತ್ರಿ ಬಸವ ನಿದ್ರೆಯಲ್ಲಿ ಎದ್ದು ಹಳೆಯ ದೇವಾಲಯದ ಕಡೆ ನಡೆಯತೊಡಗಿದ. ಪಲ್ಲವಿ ಅದನ್ನು ಗಮನಿಸಿ ಅವನ ಹಿಂದೆ ಹೋದಳು. ಕೈಯಲ್ಲಿ ದೀಪವಿಲ್ಲದಿದ್ದರೂ ಅವನು ಕತ್ತಲಲ್ಲಿ ದಾರಿ ತಪ್ಪಲಿಲ್ಲ. ಗುಡಿಯ ಹಿಂಭಾಗದಲ್ಲಿದ್ದ ಬೀಗ ಹಾಕಿದ ಕಲ್ಲಿನ ಬಾಗಿಲ ಬಳಿ ನಿಂತು, “ಅವಳು ಅಳುತ್ತಿದ್ದಾಳೆ,” ಎಂದನು.
“ಯಾರು?”
“ನೂಲು ಹಿಡಿದ ಹುಡುಗಿ. ಅವಳ ಕೈಯಲ್ಲಿ ರಕ್ತ ಇದೆ.”
ಅಷ್ಟರಲ್ಲಿ ನೆಲದ ಕೆಳಗಿಂದ ಗಂಟೆಯ ಸದ್ದು ಕೇಳಿತು. ಪಲ್ಲವಿ ಹೆದರಿ ಬಸವನ ಕೈ ಹಿಡಿದಳು. ಅವನ ಅಂಗೈಯಲ್ಲಿ ಅರ್ಧಚಂದ್ರದ ಆಕಾರದ ನೀಲಿ ಗುರುತು ಕಾಣಿಸಿತು. ಮದುವೆಗೆ ಮೊದಲು ಆ ಗುರುತು ಇರಲಿಲ್ಲ. ಕೂಡಲೇ ಅವಳು ಅಮ್ಮನ ಮನೆಯಿಂದ ತಾನು ತಂದಿದ್ದ ಅಜ್ಜಿಯ ಚಂದನದ ಪೆಟ್ಟಿಗೆಯನ್ನು ತಂದಳು. ಹುಣ್ಣಿಮೆಯ ಬೆಳಕಿನಲ್ಲಿ ಆ ಬೆಳ್ಳಿನೂಲು ನೀಲಿಯಾಗಿ ಹೊಳೆಯಿತು. ದಾರದ ಒಂದು ತುದಿ ಗಾಳಿಯಲ್ಲಿ ತೇಲಿ ಬಸವನ ಅಂಗೈಯಲ್ಲಿದ್ದ ಗುರುತಿನ ಕಡೆಗೆ ಚಾಚಿತು. ಬಸವ ಅದನ್ನು ಮುಟ್ಟಿದ ಕ್ಷಣ ಅವನ ಕಣ್ಣು ಮುಚ್ಚಿತು.
“ನಂದಿನಿ... ಬಾಗಿಲು ತೆಗೆಯಬೇಡ...” ಎಂದು ಅವನು ಅಪರಿಚಿತ ಧ್ವನಿಯಲ್ಲಿ ಹೇಳಿದ.
ಪಲ್ಲವಿ ಬೆಚ್ಚಿ ದಾರವನ್ನು ಹಿಂದಕ್ಕೆ ಎಳೆದಳು. ಬಸವ ಎಚ್ಚರಗೊಂಡು, “ನನಗೆ ನಿದ್ದೆ ಬಂದಿತ್ತಾ?” ಎಂದು ಸಹಜವಾಗಿ ಕೇಳಿದ.
ಅಜ್ಜಿ ಬರೆದಿದ್ದ ಆ ಕಾಗದದ ಹಿಂಭಾಗದಲ್ಲಿ ಇನ್ನೂ ಕೆಲವು ಅಕ್ಷರಗಳಿದ್ದವು. ದೀಪದ ಶಾಖಕ್ಕೆ ಹಿಡಿದಾಗ ಅವು ಸ್ಪಷ್ಟವಾದವು: “ಏಳು ತಲೆಮಾರುಗಳ ಹಿಂದೆ ದೊಡ್ಡ ಮನೆಯ ಉತ್ತರಾಧಿಕಾರಿಯೊಬ್ಬನು ದೇವಾಲಯದ ಹೊಲಿಗೆಗಾರ್ತಿ ನಂದಿನಿಗೆ ಮದುವೆಯ ಮಾತು ಕೊಟ್ಟು ಮೋಸ ಮಾಡಿದ. ಅವಳು ದೇವರ ಉತ್ಸವದ ಧ್ವಜ ಹೊಲಿಯುವಾಗಲೇ ಪ್ರಾಣಬಿಟ್ಟಳು. ಅವಳ ಕೊನೆಯ ಉಸಿರು ಬೆಳ್ಳಿನೂಲಿನಲ್ಲಿ ಸೇರಿತು. ಕ್ಷಮೆ ಇಲ್ಲದ ಬಂಧ ಪ್ರತಿ ತಲೆಮಾರಿನ ಒಬ್ಬ ನಿರಪರಾಧಿಯ ಮನಸ್ಸನ್ನು ಮಂಜಾಗಿಸಿ, ದೇಹವನ್ನು ನಡುಗಿಸುತ್ತದೆ. ಅದನ್ನು ಬಿಡಿಸುವುದು ಮದುವೆಯಲ್ಲ; ಯಾರನ್ನೂ ಬದಲಾಯಿಸುವ ಆಸೆಯಿಲ್ಲದೆ ಒಪ್ಪಿಕೊಳ್ಳುವ ಪ್ರೀತಿ. ಅಪೂರ್ಣ ಧ್ವಜ ಪೂರ್ಣಗೊಂಡು ನೆಲದ ಗಂಟೆ ಮೊಳಗಿದಾಗ ಬಂಧ ಸಡಿಲವಾಗುತ್ತದೆ.”
ಪಲ್ಲವಿ ಬಹಳ ಹೊತ್ತು ಮೌನವಾಗಿ ಕುಳಿತಳು. ಇದು ಅಜ್ಜಿ ಹೆಣೆದ ಕಥೆಯೋ, ನಿಜವಾದ ಶಾಪವೋ ಗೊತ್ತಿರಲಿಲ್ಲ. ಆದರೆ ದೇವಾಲಯದ ನೆಲದೊಳಗಿನ ಗಂಟೆ ಮತ್ತು ಬಸವನ ಬಾಯಿಂದ ಬಂದ “ನಂದಿನಿ” ಎಂಬ ಹೆಸರು ಅವಳನ್ನು ಕಾಡಿತು.
***
ಮರುದಿನ, ಅವಳು ಗೌರಮ್ಮನನ್ನು ಕೇಳಿದಳು. ಗೌರಮ್ಮ ಮೊದಲು ತಪ್ಪಿಸಿಕೊಂಡರೂ, ಕೊನೆಗೆ ಮನೆಯ ಹಳೆಯ ದಾಖಲೆ ಕೋಣೆಯಿಂದ ಒಂದು ಚಿತ್ರ ತಂದುಕೊಟ್ಟರು. ಚಿತ್ರದಲ್ಲಿ ಅರ್ಧ ಹೊಲಿದ ಕೆಂಪು ಧ್ವಜ ಹಿಡಿದ ಯುವತಿ ಇದ್ದಳು. ಕೆಳಗೆ “ನಂದಿನಿ—ದೇವರ ಸೇವಕಿ” ಎಂದು ಬರೆದಿತ್ತು. ಅವಳ ಕಣ್ಣುಗಳು ಪಲ್ಲವಿಯ ಕಣ್ಣುಗಳನ್ನು ಹೋಲುತ್ತಿದ್ದವು.
“ನಿನ್ನ ಅಜ್ಜಿ ಸಾಯುವ ಮೊದಲು ಈ ಮನೆಗೆ ಬಂದಿದ್ದಳು,” ಎಂದರು ಗೌರಮ್ಮ. “ನಂದಿನಿಯ ಕಥೆ ಮುಗಿಯಬೇಕಾದರೆ ಅವಳ ಮೊಮ್ಮಗಳ ವಂಶದ ಹುಡುಗಿ ಬರಬೇಕು ಎಂದಿದ್ದಳು. ಅದಕ್ಕೇ ನಿನ್ನನ್ನು ನೋಡಿದಾಗ ನನಗೆ ಏನೋ ಅನಿಸಿತು. ಆದರೆ ಗೌಡರಿಗೆ ಹೇಳಲು ಧೈರ್ಯವಾಗಲಿಲ್ಲ.”
ಪಲ್ಲವಿಗೆ ಕೋಪ ಬಂತು. “ಹಾಗಾದರೆ ನನ್ನನ್ನು ಸೊಸೆಯಾಗಿ ಅಲ್ಲ, ಶಾಪ ಬಿಡಿಸುವ ಸಾಧನವಾಗಿ ತಂದಿರಾ?”
ಗೌರಮ್ಮ ತಲೆತಗ್ಗಿಸಿದರು. “ನಾವು ತಪ್ಪು ಮಾಡಿದ್ದೇವೆ. ನಮ್ಮನ್ನು ಕ್ಷಮಿಸಿಬಿಡು ತಾಯಿ.”
ಆ ರಾತ್ರಿ ಪಲ್ಲವಿ ಅಮ್ಮನ ಮನೆಗೆ ಹೊರಡಲು ಬಟ್ಟೆ ಜೋಡಿಸಿದಳು. ಬಸವ ಬಾಗಿಲಲ್ಲಿ ನಿಂತು ನೋಡುತ್ತಿದ್ದ.
“ನೀನು ಹೋಗುತ್ತೀಯಾ?”
“ಹೌದು. ಇಲ್ಲಿ ಎಲ್ಲರೂ ನನಗೆ ಸತ್ಯ ಮುಚ್ಚಿಟ್ಟಿದ್ದಾರೆ.”
“ನಾನು ಮುಚ್ಚಿಟ್ಟಿಲ್ಲ. ನನಗೆ ಸತ್ಯವೇ ಗೊತ್ತಿಲ್ಲ,” ಎಂದನು.
ಆ ಒಂದೇ ಮಾತು ಅವಳ ಹೆಜ್ಜೆ ನಿಲ್ಲಿಸಿತು. ದೊಡ್ಡವರ ಸ್ವಾರ್ಥದ ಶಿಕ್ಷೆಯನ್ನು ಬಸವನಿಗೆ ಕೊಡುವುದು ಸರಿಯಲ್ಲ. ಆದರೆ ತನ್ನ ಆತ್ಮಗೌರವವನ್ನೂ ಬಿಡಲಾಗದು. ಮರುದಿನ ಎಲ್ಲರ ಎದುರು ನಿಂತು ಹೇಳಿದಳು: “ನಾನು ಈ ಮನೆಯಲ್ಲಿ ಉಳಿಯುವುದು ಬಸವನಿಗಾಗಿ, ನನ್ನ ನಿರ್ಧಾರದಿಂದ. ನನ್ನನ್ನು ಶಾಪ ಪರಿಹರಿಸುವ ವಸ್ತುವೆಂದು ನೋಡುವವರಿಗಾಗಿ ಅಲ್ಲ. ಇನ್ನು ಮುಂದೆ ಈ ಮನೆಯ ಪ್ರತಿಯೊಂದು ನಿರ್ಧಾರದಲ್ಲೂ ನನಗೆ ಮಾತಿರಬೇಕು. ಇಲ್ಲದಿದ್ದರೆ ಬಸವನನ್ನೂ ಕರೆದುಕೊಂಡು ಹೋಗುತ್ತೇನೆ.”
ಶಂಕರೇಗೌಡ ಮೊದಲ ಬಾರಿಗೆ ಬಡಮನೆಯ ಹುಡುಗಿಯ ಎದುರು ಉತ್ತರಿಸಲಾಗದೆ ನಿಂತರು. ಬಸವ ಪಲ್ಲವಿಯ ಪಕ್ಕ ಬಂದು ನಿಂತ. “ನಾನು ನಿಧಾನವಾಗಿ ನಡೆಯುತ್ತೇನೆ. ಅವಳು ನನ್ನ ಜೊತೆ ಬರುತ್ತಾಳೆ,” ಎಂದನು.
ದಿನಗಳು ಸಾಗಿದವು. ಔಷಧಿ ಮತ್ತು ಕ್ರಮಬದ್ಧ ಜೀವನದಿಂದ ಮೂರ್ಛೆಯ ಪ್ರಮಾಣ ಕಡಿಮೆಯಾಗತೊಡಗಿತು. ಮೊದಲು ವಾರಕ್ಕೊಮ್ಮೆ ಬರುತ್ತಿದ್ದದ್ದು ತಿಂಗಳಿಗೆ ಒಮ್ಮೆ ಆಯಿತು. ಪಲ್ಲವಿ ಬಸವನಿಗೆ ಅಕ್ಷರಗಳ ಬದಲು ಬಣ್ಣ ಮತ್ತು ಚಿತ್ರಗಳಿಂದ ಕೆಲಸ ಕಲಿಸಿದಳು. ಅವನಿಗೆ ವಿನ್ಯಾಸಗಳನ್ನು ನೆನಪಿಡುವ ಅಪೂರ್ವ ಸಾಮರ್ಥ್ಯವಿದೆ ಎಂಬುದು ಅವಳಿಗೆ ಗೊತ್ತಾಯಿತು. ಒಮ್ಮೆ ಕಂಡ ಹೂವಿನ ವಿನ್ಯಾಸವನ್ನು ಅವನು ತಿಂಗಳ ನಂತರವೂ ಸರಿಯಾಗಿ ಬಿಡಿಸುತ್ತಿದ್ದ. ಬಣ್ಣಗಳ ಹೊಂದಾಣಿಕೆಯಲ್ಲಿ ಅವನ ಕಣ್ಣು ಯಾರಿಗೂ ಇರಲಿಲ್ಲ.
“ಬಸವ ದಡ್ಡನಲ್ಲ. ಅವನ ಬುದ್ಧಿ ಹೋಗುವ ದಾರಿ ನಮ್ಮದಕ್ಕಿಂತ ಬೇರೆ,” ಎಂದು ಪಲ್ಲವಿ ಎಲ್ಲರಿಗೂ ಹೇಳುತ್ತಿದ್ದಳು.
ಇಬ್ಬರೂ ಸೇರಿ ಬಟ್ಟೆ ಚೀಲ, ಮಕ್ಕಳ ಅಂಗಿ ಮತ್ತು ದಾವಣಿಗಳ ಮೇಲೆ ಹೊಸ ವಿನ್ಯಾಸಗಳನ್ನು ಮಾಡತೊಡಗಿದರು. ಪಲ್ಲವಿ ಅಳತೆ ಮತ್ತು ಹೊಲಿಗೆ ನೋಡಿಕೊಂಡರೆ, ಬಸವ ಬಣ್ಣ ಮತ್ತು ಅಲಂಕಾರ ಆಯ್ಕೆ ಮಾಡುತ್ತಿದ್ದ. “ಪಲ್ಲವಿ–ಬಸವ ನೂಲಿನ ಮನೆ” ಎಂಬ ಅವರ ಪುಟ್ಟ ಕೆಲಸದ ಕೋಣೆ ಊರಿನ ಹೆಂಗಸರಿಗೆ ಉದ್ಯೋಗ ನೀಡಿತು. ಪಾಂಡುರಂಗನ ಸಾಲವನ್ನು ಪಲ್ಲವಿ ಶಂಕರೇಗೌಡರ ಹಣದಿಂದಲ್ಲ, ತನ್ನ ಸಂಪಾದನೆಯಿಂದ ತೀರಿಸಿದಳು. ಸುಮಂತನ ಓದಿನ ಖರ್ಚನ್ನೂ ತಾನೇ ನೋಡಿಕೊಂಡಳು.
***
ಆದರೂ ಪ್ರತಿ ಹುಣ್ಣಿಮೆಯ ರಾತ್ರಿ ಬಸವನ ಕೈಯಲ್ಲಿದ್ದ ಗುರುತು ನೀಲಿಬಣ್ಣದಲ್ಲಿ ಹೊಳೆಯುತ್ತಿತ್ತು. ನೆಲದ ಗಂಟೆ ಅವನನ್ನು ಕರೆಯುತ್ತಿತ್ತು. ಅಪೂರ್ಣ ಧ್ವಜ ಇನ್ನೂ ಎಲ್ಲಿದೆ ಎಂಬುದು ಗೊತ್ತಿರಲಿಲ್ಲ.
ಒಂದು ದಿನ ಸುಮಂತ ಹಳೆಯ ದೇವಾಲಯದ ಕೆರೆಯಲ್ಲಿ ಆಟವಾಡುವಾಗ ಕಲ್ಲಿನ ಮೆಟ್ಟಿಲ ಕೆಳಗೆ ತಾಮ್ರದ ಕೊಳವೆಯೊಂದು ಕಂಡ. ಅದರೊಳಗೆ ಮಡಚಿಟ್ಟ ಹಳೆಯ ಬಟ್ಟೆಯ ನಕ್ಷೆ ಇತ್ತು. ನಕ್ಷೆಯಲ್ಲಿ ದೇವಾಲಯದ ಗರ್ಭಗುಡಿಯ ಕೆಳಗೆ ಒಂದು ಕೋಣೆ ಗುರುತಿಸಲಾಗಿತ್ತು. ಅದರ ಮೇಲೆ ಬೆಳ್ಳಿನೂಲಿನಿಂದ ಅರ್ಧಚಂದ್ರ ಹೊಲಿಯಲಾಗಿತ್ತು.
ಆ ಕೂಡಲೇ ಅದನ್ನು ಹಿಡಿದುಕೊಂಡು, ಸುಮಂತ ಪಲ್ಲವಿಗೆ ಅದನ್ನು ಕೊಟ್ಟು “ಅಕ್ಕಾ, ಇದು ನಿನ್ನ ಪೆಟ್ಟಿಗೆಯ ಗುರುತಿನ ಹಾಗೆಯೇ ಇದೆ!” ಎಂದ.
ದೇವಾಲಯದ ಹಿರಿಯ ಅರ್ಚಕರ ಅನುಮತಿಯಿಂದ ಶಂಕರೇಗೌಡ, ಪಲ್ಲವಿ, ಬಸವ ಮತ್ತು ಸುಮಂತ ಹಿಂಬಾಗದ ಕಲ್ಲಿನ ಬಾಗಿಲು ತೆರೆದರು. ಕೆಳಗೆ ಇಳಿಯುವ ಮೆಟ್ಟಿಲುಗಳು ಇದ್ದವು. ಗಾಳಿ ತಣ್ಣಗಿತ್ತು. ಗೋಡೆಯ ಮೇಲೆ ದೀಪ ಹಿಡಿದ ಮಹಿಳೆಯರ ಚಿತ್ರಗಳು. ಕೊನೆಯ ಕೋಣೆಯಲ್ಲಿ ದೊಡ್ಡ ಕಂಚಿನ ಗಂಟೆ ನೆಲದೊಳಗೆ ಅರ್ಧ ಮುಳುಗಿತ್ತು. ಅದರ ಪಕ್ಕದ ಕಲ್ಲಿನ ಪೆಟ್ಟಿಗೆಯಲ್ಲಿ ಕಾಲದಿಂದ ಬಣ್ಣ ಮಾಸಿದ ಅರ್ಧ ಹೊಲಿದ ಕೆಂಪು ಧ್ವಜವಿತ್ತು.
ಪಲ್ಲವಿ ಅದನ್ನು ಮುಟ್ಟಿದಾಗ ಕೋಣೆಯೊಳಗೆ ಹೆಣ್ಣಿನ ಅಳುವಿನ ಧ್ವನಿ ಹರಡಿತು. ಬಸವ ನೆಲಕ್ಕುರುಳಿದ. ಅವನಿಗೆ ಹಿಂದೆಂದಿಗಿಂತ ತೀವ್ರವಾದ ಮೂರ್ಛೆ ಆರಂಭವಾಯಿತು. ಪಲ್ಲವಿ ಅವನನ್ನು ಸುರಕ್ಷಿತವಾಗಿ ಬದಿಗೆ ಮಲಗಿಸಿ, ಸುಮಂತನಿಗೆ ವೈದ್ಯರನ್ನು ಕರೆಸಲು ಹೇಳಿದಳು. ಕೈಯಲ್ಲಿದ್ದ ಬೆಳ್ಳಿನೂಲು ತಾನೇ ಬಿಚ್ಚಿಕೊಂಡು ಧ್ವಜದ ಕಡೆ ಸರಿಯತೊಡಗಿತು. ಪಲ್ಲವಿಗೆ “ಧ್ವಜ ಪೂರ್ಣಮಾಡು...” ಎಂಬ ಪಿಸುಮಾತು ಕೇಳಿಸಿತು.
ಪಲ್ಲವಿ ಸೂಜಿ ಹಿಡಿದಳು. ಆದರೆ ಅಜ್ಜಿಯ ಎಚ್ಚರಿಕೆ ನೆನಪಾಯಿತು — ಸ್ವಾರ್ಥಕ್ಕಾಗಿ ಬಳಸಿದರೆ ಬಂಧವನ್ನೇ ಹರಿದುಬಿಡುತ್ತದೆ. ಬಸವ ಗುಣವಾಗಲಿ ಎಂಬುದು ಅವಳ ಆಸೆ. ಆದರೆ ಅವನು ಬದಲಾದಾಗ ಮಾತ್ರ ತನ್ನ ಬದುಕು ಸುಂದರವಾಗುತ್ತದೆ ಎಂಬ ಸ್ವಾರ್ಥವೂ ಅದರೊಳಗೆ ಸೇರಿದೆಯೇ?
ಅವಳು ಸೂಜಿಯನ್ನು ಕೆಳಗಿಟ್ಟಳು.
“ನಂದಿನಿ, ನೀನು ಯಾರೇ ಆಗಿದ್ದರೂ ಕೇಳು. ಬಸವ ಗುಣವಾಗಲೆಂದು ಮಾತ್ರ ನಾನು ಇದನ್ನು ಮಾಡುವುದಿಲ್ಲ. ಅವನು ಈಗಿರುವಂತೆಯೇ ನನಗೆ ಅಪೂರ್ಣನಲ್ಲ. ಅವನ ದೇಹದ ನೋವು ಕಡಿಮೆಯಾಗಲಿ; ಆದರೆ ಅವನ ಮುಗ್ಧತೆಯನ್ನು ಕಿತ್ತುಕೊಂಡು ಬೇರೆ ಮನುಷ್ಯನನ್ನಾಗಿ ಮಾಡುವ ವರ ನನಗೆ ಬೇಡ. ನಿನಗೆ ನ್ಯಾಯ ಸಿಗಬೇಕಾದರೆ, ಮೊದಲು ನಿನಗೆ ಮಾಡಿದ ಅನ್ಯಾಯವನ್ನು ಈ ಮನೆಯವರು ಒಪ್ಪಿಕೊಳ್ಳಬೇಕು,” ಎಂದಳು.
ಶಂಕರೇಗೌಡರ ಕಡೆ ತಿರುಗಿ, “ನಿಮ್ಮ ಪೂರ್ವಜರ ತಪ್ಪಿಗೆ ಬಸವ ಶಿಕ್ಷೆ ಅನುಭವಿಸಬೇಕಿಲ್ಲ. ಆದರೆ ಆ ತಪ್ಪನ್ನು ಮರೆಮಾಡಿ ನಮ್ಮಿಬ್ಬರ ಬದುಕನ್ನು ಬಳಸಿಕೊಳ್ಳಲು ನಿಮಗೂ ಹಕ್ಕಿಲ್ಲ,” ಎಂದಳು.
ಶಂಕರೇಗೌಡರ ಅಹಂಕಾರ ಮೊದಲ ಬಾರಿಗೆ ಸಂಪೂರ್ಣ ಕುಸಿಯಿತು. ಗಂಟೆಯ ಮುಂದೆ ಮಂಡಿಯೂರಿ, “ನಮ್ಮ ಮನೆಯ ಹೆಸರನ್ನು ಉಳಿಸಲು ಒಬ್ಬ ಹೆಣ್ಣಿನ ಹೆಸರನ್ನು ಅಳಿಸಿದ್ದೇವೆ. ಅವಳ ಶ್ರಮವನ್ನು ನಮ್ಮ ಗೌರವವೆಂದು ಮಾಡಿಕೊಂಡಿದ್ದೇವೆ. ಅವಳಿಗೆ ನಡೆದ ಅನ್ಯಾಯಕ್ಕಾಗಿ ಕ್ಷಮೆ ಕೇಳುತ್ತೇನೆ. ಇನ್ನು ಮುಂದೆ ಈ ದೇವಾಲಯದ ಉತ್ಸವದ ಧ್ವಜವನ್ನು ನಂದಿನಿಯ ಹೆಸರಿನಲ್ಲಿ ಏರಿಸುತ್ತೇವೆ. ನಮ್ಮ ಜಮೀನಿನ ಒಂದು ಭಾಗವನ್ನು ವಿಶೇಷ ಅಗತ್ಯವಿರುವ ಮಕ್ಕಳ ಕಲಿಕೆ ಮತ್ತು ಆರೈಕೆಗೆ ಕೊಡುತ್ತೇನೆ,” ಎಂದರು.
ಅಷ್ಟರಲ್ಲಿ ಬಸವನ ಸೆಳೆತ ನಿಧಾನವಾಗಿ ನಿಂತಿತು. ಪಲ್ಲವಿ ಅವನ ಉಸಿರಾಟ ಸರಿಯಾಗಿದೆಯೇ ಎಂದು ನೋಡಿದಳು. ಅವನು ಕಣ್ಣು ತೆರೆದು, “ನಾನು ಬೀಳಲಿಲ್ಲ. ನೆಲವೇ ನನ್ನನ್ನು ಹಿಡಿಯಿತು,” ಎಂದನು.
ಪಲ್ಲವಿ ಕಣ್ಣೀರು ಒರೆಸಿಕೊಂಡು ನಕ್ಕಳು. ನಂತರ ಅಪೂರ್ಣ ಧ್ವಜವನ್ನು ಮಡಿಲಲ್ಲಿ ಇಟ್ಟುಕೊಂಡಳು. ಬೆಳ್ಳಿನೂಲನ್ನು ಸೂಜಿಗೆ ಪೋಣಿಸುವಾಗ ಅವಳ ಬೆರಳಿಗೆ ಸಣ್ಣ ಚುಚ್ಚು ಬಿತ್ತು. ಒಂದು ಹನಿ ರಕ್ತ ನೂಲಿಗೆ ತಾಗಿತು. ನೀಲಿ ಬೆಳಕು ಕೋಣೆಯೆಲ್ಲ ತುಂಬಿತು. ಗೋಡೆಯ ಚಿತ್ರಗಳಲ್ಲಿದ್ದ ದೀಪಗಳು ಒಂದೊಂದಾಗಿ ಹೊತ್ತಿಕೊಂಡವು. ಪಲ್ಲವಿ ಹೊಲಿಯುತ್ತಿದ್ದ ಪ್ರತಿಯೊಂದು ಹೊಲಿಗೆಯೊಂದಿಗೆ ದೂರದ ಕಾಲದಿಂದ ಬಂದ ಹೆಣ್ಣಿನ ಹಾಡೊಂದು ಕೇಳಿಸಿತು. ಬಸವ ಅವಳ ಪಕ್ಕದಲ್ಲಿ ಕುಳಿತು ಬಣ್ಣದ ತುಂಡುಗಳನ್ನು ಸರಿಯಾದ ಕ್ರಮದಲ್ಲಿ ಜೋಡಿಸಿದ. ಕೊನೆಯ ಹೊಲಿಗೆ ಮುಗಿದ ಕ್ಷಣದಲ್ಲಿ ನೆಲದಲ್ಲಿ ಮುಳುಗಿದ್ದ ಗಂಟೆ ತಾನೇ ಎದ್ದು ಒಂದೇ ಬಾರಿ ಮೊಳಗಿತು.
ಆ ಸದ್ದು ಚಂದನಹಳ್ಳಿಯ ಪ್ರತಿಯೊಂದು ಮನೆಯಲ್ಲೂ ಕೇಳಿಸಿತು. ಹೊರಗೆ ಅಮಾವಾಸ್ಯೆಯ ರಾತ್ರಿ ಇದ್ದರೂ, ದೇವಾಲಯದ ಮೇಲೆ ಪೂರ್ಣಚಂದ್ರ ಕಾಣಿಸಿಕೊಂಡನೆಂದು ಊರವರು ನಂತರ ಹೇಳಿಕೊಂಡರು. ಕೆಲವರು ಅದನ್ನು ದೇವರ ಪವಾಡ ಎಂದರು. ಕೆಲವರು ಕಣ್ಣಿನ ಭ್ರಮೆ ಎಂದರು. ಡಾ. ಅನಿರುದ್ಧ ಮಾತ್ರ, “ಅವನ ಚಿಕಿತ್ಸೆಗೆ ಈಗ ಚೆನ್ನಾಗಿ ಸ್ಪಂದನೆ ಸಿಗುತ್ತಿದೆ. ಔಷಧಿ ಮುಂದುವರಿಸಿ,” ಎಂದರು.
***
ಅದಾದ ಮೇಲೆ ಬಸವನಿಗೆ ಮೂರ್ಛೆ ತಪ್ಪಲೆ ಇಲ್ಲ ಎಂದಲ್ಲ. ಆರಂಭದ ಕೆಲವು ತಿಂಗಳುಗಳಲ್ಲಿ ಎರಡು ಬಾರಿ ಸಣ್ಣ ಸೆಳೆತ ಬಂತು. ಪಲ್ಲವಿ ಹೆದರಲಿಲ್ಲ. ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಬದಲಾಯಿಸಿದಳು. ಸುಮಾರು ಒಂದು ವರ್ಷದೊಳಗೆ ಅವನ ಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂತು. ಪರೀಕ್ಷೆಗಳ ಫಲಿತಾಂಶವೂ ಉತ್ತಮವಾಗಿತ್ತು. ವೈದ್ಯರ ಸಲಹೆಯಂತೆ ಔಷಧಿ ಮುಂದುವರಿಯಿತು. ಊರವರು ಅದನ್ನು ಪಲ್ಲವಿಯ ಭಾಗ್ಯ ಎಂದರು; ಶಂಕರೇಗೌಡರು ದೇವಾಲಯದ ಗಂಟೆಯ ಪವಾಡ ಎಂದರು. ಪಲ್ಲವಿಗೆ ಮಾತ್ರ ಸತ್ಯ ಎರಡರ ನಡುವೆ ಇದೆ ಅನಿಸಿತು—ವೈದ್ಯರ ಜ್ಞಾನ, ನಿಯಮಿತ ಆರೈಕೆ, ಬಸವನ ಪ್ರಯತ್ನ ಮತ್ತು ಯಾವುದೋ ಕಾಣದ ಕರುಣೆ ಸೇರಿ ಅವನ ಬದುಕನ್ನು ಹಿಡಿದಿದ್ದವು.
ಬಸವನ ಪೆದ್ದುತನ ಎಂದು ಊರು ಕರೆಯುತ್ತಿದ್ದ ಸ್ವಭಾವ ಮಾತ್ರ ಹಾಗೆಯೇ ಉಳಿಯಿತು. ಅವನಿಗೆ ಲೆಕ್ಕದಲ್ಲಿ ತಪ್ಪಾಗುತ್ತಿತ್ತು. ಗಾದೆಮಾತುಗಳ ಒಳಾರ್ಥ ತಿಳಿಯುತ್ತಿರಲಿಲ್ಲ. ಯಾರಾದರೂ “ನಾಳೆ ಸೂರ್ಯ ಪಶ್ಚಿಮದಲ್ಲಿ ಹುಟ್ಟುತ್ತಾನೆ” ಎಂದರೆ, ಬೆಳಗ್ಗೆ ನಿಜವಾಗಿಯೂ ಪಶ್ಚಿಮದ ಕಿಟಕಿಯ ಬಳಿ ಕಾಯುತ್ತಿದ್ದ. ಆದರೆ ಪಲ್ಲವಿ ಅವನನ್ನು ಬದಲಾಯಿಸಲು ಯತ್ನಿಸಲಿಲ್ಲ. ಹಣದ ಲೆಕ್ಕಕ್ಕೆ ನಂಬಿಗಸ್ತರನ್ನು ನೇಮಿಸಿದಳು; ಅವನಿಗೆ ಚೆನ್ನಾಗಿ ಬರುವ ವಿನ್ಯಾಸದ ಕೆಲಸವನ್ನು ಕೊಟ್ಟಳು.
ಒಮ್ಮೆ ಒಬ್ಬ ಸಂಬಂಧಿ, “ಏನು ಪಲ್ಲವಿ, ನಿನ್ನ ಗಂಡ ಇನ್ನೂ ದಡ್ಡನೇ?” ಎಂದು ಹಾಸ್ಯ ಮಾಡಿದ.
ತಕ್ಷಣ ಬಸವ, “ನಾನು ದಡ್ಡನಾದರೆ ಪಲ್ಲವಿ ಜಾಣೆ. ಮನೆಯಲ್ಲಿ ಒಬ್ಬ ಜಾಣ ಇದ್ದರೆ ಸಾಕಲ್ಲವಾ? ನಿಮ್ಮ ಮನೆಯಲ್ಲಿ ಎಷ್ಟು ಜನ ಜಾಣರಿದ್ದಾರೆ?” ಎಂದು ಕೇಳಿದ. ಸುತ್ತಲಿದ್ದವರು ಜೋರಾಗಿ ನಕ್ಕರು. ಆ ವ್ಯಕ್ತಿ ಮಾತ್ರ ಮುಖ ತಗ್ಗಿಸಿಕೊಂಡು ಹೊರಟ.
ಪಲ್ಲವಿ ಓದನ್ನು ಮುಂದುವರಿಸಿ ಮನೋವಿಜ್ಞಾನ ಮತ್ತು ವಿಶೇಷ ಶಿಕ್ಷಣದಲ್ಲಿ ಪದವಿ ಪಡೆದಳು. ಶಂಕರೇಗೌಡರು ಮಾತು ಕೊಟ್ಟಂತೆ ವಿಶೇಷ ಮಕ್ಕಳ ಕಲಿಕೆ ಹಾಗೂ ಆರೈಕೆಗೆ ಜಮೀನು ನೀಡಿದರು. ಅಲ್ಲಿ “ನಂದಿನಿ ಬದುಕಿನ ಬೆಳ್ಳಿ ದಾರ” ಎಂಬ ಕೇಂದ್ರ ಆರಂಭವಾಯಿತು. ಕಲಿಕೆಯಲ್ಲಿ ನಿಧಾನವಾಗಿರುವ ಮಕ್ಕಳು, ಮೂರ್ಛೆರೋಗದಿಂದ ಶಾಲೆ ಬಿಟ್ಟವರು, ಬೌದ್ಧಿಕ ವಿಶೇಷತೆ ಹೊಂದಿದ ಯುವಕರು ಅಲ್ಲಿ ಓದು, ಚಿತ್ರ, ಹೊಲಿಗೆ, ತೋಟಗಾರಿಕೆ ಮತ್ತು ಜೀವನಕೌಶಲ್ಯ ಕಲಿಯತೊಡಗಿದರು. ಯಾರನ್ನೂ “ಪೆದ್ದ” ಎಂದು ಕರೆಯಲು ಅಲ್ಲಿ ಅವಕಾಶವಿರಲಿಲ್ಲ. ಪ್ರತಿಯೊಬ್ಬರ ಹೆಸರಿನ ಮುಂದೆ ಅವರ ಸಾಮರ್ಥ್ಯವನ್ನು ಬರೆಯಲಾಗುತ್ತಿತ್ತು.
ಸುಮಂತ ಚೆನ್ನಾಗಿ ಓದಿ ವೈದ್ಯನಾದ. ನರರೋಗದಲ್ಲಿ ಪರಿಣತಿ ಪಡೆದು ಊರಿಗೆ ಮರಳಿದ. “ನನ್ನ ಶಾಲಾ ಶುಲ್ಕ ಕಟ್ಟಿದ ಅಕ್ಕನ ಸಾಲ ತೀರಿಸಲು ಬಂದಿದ್ದೇನೆ,” ಎಂದು ಕೇಂದ್ರದಲ್ಲೇ ಉಚಿತ ಆರೋಗ್ಯ ಶಿಬಿರ ನಡೆಸುತ್ತಿದ್ದ. ಪಾಂಡುರಂಗ ಮತ್ತು ಸುಜಾತ ಹೊಸ ಮನೆಯಲ್ಲಿ ವಾಸಿಸಿದರೂ ಹಳೆಯ ಹೊಲಿಗೆ ಯಂತ್ರವನ್ನು ಎಸೆಯಲಿಲ್ಲ. “ಈ ಯಂತ್ರವೇ ನಮ್ಮ ಮನೆಯ ಮೊದಲ ಸಂಪಾದಕ,” ಎಂದು ಅದನ್ನು ಜೋಪಾನವಾಗಿಟ್ಟರು.
***
ವರ್ಷಗಳು ಕಳೆದವು.
“ನಂದಿನಿ ಬದುಕಿನ ಬೆಳ್ಳಿದಾರ” ಕೇಂದ್ರ ಈಗ ಚಂದನಹಳ್ಳಿಯ ಹೆಮ್ಮೆಯಾಗಿತ್ತು. ಒಮ್ಮೆ ಕಲಿಯಲು ಅಸಮರ್ಥರೆಂದು ಶಾಲೆಯಿಂದ ಹೊರಗಿಡಲ್ಪಟ್ಟ ಮಕ್ಕಳು ಅಲ್ಲಿ ಚಿತ್ರ ಬಿಡಿಸುತ್ತಿದ್ದರು, ಬಟ್ಟೆ ಹೊಲಿಯುತ್ತಿದ್ದರು, ಕೈತೋಟ ಮಾಡುತ್ತಿದ್ದರು. ಮಾತನಾಡಲು ಕಷ್ಟಪಡುವ ಮಕ್ಕಳು ಬಣ್ಣಗಳ ಮೂಲಕ ತಮ್ಮ ಮನಸ್ಸನ್ನು ಹೇಳಿಕೊಳ್ಳುತ್ತಿದ್ದರು. ಲೆಕ್ಕದಲ್ಲಿ ಹಿಂದೆ ಉಳಿದವರು ಕೈಮಗ್ಗದಲ್ಲಿ ಅದ್ಭುತ ವಿನ್ಯಾಸಗಳನ್ನು ಮೂಡಿಸುತ್ತಿದ್ದರು. ಪ್ರತಿಯೊಂದು ಮಗುವಿನ ಹೆಸರಿನ ಮುಂದೆ ಅದರ ದೌರ್ಬಲ್ಯವನ್ನಲ್ಲ, ಸಾಮರ್ಥ್ಯವನ್ನು ಬರೆಯಲಾಗುತ್ತಿತ್ತು.
“ಗೌರಿ—ಹಾಡಿನ ಮೂಲಕ ಬೇಗ ಕಲಿಯುತ್ತಾಳೆ.”
“ಮಧು—ಚಿತ್ರಗಳನ್ನು ಒಮ್ಮೆ ನೋಡಿದರೆ ಮರೆಯುವುದಿಲ್ಲ.”
“ಚೇತನ—ಗಿಡಗಳ ಆರೈಕೆಯಲ್ಲಿ ನಿಪುಣ.”
“ರಾಘವ—ಮಾತು ಕಡಿಮೆ; ಆದರೆ ಕರುಣೆ ತುಂಬಿದವನು.”
ಆ ಹೆಸರುಗಳನ್ನು ಓದಿದಾಗಲೆಲ್ಲ ಪಲ್ಲವಿಗೆ ಬಸವ ನೆನಪಾಗುತ್ತಿದ್ದ. ಜನರು ಅವನ ಕೊರತೆಯನ್ನೇ ನೋಡುತ್ತಿದ್ದಾಗ, ಅವನೊಳಗಿನ ಬಣ್ಣಗಳ ಲೋಕವನ್ನು ಗುರುತಿಸಲು ತಾನು ಕೂಡ ಎಷ್ಟು ಸಮಯ ತೆಗೆದುಕೊಂಡಿದ್ದೆ ಎಂಬುದು ನೆನಪಾಗುತ್ತಿತ್ತು.
ಬಸವ ಈಗ ಕೇಂದ್ರದ ಮಕ್ಕಳಿಗೆ ಬಣ್ಣ ಮತ್ತು ವಿನ್ಯಾಸ ಕಲಿಸುತ್ತಿದ್ದ. ಅವನು ಇನ್ನೂ ದೊಡ್ಡ ಲೆಕ್ಕಗಳನ್ನು ತಪ್ಪಿಸುತ್ತಿದ್ದ. ಗಾದೆಮಾತುಗಳನ್ನು ನೇರಾರ್ಥದಲ್ಲಿ ಅರ್ಥಮಾಡಿಕೊಳ್ಳುತ್ತಿದ್ದ. ಕೆಲವೊಮ್ಮೆ ಹೇಳಿದ ಮಾತನ್ನು ಮರೆತು ಮತ್ತೊಮ್ಮೆ ಕೇಳುತ್ತಿದ್ದ. ಆದರೆ ಯಾವ ಮಗು ಯಾವ ಬಣ್ಣವನ್ನು ಇಷ್ಟಪಡುತ್ತದೆ, ಯಾರಿಗೆ ಯಾವ ಸದ್ದಿನಿಂದ ಹೆದರಿಕೆಯಾಗುತ್ತದೆ, ಯಾರಿಗೆ ಯಾವಾಗ ಸ್ವಲ್ಪ ಏಕಾಂತ ಬೇಕಾಗುತ್ತದೆ—ಇವೆಲ್ಲವನ್ನು ಅವನು ಯಾರಿಗಿಂತಲೂ ಬೇಗ ಗುರುತಿಸುತ್ತಿದ್ದ.
ಒಂದು ದಿನ ಕೇಂದ್ರಕ್ಕೆ ಹೊಸದಾಗಿ ಬಂದ ಬಾಲಕನೊಬ್ಬ ಮೂಲೆಯಲ್ಲಿ ಕುಳಿತು ಜೋರಾಗಿ ಅಳುತ್ತಿದ್ದ. ಯಾರೇ ಹತ್ತಿರ ಹೋದರೂ ಕೈಯಲ್ಲಿದ್ದ ವಸ್ತುಗಳನ್ನು ಎಸೆಯುತ್ತಿದ್ದ. ಶಿಕ್ಷಕಿಯರು ಅವನನ್ನು ಸಮಾಧಾನಪಡಿಸಲು ಸಾಧ್ಯವಾಗದೆ ಪಲ್ಲವಿಯನ್ನು ಕರೆದರು.
ಬಸವ ಮಾತ್ರ ದೂರದಲ್ಲಿ ನಿಂತು ಸ್ವಲ್ಪ ಹೊತ್ತು ಅವನನ್ನು ನೋಡಿದ. ನಂತರ ಕೋಣೆಯಲ್ಲಿದ್ದ ಗಂಟೆಯನ್ನು ತೆಗೆದು ಹೊರಗಿಟ್ಟ. ಕಿಟಕಿಯ ಪರದೆಯನ್ನು ಎಳೆದು ಬೆಳಕನ್ನು ಕಡಿಮೆ ಮಾಡಿದ. ಬಾಲಕನ ಹತ್ತಿರ ಹೋಗದೆ, ಸ್ವಲ್ಪ ದೂರದಲ್ಲಿ ಕುಳಿತು ಎರಡು ನೀಲಿ ಬಟ್ಟೆಯ ತುಂಡುಗಳನ್ನು ನೆಲದ ಮೇಲೆ ಇಟ್ಟ.
ಬಾಲಕನ ಅಳು ನಿಧಾನವಾಗಿ ಕಡಿಮೆಯಾಯಿತು. ಸ್ವಲ್ಪ ಹೊತ್ತಿನ ನಂತರ ಅವನು ಬಸವನ ಬಳಿಗೆ ಬಂದು ಒಂದು ನೀಲಿ ಬಟ್ಟೆಯನ್ನು ಕೈಗೆತ್ತಿಕೊಂಡ.
“ಅವನಿಗೆ ಜನರ ಮೇಲಲ್ಲ, ಸದ್ದಿನ ಮೇಲೆ ಕೋಪ ಬಂದಿತ್ತು,” ಎಂದ ಬಸವ.
ಅದನ್ನು ನೋಡುತ್ತಿದ್ದ ಶಂಕರೇಗೌಡರ ಕಣ್ಣು ತೇವಗೊಂಡಿತು. ಹಿಂದೆ ಇದೇ ಮೊಮ್ಮಗನನ್ನು “ಏನೂ ತಿಳಿಯದವನು” ಎಂದುಕೊಂಡಿದ್ದ ನೆನಪು ಅವರನ್ನು ಒಳಗಿನಿಂದ ಚುಚ್ಚಿತು.
“ನಾವು ಬಸವನಿಗೆ ಬದುಕು ಕೊಡಲು ಪಲ್ಲವಿಯನ್ನು ಮನೆಗೆ ತಂದೆವು ಎಂದುಕೊಂಡಿದ್ದೆವು. ಆದರೆ ಅವನೊಳಗೆ ಇಷ್ಟೊಂದು ದೊಡ್ಡ ಬದುಕು ಮೊದಲೇ ಇತ್ತು. ಅದನ್ನು ನೋಡುವ ಕಣ್ಣು ನಮ್ಮಲ್ಲಿರಲಿಲ್ಲ,” ಎಂದರು.
ಪಲ್ಲವಿ ಮೃದುವಾಗಿ ನಕ್ಕಳು. “ಯಾರೂ ಯಾರಿಗೂ ಬದುಕನ್ನು ಕೊಡುವುದಿಲ್ಲ, ತಾತಯ್ಯ. ಕೆಲವೊಮ್ಮೆ ಒಬ್ಬರು ಮತ್ತೊಬ್ಬರ ಬದುಕಿನ ಮೇಲೆ ಬಿದ್ದಿರುವ ಪರದೆಯನ್ನು ಸರಿಸುತ್ತಾರೆ, ಅಷ್ಟೇ.”
***
ಅದೇ ವರ್ಷ ದೇವಾಲಯದ ಜಾತ್ರೆಯಲ್ಲಿ ನಂದಿನಿಯ ಹೆಸರಿನ ಧ್ವಜವನ್ನು ಏರಿಸುವ ದಿನ ಬಂತು. ಪಲ್ಲವಿ ಪೂರ್ಣಗೊಳಿಸಿದ್ದ ಹಳೆಯ ಧ್ವಜವನ್ನು ಸುರಕ್ಷಿತವಾಗಿ ಗಾಜಿನ ಪೆಟ್ಟಿಗೆಯಲ್ಲಿ ಇರಿಸಲಾಗಿತ್ತು. ಅದರ ಮಾದರಿಯ ಹೊಸ ಧ್ವಜವನ್ನು ಕೇಂದ್ರದ ಮಕ್ಕಳು ಮತ್ತು ಊರಿನ ಹೆಂಗಸರು ಒಟ್ಟಾಗಿ ಹೊಲಿದಿದ್ದರು. ಅದರ ಮಧ್ಯದಲ್ಲಿ ನಂದಿ ಅಥವಾ ಅರ್ಧಚಂದ್ರ ಮಾತ್ರ ಇರಲಿಲ್ಲ. ಒಂದಕ್ಕೊಂದು ಬೆಸೆದುಕೊಂಡ ಅನೇಕ ಕೈಗಳ ಚಿತ್ರವಿತ್ತು.
ಧ್ವಜವನ್ನು ಏರಿಸುವ ಮೊದಲು ಶಂಕರೇಗೌಡರು ಊರಿನವರ ಎದುರು ನಿಂತರು. “ಒಂದು ಕಾಲದಲ್ಲಿ ನಮ್ಮ ಮನೆಯ ಗೌರವ ಉಳಿಸಿಕೊಳ್ಳಲು ನಂದಿನಿ ಎಂಬ ಹೆಣ್ಣಿನ ಹೆಸರನ್ನೇ ಅಳಿಸಲಾಗಿತ್ತು. ನಂತರ ನಮ್ಮ ಮನೆಯ ನೋವು ಹೋಗಬೇಕೆಂದು ಮತ್ತೊಬ್ಬ ಹೆಣ್ಣಿನ ಬದುಕನ್ನು ಪರಿಹಾರವಾಗಿ ಬಳಸಲು ಯತ್ನಿಸಿದೆವು. ಹೆಣ್ಣಿನ ತ್ಯಾಗವನ್ನು ಹೊಗಳುತ್ತಾ, ಅವಳ ಸಮ್ಮತಿಯನ್ನು ಮರೆತದ್ದು ನಮ್ಮ ದೊಡ್ಡ ತಪ್ಪು. ಇಂದಿನಿಂದ ಈ ಊರಿನಲ್ಲಿ ಯಾವುದೇ ಹೆಣ್ಣಿನ ಬದುಕನ್ನು ಕುಟುಂಬದ ಸಾಲಕ್ಕಾಗಲಿ, ಜಾತಕದ ದೋಷಕ್ಕಾಗಲಿ, ಮತ್ತೊಬ್ಬರ ರೋಗಕ್ಕಾಗಲಿ ಬಲಿಕೊಡಬಾರದು,” ಎಂದರು.
ಜನರ ನಡುವೆ ನಿಂತಿದ್ದ ಪಾಂಡುರಂಗನ ತಲೆ ತಾನಾಗಿಯೇ ತಗ್ಗಿತು. ಪಲ್ಲವಿಯ ಅಭಿಪ್ರಾಯ ಕೇಳದೆ ಮದುವೆಗೆ ಒಪ್ಪಿದ್ದ ದಿನ ನೆನಪಾಯಿತು. ಕಾರ್ಯಕ್ರಮ ಮುಗಿದ ನಂತರ ಅವನು ಮಗಳ ಬಳಿ ಬಂದು ಅವಳ ಕೈ ಹಿಡಿದ.
“ನನ್ನ ಬಡತನಕ್ಕೆ ನಿನ್ನ ಬದುಕನ್ನೇ ಬೆಲೆ ಕಟ್ಟಲು ಹೊರಟಿದ್ದೆ, ಮಗಳೇ. ನೀನು ನನ್ನನ್ನು ಕ್ಷಮಿಸಿದ್ದೀಯ. ಆದರೆ ನಾನು ನನ್ನನ್ನು ಇನ್ನೂ ಸಂಪೂರ್ಣವಾಗಿ ಕ್ಷಮಿಸಿಕೊಳ್ಳಲಾಗಿಲ್ಲ.”
ಪಲ್ಲವಿ ಅಪ್ಪನ ಕೈಯನ್ನು ತನ್ನ ಎರಡೂ ಕೈಗಳಲ್ಲಿ ಹಿಡಿದಳು.
“ತಪ್ಪನ್ನು ನೆನೆದು ಜೀವಮಾನವೆಲ್ಲ ಶಿಕ್ಷೆ ಅನುಭವಿಸುವುದಕ್ಕಿಂತ, ಮತ್ತೆ ಯಾರ ಬದುಕಿನಲ್ಲೂ ಅಂತಹ ತಪ್ಪಾಗದಂತೆ ನೋಡಿಕೊಳ್ಳುವುದೇ ನಿಜವಾದ ಪ್ರಾಯಶ್ಚಿತ್ತ, ಅಪ್ಪಾ.”
ಆ ಮಾತು ಕೇಳಿದ ಪಾಂಡುರಂಗನ ಕಣ್ಣಿನಿಂದ ಎರಡು ಹನಿ ನೀರು ಜಾರಿತು. ಅದರಲ್ಲಿ ಪಶ್ಚಾತ್ತಾಪವಿತ್ತು; ಜೊತೆಗೆ ಮಗಳ ಬಗ್ಗೆ ಹೆಮ್ಮೆಯೂ ಇತ್ತು.
ಧ್ವಜ ನಿಧಾನವಾಗಿ ಮೇಲೇರಿತು. ಗಾಳಿ ಅದನ್ನು ಅಗಲವಾಗಿ ಬಿಚ್ಚಿತು. ಅದೇ ಕ್ಷಣದಲ್ಲಿ ಹಳೆಯ ದೇವಾಲಯದ ಗಂಟೆ ಯಾರೂ ಮುಟ್ಟದೆ ಒಮ್ಮೆ ಮೃದುವಾಗಿ ಮೊಳಗಿತು. ಈ ಬಾರಿ ಬಸವನ ಅಂಗೈಯಲ್ಲಿ ನೀಲಿ ಗುರುತು ಮೂಡಲಿಲ್ಲ. ಚಂದನದ ಪೆಟ್ಟಿಗೆಯೊಳಗಿನ ಬೆಳ್ಳಿನೂಲು ಹೊಳೆಯಲಿಲ್ಲ. ನೆಲದ ಕೆಳಗಿಂದ ಯಾರ ಅಳುವೂ ಕೇಳಿಸಲಿಲ್ಲ.
ಬಸವ ಪಲ್ಲವಿಯ ಕಿವಿಯ ಬಳಿ ಬಂದು, “ಗಂಟೆ ನಂದಿನಿಗೆ ದಾರಿ ಸಿಕ್ಕಿತು ಅಂತ ಹೇಳಿತಾ?” ಎಂದು ಕೇಳಿದ.
ಪಲ್ಲವಿ ಧ್ವಜದತ್ತ ನೋಡಿದಳು. ಅದರ ಮೇಲೆ ಹೊಲಿದಿದ್ದ ಕೈಗಳು ಗಾಳಿಯಲ್ಲಿ ಒಂದನ್ನೊಂದು ಹಿಡಿದುಕೊಂಡಂತೆ ಕಾಣುತ್ತಿದ್ದವು.
“ಬಹುಶಃ ನಂದಿನಿಗೆ ಮಾತ್ರವಲ್ಲ, ನಮ್ಮೆಲ್ಲರಿಗೂ ದಾರಿ ಸಿಕ್ಕಿತು ಎಂದು ಹೇಳಿರಬಹುದು,” ಎಂದಳು.
“ನನಗೂ?”
“ನಿನಗೆ ಮೊದಲೇ ದಾರಿ ಇತ್ತು ಬಸವ. ನಾವು ಅದನ್ನು ತಡವಾಗಿ ಕಂಡೆವು.”
ಬಸವ ಸ್ವಲ್ಪ ಯೋಚಿಸಿ, “ಹಾಗಾದರೆ ನಾನು ದಾರಿ ತಪ್ಪಿರಲಿಲ್ಲ; ಉಳಿದವರು ನನ್ನ ದಾರಿಯನ್ನು ಗುರುತಿಸಿರಲಿಲ್ಲ ಅಷ್ಟೇನಾ?” ಎಂದು ಕೇಳಿದ.
ಪಲ್ಲವಿಯ ಕಣ್ಣು ತುಂಬಿಬಂತು. ಅವಳು ಅವನ ಕೈಯನ್ನು ಇನ್ನಷ್ಟು ಗಟ್ಟಿಯಾಗಿ ಹಿಡಿದಳು.
“ಹೌದು ಬಸವ. ಅದೇ ಸತ್ಯ.”
***
ಆ ರಾತ್ರಿ ಕೇಂದ್ರದ ಅಂಗಳದಲ್ಲಿ ಮಕ್ಕಳು ತಾವು ಹೊಲಿದ ಬಟ್ಟೆಯ ನಕ್ಷತ್ರಗಳನ್ನು ಮರಗಳಿಗೆ ಕಟ್ಟುತ್ತಿದ್ದರು. ಗಾಳಿ ಬೀಸಿದಾಗ ಅವು ಒಂದಕ್ಕೊಂದು ತಾಗಿ ಮೃದುವಾದ ಸದ್ದು ಮಾಡುತ್ತಿದ್ದವು. ಪಲ್ಲವಿ ಹಳೆಯ ಚಂದನದ ಪೆಟ್ಟಿಗೆಯನ್ನು ತೆರೆದಳು. ಅದರೊಳಗಿನ ಬೆಳ್ಳಿನೂಲು ಈಗ ಸಾಮಾನ್ಯ ಬಿಳಿದಾರದಂತಿತ್ತು.
“ಇದಕ್ಕೆ ಈಗ ಬೆಳಕು ಯಾಕಿಲ್ಲ?” ಎಂದು ಬಸವ ಕೇಳಿದ.
“ಮುರಿದದ್ದನ್ನು ಜೋಡಿಸಲು ಮಾತ್ರ ಅದಕ್ಕೆ ಬೆಳಕು ಬೇಕಿತ್ತು.”
“ಹಾಗಾದರೆ ಅದರ ಬೆಳಕು ಮುಗಿದುಹೋಯಿತಾ?”
ಪಲ್ಲವಿ ಅಂಗಳದಲ್ಲಿದ್ದ ಮಕ್ಕಳತ್ತ ತೋರಿಸಿದಳು. ಓದಲು ಬಾರದ ಬಾಲಕನೊಬ್ಬ ಸುಂದರವಾದ ನವಿಲನ್ನು ಬಿಡಿಸುತ್ತಿದ್ದ. ಮಾತು ಬಾರದ ಹುಡುಗಿಯೊಬ್ಬಳು ಬಣ್ಣದ ಹಾಸಿಗೆಯನ್ನು ನೇಯುತ್ತಿದ್ದಳು. ಮೂರ್ಛೆಯ ಕಾರಣ ಶಾಲೆ ಬಿಟ್ಟಿದ್ದ ಮಗುವೊಂದು ಮತ್ತೆ ಪುಸ್ತಕ ಹಿಡಿದು ಕುಳಿತಿತ್ತು. ದೂರದಲ್ಲಿ ಪಾಂಡುರಂಗ ಒಬ್ಬ ಬಡ ತಂದೆಗೆ, “ಮಗಳ ಓದನ್ನು ಯಾವ ಕಾರಣಕ್ಕೂ ನಿಲ್ಲಿಸಬೇಡಿ,” ಎಂದು ಹೇಳುತ್ತಿದ್ದ.
“ಬೆಳಕು ಮುಗಿದಿಲ್ಲ ಬಸವ. ಅದು ದಾರವನ್ನು ಬಿಟ್ಟು ಮನುಷ್ಯರೊಳಗೆ ಸೇರಿದೆ,” ಎಂದಳು.
“ನಿನ್ನ ಬೆರಳಿಗೆ ಇನ್ನೂ ಮಾತು ಬರುತ್ತದಾ?”
ಪಲ್ಲವಿ ಅವನ ಕೈಯನ್ನು ತನ್ನ ಕೈಯೊಳಗೆ ಸೇರಿಸಿಕೊಂಡಳು. “ನನ್ನ ಬೆರಳಿಗಲ್ಲ ಬಸವ… ಈಗ ನಮ್ಮ ಬದುಕಿಗೇ ಮಾತು ಬಂದಿದೆ.”
ಅವರಿಬ್ಬರ ಮುಂದೆ ಅನೇಕ ಮಕ್ಕಳು ನಗುತ್ತಿದ್ದರು. ಆ ನಗುವಿನಲ್ಲಿ ನಂದಿನಿಯ ಮುಕ್ತಿಯಿತ್ತು; ಪಾಂಡುರಂಗನ ಪ್ರಾಯಶ್ಚಿತ್ತವಿತ್ತು; ಶಂಕರೇಗೌಡರ ಅಹಂಕಾರ ಕರಗಿದ ಸದ್ದಿತ್ತು; ಸಮಾಜ ಅಪೂರ್ಣರೆಂದು ತಳ್ಳಿಹಾಕಿದ ಬದುಕುಗಳ ಹೊಸ ಭರವಸೆಯಿತ್ತು.
ಬಡತನದಿಂದ ಪಾರಾಗಲು ಪಲ್ಲವಿ ಮೊದಲು ಬಟ್ಟೆ ಹೊಲಿಯುವುದನ್ನು ಕಲಿತಿದ್ದಳು. ಆದರೆ ಬದುಕು ಅವಳಿಗೆ ಅದಕ್ಕಿಂತ ದೊಡ್ಡ ಹೊಲಿಗೆಯನ್ನು ಕಲಿಸಿತ್ತು — ತಿರಸ್ಕಾರದಿಂದ ಹರಿದ ಮನಸ್ಸುಗಳನ್ನು ಜೋಡಿಸುವುದು, ಅಜ್ಞಾನದಿಂದ ತುಂಡಾದ ಸಂಬಂಧಗಳನ್ನು ಬೆಸೆಯುವುದು ಮತ್ತು ಅಪೂರ್ಣರೆಂದು ಕರೆಯಲ್ಪಟ್ಟ ಬದುಕುಗಳ ಮೇಲೆ ಹೊಸ ಕನಸುಗಳ ಚಿತ್ತಾರ ಬಿಡಿಸುವುದು.
ಮದುವೆ ಯಾವ ರೋಗಕ್ಕೂ ಔಷಧಿಯಲ್ಲ. ಹೆಣ್ಣಿನ ಬದುಕು ಯಾರ ಜಾತಕದ ದೋಷಕ್ಕೆ ಪರಿಹಾರವೂ ಅಲ್ಲ. ಪ್ರೀತಿ ಎಂದರೆ ಒಬ್ಬರನ್ನು ನಮ್ಮ ಇಷ್ಟದಂತೆ ಬದಲಾಯಿಸುವುದಲ್ಲ; ಅವರು ಇರುವಂತೆಯೇ ಗೌರವಿಸಿ, ಅವರೊಳಗಿನ ಸಾಮರ್ಥ್ಯಕ್ಕೆ ಬೆಳಕು ತೋರಿಸುವುದು. ಮನುಷ್ಯನ ನಿಜವಾದ ಕೊರತೆ ಅವನ ದೇಹದಲ್ಲಾಗಲಿ, ಬುದ್ಧಿಯಲ್ಲಾಗಲಿ ಇರುವುದಿಲ್ಲ; ಮತ್ತೊಬ್ಬನ ವಿಭಿನ್ನತೆಯನ್ನು ಒಪ್ಪಿಕೊಳ್ಳಲಾಗದ ಮನಸ್ಸಿನಲ್ಲಿರುತ್ತದೆ.
ಕೆಲವು ಬಂಧಗಳು ಜಾತಕದಲ್ಲಿ ಬರೆಯಲ್ಪಡುವುದಿಲ್ಲ. ಅವು ಸಮ್ಮತಿಯಿಂದ ಹುಟ್ಟುತ್ತವೆ, ಕರುಣೆಯಿಂದ ಬೆಸೆಯುತ್ತವೆ, ಗೌರವದಿಂದ ಗಟ್ಟಿಯಾಗುತ್ತವೆ ಮತ್ತು ಒಪ್ಪಿಕೊಳ್ಳುವಿಕೆಯಿಂದ ಪೂರ್ಣವಾಗುತ್ತವೆ. ಅಂತಹ ಬಂಧಕ್ಕೆ ಚಿನ್ನದ ಸರ ಬೇಕಿಲ್ಲ. ಕಾಣದ ಒಂದು ಬೆಳ್ಳಿನೂಲೇ ಸಾಕು.
***

