ಗುರುವಾರ, ಜನವರಿ 30, 2014

ಮುಗ್ಧ ಮಗು

ಹಾಲುಗಲ್ಲದ ಕಂದ
ನಿನ್ನಯ ಮುಗ್ಧತೆಯನ್ನು
ನಾನೇನು ಬಣ್ಣಿಸಲಿ?

ಇದ್ದರೂ ಚಿಂದಿಬಟ್ಟೆಯಲಿ
ನೀ ಮೆರೆಯುವೆ ಅರಸನಂತೆ
ನಕ್ಕು ನಲಿದಾಡುತಲಿ ಕುಣಿಯುತಲಿ
ಇತರರನೂ ನಗಿಸುವೆ.

ನಿನ್ನಯ ಆಟಗಳಿಂದ
ಸೆಳೆಯುವೆ ಹಲವರ ದೃಷ್ಟಿಯ
ನಿನ್ನ ಸುಕೋಮಲ ಮಾತುಗಳಿಂ
ಗಳಿಸುವೆ ಹಲವರ ಹೃದಯವ.

ಮಾತುಮಾತಿಗೆ ನಗುವೆ
ಹಲವರ ಮಾತಿಗೆ ಅಳುವೆ
ನಿದಿರೆಯಲ್ಲೂ ನಗುವೆ
ತೊದಲು ಮಾತುಗಳನ್ನಾಡಿ ಆಳುವೆ.

ನಗುನಗುತಲಿ ಸ್ವೀಕರಿಸಿದೆ
ಅಮ್ಮ ನೀಡಿದ ಮುತ್ತನು
ನಿನ್ನಿಂದ ಕಲಿತರೆಲ್ಲರೂ
ಮರೆಯಲು ತಮ್ಮ ಸಿಟ್ಟನು.

ನಿನ್ನಯ ಮುಗ್ಧ ನೋಟವು
ಸೆಳೆಯಿತು ಎಲ್ಲರ ಮನವ
ನಿನ್ನ ಆ ಮುಗ್ಧ ನಡೆಯು
ಕೆರಳಿಸಿತು ಕವಿ ಹೃದಯವ.

ನೀನಾದೆ ಎಲ್ಲರಿಗೂ ಮಾದರಿ
ಸುಂದರವಾದ ಈ ಪ್ರಪಂಚದಿ
ನಗುನಗುತಿರುವ ದಿನಚರಿ
ನೀಡುವುದು ಶಾಂತಿ ಮನದಿ.

ನಿನ್ನಿಂದಾಗಿ ಆಗಲಿ ಈ ಜಗವು
ಸುಖ ಸಂತೋಷ ಸಾಗರ
ಅರಿಯಲಿ ಎಲ್ಲರೂ 'ನಗವು
ನೀಡದು ಕ್ಷಣ ಸುಮಧುರ'.

ನಿನ್ನಿಂದಾಗಿ ತುಂಬಲಿ ಇಲ್ಲಿ
ಸಮಾನತೆಯ ಉಸಿರು
ಇದರಿಂದಾಗಿ ಹರಡಲಿ ಜಗದಿ
ಸುಖಶಾಂತಿಯ ಹಸಿರು.

ಬುಧವಾರ, ಜನವರಿ 29, 2014

ದುಂಬಿಯ ಹಾಡು ಕೇಳಿ..


Composed on 21.07.2001

ಆಹಾ!! ಎಂತಹ ಸುಂದರ ಲೋಕ
ಶ್ರೀಗಂಧದ ನಾಡು ಕರ್ನಾಟಕ.

ಕೆಂದರಿಳ ಹಸಿರು ಬೀಡು
ಎಲ್ಲೆಲ್ಲೂ ಹಕ್ಕಿಗಳ ಹಾಡು
ಶುಭ್ರ ಜಲಪಾತಗಳ ನೋಡು
ಹೇ ಮಾನವಾ..ಮಾಡಬೇಡ ಅದಕೆ ಕೇಡು.

ಸುಗ್ಗಿಕಾಲದ ಹಚ್ಚ ಹಸಿರು
ತಂದಿತು ಈ ನಾಡಿಗೆ ಬಸಿರು
ಎಲ್ಲೆಡೆ ಪಸರಿತು ಶ್ರೀಗಂಧದ ಪನ್ನೀರು
ಹೇ ಮಾನವಾ..  ಎರಚಬೇಡ ಇಲ್ಲಿ ಕೆಸರು.

ಇಲ್ಲಿದೆ ಧಾರ್ಮಿಕ ವೈವಿಧ್ಯತೆ
ಆದರೂ ಈ ವೈವಿಧ್ಯತೆಯಲ್ಲಿದೆ ಐಕ್ಯತೆ
ಕನ್ನಡಿಗರಲ್ಲಿದೆ ಮಾನವೀಯತೆ
ಹೇ ಮಾನವಾ..ಕನ್ನಡದ ಬಗ್ಗೆ ಇರಲಿ ತಾತ್ಪರ್ಯತೆ.

ಬಂತು ವೈಜ್ಞಾನಿಕ ಯುಗ
ತಂದಿತು ನಾಡಿಗೆ ಐಶ್ವರ್ಯದ ಭೋಗ
ಅದನ್ನು ಪಡೆಯಲಿದೆ ನಮಗೆ ಯೋಗ
ಹೇ ಮಾನವಾ.. ಪಸರಿಸಬೇಡ ಇಲ್ಲಿ ವಿವಿಧ ರೋಗ.

ಕನಸಿನ ಲೋಕ

ನಿಶ್ಚಲವಾದ ಪರಿಸರ
ಮುಳುಗಿದ್ದಾನೆ ನೇಸರ...
ಮೌನದ ಮಹದಾವತಾರ
ಕಣ್ಣನೋಟ ನೋಡುತಿದೆ ನೇರ...

ಆ ನೇರ ನೋಟದಲಿ
ನಿನ್ನ ನೆನಪುಗಳ ಚಿಲಿಪಿಲಿ...
ಮಂದಸ್ಮಿತ ಈ ನನ್ನ ತುಟಿಗಳಲಿ
ನಿನ್ನ ಪ್ರೀತಿಯ ಮಧುರ ಸ್ವಾದದಲಿ...

ಕಣ್ಣಂಚಿನಲಿ ಮಿಂಚುತಿದೆ ಪ್ರೀತಿ
ಆ ಪ್ರೀತಿಗೆಂದೂ ಇರದು ಮಿತಿ...
ದೊರೆಯಲು ಮನಸುಗಳ ಸಮ್ಮತಿ
ಪ್ರೀತಿಗೆಂದೂ ಬೀಸದು ತುಸುಭೀತಿ...

ನೋಡುನೋಡುತ್ತಲೇ ಕವಿದಾಯ್ತು ರಾತ್ರಿ
ನನ್ನ ಕನಸುಗಳ ಲೋಕಕೆ ಬಿತ್ತು ಕತ್ರಿ...
ಕನಸುಗಳೊಂದಿಗಿನ ಈ ನನ್ನ ಮೈತ್ರಿ
ಇಂದಿನ ದಿನದಿ ಕೊನೆಯಾಯ್ತು ಖಾತ್ರಿ...

ಮಂಗಳವಾರ, ಜನವರಿ 28, 2014

ದುಃಖಿತ ಮನಸಿನ ದಯನೀಯ ಬೇಡಿಕೆ

ನಾನೇನು ಮಾಡಿದೆನೆಂದು
ಒರಟಾಗಿ ವರ್ತಿಸುವರು?
ಪ್ರೀತಿಗೆ ಶರಣಾದೆನೆಂದು
ಛೀಕಾರ ಹಾಕುವರು...

ಜೀವನವೇ ಸಾಕೆಂದು
ಮನವಿಂದು ಕದಡಿಹುದು
ಭಾವನೆಗೆ ಬೆಲೆಯೆಂದೂ
ಸಿಗದೆಂದು ಅನಿಸಿಹುದು...

ಹೆತ್ತವರ ಪ್ರೀತಿಗೆಂದೂ
ಚೂರಿಯ ಇರಿಯಲಿಲ್ಲ
ನನ್ನ ಮನದ ಪ್ರೀತಿಗೂ
ನಕಾರ ಹಾಕಲಿಲ್ಲ...

ಗೊಂದಲದ ಸಮಯದಿಂದ
ಚೂರಾಗಿರುವೆನು ನಾನು
ನನ್ನ ಮನವ ಅರ್ಥೈಸಿ
ಸಂತಸದ ದಿನವ ನೀಡಿರಿನ್ನು...

ಸೋಮವಾರ, ಜನವರಿ 27, 2014

ಎಂತಹ ನಿಸ್ವಾರ್ಥ.... ಬರೆದ ದಿನಾಂಕ:26.01.2000

ಭಾರತಾಂಬೆ ನಿಸ್ವಾರ್ಥಿ..
ನಮ್ಮ ತಾಯಿ ನಿಸ್ವಾರ್ಥಿ...

ಶತ್ರುದೇಶದ ಪ್ರಜೆಗಳಿಗೂ
ಆಶ್ರಯವ ನೀಡಿದೆ
ಅವರ ಹಿತದ ರಕ್ಷೆಗಾಗಿ
ನೀ ದೇವರ ಬೇಡಿದೆ.

ಪ್ರಜೆಗಳ ಸುರಕ್ಷೆಗೆ
ನೀನು ಬಲು ಹೋರಾಡಿದೆ
ಬ್ರಿಟಿಷರ ಬಿಡುಗಡೆಯಿಂದ
ಸ್ವತಂತ್ರಳಾಗಿ ಹಾರಾಡಿದೆ

ಸರಕಾರವ ಸೃಷ್ಟಿಸಿ ನೀ
ಜನರ ಸಮಾನತೆಯ ಸಾರಿಹೆ
ಅವರ ಭ್ರಷ್ಟಾಚಾರದಿಂದ ನೀ
ಅತೀವ ನೋವ ತಿಂದಿಹೆ

ನಿನ್ನ ನೋವ ಮತ್ತೂ ಹೆಚ್ಚಿಸಿ
ಕರುಣೆಯಿಲ್ಲದೆ ಮೆರೆವ ಜನರ
ಸ್ವಾರ್ಥ ಅಭಿಮಾನಗಳನು
ಕ್ಷಮಿಸಿ ಬಿಡುವ ಮಹಾತಾಯಿ...

|| ಜೈ ಭಾರತ ಮಾತೆ ||

ಭಾನುವಾರ, ಜನವರಿ 26, 2014

ಸಮಾಧಾನ.....

ಎಲ್ಲಿದೆ ಸಮಾಧಾನದ ಮಾತುಗಳು?
ಬೇಸತ್ತಿದೆ ಹುಡುಕುತ ಈ ಕಂಗಳು.
ನಿಲ್ಲದೆ ಓಡುತ್ತಿದೆ ಎಲ್ಲರ ದಿನಗಳು
ತಾಳ್ಮೆಗೆ ಅವಕಾಶವಿಲ್ಲದ ಪರಿಗಳು.

ಎಲ್ಲೆಲ್ಲಿಯೂ ಅಹಂಕಾರಗಳ ಕಟ್ಟಿರುಳು
ಸ್ವಾಭಿಮಾನಕೆ ಇಲ್ಲ ಎಲ್ಲಿಯೂ ನೆರಳು.
ರೋಷ ತಾಪಗಳ ನಿರಂತರವಾದ ಕದನಗಳು
ತುಂಡರಿಸಿತು ಶಾಂತಿ ಸಮಾಧಾನಗಳ ಬೆರಳು.

ನ್ಯಾಯ-ಅನ್ಯಾಯಗಳ ಕಾದಾಟ ಹಗಲಿರುಳು
ಸದ್ಚಿಂತನೆಗಳಿಗೆ ನೆಲೆಯಾಯಿತು ಮರಳು.
ಪ್ರಾಮಾಣಿಕತೆಗಳಿಗೆ ಆಧಾರ ಸಿಗದಿರಲು
ಮುಗಿಲೇರುತಿಹುದು ಮೋಸ ವಂಚನೆಗಳು.

ವಿನಯ ವಿಧೇಯತೆಗಳಿಗೆ ಕಾರ್ಮೋಡ ಕವಿದಿರಲು
ಮಾನವೀಯತೆ ಗುಣಗಳಿಗೆ ಬೆಲೆಯೊಂದು ಸಿಗದಿರಲು
ಕೊನೆಯಾಗದೆಂದೂ ಸತ್ಯಾಸತ್ಯದ ಹುಡುಕಾಟಗಳು
ಕಾಣದೆಲ್ಲಿಯೂ ನಮಗೆ ಸಮಾಧಾನದ ಮಾತುಗಳು.

ಗುರುವಾರ, ಜನವರಿ 23, 2014

ಜೀವದ ಗೆಳತಿ

ಅಂದು ನಾನು ಅಳುತ್ತಿದ್ದೆ
ಬೇಸರದಿಂದ
ಆಗ ಬಂದಳು ಗೆಳತಿ
'ನಾನಿರುವೆ' ಎಂಬ ಸಾಂತ್ವನದಿಂದ

ಅಂದು ನಾನು ಮಂಕಾಗಿದ್ದೆ
ದುಗುಡದಿಂದ
ಆಗ ಬಂದಳು ಗೆಳತಿ
ದೂರ ಮಾಡಲು ಅದ ಮನದಿಂದ

ಅಂದು ನಾನು ಸೋತಿದ್ದೆ
ಬಳಲಿಕೆಯಿಂದ
ಆಗ ಬಂದಳು ಗೆಳತಿ
ಅರಳಿಸಲು ನನ್ನ ಮುಖಾರವಿಂದ

ಅಂದು ನಾ ನಗುತ್ತಲಿದ್ದೆ
ಸಂತೋಷದಿಂದ
ಆಗ ಬಂದಳು ಗೆಳತಿ
ಹಂಚಿಕೊಳ್ಳಲು ಅದ ಮುದದಿಂದ

ಅಂದು ನಾ ತೊಳಲುತ್ತಲಿದ್ದೆ
ಮಾನಸಿಕ ಉದ್ವೇಗದಿಂದ
ಆಗ ಬಂದಳು ಗೆಳತಿ
ಅಳಿಸಲು ಅದನು ನನ್ನಿಂದ

ಅಂದು ನಾನು ಬೀಗುತ್ತಿದ್ದೆ
ಅಹಂಕಾರದಿಂದ
ಆಗ ಬಂದಳು ಗೆಳತಿ
ದೂರ ಮಾಡಲು ಅದ ನನ್ನಾಳದಿಂದ

ಅಂದು ನಾ ಮಲಗಿದ್ದೆ
ಸಾವು ಬದುಕಿನ ಹೋರಾಟದಿಂದ
ಆಗ ಬರಲು ನನ್ನ ಗೆಳತಿ
ಧನ್ಯನಾದೆ ಅವಳ ಸ್ನೇಹದಿಂದ.....