✍🏻ದೀಪಲಕ್ಷ್ಮಿ ಭಟ್, ಮಂಗಳೂರು
ದೂರದಲ್ಲಿ ಯಾರೋ ಮಾತಾಡುತ್ತಿರುವ ಹಾಗೆ ಕೇಳಿಸುತ್ತಿದೆ. ಅದೇನೋ ನನ್ನನು ಹಿಡಿದುಕೊಳ್ಳಿ, ನೀರು ತನ್ನಿ ಅಂತೆಲ್ಲ ಕೇಳಿಸುತ್ತಿತ್ತು. ಎಲ್ಲರೂ ತುಂಬಾ ಗಲಿಬಿಲಿ ಆದ ಹಾಗೆ, ಹೆದರಿದ ಹಾಗೆ ಭಾಸವಾಗುತ್ತಿತ್ತು. ಹಾಗೆ ನಿಧಾನಕ್ಕೆ ನನ್ನ ಕಣ್ಣುಗಳನ್ನು ತೆರೆಯುವ ಪ್ರಯತ್ನ ಮಾಡಿದೆ. ಆದರೆ ಏನೂ ನಿರುತ್ಸಾಹ, ಏನೋ ಬಲಹೀನತೆ. ಕೈಕಾಲು ಎಲ್ಲಿದೆ ಅಂತ ತಿಳಿಯುತ್ತಿಲ್ಲ. ಕಣ್ಣುಗಳು ತೆರೆಯುವ ಮನಸ್ಸು ಮಾಡುತ್ತಿಲ್ಲ. ಹಾಗೆಯೇ ನಿಟ್ಟುಸಿರು ಬಿಟ್ಟು ನಿದ್ದೆಗೆ ಜಾರಿದೆ....
***
ನನ್ನ ಕಿವಿಗಳಿಗೆ ಹತ್ತಿರದಲ್ಲಿಯೇ ನರ್ಸುಗಳ ಇಂಜೆಕ್ಷನ್ ಸೂಜಿ, ಮಾತ್ರೆಗಳು, ನರ್ಸು ಟ್ರೇಗಳ ಸದ್ದು ಕೇಳಿಸುತ್ತಿತ್ತು. ನಿಧಾನವಾಗಿ ಕಣ್ತೆರೆದು ನೋಡಿದರೆ, ಸುತ್ತಲೂ ಬಿಳಿ ಬಟ್ಟೆ, ಬಿಳಿ ಪೈಂಟು ಮಾಡಿದ ಗೋಡೆಗಳು, ಬಿಳಿ ಫ್ಯಾನು. ನೋಡಿದಾಗಲೇ ಗೊತ್ತಾಯಿತು. ನಾನು ಆಸ್ಪತ್ರೆಯಲ್ಲಿದ್ದೇನೆ ಅಂತ. ನನ್ನವರು ಅಂತ ಯಾರೂ ಕಾಣಿಸ್ಲಿಲ್ಲ. ಹಾಗೆ ಸ್ವಲ್ಪ ಹೊತ್ತು ಕಣ್ತೆರೆದು ನೋಡುತ್ತಿದ್ದೆ. ನರ್ಸಮ್ಮನಿಗೆ ನಾನು ಕಣ್ತೆರೆದದ್ದು ಕಂಡಿತು. ಆ ಕೂಡಲೇ ನನ್ನನ್ನು ಕೂರಿಸಿ ಬೇಕಾದ ಟೆಸ್ಟುಗಳನ್ನು ಮಾಡಿದಳು. "ಹೇಗಿದ್ದೀರಾ ಈವಾಗ? ಡಾಕ್ಟ್ರನ್ನು ಕರೆದಿದ್ದೇನೆ, ಬಂದು ನೋಡಿಬಿಟ್ಟು ಮಾತಾಡಿಸ್ತಾರೆ." ಅಂತ ಹೇಳಿದ್ಲು. ನಿಧಾನಕ್ಕೆ ಮಾತಾಡಲು ಪ್ರಯತ್ನಿಸಿ, "ನಂಗೆ ಏನಾಗಿದೆ?" ಅಂತ ಕೇಳಿ ಸುತ್ತಮುತ್ತ ನನ್ನವರಿಗಾಗಿ ಹುಡುಕಾಡಿದೆ. "ನೀವು ಇಲ್ಲಿ ಬಂದು 5 ದಿನಗಳೇ ಆಗಿದೆ. ಡಾಕ್ಟ್ರು ಬಂದು ನಿಮ್ಮತ್ರ ಮಾತಾಡ್ತಾರೆ." ಅಂತ ಹೇಳಿ ನರ್ಸಮ್ಮ ಹೊರಗಡೆ ಹೋದಳು. ನನ್ನವರು ಅಂತ ಯಾರೂ ಕಾಣದೆ ಇರುವಾಗ, ಕಿಟಕಿಯಿಂದ ಹೊರಗೆ ನೋಡಿದೆ. ಹೊರಗೆ ಮರದಲ್ಲಿ ಒಂದು ಪಕ್ಷಿ ತನ್ನ ಮರಿಗಳಿಗೆ ಆಹಾರ ಉಣಿಸುತ್ತಿತ್ತು. ಇದನ್ನು ನೋಡಿ, ನಾನು ನನ್ನ ಹೆತ್ತವರ ನೆನಪಾಗಿ, ನೆನಪಿನ ಲೋಕಕ್ಕೆ ನಿಧಾನವಾಗಿ ಜಾರಿದೆ.
***
75 ವರ್ಷದ ಹಿರಿಯನಾದ ನಾನು ನನ್ನ ಜೀವನದಲ್ಲಿ ತುಂಬಾ ಅನುಭವ ಪಡೆದಿದ್ದೇನೆ. 27 ಜನರಿರುವ ಮನೆತನದಲ್ಲಿ ಹುಟ್ಟಿದ ನಾನು ಮನೆಗೆ ಮೂರನೆಯ ಸಂತಾನವಾಗಿ ಹುಟ್ಟಿದವನು. ಸಂಖ್ಯೆ ಹೇಳುವಂತೆ ಮನೆಯವರಿಗೆ ನಾನು ಹದಿಹರೆಯಕ್ಕೆ ಬರುವ ತನಕ ಬೇಕಾಗಿದ್ದವನಾಗಿದ್ದರೂ, ನನ್ನ ಅಣ್ಣನವರಿಗೆ ಮದುವೆ ಅಂತ ಆದ ಬಳಿಕ ನಾನು ಬೇಡವಾದವನಾದೆ. ನನ್ನ ಹೆತ್ತವರು ತುಂಬಾ ಅಪರೂಪದ ಜೋಡಿ. ಇಬ್ಬರ ಮಧ್ಯೆ ವಯಸ್ಸಿನಲ್ಲಿ ತುಂಬಾ ಅಂತರವಿದ್ದರೂ, ಜೀವನ ನಡೆಸುವ ಕಲೆ, ಅನ್ಯೋನ್ಯತೆ ಅವರನ್ನು ನೋಡಿ ಕಲಿಯಬೇಕಾದದ್ದು. 12 ಮಕ್ಕಳನ್ನು ಹೆತ್ತು ಸಾಕಿ ಸಲುಹಿ, ಎಲ್ಲರಿಗೂ ಒಳ್ಳೆಯ ವಿದ್ಯೆ, ಭವಿಷ್ಯತ್ತು ನೀಡಿ, ಹೆಣ್ಣು ಮಕ್ಕಳು ಅಂದರೆ ನನ್ನ ತಂಗಿಯಂದಿರಿಗೆ ಒಳ್ಳೆಯ ಮನೆತನದವರಿಗೆ ಮದುವೆ ಮಾಡಿ ಕೊಟ್ಟು, ಒಳ್ಳೆಯ ರೀತಿಯಲ್ಲಿ ಜವಾಬ್ದಾರಿ ನಿಭಾಯಿಸಿದವರು ನನ್ನ ಹೆತ್ತವರು. ವಿದ್ಯೆಗಾಗಿ ಖರ್ಚು ಮಾಡಲು ದುಡ್ಡಿನ ಕೊರತೆಯಿದ್ದ ಕಾರಣ ನನ್ನ ಅಣ್ಣಂದಿರು ಚಿಕ್ಕ ಪ್ರಾಯದಲ್ಲೇ ಹೋಟೆಲ್ ವ್ಯವಹಾರ ಪ್ರಾರಂಭಿಸಿದರು. ನಾನು ದಿನದ ಸಮಯದಲ್ಲಿ ಊರಿನ ಫ್ಯಾಕ್ಟರಿ ಒಂದರಲ್ಲಿ ಅಟೆಂಡರ್ ಕೆಲಸ ಮಾಡಿಕೊಂಡು, ಸಂಜೆ ಕಾಲೇಜಿನಲ್ಲಿ ಓದು ಮುಂದುವರೆಸಿದೆ. ಹಾಗೆ ಓದು ಮುಗಿಸಿ, ಸರಕಾರಿ ನೌಕರಿ ಪಡೆದುಕೊಂಡೆ. ಅಣ್ಣಂದಿರ ಮದುವೆ ಆದ ಮೇಲೆ, ನನಗೆ ಮನೆಯಲ್ಲಿ ಬೆಲೆ ಕಡಿಮೆಯಾಗತೊಡಗಿತು. ಹಾಗೆ ನಂಗೆ ಮದುವೆ ಆದ ಮೇಲೆ, ಹಿರಿಯ ಮನೆಯಲ್ಲಿ ಹಿರಿಯಣ್ಣ ನಿಂತು ನಾವೊಬ್ಬರೂ ತಮ್ಮಂದಿರು ಬೇರೆಬೇರೆ ಮನೆ ಮಾಡಿಕೊಂಡು ಕುಟುಂಬದ ಪೂಜಾಕಾರ್ಯಗಳ ಸಮಯದಲ್ಲಿ ಮಾತ್ರ ಭೇಟಿ ಆಗತೊಡಗಿದೆವು. ಹೀಗೆ ಜೀವನ ಕಳೆದು, ನಮ್ಮೆಲ್ಲರಿಗೂ ಮಕ್ಕಳು ಮರಿಗಳಾಗಿ, ಅವರ ಮದುವೆಯೂ ನಡೆದು, ಇಂದು ಎಲ್ಲ ಮನೆಗಳಲ್ಲಿ ಹಿರಿಯ ಜೀವಗಳು ಮಾತ್ರ ಇದ್ದೆವು. ಇಂದಿನ ಮಕ್ಕಳಿಗೆ ಮನೆತನದ ಮೇಲೆ ಪ್ರೀತಿ ಕಡಿಮೆ. ತಮ್ಮ ಜೀವನ, ತಮ್ಮ ಕೆರಿಯರ್ ಅಂದುಕೊಂಡು ಊರು ಬಿಟ್ಟು ಹೋಗಿದ್ದಾರೆ. ಇರಲಿ. ಅವರವರ ಆಸೆಗೆ ತಕ್ಕ ಹಾಗೆ ಜೀವನ ನಡೆಸಲಿ ಎಂದು ನಾವೂ ಏನೂ ಅನ್ನಲಿಲ್ಲ. ನೋಡುನೋಡುತ್ತಾ ನನ್ನ ಅಣ್ಣಂದಿರು, ಅತ್ತಿಗೆಯರು ಕೊನೆಯುಸಿರೆಳೆದರು. ನನ್ನ ಹೆಂಡತಿ ನೀಲಾ ಕೂಡಾ ಮಕ್ಕಳು ದೂರ ಆಗಿದ್ದನ್ನು ನೆನೆದು ಕೊರಗಿ ಕೊರಗಿ ನನ್ನಿಂದ ದೂರ ಆಗಿದ್ದಾಳೆ. ಈಗ ನಾನೊಬ್ಬನೇ ಮನೆಯಲ್ಲಿ.
ಹೀಗೆ ನೆನಪಿನ ಮಹಾಸಾಗರದಲ್ಲಿ ತೇಲುತ್ತಿದ್ದಂತೆ, ನೀಲಾ ಹೇಳಿದ ಮಾತುಗಳು ಕಿವಿಗೆ ಅಪ್ಪಳಿಸಿದವು - "ನೋಡಿ ರೀ, ನೀವು ಮಕ್ಕಳಿಗೆ ಅಂತ ಎಲ್ಲವನ್ನೂ ಮಾಡಿ ಇಟ್ಟಿದ್ದೀರಿ. ಆದರೆ, ಇವತ್ತು ಆ ಮಕ್ಕಳು, ನಮ್ಮನ್ನು ಒಂಟಿಯಾಗಿ ಬಿಟ್ಟು ದೂರ ಹೋಗಿದ್ದಾರೆ. ನಮ್ಮನ್ನು ಮರೆಯುವಂತಿದ್ದಾರೆ. ಈವಾಗಲೂ ಕಾಲ ಮಿಂಚಿಲ್ಲ. ಅವರನ್ನು ಬರಲು ಹೇಳೋಣ."
ಅಂದ ಹಾಗೆ, ನನಗೆ ಇಬ್ಬರು ಮಕ್ಕಳು. ದೊಡ್ಡವಳು ನನ್ನ ಪ್ರೀತಿಯ ನೀಲಿಮಾ. ನನ್ನ ಹೆಂಡತಿ ಹೆಸರು "ನೀಲಾ" ದಿಂದ ನೀಲಿ ಹಾಗೂ ನನ್ನ ಹೆಸರು "ರಾಮಾ"ದಿಂದ "ಮಾ" ಸೇರಿಸಿ ನೀಲಿಮಾ ಅಂತ ನಮ್ಮ ಪ್ರೀತಿಯ ಸಂಕೇತವಾಗಿ ಹೆಸರಿಟ್ಟಿದ್ದೆವು. ಚಿಕ್ಕವನು ನೀಲೇಶ. ಇಬ್ಬರನ್ನೂ ತುಂಬಾ ಪ್ರೀತಿಯಿಂದ ಸಾಕಿ, ಒಳ್ಳೆಯ ವಿದ್ಯೆ ದೊರಕಿಸಿ ಕೊಟ್ಟೆವು. ನೀಲಿಮಾ ಡಾಕ್ಟರಾಗಿ, ಅವಳ ಜೊತೆ ಕಲಿತ ಸಂದೇಶನನ್ನು ಪ್ರೀತಿಸಿ ನಮಗೆ ಗೊತ್ಹಿಲ್ಲದ ಹಾಗೆ ಮದುವೆಯಾದಳು. ಆ ನಂತರ, ನಮ್ಮ ಮನೆಗೆ ಬರುವುದನ್ನೇ ನಿಲ್ಲಿಸಿದಳು. ನನ್ನ ಮಗ ನೀಲೇಶ, ನಾವು ನೋಡಿದ ಹೆಣ್ಣನ್ನೇ ಮದುವೆಯಾದರೂ ಕೂಡಾ, ಮದುವೆಯಾದ ಮರುಕ್ಷಣ ನಮ್ಮನ್ನು ದೂರ ಮಾಡಿದ. ಈಗ ಸುಮಾರು 10 ವರ್ಷಗಳಿಂದ ನಾವು ಒಂಟಿಯಾಗೇ ಬದುಕುತ್ತಿದ್ದೆವು. ಕಳೆದ ವರ್ಷ, ಮಕ್ಕಳು ಬಾರದ ಕೊರಗಿನಿಂದ ನೀಲಾ ಕೊನೆಯುಸಿರೆಳೆದಳು.
ಇಷ್ಟು ನೆನಪಾಗುತ್ತಲೇ, ನರ್ಸಮ್ಮ ಬಂದು ಏನೋ ಒಂದು ಇಂಜೆಕ್ಷನ್ ಚುಚ್ಚಿದಳು. ನನ್ನ ಕಣ್ಣು ಮಂಜಾಗಿ, ನಿಧಾನಕ್ಕೆ ನಿದ್ದೆಗೆ ಜಾರಿದೆ.
***
ನನ್ನ ಸುತ್ತಲೂ ದಟ್ಟವಾದ ಕಾಡು. ಕತ್ತಲು ಕವಿದಿದೆ. ಒಂದಷ್ಟು ದೂರದಲ್ಲಿ ನಿಖರವಾದ ಬೆಳಕೊಂದು ಬೀರುತ್ತಿದೆ. ಆ ಬೆಳಕು ಎಲ್ಲಿಗೆ ಬೀಳುತ್ತಿದೆ ಎಂದು ನೋಡಿದರೆ ಅಲ್ಲೇನೋ ಹೊಳೆಯುವಂತೆ ಕಾಣುತ್ತಿದೆ. ನಾನು ನಿಧಾನವಾಗಿ ಅದರ ಸಮೀಪಕ್ಕೆ ಹೋಗುತ್ತಿದ್ದೇನೆ. ಅಷ್ಟರಲ್ಲಿ ಹಿಂದಿನಿಂದ ನನ್ನನ್ನು ಯಾರೋ ತಟ್ಟಿದಂತಾಯಿತು. ಹಿಂತಿರುಗಿ ನೋಡಿದರೆ, ನೀಲಾ. "ರೀ, ಬನ್ನಿ ನನ್ನ ಜೊತೆ. ಒಂಟಿಯಾಗಿದ್ದು ಬೇಸರವಾಗುತ್ತಿದೆ." ಅಂತ ಹೇಳಿದಳು. ಅಷ್ಟರಲ್ಲಿ ಈಚೆಯಿಂದ "ಡಾಕ್ಟರ್, ಡಾಕ್ಟರ್, ಎಮರ್ಜೆನ್ಸಿ" ಅನ್ನುವ ಸಡ್ಡು ದೂರದಿಂದ ಕೇಳಿಸುತ್ತಿದೆ. ನನ್ನನ್ನು ನೀಲಾ ಹಿಡಿದು ಎಳೆದಂತಾಯಿತು.... ಎಲ್ಲವೂ ಮೌನವಾಯಿತು. ಬೆಳಕೂ ದೂರ ಆಯ್ತು. ಮತ್ತೆ ನಿಶ್ಶಬ್ಧ ಆವರಿಸಿತು...
ಕಣ್ತೆರೆದಾಗ ಸುತ್ತಲೂ ಬೆಳಕು ಕಾಣಿಸುತ್ತಿತ್ತು. ಕಿವಿಗೆ ನನ್ನ ಎದೆಬಡಿತ ಪರಿಶೀಲಿಸುವ ಮಷೀನಿನ ಬೀಪ್ ಸದ್ದು ಕೇಳಿಸುತ್ತಿತ್ತು. ಐಸಿಯುನಲ್ಲಿದ್ದೇನೆ ಎಂಬುದು ಖಚಿತವಾಯಿತು. ಸ್ವಲ್ಪ ಹೊತ್ತಿನಲ್ಲಿ ನರ್ಸಮ್ಮ ಬಂದು, ಡಾಕ್ಟರನ್ನು ಕರೆ ತಂದಳು. ಹಾಗೆ ಚೆಕ್ ಮಾಡಿದ ಡಾಕ್ಟ್ರು, ನನ್ನನ್ನು ವಾರ್ಡಿಗೆ ಶಿಫ್ಟ್ ಮಾಡಲು ತಿಳಿಸಿದರು. ಮಾತನಾಡಲು ಪ್ರಯತ್ನಿಸಿದೆ. ಆದರೆ ನಿಶ್ಶಕ್ತಿಯಿಂದಾಗಿ ಮಾತು ಗಂಟಲಲ್ಲೇ ಉಳಿಯಿತು. ಹೇಗೋ ವಾರ್ಡಿಗೆ ಕರೆದೊಯ್ದರು. ಇನ್ನೂ ನನ್ನ ಮನೆಯವರ ಸುದ್ದಿ ಇರಲಿಲ್ಲ. ಸ್ವಲ್ಪ ಶಕ್ತಿ ಬಂದಮೇಲೆ, ನರ್ಸಮ್ಮನಲ್ಲಿ ಕೇಳಿದೆ: "ನನಗೆ ಏನಾಗಿದೆ? ಯಾರು ನನ್ನನ್ನು ಆಸ್ಪತ್ರೆಗೆ ಕರೆತಂದರು?". "ತಾತ, ನಿಮಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಜೊತೆಗೆ, ರಕ್ತ ಕಡಿಮೆ ಆಗಿ, ಪ್ರಜ್ಞಾಹೀನರಾಗಿದ್ರಿ. ಇಲ್ಲಿಗೆ ಕರೆತಂದಾಗ ನಿಮಗೆ ಪ್ರಜ್ಞೆ ಇರಲಿಲ್ಲ. ನಿಮ್ಮನ್ನು ಇಲ್ಲಿಗೆ ಹರೀಶ ಅನ್ನುವವರು ಕರೆತಂದರು" ಅಂತ ಹೇಳಿದಳು. ಹರೀಶ ಅನ್ನುತ್ತಲೇ ನನ್ನ ನೆನಪುಗಳು 10 ವರ್ಷಗಳ ಹಿಂದೆಗೆ ಜಾರಿತು.
***
ಮನೆ ತುಂಬಾ ಸಡಗರ ಸಂಭ್ರಮ. ಯಾಕೆ ಅಂತೀರಾ? ಆ ದಿನ ನನ್ನ ಮಗ ನೀಲೇಶನ ಮದುವೆ ಸಮಾರಂಭ. ನೀಲಿಮಾ ಬಿಟ್ಟು ದೂರ ಉಳಿದಿದ್ದರೂ, ತಮ್ಮನ ಮದುವೆ ಅಂತ ಮನೆಗೆ ಬಂದಿದ್ದಳು. ತನ್ನ ಪುಟ್ಟ ಮಗಳನ್ನೂ ಕರೆದುಕೊಂಡು ಬಂದಿದ್ದಳು. ಬೇಸರವೆಷ್ಟೇ ಇದ್ದರೂ, ಪುಟ್ಟ ಮಗುವನ್ನು ನೋಡಿದಾಗ ಏನೋ ಒಂದು ಪ್ರೀತಿ ಹುಟ್ಟಿ, ಅವಳನ್ನು ಕ್ಷಮಿಸಿದೆವು. ಮದುವೆ ಮನೆ ತುಂಬಾ ಸಂಭ್ರಮದಿಂದ ಓಡಾಡಿ, ಇನ್ನು ನಮ್ಮ ಜವಾಬ್ದಾರಿಗಳೆಲ್ಲ ಕಳೆಯಿತು ಅಂತ ನೆಮ್ಮದಿಯಿಂದ ಕೂತಿದ್ರೆ, ಮಗಳು ನೀಲಿಮಾ ಬಂದು, " ಅಪ್ಪಾ, ಈಗ ನೀಲೇಶನ ಮದುವೆಯೂ ಮುಗಿಯಿತು. ಇನ್ನು ನನಗೆ ನನ್ನ ಜೀವನ ಕಟ್ಟಿಕೊಳ್ಳಲು ನಿಮ್ಮ ಆಸ್ತಿ ಪಾಲು ಬೇಕು. ನಾಳೆ ದಿನ ನಾನೂ ನೀಲೇಶನೂ ಜಗಳ ಆದಿ ದೂರ ಆಗಬಾರದೆಂದರೆ, ಈವಾಗಲೇ, ಆಸ್ತಿ ಪಾಲು ಮಾಡಿ ನನ್ನ ಪಾಲು ನನಗೆ ಕೊಟ್ಟು ಬಿಡಿ." ಅಂದಳು. ತುಂಬಿದ ಕುಟುಂಬದಲ್ಲಿ ಬೆಳೆದಿದ್ದ ನಾನು, ನನ್ನ ಅಪ್ಪ ಅಮ್ಮ ಬದುಕಿದ್ದ ತನಕ ಆಸ್ತಿ ಪಾಲು ಅಂತ ಮಾತನಾಡಿಯೇ ಇರಲಿಲ್ಲ. ಈಗಿನ ಮಕ್ಕಳ ಚಿಂತನೆ ನೋಡಿ ಅಲ್ಲೇ ಎದೆಗೆ ಚೂರಿ ಇರಿದಂತಾಯಿತು. ಸತಿ ಆಯ್ತು ಅಂದುಕೊಂಡು, ಮಕ್ಕಳಿಗೆ ಪಾಲು ಮಾಡಿ ನನ್ನ, ನೀಲಾಳ ಹೆಸರಲ್ಲಿ ನಮ್ಮ ಮನೆ ಅಡಿ ಜಾಗ ಮಾತ್ರ ಇರಿಸಿ, ಉಳಿದದ್ದೆಲ್ಲವನ್ನೂ ಮಕ್ಕ ಹೆಸರಿಗೆ ಮಾಡಿ ಕೈ ತೊಳೆದುಕೊಂಡೆ. ಆಸ್ತಿ ಪಾಲು ದೊರೆತದ್ದೇ ತಡ, ಮಕ್ಕಳಿಬ್ಬರೂ ನಮ್ಮನ್ನು ಒಂಟಿಯಾಗಿ ಬಿಟ್ಟು, ದೂರ ಸಾರಿದರು. ದಿನಕ್ಕೊಮ್ಮೆ ಮಾತನಾಡುತ್ತಿದ್ದ ಮಕ್ಕಳು ವಾರಕ್ಕೊಮ್ಮೆ ಅಂತ ಆಗಿ, ಈಗ ವರ್ಷಕ್ಕೊಮ್ಮೆ ಮಾತನಾಡುವುದೂ ಕಡಿಮೆ ಆಯ್ತು. ಹಾಗೆ ಒಂಬತ್ತು ವರ್ಷಗಳೇ ಕಳೆದು, ಮಕ್ಕಳು ದೂರ ಆದ ಕೊರಗಿನಲ್ಲಿ ಅತ್ತು ಅತ್ತು, ನನ್ನ ನೀಲಾ ಕೊನೆಯುಸಿರೆಳೆದಳು. ಈ ಸಂದರ್ಭಗಳು ನೆನಪಾಗುತ್ತಲೇ ನನ್ನ ಕಣ್ಣ ಅಂಚಿಂದ ಹನಿ ನೀರು ಹರಿಯಿತು.
ಆಗ ಅವಳ ಅಂತ್ಯ ಸಂಸ್ಕಾರ ಮಾಡಲೂ ನನ್ನ ಮಕ್ಕಳು ಬರಲಿಲ್ಲ. ನಾನು, ನನ್ನ ಕುಟುಂಬದವರೆಲ್ಲರೂ ಕರೆದರೂ, ಅವರಿಬ್ಬರೂ ಸಂಬಂಧವೇ ಇಲ್ಲದಂತೆ ನಡೆದುಕೊಂಡರು. ಈ ಬೇಸರದ ನಡುವೆ, ಮಗನಂತೆ ನನ್ನ ನೀಲಾಳ ಅಂತ್ಯ ಸಂಸ್ಕಾರ ಮಾಡಿದ್ದು, ನನ್ನ ಅಣ್ಣನ ಮಗ ಹರೀಶ. ಅಂದಿನಿಂದ ನನ್ನ ಪ್ರತಿದಿನ ಬಂದು ಮಾತಾಡಿಸಿಕೊಂಡು ಹೋಗುತ್ತಿದ್ದವನು ಹರೀಶನೇ. ತುಂಬಾ ಪ್ರೀತಿ ತುಂಬಿದ ಮನಸ್ಸು ಅವನದ್ದು. ಚಿಕ್ಕಪ್ಪ ಅಂದರೆ ಅಪ್ಪನಷ್ಟೇ ಗೌರವ ಪ್ರೀತಿ ಇಟ್ಟುಕೊಂಡು, ನನ್ನ ಆರೋಗ್ಯಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಸಮಯಕ್ಕೆ ಸರಿಯಾಗಿ, ಯಾವುದೇ ಉದಾಸೀನ ಅಥವಾ ಬೇಸರವಿಲ್ಲದೆ ಮಾಡಿಕೊಡುತ್ತಿದ್ದ. ಅವನ ಪ್ರೀತಿ ಕಂಡು ನಾನೇ ಬೆರಗಾಗಿದ್ದೆ. ಸ್ವಂತ ಮಕ್ಕಳೇ ತೋರಿಸದ ಪ್ರೀತಿಯನ್ನು ಅವನು ನನಗೆ ತೋರಿಸುತ್ತಿದ್ದ. ಅದೂ ಯಾವುದೇ ಸ್ವಾರ್ಥ ಮನಸ್ಸಲ್ಲಿ ಇಲ್ಲದೆ. ಅವನು ಬಂದು ಹೋಗಿ ಮಾಡುತ್ತಿದ್ದರಿಂದ ಇವತ್ತು ಸಮಯಕ್ಕೆ ಸರಿಯಾಗಿ ನನ್ನನ್ನು ಆಸ್ಪತ್ರೆಗೆ ಸೇರಿಸಿ ನನ್ನ ಪ್ರಾಣ ಉಳಿಸುವ ಪ್ರಯತ್ನ ಮಾಡುತ್ತಿದ್ದಾನೆ. ಹೀಗೆ ಯೋಚನೆ ಮಾಡುತ್ತಾ ಹಾಗೆಯೇ ನಿದ್ದೆಗೆ ಜಾರಿದೆ.
***
ಆವಾಗಲೇ ಕೈ ಹಿಡಿದು ಎಳೆದ ನೀಲಾ ನನ್ನನ್ನು ಬೆಳಕಿನ ಕಡೆಗೆ ಕರೆದೊಯ್ಯುತ್ತಿದ್ದಾಳೆ. ಆ ಬೆಳಕಿನಲ್ಲಿ ಏನೋ ಸಂಭ್ರಮ, ಏನೋ ಪ್ರಶಾಂತತೆ. ಅಲ್ಲೇ ಇರೋಣ ಎನ್ನುವ ಭಾವನೆ. ದೂರದಲ್ಲಿ "ಡಾಕ್ಟರ್, ಎಮರ್ಜೆನ್ಸಿ" ಅನ್ನುವ ಧ್ವನಿ. ಆದರೆ ಆ ಧ್ವನಿ ಕಡಿಮೆ ಆಗುತ್ತಾ, ನನ್ನನ್ನು ಬೆಳಕಿನೆಡೆಗೆ ನೀಲಾ ಕರೆದೊಯ್ಯುತ್ತಿದ್ದಾಳೆ . ಆ ಬೆಳಕು "ರಾಮಾ, ಬಾ. ನನ್ನ ಜೊತೆ ಸೇರು." ಅಂತ ಕರೆಯುತ್ತಿತ್ತು. ನೀಲಿಮಾ ಆ ಬೆಳಕಿನ ನಡುವೆ ನಿಂತು ನನ್ನ ಕಡೆ ಮಂದಹಾಸ ಬೀರುತ್ತಿದ್ದಾಳೆ. ಹತ್ತಿರ ಹೋಗುತ್ತಿದ್ದಂತೆ, ನನ್ನ ಅಣ್ಣಂದಿರು, ಅತ್ತಿಗೆಯರು ಎಲ್ಲರೂ ಕಂಡರೂ. ಎಲ್ಲರೂ ನನ್ನನ್ನು ಕರೆಯುತ್ತಿರುವಂತೆ ಭಾಸವಾಯಿತು. ಎಲ್ಲರೂ ನನ್ನ ಕಡೆ ಮಂದಹಾಸ ಬೀರಿ ಬಾ ಎಂಬಂತೆ ಕೈ ಚಾಚಿ ಕರೆಯುತ್ತಿದ್ದಾರೆ. ಮುಂದೆ ಮುಂದೆ ಹೋಗುತ್ತಿದ್ದ ಹಾಗೆ ಬೆಳಕು ನನ್ನನ್ನು ಆವರಿಸತೊಡಗಿತು. ಆ ಬೆಳಕಿನಲ್ಲಿ ಒಂದಾದ ನಾನು ಏನೋ ಒಂದು ರೀತಿ ಸಂತೋಷ, ಶಾಂತಿಯನ್ನು ಅನುಭವಿಸುತ್ತಿದ್ದೆ. ಯಾವುದೇ ರೀತಿಯ ಆಲೋಚನೆ ನನಗೆ ಬರಲಿಲ್ಲ. ಹಾಗೆ ಸಂತೋಷದಿಂದ ಮಂದಹಾಸ ತಾನಾಗಿಯೇ ನನ್ನ ಮುಖದಲ್ಲಿ ಮನೆಮಾಡಿತು.
ಈ ಅವಧಿಯಲ್ಲಿ ಒಂದು ನಿಶ್ಯಬ್ದ ಪಾತಾಳದಂತೆ ಒಡಲೊಳಗಿನ ಪ್ರಜ್ಞೆ ಸಂಪೂರ್ಣವಾಗಿ ಬೆಳಕಿನಿಂದ ತುಂಬಿತ್ತು. ಆ ಬೆಳಕು ದೈವತ್ವದಂತೆ ಭಾಸವಾಗುತ್ತಿತ್ತು. ಈಗ ನನಗೆ ಭಯವೂ ಇಲ್ಲ, ತೊಂದರೆಗೊಳಗಾದ ಆತ್ಮವೂ ಅಲ್ಲ. ಈ ಲೋಕದ ಗೊಂದಲ, ಮಕ್ಕಳ ನಿರ್ಲಕ್ಷ್ಯ, ನೋವು, ನಿರಾಸೆ ಇವೆಲ್ಲವೂ ದೂರವಾಗಿತ್ತು. ಅಲ್ಲಿಂದ ಹಿಂದೆ ತಿರುಗಿ ನೋಡಿದಾಗ – ನೋವುಗಳು ಎಷ್ಟು ದೂರವಿತ್ತು! ಕೇವಲ ಒಂದು ನಗು, ನೆನಪು, ಪ್ರೀತಿ ಮಾತ್ರ ಉಳಿದಿದ್ದವು.
ನನ್ನ ತಾಳ್ಮೆ, ನನ್ನ ಪ್ರೀತಿ, ನನ್ನ ಕಣ್ಣೀರು - ಇವೆಲ್ಲವೂ ಕಾಣದಂತೆ ಮಾಯವಾಗಿದ್ದವು. ನೋಡು ನೋಡುತ್ತಿದ್ದಂತೆಯೇ, ನಾನು ಮತ್ತೊಂದು ಮನೆ ಸೇರುತ್ತಿದ್ದೆ. ಇಲ್ಲಿ ನನ್ನ ನೀಲಾ, ನನ್ನ ಅಣ್ಣಂದಿರು, ಎಲ್ಲರೂ ನೆಮ್ಮದಿಯಿಂದ, ಸಂತೋಷದಿಂದ ನನ್ನನ್ನು ಸ್ವಾಗತಿಸುತ್ತಿದ್ದಾರೆ. ಇದೊಂದು ಕನಸು ಇರಬಹುದು. ಇಲ್ಲವಾದರೂ, ಇದು ನನಗೆ ಜೀವನ. ನನ್ನ “ಕನಸು - ಜೀವನ”.
***
✍🏻 Deepalaxmi Bhat
Mangaluru